Monday, April 27, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......14 "ದೇವಿಸರ" ವೆಂಬ ಪ್ರೀತಿಯ ನಂದಗೋಕುಲದಲ್ಲಿ ವೇಣುಗೋಪಾಲ ಕಾಣಿಸಿದ



ದೇವಿಸರದಲ್ಲಿ  ಕಂಡ ಒಂದು ನೋಟ


ಶಿರಸಿಯ  ಸತ್ಕಾರ್ ಹೋಟೆಲ್ನಲ್ಲಿ   ನಗುತ್ತಿದ್ದ ಮಸಾಲೆ ದೋಸೆಗಳನ್ನು ಹಸಿದ ಹೊಟ್ಟೆಗಳು  ಆದರದಿಂದ  ಸ್ವಾಗತಿಸಿದವು . ಬೆಳಗ್ಗಿನಿಂದ  ಅಲೆದಾಡಿದ್ದ ನಾವು  ದೇವಿಸರ ದ   ಪ್ರಕಾಶಣ್ಣನ    ಮನೆಗೆ  ಹೊರಟೆವು .  ಈ  ದೇವಿಸರ  ಉತ್ತರ ಕನ್ನಡ ಜಿಲ್ಲೆಯ   ಸಿದ್ದಾಪುರ ತಾಲೂಕಿನ  ಒಂದು ಗ್ರಾಮ, ಆದರೆ  ಇಲ್ಲಿನ ಜನ  ಮಕ್ಕಳ  ವಿಧ್ಯಾಭ್ಯಾಸ ಹಾಗು ತಮ್ಮ  ಅವಶ್ಯಕತೆಗಳಿಗೆ  ಒಡನಾಟ ಇಟ್ಟು  ಕೊಂಡಿರೋದು  ಶಿರಸಿ ಪಟ್ಟಣ ಜೊತೆಯಲ್ಲಿ,   ಆದ ಕಾರಣ  ಈ ಊರು ಶಿರಸಿ  ತಾಲೂಕಿಗೆ  ಸೇರಿದ್ದು ಅನ್ನಿಸಿಬಿಡುತ್ತದೆ .


ನಂದಗೋಕುಲ  ಈ ಮನೆ


 ನಮ್ಮ  ಪ್ರಕಾಶ್ ಹೆಗ್ಡೆ  ಹುಟ್ಟಿ ಬೆಳೆದ    ದೇವಿಸರದಲ್ಲಿ   ಎರಡನೇ ದಿನದ  ವಾಸ್ತವ್ಯ  ನಮ್ಮದು , ಬೆಳಗ್ಗಿನಿಂದ  ಅಲೆದು  ಬಂದ  ನಮಗೆ ಪ್ರೀತಿಯ  ಆದರದ  ಆತಿಥ್ಯ ಇಲ್ಲಿ.    ಈ ಮನೆಯಲ್ಲಿ   ಪ್ರೀತಿಸುವ  ಹೃದಯಗಳ  ಒಂದು ಸುಂದರ ಸಂಸಾರವಿದೆ , ಬಂದ  ಕಷ್ಟಗಳನ್ನು  ತಮ್ಮ ತುಂಟ  ನಗೆಯ ಮೂಲಕ  ಎದುರಿಸಿ  ಇಂದು ಮನೆಯಲ್ಲಿ   ಸಂತಸದ  ನೆಮ್ಮದಿ  ಕಾಣುತ್ತಿರುವ  ಕುಟುಂಬ ಇದು .   ಈ  ಊರನ್ನು ನೋಡುತ್ತಿದ್ದಂತೆ  ಈಗಲೇ ಹೀಗೆ    ತುಂಟಾಟ  ಆಡುವ  ಈ ಪ್ರಕಾಶ್ ಹೆಗ್ಡೆ  ಚಿಕ್ಕ ವಯಸ್ಸಿನಲ್ಲಿ  ಏನೇನು  ತಂಟೆ  ಮಾಡಿ  ಮನೆಯವರನ್ನು   ಪೇಚಿಗೆ  ಸಿಕ್ಕಿಸಿರಬಹುದು  ಎಂಬುದನ್ನು  ಕಲ್ಪಿಸಿಕೊಂಡು ನನಗೆ ನಾನೇ ನಕ್ಕೆ ,  ಮನೆಗೆ ಬಂದ  ನನ್ನ ಜೊತೆ ಬಹಳ ಬೇಗ   ಆತ್ಮೀಯವಾಗಿ  ಹೊಂದಿಕೊಂಡಿದ್ದು  ಈ ನಮ್ಮ  ನಾಗೇಶಣ್ಣ ,    ಯಾಕೋ ಇವರದು ನಮ್ಮ  ಮೊದಲ ಸಲದ  ಭೇಟಿ ಅನ್ನಿಸಲಿಲ್ಲ ,  ಬಹಳ ಬೇಗ  ಇವರ ಬಗ್ಗೆ ನನಗೆ   ಗೌರವ ಪೂರ್ವಕ  ವಿಶ್ವಾಸ ಬೆಳೆದು ಬಿಟ್ಟಿತು ,  ಇನ್ನು   ಪತಿಗೆ  ತಕ್ಕ ಪತ್ನಿ ನಮ್ಮ  ನಗುಮುಖದ  ವನಿತಾ ಅತ್ತಿಗೆ,   ಬಾಲಣ್ಣ  ಅಂತಾ ಕರೆದಾಗ   ನನ್ನ ಒಡ ಹುಟ್ಟಿದ ಸಹೋದರಿಯ ವಾತ್ಸಲ್ಯ  ಕಂಡೆ .  ಇನ್ನು ಇವರ ಮಗ  ಗಣಪತಿ  ನಾವು ಭೇಟಿಕೊಟ್ಟ ಸಮಯದಲ್ಲಿ  ಜ್ವರದಿಂದ ಬಳಲುತ್ತಿದ್ದ   ಹೆಚ್ಚಿಗೆ  ಬೆರೆಯಲು ಆಗಲಿಲ್ಲ, ಆದರೆ  ಜ್ವರದಲ್ಲೂ  ನಗು ಮುಖದಿಂದ  ಅಮ್ಮನಿಗೆ ಸಹಾಯ ಮಾಡಿದ್ದ ,  ಇಷ್ಟೇ ಅಲ್ಲಾ  ಆ ಮನೆಯಲ್ಲಿ ಸ್ವಾತಿ ಎಂಬ ಸೈಲೆಂಟ್  ಹುಡುಗಿ ಇದೆ ,  ಬಹಳ ಬುದ್ದಿವಂತ  ಹುಡುಗಿ ಇದು  , ನಗು ನಗುತ್ತಾ  ಅಮ್ಮನ ನೆರಳಾಗಿ  ಸಹಾಯ ಮಾಡುತ್ತಾ   ಮನೆಯ ತುಂಬಾ  ಖುಷಿಯನ್ನು  ಹಂಚುತ್ತಾಳೆ .  ಇವರೆಲ್ಲರಿಗೆ  ಅಮ್ಮನ  ಪ್ರೀತಿಯ ಆಶಿರ್ವಾದದ  ಬೆಂಬಲ ಇದೆ. ಇಂತಹ ಮನೆಯಲ್ಲಿ  ಅಪರಿಚಿತ ನಾನು  ಎಂಬ ಭಾವನೆ ಹೇಗೆ ಬರಲು ಸಾಧ್ಯ ಹೇಳಿ .



ಪ್ರೀತಿ ತುಂಬಿದ ಮನಗಳ ದರ್ಶನ

ಇನ್ನು  ದೇವಿಸರಕ್ಕೆ ಬಂದಮೇಲೆ   ನಾಗೇಶಣ್ಣ  ಸಿಕ್ಕ ಮೇಲೆ  ಪ್ರಕಾಶ್ ಹೆಗ್ಡೆ ಹಂಗೇಕೆ ಅಂತಾ  ಮೆಲ್ಲಗೆ ಜಾರಿಕೊಂಡು ,  ನಾಗೇಶಣ್ಣ ನ ಹತ್ತಿರ ಹರಟೆ ಹೊಡೆಯ ತೊಡಗಿದೆ, ಅಲ್ಲಿನ ಮಳೆ ,  ಬೆಳೆ , ವ್ಯವಸಾಯ  ಪದ್ಧತಿ,  ಕೃಷಿಗೆ ಬಳಸುವ ಸಲಕರಣೆ ,  ಜಾನುವಾರುಗಳ   ಬಗ್ಗೆ  , ಹಾಗು  ಅಲ್ಲಿನ ಆಚಾರ ವಿಚಾರಗಳ ಕುರಿತು  ಅವರಿಂದ ಮಾಹಿತಿ ಪಡೆದೆ , ಎಲ್ಲಾ ವಿಚಾರಗಳಲ್ಲಿ  ಅವರ ಜ್ಞಾನ  ಕಂಡು  ಬೆಕ್ಕಸ ಬೆರಗಾದೆ .    ಹಳ್ಳಿಯ ಜೀವನದ  ಬಗ್ಗೆ  ಇನ್ನೊಬ್ಬ ಹಳ್ಳಿ ಜೀವನ ಕಂಡವ  ಬೆರೆತಾಗ  ಇಂತಹ ವಿಚಾರಗಳ ವಿನಿಮಯ  ಆಗುತ್ತದೆ ,  ಹಾಗೆ  ಎಲ್ಲರೊಡನೆ   ಮಾತನಾಡುತ್ತಾ  ಮನೆ ತುಂಬಾ ಅಡ್ದಾಟ ನಡೆಸಿದ್ದ  ನನಗೆ ಒಂದು ಕಡೆ ಇಸ್ಪೀಟ್ ಪ್ಯಾಕ್ ಕಣ್ಣಿಗೆ  ಬಿತ್ತು , ಅಣ್ಣಾ  ಇದು ಅಂದೇ , ಓ ಅದಾ  ಆಡೋಕೆ ಬರುತ್ತಾ  ಅಂದರು   ಬನ್ನಿ  ಸ್ವಲ್ಪ ಹೊತ್ತು  ಆಡೋಣ  ಅಂತಾ  ಕುಳಿತೆವು ,  ಮೊದ ಮೊದಲ ಎರಡು  ಆಟ  ನನ್ನದೇ ಗೆಲುವು  , ಜಂಬದ  ಮುಖ ಹೊತ್ತು   ಆಡಿದೆ , ನಂತರ  ಸತತವಾಗಿ  ಸುಮಾರು ಹತ್ತು ಆಟಗಳ  ಸೋಲು ,  ತುಂಟ ನಾಗೇಶಣ್ಣ    ನಗು ನಗುತ್ತಾ  ತುಂಟಾಟ  ಮಾಡುತ್ತಾ  ನನ್ನ ಮೊದಲ ಜಯದ  ಹಮ್ಮು ಕೊಚ್ಚಿಕೊಂಡು  ಹೋಗುವಂತೆ ಮಾಡಿದ್ದರು .  ಅಂದು ರಾತ್ರಿ ಭರ್ಜರಿ ರುಚಿಯಾದ  ಅಡಿಗೆ  ವನಿತಾ ಅತ್ತಿಗೆ  ಕೈನಿಂದ   , ಚಪ್ಪರಿಸಿ  ಉಂಡೆವು ಎಲ್ಲರೂ ,   ಟಿ .ವಿ . ಎಂಬ ಭೂತದ ಕಾಟವಿಲ್ಲದೆ , ಮೊಬೈಲ್  ನೆಟ್ವರ್ಕ್  ಇಲ್ಲದೆ  ಕಾರಣ   ಫೋನ್ ಕರೆಗಳ  ಉಪಟಳ  ಇಲ್ಲದೆ ನೆಮ್ಮದಿಯಾಗಿ  ಹರಟೆ ಹೊಡೆಯುತ್ತಾ  ಕುಳಿತೆವು,  ಹಾಗೆ ಯಾವಾಗ ನಿದ್ರಾದೇವಿಯ ಮಡಿಲಿಗೆ ಸೇರಿದೆವೋ  ಅರಿವಾಗಲಿಲ್ಲ,




ವೇಣುಗೋಪಾಲ  ದೇಗುಲದ ಮುಂಭಾಗ
 ದೇಗುಲದ ಒಳಗಡೆ  ಕಂಡ ದೃಶ್ಯ 



ಎಚ್ಚರವಾದಾಗ  ಹಕ್ಕಿಗಳ ಇಂಪಾದ ಚಿಲಿಪಿಲಿ  ಗಾನ,  ಕೇಳಿಸಿತು  , ಮನೆಯಿಂದ ಹೊರಗೆ  ಬಂದಾಗ ತಂಗಾಳಿಯ  ಹಿತವಾದ  ಅನುಭವ,  ಮಂಜಿನ  ತೆರೆಯಲ್ಲಿ ಮಸುಕು ಮಸುಕಾಗಿ  ಕಾಣುವ ಹಳ್ಳಿಯ ನೋಟ  ಇವುಗಳು ಮನ ಸೂರೆಗೊಂಡವು .  ನಿನ್ನೆ ಮಾತನಾಡುವಾಗ   ದೇವಿಸರದಲ್ಲಿ  ಒಂದು ವೇಣುಗೋಪಾಲ  ದೇಗುಲ  ಇದ್ದು   ಅಲ್ಲಿ ಅಭಿಷೇಕ ಮಾಡಲು  ಪ್ರಕಾಶಣ್ಣ ಹಾಗು ನಾಗೇಶಣ್ಣ   ವ್ಯವಸ್ಥೆ ಮಾಡಿದ್ದರು,  ಜೊತೆಗೆ  ದೇಗುಲವನ್ನು ನನಗೆ ತೋರಿಸಬೇಕೆಂಬ  ಅವರ ಆಸೆ  ಕಂಡು  ಅಚ್ಚರಿಯಾಯಿತು . ಅದರಂತೆ ಮುಂಜಾನೆಯೇ  ಶ್ರೀ  ವೇಣುಗೋಪಾಲನ ದರ್ಶನ ಪಡೆಯಲು  ತೆರಳಿದೆವು .  ದೇಗುಲದ ಹೊರಭಾಗ ನೋಡಿ  ಇದೇನಿದು  ಯಾವುದೋ ಮನೆಗೆ  ಕರೆತಂದು  ದೇಗುಲ ಅನ್ನುತ್ತಿದ್ದಾರೆ ಅಂದುಕೊಂಡೆ ಆದರೆ ನನ್ನ ಅನಿಸಿಕೆ ತಪ್ಪಾಗಿತ್ತು,  ಮನೆಯ ಒಳಗಡೆ    ಭಕ್ತಿ ತುಂಬಿದ   ವಾತಾವರಣ ನಿರ್ಮಾಣ ಆಗಿತ್ತು.




