Saturday, July 28, 2012

ಮೈ ದಿಲ್ಲಿ ಹೂ ....ಪಯಣ:-) 7 ಬಾನಂಗಳದ ಮೋಡಗಳ ಲೋಕದೊಳಗೆ !!!!


ದೆಹಲಿಯ ನೆನಪು  ನಗುವ ಹೂವಿನಂತೆ.     
ಹೆಂಡತಿ ..........ಕಾಲ್ ಮಾಡ್ತಾ ಇದ್ದಳು.!!!! ರೀ  ಏನ್ ಸಮಾಚಾರ , ಮನೆಗೆ ಬಾರೋ ಯೋಚನೆ ಇಲ್ವಾ ಅಥವಾ ದೆಹಲಿಯಲ್ಲೇ ಬಿಡಾರ ಮಾಡೋ ಯೋಚನೆ ಮಾಡಿಬಿಟ್ರಾ...........!!!! ಅನ್ನುತ್ತಾ ಹುಸಿಮುನಿಸು ತೋರಿದಳು. ಇಲ್ಲಾ ಮಾರಾಯ್ತಿ  ನಾಳೆ ವಾಪಸ್ಸು  ಹೊರಟಿದ್ದೇನೆ ಅಂದೇ. ಓ ಹೌದಾ ಸರಿ ಹಾಗಿದ್ರೆ  ನೀವು ಬೆಂಗಳೂರಿನ ಶ್ರೀಧರ್  ಮನೆಗೆ ಬನ್ನಿ ನಾನೂ ಅಲ್ಲಿಗೆ ಬರ್ತಾ ಇದ್ದೀನಿ. ವೇಣು , ಶ್ರೀಧರ್ ಎಲ್ಲಾ  ದಾಂಡೇಲಿ ಗೆ ಹೋಗೋದಿಕ್ಕೆ  ನಮ್ಮ ಕುಟುಂಬವನ್ನೂ ಸೇರಿಸಿ ಬುಕ್  ಮಾಡಿದ್ದಾರೆ , ಅಂದ್ಲೂ .............!!! ಸರಿ ಮಾರಾಯ್ತಿ  ಅಮ್ಮನವರ ಅಪ್ಪಣೆ ಅಂತಾ ಫೋನ್ ಇಟ್ಟೇ. ಅಷ್ಟರಲ್ಲಿ  ನನ್ನ ಕೋ ಬ್ರದರ್  ವೇಣು ಫೋನ್ ಬಂದು ಬಾಲು ನಾಳೆ ಬರ್ತಾ ಇದೀರಂತೆ  ಬೆಂಗಳೂರ್ ಗೆ ಬನ್ನಿ ನಾಳೆ ಎಲ್ಲಾರೂ ದಾಂಡೇಲಿ  ಹೋಗಲು ಬುಕ್ ಮಾಡಿದ್ದೇನೆ  , ಮಿಸ್ ಮಾಡ್ಬೇಡಿ ಆಮೇಲೆ ಅಂದ್ರೂ. ಆಯ್ತು ಅಂತಾ ಹೇಳಿದೆ. ರಾತ್ರಿಯೆಲ್ಲಾ ದೆಹಲಿಯಲ್ಲಿ ಕಳೆದ ದಿನಗಳ  ಮೆಲಕು ಹಾಕುತ್ತಾ  ನಿದ್ದೆಗೆ ಜಾರಿದೆ.

Sunday, July 22, 2012

ಮೈ ದಿಲ್ಲಿ ಹೂ ....ಪಯಣ:-) 6 ಅಕ್ಷರಧಾಮ ವೆಂಬ ಮಾಯಾಲೋಕದಲ್ಲಿ !!!!


ಬನ್ನಿ  ನಿಮಗೆ ಸ್ವಾಗತ ಎಂದಿತು ಭದ್ರತಾ ಸಿಬ್ಬಂದಿ

ದೆಹಲಿಯ ಸುಪ್ರೀಂ ಕೋರ್ಟಿನ ಕೆಲಸವನ್ನು ಆರುದಿನಗಳ ಕಾಲ ಮುಗಿಸಿದ್ದ ನಾವು ವಾಪಸ್ಸು ಹೊರಡುವ ಸಮಯ ಹತ್ತಿರ ಬಂದಿತ್ತು. ಒಂದುವಾರ ಕಾಲ ದೆಹಲಿಯ ಬಿಸಿಲ ಬೇಗೆಯಲ್ಲಿ ಸುಪ್ರೀಂ ಕೋರ್ಟ್ ಸುತ್ತಾಡಿ  ಕೆಲಸದ ಒತ್ತಡದಿಂದ ಬಳಲಿದ್ದ ನಾವು ಊರಿಗೆ ಹೊರಡಲು ತಯಾರಿ ನಡೆಸಿದ್ದೆವು. ಆದರೆ ಒಂದು ದಾಖಲೆ ಕೋರ್ಟ್ ನಿಂದ ಪಡೆಯಲು ವಿಳಂಬವಾಗಿ  ಮಾರನೆಯ ದಿನ ದೊರಕುವ ಸೂಚನೆ ಬಂದಿತು. ನಮ್ಮ ವಕೀಲರೂ ಸಹ ನಾಳೆ  ಬನ್ನಿ  ದಾಖಲೆ ತೆಗೆದು ಕೊಡುತ್ತೇನೆ ಅಂದರು. ಹಾಗಿದ್ರೆ ಸಾರ್ ನಾವು ನಾಳೆ "ಅಕ್ಷರಧಾಮ " ಹೋಗಿ ಬರುತ್ತೇವೆ , ಅಂದೆವು ಅವರೂ ಸಹ ಹ ಹ ಹ ಹೋಗಿಬನ್ನಿ ಒಂದುವಾರದಿಂದ  ಬರಿ ಕೋರ್ಟ್ ನಲ್ಲೆ  ಇದ್ದು ಬೇಜಾರಗಿರುತ್ತೆ ಅಂದರು ಸರಿ ಎಂದು ಹೇಳಿ ಮಾರನೆಯ ದಿನ ಬರುವುದಾಗಿ ಹೇಳಿ ವಾಪಸ್ಸು ನಮ್ಮ ರೂಂ ಗೆ  ಬಂದೆವು.
ಕೈ ಬೀಸಿ ಕರೆದಿತ್ತು  ಅಕ್ಷರ ಧಾಮ

