Sunday, June 3, 2018

"ಇತಿಹಾಸದ ಮಡಿಲಲ್ಲಿ ಹೀಗೊಂದು ಪ್ರವಾಸ " ....2 ಶಿರಸಿಯಲ್ಲಿ ಸ್ವಲ್ಪ ಸುತ್ತಾಟ ನಂತರ ಇತಿಹಾಸ ಸಮ್ಮೇಳನಕ್ಕೆ ಓಟ ..!


 ಶಿರಸಿಯ  ಒಂದು  ನೆಚ್ಚಿನ   ವಸತಿ  ಗೃಹ  



ನಮಸ್ಕಾರ ಸುಮಾರು   ಏಳು   ತಿಂಗಳ ನಂತರ  ಬಂದಿದ್ದೇನೆ  ಕ್ಷಮಿಸಿ,  ಅಲ್ಲಾ  2017 ರ ಅಕ್ಟೊಬರ್  13 ರಂದು   ಮೊದಲ ಪ್ರವಾಸದ ಕಂತು ಬರೆದು ಬರ್ತೀನಿ  ಕಾಯ್ತಾ ಇರೀ ಅಂತಾ ಹೋದೋನು  , ಪತ್ತೇನೆ ಇಲ್ವಲ್ಲಾ  ...? ಸ್ವಲ್ಪನಾದರೂ   ಜ್ಞಾನ ಬೇಡ್ವಾ  ಅಂತಾ  ಬಯ್ಕೊಂಡಿರ್ತೀರಿ ಅಂತಾ  ಗೊತ್ತು, ನಿಜಾ  ನನ್ನ ವೈಯಕ್ತಿಕ ಬದುಕಿನ  ಪಯಣದ ಅಡಚಣೆಗಳು,  ಜೊತೆಗೆ ಪ್ರವಾಸ ಕಾಲದಲ್ಲಿ ತೆಗೆದಿದ್ದ  ಸುಮಾರು ಎಂಟು ಜಿ. ಬಿ . ಯಷ್ಟು  ಚಿತ್ರಗಳಿದ್ದ   ಮೆಮೊರಿ ಕಾರ್ಡ್  ಕಳುವಾಗಿ  ನನ್ನ ಬರಹದ ದಿಕ್ಕನ್ನೇ ಬದಲಾಯಿಸಿ ಬಿಟ್ಟವು.   ಇಷ್ಟರ ಜೊತೆಗೆ   ನನ್ನ ಸೋಮಾರಿತನ   ಸಹ   ಸೇರಿಕೊಂಡು  ವಿಳಂಭ   ಆಯ್ತು. ಇರಲಿ ಇದೆಲ್ಲಾ  ಇದ್ದದ್ದೇ  ಬನ್ನಿ ಪಯಣ ಮುಂದುವರೆಸೋಣ. ಮೊದಲ  ಕಂತಿನ  ಲಿಂಕ್ ಇಲ್ಲಿದೆ "ಇತಿಹಾಸದ ಮಡಿಲಲ್ಲಿ ಹೀಗೊಂದು ಪ್ರವಾಸ " ....1 ಬನ್ನಿ ಹೋಗೋಣ ಶಿರಸಿಯತ್ತ ....!


ನಿಮಗೆ ಗೊತ್ತು ಮೊದಲದಿನ  ಮೈಸೂರಿನಿಂದ  ಬೆಂಗಳೂರು ಮಾರ್ಗವಾಗಿ  ಶಿರಸಿ ತಲುಪಿದ  ಪಯಣದ ಬಗ್ಗೆ,  ಕಾರ್ ಟೈಯರ್  ಪಂಚರ್  ಆಗಿ ಶಿರಸಿಯಲ್ಲಿ  ಉಳಿದದ್ದು  , ನಂತರ   ?  ಎರಡನೇ ದಿನಕ್ಕೆ ಹೋಗೋಣ ಬನ್ನಿ, ಧಣಿದಿದ್ದ  ದೇಹಗಳು ವಿಶ್ರಾಂತಿ  ಪಡೆದು ಉಲ್ಲಾಸದಿಂದ  ಸೊಂದೆಯ ಇತಿಹಾಸ ಸಮ್ಮೇಳನಕ್ಕೆ  ತೆರಳಲು  ಸಿದ್ದವಾದವು, ಅಂದು ಶನಿವಾರ .


ಶಿರಸಿಯ  ಹೆಮ್ಮೆ  ಮಾರಿಕಾಂಬಾ ದೇವಾಲಯ. 


ಮುಂಜಾನೆ ಎದ್ದು  ಸರ ಸರನೆ  ಸಿದ್ದವಾಗಿ , ಬೆಳಗಿನ ಉಪಹಾರ ಮುಗಿಸಿ, ಶಿರಸಿಯ  ಆದಿದೇವತೆ     ಮಾರಿಕಾಂಬೆಯಾ ದರ್ಶನ ಪಡೆದೆವು,  ಶಿರಸಿ  ಪರಿಚಯದ  ಬಗ್ಗೆ  ಈಗಾಗಲೇ ನನ್ನ ಬ್ಲಾಗಿನ ಹಿಂದಿನ ಸಂಚಿಕೆಯಲ್ಲಿ ಬರೆದಿರುವ ಕಾರಣ  ಲಿಂಕ್    ೧]  ಸಿರ್ಸಿಯ[ ಶಿರಸಿಯ ] ಒಡಲಲ್ಲಿ ನಾನು..   ೨}ಶ್ರೀ ಮಾರಿಕಾಂಬಾ ಪ್ರಸೀದತು ....!!! ೩ ] ಶಿರಸಿಯವರೇ ನಿಮ್ಮ ಊರಿನ ಬಗ್ಗೆ ಹೆಮ್ಮೆ ಪಡಿ .  ಗಳಲ್ಲಿ  ಬರೆದಿರುವ ಕಾರಣ, ಮತ್ತೊಮ್ಮೆಅದನ್ನೇ ಬರೆದು  ನಿಮ್ಮನ್ನು  ಬೇಸರಗೊಳಿಸಲಾರೆ.  ಜೊತೆಗೆ   ಇದ್ದ  ದೇವಾಲಯಗಳ  ,ದರ್ಶನ ಮಾಡಿ  ಇತಿಹಾಸ ಸಮ್ಮೇಳನದತ್ತ  ಹೊರಟೆವು.   ಮಾರಿಕಾಂಬಾ ದೇವಾಲಯದಿಂದ  ಸೋಂದಾ  ಜೈನ ಮಠಕ್ಕೆ ತೆರಳಲು  ಗೂಗಲ್  ಮ್ಯಾಪ್  ಸಹಾಯ  ಕೇಳಿದ್ದೆ ಬಂತು , ಅದು ನಮ್ಮನ್ನು  ದಿಕ್ಕು ತಪ್ಪಿಸಿ  ಅಲ್ಲಲ್ಲೇ  ಸುತ್ತಾಡ ತೊಡಗಿಸಿತು, ಇದರ ಮನೆ ಕಾಯ ಅಂತಾ  ಬೈದುಕೊಂಡು  ಹೊಟ್ಟೆ  ಸೇರಿಕೊಂಡಿದ್ದ  ಮುಂಜಾವಿನ  ಉಪಹಾರದ ಪ್ರಭಾವವೋ  ಅನ್ನುವಂತೆ   ಜಡ್ಡುಗಟ್ಟಿದ್ದ  ನಮ್ಮ ಬುದ್ದಿಯನ್ನು  ಸ್ವಲ್ಪ  ಹಾದಿಗೆ ತಂದು  ಅಲ್ಲಿ ಇಲ್ಲಿ ಜನರನ್ನು ಕೇಳಿ ಸರಿಯಾದ ಹಾದಿಯಲ್ಲಿ ಸಾಗಿ  ಇತಿಹಾಸ ಸಮ್ಮೇಳನ  ನಡೆಯುವ   ಜಾಗವನ್ನು ತಲುಪಿದೆವು. ಅದೇ   ಐತಿಹಾಸಿಕ   ಸ್ವಾದಿ ಜೈನ  ಕ್ಷೇತ್ರ .