ದೇವಿಸರದ    ಶ್ರೀ ವೇಣುಗೋಪಾಲ  ಸ್ವಾಮೀ  ಮೂಲ ವಿಗ್ರಹ 

  ಗರುಡ ದೇವನ ಮೂರ್ತಿ  



ದೇವಿಸರದ  ಈ ದೇಗುಲದ   ಶ್ರೀ ವೇಣುಗೋಪಾಲ ಮೂರ್ತಿ  ಬಹಳ ಮುದ್ದಾಗಿದ್ದು,  ನೋಡುತ್ತಿದ್ದರೆ  ನೋಡುತ್ತಲೇ ಇರಬೇಕು ಅನ್ನಿಸುತ್ತದೆ , ಮೂರ್ತಿಯ  ಶೈಲಿ ಹೊಯ್ಸಳ  ಶಿಲ್ಪಿ ಕಲೆ ಹೋಲುತ್ತಿದ್ದು , ಪ್ರಭಾವಳಿಯಲ್ಲಿ  ವಿಷ್ಣುವಿನ ದಶ ಅವತಾರಗಳನ್ನು ಕೆತ್ತಲಾಗಿದೆ, ಎರಡೂ ಕೈಗಳಲ್ಲಿ ವೇಣು ಹಿಡಿದು  ಮಂದ ಹಾಸ ಬೀರುತ್ತಾ ಇರುವ  ಶ್ರೀ ವೇಣುಗೋಪಾಲ ಮೂರ್ತಿ ಇದು , ಇನ್ನು ಕಾಲ  ಬಳಿ  ಗೋವು ಹಾಗು ಗೋಪಿಕಾ ಸ್ತ್ರೀಯರ  ಬಳಗವನ್ನು ಕಾಣಬಹುದು ,    ಮೂರ್ತಿ ನಿಂತಿರುವ ಪೀಠದಲ್ಲಿ   ಮುಖ್ಯ ಪ್ರಾಣ  ಹನುಮನ  ಮೂರ್ತಿ ಇದೆ ,   ಹಾಗೆ ಈ  ಮೂರ್ತಿಯ  ಮುಂದೆ ಸ್ವಲ್ಪ ದೂರದಲ್ಲಿ  ಸುಂದರವಾದ ಗರುಡ ದೇವನ  ವಿಗ್ರಹ ಕಾಣಬಹುದು .  ಈ ದೇವಾಲಯದ ವಿಗ್ರಹಗಳು  ಪುರಾತನ ಅನ್ನುವುದು  ನಿಜವಾದರೂ , ಇದನ್ನು ಪ್ರತಿಷ್ಟಾಪನೆ ಮಾಡಿದ್ದು ಯಾರು ಎಂದು ತಿಳಿದು ಬರೋದಿಲ್ಲ,



ಊರಿಗೆ ಬಂದ  ಅತಿಥಿಗೆ  ಪ್ರೀತಿಯ   ಆತ್ಮೀಯತೆಯ ದರ್ಶನ ಇಲ್ಲಿ



ದೇವಾಲಯವನ್ನೊಮ್ಮೆ ಅವಲೋಕಿಸುತ್ತಾ ನಡೆದೇ   ಪೂಜೆಗೆ  ಸಿದ್ದತೆ ನಡೆದಿತ್ತು,  ಅಲ್ಲಿನ ಭಕ್ತರು   ದೇಗುಲದಲ್ಲಿ ತಮ್ಮದೇ ಆದ ಕೆಲಸ ಮಾಡಿ ದೇವರ ಪೂಜೆಯಲ್ಲಿ ಪಾಲ್ಗೊಂಡು ಧನ್ಯತೆ ಮೆರೆದಿದ್ದರು,  ಅಲ್ಲಿದ್ದವರಿಗೆ ನನ್ನ ಪರಿಚಯ ಮಾಡಿಕೊಟ್ಟರು ಪ್ರಕಾಶಣ್ಣ ,  ಮತ್ತದೇ ಆತ್ಮೀಯ  ಮನಸುಗಳ  ದರ್ಶನ, ಮುಗುಳ್ನಗೆಯ  ಸ್ವಾಗತ, ಮೈಸೂರು ಎಂದ  ತಕ್ಷಣ  ಮತ್ತಷ್ಟು ಆತ್ಮೀಯತೆ  ತೋರಿ  ಆದರಿಸಿದರು .


ಶ್ರೀ ವೇಣುಗೋಪಾಲ ನಿಗೆ ಮಂಗಳಾರತಿ




ನಸುಕಿನ ಸುಂದರ ನಿಶ್ಯಬ್ಧ  ವಾತಾವರಣ,  ಸುತ್ತಲಿನ ನೋಟಕ್ಕೆ  ಮಂಜಿನ ತೆಳುವಾದ  ತೆರೆ , ಹಿತವಾದ ತಂಗಾಳಿ , ದೇಗುಲದೊಳಗೆ   ಸ್ಪಷ್ಟವಾದ  ಮಂತ್ರಗಳ  ಘೋಷಣೆ  , ಗಂಟೆಯ ನಿನಾದ , ಹಕ್ಕಿಗಳ ಗಾಯನ   ಇಡೀ ವಾತಾವರಣ  ಭಕ್ತಿಯಿಂದ ತುಂಬಿತ್ತು,    ದೇವಿಸರದ  ಶ್ರೀ  ವೇಣುಗೋಪಾಲ ನಿಗೆ ಮುಂಜಾನೆಯ  ಪೂಜೆ ಕಾರ್ಯ ಶುರು ಆಗಿತ್ತು . ಸುಂದರ ಮೂರ್ತಿಗೆ  ಅಭಿಷೇಕ  ನಡೆಸಿ  ಭಕ್ತಿಯಿಂದ  ಮಂತ್ರ ಹೇಳುತ್ತಾ  ಮಂಗಳಾರತಿ  ಮಾಡಿದರು ಅಲ್ಲಿನ ಅರ್ಚಕರು .  ಹೆಚ್ಚು ಜನರಿಲ್ಲದ  ಆ ದೇಗುಲದಲ್ಲಿ   ನಿರ್ಮಲ ವಾತಾವರಣದಲ್ಲಿ   ಶ್ರೀ ವೇಣುಗೋಪಾಲ  ಸ್ವಾಮಿಯ ದರ್ಶನ  ಪಡೆದ ನಾವು ಧನ್ಯರಾದೆವು. ಆದರೆ ಮನವು  ಈ ದೇಗುಲದ ಇತಿಹಾಸ ಅರಿಯಲು ತವಕ ಪಡುತ್ತಿತ್ತು,  ದೇಗುಲದ ಸುತ್ತಾ ಕಣ್ಣಾಡಿಸಿದೆ  ಯಾವುದೇ ಶಾಸನ, ಇತಿಹಾಸದ ಕುರುಹು ಕಂಡು ಬರಲಿಲ್ಲ,   ಬನವಾಸಿಯ ಮಧುಕೇಶ್ವರ , ಯಾಣದ  ಭೈರವೇಶ್ವರ, ಸಹಸ್ರಲಿಂಗ, ಹೀಗೆ ಹೆಚ್ಚಾಗಿ ಶಿವನ   ಆಲಯ ಗಳೇ  ಹೆಚ್ಚಾಗಿ   ಕಂಡು ಬರುವ   ಈ ಪ್ರದೇಶಗಳಲ್ಲಿ   ಮುತ್ತಿನಕೆರೆ ಶ್ರೀನಿವಾಸ , ಮಂಜುಗುಣಿ  ವೆಂಕಟರಮಣ  ಸ್ವಾಮೀ, ಹಾಗು  ದೇವಿಸರದ  ಶ್ರೀ ವೇಣುಗೋಪಾಲ ದೇಗುಲಗಳು  ಗಮನ ಸೆಳೆಯುತ್ತವೆ,  ಮುತ್ತಿನ ಕೆರೆ ಹಾಗು ಮಂಜುಗುಣಿ ದೇಗುಲಗಳಿಗೆ  ಇತಿಹಾಸದ ಬಗ್ಗೆ  ಅಧಾರ ಸಿಕ್ಕಿವೆ , ಆದರೆ ಈ ದೇವಿಸರದ   ಶ್ರೀ ವೇಣುಗೋಪಾಲ ದೇಗುಲದ ಬಗ್ಗೆ  ಸಂಶೋದನೆ ಅಗತ್ಯವಿದೆ ಅನ್ನಿಸಿತು.  ಪೂಜೆ ಮುಗಿಸಿದ ನಾವು ಅಲ್ಲಿಂದ  ಮನೆಯ ಕಡೆ ಹೊರಟೆವು .



ಅದ್ಸರೀ  ನೀವು ಯಾರು ...?  ಅಂದಿತ್ತು ಈ ಎಳೇ ಕರು

ವಾತ್ಸಲ್ಯ  ತೋರಿದ ಅತ್ತಿಗೆ



ಮುಂಜಾನೆಯ ಮಂಜಿನ  ಹೊದಿಕೆಯಲ್ಲಿ  ದೇವಿಸರ  ಗ್ರಾಮ   ಮಲಗಿತ್ತು, ಸೂರ್ಯನ ಕಿರಣಗಳು ಮಂಜಿನ  ತೆರೆಯಲ್ಲಿ ತೂರಿಬಂದು  ಭೂಮಿಗೆ ಬೆಳಕಿನ  ಚಿತ್ತಾರದ  ಸಿಂಚನ  ಮಾಡುತ್ತಿದ್ದವು . ದೇಗುಲದಿಂದ  ಆಗಮಿಸಿದ ನಾನು  ಅಲ್ಲೇ ಇದ್ದ ಕೊಟ್ಟಿಗೆಯಲ್ಲಿ ಕಂಡ  ಈ ಎಳೆಕರುವನ್ನು ನೋಡಿ  ಒಳಗೆ ಬಂದೆ ಮುದ್ದಾದ ಈ ಕರು  ಅಚ್ಚರಿಯಿಂದ  ನನ್ನತ್ತ  ಮುಗ್ಧ ನೋಟ ಬೀರಿತು,    ಅಷ್ಟರಲ್ಲಿ   ಬಾಲಣ್ಣ  ಬನ್ನಿ   ತಿಂಡೀ  ತಿನ್ನೋಣ ಎಂಬ   ಪ್ರಕಾಶಣ್ಣ ನ ಕರೆ ಬಂತು   , ಅಡಿಗೆ ಕೋಣೆ  ಹೊಕ್ಕ ನನಗೆ  ವನಿತಾ ಅತ್ತಿಗೆ  ಬಿಸಿ ಬಿಸಿ ದೋಸೆ  ಸಿದ್ದ ಪಡಿಸುತ್ತಾ, ಬನ್ನಿ ಬಾಲಣ್ಣ   ಎನ್ನುತ್ತಾ  ಬಿಸಿ ಬಿಸಿ ದೋಸೆಯನ್ನು  ಕಾವಲಿಯಿಂದ   ನನ್ನ ಎಲೆಗೆ  ದಾಟಿಸಿದರು,  ಹೊರಗಡೆ ಮಂಜಿನ  ಮಳೆಯ  ಚಳಿಯ ಸಿಂಚನದ ಅನುಭವ ಪಡೆದ ನನಗೆ ಒಳಗಡೆ  ಬಿಸಿ ಬಿಸಿ ದೋಸೆಯ ರುಚಿಯಾದ  ದೋಸೆ,  ಅದಕ್ಕೆ  ಜೋನಿ ಬೆಲ್ಲಾ,  ಉಪ್ಪಿನಕಾಯಿಯ  ಸಾಥ್  ಬೇರೆ,  ಆಹಾ  ಆಹಾ ಎನ್ನುತ್ತಾ  ಯಾವುದೇ ಸಂಕೋಚವಿಲ್ಲದೆ  ತೃಪ್ತಿಯಾಗುವಷ್ಟು  ದೋಸೆಗಳನ್ನು ಸ್ವಾಹ  ಮಾಡಿದ್ದಾಯ್ತು,  ನಗು ಮುಖದ ವನಿತಾ  ಅತ್ತಿಗೆ ವಾತ್ಸಲ್ಯ  ಬೆರೆಸಿ ಮಾಡಿದ್ದ  ಈ ದೋಸೆಗೆ  ಶರಣಾಗಿತ್ತು ನನ್ನ ಹಸಿವು .