ಮಾರನೆಯ ದಿನ  ಬೆಳಿಗ್ಗೆ  "ಅಕ್ಷರಧಾಮ" ನೋಡಲು  ಹೊರಟೆವು , ಮನದಲ್ಲಿ ಯಾವುದೋ ಆಹ್ಲಾದಕರ ಸಂತಸ ಮೂಡುತ್ತಿತ್ತು. ನಾವಿದ್ದ ಜಾಗದಿಂದ ಮೆಟ್ರೋ ರೈಲಿನಲ್ಲಿ  ತೆರಳಿ " ಅಕ್ಷರಧಾಮ"ತಲುಪಿದೆವು. ಆವರಣ ಪ್ರವೇಶಿಸುತ್ತಿದ್ದಂತೆ ನಮಗೆ ಕಂಡು ಬಂದಿದ್ದು  ಯಾವುದೋ ಚಲನ ಚಿತ್ರಕ್ಕೆ ಹಾಕಿದ ಸೆಟ್ ನಂತೆ ಸುಂದರವಾಗಿ ಕಂಗೊಳಿಸುತ್ತಿದ್ದ "ಅಕ್ಷರ ಧಾಮ" ಹೌದು ಅದ್ಭತ ಲೋಕದೊಳಗೆ  ಕೈ ಬೀಸಿ ಅಕ್ಷರಧಾಮ ಕರೆದಿತ್ತು. ಪ್ರವೇಶಿಸಲು ಅಳವಡಿಸಲಾಗಿರುವ ರಕ್ಷಣಾ ಪರೀಕ್ಷೆಗಳನ್ನು ಗೆದ್ದು  ನಾವು ತಂದಿದ್ದ ಕ್ಯಾಮರಾ , ಮೊಬೈಲ್ , ಮುಂತಾದ ಸಾಮಗ್ರಿಗಳನ್ನು ಅಲ್ಲಿಯೇ ಬಿಟ್ಟು ಅದಕ್ಕೆ ರಶೀದಿ ಪಡೆದು  ಹೊರಟೆವು.ಹೌದು ಗುಜರಾತಿನ ಗಾಂಧಿನಗರದಲ್ಲಿರುವ ಮತ್ತೊಂದು ಅಕ್ಷರಧಾಮ ದ ಮೇಲೆ 24 ಸೆಪ್ಟೆಂಬರ್ 2002.ರಂದು ಭಯೋತ್ಪಾದಕರ ದಾಳಿಯ ನಂತರ  ಅತ್ಯಂತ ವೈಜ್ಞಾನಿಕವಾಗಿ  ಇಲ್ಲಿ ರಕ್ಷಣಾ ತಪಾಸಣೆ ನಡೆಸಲಾಗುತ್ತದೆ. ಎಲ್ಲ ಕಡೆ  ಸಿ.ಸಿ ಕ್ಯಾಮರ ಗಳ ಕಣ್ಗಾವಲು ಇದ್ದು ಅದನ್ನು ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ನಾವೂ ಸಹ ಹಿಂದೆ ನಡೆದ ಘಟನೆಗಳನ್ನು ಅರಿತಿದ್ದ ಕಾರಣ ರಕ್ಷಣಾ ತಪಾಸಣೆಗೆ ಒಳಪಟ್ಟೆವು.ಬನ್ನಿ "ಅಕ್ಷರಧಾಮ" ದ ಬಗ್ಗೆ ತಿಳಿಯೋಣ.
ಸಹಜಾನಂದ್ ಸ್ವಾಮೀ ಅಥವಾ ಸ್ವಾಮೀ ನಾರಾಯಣ ಸ್ವಾಮೀ.

ದೇವಾಲಯದ ಒಂದು ನೋಟ
"ಅಕ್ಷರ ಧಾಮ"   " ಸ್ವಾಮೀ ನಾರಾಯಣ" ಎಂಬ ಸ್ವಾಮೀಜಿಗಳ ಆದರ್ಶದ ಹಾಗು ಅವರ ಬೋದನೆಗಳ ಅಂಶಗಳ ಆಧಾರದ ಮೇಲೆ ನಿರ್ಮಿಸಲಾದ ದೇವಾಲಯ. " ಸ್ವಾಮೀ ನಾರಾಯಣ"  ರನ್ನು "ಸಹಜಾನಂದ್  ಸ್ವಾಮೀ " ಎಂದೂ ಸಹ ಉಲ್ಲೇಖಿಸಲಾಗಿದೆ. 1781  ರಿಂದ 1830 ರವರೆಗೆ ಇವರ ಕಾಲಾವಧಿ,  ವೈಷ್ಣವ ಪಂಥಕ್ಕೆ ಸೇರಿದ ಇವರು ತಮ್ಮ ಜ್ಞಾನ ಪರ್ಯಟನೆ ಸಮಯದಲ್ಲಿ ಕಂಡ ವಿಚಾರಗಳನ್ನು  ಸಂಗ್ರಹಿಸಿ  ತನ್ನದೇ ಒಂದು ಪಂಥ ಸ್ಥಾಪಿಸಿ ಮಹಿಮೆ ಸಾರುತ್ತಾರೆ. ಉತ್ತರ ಭಾರತದಲ್ಲಿ  ಅವರ ಅನುಯಾಯಿಗಳು ಬಹಳ ಇದ್ದಾರೆ.ಸುಮಾರು ಒಂದು ನೂರು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವನ್ನು ದೆಹಲಿಯಲ್ಲಿ 6  ನವೆಂಬರ್ 2005  ರಲ್ಲಿ ಅನಾವರಣ ಗೊಳಿಸಲಾಯಿತು . ಸುಮಾರು  7000 ಕ್ಕೂ ಮೀರಿದ ಕುಶಲ ಕರ್ಮಿಗಳು ಇಲ್ಲಿ ನಮ್ಮ ಆಲೋಚನೆಗೆ  ನಿಲುಕದ ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ .
ರಾತ್ರಿವೇಳೆಯಲ್ಲಿ ಕಂಡುಬರುವ  ನೋಟ
ದೇವಾಲಯದ ಸುತ್ತ ಇರುವ ಗಜ ಪಡೆಯ ವಿವಿಧ ಶೈಲಿಯ ದರ್ಶನ.