ಶಿರಸಿಯ  ಇತಿಹಾಸ ಸಮ್ಮೇಳನಕ್ಕೆ  ಸಜ್ಜಾಗಿ ನಿಂತಿತ್ತು  ಸ್ವಾದಿ ಕ್ಷೇತ್ರ. ಎಲ್ಲೆಲ್ಲೂ ಸಡಗರದ  ಜನರ ದರ್ಶನ ,  ಈ ಇತಿಹಾಸ ಸಮ್ಮೇಳನದ  ಹಿಂದೆ  ಒಬ್ಬ  ಅದ್ಭುತ ವ್ಯಕ್ತಿಯ  ಸಾಹಸ ಕಾಣುತ್ತಿತು   ಅವರೇ   ಶ್ರೀಯುತ  ಲಕ್ಷ್ಮೀಶ್  ಹೆಗ್ಡೆ ಸೋಂದ ಅವರನ್ನು ನಾನು  ಉತ್ತರಕನ್ನಡದ  ಬೆಂಜಮಿನ್ ರೈಸ್  ಎಂದು ಕರೆಯುತ್ತೇನೆ. ಇವರಿಗೆ ಇತಿಹಾಸವೆಂದರೆ  ಬಹಳ ಪ್ರೀತಿ, ಅವರ ಪರಿಚಯ ಈ ಹಿಂದೆ ನನ್ನ ಬ್ಲಾಗಿನಲ್ಲಿ ಮಾಡಿದ್ದೇನೆ  ಅದರ ಲಿಂಕ್   ಇಲ್ಲಿದೆ "ಶಿರಸಿಯಲ್ಲೊಬ್ಬ ಆಧುನಿಕ ಬಿ.ಎಲ್. ರೈಸ್..................! ಸದ್ದಿಲ್ಲದೇ ಇತಿಹಾಸದ ಬೆನ್ನು ಹತ್ತಿದ ಸಾಹಸಿ."  ಇಂತಹ  ವ್ಯಕ್ತಿತ್ವದ  ಲಕ್ಷ್ಮೀಶ್  ಹೆಗ್ಡೆ ಸೋಂದ ರವರು  ತಮ್ಮ ಇತಿಹಾಸದ  ಪ್ರೀತಿಯನ್ನು ಶಿರಸಿ ತಾಲೂಕಿನ ಹಲವಾರು ಮಹನೀಯರಿಗೆ  ಹಂಚಿರುವ ಕಾರಣ   ಇಂದಿಲ್ಲಿ  ಕಳೆದ  ಮೂರು ನಾಲ್ಕು ವರ್ಷಗಳಿಂದ  ಶಿರಸಿ ಇತಿಹಾಸ ಸಮ್ಮೇಳನ  ರಾಜ್ಯ ಮಟ್ಟದಲ್ಲಿ  ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ.  ಪ್ರತೀ ಇತಿಹಾಸ ಸಮ್ಮೇಳನದಲ್ಲಿ  ಬಹಳಷ್ಟು ಜನರು   ಇದು ತಮ್ಮದೇ ಮನೆಯ ಹೆಮ್ಮೆಯ ಹಬ್ಬ ಅನ್ನುವಂತೆ ಪಾಲ್ಗೊಂಡು  ಇತಿಹಾಸಕ್ಕೆ ತಮ್ಮ ಕಾಣಿಕೆ ಸಮರ್ಪಣೆ ಮಾಡುತ್ತಿದ್ದಾರೆ.  ಅಂದೂ ಸಹ   ಸೋಂದೆ ಸುತ್ತ ಮುತ್ತಲಿನ   ಮನೆಗಳಲ್ಲಿ  ಇತಿಹಾಸದ  ದೀಪಗಳು  ಬೆಳಗುತ್ತಿದ್ದವು,  ಇತಿಹಾಸ ಪ್ರಿಯರನ್ನು   ಆತ್ಮೀಯವಾಗಿ ಸ್ವಾಗತಿಸುತ್ತಿದ್ದವು.


ಸ್ವಾದಿ ಜೈನ ಸಂಸ್ಥಾನದ ಸ್ವಸ್ತಿ ಶ್ರೀ ಭಟ್ಟಾಕಲಂಕ  ಪಟ್ಟಾಚಾರ್ಯವರ್ಯರು    ಸಮ್ಮೇಳನದ  ಆಹ್ವಾನ ಪತ್ರಿಕೆ  ಬಿಡುಗಡೆ ಮಾಡಿದ  ಸಂದರ್ಭ 


ಇತಿಹಾಸ ಸಮ್ಮೇಳನ ನಡೆಯುವ  ಸ್ವಾದಿ ಬಗ್ಗೆ ಸ್ವಲ್ಪ  ತಿಳಿಯೋಣ  ಬನ್ನಿ  ಸ್ವಾದಿ  ನೆಲದಲ್ಲಿ  ಜೈನ ಪರಂಪರೆ ಸುಮಾರು   2  ಅಥವಾ 3 ನೆ ಶತಮಾನದಿಂದ ಅಸ್ತಿತ್ವ ಕಂಡಿದೆ. ಪ್ರಶಾಂತವಾದ  ಈ ಪರಿಸರದಲ್ಲಿ  ಶಾಲ್ಮಲೆಯ ಒಡಲಿನಲ್ಲಿ  ತಪಸ್ಸು ಮಾಡಲು  ಜೈನ ಮುನಿಗಳು  ಇಲ್ಲಿಗೆ  ಆಗಮಿಸಿದ್ದಾರೆ. ಕಾಲಾನಂತರ  ಇಲ್ಲಿ  ಜೈನ  ಸಂಸ್ಥಾನ ಮಠ  ಅಸ್ತಿತ್ವಕ್ಕೆ ಬಂದಿದೆ .  ಈ  ಮಠವನ್ನು ಭಟ್ಟಾ ಕಲಂಕಮಠ  ವೆಂದು ಕರೆಯಲಾಗುತ್ತಿದೆ. ಇಲ್ಲಿ  ಎಂಟನೆ   ತೀರ್ಥಂಕರ ರಾದ ಚಂದ್ರಪ್ರಭ ರ ಬಸ್ತಿ ಇದೆ.   ಇಲ್ಲಿ ದೊರೆತಿರುವ ತಾಮ್ರ ಶಾಸನಗಳು   "ಸ್ವಾದಿ ಭಟ್ಟಾ ಕಲಂಕಮಠ" ಪ್ರಾಚೀನ  ಸಾಲಿಗೆ  ಸೇರಿದ್ದಾಗಿ  ಮಾಹಿತಿ ನೀಡಿವೆ.    ಸನಿಹದ ಅರಣ್ಯ ಪ್ರದೇಶದಲ್ಲಿ 1655   ರ ಒಂದು   ನಿಶಿದಿ  ಕಲ್ಲು ದೊರೆತಿದ್ದು  ಅದರಲ್ಲಿ ನ ಶಾಸನದಲ್ಲಿ "ಅಕಳಂಕದೇವ"  ಎಂಬ ಉಲ್ಲೇಖ  ಕಂಡು ಬಂದಿದೆ. ಈ ಪ್ರದೇಶದಲ್ಲಿ  ಕನ್ನಡ ವ್ಯಾಕರಣ  ಪಾಂಡಿತ್ಯ  ಪಡೆದಿದ್ದ  ಜೈನ  "ಪಂಡಿತ ಭಟ್ಟಾಕಳಂಕ" ರು  ಸಾಧನೆ ಮಾಡಿದ ಪ್ರದೇಶ ಈ ಸ್ವಾದಿ .   ಇಲ್ಲಿ   ಹಲವಾರು ಶಾಸನಗಳು  ಕಂಡು ಬಂದಿದ್ದು ಅವುಗಳ  ಕೆಲವು ಮಾಹಿತಿಯನ್ನು  ಬ್ರಿಟೀಶ್ ಅಧಿಕಾರಿಗಳು   ಕಲ್ಕತ್ತಾ ಗೆ ಕಳುಹಿಸಿದ್ದಾಗಿ   ಡಾಕ್ಟರ್  ಫ್ರಾನ್ಸಿಸ್ ಬುಕನನ್   ತನ್ನ ಪ್ರವಾಸದ  ವರದಿಯಲ್ಲಿ ದಾಖಲೆ ಮಾಡಿದ್ದಾರೆ. ಈ  ಸ್ಥಳ   ದಿಗಂಬರ  ಜೈನರು  ಹಾಗು ಶ್ವೇತಾಂಬರ ಜೈನರು ಇಬ್ಬರಿಗೂ  ಪುಣ್ಯ ಕ್ಷೇತ್ರವಾಗಿದೆ.  ಹಾಲಿ ಸ್ವಾದಿ ಜೈನ ಸಂಸ್ಥಾನದ ಸ್ವಸ್ತಿ ಶ್ರೀ ಭಟ್ಟಾಕಲಂಕ  ಪಟ್ಟಾಚಾರ್ಯವರ್ಯರು  ಈ ಪ್ರದೇಶವನ್ನು  ಅಭಿವೃದ್ಧಿ ಪಡಿಸಿ  ಕನ್ನಡ ನಾಡಿನ ಹೆಮ್ಮೆಯ ಪ್ರದೇಶವನ್ನಾಗಿ ಮಾಡುತ್ತಿದ್ದಾರೆ. ಮೊದಲು ಬಹಳ ಶಿಥಿಲಾವಾಸ್ಥೆ ಯಲ್ಲಿದ್ದ  ಬಸ್ತಿಗಳು, ಪೂಜಾ ಸ್ಥಳಗಳು,  ಇಂದು  ದುರಸ್ಥಿ ಯಾಗಿ,  ಜೈನ ಪರಂಪರೆಯನ್ನು ಮೆರೆಸುತ್ತಿವೆ. 