ಅಣ್ಣಾ ತಮ್ಮಾ  ಸೇರಿದಾಗ  ತುಂಟಾಟ  ಗ್ಯಾರಂಟೀ 

ಅಂತೂ ಇಂತೂ ನಮ್ಮ ವಾಸ್ತವ್ಯದ  ಕೊನೆ ಘಟ್ಟ  ತಲುಪಿದೆವು ,   ಎಲ್ಲಾ  ಕಾರ್ಯ ಸುಸೂತ್ರವಾಗಿ ಮುಗಿಸಿ, ನಮ್ಮ ಊರುಗಳಿಗೆ  ವಾಪಸ್ಸು  ಹೊರಡಲು ಸಿದ್ದವಾಗುತ್ತಿದ್ದೆವು ..  ಮೊದಲೇ ಎಲ್ಲಾ  ಸಿದ್ದವಾಗಿದ್ದ  ನನ್ನ ಲಗ್ಗೇಜ್  ಕಾರಿನ ಡಿಕ್ಕಿ ಸೇರಿಕೊಂಡಿತು .  ಹಾಗೆ ಮಾತನಾಡುತ್ತಾ  ನಮ್ಮ ನಾಗೇಶಣ್ಣ   ಮದುವೇ ಮಂಟಪಗಳನ್ನು  ಅಂದವಾಗಿ ಮಾಡಿ ಸಿಂಗರಿಸುವ ವಿಚಾರ ಬಂತು ,  ನನಗೆ  ಅಚ್ಚರಿ ...!ಈ  ಅಣ್ಣನಿಗೆ ಬರದ ಇರುವ  ಕೆಲಸ ಯಾವುದು ಅಂತಾ...? , ಅಷ್ಟರಲ್ಲಿ ಬಾಲಣ್ಣ , ತನ್ನ  ಬೈಕ್  ಸಂಪೂರ್ಣ ಕಳಚಿ  ತಾನೇ ಜೋಡಿಸುತ್ತಾರೆ  ಅಂತಾ  ಪ್ರಕಾಶಣ್ಣ  ಹೇಳಿದಾಗ  ನಿಜಕ್ಕೂ  ಅಚ್ಚರಿ ಪಟ್ಟೆ ,   "ಹಣದಾಸೆಗಾಗಿ  ಗೊತ್ತಿಲ್ಲದ ಕೆಲಸವನ್ನು   ಗೊತ್ತು ಎಂದು ಪೋಸ್  ಕೊಡುವ ಜನ ಒಂದು ಕಡೆ  ಮತ್ತೊಂದು ಕಡೆ  ಯಾರ ಹಂಗೂ ಇಲ್ಲದೆ  ತನಗೆ ತಾನೇ  ಹಲವು ಕೆಲಸಗಳನ್ನು ಕಲಿತು  ಆ ಕೆಲಸವನ್ನು  ಹಣಕ್ಕಾಗಿ   ಬಳಸದೆ   ಆತ್ಮ ತೃಪ್ತಿಗಾಗಿ ಮಾಡುತ್ತಾ   ಇರುವ ಇಂತಹ ನಾಗೇಶಣ್ಣ  ಒಂದುಕಡೆ  " ಇದೊಂತರಾ  ವಿಸ್ಮಯದ ವಿಚಾರ ಅನ್ನಿಸಿತು ಅಷ್ಟರಲ್ಲಿ ನಾಗೇಶಣ್ಣ ಕಾಗದದ  ಚಿತ್ತಾರದ  ಹಾರ ಮಾಡಿಕೊಂಡು ಬಂದರು  ನನ್ನ ಕೋರಿಕೆಯಂತೆ  ತಮ್ಮ ಪ್ರಕಾಶ್ ಹೆಗ್ಡೆ ಜೊತೆ ಫೋಟೋ  ತೆಗೆಸಿಕೊಳ್ಳಲು  ಒಪ್ಪಿ  ಪೋಸ್  ಕೊಟ್ಟರು .



ನಂದಗೋಕುಲದ  ಪ್ರೀತಿಯೊಳಗೆ  ನಿಂದ  ಆ ಕ್ಷಣ
ಎಲ್ಲಾ ಸಿದ್ದತೆ  ನಡೆಸಿ ಮನೆಯವರೆಲ್ಲರನ್ನೂ ಮತ್ತೊಮ್ಮೆ ಆತ್ಮೀಯವಾಗಿ ಮಾತನಾಡಿಸಿ  ಅವರಿಗೆ ಕೃತಜ್ಞತೆ  ತಿಳಿಸಿ,  ಪ್ರಕಾಶ್ ಹೆಗ್ಡ ತಾಯಿಯವರ  ಆಶೀರ್ವಾದ ಪಡೆದು  , ಸಂತೋಷಗೊಂಡೆ  , ಎರಡು ದಿನ ಇವರುಗಳ ಪ್ರೀತಿಯ ನಂದಗೋಕುಲದಲ್ಲಿ  ನಲಿದಾಡಿದ ನನಗೆ ಇದೊಂದು ಮರೆಯಲಾರದ  ಅನುಭವ ನೀಡಿತು . ಎಲ್ಲರ  ಶುಭ ಹಾರೈಕೆಗಳೊಂದಿಗೆ   ಮುಂದೆ ಹೊರಟೆವು .   ದೇವಿಸರದ   .  ಗಡಿಯತ್ತ ನಮ್ಮ ಕಾರು ತೆರಳುತ್ತಿತ್ತು .


ಗ್ರಾಮದ  ರಕ್ಷಕ  ಮೂರ್ತಿಯೇ ಇದು ಗೊತ್ತಾಗಲಿಲ್ಲ

ಇನ್ನೇನು ತಿರುವು  ಪಡೆಯಬೇಕು ಅಷ್ಟರಲ್ಲಿ ನನ್ನ ಕಣ್ಣಿಗೆ ಒಂದು  ಕಲ್ಲು ಕಂಡು ಬಂತು , ಅದಕ್ಕೆ ಪೂಜೆ ಸಹ ಮಾಡಿದ್ದರು, ಹೊರಡುವ ಆತುರದಲ್ಲಿದ್ದ  ನಮಗೆ ಹೆಚ್ಚಿನ  ಸಮಯ ಇರಲಿಲ್ಲ ,  ಅದರ ಒಂದು ಚಿತ್ರ ತೆಗೆದು  ಮುಂದಿನ ಸಾರಿ ಬಂದಾಗ  ವಿವರ  ತಿಳಿಯೋಣ ಅಂತಾ  ಮುಂದೆ ಹೊರಟೆ , ಆ ಮೂರ್ತಿಯೂ ಸಹ  ಈಗಲೇ ಎಲ್ಲಾ   ವಿಚಾರ ಸಿಕ್ಕಿ ಬಿಟ್ರೆ ನೀನು ಮತ್ತೆ ಬರೋಲ್ಲಾ, ಅದಕ್ಕೆ ಬಾ ಮುಂದಿನ  ಸಾರಿ  ನನ್ನ ವಿಚಾರ  ತಿಳಿಯೋವಂತೆ ಎನ್ನುತ್ತಾ ನನ್ನನ್ನು  ಬೀಳ್ಕೊಟ್ಟಿತು .  ದೇವಿಸರದ  ಪ್ರೀತಿಯ ಅನುಭವ  ಅನುಭವಿಸಿ , ಪ್ರಕಾಶ್ ಹೆಗ್ಡೆ  ಅವರ  ಭಾವನವರ  ಹೊಸ ಮನೆಯ  ಕಟ್ಟಡದ  ಕಾರ್ಯ ವೀಕ್ಷಿಸಿ , ಶಿರಸಿಗೆ ಬಂದು ಮಾರಿಕಾಂಬೆ ದರ್ಶನ  ಪಡೆದು  ಹೊರಟೆವು .  ಅಣ್ಣಾ ಪ್ರಕಾಶಣ್ಣ  ಯಾವ ಕಡೆಯಿಂದ ಹೋಗೋದು  ಅಂದೇ .....?   ಹ ಬಾಲಣ್ಣ  ಯಾಕದೆ ಹೋಗ ಬಹುದು   ಅಂತಾ ಯೋಚಿಸ್ತೀನಿ ತಾಳಿ ಅಂದರು  ............!    ಶಿರಸಿಯ  ಮಾರಿಕಾಂಬ  ದೇಗುಲದ ಬಳಿ ನಿಂತು   ಯಾವ ಕಡೆಯಿಂದ   ಊರಿಗೆ ವಾಪಸ್ಸ್ ಹೋಗೋದು ಅಂತಾ  ಯೋಚಿಸುತ್ತಾ  ನಿಂತೆವು ....!














Sunday, April 19, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......13 "ಅಣ್ಣಾ ಇದು ಯಾಣ ಕಣಣ್ಣಾ "



ಯಾಣ ದಲ್ಲಿ ಕಂಡ  ಮಾನವ ಮುಖ


ಸಂಧ್ಯಾ ಭಟ್ ಮನೆಯಲ್ಲಿನ  ಊಟ ಮಾಡಿ  ಮಂಜುಗುಣಿ ಕ್ಷೇತ್ರ ದರ್ಶನ ಮಾಡಿದ ನಾನೂ ಹಾಗು ಪ್ರಕಾಶ್ ಹೆಗ್ಡೆ   ನಿಗದಿತ ಕಾರ್ಯಕ್ರಮದಂತೆ  "ಯಾಣ " ಅಥವಾ  "ಏಣ"  ಕಡೆಗೆ ಹೊರಟೆವು . ಈ ಯಾಣ  ಎಂಬ ತಾಣ ದ ಬಗ್ಗೆ ನನಗೆ ಮೊದಲಿಂದಾ ಕುತೂಹಲ ,  ಹಲವಾರು ಕನ್ನಡ  ಚಿತ್ರಗಳಲ್ಲಿ ನೋಡಿದ್ದೇ , ಕೆಲವೊಮ್ಮೆ  ಅಂತರ್ಜಾಲದ  ತಾಣಗಳಲ್ಲಿ ನೋಡಿದ ಯಾಣ  ದ ಚಿತ್ರಗಳು  ನನಗೆ ಹಾಲಿವುಡ್  ಚಿತ್ರಕ್ಕೆ ಹಾಕಿದ  ಸೆಟ್ ನಂತೆ  ಕಾಣುತ್ತಿತ್ತು,  ಯಾಣ  ನೋಡುವ ಹಲವು ಪ್ರಯತ್ನ ನನಗೆ  ಸಮಯದ ಅಭಾವದಿಂದ  ತಪ್ಪಿ ಹೋಗಿತ್ತು . ಮತ್ತೊಮ್ಮೆ ಯಾಣ  ನೋಡಲು ಹೋದವ  ಸಮಯ ಸಾಲದೇ ಗೆಳೆಯನ ನೆರವಿನಿಂದ ಭೀಮನೇರಿ ಗುಡ್ಡ ತಲುಪಿದ್ದೆ ಅದನ್ನೇ ನೋಡಿ ಖುಶಿಪಟ್ಟಿದ್ದೆ .  ಮುಂದೆ ಇದರ ನೋಟವನ್ನು   ಶ್ರೀ  ಸುರೇಶ ಹೆಬ್ಳಿಕರ್  ರವರ  "ಆಗಂತುಕ "  ಹಾಗು  ಸುನಿಲ್ ಕುಮಾರ್ ದೇಸಾಯಿ ಯವರ  "ನಮ್ಮೂರ ಮಂದಾರ ಹೂವೆ"  ಚಿತ್ರಗಳಲ್ಲಿ  ಅದ್ಭುತವಾಗಿ ಸೆರೆಹಿದಿರುವ   ಸುಂದರ ನೋಟವನ್ನು ಅನುಭವಿಸಿದ್ದೆ   ಎಲ್ಲರೂ ಹೇಳುತ್ತಿದ್ದರೆ ಯಾಣ  ನೋಡುವ ಬಯಕೆ  ಹೆಚ್ಚಾಗುತ್ತಿತ್ತು .  ಹೀಗೆ ನನ್ನ ಯಾಣ  ನೋಡುವ ಆಸೆ  ಹಾವು ಏಣಿ ಆಟ  ಆಡಿ ಕೊನೆಗೊಮ್ಮೆ ನಮ್ಮ ಪ್ರಕಾಶ್ ಹೆಗ್ಡೆ  ಜೊತೆ  ಯಾಣ  ನೋಡುವ ಅವಕಾಶ  ಸಿಕ್ಕಿತು.

ಭೈರವೇಶ್ವರ  ಶಿಖರ

ಯಾಣ  ಕಡೆ ಹೊರಟ  ನಮ್ಮ ಕಾರು  ಚಲಿಸಿದ ತಕ್ಷಣ  ಬೀಸಿದ ತಂಗಾಳಿಗೆ   ನಮ್ಮ ದೇಹಗಳು  ವಿಶ್ರಾಂತಿಗೆ ಅಣಿಯಾಗಿ ಬಿಟ್ಟವು , ನಿದ್ರೆಯು ಗಾಳ  ಹಾಕಲು  ಹೊಂಚುಹಾಕಿತ್ತು,  ಆದರೆ ನಮ್ಮ ಪ್ರಕಾಶ್ ಹೆಗ್ಡೆ ತುಂಟ  ಮಾತುಗಳು ಬರುತ್ತಿದ್ದ   ನಿದ್ದೆಯನ್ನು ಹೊಡೆದು ಓಡಿಸಿದವು  .  ಅಲ್ಲಾ ಬಾಲಣ್ಣ  ಆ  "ಹಣಮಂತ"   ನಮ್ಮ ಜೊತೆ ಬಂದಿದ್ರೆ  ಮತ್ತೆ ಚೆನ್ನಾಗಿತ್ತು , ಎಂದು ಹೇಳುತ್ತಿದ್ದರೆ   ಆ "ಹಣಮಂತ"   ಎಂಬ ಪದದ ಉಚ್ಚಾರಣೆ ಕೇಳಿಯೇ  ನಗೆ ಉಕ್ಕಿ ಬಂದಿತು, ಇನ್ನು  ಶಿರಸಿಯಲ್ಲಿ ಪ್ರಕಾಶ್ ಹೆಗ್ಡೆ ಓದುತ್ತಿದ್ದಾಗ  ಅವರ ಕಾಲೇಜಿಗೆ   ಕಡಲ ತೀರದ ಭಾರ್ಗವ ಶಿವರಾಮ ಕಾರಂತರ  ಕರೆತರುವಬಗ್ಗೆ   ಶಿವರಾಮ ಕಾಂತರನ್ನು   ಭೇಟಿಯಾಗಲು    ಹೋಗಿ  ಅಲ್ಲಿ  ನಡೆದ  ಘಟನೆಯ   ವಿಚಾರವನ್ನು  ರಸವತ್ತಾಗಿ ಹಾಸ್ಯಮಯವಾಗಿ  ಹೇಳುತ್ತಿದ್ದರೆ  ಒಂದು ಹೊಸ ಲೋಕದೊಳಗೆ ಹೊಕ್ಕ ಅನುಭವ. ವಿಚಾರ ತಿಳಿಯುತ್ತಾ  ನಗುತ್ತಾ ಯಾಣ  ತಲುಪಿದ್ದೆ ತಿಳಿಯಲಿಲ್ಲ .