ಯಮುನಾ ನದಿಯ ದಡದಲ್ಲಿರುವ ಈ ಭವ್ಯ ಸುಂದರ  "ಅಕ್ಷರ ಧಾಮ"ದೆಹಲಿಗೆ ಬರುವ ಶೇಕಡಾ 70 ರಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಗುಲಾಬಿ ಕಲ್ಲು ,  ಅಮೃತ ಶಿಲೆಗಳಿಂದ ಸಿಂಗರಿಸಿದ ವಿಶಿಷ್ಟ ದೇವಾಲಯ ಎಂತಹ ಮನಸನ್ನೂ ಪ್ರಪುಲ್ಲ ಗೊಳಿಸುವ ಮಾಂತ್ರಿಕತೆ ಹೊಂದಿದೆ. .ವಿಶಾಲವಾದ ಆವರಣಗಳು,  ನವರಂಗಗಳು ,ದೇವಾಲಯದ ಹೊರಗೆ ಕಾಣುವ ಕುಸುರಿ ಕೆಲಸ , ಅದ್ಭುತವಾಗಿ ನಿಮ್ಮನ್ನು ಮಾಯಾಲೋಕದೊಳಗೆ  ಕರೆದೊಯ್ಯುತ್ತದೆ. ದೇವಾಲಯದ ಸುತ್ತ ಗಜ ಪಡೆಯ ವಿವಿಧ ಮೂರ್ತಿಗಳ ಸುಂದರ ಕೆತ್ತನೆಯ  ಅನಾವರಣ   ಕೆತ್ತಿರುವ ಶಿಲ್ಪಿಗೆ ಆನೆಗಳ ಜೀವನ ಶೈಲಿಯ  ಬಗ್ಗೆ ಇರುವ ಅಪಾರ ಅರಿವಿನ ದರ್ಶನ ಮಾಡಿಸಿ ವಿಸ್ಮಯ ಗೊಳಿಸುತ್ತದೆ.
ಸುಂದರ ಸ್ವರ್ಣ ಮೂರ್ತಿಗಳು
ದೋಣಿವಿಹಾರದಲ್ಲಿ  ಕಂಡು ಬರುವ ದೃಶ್ಯ.

ಒಳಗಡೆ  ದೇವಾಲಯದಲ್ಲಿ ಸ್ವರ್ಣ ಮೂರ್ತಿಗಳ ದರ್ಶನ ಆಗುತ್ತದೆ , ಅಲ್ಲಿಯೂ ಸಹ  ಕುಶಲಕರ್ಮಿಗಳು ಮೂಡಿಸಿರುವ ಕಲಾವೈಭವ ದರ್ಶನವಾಗುತ್ತವೆ. ಸೀತಾರಾಮ, ರಾಧಾಕೃಷ್ಣ , ಶಿವ ಪಾರ್ವತಿ, ಲಕ್ಸ್ಮಿನಾರಾಯನ ಮೂರ್ತಿಗಳ ಸೌಂದರ್ಯವನ್ನು ನೋಡಿಯೇ ತೀರಬೇಕು.ನಯನ ಮನೋಹರವಾದ ಮೂರ್ತಿಗಳು ನಮ್ಮಲ್ಲಿ ಅರಿವಿಲ್ಲದೆ ಭಕ್ತಿಭಾವನೆ ಮೂಡಿಸುತ್ತವೆ. ಇನ್ನು ದೇವಾಲಯದ ಹೊರ ಆವರಣದಲ್ಲಿರುವ ದೋಣಿ ವಿಹಾರ, ನಿಮಗೆ ಮತ್ತೊಂದು ಲೋಕದ ದರ್ಶನ ಮಾಡಿಸಿ ಜೀವನ ವಿಧಾನ ತಿಳಿಸುತ್ತದೆ.
ಚಿತ್ತಾರದ ಚಿಲುಮೆಗಳು.
ಹೊಸ ಲೋಕ
ರಾತ್ರಿ ವೇಳೆ ಚಿತ್ತಾರ ಬಿಸಿಸುವ ಚಿಲುಮೆಗಳ ಹಗಲಿನ ನೋಟ

ಮತ್ತೊಂದು ವಿಶೇಷ ಇಲ್ಲಿ ನಿಮಗೆ ನೋಡಲು ಸಿಗುವುದು ಸುಂದರವಾದ ನೀರಿನ ಚಿತ್ತಾರ ಬಿಡಿಸುವ ಚಿಲುಮೆಗಳು  ರಾತ್ರಿವೇಳೆ ಇವು ನಿಮಗೆ ಸ್ವರ್ಗ  ದರ್ಶನ ಮಾಡಿಸುತ್ತವೆ . ರಾತ್ರಿ ವೇಳೆ ಜಲ ಚಿತ್ತಾರ ಮೂಡಿಸುವ ಚಿಲುಮೆಗಳ  ಪ್ರದೇಶ ಹಗಲಿನ ವೇಳೆ ಮತ್ತೊಂದು ರೀತಿಯ ಸುಂದರ ವಿನ್ಯಾಸದ  ದರ್ಶನ ಮಾಡಿಸಿತು., ಇಡೀ  ದೇವಾಲಯ ನೋಡಲು ನಿಮಗೆ ಕನಿಷ್ಠ ಮೂರು ದಿನಗಳ  ಕಾಲಾವಕಾಶ ಬೇಕಾಗುತ್ತದೆ. ನಮಗೆ ಸಿಕ್ಕ ಸಮಯದಲ್ಲಿ ಸಾಧ್ಯವಾದಷ್ಟು ನೋಡಿ  ಅಲ್ಲೇ ಇದ್ದ ಉಪಹಾರ ಮಂದಿರದಲ್ಲಿ ಲಘು ಉಪಹಾರ  ಸೇವಿಸಿ ಹೊರಬಂದು ಕೌಂಟರ್ ನಲ್ಲಿ ಬಿಟ್ಟಿದ್ದ ನಮ್ಮ ಕ್ಯಾಮರಾ , ಮೊಬೈಲ್ ಮುಂತಾದ ಸಾಮಗ್ರಿಗಳನ್ನು ವಾಪಸ್ಸು ಪಡೆದು ಹೊರನದೆವು.