 ಪುರಾತನ ಗಜಕೆಸರಿ  ಪೀಠ



"ಸ್ವಾದಿ ಭಟ್ಟಾ ಕಲಂಕಮಠ" ದಲ್ಲಿ   ಪುರಾತನವಾದ  ಗಜಕೆಸರಿ ಪೀಠ  ಇಲ್ಲಿನ  ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಇಂತಹ ಪ್ರದೇಶದಲ್ಲಿ   ಇತಿಹಾಸ ಸಮ್ಮೇಳನ  ನಡೆಸಲು  ಹುಮ್ಮಸ್ಸಿನಿಂದ  ತಯಾರಾಗಿದ್ದರು   ಶಿರಸಿಯ  ಇತಿಹಾಸ ಪ್ರಿಯ  ಮಹನೀಯರುಗಳು, ಇವರಿಗೆ  ಬೆನ್ನೆಲುಬಾಗಿ ನಿಂತವರು  "ಸ್ವಾದಿ ಭಟ್ಟಾ ಕಲಂಕಮಠ",  "ಸೋಂದ  ಸ್ವರ್ಣವಲ್ಲಿ  ಮಹಾ ಸಂಸ್ಥಾನ ಮಠ" ಹಾಗು   "ಸೋಂದೆ ವಾಧಿರಾಜ ಮಠ" ದ ಮಹಾ ಸ್ವಾಮಿಗಳು. ನಿಜಾ ಎಲ್ಲೆಲ್ಲೂ  ತಮ್ಮ ಧರ್ಮವೇ  ದೊಡ್ಡದು  ಎನ್ನುವ ಮಾತುಬರುತ್ತಿರಲು, ಇಲ್ಲಿ ಮೂರು ಮಠಗಳ  ಗುರು ಶ್ರೇಷ್ಟರು  ಒಟ್ಟಿಗೆ  ನಿಂತು   ಪರಸ್ಪರ  ಗೌರವ,  ಪ್ರೀತಿ ವಿಶ್ವಾಸ  ತೋರುತ್ತಾ ,  ಇತಿಹಾಸ ಸಮ್ಮೇಳನಕ್ಕೆ   ಆಗಮಿಸಿದ  ಇತಿಹಾಸ ಪ್ರಿಯರಿಗೆ  ಎಲ್ಲಾ ರೀತಿಯ  ಸೌಕರ್ಯ  ನೀಡಿ ಎಲ್ಲರ ಮನದಲ್ಲಿ   ಹಸಿರಾಗಿ ನಿಂತರು, 



 ಜೈನ ಮಠದಲ್ಲಿರುವ ಅಪರೂಪದ  ಕಲಾಕೃತಿ. 



ಇಂತಹ   ಶುಭ  ವಾತಾವರಣದಲ್ಲಿ  ಇತಿಹಾಸ ಸಮ್ಮೇಳನ ತನ್ನ ಹಿರಿಮೆಯನ್ನು ಸಾರಲು ಹೊರಟಿತ್ತು.   ಶಿರಸಿ ತಾಲೂಕಿನ ಜನ  ಬಂದ   ಇತಿಹಾಸ ಪ್ರಿಯರಿಗೆ ನಗು ಮುಖದ ಸ್ವಾಗತ ನೀಡಿ  ಸತ್ಕಾರ ಮಾಡಲು ಅಣಿಯಾಗುತ್ತಿದ್ದರು. ಸಹೋದರಿ ರೇಖಾ ರಾಣಿ ಯೊಡನೆ ನಾನು   ಇತಿಹಾಸ ಸಮ್ಮೇಳನ  ನಡೆಯುವ ಪುಣ್ಯ  ಸ್ಥಳಕ್ಕೆ  ಆಗಮಿಸಿದ್ದೆ.   ನೋಡಿದ್ರೆ ಹೆಚ್ಚು ಜನ ಕಾಣಿಸಲಿಲ್ಲ , ಅರೆ ಇದೇನು  ದೇವ್ರೇ ...!   ಈ ಪ್ರದೇಶಕ್ಕೆ  ಬಂದು ಇತಿಹಾಸ ಸಮ್ಮೇಳನ  ಮಾಡಲು ಹೊರಟಿದ್ದಾರಲ್ಲಾ ಇಲ್ಲಿಗೆ ಜನ ಬರ್ತಾರಾ ..?  ಎಷ್ಟುಜನಕ್ಕೆ  ಈ ಪ್ರದೇಶಕ್ಕೆ ಬರೋಕೆ ಗೊತ್ತಾಗುತ್ತೆ...? ನಮ್ಮ ಕೆಂಗೇರಿ ಚಕ್ರಪಾಣಿಯವರ ತಂಡ ಇನ್ನೂ ಯಾಕೆ ಬರಲಿಲ್ಲ ..?  ಛಾಯಾಚಿತ್ರ ಪ್ರದರ್ಶನ ಮಾಡಬೇಕು  ಹೆಗಪ್ಪಾ  ಮಾಡ್ತಾರೆ ..? ಎನ್ನುವ ಪ್ರಶ್ನೆಗಳ  ಚಕ್ರವ್ಯೂಹದಲ್ಲಿ  ಸಿಲುಕಿ  ಮಿಸುಕಾಡುತ್ತಿದ್ದೆ.  ದೂರದಲ್ಲೆಲ್ಲೋ  ಮಂತ್ರಗಳ ಘೋಷಣೆ ತೇಲಿಬರುತ್ತಿತ್ತು   ಆದರೆ   ಎಲ್ಲಕ್ಕೂ  ಉತ್ತರ   .....? 




{ಮುಂದಿನ ಸಂಚಿಕೆಯಲ್ಲಿ  ಭೇಟಿಯಾಗೋಣ. }
{ದಯವಿಟ್ಟು ಗಮನಿಸಿ.  ಈ  ಸಂಚಿಕೆಯಲ್ಲಿನ  ಲಿಂಕ್ ಗಳನ್ನು   ಓಪನ್ ಮಾಡಿ  ಅದರಲ್ಲಿನ  ಮಾಹಿತಿಯನ್ನು ಓದಿದರೆ  ಇಲ್ಲಿನ ಬರವಣಿಗೆ ನಿಮಗೆ   ಇನ್ನೂ ಹೆಚ್ಚು  ಪರಿಣಾಮಕಾರಿಯಾಗಿ  ಅರ್ಥವಾಗುತ್ತದೆ. }






Friday, October 13, 2017

"ಇತಿಹಾಸದ ಮಡಿಲಲ್ಲಿ ಹೀಗೊಂದು ಪ್ರವಾಸ " ....1 ಬನ್ನಿ ಹೋಗೋಣ ಶಿರಸಿಯತ್ತ ....!