ಶೀರ್ಷಿಕೆ ಸೇರಿಸಿ


ಬನ್ನಿ ಯಾಣ  ಬಗ್ಗೆ ತಿಳಿಯೋಣ , ಈ ಬ್ಲಾಗ್ ಬರಹ  ಬರೆಯುವ ಮೊದಲು ಯಾಣ  ಬಗ್ಗೆ  ಹಲವು ಮಾಹಿತಿ  ಜಾಲಾಡಲು ತೊಡಗಿದೆ,  ಶಿರಸಿಯ  ಮಿತ್ರ  ನಮ್ಮ ಶಿರಸಿ  ಪತ್ರಿಕೆಯ  ಸಂಪಾದಕ  ಶ್ರೀ  ಎಮ್. ಆರ್ . ಸಚಿನ್   ಯಾಣ  ಬಗ್ಗೆ ತಮ್ಮ ಪತ್ರಿಕೆಯಲ್ಲಿ  ಸಾಕ್ಕಷ್ಟು ಮಾಹಿತಿ  ನೀಡಿದ್ದಾರೆ , http://sirsi.info/epaper/34th-edition/Default.aspx&ab08/sirsi-siri-page-bi-8-1.html  ಈ ಮಾಹಿತಿಯನ್ನು  ಒಪ್ಪಬಹುದಾಗಿದೆ , ಆದರೆ  ನನಗೆ ಅಚ್ಚರಿಯಾಗಿದ್ದು  ವಿಕಿಪಿಡಿಯಾ , ಹಾಗು ಕಾಮತ್  ಪೋಟ್ ಪುರಿ  ತಾಣದಲ್ಲಿನ  ಒಂದು ಮಾಹಿತಿ ಬಗ್ಗೆ  ಹಾಗು ಗೆಜತೀರ್  ನಲ್ಲಿನ ಮಾಹಿತಿ ಬಗ್ಗೆ  , ಈ ಎಲ್ಲಾ ತಾಣಗಳಲ್ಲಿ ಹಾಗು ಪುಸ್ತಕಗಳಲ್ಲಿ  ಯಾಣ  ಪ್ರದೇಶವನ್ನು  ೧೮೦೧ ರಲ್ಲಿ  ಬುಕನನ್  ಅವರು  ಸರ್ವೇ ಕಾರ್ಯ ನಡೆಸಿದರು ಎಂದು ಹೇಳಲಾಗಿದೆ  ಮಾಹಿತಿ ಇಲ್ಲಿದೆ ನೋಡಿ http://en.wikipedia.org/wiki/Yana,_India

History

Dr Francis Buchan, a British official of the East India Company, surveyed the site in 1801. At that time, according to his reports, there was a population of more than ten thousand in and around this place. Over the years, people have migrated to other regions to pursue their vocations. At present, the place is inhabited by only a few families, one of them being the Pujari ("Priest") family.[1] With 16 k.m. trek, Yana was a trekkers delight during 20th Century and when a popular movie was shot here and all weather road made which provides easy access, the place became famous and attracts thousands of tourists every week.[9]



ಮೋಹಿನಿ ಶಿಖರ ಅಥವಾ  ಚಂಡಿಕ ಶಿಖರ


 ಇವುಗಳ ಮಾಹಿತಿ ಆಧರಿಸಿ  1807 ಪ್ರಕಟಗೊಂಡ   ಡಾಕ್ಟರ್ ಫ್ರಾನ್ಸಿಸ್  ಬುಕನನ್  ಅವರ A JOURNEY  FROM MADRAS THROUGH  MYSORE  CANARA AND MALABAAR ಪುಸ್ತಕ  ತಡಕಾಡಲು  ಸಿಕ್ಕ ಮಾಹಿತಿ ಪ್ರಕಾರ ಬುಕನನ್  ಅವರು ೧೮ ಫೆಬ್ರವರಿ ೧೮೦೧ ರಿಂದ ೧೮ ಮಾರ್ಚ್ ೧೮೦೧ ರವರೆಗೆ  ಭಟ್ಕಳ , ಹೊನ್ನಾವರ, ಗೋಕರ್ಣ, ಅಂಕೋಲಾ , ಸದಾಶಿವ ಘಡ ,  ಯೆಲ್ಲಾಪುರ , ಸೋಂದ ,ಶಿರಸಿ , ಬನವಾಸಿ   ಯಲ್ಲಿ ಪ್ರವಾಸ ಮಾಡಿ ನಂತರ ಚಂದ್ರಗುತ್ತಿ ಗೆ ತೆರಳುತ್ತಾರೆ . ಈ ಅವಧಿಯಲ್ಲಿ  ದಿನಾಂಕ ೧೪ - ೦೨ ೧೮೦೧ ರಿಂದ ೧೬ -೦೨ -೧೮೦೧ ರವರೆಗೆ  ಶಿರಸಿ, ೧೬ -೦೨ ೧೮೦೧ ರಿಂದ ೧೮-೦೨-೧೮೦೧ ರವರೆಗೆ  ಎರಡುದಿನ ಬನವಾಸಿಯಲ್ಲಿ  ಕಳೆಯುತ್ತಾರೆ ,  ಯಾಣ  ಸುತ್ತ ಮುತ್ತ ಲಿನ ಪ್ರದೇಶ ಅಳತೆ ಮಾಡಿದ ಬಗ್ಗೆ ಎಲ್ಲಿಯೂ ಉಲ್ಲೇಖ  ಇಲ್ಲಾ , ಆದರೆ ನಮ್ಮ  ಮಾಹಿತಿ ತಾಣಗಳು ಹಾಗು ಪುಸ್ತಕಗಳು    ೧೮೦೧ ರಲ್ಲಿ  ಬುಕನನ್  ಅವರು ಸರ್ವೇ  ಮಾಡಿಸಿದರು ಅನ್ನುತ್ತಿವೆ , ಯಾವುದನ್ನು ನಂಬ ಬೇಕು .  ಅರ್ಥಾ  ಆಗಲಿಲ್ಲ ಹಾಗಾಗಿ ಡಾಕ್ಟರ್ ಫ್ರಾನ್ಸಿಸ್  ಬುಕನನ್  ಅವರ  ಪುಸ್ತಕ  ಓದಿದ ನಂತರ  ಅದನ್ನು ಆಧರಿಸಿ  ಡಾಕ್ಟರ್ ಫ್ರಾನ್ಸಿಸ್  ಬುಕನನ್ ಯಾಣ  ಕ್ಕೆ ಬಂದಿಲ್ಲ  ಹಾಗು ವಿಕಿ ಪಿಡಿಯಾ , ಹಾಗು ಇತರ ಮಾಹಿತಿ ತಾಣಗಳ  ಮಾಹಿತಿ ತಪ್ಪೆಂಬ  ತೀರ್ಮಾನಕ್ಕೆ  ಬಂದೆ . ಬುಕನನ್  ಅವರ A JOURNEY  FROM MADRAS THROUGH  MYSORE  CANARA AND MALABAAR   ಎಂಬ ಮೂರು  ಸಂಪುಟಗಳಲ್ಲಿ  ಯಾರು ಬೇಕಾದರೂ ಹುಡುಕಬಹುದಾಗಿದೆ , ಬಹುಷಃ  ನನ್ನ ಮಾಹಿತಿ ಸರಿ ಇಲ್ಲದಿದ್ದಲ್ಲಿ  ಆಧಾರ ನೀಡ ಬಹುದಾಗಿದೆ.



ಯಾಣ  ಭೈರವೇಶ್ವರ  ಶಿಖರದ  ತಳದಲ್ಲಿ  ದೇವಾಲಯ


 ಹಲವು  ಶತಮಾನಗಳ  ಹಿಂದೆಯೇ ಶ್ರೀ  ವಾಧಿರಾಜರು  ಇಲ್ಲಿಗೆ ಭೇಟಿ ಕೊಟ್ಟ ನಂತರ   ಯಾಣ  ಮಾಹಿತಿ  ತಿಳಿದು ಬಂದದ್ದು    ಶ್ರೀ ವಾಧಿರಾಜರು  ರಚಿಸಿರುವ   ತೀರ್ಥ ಪ್ರಬಂಧದಲ್ಲಿ   ಈ  ಪ್ರದೇಶವನ್ನು ಏಣ  ಭೈರವ ಕ್ಷೇತ್ರ ಎಂದು ಕರೆದು  

" ಯಸ್ಯ  ಭೈರವನಾದೇನ  ವಿದ್ರವಂತ್ಯ ಘರಾಶಯಹ "   "ಏಣ  ಇವ  ಭಾಯಾನ್ನಿತ್ಯಂ ತಂ  ನತೋS ಸ್ಮ್ಯೇ ಣ  ಭೈರವಂ "  

ಎಂದು   ಭಕ್ತಿಯಿಂದ  ಪ್ರಬಂಧ  ರಚಿಸಿ  ದಾಖಲೆ ಮಾಡಿದ್ದಾರೆ . ಯಾಣ  ಕುರಿತು  ಬಟ್ಟಲೆಶ್ವರ  ಬರೆದ ಕೌಶಿಕ  ರಾಮಾಯಣದಲ್ಲಿ ಉಲ್ಲೇಖವಿದೆ ,     ಯಾಣ   ಕುಮಟ ತಾಲೂಕಿನ  ಒಂದು ಕಂದಾಯ ಗ್ರಾಮ ಕುಮಟಾದಿಂದ  ೨೪ ಕಿಲೋಮೀಟರು  ಶಿರಸಿಯಿಂದ  ೪೫ ಕಿಲೋಮೀಟರು , ಈಗ ಇಲ್ಲಿಗೆ ತಲುಪಲು  ಸರಿಯಾದ ರಸ್ತೆಗಳು ಆಗುತ್ತಿದ್ದು  ಶಿರಸಿ ಕಡೆಯಿಂದ ಹೋದರೆ  ನಡೆಯುವ  ಹಾದಿ ಕಡಿಮೆ ಆಗುತ್ತದೆ,  ಕುಮಟ ಕಡೆಯಿಂದ ಬಂದರೆ  ಕಡಿದಾದ ಮೆಟ್ಟಿಲು ಏರಿ ಬರಬೇಕು .   ಯಾಣ  ದಲ್ಲಿ  ಸುಮಾರು ೬೧   ಶಿಲಾ ಶಿಖರಗಳು ಇದ್ದು  ಇದರಲ್ಲಿ  ಭೈರವೆಶ್ವರ  ಶಿಖರ  ೧೨೦ ಮೀಟರ್  ಹಾಗು  ಮೋಹಿನಿ ಶಿಖರ  ಅಥವಾ ಚಂಡಿಕಾ ಶಿಖರ  ೯೦ ಮೀಟರ್  ಎತ್ತರವಿದೆ , ಉಳಿದ  ೫೯  ಶಿಲಾ ಶಿಖರಗಳು  ಸಣ್ಣದಾಗಿದ್ದು  ಇಲ್ಲಿನ ದಟ್ಟ  ಕಾಡಿನಲ್ಲಿ  ಅಡಗಿಕೊಂಡಿವೆ . ಈ ಪ್ರದೇಶದಲ್ಲಿ  ಹುಟ್ಟುವ  ಚಂಡಿ ಹೊಳೆ   ಅಘನಾಶಿನಿ  ನದಿಯಲ್ಲಿ ಸೇರುತ್ತದೆ ..




ಯಾಣ  ಎಂಬ ಮಾಯಾಲೋಕ


ಈ ಜಾಗಕ್ಕೆ ಮೋಹಿನಿ ಬಸ್ಮಾಸುರ   ಘಟನೆ  ನಡೆದ  ಜಾಗವೆಂದು ಹೇಳುತ್ತಾರೆ . ಭಾಸ್ಮಾಸುರನಿಗೆ  ವರ ಕೊಟ್ಟ ಶಿವ  ಅದನ್ನು  ತನ್ನ  ಮೇಲೆ ಪರೀಕ್ಷೆ ಮಾಡಲು  ಮುಂದಾದ  ಭಾಸ್ಮಾಸುರನಿಂದ ತಪ್ಪಿಸಿಕೊಳ್ಳಲು  ಯಾಣ  ದಲ್ಲಿ  ಅಡಗಿದ್ದನೆಂದೂ , ನಂತರ ವಿಷ್ಣು ಮೋಹಿನಿ ರೂಪ ತಾಳಿ  ಈ ತಾಣದಲ್ಲಿಯೇ ಭಸ್ಮಾಸುರನನ್ನು  ಭಸ್ಮ ಮಾಡಿದ ಕಾರಣ  ಇಲ್ಲಿನ ಮಣ್ಣು  ಇಂದಿಗೂ ಭಸ್ಮ ದಂತೆ  ಕಂಡು ಬರುವುದಾಗಿ ಹೇಳುತ್ತಾರೆ .  ಈ ಜಾಗದಲ್ಲಿ ಶಿವನು  ಅಡಗಿದ ಕಾರಣ ಭೈರವ  ಶಿಖರ ,  ವಿಷ್ಣು  ಮೋಹಿನಿ ರೂಪ ತಾಳಿ ಭಸ್ಮಾಸುರನನ್ನು  ನಿಗ್ರಹ ಮಾಡಿದ  ಕಾರಣ   ಮೋಹಿನಿ ಶಿಖರ  ಎಂಬ ಹೆಸರು ಬಂತೆಂದು ಹೇಳುತ್ತಾರೆ . ಇಲ್ಲಿನ ಗುಹೆಯಲ್ಲಿನ  ಆಲಯದಲ್ಲಿ ಒಂದು ಶಿವಲಿಂಗ ಇದ್ದು  ಅದನ್ನು    ಭೈರವೇಶ್ವರ  ಎಂದು ಕರೆಯಲಾಗಿದೆ,  ಈ ಶಿವಲಿಂಗದ ಮೇಲೆ  ಗುಹೆಯಲ್ಲಿ ಜಿನುಗುವ ಜಲ  ಯಾವಾಗಲು  ಲಿಂಗಕ್ಕೆ ಅಭಿಷೇಕ  ಮಾಡುತ್ತಿರುತ್ತದೆ . ಇದನ್ನು ಗಂಗೊದ್ಭವ  ಎಂದು ಕರೆಯುತ್ತಾರೆ.  ಇದರ ದಕ್ಷಿಣದಲ್ಲಿ ಚಂಡಿಕಾ ಹಾಗು ದುರ್ಗಾ ಮೂರ್ತಿಗಳಿವೆ .  ಶಿವರಾತ್ರಿಯಲ್ಲಿ ಇಲ್ಲಿ ವಿಶೇಷ ಜಾತ್ರೆ ಇರುವುದಾಗಿ ತಿಳಿದು  ಬಂತು , ಶಿವರಾತ್ರಿ ಯಲ್ಲಿ ಇಲ್ಲಿನ ದಂಡಿತೀರ್ಥ ದಲ್ಲಿ ಮಿಂದು  ಯಾಣ ದಲ್ಲಿನ ಭೈರವೆಶ್ವರನ  ದರ್ಶನ ಪಡೆದು  ದಂಡಿ ತೀರ್ಥವನ್ನು  ಗೋಕರ್ಣಕ್ಕೆ  ತೆಗೆದುಕೊಂಡು ಹೋಗಿ  ಅಲ್ಲಿನ ಮಹಾಬಲೇಶ್ವರನಿಗೆ ಅಭಿಷೇಕ  ಮಾಡಿದರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇಲ್ಲಿನ ಜನರ ಪದ್ದತಿಯಾಗಿದೆ ..