Sunday, July 15, 2012

ಮೈ ದಿಲ್ಲೀ ಹೂ .....ಪಯಣ :-)5 ಸುಪ್ರೀಂ ಕೋರ್ಟ್ ಅಂಗಳದಲ್ಲಿ ಬೇರೊಂದು ಲೋಕ !!!!


ಸರ್ವೋಚ್ಹ ನ್ಯಾಯಾಲಯ 
ಐತಿಹಾಸಿಕ ದಿಲ್ಲಿಯ ಅಂಗಳದಿಂದ   ವಾಸ್ತವಕ್ಕೆ ಬಂದ ನಮಗೆ ಕರ್ತವ್ಯದ ಕರೆ ಕರೆಯುತ್ತಿತ್ತು , ಮೊದಲ ದಿನ ಅಲೆದಾಡಿದ ನಮಗೆ ಎರಡನೇ ದಿನ ಕರ್ತವ್ಯ ನಿರ್ವಹಣೆ ಮಾಡಲು ಉತ್ಸಾಹ ಮೂಡಿತ್ತು. ಅದೇ ಉತ್ಸಾಹದಲ್ಲಿ ನಮ್ಮ ಪರವಾದ ವಕೀಲರ ಸೂಚನೆ ಮೇರೆಗೆ  ಸುಪ್ರೀಂ ಕೋರ್ಟ್ ನತ್ತ ಎರಡನೇ ದಿನ  ಹೊರಟೆವು .ನನ್ನ ಕರ್ತವ್ಯದ ಅವಧಿಯಲ್ಲಿ ನಾನು ಹಲವಾರು ನ್ಯಾಯಾಲಯಗಳಿಗೆ ತೆರಳಿದ್ದೆ ನಾದರೂ  ಸರ್ವೋಚ್ಹ  ನ್ಯಾಯಾಲಯಕ್ಕೆ  ತೆರಳುವ ಅವಕಾಶ ದೊರೆತಿರಲಿಲ್ಲ. ಸರ್ವೋಚ್ಹ ನ್ಯಾಯಾಲಯದ ಕಾರ್ಯ ವಿಧಾನ ತಿಳಿಯುವ ಅವಕಾಶ ಯಾವಾಗ ಬರುವುದೋ ಎಂಬ ಕನಸು ಈಗ ನನಸಾಯಿತು.

ಬನ್ನಿ ಸುಪ್ರೀಂ ಕೋರ್ಟ್ ಬಗ್ಗೆ ತಿಳಿಯೋಣ  ನಮ್ಮ ದೇಶದ  ಗಣತಂತ್ರ ವ್ಯವಸ್ಥೆಯಲ್ಲಿ  ಅತ್ಯುನ್ನತ  ನ್ಯಾಯ ದೊರಕಿಸಿಕೊಡುವ ಒಂದು ಸಂವಿದಾನಾತ್ಮಕ ಸಂಸ್ಥೆ ಇದು. ಮೊದಲು ನಮ್ಮ ದೇಶದ ನ್ಯಾಯಾಲಯ ವ್ಯವಸ್ಥೆಯಲ್ಲಿ  ಅಸ್ತಿತ್ವಕ್ಕೆ ಬಂದದ್ದು ಫೆಡರಲ್ ಕೋರ್ಟ್  ಇದು ಹಾಲಿ ನಮ್ಮ ಪಾರ್ಲಿಮೆಂಟ್ ಇರುವ ಕಟ್ಟಡದ ಒಂದು ಭಾಗದಲ್ಲಿ  1937  ರಿಂದ 1950  ರ ವರೆಗೆ  ಕಾರ್ಯ ನಿರ್ವಹಣೆ ಮಾಡಿತು. ನಂತರ 28  ಜನವರಿ 1950  ರಲ್ಲಿ {ದಿನಾಂಕ 26 ಜನವರಿ 1950 ರಲ್ಲಿ    ಭಾರತ  ಗಣತಂತ್ರ  ವ್ಯವಸ್ಥೆ ಒಪ್ಪಿಕೊಂಡ  ಎರಡುದಿನಗಳ  ನಂತರ } ಅಧಿಕೃತವಾಗಿ ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂತು.ಅದರ  ಉದ್ಘಾಟನೆ  ಪಾರ್ಲಿಮೆಂಟ್ ನ "ಪ್ರಿನ್ಸೆಸ್ ಚೇಂಬರ್"  ನಲ್ಲಿ ಜರುಗಿತು.  ಭಾರತದ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟ ಎಲ್ಲಾ ರಾಜ್ಯಗಳು ಈ ಸಂವಿದಾನಾತ್ಮಕ  ನ್ಯಾಯಾಲಯ ವ್ಯವಸ್ಥೆಗೆ ಅಂಗೀಕಾರ ನೀಡಿವೆ. ಈ ಸುಪ್ರೀಂ ಕೋರ್ಟ್ ನಲ್ಲಿ ಒಬ್ಬರು ಮುಖ್ಯ ನ್ಯಾಯಾಧೀಶರು ಹಾಗು ಮೂವತ್ತು ನ್ಯಾಯಾಧೀಶರು ಕಾರ್ಯ ನಿರ್ವಹಣೆ ಮಾಡುತ್ತಾರೆ.ಇಂತಹ ಒಂದು ಹಿರಿಯ ನ್ಯಾಯಾಂಗ ವ್ಯವಸ್ಥೆಯನ್ನು ನೋಡುವ ಬಹಳ ದಿನಗಳ ಆಸೆ ಕೈಗೂಡಿತ್ತು.
ಸುಪ್ರೀಂ ಕೋರ್ಟ್ ಆವರಣದಲ್ಲಿ ಕಂಡು ಬಂದ ದೃಶ್ಯ.{ ಚಿತ್ರಗಳು ಬಾಲು}