ಶಿರಸಿಯ ಮಾರಿಕಾಂಬ ದೇಗುಲ 

ಅದ್ಯಾಕೋ ಗೊತ್ತಿಲ್ಲ  ಶಿರಸಿಗೂ ನನಗೂ  ಬಿಡಲಾರದ  ನಂಟು........!, ಬಾಲ್ಯದಿಂದಲೂ  ನನ್ನ ಕುಟುಂಬದ  ಹಲವರು   ಈ ಊರಿನಲ್ಲಿ  ನೆಲೆಸಿದ್ದರೂ  ಯಾವಾಗಲೋ ಅಪರೂಪಕ್ಕೆ ಒಮ್ಮೆ  ಬಂದು  ಹೋಗುತ್ತಿದ್ದೆ , ನಂತರ  ಹೆಮ್ಮೆಯ  ಬ್ಲಾಗಿಗರಾದ [ ಸಾಗರದಾಚೆಯ  ಇಂಚರ ]   ಗುರುಮೂರ್ತಿ ಹೆಗ್ಡೆ ಯವರ ಆಹ್ವಾನದ ಮೇರೆಗೆನಾಲ್ಕು ವರ್ಷಗಳ ಹಿಂದೆ   ಶಿರಸಿಗೆ ಮೂವತೈದು ವರ್ಷಗಳ ನಂತರ   ಭೇಟಿ  ಅಲ್ಲಿಂದ  ಬಿಡಲಾರದ ನಂಟು ಈ ಊರಿನ ಜೊತೆಗೆ. ಅಂತೆಯೇ  ಶಿರಸಿ ಇತಿಹಾಸದ ಖಣಜ  ಅಥವಾ   ಶಿರಸಿಯ  ಬೆಂಜಮಿನ್  ರೈಸ್   ಶ್ರೀ ಲಕ್ಷ್ಮೀಶ್ ಹೆಗ್ಡೆ  ಯವರ  ಪರಿಚಯ , ಆತ್ಮೀಯತೆ  ಬೆಳೆದು  ಇತಿಹಾಸದ ಬಗ್ಗೆ  ಇಬ್ಬರಿಗೂ ಇರುವ  ಸೆಳೆತ  ಗೆಳೆತನ ಮತ್ತಷ್ಟು  ಬಲವಾಯ್ತು.  ಹೀಗಿರಲು  ಕೆಲವು ವಾರಗಳ ಹಿಂದೆ  ಮೊಬೈಲ್  ಕರೆ ಮಾಡಿ   "ಬಾಲಣ್ಣ  ನಿಮ್ಮನ್ನು  ಅಂದ್ರೆ ನಿಮ್ಮ ಹೆಸರನ್ನು  ಸೋಂದೆ  ಇತಿಹಾಸ ಸಮ್ಮೇಳನದಲ್ಲಿ  ಒಂದು ಗೋಷ್ಠಿಯಲ್ಲಿ  ಭಾಗವಹಿಸಲು  ಹಾಕುತ್ತೇನೆ" ಅಂತಾ  ಹೇಳಿ  ಆಹ್ವಾನ ಪತ್ರಿಕೆಯಲ್ಲಿ   ನನ್ನ ಹೆಸರು ಹಾಕೆ ಬಿಟ್ರು , ಜೊತೆಗೆ  ನನ್ನ ಹೆಸರಿನ  ಜೊತೆಗೆ  "ಇತಿಹಾಸ  ಚಿಂತಕ " ಅನ್ನೋ  ಬಿರುದನ್ನೂ ಸಹ  ದಯಪಾಲಿಸಿ ಬಿಟ್ರೂ , ....ಎಷ್ಟೇ ಆದರೂ  ನರಮನ್ಷಾ  ಆಲ್ವಾ  ಮನಸು  ಜಂಬದಿಂದ  ಉಬ್ಬಿತು,    ಹೆಂಡ್ತೀ  ಹತ್ರಾ   ಜಂಬಾ  ಕೊಚ್ಚಿ ಕೊಳ್ಳೋಕೆ  ತಯಾರಾಗುತ್ತಿದ್ದೆ ,    ಆದ್ರೆ ಮತ್ತೊಂದು  ಯೋಚನೆ  ಈ ಉಬ್ಬುವಿಕೆಯನ್ನು ಪಂಚರ್  ಮಾಡಿಬಿಡ್ತೂ .....!  "ಅಲ್ಲಾ ಕಣೋ     ಮೂರ್ಖಶಿಖಾಮಣಿ    ಇತಿಹಾಸ ಚಿಂತಕ  ಅನ್ನೋ ಬಿರುದು ಹೊತ್ತು ಮೆರೆಯಬೇಡ   ಅತಿಯಾದ   ಜಂಭ  ಒಳ್ಳೆಯದಲ್ಲಾ , ಮೊದ್ಲು  ಮಾತನಾಡ ಬೇಕಾದ ವಿಚಾರದ  ಬಗ್ಗೆ  ಸಿದ್ದತೆ ಮಾಡಿಕೊ"  ಅಂದಿತು, ಹ್ಯಾಪ ಮೊರೆ ಹಾಕಿಕೊಂಡು   ಇತಿಹಾಸ ಸಮ್ಮೇಳನದಲ್ಲಿ  ನನಗೆ ಮೊದಲೇ ನಿಗದಿಪಡಿಸಿದ್ದ   "ಐತಿಹಾಸಿಕ  ಪ್ರವಾಸದಲ್ಲಿ ಯೋಚನೆ ಹಾಗು ಯೋಜನೆ"  ವಿಚಾರದ ಬಗ್ಗೆ  ನನ್ನ ಪ್ರಬಂಧ  ತಯಾರಿಗೆ ಪ್ರಾರಂಭಿಸಿದೆ. ಸೋಮಾರೀತನ, ಅಸಡ್ಡೆ , ಎಲ್ಲದರಿಂದ  ದಿನಗಳು  ಕಳೆದದ್ದು ಗೊತ್ತಾಗಲಿಲ್ಲ,   ಅಂತೂ ಇಂತೂ ಕೊನೆಗೂ  ನನ್ನ ಪ್ರಬಂಧ  ಸಿದ್ದವಾಯ್ತು . ಹೊರಡೋ ದಿನ ಬಂದು ಬಿಡ್ತು.

ಪ್ರೀತಿಯ ಸಹೋದರಿ ರೇಖಾ ರಾಣಿ 


"ಅಣ್ಣಾ  ನನಗೂ ಸ್ವಲ್ಪ  ಬದಲಾವಣೆ ಬೇಕೂ.....  ಸರಿಯಾಗಿ ಎಷ್ಟು ದಿನಾ ಪ್ರವಾಸ   ಅಂತಾ ಹೇಳಿ...?  ನನ್ನ ಕೆಲಸಗಳನ್ನು  ಮುಂದೂಡಿ  ನಾನೂ ಬರ್ತೇನೆ ," ಅಂತಾ ಬೆಂಗಳೂರಿಂದ  ಸಹೋದರಿ  ರೇಖಾ ರಾಣಿ  ನನ್ನ ಪ್ರೀತಿಯ  ಆಹ್ವಾನಕ್ಕೆ  ಒಪ್ಪಿದರು. ನನಗೋ  ಒಮ್ಮೆಲೇ ಖುಷಿ  ಮತ್ತೊಂದು ಕಡೆ ಸ್ವಲ್ಪ  ಆತಂಕ. ಕಳೆದ ಕೆಲವು ವರ್ಷಗಳಿಂದ  ಪುಟ್ಟ  ಜಗಳದಿಂದ  ಫೇಸ್ಬುಕ್ ನಲ್ಲಿ  ಪರಿಚಯವಾದ  ಅದ್ಭತ ಸಹೋದರಿ  ಇವರು.   ನಂತರ  ಒಂದೆರಡು ಸಾರಿ ಅವರ  ಭೇಟಿಮಾಡಿದ್ದೆ ,    ಪತ್ರಿಕಾರಂಗ [ ಲಂಕೇಶ್  ಬದುಕಿದ್ದಾಗ  ಲಂಕೇಶ್ ಪತ್ರಿಯಲ್ಲಿ  ವರದಿ ಹಾಗು   ಅಂಕಣ ಬರೆಯುತ್ತಾ ಇದ್ದರು ], ಚಲನಚಿತ್ರ ರಂಗ, ಕಿರುತೆರೆ  ಎಲ್ಲಾಕಡೆ  ಅಪಾರ ಸಾಧನೆ ಮಾಡಿದ   ಇವರನ್ನು  ಹೇಗಪ್ಪಾ  ಈ ಪ್ರವಾಸಕ್ಕೆ  ಕರೆದುಕೊಂಡು ಹೋಗೋದು ಅನ್ನೋ  ಆತಂಕವನ್ನು  ಅವರೇ  ದೂರ ಮಾಡಿ  "ಅಣ್ಣಾ ನನ್ನ ಬಗ್ಗೆ  ಏನು ಯೋಚನೆ ಮಾಡಬೇಡಿ " , "ನನಗೆ ಎಲ್ಲಾ ತರಹದ  ಪ್ರವಾಸದ   ಅನುಭವ ಆಗಿದೆ  ಅದಕ್ಕೆ   ಹೊಂದಿಕೊಳ್ಳುತ್ತೇನೆ"  "ನಾನು  ಪ್ರವಾಸಕ್ಕೆ  ಬರುತ್ತೇನೆ "  ಅಂದ ತಕ್ಷಣ  ನೆಮ್ಮದಿಯ  ಉಸಿರು ಬಿಟ್ಟೆ .   ಹೊರಡುವ ಹಿಂದಿನ ದಿನ  ಅಣ್ಣಾ  ನಾನು ರೆಡಿ  ಅಂತಾ   ಸಿದ್ದವಾಗೆ ಬಿಟ್ರೂ ...!