ಯಾಣದ  ಗುಹೆಗಳ ವಿಸ್ಮಯ  ಕರ್ನಾಟಕ ನಕ್ಷೆ


ವಿಸ್ಮಯ  ಲೋಕ

ವಿಸ್ಮಯ ನೋಟ


ಬನ್ನಿ  ಭೈರವೆಶ್ವರನಿಗೆ  ಪ್ರದಕ್ಷಿಣೆ ಹಾಕೋಣ ಇಲ್ಲಿನ ಬೈರವೇಶ್ವರ  ಗುಹೆಗೆ ಪ್ರದಕ್ಷಿಣೆ ಬರಲು ನಿಸರ್ಗ ನಿರ್ಮಿತ   ಕಲ್ಲಿನ ಬೆಟ್ಟಗಳ ಸಂದಿನಲ್ಲಿ ಒಂದು  ಪಥ  ಮಾಡಲಾಗಿದೆ, ಇಲ್ಲಿ ಪ್ರವಾಸಿಗಳು ಬರೀ ಕಾಲಿನಿಂದ  ಪ್ರದಕ್ಷಿಣೆ ಹಾಕಲು  ತಿಳಿಸಲಾಗಿದೆ,  ಸುಮಾರು  ಎರಡು ಕಿಲೋಮೀಟರು  ಸುತ್ತಳತೆಯ  ಕಡಿದಾದ  ಸ್ವಲ್ಪ ಕಷ್ಟ ಪಡುವ ಹಾದಿ ಇದು , ಆದರೆ ನೀವು ಪ್ರದಕ್ಷಿಣೆ ಹಾಕುತ್ತಾ   ಬಂಡೆಯಿಂದ ಬಂಡೆಗೆ  ತೆರಳುತ್ತಾ   ತೆರಳುವಾಗ  ನಿಮಗೆ ಅನೇಕ ವಿಸ್ಮಯಗಳು ಕಾಣುತ್ತವೆ ಅದನ್ನು ಗಮನಿಸುವ  ತಾಳ್ಮೆ ಇರಬೇಕು ಅಷ್ಟೇ , ಸ್ವಲ್ಪ ಸಹನೆಯಿಂದ ಗಮನಿಸಿದರೆ  ನಿಮಗೆ  ಮರೆಯಲಾಗದ ಅನುಭವ ಇಲ್ಲಿ ಸಿಗುತ್ತದೆ .


ಯಾಣ  ದಲ್ಲಿ  ಪ್ರದಕ್ಷಿಣೆ   ನಡೆಸಿದ ಪ್ರಕಾಶ್ ಹೆಗ್ಡೆ

  ಹರನ ಜೊತೆ ಇಲ್ಲಿ ಹರಿಯೂ ಇದ್ದಾನೆ 

ನಾನೂ ಹಾಗು ಪ್ರಕಾಶಣ್ಣ  ಈ ವಿಸ್ಮಯ ಅನುಭವಿಸುತ್ತಾ   ಪ್ರದಕ್ಷಿಣೆ ಹಾಕುತ್ತಾ ನಡೆದೆವು . ಒಮ್ಮೆಲೇ ಗುಹೆ ಕಳೆದು ಹೊರ ಪ್ರಪಂಚಕ್ಕೆ ಬಂದರೆ  ಕಡಿದಾದ  ಬಂಡೆ  ಇಳಿದು  ಜಾರುವ  ಕಡಿದಾದ ಮಣ್ಣಿನ  ಗುಡ್ಡ ಇಳಿಯ ಬೇಕಾಯಿತು  ಮೊದಲೇ ತಲೆಯ ಮೇಲೆ ಸೂರ್ಯ  ಕೆಂಡದ ಮಳೆ  ಸುರಿಸಿದ್ದ  ಅದರ ಜೊತೆ ಪಾದ ರಕ್ಷೆ ಇಲ್ಲದ ಬರೀ ಕಾಲಿನಲ್ಲಿ    ಬಿಸಿಯಾದ  ನುರುಜುಕಲ್ಲು  ಮಣ್ಣು  ಹಾಗು ಮುಳ್ಳು ತುಂಬಿದ ಹಾದಿಯಲ್ಲಿ ನಡೆಯುವಷ್ಟರಲ್ಲಿ ಹೈರಾಣಾಗಿದ್ದೆವು , ಕಷ್ಟಪಟ್ಟು ಪ್ರದಕ್ಷಿಣೆ ಮುಗಿಸಿ  ಅಲ್ಲೇ ಇದ್ದ  ಒಂದು  ಪುಟ್ಟ ದೇಗುಲದ ಬಳಿ  ಕುಳಿತೆವು . ವಿಶ್ರಾಂತಿ ಪಡೆದು ನೋಡಿದರೆ ಅಲ್ಲಿ  ಒಂದು ಮುದ್ದಾದ  ವೇಣುಗೋಪಾಲ  ಮೂರ್ತಿಯ ದರ್ಶನ ಆಯ್ತು .   ನಂತರ   ನಮ್ಮ ಪ್ರದಕ್ಷಿಣೆ ಮುಗಿಸಿ  ಉರಿಬಿಸಿಲಿನ ತಾಪ ದಿಂದ   ಮತ್ತಷ್ಟು ಬಸವಳಿದು  ಅಲ್ಲೇ ಇದ್ದ ಅಂಗಡಿಯಿಂದ  ತಣ್ಣನೆ  ಶರಬತ್ತು  ಕುಡಿದು  ಮತ್ತಷ್ಟು  ವಿಶ್ರಾಂತಿ ಪಡೆದೆವು .



ಪ್ರದಕ್ಷಿಣೆ ಮಾಡುವ  ಹಾದಿಯಲ್ಲಿ ಸಿಗುವ ಗುಹೆಯ ನೋಟ


ಯಾಣ  ದಲ್ಲಿ  ವಿಹಾರ ಮಾಡಲು   ಮೊದಲನೆಯದಾಗಿ  ದೇಹದಲ್ಲಿ ಸಾಕಷ್ಟು  ಶಕ್ತಿ  ಬೇಕು , ನೀವು ಬೆಳಿಗ್ಗೆ  ಅಥವಾ ಸಂಜೆವೇಳೆ ಇಲ್ಲಿಗೆ ತೆರಳಿದರೆ ಉತ್ತಮ, ಬೇಸಿಗೆಯಲ್ಲಿ  ಖಂಡಿತಾ  ಬಿಸಿಲಿನ ತಾಪ ಹೆಚ್ಹಾಗಿ  ಇದ್ದು  ದೇಹಕ್ಕೆ  ಕಷ್ಟಾ ಆಗುತ್ತದೆ,  ಮಳೆಗಾಲದಲ್ಲಿ  ಇಲ್ಲಿ  ಜಿಗಣೆ ಅಥವಾ ಉಂಬಳಿ  ಕಾಟ ಇರುತ್ತದೆ . . ಇದೆಲ್ಲವನ್ನು  ಹೊರತುಪಡಿಸಿ ಸ್ವಲ್ಪ ಕಷ್ಟ ಪಟ್ಟರೆ  ನಿಮಗೆ  ಈ ತಾಣ  ಬಹಳ ಒಳ್ಳೆಯ ಅನುಭವ ನೀಡುತ್ತದೆ . ಈ ತಾಣ ಏನಾದ್ರೂ ನಮ್ಮ ನಾಡಿನಲ್ಲಿ ಇಲ್ಲದೆ  ಬೇರೆ ಯೂರೋಪ್ ಅಥವಾ ಅಮೇರಿಕ ದೇಶಗಳಲ್ಲಿ  ಇದ್ದಿದ್ದರೆ  ಈ ಜಾಗ  ವಿಶ್ವ ಪ್ರಸಿದ್ಧಿ ಯಾಗುತ್ತಿತ್ತು. ಯಾಣ  ಎಂಬ ವಿಸ್ಮಯ ಲೋಕದ ಅನುಭವ ಪಡೆದ ನಾವು    ಯಾಣಕ್ಕೆ  ಭಕ್ತಿಯ ನಮನ ಅರ್ಪಿಸಿ  ಕೊಳಗಿ ಬೀಸ್  ಹನುಮನ ದರ್ಶನ ಪಡೆದು   ಮೂಲಕ   ಶಿರಸಿಯಕಡೆ  ದೌಡಾಯಿಸಿದೆವು . [ಕೊಳಗಿಬೀಸ್ ಬಗ್ಗೆ ಈಗಾಗಲೇ ಬರೆದಿದ್ದೇನೆ  http://nimmolagobba.blogspot.in/2012/11/13.html ]  ಕಟ್ ಮಾಡಿದರೆ   ಶಿರಸಿಯ    ಸತ್ಕಾರ್ ಹೋಟೆಲ್ ನಲ್ಲಿ ಮಸಾಲೆ ದೋಸೆ  ನಮ್ಮ  ಮುಂದೆ ಕುಳಿತು ನಗುತ್ತಿದ್ದವು .









Wednesday, April 15, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......12 ಮಂಜುಗುಣಿಯ ಶ್ರೀನಿವಾಸನ ಮಡಿಲಲ್ಲಿ



ಮಂಜುಗುಣಿ  ದೇವಾಲಯದ  ಪ್ರವೇಶ ದ್ವಾರ
ಕಳೆದ ಸಂಚಿಕೆಯಲ್ಲಿ ನಮ್ಮ ಪುಟ್ಟ ತಂಗಿ ಸಂಧ್ಯಾ ಭಟ್  ಮದುವೆಯ ನಿಶ್ಚಿತಾರ್ಥ  ಬರೆದದ್ದು ನಿಮಗೆ ಗೊತ್ತಿದೆ, ಅಲ್ಲಿಂದ  ಹೋರಟ ನಾನೂ ಹಾಗು ಪ್ರಕಾಶ್ ಹೆಗ್ಡೆ   ಅಂದುಕೊಂಡಿದ್ದ  ಮೊದಲಿನ  ಕಾರ್ಯಕ್ರಮದಂತೆ  ಯಾಣ  ನೋಡಲು ಹೋಗಬೇಕಿತ್ತು,  ಆದರೆ  ಸಂಧ್ಯಭಟ್  ಮನೆಯಲ್ಲಿ ಕಾರ್ಯಕ್ರಮದ ವೇಳೆ  ಸನಿಹದಲ್ಲೇ  ಮಂಜುಗುಣಿ ಇದೆ  ಅದನ್ನು ನೋಡಿ ಬಹಳ ಚೆನ್ನಾಗಿದೆ ಎಂಬ ಸಲಹೆಗಳನ್ನು ಹಲವರು ನೀಡಿದರು .ನಮಗೂ ಅಚ್ಚರಿ  ಸರಿ ನೋಡೇ ಬಿಡುವ  ಎಂದು   ಸನಿಹದಲ್ಲೇ ಇದ್ದ ಮಂಜುಗುಣಿ ಕ್ಷೇತ್ರದಕಡೆ ತೆರಳಿದೆವು .



ನಮ್ಮ ಕನ್ನಡ ನಾಡೆ ಹಾಗೆ   ನಿಮಗೆ ಅರಿವಿಲ್ಲದಂತೆ  ಹಲವು ಕೌತುಕಗಳನ್ನು  ಒಳಗೊಂಡಿರುತ್ತದೆ ,  ನಮಗೆ ಇಲ್ಲಿ ಆದದ್ದೂ ಇದೆ,  ನನ್ನ ಜೀವಿತಾವಧಿಯಲ್ಲಿ  ಒಮ್ಮೆಯೂ ಈ ಕ್ಷೇತ್ರದ ಬಗ್ಗೆ ಕೇಳಿರಲಿಲ್ಲ,  ಆದರೆ ಇಲ್ಲಿಗೆ ಬಂದ ಮೇಲೆ ಪರಿಚಯವಾದ ಕ್ಷೇತ್ರವಿದು,  ಮೊದಲ  ಭೇಟಿಯಲ್ಲೇ ಯಾಕೋ ಇಲ್ಲಿನ  ಪ್ರಶಾಂತತೆ  ಮನಕ್ಕೆ ಮುದ ನೀಡಿತು . ಹಾಗೆ ದೇವಾಲಯದ ಒಳಗೆ ಹೋಗಿ  ದೇವರ ದರ್ಶನ ಪಡೆದು ಪುನೀತರಾದೆವು, ಜೊತೆಯಲ್ಲಿ ಮನದಣಿಯ ಕ್ಯಾಮರದಿಂದ ಚಿತ್ರಗಳನ್ನು  ಕ್ಲಿಕ್ಕಿಸಿ  ಖುಷಿಪಟ್ಟೆವು . ನಂತರ ಮನೆಗೆ ಬಂದು ಈ ಕ್ಷೇತ್ರದ ಬಗ್ಗೆ ಅಂತರ್ಜಾಲದಲ್ಲಿ ನೋಡಿದರೆ  ......  ಇಲ್ಲಿಯೂ ಲೊಟ್ಟೆ  ಯಾವ ಮಾಹಿತಿಯೂ ಸಹ ಇಲ್ಲಾ,  ಆದರೆ ಛಲ ಬಿಡದೆ  ಹಳೆಯ ಗೆಜೆತೀರ್ ಗಳನ್ನೂ ಹುಡುಕಲು ಹಲವಾರು ಮಾಹಿತಿ ದೊರಕಿತು.



