Saturday, May 28, 2016

ಅಸಹಾಯಕ "ನೀರು ನಾಯಿ " ಗಳು ಕಣ್ಮರೆಯಾಗುತ್ತಿವೆ, ಆದ್ರೆ ನಮಗೆ ಇವು ನಮ್ಮ ನಡುವೆಯೇ ಇದ್ದದ್ದು ಗೊತ್ತೇ ಆಗ್ಲಿಲ್ಲ .....!



  "ನಾನೇ ಕಣ್ರೀ   ನೀರು ನಾಯಿ ಅಂದ್ರೆ " [ ಚಿತ್ರ ಕೃಪೆ   ಅಂತರ್ಜಾಲ  ] 

ಮೊನ್ನೆ ಅಂತರ್ಜಾಲದಲ್ಲಿ   ಬ್ಲಾಗ್   ವೀಕ್ಷಣೆ   ಮಾಡುತ್ತಿದ್ದಾಗ   ಶಿರಸಿಯ   ವಿನಯ್ ಹೆಗ್ಡೆ  ಅವರ ಬ್ಲಾಗ್    "    ಅಘನಾಶಿನಿ "   ಯಲ್ಲಿ    ಶಿರಸಿಯ ಸಮೀಪ  ಹುಟ್ಟಿ ಹರಿಯುವ    "ಅಘನಾಶಿನಿ"    ನದಿಯು   ಶತಮಾನದಲ್ಲಿ    ಇದೆ ಮೊದಲ ಬಾರಿಗೆ    ಬತ್ತುತ್ತಾ   ಇದ್ದು ಆ ನದಿಯಲ್ಲಿ ವಾಸುಸುತ್ತಿದ್ದ   ನೀರುನಾಯಿಗಳು   ಅಪಾಯದ ಅಂಚಿನಲ್ಲಿರುವ ವಿಚಾರದ    ಬಗ್ಗೆ    ಮನಕರಗುವಂತೆ   ಬರೆಯಲಾಗಿತ್ತು.  ಸರಿ ಅಘನಾಶಿನಿ  ಬ್ಲಾಗಿನ  ಲೇಖನವನ್ನು   ನನ್ನ ಫೇಸ್ಬುಕ್  ಪುಟದಲ್ಲಿ  ಹಂಚಿಕೊಂಡೆ  , ಬಹಳಷ್ಟು ಜನ  ಅದನ್ನು ನೋಡಿ  ವಿಚಾರ ತಿಳಿದರು,  ಇನ್ನು ಕೆಲವರು   ನೀರು ನಾಯಿ ಅಂದ್ರೆ ಏನು ...?    ಅದನ್ನು ನಮ್ಮ ಮನೆಗಳಲ್ಲಿ ಸಾಕುವ  ನಾಯಿಗಳ   ಹಾಗೆ   ಸಾಕ ಬಹುದಾ ..?    ನೀರು ನಾಯಿ  ಅಂದ್ರೆ ಹೇಗಿರುತ್ತೆ ...?  ಅದು ಕಳ್ಳರನ್ನು ಹಿಡಿಯುತ್ತಾ  ...?    ಅದನ್ಯಾಕೆ ನೀರು ನಾಯಿ ಅಂತಾರೆ ..?    ಹೀಗೆ   ಪ್ರಶ್ನೆಗಳನ್ನು  ದೂರವಾಣಿ ಮೂಲಕ  ಕೇಳಿದರು .  ಇನ್ನು ನನ್ನ ಮಗನ ಜೊತೆ ಮಾತನಾಡುತ್ತಾ    ನೀರು ನಾಯಿ  ವಿಚಾರ ಹೇಳಿದೆ  , ಅವನು ಅಪ್ಪಾ   ನೀರು ನಾಯಿ ನಾನಂತೂ ನೋಡಿಲ್ಲ ,   ಈ ಬಗ್ಗೆ     ನಾನು ಓದಿದ    ಶಾಲೆ, ಕಾಲೇಜುಗಳ  ಪುಸ್ತಕದಲ್ಲಿ   ವಿಚಾರ ಇರಲಿಲ್ಲ,  ಯಾವುದೇ ಟಿ. ವಿ.  ಇದರ ಬಗ್ಗೆ  ಮಾಹಿತಿ ನೀಡಿಲ್ಲ  , ಯಾವುದೇ    ನ್ಯೂಸ್  ಪೇಪರ್  ನಲ್ಲಾಗಲಿ   ಮ್ಯಾಗಜಿನ್  ಅಲ್ಲಾಗಲಿ   ಓದಿಲ್ಲ,  ಇದೇನೋ   ಹೊಸ ಕಾರ್ಟೂನ್  ಹೆಸರು ಅನ್ನೋ ಹಾಗೆ ಕಾಣ್ತಿದೆ,  ಅಂದ. ಇನ್ನು ನನ್ನ ಕೆಲವು  ಗೆಳೆಯರನ್ನು   ನೀರು ನಾಯಿ ಬಗ್ಗೆ ಕೇಳಿದೆ   "ಅಯ್ಯೋ ಗುರು   ಅದೇ ನಮ್ಮನೆ  ನಾಯಿಗಳನ್ನು   ನೀರಿಗೆ   ಎತ್ತಿಹಾಕಿ ಅವುಗಳನ್ನೇ    ನೀರುನಾಯಿ ಅನ್ನಬೇಕೂ   ಅಷ್ಟೇ....!"  ಅಂತಾ ಹಾಸ್ಯ ಮಾಡಿದರು,  ಅವರಾದರೂ ಏನು ಮಾಡಿಯಾರು  ನಮ್ಮ   ನಾಡಿನ   ದೊಡ್ಡ ದೊಡ್ಡ ಕೆರೆಗಳಲ್ಲಿ,  ನದಿಗಳಲ್ಲಿ,  ಬದುಕಿ  ಬಾಳುತ್ತಿದ್ದ ಇಂತಹ ಒಂದು ಜೀವಿ  ಹೆಚ್ಚು ಕಡಿಮೆ ಅವಸಾನದ  ಅಂಚಿಗೆ ಬಂದು ನಿಂತಿರಲು   ಯಾರಿಗೆ ತಾನೇ ತಿಳಿಯುತ್ತೆ ಇವುಗಳ ಬಗ್ಗೆ .