ಸುಪ್ರೀಂ ಕೋರ್ಟ್ ಆವರಣದೊಳಗೆ ರಕ್ಷಣಾ ತಪಾಸಣೆ ಮುಗಿದ ನಾವು ಮುಂದುವರೆದು ಬಂದೆವು ಅಲ್ಲಿ ಕಂಡ ಮೊದಲ ದರ್ಶನವೇ ಅಚ್ಚರಿ ತಂದಿತು.ಹೌದು ಅಲ್ಲಿ ದೇಶದ  ರಾಜಕೀಯದ ಪ್ರಮುಖ ವ್ಯಕ್ತಿಯಾದ ಶ್ರೀ ಸುಬ್ರಮಣಿಯಂ ಸ್ವಾಮಿಯವರನ್ನು ಹಲವು ಟಿ.ವಿ .ಚಾನಲ್ ಕ್ಯಾಮರಾಗಳು ಹಾಗು ಮೈಕುಗಳು ಸುತ್ತುವರೆದಿದ್ದವು  , ಅವರೂ ಸಹ ಸುಪ್ರೀಂ ಕೋರ್ಟಿನಲ್ಲಿ ಅಂದು ನಡೆದ  ವಿಧ್ಯಾಮಾನಗಳನ್ನು ವಿವರಿಸುತ್ತಿದ್ದರು . ಇದಕ್ಕಾಗಿ ಕಾಯುತಿದ್ದ ಟಿ.ವಿ.ಮೀಡಿಯಾ ಹಾಗು ಪತ್ರಿಕೆಗಳ ಪತ್ರಕರ್ತರು,ಉತ್ಸಾಹದಿಂದ ಪ್ರಶ್ನೆಗಳನ್ನು ಕೇಳುತ್ತಾ ಉತ್ತರ ಪಡೆಯುತ್ತಿದ್ದರು ನಾನೂ ಸಹ ಇವರ ಬಗ್ಗೆ ಆಸಕ್ತಿಯಿಂದ ಫೋಟೋ ತೆಗೆಯಲು ಶುರುಮಾಡಿದೆ. ಹಾಗೆ ಕೆಲವು ಚಿತ್ರ ತೆಗೆದು ಕೋರ್ಟ್ ಕೆಲಸಕ್ಕೆ ತೆರಳಿದೆ.
ಸುಪ್ರೀಂ ಕೋರ್ಟ್ಗೆ ಮುಖ ಮಾಡಿ ಪ್ಪ್ರತಿನಿತ್ಯ ನಿಲ್ಲುವ ಕ್ಯಾಮರ ಸ್ಟ್ಯಾಂಡ್ ಗಳು.{ ಚಿತ್ರಗಳು ಬಾಲು}
ಸಾಲಾಗಿ ನಿಂತ ಓ.ಬಿ. ವ್ಯಾನುಗಳು .{ ಚಿತ್ರಗಳು ಬಾಲು}
ವಾಪಸ್ಸು ಬರುವಷ್ಟರಲ್ಲಿ ಅಲ್ಲಿದ್ದ ಚಟುವಟಿಕೆ ನಿಂತಿತ್ತು ಕೋರ್ಟ್ ಆವರಣದಲ್ಲಿ ಕ್ಯಾಮರಾಗಳ ಸ್ಟ್ಯಾಂಡ್ ಗಳು ಮಾತ್ರ ಮುಖ ಮಾಡಿ ನಿಂತಿದ್ದವು.ಹೌದೂ ಸಾರ್ ಪ್ರತಿನಿತ್ಯ ಇಲ್ಲಿ ಪತ್ರಕರ್ತರುಹಾಗು ವಾಹಿನಿಗಳ ವರದಿಗಾರರು  ಬೆಳಿಗ್ಗೆ 9  ಘಂಟೆಗೆಲ್ಲಾ ಜಮೆಯಾಗುತ್ತಾರೆ.
ಏನ್.ದಿ.ಟಿ.ವಿ.ಓ.ಬಿ.ವ್ಯಾನ್ { ಚಿತ್ರಗಳು ಬಾಲು}
ಟಿ.ವಿ.ಟುಡೆ ಓ.ಬಿ. ವ್ಯಾನು{ ಚಿತ್ರಗಳು ಬಾಲು}