ಬನ್ನಿ ನಿಮಗೆ ಸ್ವಾಗತ

ಬನ್ನಿ ಮಂಜುಗುಣಿಯ  ವಿಚಾರ ತಿಳಿಯೋಣ , ಮೊದಲಿಗೆ  ಉತ್ತರ ಕನ್ನಡ ಜಿಲ್ಲೆಯಲ್ಲಿ  ಎರಡು ಮಂಜುಗುಣಿ  ಎಂಬ ಊರುಗಳು ಇವೆ , ಮೊದಲನೆಯದು  ಅಂಕೋಲಾ  ತಾಲೂಕಿನ  ಗಂಗಾವಳಿ  ನದಿಯ ದಡದಲ್ಲಿರುವ  ಮಂಜುಗುಣಿ , ಇಲ್ಲಿಯೂ ಸಹ ಗಣಪತಿ, ಜಟ್ಟಿಗ  ಹಾಗು   ಕಣ್ಣಮ್ಮ  ದೇಗುಲಗಳು ಇವೆ ,  ಅಲ್ಲಿರುವ ಬೆಟ್ಟದ ಮೇಲೆ  ಗೆರುಸೊಪ್ಪೆಯ ಅರಸ ಕ್ರಿಷ್ಣ ದೇವರಸನ  ಶಾಸನವಿದೆ , ಇದು ಹದಿನಾರನೇ ಶತಮಾನದ್ದೆಂದು ತಿಳಿದು ಬರುತ್ತದೆ .

ನಂತರ ಎರಡನೆಯ  ಮಂಜುಗುಣಿ  ಶಿರಸಿ   ತಾಲ್ಲೂಕಿನದು , ಶಿರಸಿಯಿಂದ ೨೬   ಕಿಲೋಮೀಟರು  ದೂರದಲ್ಲಿದೆ , ಶಿರಸಿ ಕುಮಟ   ಮುಖ್ಯ  ರಸ್ತೆಯಲ್ಲಿ ಸಾಗಿದರೆ  ನಿಮಗೆ ೨೨ ಕಿಲೋಮೀಟರು  ನಂತರ  ಒಂದು  ಸೂಚನೆಕಲ್ಲು ಸಿಗುತ್ತದೆ ಅಲ್ಲಿಂದ ಒಳಗಡೆ  ಬಲಕ್ಕೆ ತಿರುಗಿ ಸಾಗಿದರೆ ೪ ಕಿಲೋಮೀಟರು ನಂತರ  ನಿಮಗೆ ಸಿಗುವ ಕ್ಷೇತ್ರವೇ ಈ  ಮಂಜುಗುಣಿ .


 ಅಮೂಲ್ಯವಾದ ತೀರ್ಥ  ಪ್ರಬಂಧ   ಈಗ ತಟ್ಟೆ ರೂಪದಲ್ಲಿ  ಬಂದಿದೆ

ಉತ್ತರಕನ್ನಡದ  ಶಿರಸಿಯ ಸೋಂದಾ   ಶ್ರೀ ಮದ್ ವಾಧಿರಾಜರು ನೆಲಸಿದ್ದ ಪುಣ್ಯ ಕ್ಷೇತ್ರ ,   ಅವರು ತಾವು ಸಂದರ್ಶನ ಮಾಡಿದ ಪುಣ್ಯ ಕ್ಷೇತ್ರಗಳ  ವಿವರ ನೀಡಿ  ಅಲ್ಲಿನ ವಿಶೇಷತೆಗಳನ್ನು ಹೊಗಳಿ  ರಚಿಸಿದ ಕೃತಿಯೇ  "ತೀರ್ಥ ಪ್ರಬಂಧ " . ವಾಧಿರಾಜರು     ತಾವು ನೆಲಸಿದ್ದ ಪ್ರದೇಶದಿಂದ ನಾಲ್ಕೂ   ದಿಕ್ಕುಗಳಿಗೂ  ಪ್ರವಾಸ ಕೈಗೊಂಡು  ಹಲವಾರು ಪುಣ್ಯ ಕ್ಷೇತ್ರಗಳನ್ನು ಸಂದರ್ಶನ ಮಾಡುತ್ತಾರೆ ,  ಆ ಸಮಯದಲ್ಲಿ  ತಮಗೆ ಕಂಡು ಬಂದ  ಅನುಭವಗಳ  ಮಾಲಿಕೆಯನ್ನು   ತೀರ್ಥ ಪ್ರಬಂಧ  ಎಂಬ ಹೆಸರಿನಿಂದ   ಬರೆದು ಲೋಕದ ಮುಂದಿಟ್ಟಿದ್ದಾರೆ . ಅಚ್ಚರಿ ಎಂದರೆ   ಬನವಾಸಿ, ಶಾಲ್ಮಲಾ ನದಿ, ವರದ ನದಿ, ಮಂಜುಗುಣಿ , ಯಾಣ  ಮುಂತಾದ ಪ್ರದೇಶಗಳ ಬಗ್ಗೆ   ಹಲವು ಶತಮಾನಗಳ  ಹಿಂದೆಯೇ ದಾಖಲೆ ಮಾಡಿದ್ದಾರೆ . ಹಾಗೆಯೇ  ಮಂಜುಗುಣಿಯ ವೆಂಕಟೇಶ  ಕೈಯಲ್ಲಿ ಬಿಲ್ಲು ಬಾಣ ಹಿಡಿದವನು , ಮೃಗಗಳ  ಬೇಟೆಗಾಗಿ  ಇಲ್ಲಿಗೆ ಬಂದವನು ಎನ್ನತ್ತಾರೆ .

ಸುಂದರ ದೇವಾಲಯ ದರ್ಶನ


ಲಭ್ಯವಾದ  ಪುರಾಣಿಕ ಮಾಹಿತಿ ಪ್ರಕಾರ ತಿರುಪತಿಯಿಂದ  ವೆಂಕಟರಮಣ  ಬೇಟೆಯಾಡುತ್ತಾ , ವಿಹಾರ ಮಾಡುತ್ತಾ  ಈ ಮಂಜುಗುಣಿ ಕ್ಷೇತ್ರಕ್ಕೆ ಬಂದು ನೆಲೆಸಿದನೆಂದು  ಹೇಳಲಾಗುತ್ತದೆ . ಹಾಗಾಗಿ ಈ ದೇವರನ್ನು ಬೇಟೆ ವೆಂಕಟರಮಣ ಎಂದೂ ಸಹ ಕರೆಯಲಾಗಿದೆ. ಚಳಿಗಾಲದಲ್ಲಿ ಇಲ್ಲಿ ದಟ್ಟನೆಯ  ಮಂಜು ಮುಸುಕುವ ಕಾರಣ  ಈ ಪ್ರದೇಶಕ್ಕೆ ಮಂಜುಗುಣಿ  ಎಂದು ಕರೆಯಲಾಗಿದೆ . ಈ ದೇವಾಲಯವು  ವಿಜಯನಗರ  ಶೈಲಿಯಲ್ಲಿದ್ದು   ಅಂದಿನ ಕಾಲದ್ದು ಎಂದು  ನಿಖರವಾಗಿ ಹೇಳಲು  ಯಾವುದೇ ಶಾಸನ ಆಧಾರಗಳು ಇಲ್ಲ , ವಾದಿರಾಜರು  ಈ ಕ್ಷೇತ್ರಕ್ಕೆ ಭೇಟಿಕೊಟ್ಟು  ಈ ದೇವಾಲಯದ ಬಗ್ಗೆ ಹೇಳಿರುವ ಕಾರಣ  ಈ ದೇವಾಲಯ ವಿಜಯನಗರ  ಕಾಲಕ್ಕೂ ಬಹಳ ಹಿಂದಿನದು ಎಂದು  ತಿಳಿಯಬಹುದಾಗಿದೆ . ಸೋಂದಾ ಅರಸರು ಈ ದೇವಾಲಯವನ್ನು  ದುರಸ್ತಿ ಮಾಡಿದ ಬಗ್ಗೆ ಹೇಳಲಾಗುತ್ತದೆ ಆದರೂ  ಹೆಚ್ಚಿನ ಮಾಹಿತಿ ಲಭ್ಯವಿಲ್ಲ .


ಕಲ್ಲಿನಲ್ಲಿ  ಚಂದದ  ಚಿತ್ತಾರದೊಡನೆ  ಮಾಹಿತಿ 


ದೇವಾಲಯದ ಮುಂದೆ ಕಂಡುಬರುವ ಗರುಡ ದೇವ



ದೇವಾಲಯ ಸುಂದರವಾಗಿದ್ದು  ಮುಖಮಂಟಪ, ನವರಂಗ, ಆರಾಧನ ಮಂಟಪ, ಹಾಗು ಗರ್ಭಗೃಹ ಗಳನ್ನೂ ಹೊಂದಿದೆ .  ನವರಂಗ , ಆರಾಧನ ಮಂಟಪ , ಗರ್ಭಗೃಹಗಳು  ಮೊದಲೇ ಇದ್ದವೆಂದೂ  ನಂತರ   ಮುಖಮಂಟಪ  ನಂತರ ನಿರ್ಮಾಣ ವಾಯಿತೆಂದೂ   ಹೇಳಲಾಗಿದೆ . ಮುಖ ಮಂಟಪದ  ಕಂಬಗಳ ಮೇಲೆ ವಿಷ್ಣು ಭಕ್ತರ  ಹಾಗು ಸಂತರ   ಕೆತ್ತನೆ ಕಾಣ ಬಹುದಾಗಿದೆ , ಹಾಗು ನವರಂಗದ ಹೊರಗಡೆ ಕಲ್ಲಿನ ಗೋಡೆಗಳಲ್ಲಿ  ರಾಮಾಯಣದ   ಸುಂದರ ದೃಶ್ಯಗಳನ್ನು,  ಶೇಷಶಯನ , ಗೋಪಾಲಕೃಷ್ಣ , ಗಣಪತಿ,  ನರಸಿಂಹ , ಮಾರುತಿ, ಮುಂತಾದ  ದೇವರುಗಳ ರೂಪಗಳನ್ನು  ಕೆತ್ತಲಾಗಿದೆ . ನವರಂಗದ  ಪ್ರವೇಶ ದ ಹಾದಿಯಲ್ಲಿ  ಗರುಡ ಹಾಗು ಹನುಮನ  ಮೂರ್ತಿಗಳನ್ನು ಕಡೆಯಲಾಗಿದೆ .


ಮಂಜುಗುಣಿ  ವೆಂಕತರಮಣ
ತಿರುಮಲ  ಯೋಗಿಗಳು
 ಇನ್ನು ಬನ್ನಿ ಮೂಲ  ಮೂರ್ತಿಯ ದರ್ಶನ ಮಾಡೋಣ  ಸಾಮಾನ್ಯವಾಗಿ ವೆಂಕಟೇಶ್ವರನ  ಬೃಹದ್ ಮೂರ್ತಿಯ  ದರ್ಶನ ಮಾಡಿರುವವರಿಗೆ , ಇಲ್ಲಿನ ಮುದ್ದಾದ  ಪುಟ್ಟ ಮೂರ್ತಿ  ವಿಸ್ಮಯವೇ ಸರಿ . ಕಪ್ಪು ಶಿಲೆಯಲ್ಲಿ ಮುದ್ದಾಗಿ ನಿರ್ಮಿಸಲಾಗಿದೆ,  ನಾಲ್ಕು ಕೈಗಳಲ್ಲಿ  ಮೇಲಿನ ಎರಡು ಕೈಗಳಲ್ಲಿ  ಶಂಖ , ಚಕ್ರ, ಕೆಳಭಾಗದ  ಎರಡು ಕೈಗಳಲ್ಲಿ  ಬಿಲ್ಲು ಭಾಣ  ಧರಿಸಿದ ಮೂರ್ತಿ ಇದು, ಪೌರಾಣಿಕವಾಗಿ ಈ ಮೂರ್ತಿಯ ಪ್ರತಿಷ್ಟಾಪನೆಯನ್ನು  ಶ್ರೀ ತಿರುಮಲ ಯೋಗಿಗಳು  ಮಾಡಿದರೆಂದು  ತಿಳಿದುಬರುತ್ತದೆ.  ವೆಂಕಟರಮಣನ  ಗುಡಿಯ ನೈಋತ್ಯ  ದಿಕ್ಕಿನಲ್ಲಿ  ಸುಂದರವಾದ   ಪದ್ಮಾವತಿ ಅಮ್ಮನವರ ಗುಡಿ ಇದೆ .