ನಾವು ಇರೋದು ಹೀಗೆ ಗೊತ್ತಾ ....?  [ ಚಿತ್ರ ಕೃಪೆ   ಅಂತರ್ಜಾಲ ] 

ನಾನು ಬಾಲ್ಯ ಕಳೆದದ್ದು  ಹಳ್ಳಿಯಲ್ಲಿ  ನನ್ನ ಹಳ್ಳಿ   ನೆಲಮಾಕನ ಹಳ್ಳಿಯಿಂದ     ಮಳವಳ್ಳಿ ಪಟ್ಟಣ ದಲ್ಲಿದ್ದ   ಪ್ರಾಥಮಿಕ  ಹಾಗು  ಪ್ರೌಡ ಶಾಲೆಗೇ   ಸುಮಾರು ಐದು   ಕಿಲೋಮೀಟರು  ಬೈಸಿಕಲ್  ಮೂಲಕ   ತೆರಳುತ್ತಿದ್ದೆ,  ಆ  ಹಾದಿಯಲ್ಲಿ ನನಗೆ ಸಿಗುತ್ತಿದ್ದುದೆ   ಮಳವಳ್ಳಿಯ   ದೊಡ್ಡ ಕೆರೆ    ಆಗ  ಕೆಲವು  ಕೆಲವು ಜೀವಿಗಳು  ಗುಂಪು ಗುಂಪಾಗಿ  ನೀರೊಳಗೆ  ಮುಳುಗುತ್ತಾ    ಏಳುತ್ತಾ   ಚಲಿಸುತ್ತಿರುವುದನ್ನು   ಕಾಣುತ್ತಿದ್ದೆ,   ಆ ಸಮಯದಲ್ಲಿ   ಇವುಗಳ ಬಗ್ಗೆ   ತಿಳಿಯುವಷ್ಟು   ಜ್ಞಾನ ಇರಲಿಲ್ಲ,  ಇನ್ನು  ಬೇಸಿಗೆ ರಜೆಗೆ   ಅಜ್ಜಿಯ ತಂಗಿ ಮನೆ   ಮಳವಳ್ಳಿ ತಾಲೂಕಿನ   "ಮಿಕ್ಕೆರೆ "  ಎಂಬ ಗ್ರಾಮಕ್ಕೆ ಹೋದಾಗ , "ಬಾರೋ ನೀರು ನಾಯಿ   ಆಟಾ ಆಡೋದನ್ನು  ತೋರಿಸ್ತೇನೆ"    ಅಂತಾ    ಸಂಜೆ ವೇಳೆ   ಅಲ್ಲಿನ   ಕೆರೆಯ ದಂಡೆಯ ಮೇಲೆ  ಮನೆಯ ಹಿರಿಯರು  ನನ್ನನ್ನು   ಜೊತೆಯಲ್ಲಿ  ಕರೆದುಕೊಂಡು   ವಾಕಿಂಗ್    ಹೋಗುತ್ತಿದ್ದರು  ,    ಆ ಸಮಯದಲ್ಲಿ    ಗ್ರಾಮದ   ವಿಶಾಲವಾದ  ಕೆರೆಯ   ಕೋಡಿ  ಯ ಸಮೀಪ , ಬಹಳ ಹತ್ತಿರ   ಇವುಗಳ ದರ್ಶನ ಆಗುತ್ತಿತು,   ಗುಂಪುಗುಂಪಾಗಿ   ಕೆರೆಯ ಉದ್ದಗಲಕ್ಕೂ   ನೀರಲ್ಲಿ ಆಟವಾಡುತ್ತಾ ,   ತೇಲುತ್ತಾ   ಮುಳುಗುತ್ತಾ   ಇರುತ್ತಿದ್ದವು .  ನನಗಂತೂ  ಅವು ಪಲ್ಟಿ  ಹೊಡೆಯೋದನ್ನು  ನೋಡೋದೇ ಖುಷಿ ಕೊಡ್ತಾ ಇತ್ತು. ಹೇಗೆ   ಅಂದ್ರೆ  ಉದಾಹರಣೆಗೆ     ಡಾಲ್ಫಿನ್  ಗಳು ಸಮುದ್ರದಲ್ಲಿ ಚಿಮ್ಮಿ  ನೀರಿನೊಳಗೆ   ಪಲ್ಟಿ ಹೊಡೆಯೋ ಹಾಗೆ  ಇರುತ್ತಿತ್ತು.   ಅಂದಿನ ದಿನಗಳಲ್ಲಿ   ಸಾಮಾನ್ಯವಾಗಿ   ಕೆರೆಗಳು  ಯಾವುದೇ  ರೀತಿಯ  ಮಾಲಿನ್ಯಕ್ಕೆ   ಒಳಗಾಗಿರಲಿಲ್ಲ . ಕೆರೆಗಳಲ್ಲಿ   ಜೊಂಡು  ಬೆಳೆದಿರಲಿಲ್ಲ,   ಪರಿಶುದ್ದವಾದ   ನೀರು  ಇಂತಹ  ಜೀವಿಗಳಿಗೆ   ಆಸರೆಯಾಗಿತ್ತು.   ಆದರೆ ಇಂದಿನ  ಪರಿಸ್ಥಿತಿ ಬೇರೆ ಬಿಡೀ.  ಇಂದು  ಅವುಗಳು ವಾಸ ಮಾಡುತ್ತಿದ್ದ  ಕೆರೆಗಳು  ಕಣ್ಮರೆಯಾಗಿವೆ, ಇಲ್ಲದಿದ್ದಲ್ಲಿ  ಕೆರೆಗಳ ತುಂಬಾ ಜೊಂಡು ಹುಲ್ಲು   ಬೆಳೆದು  ನೀರಿನ  ಸೆಲೆ ಕಡಿಮೆಯಾಗಿದೆ,   ಕೆರೆಯಲ್ಲಿ ನೀರಿದ್ದರೂ  ಸಹ   ಮಾಲಿನ್ಯಗೊಂಡು  ಇಂತಹ ಜೀವಿಗಳು  ಬದುಕಲಾಗದಂತಹ   ಪರಿಸ್ಥಿತಿ  ನಿರ್ಮಾಣ ಆಗಿದೆ . ಅಪರೂಪಕ್ಕೆ   ಅಲ್ಲಿ ಇಲ್ಲಿ ಕಂಡುಬಂದರೆ  ಇವುಗಳನ್ನು  ಮಾಂಸಕ್ಕಾಗಿ , ಚರ್ಮಕ್ಕಾಗಿ    ಬೇಟೆಯಾಡಿ    ನಿರ್ನಾಮ  ಮಾಡಲಾಗುತ್ತಿದೆ.     ಇಂದು ನಮ್ಮ ಸುತ್ತ ಮುತ್ತಲಿನ    ಹಳ್ಳಿಗಳ   ಕೆರೆಗಳಲ್ಲಿ  ಇವುಗಳು  ನಿರ್ನಾಮವಾಗಿದ್ದು  ಕಾಣಸಿಗುವುದೇ ಇಲ್ಲಾ,   ನಮ್ಮ ನಾಡಿನ  ಕೆಲವು ನದಿಗಳ   ತಟದಲ್ಲಿ  ಇವುಗಳು    ಬಹಳ  ಅಪರೂಪಕ್ಕೆ ವಿರಳವಾಗಿ   ಕಾಣಸಿಗುತ್ತಿವೆ ,

ನಮ್ಮ ಪಾಡಿಗೆ ನಮ್ಮನ್ನು ಬಿಡ್ರಪ್ಪಾ    [ ಚಿತ್ರ ಕೃಪೆ   ಅಂತರ್ಜಾಲ ] 