ಅವರಿಗೆ ಸಂಭಂದಿಸಿದ ವಾಹಿನಿಗಳ ಓ.ಬಿ.ವ್ಯಾನುಗಳು  ಹೊರ ಆವರಣದಲ್ಲಿ ತಮಗೆ ನೀಡಲಾಗಿರುವ ತಾಣದಲ್ಲಿ ಶಿಸ್ತಾಗಿ ನಿಲ್ಲುತ್ತವೆ  ಅಲ್ಲಿಂದ ವೈರುಗಳ ಅಳವಡಿಕೆ ಕ್ಯಾಮರ ಸಿದ್ಧಪದಿಸಿಕೊಳ್ಳುವುದು ಮುಂತಾದ ಕ್ರಿಯೆ ನಡೆದು ಹತ್ತು ಘಂಟೆ ಗೆ ಶಿಸ್ತಿನ ಸಿಪಾಯಿಗಳಂತೆ ಪತ್ರಕರ್ತರು  ಸುದ್ಧಿ ಭೇಟೆಗೆ ಸಿದ್ದವಾಗುತ್ತಾರೆ.ನಿಮ್ಮ ಮನೆಯಲ್ಲಿ ಕಾಣಸಿಗುವ ಎಲ್ಲ ವಾಹಿನಿಗಳ  ಓ.ಬಿ.ವ್ಯಾನ್ ಗಳನ್ನೂ ನೀವಿಲ್ಲಿ ಕಾಣಬಹುದು.   ಯಾವುದೇ ವಿಚಾರ ಈ ಆವರಣದಲ್ಲಿ ಕಂಡುಬಂದರೂ ಇಲ್ಲಿರುವ ಓ.ಬಿ.ವ್ಯಾನುಗಳ ಮೂಲಕ "ಬ್ರೆಕಿಂಗ್ ನ್ಯೂಸ್"  ಆಗಿ ಬಿತ್ತರಗೊಳ್ಳುತ್ತದೆ.ಒಂದು ರೀತಿಯಲ್ಲಿ ಓ.ಬಿ ವ್ಯಾನುಗಳು  ಚಲಿಸುವ ಟಿ.ವಿ.ಸ್ಟುಡಿಯೋ ಇದ್ದಂತೆ ನೇರವಾಗಿ ವರದಿಗಳನ್ನು ಉಪಗ್ರಹಕ್ಕೆ ಅಪ್ಲೋಡ್ ಮಾಡಿ ಸುದ್ದಿ ಬಿತ್ತರವಾಗಲು ಕಾರಣವಾಗುತ್ತವೆ.

Saturday, July 7, 2012

ಮೈ ದಿಲ್ಲಿಹೂ ............ಪಯಣ :-) 4 ಲಾಲ್ ಖಿಲಾ ಎಂಬ ಕೆಂಪು ಇತಿಹಾಸ ಖಣಜ.!!!

ಭಾರತದ ಇತಿಹಾಸದ ಖಣಜ  ಈ ಲಾಲ್ ಖಿಲಾ [ಕೆಂಪು ಕೋಟೆ ]
ಚಾಂದನಿ ಚೌಕ ದಿಂದ ಹೊರಟ ನಮ್ಮ ಕಾಲುಗಳು  "ಲಾಲ್ ಖಿಲಾ"  ಕಡೆಗೆ ಹೊರಟಿದ್ದವು .ಅದೇಕೋ ಕಾಣೆ ಪ್ರತೀ ಸಾರಿ ದೆಹಲಿಗೆ ಬಂದರೆ ನಾನು ತಪ್ಪದೆ ಈ "ಲಾಲ್ ಖಿಲಾ" ಕ್ಕೆ ಬಂದೆ ಬರುತ್ತೇನೆ.ಇಲ್ಲಿನ ಹಲವು ವಿಸ್ಮಯಗಳು ನನ್ನನ್ನು ಇಲ್ಲಿಗೆ ಕೈ ಬೀಸಿ  ಕರೆಯುತ್ತವೆ. ಅವುಗಳಲ್ಲಿ ಅಮೃತ ಶಿಲೆಯಲ್ಲಿ ಅರಳಿದ ಚಿತ್ತಾರಗಳು,  ರಾತ್ರಿವೇಳೆಯಲ್ಲಿ ನಡೆಯುವ "ಲೈಟ್ ಅಂಡ್ ಸೌಂಡ್ " ಕಾರ್ಯಕ್ರಮ ನನ್ನನ್ನು ಇಲ್ಲಿಗೆ ಬರಲು ಪ್ರೇರಣೆ ನೀಡುತ್ತವೆ.ಬನ್ನಿ ಕೆಂಪು ಕೋಟೆಯ ಬಗ್ಗೆ ಸ್ವಲ್ಪ ತಿಳಿಯೋಣ.
ಕೆಂಪು ಕೋಟೆಯ ಒಂದು ಪಾರ್ಶ್ವ ನೋಟ
ಹೌದು ಈ "ಲಾಲ್ ಖಿಲಾ " ಅಂದರೆ ಕೆಂಪು ಕೋಟೆ [ ಲಾಲ್ :- ಕೆಂಪು  , ಖಿಲ :- ಕೋಟೆ ]  17  ನೆ ಶತಮಾನದ ಈ ಕೆಂಪುಕೋಟೆ   2007 ರಲ್ಲಿ   "ಯುನೆಸ್ಕೋ'' ಗುರುತಿಸಿ ಘೋಷಿಸಿರುವ  ಅಂತರಾಷ್ಟ್ರೀಯ ಐತಿಹಾಸಿಕ ಸ್ಮಾರಕ .ಮೊಘಲ್ ಬಾದಷಾ ಶಹಜಾನ್ ಇದನ್ನು ನಿರ್ಮಾಣ ಮಾಡಿಸಿದನೆಂದು ತಿಳಿದುಬರುತ್ತದೆ.1638 ರಲ್ಲಿ  ಆರಂಭವಾದ ನಿರ್ಮಾಣ 1648  ರಲ್ಲಿ  ಪೂರ್ಣವಾಗಿ  ಈ ಸುಂದರ ಕೆಂಪು ಕೋಟೆ ಲೋಕಕ್ಕೆ ಸಮರ್ಪಣೆಯಾಗಿದೆ . ಈ ಕೆಂಪು ಕೋಟೆಯಲ್ಲಿ  ಹಲವು ಮೊಘಲ್ ಬಾದಶ ಗಳು ಮೆರೆದದ್ದು ಇತಿಹಾಸವಾಗಿದೆ.ಈ" ಕೆಂಪು ಕೋಟೆ"  ಸುಮಾರು ಇನ್ನೋರೈವತ್ತು ಎಕರೆಗಳ ವಿಸ್ತೀರ್ಣ ದಲ್ಲಿ ಹರಡಿಕೊಂಡಿದೆ. ಶಹಜಾನ್ ಕಾಲದಲ್ಲಿ  ದೆಹಲಿಯನ್ನು "ಶಹಜನಾಬಾದ್ " ಎಂದು ಕರೆಯಲಾಗುತ್ತಿತ್ತು.ಆಗಿನ ಕಾಲದಲ್ಲಿ ಈ ಕೆಂಪು ಕೋಟೆಯನ್ನು  "Qila-i-Mubarak" (the blessed fort), ಎಂದು ಕರೆಯಲಾಗುತ್ತಿತ್ತು.