ನನ್ನನ್ನು ಒಮ್ಮೆ ನೋಡಿಬಿಡಿ


ರಥ ದರ್ಶನ

ಗುಡಿಯ ದರ್ಶನ ಮಾಡುತ್ತಾ ಯಾವುದೋ ಲೋಕ ಹೊಕ್ಕಂತೆ ಆಯಿತು, ದೇಗುಲದ ಹೊರಗೆ  ಬಂದ ನಮಗೆ .  ದೇವಾಲಯದ  ಮುಂಭಾಗ  ಕಲ್ಲಿನ ಆಮೆಯ ದರ್ಶನ ಆಯಿತು , ಹಾಗೆ ಮುಂದೆ ಬಂದರೆ  ಸುಂದರವಾದ ರಥ ದರ್ಶನ ಆಯಿತು, ಚೌಕಾಕ್ರುತಿಯ ರಥದಲ್ಲಿ ವಿಷ್ಣುವಿನ ವಿವಿಧ ಅವತಾರಗಳ ದರ್ಶನ ಕಾಣುತ್ತದೆ . ನಾವು ಹೋಗಿದ್ದ  ದಿನಕ್ಕೆ ಸ್ವಲ್ಪ  ಹತ್ತಿರದಲ್ಲೆ ಮಂಜುಗುಣಿ ಯ  ರಥೋತ್ಸವ  ಇರುವುದಾಗಿ ತಿಳಿದು ಬಂತು ,

ಆದಿ ಮಂಜುಗುಣಿಯ  ಕೊಳ

ದೇವಾಲಯದ ಪಕ್ಕದಲ್ಲಿ  ಇರುವ ಕೊಳ


ಮಂಜುಗುಣಿಯಲ್ಲಿ ಎರಡು  ಸುಂದರವಾದ ಪುಷ್ಕರಿಣಿಗಳು ಇವೆ , ಬಹಳ ಸ್ವಚ್ಚವಾಗಿ  ನಿರ್ವಹಣೆ ಮಾಡಲಾಗಿದೆ, ಆದಿ ಮಂಜುಗುಣಿ  ಎಂದು ಕರೆಯುವ ಸ್ಥಳದಲ್ಲಿ  ಇರುವ ಒಂದು ಪುಷ್ಕರಿಣಿ ಬಹಳ ದೊಡ್ಡದಿದ್ದು ಸುಂದರವಾಗಿದೆ, ಇಲ್ಲಿ  ಒಂದು ಮಾರುತಿ ದೇವಾಲಯ ಇದೆ. ಅಘನಾಶಿನಿ ನದಿ  ಇಲ್ಲಿ  ಹುಟ್ಟುತ್ತದೆ ಎಂದು ಹೇಳುತ್ತಾರೆ . ಪ್ರತೀವರ್ಷ ಚೈತ್ರ ಪೂರ್ಣಿಮೆಯಲ್ಲಿ  ಮಂಜುಗುಣಿಯಲ್ಲಿ    ರಥೋತ್ಸವ  ನಡೆಸಲಾಗುತ್ತದೆಂದು ತಿಳಿದು  ಬಂತು . . ಈ  ಕ್ಷೇತ್ರ  ದರ್ಶನ ದಿಂದ ಹೊಸ ವಿಚಾರ ತಿಳಿದು ಬಂತು  , ನಾವು  ಇಲ್ಲಿಗೆ ಬಾರದೆ ಹಾಗೆ ಮುಂದೆ ಹೋಗಿದ್ದರೆ ನಮಗೆ  ಒಂದು ಪ್ರದೇಶದ ಪರಿಚಯ ಆಗುತ್ತಿರಲಿಲ್ಲ .  ಇದಕ್ಕಾಗಿ ಸಲಹೆ ನೀಡಿ  ನಮ್ಮನ್ನು ಇಲ್ಲಿಗೆ ಕಳುಹಿಸಿದ  ಎಲ್ಲರಿಗೂ ಮನದಲ್ಲಿ ವಂದಿಸುತ್ತಾ   ನಮ್ಮ ಪಯಣ  ಮುಂದು ವರೆಸಿದೆವು .   ಮುಂದಿನ ಪಯಣ  .........       "ಅಣ್ಣಾ  ಇದು ಯಾಣ  ಕಣಣ್ಣಾ  "














Thursday, April 9, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......11ಪ್ರೀತಿಯ ಸಹೋದರಿ ಸಂಧ್ಯಾ ಮನೆಯ ಅಂಗಳದಲ್ಲಿ

ಸಂಧ್ಯೆಯ  ಮನೆಯ ಅಂಗಳದಿ ಮೂಡಿತ್ತು ಚಿತ್ತಾರ
 
ಎಲ್ಲರಿಗೂ ನಮಸ್ಕಾರ  ಬಹಳ ತಿಂಗಳ ನಂತರ  ಮತ್ತೊಮ್ಮೆ ನನ್ನ ಬ್ಲಾಗ್ ಪಯಣ ಶುರುವಾಗಿದೆ.  ನಿಜ ಕಳೆದ  ೨೦೧೪ ರ ನವೆಂಬರ್  ೮ ರಲ್ಲಿ ಹಾಕಿದ  ಪೋಸ್ಟ್ ನಂತರ  ಬ್ಲಾಗ್ ಬರವಣಿಗೆ  ಸಂಪೂರ್ಣ ನಿಂತೇ  ಹೋಗಿತ್ತು .  ನನ್ನ ಅನಾರೋಗ್ಯ , ಸೋಮಾರಿತನ , ಕೆಲಸದ ಒತ್ತಡ,   ಮುಂತಾದ ಸಮಜಾಯಿಷಿ  ಕೊಟ್ಟರೂ ನನ್ನ ಮನಸು ಹೇಳಿದ್ದು ನೀನು ಸೋಮಾರಿ ಕಣೋ ಅಂತಾ . ....! ಹಾಗಾಗಿ  ಬ್ಲಾಗ್ ಅಂಕಣದ ಕ್ಷಮೆ ಕೋರಿ  ಮತ್ತೊಮ್ಮೆ ನಿಮ್ಮ  ನಡುವೆ ಬಂದು ನಿಂತಿದ್ದೇನೆ .


ಪರಿಶುದ್ದ  ಪರಿಸರದಲ್ಲಿ  ಮೂಡಿಬಂದ  ಪರಿಶುದ್ದ ಮನಸಿನ ತಂಗ್ಯವ್ವ

ಈ ಬ್ಲಾಗ್ ಪ್ರಪಂಚವೇ ಒಂತರಾ  ವಿಚಿತ್ರಾ ಕಣ್ರೀ , ನಮ್ಮ ಜೊತೆ ಹುಟ್ಟದಿದ್ದರೂ ನಮ್ಮ  ಜೊತೆ ಹುಟ್ಟಿದ  ಸಹೋದರ ಸಹೋದರಿಯರಂತೆ  ಆತ್ಮೀಯರಾಗುತ್ತಾರೆ ಕೆಲವರು , ಮತ್ತೆ ಕೆಲವರು  ತಮ್ಮ ಪ್ರತಿಭೆತೋರಿ  ಒಳ್ಳೆಯ ನಡವಳಿಕೆಯಿಂದ  ನಮ್ಮ ಕುಟುಂಬದ ಸದಸ್ಯರೇ ಆಗಿಬಿಡುತ್ತಾರೆ , ಹೀಗಾಗಿ  ಇಂದು ಬ್ಲಾಗ್ ಪ್ರಪಂಚದಲ್ಲಿ  ನನಗೆ ಅಣ್ಣಾ, ತಮ್ಮಾ, ಅಕ್ಕಾ, ತಂಗಿ, ಗುರುಗಳು  ಎಲ್ಲರೂ  ಸಿಕ್ಕಿ  ಜೀವನದ ಕೊರತೆ ನೀಗಿಸಿದ್ದಾರೆ . ಅರೆ ಇದೇನು ಹೊಸ ಪುರಾಣ ತೆಗೆದಾ ಅಂತೀರಾ ...? ಬನ್ನಿ  ನಮ್ಮ ತುಂಟ ಮನಸಿನ ಪಯಣದಲ್ಲಿ  ಬ್ಲಾಗ್ ಪ್ರಪಂಚದಲ್ಲಿ ಪರಿಚಿತಳಾಗಿ , ನಮ್ಮ ಮನೆಯ ಮುದ್ದಿನ ತಂಗಿ  ಆದ ಒಂದು ಹುಡುಗಿ ಕಥೆ ಹೇಳ್ತೇನೆ .

ಈ ಹುಡುಗಿ ನನಗೆ ಹಲವಾರು ಬ್ಲಾಗ್ ಮಿತ್ರರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಕ್ಕಿದರೂ  ನಮ್ಮಿಬ್ಬರ ಮಾತು ಕಥೆ ಅಷ್ಟಕಷ್ಟೇ , ಒಂದು ದಿನ ನಮ್ಮ ಶ್ರೀಕಾಂತ್ ಮಂಜುನಾಥ್  ಜೊತೆ ಮಾತನಾಡುತ್ತಾ  ಮೈಸೂರಿನ ಕಡೆ ಒಮ್ಮೆ ಬನ್ನಿ ಎಂದಿದ್ದೆ, ಹಾಗೆ ಒಂದು ಕಾರ್ಯಕ್ರಮ ತಯಾರಾಯ್ತು , ಅದರಂತೆ ನಮ್ಮ ಮನೆಗೆ ಶ್ರೀಕಾಂತ್ ಕುಟುಂಬ , ಸುಷ್ಮಾ ಮೂಡಬಿದ್ರಿ ,  ಸುಲತ ಶೆಟ್ಟಿ  ಹಾಗು ಸಂಧ್ಯಾಭಟ್  ಬಂದರು , ನಂತರ ಮನೆಯವರ ಪರಿಚಯ, ಮಾತುಕತೆ , ಸುತ್ತಾಟ  ಇವುಗಳಿಂದ  ಎಲ್ಲರೂ ನಮ್ಮ ಮನೆಯ  ಸದಸ್ಯರೇ ಆಗಿ ಹೋದರು , ನಂತರ ನಮ್ಮಗಳ ಸಂಬಂಧ  ಬಹಳಷ್ಟು ಗಟ್ಟಿಯಾಗಿ ಒಂದು ಒಳ್ಳೆಯ ಸದಸ್ಯರ ಕುಟುಂಬವೇ ನಿರ್ಮಾಣ ಆಯ್ತು . ಹೀಗೆ ಪರಿಚಯವಾದ  ನಮ್ಮ ಸಂಧ್ಯಾಭಟ್  ನನ್ನ ತಾಯಿಗೆ ಮಗಳೇ ಆಗಿ ಹೋದಳು . ಹಾಗಾಗಿ  ನನಗೆ ಒಬ್ಬ ಪುಟ್ಟ ತಂಗಿ ದೊರೆತಳು .

ಶಿರಸಿಯ ಸಹವಾಸ ಶುರು ಆಗಿದ್ದು "ಸಾಗರದಾಚೆಯ ಇಂಚರ"  ಬ್ಲಾಗ್ ಮಿತ್ರ   ಶ್ರೀ ಗುರುಮೂರ್ತಿ ಹೆಗ್ಡೆ  ಅವರಿಂದ , ಅವರ ಸಹೋದರನ ವಿವಾಹಕ್ಕೆ  ಆಮಂತ್ರಣ  ನೀಡಿದ  ಕಾರಣ "ಕೊಳಗಿ ಬೀಸ್ " ಎಂಬಲ್ಲಿಗೆ ಹೋಗಿದ್ದೆ, ಮದುವೆಯ  ಸಮಯದಲ್ಲಿ  ಕೆಲವು ಚಿತ್ರಗಳನ್ನು ತೆಗೆದು  ನನ್ನ ಬ್ಲಾಗ್ ನಲ್ಲಿ ಹಾಕಿದ್ದೆ,   ಆಗ ಈ ಹುಡುಗಿ ಹೇಳಿದ್ದು ಅಣ್ಣಾ  ನಮ್ಮ ಅಪ್ಪನ ಚಿತ್ರ ಬ್ಲಾಗ್ ನಲ್ಲಿ ಹಾಕಿದ್ದೀರಿ  ಖುಷಿಯಾಯ್ತು  ಅಂತಾ , ನನಗೆ ಅಚ್ಚರಿ  ಈ ಸಹೋದರಿಯ ಸಂಬಂಧ  ಮತ್ತಷ್ಟು  ಗಟ್ಟಿಯಾಗಲು ಇಂತಹ ಘಟನೆಗಳು  ನೆರವಾದವು . ಇಂತಹ ಹುಡುಗಿ ಮದುವೆಯ ನಿಶ್ಚಿತಾರ್ಥಕ್ಕೆ  ಪ್ರಕಾಶ್ ಹೆಗ್ಡೆ ಹಾಗು ನನ್ನನ್ನು ಪ್ರೀತಿಯಿಂದ ಕರೆದಿದ್ದಳು  ಇವಳ ಈ ನಿಶ್ಚಿತಾರ್ಥದ  ನೆಪವೇ ಈ ಪಯಣದ  ಅಡಿಗಲ್ಲಾಯ್ತು .