    ಇನ್ನು ನೀರು ನಾಯಿಯ ಬಗ್ಗೆ ಸ್ವಲ್ಪ ತಿಳಿಯೋಣ    ಬನ್ನಿ ,  ಈ ನೀರು ನಾಯಿಯ   ವರ್ಣನೆ ಬಹಳ  ವಿಚಿತ್ರ ,  ಇದು  ನಮಗೆ ಕಾಣ ಸಿಗುವ  ಮುಂಗುಸಿ,  ಬೆಕ್ಕು,   ಅಳಿಲು,  ನಾಯಿ   ಇವುಗಳ   ಕೆಲವು ಗುಣಗಳನ್ನು ಅಳವಡಿಸಿಕೊಂಡಿರುವ     ಜೀವಿ .   ನೀರಿನ  ಆಶ್ರಯ ಇದು ಬದುಕಲು ಬೇಕೇ ಬೇಕು  ಹಾಗಾಗಿ ಇವು,   ಕೆರೆ,  ನದಿಗಳ ಆಶ್ರಯದಲ್ಲಿ  ಜೀವನ ಮಾಡುತ್ತವೆ,   ನದಿಗಳ ದಡದಲ್ಲಿ  ಶೀತವಿರುವ ಪ್ರದೇಶದಲ್ಲಿ   ಒಡ್ಡುಗಳ ಹತ್ತಿರ, ಮರಗಳ ಗುಂಪಿನ  ನಡುವೆ    ಪೊಟರೆ ಗಳನ್ನ  ನಿರ್ಮಿಸ್ಕೊಂಡು   ಗುಂಪು ಗುಂಪಾಗಿ  ವಾಸಿಸುತ್ತವೆ.  ಇವುಗಳ  ಮುಖವನ್ನು  ಗಮಸಿಸಿದರೆ   ಬೆಕ್ಕಿನ  ಹೋಲಿಕೆ  ಕಂಡುಬರುತ್ತದೆ,  ಮತ್ತೊಂದು ಕೋನದಿಂದ  ನೋಡಿದರೆ  ಮುಂಗುಸಿಯಂತೆ ಕಾಣುತ್ತದೆ,  ಪುಟ್ಟ ಕಿವಿಗಳು,   ಮುಖದ  ಮುಂಭಾಗಕ್ಕೆ  ಕಾಣುವ ಕಣ್ಣುಗಳು, ಮೂಗು,  ಮುಖದಲ್ಲಿ  ಮೀಸೆಯಂತಹ ಉದ್ದನೆಯ ಕೂದಲುಗಳು ,  ನಾಯಿಯ  ಚರ್ಮದಂತಹ   ಚರ್ಮ,  ಮುಂದಿನ ಎರಡೂ ಕಾಲುಗಳು  ದಪ್ಪವಾಗಿ  ಗಿಡ್ಡವಾಗಿದ್ದು  , ಹಿಂದಿನ ಕಾಲುಗಳು   ಮುಂದಿನ   ಕಾಲುಗಳಿಗಿಂತಾ  ಸಣ್ಣವಾಗಿ  ಉದ್ದವಾಗಿವೆ .  ಇನ್ನು ಇದರ ಬಾಲ ಉದ್ದವಾಗಿದ್ದು  ಬಹಳ ಶಕ್ತಿಯುತವಾಗಿವೆ. ಕೆಲವೊಮ್ಮೆ ಇವುಗಳು ಕಾಂಗರೂ ಗಳಂತೆ  ಎರಡು ಕಾಲಿನಲ್ಲಿ  ನಿಲ್ಲುತ್ತವೆ.   ಇವುಗಳ   ಜೀವಿತ  ಅವಧಿ    ಸುಮಾರು   ಹನ್ನೊಂದರಿಂದಾ  ಹದಿನಾರು ವರ್ಷಾ  ಅಷ್ಟೇ ,  ಈ ನೀರುನಾಯಿಗಳು ಸರಾಸರಿ   ನಾಲ್ಕರಿಂದ   ಐದು ಕಿಲೋ  ಗ್ರಾಂ  ತೂಕ  ತೂಗುತ್ತವೆ,  ಇನ್ನು  ನೀರುನಾಯಿಗಳ  ಸಂತಾನದ ವಿಚಾರಕ್ಕೆ ಬಂದ್ರೆ   ಹೆಣ್ಣು ಗರ್ಭ  ದರಿಸೋದು   ಇಪ್ಪತೆಂಟು  ದಿನಗಳಿಂದ  ಮೂವತ್ತು ದಿನಗಳು,   ಸಾಮಾನ್ಯವಾಗಿ  ಎರಡರಿಂದ ಮೂರು ಮರಿಗಳಿಗೆ   ನೀರುನಾಯಿ ಜನ್ಮ ನೀಡುತ್ತದೆ .  ಇನ್ನು  ಹೊಸದಾಗಿ ಜನಿಸಿದ ಮರಿಗಳು  ಐವತ್ತು  ಗ್ರಾಂ ತೂಕ   ಅಷ್ಟೇ , ಇವುಗಳು    ಮೊದಲ ಎರಡು ಅಥವಾ ಮೂರುವಾರ   ತಾಯಿಯ ಆಸರೆಯಲ್ಲೇ  ಆರೈಕೆ   ಮಾಡಿಸಿಕೊಳ್ಳುತ್ತವೆ,  ಬಾಯಲ್ಲಿ ಹಲ್ಲು ಮೂಡಿ,  ಕಣ್ಣು  ಬಿಟ್ಟು  ಓಡಾಡಲು   ನೀರುನಾಯಿಗೆ  ಸುಮಾರು ನಲವತ್ತು ದಿನಗಳು ಬೇಕು ,  ಆ ನಂತರವಷ್ಟೇ   ಈ  ಮರಿಗಳು ಗಟ್ಟಿಯಾದ  ಆಹಾರ ತಿನ್ನಲು  ಶಕ್ತವಾಗುತ್ತವೆ.   ಹದಿನಾಲ್ಕು ವಾರ  ಕಳೆದಾಗ  ನೀರುನಾಯಿಗಳು   ತಮ್ಮ  ಜೀವನ  ತಾವೇ  ನಿರ್ವಹಣೆ  ಮಾಡೋದನ್ನು  ಕಲಿತು ಬಿಟ್ಟಿರುತ್ತವೆ . ಇನ್ನು ಪರಸ್ಪರ   ಸೂಚನೆ ಕೊಡಲು,   ತಮ್ಮದೇ ಆದ ವಿಚಿತ್ರ ಕ್ರಮ ಅನಿಸರಿಸುತ್ತವೆ.  ಇವು ಹನ್ನೆರಡು  ವಿವಿಧ  ಬಗೆಯ  ಶಬ್ಧವನ್ನು  ತಮ್ಮ ಬಾಯಿಂದ  ಹೊಮ್ಮಿಸುತ್ತವೆ,  ಒಂದೊಂದು ರೀತಿಯ ಶಬ್ದಕ್ಕೂ  ಅದರದೇ  ಆದ ಅರ್ಥ ಇರುತ್ತದೆ,  ಇನ್ನೊಂದು ವಿಶೇಷ  ಅಂದ್ರೆ ಈ ಜೀವಿಗಳು ತಮ್ಮ ದೇಹದಿಂದ   ವಿವಿಧ ಬಗೆಯ  ವಾಸನೆ  ಹೊಮ್ಮಿಸುವ ಮೂಲಕ  ಸಂವಹನ   ನಡೆಸೋದು  ಒಂದು ಅಚ್ಚರಿಯ ವಿಚಾರ.  ಇನ್ನು ಇವುಗಳಿಗೆ  ಜಲಚರಗಳೇ ಆಹಾರ ,  ನೀರಿನಲ್ಲಿ  ಸಿಗುವ ವಿವಿಧ ಬಗೆಯ ಮೀನುಗಳು,   ಹೊಲ ಗದ್ದೆಯಲ್ಲಿ   ಸಿಗುವ   ಏಡಿ,  ಕಪ್ಪೆ , ಮುಂತಾದವುಗಳನ್ನು  ಭಕ್ಷಿಸುತ್ತವೆ.  ಇದು ಇವುಗಳ ಬಗ್ಗೆ  ಇರುವ ಮಾಹಿತಿ. ಕನ್ನಡ  ಅಂತರ್ಜಾಲ ತಾಣಗಳಲ್ಲಿ    ಏನೂ  ಮಾಹಿತಿ ಸಿಗದಿದ್ದರೂ    ಆಂಗ್ಲ    ಭಾಷೆಯಲ್ಲಿನ  ಕೆಲವೇ ಕೆಲವು ತಾಣಗಳಲ್ಲಿ   ನೀರುನಾಯಿಗಳ   ಬಗ್ಗೆ   ಸ್ವಲ್ಪ  ಮಾಹಿತಿ ಸಿಗುತ್ತವೆ,  ಈ ನೀರುನಾಯಿಗಳು   ಹಾಗು   ಸಮುದ್ರದಲ್ಲಿ   ಕಂಡುಬರುವ   ಸೀಲ್ [  ಸೀ  ಲಯನ್ ]  ಗಳು   ಹೊರನೋಟಕ್ಕೆ  ಕೆಲವೊಮ್ಮೆ   ಒಂದೇ ರೀತಿ  ಕಂಡು ಬರುತ್ತವೆ.  ಕೆಲವು ವಿಚಾರಗಳಲ್ಲಿ   ಚಿಕ್ಕಪ್ಪ ದೊಡ್ಡಪ್ಪನ   ಮಕ್ಕಳ ಹಾಗೆ  ಸಾಮ್ಯತೆ ಕಂಡು ಬರುತ್ತದೆ .