ಬೆಂಗಳೂರಿನ  ಮಳೆ  [ ಸಾಂದರ್ಬಿಕ ಚಿತ್ರ  ಗೂಗಲ್ ಕೃಪೆಯಿಂದ ] 



ಮೈಸೂರಿನ ಪ್ರೀತಿಯ  ತಮ್ಮ  ನವೀನನ ಕಾರಿನಲ್ಲಿ   ಜೈ ಅಂತಾ ಬೆಂಗಳೂರಿನತ್ತಾ  ಹೊರಟೇಬಿಟ್ಟೆ,   ಮದ್ದೂರಿನ ಸಮೀಪ ಇದ್ದಾಗ  "ಅಣ್ಣಾ ಮಳೆಯಿದೆ   ಹೇಗೆ ಬರ್ತೀರಾ ....? " ಅಂತಾ ಅಕ್ಕನಿಂದ  ಕರೆ ,  ಅದಕ್ಕೆ  ಪರಿಹಾರವನ್ನೂ ಸಹ ಅವರೇ ಹೇಳಿ "ಅಣ್ಣಾ   ನೈಸ್  ರೋಡ್ನಲ್ಲಿ   ಬನ್ನಿ ಕನಕಪುರ  ಜಂಕ್ಷನ್  ನಲ್ಲಿ  ನಿಮಗೆ ಸಿಗ್ತೇನೆ"  ಅಂದರು .  ಸರಿಯೆಂದು  ಪಯಣ ಮುಂದು ವರೆಸಿದೆ,  ದಾರಿಯಲ್ಲಿ ಸಿಕ್ಕ  ಇಂದ್ರಪ್ರಸ್ಥ  ಹೋಟೆಲ್ ನಲ್ಲಿ    ಹೊಟ್ಟೆಗೆ ಉಪಹಾರ   ಸ್ವಾಹಾ  ಮಾಡಿಸಿ , ನೈಸ್  ರಸ್ತೆಯಲ್ಲಿ  ಹೇಳಿದ್ದ ಜಾಗದಲ್ಲಿ ನಿಂತೇ   ಸ್ವಲ್ಪ ಸಮಯದಲ್ಲೇ  ಸಹೋದರಿಯ  ಆಗಮನವಾಯ್ತು.  ಇತಿಹಾಸ  ದಿಬ್ಬಣದ  ಪಯಣ  ಆರಂಭವಾಯಿತು.    ಯಾವ ಮಾರ್ಗ   ಅನ್ನೋ ಚರ್ಚೆ ನಡೆದು ಅಂತಿಮವಾಗಿ  ಶಿವಮೊಗ್ಗ ಮೂಲಕ ಹೋಗುವ ತೀರ್ಮಾನವಾಯಿತು. ಈ ಹಂತದಲ್ಲೇ  ಪಯಣದಲ್ಲಿ ಒಮ್ಮತ ಮೂಡಿತು. ಬೆಂಗಳೂರಿನಿಂದ ನೆಲಮಂಗಲ, ತುಮಕೂರು ರಿಂಗ್ ರೋಡ್,  ಗುಬ್ಬಿ,  ತಿಪಟೂರು   ದಾಟಿ ಸ್ವಲ್ಪ ಮುಂದೆ  ಬಂದ್ವಿ ಅಷ್ಟೇ.......! 


ಕೈಬೀಸಿ ಕರೆದ ಕಾಫೀ ಡೇ{ ಸಾಂದರ್ಭಿಕ ಚಿತ್ರ  ಕೃಪೆ ಗೂಗಲ್ } 




 ಅರಸೀಕೆರೆ  ತಾಲೂಕಿನ  ಕಲ್ಲನಾಯಕನಹಳ್ಳಿಯಲ್ಲಿ   ಕೈ ಬೀಸಿ   ಕರೆಯಿತು   "ಕಾಫಿ  ಡೇ "  ಪ್ರೀತಿಯ ಅಕ್ಕ  ಮೊದಲ  ಟ್ರೀಟ್  ಕೊಡ್ಸೆ ಬಿಟ್ರೂ ಇಲ್ಲಿ , ಸ್ವಲ್ಪ ವಿಶ್ರಾಂತಿ ಪಡೆದು    ಅರಸೀಕೆರೆ  , ಕಡೂರು  ದಾಟಿ ಬೀರೂರು ಬಂದ ತಕ್ಷಣ  ಪ್ರೀತಿ ಟಿಫಾನಿಸ್  ನಲ್ಲಿ  ದೋಸೆ ತಿನ್ನೋ  ಆಸೆಯಾಗಿ  ಹೋಟೆಲ್ ಹತ್ತಿರ ಹೋದ್ರೆ   "ನೀವ್ ಬಂದ  ಹೊತ್ಗೆಲ್ಲಾ  ದೋಸೆ ಕೊಡೋಕೆ ಆಗಲ್ಲಾ  ಅಂತಾ   ಬೋರ್ಡು  ಸಮಯ ತೋರಿಸಿ  ಅಣಕಿಸಿ ನಕ್ಕಿತ್ತು ", ಪೆಚ್ಚು ಮೊರೆ ಹಾಕಿಕೊಂಡು    ಶಿವಮೊಗ್ಗದ   ಮೀನಾಕ್ಷಿ ಭವನ್  ನಲ್ಲಿ   ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದೆವು. ಪಯಣ ಸಾಗಿತು.ಜೊತೆಗೆ ಪ್ರೀತಿಯ ಸಹೋದರಿ  ರೇಖಾ ರಾಣಿ  ಪಯಣದ ಹಾದಿಯಲ್ಲಿ ಬೇಸರವಾಗದಂತೆ  ಹಲವು ವಿಚಾರಗಳನ್ನು  ಹೇಳುತ್ತಾ ಹೋದರು. ಆ ವಿಚಾರಗಳನ್ನು ವಿಶ್ಲೇಷಣೆ ಮಾಡುತ್ತಾ   ಇಡೀ ದಿನ ದಾರಿ ಸವೆದದ್ದು  ತಿಳಿಯಲಿಲ್ಲ,.