  ಬ್ಲಾಗ್ ಲೋಕ ಕೊಟ್ಟ  ತಂಗಿ


ಪ್ರಕಾಶಣ್ಣನ ಮನೆಯಲ್ಲಿ  ನಾಗೇಶ್ ಅಣ್ಣನ   ಅದ್ಭುತ  ಗನ್  ಕಾರ್ಯಕ್ರಮ ಮುಗಿಸಿ  ಸಂಧ್ಯ ಭಟ್ ಮನೆಗೆ ದೌಡಾಯಿಸಿದೆವು . ನನಗೋ ಮುಜುಗರ , ಪ್ರಕಾಶಣ್ಣ ಹಾಗು ಸಂಧ್ಯಾ ಭಟ್ ಹೊರತಾಗಿ ಅಲ್ಲಿ ಯಾರೂ ಪರಿಚಯವಿಲ್ಲಾ  ಹೇಗಪ್ಪಾ  ಅಂತಾ ಅಂದುಕೊಂಡೆ , ಅಲ್ಲಿಗೆ ತಲುಪಿದ ನಂತರ  ಅಲ್ಲಿ ಸಿಕ್ಕ ಆತ್ಮೀಯ ವಾತಾವರಣ ನನ್ನ ಮನಸಿನ ಆತಂಕ  ದೂರ ಮಾಡಿತು . ನಾನು ಹಾಗು ಪ್ರಕಾಶಣ್ಣ   ಹಾಗೆ ಮನೆಯೊಳಗೇ  ಕಾಲಿಟ್ಟೆವು,  ಪ್ರೀತಿಯ ಸ್ವಾಗತ ದೊರಕಿತು,  ಅಲ್ಲಿ ನೆರದಿದ್ದ  ಎಲ್ಲರ ಪರಸ್ಪರ ಪರಿಚಯ  ಆಯಿತು, ಈ ಪುಟ್ಟ ತಂಗಿಗೆ  ವಿವಾಹ  ಮಾಡಿಕೊಡುವ ಮೊದಲ ಹಂತದ  ನಿಶ್ಚಿತಾರ್ಥ ಕಾರ್ಯ ಅಂದು ಜರುಗಿತ್ತು, ಎಲ್ಲೆಡೆ ಸಂಭ್ರಮದ  ವಾತಾವರಣ,



ಯಾವುದೇ ಕಾರ್ಯ ಇದ್ದರೂ  ಅಡಿಕೆ ಬೆಳೆ  ಕೆಲಸ ನಿಲ್ಲದು 
ನಾನೂ  ಸಹ  ಭಾಗವಹಿಸಿದೆ ಗೊತ್ತಾ

ಮನೆಯ ಸುತ್ತಾ  ನನ್ನ ಕ್ಯಾಮರ ದೊಡನೆ ಒಂದು ಸುತ್ತು ಹಾಕುತ್ತಾ ಬಂದೆ  ಮನೆಯ ಸುತ್ತಾ  ಅಡಿಕೆ ತೋಟ , ಕೊಟ್ಟಿಗೆಯಲ್ಲಿ  ಆಕಳುಗಳ  ದರ್ಶನ,  ಮುದ್ದಿನ ನಾಯಿ ಮನೆಯಲ್ಲಿನ ಸಂಭ್ರಮಕ್ಕೆ  ತಾನೂ ಭಾಗಿಯಾಗಿತ್ತು,  ಅಡಿಕೆ ಸುಲಿಯುವ ಕಾರ್ಯ  ತನ್ನ ಪಾಡಿಗೆ ತಾನು ನಡೆದಿತ್ತು,  ಎರಡು ಕುಟುಂಬಗಳ  ನಡುವೆ  ಹೊಸ ಬಾಂಧವ್ಯ  ಸೃಷ್ಟಿಯಾಗುವ  ವೇಧಿಕೆ  ಸಿದ್ದವಾಗುತ್ತಿತ್ತು,  ಹಿರಿಯರು ತಮ್ಮ ಮನೆತನದ  ಸಂಪ್ರದಾಯದ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು  ಒಟ್ಟಿನಲ್ಲಿ ಹೊಸ ಲೋಕದ ಹೊಸ ಹುರುಪಿನ  ಸನ್ನಿವೇಶ ಅಲ್ಲಿ ಮನೆ ಮಾಡಿತ್ತು,   ಹೆಣ್ಣಿನ ಮನೆಯವರಿಗೆ  ತಮ್ಮ ಮಗಳು ನೆಲೆಸಲು  ತನ್ನದೇ ಸಂಸಾರ  ರೂಪಿಸಿಕೊಳ್ಳಲು  ಒಬ್ಬ ಒಳ್ಳೆಯ ವರ  ಸಿಕ್ಕಿದ ಹಾಗು ತಮ್ಮ ಮಗಳು  ಅವನ ಜೊತೆ  ಸಂತಸದ ಬಾಳು ಬಾಳುತ್ತಾಳೆ    ಎಂಬ ಖುಷಿ ,  ಹಾಗು  ಗಂಡಿನ ಮನೆಯವರಿಗೆ  ತಮ್ಮ ವಂಶದ  ಕುಡಿ  ಬೆಳಗಲು  ಬೆಳೆಯಲು , ತಮ್ಮ ಮನೆತನದ ಹಿರಿಮೆ ಹೆಚ್ಚಿಸಲು ಒಬ್ಬ ಒಳ್ಳೆಯ  ವಧು ಸಿಕ್ಕದಳು   ಎಂಬ ಖುಷಿ , ಈ ಖುಷಿಯ ಪರಸ್ಪರ  ಹಂಚಿಕೊಳ್ಳುವ  ಸಲುವಾಗಿ   ಎರಡೂ ಕುಟುಂಬಗಳ  ಬೆಸುಗೆ ಹಾಕಲು  ವಿವಾಹ ಮಹೋತ್ಸವ  ಕಾರ್ಯ ಹಮ್ಮಿಕೊಳ್ಳಲು  ತಕ್ಕ  ದಿನ ನಿಗದಿ ಪಡಿಸುವ ಕಾರ್ಯ  ಈ ನಿಶ್ಚಿತಾರ್ಥ .



ಹಿರಿಯರ  ಉಪಸ್ತಿತಿ

ಹವ್ಯಕರ ಮನೆಯ ದೇವರ ಮನೆಯ ನೋಟ

ದೇವರ  ಸಾಕ್ಷಿಯಾಗಿ  ಈ ಮದುವೆಗೆ  ಒಪ್ಪಿಕೊಂಡ  ಎರಡು ಕುಟುಂಬಗಳು
ಸಮಯ ಕಳೆದಂತೆ  ಜನ ಸೇರುತ್ತಿದ್ದರು ಹಿರಿಯರು, ಬಂದು ಬಳಗ  ಸೇರಿಕೊಂಡರು ಕಾರ್ಯಕ್ರಮ ಶುರು ಆಯ್ತು , ಮೊದಲ ಕಾರ್ಯ ಎಲ್ಲರೂ ದೇವರ ಮನೆಯಲ್ಲಿ ಒಟ್ಟಿಗೆ ಕುಳಿತು ನಿಶ್ಚಿತಾರ್ಥದ  ವಿವಿಧ  ಶಾಸ್ತ್ರ ಸಂಪ್ರದಾಯಗಳನ್ನು  ನಡೆಸುತ್ತಿದ್ದರು, ತಮ್ಮ ಮುಂದಿನ ಜೀವನದ  ಮೊದಲ ಕಾರ್ಯದಲ್ಲಿ  ವಧು ಹಾಗು ವರ  ಮನಸಿನಲ್ಲಿ  ಮಂಡಿಗೆ  ತಿನ್ನುತ್ತಾ  ಏನೂ ಅರಿಯದಂತೆ  ಗಂಭೀರವಾಗಿ  ಕುಳಿತ್ತಿದ್ದರು . ಈ ನಡುವೆ ಎರಡೂ ಕುಟುಂಬಗಳ  ಹಿರಿಯರು  ಹರುಷದಿಂದ  ವಿವಿಧ ಶಾಸ್ತ್ರ ಮಾಡುತ್ತಾ  ವಿವಾಹ ನಿಶ್ಚಿತಾರ್ಥ ಕಾರ್ಯವನ್ನು  ನೆರವೇರಿಸಿದರು .


ಬನ್ನಿ ಬನ್ನಿ ಊಟ ಸಿದ್ಧವಿದೆ ಎಂದಿತ್ತು ಅಡುಗೆಮನೆ

ಎಲ್ಲಾ ಮುಗಿದ ನಂತರ  ಮುಂದಿನ ನಡೆ  ಊಟದ ಮನೆಗೆ ,  ಊಟದ  ಕೋಣೆ ತಲುಪಿದ ನನಗೆ  ಅಲ್ಲಿನ ಶಿಸ್ತು ಬದ್ದ  ವ್ಯವಸ್ತೆ ಖುಷಿಕೊಟ್ಟಿತು,  ಇವರೆಲ್ಲಾ ಇಲ್ಲೇ ಕಾರ್ಯ ಮಾಡುತ್ತಿದ್ದರು ಅಡುಗೆ ಮಾಡಿದ್ದು ಯಾರು ..? ಎಂಬ ಪ್ರಶ್ನೆ ಮೂಡಿತ್ತು,  ಮನೆಯಲ್ಲಿನ ಹೆಂಗಸರೇ  ಅದ್ಯಾವ ಮಾಯದಲ್ಲೋ  ರುಚಿಯಾದ  ರುಚಿಯಾದ ಅಡುಗೆ ಮಾಡಿ  ಸಂಧ್ಯಾ ಭಟ್ ನಿಶ್ಚಿತಾರ್ಥದ  ಕಾರ್ಯಕ್ರಮದ  ಸೊಬಗನ್ನು ಮತ್ತಷ್ಟು  ಹೆಚ್ಚಿಸಿದ್ದರು , ನಾನಂತೂ   'ಅಪ್ಪೆ ಹುಳಿ' ಪ್ರಿಯ ಆದ ಕಾರಣ   ಚೆನ್ನಾಗಿ ಬ್ಯಾಟಿಂಗ್  ಮಾಡಿದೆ   ಹವ್ಯಕರ   ಪುಷ್ಕಳ ಭೋಜನ  ಮುಗಿಸಿದ ನಾವು,  ಮುಂದಿನ ಪಯಣಕ್ಕೆ ಅಲ್ಲಿದವರ ಅನುಮತಿ ಪಡೆಯಲು  ಮುಂದಾದೆವು, ಒಂದು ಸುಂದರ  ಸಂಪ್ರದಾಯದ  ಅನಾವರಣ ಆಗಿತ್ತು ಅಂದು .


ಬಲು ಅಪರೂಪ ನಮ್ ಜೋಡಿ   ವಿವಾಹ ಆಗಲು ನಾವ್ ರೆಡಿ


ಊಟ ಮುಗಿಸಿ ಮನೆಯ ಹಿಂಬದಿಗೆ  ಬಂದ  ನಮಗೆ ನೂತನ ವಧು ವರರ  ದರ್ಶನ  ಆಯ್ತು , ನಮ್ಮ ಕ್ಯಾಮರಾಗಳು ಸುಮ್ಮನಿರಲು ಸಾಧ್ಯವೇ ಕ್ಲಿಕ್ಕಿಸೆಬಿಟ್ಟವು  ಕೆಲವು ಸುಂದರ ಕ್ಷಣಗಳನ್ನು , ಇಬ್ಬರ ಮುಖದಲ್ಲೂ ಮಂದ ಹಾಸ,  ಹೊಸ ಬಾಳಿನ ಪಯಣಕ್ಕೆ  ಅನುವಾಗಲು  ಇಬ್ಬರಲ್ಲೋ  ಹೊಸ ಹರುಷದ ತುಡಿತ ಕಾಣುತ್ತಿತ್ತು,  ವಿವಾಹ ಆಗುವವರೆಗೆ ಇಬ್ಬರ ನಡುವೆ  ಸಾಕಷ್ಟು  ವಿಚಾರ ವಿನಿಮಯ ಆಗೋದು ಬಾಕಿ ಇತ್ತು,  ಇದ್ದಕ್ಕೆ ನಾವು ಸಿದ್ದ  ಅನ್ನೋ ಹಾಗೆ ಇಬ್ಬರ ಮುಖದ ನಗು ಮಿನುಗುತ್ತಿತ್ತು.






ಈ ಘಟನೆಗೆ ನಾವೂ ಸಾಕ್ಷಿಗಳು


ಅತ್ತಾ ಹೊಸ  ಹರುಷದ ಹೊನಲು ಹರಿಯುತ್ತಿದ್ದರೆ ಇತ್ತ ವಧುವಿಗೆ  ತನ್ನ ತವರು ಮನೆಯ  ಸಂಬಂಧ  ಎಲ್ಲಿ  ಜಾರುವುದೋ ಎಂಬ ಹೆದರಿಕೆ,  ಜೊತೆಯಲ್ಲಿ ಬೆಳೆದ  ಅಕ್ಕಾ ,ತಮ್ಮನ ಪ್ರೀತಿಯ ನೆನಪಿನ ಬಂಧನ ಎಲ್ಲಿ  ಕಳಚಿತೋ ಎಂಬ  ಆತಂಕ   ಹಾಗಾಗಿ ಸನಿಹದಲ್ಲಿ ಇದ್ದ ತಮ್ಮನನ್ನು   ತಬ್ಬಿ ಪ್ರೀತಿಯ  ನೆನಪ  ಹಸಿರಾಗಿಡಲು  ಪ್ರಯತ್ನ ನಡೆಸಿದಳು ನಮ್ಮ ಸಂಧ್ಯಾ ಪುಟ್ಟಿ .  ತಮ್ಮ ಪದ್ಮನಾಭ ಸಹ  ಪ್ರೀತಿಯ ಅಕ್ಕನ ಜೊತೆ ಕಳೆದ ದಿನಗಳ ನೆನೆಯುತ್ತಾ  ಅಕ್ಕನ ಪ್ರೀತಿಯ ಮಡಿಲಿಗೆ ಜಾರಿದ್ದ.  ಈ ಎಲ್ಲಾ ನೋಟವನ್ನು ದೂರದಲ್ಲಿ ಕುಳಿತು ನೋಡುತ್ತಿದ್ದ  ಹಲವು ಹಿರಿಯ  ಮನಸುಗಳು ಶುಭ ಹಾರೈಸಿದ್ದವು.  ಅಲ್ಲಿಗೆ  ಪ್ರೀತಿಯ ಪುಟ್ಟ ತಂಗಿ  ಸಂಧ್ಯಾ ಭಟ್  ವಿವಾಹ  ನಿಶ್ಚಿತಾರ್ಥ  ಕಾರ್ಯಕ್ರಮ  ಯಶಸ್ವಿಯಾಗಿ ಮುಗಿಯಿತು.   ಪ್ರಕಾಶಣ್ಣ ಹಾಗು ನಾನು   ಈ ಪ್ರೀತಿಯ  ಸಮಾರಂಭದಲ್ಲಿ    ನೂತನ  ವಧು ವರರರಿಗೆ ಶುಭ ಹಾರೈಸಿ  ಅಲ್ಲಿದ್ದ ಎಲ್ಲರ  ಪ್ರೀತಿಯ ಶುಭ ಹಾರೈಕೆಗಳನ್ನು ಹೊತ್ತು   ಸಂತೃಪ್ತಿಯ ನಗು ನಗುತ್ತಾ ಹೊರ ಬಂದೆವು . ಅಲ್ಲಿಂದ  ಪಯಣ  ಬೆಳೆಸಿದ್ದು   ಸಂಧ್ಯಾ ಭಟ್ ಮನೆಯ ಸಮೀಪದಲ್ಲೇ ಇದ್ದ    ಮಂಜುಗುಣಿ  ಕ್ಷೇತ್ರಕ್ಕೆ ...... !ಮಂಜುಗುಣಿ  ಶ್ರೀನಿವಾಸನ  ದರುಶನ  ಮಾಡಲಿಕ್ಕೆ .