ನಮ್ಮನು  ಉಳಿಸಿ ಪ್ಲೀಸ್  [ ಚಿತ್ರ ಕೃಪೆ  ಅಂತರ್ಜಾಲ ] 


ಇನ್ನು ನಮ್ಮ   ನಾಡಿನ  ಕಥೆ  ಪುಸ್ತಕಗಳಲ್ಲಿ  ಇವುಗಳ ಉಲ್ಲೇಖ   ಅಷ್ಟಾಗಿ ಕಂಡು ಬರುವುದಿಲ್ಲ  ಆದರೆ  ಕಡಲ ತೀರದ ಭಾರ್ಗವ  ಕಾರಂತಜ್ಜ     ಬರೆದಿರುವ      "ಸ್ವಪ್ನದ  ಹೊಳೆ "   ಕಥೆಯಲ್ಲಿ  ಒಂದು ಸನ್ನಿವೇಶದಲ್ಲಿ  ನೀರುನಾಯಿಗಳ ಬಗ್ಗೆ  ಸ್ವಲ್ಪ ಮಾಹಿತಿ ನೀಡಿದ್ದಾರೆ.  ಉಳಿದಂತೆ   ಬೇರೆ ಕಥೆಗಾರರ ಕಣ್ಣಿಗೆ ಇವು  ಕಂಡಿಲ್ಲ.  ಇನ್ನು ಇವುಗಳು    ಬಹಳ  ಸಾದು  ಜೀವಿಗಳಾದ  ಕಾರಣ ಇವುಗಳನ್ನು  ಬೇಟೆಗಾರರು  ಬಹಳ ಸುಲಭವಾಗಿ   ಕೊಲ್ಲುತ್ತಾರೆ,  ಹಾಗಾಗಿ ಇವುಗಳು ಅಳಿವಿನ ಅಂಚಿನಲ್ಲಿ  ಬಂದು ನಿಂತಿವೆ ,   ಈಗಲಾದರೂ    ನಾವುಗಳು ಎಚ್ಚರ ವಹಿಸಿ  ಇವುಗಳನ್ನು ರಕ್ಷಣೆ ಮಾಡುವ  ನಿಟ್ಟಿನಲ್ಲಿ   ಕಾರ್ಯಕ್ರಮ  ಹಾಕಿಕೊಳ್ಳಬೇಕಾಗಿದೆ , ಇಲ್ಲದಿದ್ದರೆ   ಇವುಗಳ ಚಿತ್ರವನ್ನು ಗೋಡೆಯ ಮೇಲೆ ಅಂಟಿಸಿ  ಮುಂದಿನ ಪೀಳಿಗೆಗೆ   ತೋರಿಸಬೇಕಾಗುತ್ತದೆ.  ದಯಮಾಡಿ ನಿಮ್ಮ   ಊರಿನ ಅಥವಾ ಹಳ್ಳಿಗಳ   ಕೆರೆಗಳಲ್ಲಿ   ಈ ನೀರುನಾಯಿಗಳು ಕಂಡು ಬಂದರೆ   ಅವುಗಳನ್ನು  ಸಂರಕ್ಷಿಸಲು ಪ್ರಯತ್ನಿಸಿ  ಗೆಳೆಯರೇ.