ಬೀರೂರು , ತರಿಕೆರೆ , ಭದ್ರಾವತಿ  ದಾಟಿ  ಶಿವಮೊಗ್ಗಕ್ಕೆ  ಬಂದಾಗ   ಮೀನಾಕ್ಷಿ  ಹೋಟೆಲ್   ಕೈ ಬೀಸಿ ಕರೆದಿತ್ತು. ಒಳಗಡೆ ಹೋಗಿ  ಕುಳಿತೊಡನೆ    ಅಲ್ಲಿದ್ದ    ಒಂದು ಫಲಕ  ಕಣ್ಸೆಳೆಯಿತು  "ನಾವು ಸೇವಿಸುವ ಆಹಾರ ಬೆಳೆವ ರೈತನಿಗೆ  ಧನ್ಯವಾದ  ಹೇಳೋಣ "  ಎಂಬ ಬರಹ   ನೋಡುತ್ತಾ   ಹಸಿವಿನಲ್ಲೂ   ರೈತನಿಗೆ  ಕೃತಜ್ಞತೆ  ಅರ್ಪಿಸಿದೆ. ಅಷ್ಟರಲ್ಲಿ  ಅಪವಾದವೆನ್ನುವಂತೆ   ಹೋಟೆಲ್  ಮಾಣಿ  ಮುಂದೆ ಬಂದು ನಿಂತರು  ಊಟಕ್ಕೆ  ಹೇಳಿ  ಕಾಯುತ್ತಾ ಕುಳಿತೆವು ಅಚ್ಚರಿ ಅಂದ್ರೆ  ಹೇಳಿದ ಕೆಲವೇ  ನಿಮಿಷಗಳಲ್ಲಿ  ಕಣ್ಣ ಮುಂದೆ ಊಟ  ಹಾಜರ್....!, ಬಹಳಷ್ಟು ಸಾರಿ ಈ  ಹಿಂದೆ   ಮೀನಾಕ್ಷಿ ಭವನ್  ಹೋಟೆಲ್ಗೆ  ಬಂದಾಗ  ಒಳಗೆ ಬಂದು ಕುಳಿತ  ಎಷ್ಟೋ ಹೊತ್ತಿಗೆ  ಮಾಣಿ ಬಂದು  ವಿಚಾರಿಸಿ, ನಮಗೆ ಕೊಡಬೇಕಾದ  ತಿಂಡಿ ಕೊಡಲು ಬಹಳ ತಡವಾಗುತ್ತಿತ್ತು, ಇದೆ ವಿಚಾರವನ್ನು  ನನ್ನ ಫೇಸ್ಬುಕ್ ನಲ್ಲಿಯೂ ಸಹ   ಹಿಂದೆ ಪ್ರಸ್ತಾಪ  ಮಾಡಿದ್ದೆ.  ಆದರೆ ಈ ಸಾರಿ   ಅದಕ್ಕೆ  ತದ್ವಿರುದ್ಧವಾಗಿ  ಬೇಗನೆ   ಆಹಾರ ನೀಡಿ  ಹಿಂದಿನ ನನ್ನ ಅನುಭವಗಳು ಸುಳ್ಳು ಅನ್ನೋಹಾಗೆ ಮಾಡಿಬಿಟ್ಟರು. ಊಟ ಮುಗಿಸಿ ಹೊರಗೆ ಬಂದು  ಸಾಗರದ ಕಡೆ ತೆರಳಲು ಸಿದ್ದವಾದೆವು,  ತಕ್ಷಣ  ನೆನಪಾದದ್ದು  ಪಪ್ಪಾಯಿ  ಖರೀದಿಸುವ  ವಿಚಾರ,  ಶಿರಸಿಯಲ್ಲಿರುವ  ನನ್ನ  ನೆಂಟಳಿಗೆ   ಪಪ್ಪಾಯಿ  ತಂದುಕೊಡುವುದಾಗಿ  ಮಾತುಕೊಟ್ಟು , ಕೆಲಸದ ಒತ್ತಡದಲ್ಲಿ  ಮರೆತಿದ್ದು  ಈಗ ಜ್ಞಾಪಕಕ್ಕೆ   ಬಂದಿತ್ತು,  ಸರಿ ಶಿವಮೊಗ್ಗ ಪಟ್ಟಣದ  ಕಾಲೇಜಿನ ಸಮೀಪ   ಒಂದು ಬದಿಯಲ್ಲಿ ಕಾರ್  ನಿಲ್ಲಿಸಿ ಮತ್ತೊಂದು ಬದಿಯಲ್ಲಿದ್ದ  ಪಪ್ಪಾಯಿ ಮಾರಾಟಗಾರನ  ಹತ್ತಿರ  ತೆರಳಿದೆ,  "ಆಹಾ ನಿಜಕ್ಕೂ ಶಿವಮೊಗ್ಗದ  ರಸ್ತೆಗಳನ್ನು  ದಾಟಲು ಭಾರೀ  ಧೈರ್ಯ  ಬೇಕೂ ಕಣ್ರೀ  ,"  ಡಬಲ್ ರಸ್ತೆ ಇದ್ದರೂ ಸಹ  ಹೆಚ್ಚಿನ  ದ್ವಿಚಕ್ರ ವಾಹನಗಳು  ಅಡ್ಡಾ ದಿಡ್ಡಿ ಯಾಗಿ   ಸಂಚಾರಿನಿಯಮಗಳನ್ನು ಅಪಹಾಸ್ಯ ಮಾಡುತ್ತಾ   ಬಿರುಸಿನಿಂದ ಓಡಾಡುತ್ತಿದ್ದವು, ಇದ್ದ ಒಂದಿಬ್ಬರು ಪೊಲೀಸರು  ಇವೆಲ್ಲವನ್ನೂ  ಅಸಹಾಯಕರಾಗಿ  ನೋಡುತ್ತಾ  ನಿಂತಿದ್ದರು. ರಸ್ತೆ ದಾಟುತ್ತಿದ್ದ ನನಗೆ   ಮತ್ತೊಮ್ಮೆ ಚನ್ನರಾಯಪಟ್ಟಣದಲ್ಲಿ ನನಗಾದ  ಅಪಘಾತದ  ನೆನಪು  ಮರುಕಳಿಸಿ  ಜೀವ ಕೈಯಲ್ಲಿ ಹಿಡಿದು  ರಸ್ತೆ ದಾಟಿದೆ, ಅಲ್ಲೇ ಇದ್ದ ಪಪ್ಪಾಯಿ ಮಾರಾಟಗಾರ   ಹೇಳಿದ ಬೆಲೆಗೆ  ಸ್ವಲ್ಪ  "ಬಹಳ ಖುಷಿಯಾಯ್ತು  ನಿಮ್ಮ  ವ್ಯಾಪಾರ  ಚೆನ್ನಾಗಿ ಆಗಲಿ ಅಂದೇ ಅಷ್ಟೇ ......!,  ಈ ಮಾತು ಕೇಳಿ ಅವನ ಮನಸಿನಲ್ಲಿ  ಏನನ್ನಿಸಿತೋ ಕಾಣೆ   " ಸಾರ್ ಬನ್ನಿ ಇಲ್ಲಿ ",  "ನಿಮ್ಮ ಪ್ರೀತಿ ನನಗೆ ಬಹಳ ಇಷ್ಟಾ ಆಯ್ತು,  ಸಾರ್"   ಅಂತಾ    ಹೇಳಿ   "ಸಾರ್  ಇನ್ನೊಂದು ತಗೋಳಿ"  ಅಂತಾ ಮೂರನೆಯ ಪಪ್ಪಾಯಿ ಹಣ್ಣು ಕೊಡಲು ಬಂದಾ ... "ಅಯ್ಯೋ ಬೇಡಪ್ಪಾ  ಜಾಗ ಇಲ್ಲಾ  ಇಷ್ಟೇ ಸಾಕು",  ಅಂದು  ಇನ್ನೇನು ಹೊರಡಲು ಅನುವಾದೆ, "ಸಾ ಈ ಸಾಬ್ರೂ  ಹಂಗೆಲ್ಲಾ  ನಿಮ್ಮನ್ನ     ಬಿಡೋದಿಲ್ಲಾ "  ಅಂತಾ ಹೇಳಿ  ಬೇಡಾ ಬೇಡಾ  ಅಂದ್ರೂ  ಹತ್ತು ರೂಪಾಯಿ ನೀಡಿ  "ನಿಮಗೂ ಒಳ್ಳೆದಾಗಲಿ"  ಅಂತಾ  ಹಾರಿಸಿದ  . ಮನಸು ತುಂಬಿ ಬಂತು.  ನಮ್ಮ ಪಯಣ ಸಾಗರದತ್ತ  ಸಾಗಿತು.