ಕೆಂಪು ಕೋಟೆಯ ಲಾಹೋರ್ ಗೇಟ್
ಕೆಂಪು ಕೋಟೆಯ ಪ್ರವೇಶ ದ್ವಾರ ಲಾಹೋರ್  ಗೇಟ್
ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡುವ ಸ್ಥಳ.
ಬನ್ನಿ ಕೆಂಪು ಕೋಟೆಯ ಒಳಗೆ ಹೋಗೋಣ , ನಿಮಗೆ ಮೊದಲು ಸ್ವಾಗತ ಕೋರುವ ಬಾಗಿಲೆ "ಲಾಹೋರ್ ಗೇಟ್ ' ರಕ್ಷಣಾ ತಪಾಸಣೆ ಮುಗಿಸಿ ನೀವು ಲಾಹೋರ್ ಗೇಟ್ ಮೂಲಕ ಕೆಂಪು ಕೋಟೆ ಪ್ರವೇಶ ಮಾಡುತ್ತೀರಿ.ನಂತರ ನಿಮಗೆ ಕೆಲವು ಮಾಹಿತಿಗಳನ್ನು ಗಮನಿಸಿದಲ್ಲಿ ನೀವು ಕೆಂಪು ಕೋಟೆಯಲ್ಲಿ ನೋಡಬೇಕಾದ ಸ್ಥಳಗಳ ಮಾಹಿತಿ ದೊರಕುತ್ತದೆ ,ಈ ಮಾಹಿತಿಯ ಪ್ರಕಾರ ನೋಡಿದಲ್ಲಿ ನೀವು ಇಪ್ಪತ್ತು ಜಾಗಗಳನ್ನು ನೋಡಬಹುದು. ರಾಷ್ಟ್ರೀಯ ಹಬ್ಬ ಆಗಸ್ಟ್ 15 ರಂದು ಭಾರತದ ಪ್ರಧಾನ ಮಂತ್ರಿಗಳು ದೇಶಕ್ಕೆ ಸ್ವಾತಂತ್ರ್ಯದಿನಾಚರಣೆ   ಸಂದೇಶ ನೀಡುವು ಇಲ್ಲಿಂದಲೇ .ಅದಕ್ಕಾಗೆ ಆ ದಿನ ವಿಶೇಷ ಭದ್ರತೆ ವ್ಯವಸ್ತೆ ಮಾಡಲಾಗುತ್ತದೆ.
ಕೆಂಪು ಕೋಟೆಯಲ್ಲಿ ನೀವು ನೋಡಬೇಕಾದ ವಿವರ ನೀಡುವ ಫಲಕ.
ಆದರೆ ನಮ್ಮ ಜನಗಳಿಗೆ ಅಷ್ಟೊಂದು ತಾಳ್ಮೆ ಇಲ್ಲಾ, ಅದನ್ನು ನೋಡಿಯೂ ನೋಡದ ಹಾಗೆ ಮುಂದೆ ತೆರಳುತ್ತಾರೆ.ಹಾಗೆ ಮುಂದೆ ಬನ್ನಿ ನಿಮಗೆ ಲಾಹೋರ್ ಗೇಟ್ ದಾಟಿದ ನಂತರ ನಿಮಗೆ ಕೋಟೆಯ ಒಳಗೆ ಎರಡೂ ಬದಿಯಲ್ಲಿ ವಿವಿಧ ಬಗೆಯ ಅಂಗಡಿಗಳದರ್ಶನ ಆಗುತ್ತದೆ..
ಲಾಹೋರ್ ಬಾಗಿಲ ಬಳಿ ಎರಡೂ ಬದಿಯಲ್ಲಿರುವ ಮಾರುಕಟ್ಟೆ.
ಅಲ್ಲಿ ಕರಕುಶಲ ವಸ್ತುಗಳನ್ನು ಕೊಳ್ಳ ಬಹುದು.ಇದನ್ನು  "ಚಟಾ ಚೌಕ್" ಎಂದು ಕರೆಯುತ್ತಾರೆ. 17 ಶತಮಾನದಿಂದ ಕೆಂಪು ಕೋಟೆಯೊಳಗೆ ಇರುವ  ಎರಡಂತಸ್ತಿನ ಈ ಮಾರುಕಟ್ಟೆ ಐತಿಹಾಸಿಕ ಮಹತ್ವ ಪಡೆದಿತ್ತು.ಇದನ್ನು ಶಹಜಾನ್ ತಾನು "ಪಾಕಿಸ್ತಾನದ ಪೆಶಾವರ್ "ನಲ್ಲಿ 1646 ಕಂಡಂತೆ ರೂಪಿಸಿ ಇಲ್ಲಿ ನಿರ್ಮಾಣ ಮಾಡಿಸಿದನೆಂದು ತಿಳಿದುಬರುತ್ತದೆ.
ಚಟಾ ಚೌಕದ ಬಗ್ಗೆ ಮಾಹಿತಿ
ಕೆಂಪು ಕೋಟೆಯಲ್ಲಿ ಅರಳಿದ ಕಲಾ ಸೌಂದರ್ಯ
ಕೃತಕ ಬಣ್ಣವಿಲ್ಲದೆ ಅರಳಿದ ಈ ಕಲೆ.