[ ಸೂಚನೆ :-) ಈ ಲೇಖನದಲ್ಲಿನ  ಚಿತ್ರಗಳನ್ನು  ಅಂತರ್ಜಾಲದ ಸಹಾಯದಿಂದ  ಕೃತಜ್ಞತಾ ಪೂರ್ವಕವಾಗಿ  ಪಡೆದಿದ್ದೇನೆ, ಚಿತ್ರಗಳ ಹಕ್ಕು ಮೂಲ  ಛಾಯಚಿತ್ರಗಾರರದು , ಮಾಹಿತಿಯನ್ನು  ವಿವಿಧ ಪುಸ್ತಕಗಳು, ಅಂತರ್ಜಾಲದ ಸಹಾಯದಿಂದ  , ಕೆಲವು  ಪಶು ವೈಧ್ಯರಿಂದ   ಕೃತಜ್ಞತಾ ಪೂರ್ವಕವಾಗಿ  ಪಡೆದು  ಸಂಗ್ರಹಿಸಿ  ಇಲ್ಲಿ ಬಳಸಿಕೊಳ್ಳಲಾಗಿದೆ .   ನೀರುನಾಯಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ  ಆ ಮಾಹಿತಿಯನ್ನು   ನಿಮ್ಮ ಅನಿಸಿಕೆಯಲ್ಲಿ   ಹಾಕಿದರೆ ಉಳಿದವರಿಗೆ ಅನುಕೂಲ ಆಗುತ್ತದೆ . ]


 

Sunday, May 22, 2016

ಇದು ಹೀಗೆ ಆಗಬಾರದಿತ್ತು ಅಂದ್ರು ಹಲವರು, ಬದುಕಿ ಬಂದು ಥ್ಯಾಂಕ್ಸ್ ಹೇಳಿದ್ದಕ್ಕೆ ಖುಷಿ ಪಟ್ರು ಡಾಕ್ಟ್ರು ......!ನನ್ ಕಥೆ ಭಾಗ ....03

 
ನೊಂದ ಮನಸಿಗೆ  ಒಳ್ಳೆಯ ಮಾತುಗಳು  ಪುಷ್ಪಗುಚ್ಚದಂತೆ  ಮುದನೀಡುತ್ತವೆ 


ಆಸ್ಪತ್ರೆಯಲ್ಲಿ ಚಿಕಿತ್ಸೆ    ಪದೆದದ್ದಾಯಿತು,  ವೈಧ್ಯರು  ಮನೆಯಲ್ಲಿ   ವಿಶ್ರಾಂತಿ ಪಡೆಯಲು  ಸೂಚಿಸಿದ ಮೇರೆಗೆ  ನನ್ನ ವಿಶ್ರಾಂತಿ   ಪರ್ವ ಆರಂಭವಾಯಿತು. ನನಗೆ ಅಪಘಾತ ಆದ ವಿಚಾರ  ನನ್ನ ಗೆಳೆಯರಿಗೆ  ನೆಂಟರಿಗೆ   ತಿಳಿಯಲು  ತಡಾ ಆಗಲಿಲ್ಲ,    ದಾವಿಸಿಬಂದರು ಸಂತೈಸಲು........! ಕಂಬನಿ  ಮಿಡಿದವರು  ಹಲವರು, ಕೆಲವರು ಹಾರೈಸಿದರು  ಮತ್ತೆ ಕೆಲವರು .....? ಪತ್ತೆದಾರರಂತೆ  ......ಪ್ರಶ್ನೆ    ಕೇಳಿ  ಎಡವಟ್ಟು ಮಾಡಿಕೊಂಡರು     ಮುಂದೆ ....?    ಹಾಗೆ  ನಡೆಯಿತು , ಪ್ರತಿನಿತ್ಯ  ಕನಿಷ್ಠ   ಹತ್ತರಿಂದ ಇಪ್ಪತ್ತು ಜನ   ಮನೆಗೆ ಬಂದು  ತಮ್ಮ ಪ್ರೀತಿ ತೋರಿದರು ಬಹಳಷ್ಟು ಮಂದಿ. ಅಚ್ಚರಿ ಅಂದ್ರೆ  ಫೇಸ್ಬುಕ್ ನಲ್ಲಿ   ಪರಿಚಯ  ಆಗಿ ಮುಖವನ್ನೇ ನೋಡದ ಕೆಲವರು  ಅದು ಹೇಗೋ  ನನ್ನ ವಿಳಾಸ  ಪತ್ತೆಮಾಡಿ  ಮನೆಗೆಬಂದು  ತಮ್ಮ ಪ್ರೀತಿ ತೋರಿದರು . ಬಹಳಷ್ಟ್ ಜನ   ಹಣಕಾಸು ಸಹಾಯ   ಮಾಡಲು ಮುಂದೆ ಬಂದರು ,  ಆದರೆ ಅದನ್ನು  ನಯವಾಗಿ ನಿರಾಕರಿಸಿದೆ,  ತೀರಾ ಆತ್ಮೀಯರು  ಕೆಲವರು  ನನ್ನ ಬೆನ್ನ ಹಿಂದೆ ನಿಂತರು , ಪ್ರತಿನಿತ್ಯ   ಆಗಮಿಸುವ  ನೆಂಟರು , ಗೆಳೆಯರುಗಳ ಜೊತೆ ಮಾತು ಕಥೆ  ಇವುಗಳ  ಜೊತೆಗೆ  ದೂರವಾಣಿ  ಕರೆಗಳನ್ನು ಸ್ವೀಕರಿಸುವುದೇ  ನಮ್ಮ ಮನೆಯಲ್ಲಿ  ಒಂದು ಹೊಸ ದಿನಚರಿ ಆಯ್ತು,    ಮೊದಮೊದಲು ನನಗೆ  ಮಾತನಾಡಲು, ಎದ್ದು  ಕುಳಿತು  ಮಾಡುವುದು   ಸಾಧ್ಯವಾಗದ   ಕಾರಣ   ನನ್ನ ಮನೆಯವರುಗಳೇ   ನನ್ನ ಪರವಾಗಿ   ಈ ಕಾರ್ಯವನ್ನು  ಮಾಡಿದರು.    ದೇಹದಲ್ಲಿ ಶಕ್ತಿ ಇಲ್ಲದೆ, ನೋವನ್ನು ಅನುಭವಿಸುತ್ತಾ ,  ಮಾತ್ರೆ, ಔಷಧಿ,  ನಿದ್ದೆ, ಊಟ ,  ಎಲ್ಲಕ್ಕೂ   ಆಸರೆ ಪಡೆಯುತ್ತಾ   ದಿನಗಳನ್ನು  ಕಳೆಯುತ್ತಿದ್ದೆ.  ಒಮ್ಮೊಮ್ಮೆ ನಾನು  ಜೀವವಿರುವ  ಅಸಹಾಯಕ  ದೇಹದ  ಯಜಮಾನ   ಎಂಬ ಭಾವನೆ  ಬರುತ್ತಿತ್ತು. ಓದಲು ಆಗುತ್ತಿರಲಿಲ್ಲ , ಎದ್ದುಕುಳಿತರೆ   ತಲೆ ಚಕ್ಕರ್  ಹೊಡೆಯೋದು, ಟಿ. ವಿ. ನೋಡಲು  ಆಗುತ್ತಿರಲಿಲ್ಲ, ತಲೆ ನೋವು ಬರುತಿತ್ತು,  ಇವುಗಳ ಜೊತೆಗೆ  ಹೆಣಗಾಡುತ್ತಾ  ಕೆಲವು  ವಾರಗಳು ಕಳೆದವು,  ನಿಧಾನವಾಗಿ   ದೇಹಕ್ಕೆ   ಚೈತನ್ಯ   ಬರುತ್ತಿತ್ತು, ಬಂದವರೊಡನೆ  ಮಾತನಾಡುವಷ್ಟು   ಶಕ್ತಿ ಬಂತು.   ಬರುವ ನೆಂಟರು , ಗೆಳೆಯರು  ಬರುತ್ತಲೇ ಇದ್ದರು, ಇಂತಹ ವೇಳೆ ಬಂದರು  ಒಬ್ಬ  ಆತ್ಮೀಯರು .