ತಾಳಗುಪ್ಪದ  ಶುಚಿಯಾದ ಒಂದು ಪುಟ್ಟ ಹೋಟೆಲ್ 


ಸಾಗರ ಬಂತಂದ್ರೆ  ನೆನಪಾಗೋದು ಜಿತೇಂದ್ರ ಹಿಂಡುಮನೆ ಸಾರ್, ಅವರನ್ನು  ಮಾತನಾಡಿಸಿ , ತಾಳಗುಪ್ಪ ಬರೋವಷ್ಟರಲ್ಲಿ  ಬಾಯಿ ಚಪಲ  ಏನಾದರೂ ಕುಡಿಯಬೇಕೂ  ಅನ್ನಿಸಿತು, ಅಲ್ಲೇ  ರಸ್ತೆಯಲ್ಲೇ  ವಾಹನ ನಿಲ್ಲಿಸಿ  ಹೋಟೆಲ್ ಶ್ರೀ ಗುರುಪ್ರಸಾದ್    ಗೆ ತೆರಳಿ   ಕಾಫಿ ಗೆ ಆರ್ಡರ್ ಮಾಡಿದ್ವಿ, ಸ್ವಲ್ಪ ಹೊತ್ತಿನಲ್ಲೇ  ಹೋಟೆಲ್  ಮಾಲೀಕರು ಕಾಫಿಯೊಂದಿಗೆ  ಪ್ರೀತಿಯನ್ನು ಬೆರೆಸಿ    ಬಿಸಿಯಾದ  ರುಚಿ ರುಚಿಯಾದ ಕಾಫಿ ನೀಡಿದರು, ಸ್ವಲ್ಪ ಹೊತ್ತು ಮಾತನಾಡಿ  ಜೊತೆಗೆ ಸ್ವಲ್ಪ ಕೀಟಲೆ ಮಾಡುತ್ತಾ  ಹೋಟೆಲ್  ಮಾಲಿಕರೊಂದಿಗೆ  ಹರಟೆ ಹೊಡೆದು  ಸಿದ್ದಾಪುರ  ದಾಟಿ   ದೇವಿಸರದತ್ತ   ಹೊರಟೆವು,  ಸಿದ್ದಾಪುರ ತಾಲೂಕಿನ  ದೇವಿಸರ   ಗ್ರಾಮ  ನನ್ನ ಪ್ರೀತಿಯ ಗೆಳೆಯರಾದ  ಪ್ರಕಾಶ್ ಹೆಗ್ಡೆ   ಹುಟ್ಟಿದ ಊರು,  ಅವರ ಅಣ್ಣ  ನಾಗೇಶ್ ಹೆಗ್ಡೆ  ನನಗೆ
ನಾಗೇಶಣ್ಣ , ನಮ್ಮಿಬ್ಬರಿಗೂ  ಪರಿಚಯವಾದ  ದಿನದಿಂದ  ಏನೂ ಒಂಥರಾ ಪರಸ್ಪರ  ತುಂಟಾಟ  ಮಾಡಿಕೊಳ್ಳುವುದು ವಾಡಿಕೆ , ಅಂತೆಯೇ   ಸಾಗುವ ಹಾದಿಯಲ್ಲಿನ  ಪರಿಸರ ನೋಡಿ ವಿಸ್ಮಯ ಗೊಂಡ ಸಹೋದರಿ ರೇಖಾ ರಾಣಿ   ಅಣ್ಣಾ   ಬಿಸಿಲು ಬಿದ್ದ  ಹಸಿರು ಗುಡ್ಡದ  ಫೋಟೋ ತೆಗೆಯಿರೀ  ಅಂತಾ  ಕೋರಿದರು, ಆದ್ರೆ ಕೈಯಲ್ಲಿ ಕ್ಯಾಮರ ಇಲ್ಲದೆ   ಪೆದ್ದುಪೆದ್ದಾಗಿ  ಅವರತ್ತಾ ನಗುತ್ತಾ  ಏನೂ  ವೇದಾಂತ ಹೇಳಿ ತಪ್ಪಿಸಿಕೊಂಡೆ.ಕೆಲವೊಮ್ಮೆ ಪೆದ್ದುತನವೂ ಅನುಕೂಲಕ್ಕೆ ಬರುತ್ತದೆ  ಅನ್ನೋ ಸತ್ಯದ ಅರಿವಾಯ್ತು.

ನಮ್ಮ ಪ್ರೀತಿಯ ನಾಗೆಶಣ್ಣನ  ತುಂಟಾಟ 



ಸಂಜೆಯ ಮಬ್ಬಿನಲ್ಲಿ    "ದೇವಿ ಸರ " ಗ್ರಾಮ ನಮ್ಮನ್ನು ಸ್ವಾಗತಿಸಿತು, ಊರಿಗೆ ಪ್ರವೇಶ ಮಾಡುತ್ತಿದ್ದಂತೆ   "ದೇವಿ ಸರದ  ವೇಣು ಗೋಪಾಲ"  ಮೂರ್ತಿಯನ್ನು ಕಾಣುವ ಬಯಕೆ ಆಗಿತ್ತು ಆದ್ರೆ  ಸಮಯದ ಅಭಾವ   ಅವಕಾಶ ಕೊಡಲಿಲ್ಲ,  ಪ್ರಕಾಶ್ ಹೆಗ್ಡೆ ಮನೆಗೆ ಅಧಿಕಾರಯುತವಾಗಿ  "ಯಾರಿದ್ದೀರ ....?  ಒಳಗೆ " ಅನ್ನುತ್ತಾ   ನುಗ್ಗಿದೆ,   "ಬಾಲಣ್ಣ.......  ಆರಾಮ"  ಅಂತಾ  ಹೊರಗೆ ಬಂದ್ರು  ಅನ್ನಪೂರ್ಣೆಶ್ವರಿ  ಅನಿತಾ ಅತ್ತಿಗೆ,  ಸ್ವಲ್ಪ ಹೊತ್ತಿಗೆ   ನಾಗೇಶಣ್ಣ  ಸಹ ಬಂದು ಜೊತೆಗೂಡಿದರು,  ಒಂದಷ್ಟು  ತಿಂಡಿಯ  ಸಮಾರಾಧನೆ  ಸಂಕೊಚ ಬಿಟ್ಟು ತಿಂದು  ನಾವೆಲ್ಲಾ  ಮನೆಯವರಂತೆ  ಆಗಿಬಿಟ್ಟೆವು, ನಾಗೇಶಣ್ಣ ತನ್ನ  ಅಪಘಾತದ ಕಥೆ, ಅವರು ಅನುಭವಿಸಿದ ನೋವು , ತೆಗೆದುಕೊಂಡ  ಔಷಧಿ , ಚಿಕಿತ್ಸೆ  , ಎಲ್ಲವನ್ನೂ   ಹಾಸ್ಯವಾಗಿ   ಹೇಳುತ್ತಿದ್ದರೂ ಸಹ ಮನದಲ್ಲಿ  ನೋವಾಗುತ್ತಿತ್ತು.  "ದೇವ್ರೇ  ಇವರಿಗೆ ಒಳ್ಳೆ ಆರೋಗ್ಯ  ಕೊಡಪ್ಪಾ  ಅಂತಾ  ಮನದಲ್ಲೇ ದೇವರನ್ನು ಬೇಡಿಕೊಂಡೆ." ಹೊಸದಾಗಿ  ಬಂದಿದ್ದ ಸಹೋದರಿ ರೇಖಾ ರಾಣಿಯವರಿಗೆ  ಇದೆಲ್ಲಾ  ಹೊಸ ಅನುಭವ , ಮನೆಯವರ  ಆತಿಥ್ಯ ಕಂಡು ಖುಷಿಯಲ್ಲಿ  ಮಿಂದೆದ್ದರು. ನಾಗೇಶಣ್ಣನಿಂದ  ರೇಗಿಸಿಕೊಂಡು  ತುಂಟಾಟ ಮಾಡುತ್ತಾ  ಎಲ್ಲರಿಗೂ ಶುಭ ಕೋರಿ , ಶಿರಸಿಯತ್ತ  ಪಯಣ  ಬೆಳೆಸಿದೆವು,  ನಮ್ಮ  ಪಯಣದಲ್ಲಿನ  ಹುಚ್ಚಾಟ ಕಂಡ  ಕಾರು  ಸ್ವಲ್ಪ  ಕೋಪ ಮಾಡಿಕೊಂಡಿತೂ ಅಂತಾ ಕಾಣುತ್ತೆ,   ಶಿರಸಿಯ  ಹತ್ತಿರ ಬರುತಿದ್ದಂತೆ    ದಾರಿಯ  ನಡುವೆ  ಮುಂದಿನ ಬಲ ಚಕ್ರ  ಪುಸ್ ಅಂತಾ  ಪಂಚರ್ ಆಯಿತು,  ತಮ್ಮ ನವೀನ  ಬೆಳಗ್ಗಿನಿಂದ  ಕಾರು ಚಲಾಯಿಸಿ  ಧಣಿವಾಗಿದ್ದರೂ   ತೋರಿಸಿಕೊಳ್ಳದೆ  ಸರ ಸರನೆ  ಬದಲಿ ಚಕ್ರ  ಹಾಕಿಕೊಂಡ.  ಅಲ್ಲಿಂದ ಮುಂದೆ ನೀಲಕೇಣಿಯಲ್ಲಿ ನ ಒಂದು ಅಂಗಡಿಯಲ್ಲಿ   ಪಂಚರ್ ಹಾಕಿಸಿಕೊಂಡ , ಅಷ್ಟರಲ್ಲಿ  ಶಿರಸಿಯ  ನನ್ನ ಪ್ರೀತಿಯ  ತಮ್ಮ  ಸಚಿನ್ ಗೆ  ಪೋನ್  ಮಾಡಿದ್ದ ಕಾರಣ  ಅವರೂ  ಸಹ ನಾವಿದ್ದಲ್ಲಿಗೆ ಬಂದರು,