ಇದಕ್ಕೆ ಪೂರಕವಾಗಿ ಮಾಹಿತಿ ಫಲಕ ಪ್ರದರ್ಶಿಸಲಾಗಿದೆ.ಕೆಂಪು ಕೋಟೆಯ ಒಳಗಡೆ ನೀವು ನೋಡಲೇ ಬೇಕಾದದ್ದು ೧ ) ದಿವಾನ್ -ಇ- ಆಂ, ೨) ದಿವಾನ್ -ಇ -ಖಾಸ್ ,೩ ) ನಹ್ರ್ -ಇ -ಬೆಹಿಶ್ತ್ , ೪ ) ಜೆನಾನ , ೫) ಮೋತಿ ಮಸ್ಜಿದ್ , ೬) ಹಯಾತ್ ಬಕ್ಷ್  ಬಾಗ್  ಮುಂತಾದವು .ಈ ಎಲ್ಲಾ ಸ್ಥಳಗಲ್ಲಿಯೂ ಪರ್ಷಿಯನ್, ಯೂರೋಪಿಯನ್ ಹಾಗು ಭಾರತೀಯ ಕಲಾಕೃತಿಗಳನ್ನು ಅರಳಿಸಿ  ಕೆಂಪು ಕೋಟೆಯನ್ನು ಒಂದು ಅದ್ಭುತ ಕಲಾಕೇಂದ್ರ ದಂತೆ ರೂಪಿಸಲಾಗಿದೆ.ನನ್ನ ಗಮಸೆಳೆದದ್ದು  ಗೋಡೆಗಳ ಮೇಲೆ ಬೆಲೆಬಾಳುವ ಬಣ್ಣ ಬಣ್ಣದ ಕಲ್ಲುಗಳಿಂದ ನಿರ್ಮಿಸಲಾದ ಕಲಾವೈಭವ, ಇದಕ್ಕೆ ಯಾವುದೇ ಕೃತಕ ಬಣ್ಣಗಳಿಂದ ಅಲಂಕಾರ ಮಾಡಲಾಗಿಲ್ಲ.ಸಂಧರ್ಬಕ್ಕೆ ತಕ್ಕಹಾಗೆ ಅಗತ್ಯವಿರುವ ಬಣ್ಣದ ಕಲ್ಲುಗಳನ್ನು ಕತ್ತರಿಸಿ ಗೋಡೆಗೆ ಅಂಟಿಸಿ ಮೂಡಿಸಿರುವ ಶಿಲ್ಪಿಯ ಪ್ರತಿಭೆಗೆ ಮನಸ್ಸು ಜೈಕಾರ ಹಾಕಿತ್ತು.

ದಿವಾನ್ -ಇ- ಆಂ
ಅಮೃತ ಶಿಲೆಯ ಸಿಂಹಾಸನ
ಅದ್ಭುತ ಸಭಾಂಗಣ 
ಮುಂದೆ ಹೆಜ್ಜೆ ಹಾಕಿದ ನಮಗೆ ಕಂಡಿದ್ದೆ ದಿವಾನ್ -ಇ- ಆಂ ವಿಶಾಲವಾದ ಧರ್ಬಾರ್   ಸಭಾಂಗಣ,ಸುಂದರ ದರ್ಭಾರ್ ಸಭಾಂಗಣದಲ್ಲಿ ಅದ್ಭತ ಎನ್ನಿಸುವ ಕೆತ್ತನೆ ಮನಸೆಳೆಯುತ್ತದೆ.ವಿಶಾಲವಾದ ಈ ಧರ್ಬಾರ್ ಹಾಲ್ ನಲ್ಲಿ ಅಮೃತ ಶಿಲೆಯಿಂದ ನಿರ್ಮಿಸಿದ  ಒಂದು ಅದ್ಭತ ಪೀಟದಲ್ಲಿ ಕುಳಿತು  ಮೊಘಲ್ ರಾಜರು ಸಾರ್ವಜನಿಕ ಧರ್ಬಾರ್  ನಡೆಸುತ್ತಿದ್ದರಂತೆ .ಈ ಹಾಲ್ ನಲ್ಲಿ ಅಮೃತಶಿಲೆಯ ಕೆತ್ತನೆಯ ಸುಂದರ ಸಿಂಹಾಸನ ಇದ್ದು ಕಲಾತ್ಮಕವಾಗಿ ಗಮನ ಸೆಳೆಯುತ್ತದೆ.


ದಿವಾನ್ -ಇ- ಖಾಸ್
ಮುಂದಿನ ನದಿಗೆ" ದಿವಾನ್ -ಇ -ಖಾಸ್" [ಖಾಸಗಿ ಧರ್ಬಾರ್ ಹಾಲ್ ] ಮತ್ತೊಂದು ಸುಂದರ ಸ್ಮಾರಕ ಸುಂದರ ಕಮಾನುಗಳನ್ನು ಹೊಂದಿ, ಗೋಡೆಯ ಮೇಲೆಲ್ಲಾ ಸುಂದರ ಚಿತ್ತಾರಗಳನ್ನು ಬಿಡಿಸಿಕೊಂಡು ಮೆರೆದಿರುವ ಸುಂದರ ಕಟ್ಟಡ.ಈ ಕಟ್ಟಡ ದಲ್ಲಿಯೇ  ಮಯೂರ ಸಿಂಹಾಸನ ಇತ್ತೆಂದೂ 1739 ರಲ್ಲಿ ನಾದಿರ್ ಷಾ ಇದನ್ನು ತೆಗೆಸಿದನೆಂದೂ  ಹೇಳುತ್ತಾರೆ.
ಕಿಟಕಿ ಬಾಗಿಲುಗಳನ್ನು ಬಿಡದ ಕಲಾಸೌಂದರ್ಯ
ಅದ್ಭುತ ಲೋಕ ಈ ಖಾಸಗಿ ಧರ್ಬಾರ್
ಖಾಸಗಿ ಧರ್ಬಾರ್ ನ ಮಾಹಿತಿ ಫಲಕ.

ಈ ಸಭಾಂಗಣದಲ್ಲಿ ಓಡಾಡಿದರೆ ಮನಸ್ಸಿಗೆ ಉಲ್ಲಾಸ ಸಿಗುತ್ತದೆ.