ಶೀರ್ಷಿಕೆ ಸೇರಿಸಿ



ಮನೆಗೆ ಬಂದವರೇ   ಬಹಳ ಆತ್ಮೀಯವಾಗಿ   ಹತ್ತಿರ ಬಂದು  ತಲೆ ಸವರಿದರು, ಮನೆಯವರೆಲ್ಲರ  ಜೊತೆ  ಮಾತು ಕಥೆ ಆಯಿತು,  ನಂತರ  ಅಲ್ಲಿದ್ದ ಕೆಲವರಿಗೆ ಇವರನ್ನು   ಸ್ವಲ್ಪ   ಜಾಸ್ತಿ ಹೊಗಳಿ  ಪರಿಚಯ ಮಾಡಿಕೊಟ್ಟೆ . ಅಲ್ಲೇ  ಆಗಿತ್ತು ತಪ್ಪು.  ಅಲ್ಲಿದ್ದವರ ಪರಿಚಯ ಮಾಡಿಕೊಂಡು    ನನ್ನ ಹತ್ತಿರ ಬಂದು ಕುಳಿತರು,  ಮತ್ತೆ ವಿಶೇಷ ಏನಪ್ಪಾ ....?  ಅಪಘಾತ  ಹೇಗೆ  ಆಯ್ತು ....?  ಅಂದರು   ನಾನು ನನಗೆ  ಗೊತ್ತಿದ್ದ ,  ನನಗಾದ  ಅಪಘಾತದ  ವಿಚಾರವನ್ನು   ಅವರಿಗೆ  ಹೇಳಿದೆ.  ನಂತರ   ಶುರು ಆಯ್ತು ಅವರ  ಪ್ರಶ್ನೆಗಳ ಸುರಿಮಳೆ,   ಅಲ್ಲಾ    ಈ ತುದಿಯಿಂದ   ನೀನು ರಸ್ತೆ    ದಾಟುತ್ತಿದ್ದರೆ... ಆ ಬೈಕಿನವರು   ಈ  ಆಂಗಲ್  ನಲ್ಲಿ  ನಿನಗೆ ಗುದ್ದಿರಬೇಕು,    ಹೀಗೆ ಗುದ್ದಿದರೆ  ನಿನಗೆ   ಇಲ್ಲಿ ಪೆಟ್ಟಾಗಿರಬೇಕು ,  ಆದರೆ  ನಿನಗೆ   ಆಗಿರೋದು   ಬೇರೆ ತರಹ  ಇದೆ  ಇದು ಹ್ಯಾಗೆ ಸಾಧ್ಯ  ...?   ಅಂದರು,  ನನಗೆ   ಇನ್ನೂ    ನನ್ನ ಅಪಘಾತದ   ವಿವರ ತಿಳಿದಿರಲಿಲ್ಲ,  ಅಪಘಾತ  ಆದ ತಕ್ಷಣ   ಪ್ರಜ್ಞೆ ಹೋಗಿತ್ತು,  ಹೀಗಿರುವಾಗ   ಇಂತಹ ಪ್ರಶ್ನೆಗಳಿಗೆ ಉತ್ತರ ಎಲ್ಲಿಂದ   ತರಲಿ. ಇರುವ ವಿಚಾರ   ಹೇಳಿದೆ   ಆ ಯಪ್ಪಾ   ಯಾವುದೇ ಕೆಟ್ಟ  ಉದ್ದೇಶ  ಇಲ್ಲದೆ ಇದ್ದರೂ   ಸುಮ್ಮನೆ   ಸುರಿಮಳೆ   ಹಾಕುತ್ತಲೇ ಇದ್ದರು . ಒಂದು ಕಡೆ  ಗಾಯದ ನೋವು,  ತಲೆಯಲ್ಲಾ  ಸುತ್ತುತ್ತಿರುವ  ಅನುಭವ , ದೇಹದಲ್ಲಿ  ತ್ರಾಣವಿಲ್ಲದ   ಅಸಹಾಯಕ ಸ್ಥಿತಿ ,  ಅವರಿಗೆ ತಿಳಿ ಹೇಳಲು  ಹೋದರೆ  ಅವರಿಗೆಲ್ಲಿ ನೋವು ಆಗುತ್ತದೆಯೋ  ಎಂದು  ನಮ್ಮ ಮನೆಯವರಿಗೆ   ಸಂಕೋಚ ,  ಈ ಪರಿಸ್ಥಿತಿ   ನಿಜಕ್ಕೂ ಬಯಸದೆ ಬಂದ   ನೋವಾಗಿತ್ತು,    ಇದೆಲ್ಲವನ್ನೂ    ನೋಡುತ್ತಾ   ಕುಳಿತಿದ್ದ   ನನ್ನ ಗೆಳೆಯರೊಬ್ಬರ    ಪತ್ನಿ,     ಸಾರ್   ಸುಮ್ಮನಿರಿ,   ಅವರ ಪಾಡಿಗೆ ಅವರು ನೋವು ತಿನ್ನುತ್ತಾ  ನರಳುತ್ತಾ ಇದ್ದಾರೆ , ನೀವು    ಸುಮ್ನೆ ಪ್ರಶ್ನೆ ಹಾಕ್ತಾ   ಅವರ ನೋವನ್ನು ಮತ್ತಷ್ಟು ಜಾಸ್ತಿ ಮಾಡ್ತಾ   ಇದೀರ,  ಅಪಘಾತ  ಆದಾಗ ಅವರಿಗೆ ಜ್ಞಾನ  ಹೋಗಿದ್ದಾಗ  ಹೇಗೆ  ಹೇಳುತ್ತಾರೆ  ಏನು ನಡೆಯಿತೆಂದು , ಅದನ್ನು ಯಾರಾದ್ರೂ  ವೀಡಿಯೊ  ಮಾಡಿದ್ರೆ ನಿಮ್ಮ ಪ್ರಶ್ನೆಗಳಿಗೆ   ಉತ್ತರ ಕೊಡಬಹುದು,  ರೀ ಬಾಲೂ   ಮೊದಲು ರೂಂ  ಒಳಗೆ ಹೋಗಿ, ರೆಸ್ಟ್ ಮಾಡಿ  ಪ್ರತಿನಿತ್ಯ  ಹೀಗೆ ಬಂದವರೆಲ್ಲಾ   ಪ್ರಶ್ನೆ  ಕೇಳಿ  ಹಿಂಸೆ ಮಾಡಿದ್ರೆ   ನಿಮ್ಮ ಆರೋಗ್ಯ  ಸುಧಾರಿಸೋದು ಕಷ್ಟ  ಆಗುತ್ತೆ  , ಅಂತಾ ಹೇಳಿ ಬಲವಂತವಾಗಿ   ಒಳಗೆ  ಕಳುಹಿಸಿದರು,   ಇದನ್ನು ನಿರೀಕ್ಷಿಸದೆ ಇದ್ದ   ಆ ಆತ್ಮೀಯರು ಒಂದು ಕ್ಷಣ   ಅವಕ್ಕಾದರು ....!  ತನ್ನ ತಪ್ಪು ಅರಿವಾಯಿತು ಅನ್ನ್ಸುತ್ತೆ  "ಸಾರಿ ಕಣಯ್ಯ  ಪರಿಸ್ಥಿತಿಯ  ಅರಿವಿಲ್ಲದೆ    ಏನೇನೋ ಪ್ರಶ್ನೆ ಕೇಳಿದೆ"   ಅಂತಾ  ಹೇಳಿ    ಅಲ್ಲಿಂದ ನಿರ್ಗಮಿಸಿದರು .   ನಾವು ಕೆಲವೊಮ್ಮೆ   ರೋಗಿಗಳನ್ನು ಕಾಣಲು ಹೋದಾಗ   ಮಾತನ್ನು  ಎಷ್ಟು ಮಿತವಾಗಿ  ಆಡಬೇಕು,  ಹಾಗು ಅವರ ಮನಸಿಗೆ ಘಾಸಿಯಾಗದಂತೆ  ನಡೆದುಕೊಳ್ಳಬೇಕು  ಎಂಬ   ವಿಚಾರ   ನನ್ನ ಅರಿವಿಗೆ  ವೈಜ್ಞಾನಿಕವಾಗಿ ಅರ್ಥ ಆಯ್ತು.





ಯಾವ ಜನ್ಮದ  ಮೈತ್ರಿ  ಈ ಹುಡುಗನಿಗೆ ಹಾಗು ನನಗೆ 



ಹೀಗೆ   ಕೆಲವು  ತಿಂಗಳು ಕಳೆದವು   ದೇಹಕ್ಕೆ ಚೈತನ್ಯ   ಬರಲು ಶುರು ಆಯ್ತು,  ಮನಸಿನಲ್ಲಿ  ನನ್ನ ಪ್ರಾಣ ಉಳಿಸಿದ   ಜಗದೀಶ್, ಹಾಗು ವೈಧ್ಯರನ್ನು ಕಾಣುವ ಬಯಕೆ  ಜಾಸ್ತಿಯಾಯ್ತು,  ಸರಿ ಒಂದು ದಿನ  ನನ್ನ  ಹುಡುಗನ ಕಾರಿನಲ್ಲಿ  ಚನ್ನರಾಯಪಟ್ಟಣಕ್ಕೆ  ಹೊರಟೇಬಿಟ್ಟೆ,  ಜಗದೀಶ್  ಸಿಕ್ಕೆಬಿಟ್ಟರು  ಆನಂದಕ್ಕೆ ಪಾರವಿಲ್ಲ,  ಕೃತಜ್ಞತೆ  ತುಂಬಿದ ಮನ  ಆ ತಮ್ಮನಂತಹ  ಹುಡುಗನನ್ನು ತಬ್ಬಿಕೊಳ್ಳಲು  ಹಾತೊರೆಯುತ್ತಿತ್ತು ,  ಜೀವ ಉಳಿಸಿದ  ವ್ಯಕ್ತಿಯನ್ನು ಕಣ್ಣಾರೆ ಕಾಣುವ ಭಾಗ್ಯ  ಒದಗಿ  ಬಂದಿತ್ತು,  ಗೌರವ ಹಾಗು ಪ್ರೀತಿಯಿಂದ ಅಪ್ಪಿಕೊಂಡೆ ,  ಮಾತುಗಳು  ಹೊರಬರಲು ತಿಣುಕಾಡಿದವು ,  ಬಹಳ ಆತ್ಮೀಯವಾಗಿ  ಮಾತನಾಡಿ   ಜಗದೀಶ್  ನಿಮ್ಮ ಈ ಉಪಕಾರಕ್ಕೆ   ಬೆಲೆ ಕಟ್ಟಲಾರೆ   ಎಂದು ಹೇಳುತ್ತಾ   ಸಿಹಿ  ತಿಂಡಿಯ  ಪೊಟ್ಟಣ  ನೀಡಿದೆ,  ಆ ಹುಡುಗನಿಗೂ   ಖುಷಿಯಾಗಿತ್ತು,  ಅಪಘಾತದ    ವಿವರ  ತಿಳಿಸುವಂತೆ  ಕೋರಿದೆ,  ಬನ್ನಿ ಸಾರ್  ಅಂತಾ ಹೇಳಿ ನನಗೆ ಅಪಘಾತ   ಆದ  ವಿವರ   ನೀಡುತ್ತಾ   ಇದೆ ನೋಡಿ ಸಾರ್  ನಿಮಗೆ  ಆಕ್ಸಿಡೆಂಟ್  ಆದ ಜಾಗ  ಅನ್ನುತ್ತಾ    ಜಾಗ ತೋರಿಸಿದರು ,




ಅಪಘಾತ  ಆದ ಸ್ಥಳ 


  ರಾಷ್ಟ್ರೀಯ ಹೆದ್ದಾರಿಯಲ್ಲಿ   ನನಗೆ ಅಪಘಾತ ನಡೆದಿತ್ತು,  ಅಂದು ಪುಣ್ಯಕ್ಕೆ  ಯಾವುದೇ  ಹೆಚ್ಚಿನ  ವಾಹನ ಸಂಚಾರ ಇರಲಿಲ್ಲ, ಇಲ್ಲಿಂದಾನೆ ಸಾರ್    ಆಪೆ ಆಟೋದಲ್ಲಿ  ಹಾಕಿಕೊಂಡು  ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು , ಅಂದರು ,  "ಜಗದೀಶ್  ನನಗೆ  ಟ್ರೀಟ್ಮೆಂಟ್  ನೀಡಿದ ಡಾಕ್ಟರ್  ಸಿಗುತ್ತಾರ...?" ಅಂದೇ , ಅದಕ್ಕೇನಂತೆ  ಬನ್ನಿ ಹೋಗೋಣ ಅಂತಾ  ಹೇಳಿ    ಸರ್ಕಾರಿ ಆಸ್ಪತ್ರೆಗೆ    ಕರೆದುಕೊಂಡು   ಹೋದರು,  ನನಗೆ ಪ್ರಾಥಮಿಕ  ಚಿಕಿತ್ಸೆ ನೀಡಿ,  ಮುಖದಲ್ಲಿ  ಮೂರು ಕಡೆ ಹೋಳಿಗೆ ಹಾಕಿ ರಕ್ತಸ್ರಾವ  ನಿಲ್ಲಲು  ಕಾರಣರಾಗಿದ್ದ ವೈಧ್ಯರು ಇವರು ,  ಕೊನೆಗೆ ಅವರನ್ನು  ಹುಡುಕಿ,  ಭೇಟಿಮಾಡಿದೆವು, ,





ಚಿಕಿತ್ಸೆ  ನೀಡಿ ಪ್ರಾಣ ಉಳಿಸಿದ  ಸರ್ಕಾರಿ ವೈಧ್ಯರಾದ   ಶ್ರೀನಿವಾಸ್  ಅವರು 



ಯಾರು ನೀವು ಅಂದರು  ಆ ವೈಧ್ಯರು ...?  ಅಪಘಾತದ   ನೆನಪನ್ನು ಹೇಳಿದಾಗ   ಓ   ಗೊತ್ತಾಯ್ತು ಗೊತ್ತಾಯ್ತು  ಎಂದು ಹೇಳಿ  ಅಂದಿನ ಘಟನೆಯನ್ನು   ಸ್ಮರಿಸಿಕೊಂಡರು . ಅವರಿಗೆ ಕೃತಜ್ಞತೆ  ಅರ್ಪಿಸಿ  ಸಿಹಿಯ ಪ್ಯಾಕೆಟ್   ನೀಡಲು , ಅವರಿಗೆ ಅಚ್ಚರಿಯಾಯ್ತು,  ಅಲ್ಲಾ ಸಾರ್ ನನ್ನ ಕರ್ತವ್ಯ ನಾನು ಮಾಡಿದೆ ಅಷ್ಟೇ  ಅಂದರು.  ಮುಂದುವರೆದು,  ಇಲ್ಲಿ ಅಪಘಾತ ಆಗ್ತಾ  ಇರುತ್ತೆ   ನೂರಾರು ಜನರಿಗೆ ತುರ್ತು  ಚಿಕಿತ್ಸೆ  ನೀಡಿದ್ದೇನೆ ,  ಚಿಕಿತ್ಸೆ  ಪಡೆದವರು  ಒಮ್ಮೆ ಹೋದರೆ ಮತ್ತೆ ಬರುವುದಿಲ್ಲ,  ಅದನ್ನು ನಾವು ನಿರೀಕ್ಷೆನೂ  ಮಾಡೋದಿಲ್ಲ , ಆದರೆ ನನಗೆ ಅಚ್ಚರಿ ಅಂದ್ರೆ  ಅಪಘಾತದ ಬಗ್ಗೆ  ಚಿಕಿತ್ಸೆ ಪಡೆದು   ನಂತರ  ಬಂದು  ನನಗೆ ಕೃತಜ್ಞತೆ  ಹೇಳಿದ ಮೊದಲನೇ  ವ್ಯಕ್ತಿ ನೀವು,  ನನ್ನ  ಹುದ್ದೆಯ ಬಗ್ಗೆ ಹೆಮ್ಮೆ ಪಡುವಂತೆ  ಮಾಡಿದ್ರೀ  ಅನ್ನುತ್ತಾ ಪ್ರೀತಿಯ  ಮಾತನಾಡಿದರು. ಅವರಿಂದ  ಬೀಳ್ಕೊಂಡು  ಜಗದೀಶ್  ಜೊತೆ ಚನ್ನರಾಯಪಟ್ಟಣದಲ್ಲಿ   ಊಟ ಮಾಡಿ  , ವಾಪಸ್ಸು  ಹೊರಡುವ ಮೊದಲು . ಜಗದೀಶ್  ನನ್ನ ಚಿಕಿತ್ಸೆಗೆ   ನೀವು ಖರ್ಚು   ಮಾಡಿದ ಹಣ   ಎಷ್ಟು   ಹೇಳಿ ದಯವಿಟ್ಟು ಅಂದೇ .  ಆದರೆ ಆ ಹುಡುಗ   ಏ  ಎನ್ ಸಾರ್ ನನಗೆ   ದುಡ್ಡುಕೊಟ್ಟು   ಅವಮಾನ ಮಾಡ್ತೀರ  ಅನ್ದುಬಿಡೋದೇ , ನನಗೆ ದಿಕ್ಕು ತೋಚಲಿಲ್ಲ .   ಅವರಿಗೆ ಮತ್ತೊಮ್ಮೆ   ಕೃತಜ್ಞತೆ  ಹೇಳಿ ಮನೆಯ ಹಾದಿ ಹಿಡಿದೇ ,  ದಾರಿಯಲ್ಲಿ   ಹಲವಾರು ಪ್ರಶ್ನೆಗಳು  ಕಾಡತೊಡಗಿದವು. ೧]  ಈ ಹುಡುಗ ಯಾರು,     ೨] ನನ್ನನ್ನು ಉಳಿಸ ಬೇಕು  ಅಂತಾ  ಇವನಿಗೆ  ಯಾಕೆ ಅನ್ನಿಸಿತು, ೩ ] ಈ ಹುಡುಗ ನನ್ನ ನೆಂಟನಲ್ಲ, ಒಡ ಹುಟ್ಟಿದವನಲ್ಲಾ  ಆದರೂ  ಈ ತರಹದ ಪ್ರೀತಿ ಯಾಕೆ ಬಂತು ..?  ನನ್ನಿಂದ   ತಾನು ಖರ್ಚು ಮಾಡಿದ  ಹಣವನ್ನೂ  ಸಹ  ತೆಗೆದುಕೊಳ್ಳಲಿಲ್ಲ   ಯಾಕೆ ..?   ಆ ಸರ್ಕಾರಿ ವೈಧ್ಯರೇಕೆ  ಅಷ್ಟು  ಉತ್ತಮವಾಗಿ  ಪ್ರಥಮ  ಚಿಕಿತ್ಸೆ ನೀಡಿದರು ...?   ಈ  ಅಪರಿಚಿತನಿಗೆ   ಈ ಊರಿನಲ್ಲಿ  ಎಷ್ಟೆಲ್ಲಾ   ಉಪಕಾರ  ಸಿಗಲು  ಹೇಗೆ ಸಾಧ್ಯಾ ...?  ಯಾರ ಶುಭ ಹಾರೈಕೆ  ನನ್ನನ್ನು ಬದುಕಿಸಿತು, ..? ಹೀಗೆ   ಪ್ರಶ್ನೆಗಳ ಪ್ರವಾಹ ಬಂದವು , ಯಾವುದಕ್ಕೂ   ನನ್ನ ಬಳಿ  ಉತ್ತರವಿರಲಿಲ್ಲ,   ಹಾಗೆ ಆಲೋಚಿಸುತ್ತಾ   ನಿದ್ದೆಗೆ ಜಾರಿದೆ,   ಸಾರ್ ಮನೆ ಬಂತು ಇಳಿಯಿರಿ  ಅಂದಾ ನಮ್ಮ ಹುಡುಗ ನವೀನ.