ಶಿರಸಿಯ  ಒಂದು ಉತ್ತಮ    ವಸತಿ ಗೃಹ [ ಚಿತ್ರ ಕೃಪೆ ಗೂಗಲ್ } 



ಅವರ ಸಹಾಯದಿಂದ  ಯಲ್ಲಾಪುರ  ರಸ್ತೆಯಲ್ಲಿನ  ಮಧುವನ  ಹೋಟೆಲ್ ತಲುಪಿದೆವು,  ವಾರದ ಕೊನೆಯಾದ ಕಾರಣ ರೂಂ  ಸಿಗುವುದು ಕಷ್ಟವಿತ್ತು ಆದರೆ  ನಮ್ಮ ಪುಣ್ಯಕ್ಕೆ   ರೂಂ ಸಿಕ್ಕಿತು, ಬೆಳಗ್ಗಿನಿಂದ  ಬಿಡುವಿಲ್ಲದೆ ವಾಹನ  ಚಲಾಯಿಸಿದ್ದ  ನನ್ನ ತಮ್ಮ  ನವೀನನಿಗೆ  ವಿಶ್ರಾಂತಿ ನೀಡಿದ  ಸಮಾಧಾನ ಸಿಕ್ಕಿತು,  ಸ್ವಲ್ಪ ಹೊತ್ತು  ನಮ್ಮಗಳ ಜೊತೆ ಮಾತನಾಡಿದ ಸಚಿನ್ ನಾಳೆ ಸೊಂದೆಗೆ ಬಂದು ಸಿಗುವುದಾಗಿ ತಿಳಿಸಿ ಮನೆಗೆ ತೆರಳಿದರು,  ನಾವುಗಳು ಇತ್ತ  ನಿದ್ರಾ ದೇವಿಯ  ಮಡಿಲಲ್ಲಿ ಪವಡಿಸಿದೆವು, ....!  ಮುಂದೆ ....?

{ಸ್ವಲ್ಪ ವಿಶ್ರಾಂತಿ ಪಡೆಯಿರಿ  ಎರಡನೇ ಕಂತಿನಲ್ಲಿ ಮತ್ತೆ ಸಿಗೋಣ}








Wednesday, September 20, 2017

ಬನ್ನಿ ಅರಿಯೋಣ ಶ್ರೀರಂಗಪಟ್ಟಣದ ಮಹಾನವಮಿ/ ದಸರಾ / ನವರಾತ್ರಿ ಸಂಭ್ರಮದ ಇತಿಹಾಸವ ..... !



ಶ್ರೀ ರಂಗಪಟ್ಟಣದಲ್ಲಿ   ಮೈಸೂರು ಯದು ಕುಲದ   ಅರಸರ  ಅರಮನೆ ಇದ್ದ ಪ್ರದೇಶ 

ಕಳೆದ ಒಂದು ತಿಂಗಳ ಹಿಂದೆ   ಒಂದು ರಾತ್ರಿ. "ಮೈಸೂರು  ದಸರಾ  ಎಷ್ಟೊಂದು ಸುಂದರ  ಚೆಲ್ಲಿದೆ ನಗೆಯ ಪನ್ನೀರ ..... ಎಲ್ಲೆಲ್ಲು ನಗೆಯ ಪನ್ನೀರಾ ........"  ಅಂತಾ   ಹಾಡು ಬರ್ತಾ ಇತ್ತು,  ಅದೇ ಗುಂಗಿನಲ್ಲಿ  ನಿದ್ದೆಗೆ ಜಾರಿದ್ದೆ .  ಕನಸಿನಲ್ಲಿ   ರಾಜರುಗಳ ಒಡ್ಡೋಲಗ  ದರ್ಶನ ಆಗುತ್ತಿತ್ತು, ಯಾರೋ ಅಳುತ್ತಿರುವ  ದ್ವನಿ ಕೇಳಿ ಅತ್ತ ನಡೆದೇ .....! ಶ್ರೀ ರಂಗಪಟ್ಟಣದ  ಕಾವೇರಿ ತೀರದಲ್ಲಿ  ಒಬ್ಬ ವ್ಯಕ್ತಿ ಕುಳಿತು  ಅಳುತ್ತಿರುವುದ ಕಂಡೆ  ಹತ್ತಿರ ಹೋಗಲಾಗಿ  ,  ಅದು  ಮತ್ತೆ ಮತ್ತೆ  ಬಿಕ್ಕಿಸಿ  ನನ್ನತ್ತ ನೋಟ ಬೀರಿತು.  ಯಾರಮ್ಮ ನೀನು ...?  ಅನ್ನುತ್ತಾ   ಹತ್ತಿರ   ತೆರಳಲು  ಕೈ ಅಡ್ಡ ಪಡಿಸಿ  ನಾನು ಈ ಊರಿನ "ದಸರಾ ವೈಭವ "  ಕಂಡ  ಕಾವೇರಿ  .... ! ಅನ್ನುತ್ತಾ  ಮಾಯವಾದಳು   ಆ  ನಾರಿ.  ತಕ್ಷಣ ಎಚ್ಚರ ಆಯ್ತು , ಅರೆ ಶ್ರೀ ರಂಗ ಪಟ್ಟಣದ  ದಸರಾ ವೈಭವ   ಹೇಗಿತ್ತು ಅನ್ನುತ್ತಾ   ಮಾಹಿತಿ   ಅರಸಿ ಹೊರಟೆ , ಆಗ ದೊರೆತ ಮಾಹಿತಿ   ಶ್ರೀ ರಂಗ ಪಟ್ಟಣದ  ವೈಭವದ   ದಸರಾ  ಅಥವಾ ಮಹಾನವಮಿ, ಆಚರಣೆಯ   ಸಂಭ್ರಮದ  ಆಚರಣೆ ವಿಧಾನಗಳು, ಬನ್ನಿ ಶ್ರೀ ರಂಗ ಪಟ್ಟಣದ   ದಸರಾ ಸಂಭ್ರಮ ಹೇಗಿತ್ತು ನೋಡೋಣ. 


ಶ್ರೀ ರಂಗ ಪಟ್ಟಣದಲ್ಲಿ  ಆಳ್ವಿಕೆ ನಡೆಸಿದ  ಯದುಕುಲದ  ಮಹಾರಾಜರುಗಳು 




ಎಲ್ಲರಿಗೂ ತಿಳಿದಂತೆ  ವಿಜಯ ನಗರ ಸಾಮ್ರಾಜ್ಯ ಅವಸಾನದ ಅಂಚಿಗೆ  ತೆರಳುತ್ತಿದ್ದ  ಕಾಲದಲ್ಲಿ  ಮೈಸೂರು ಅರಸರು   ನಂತರ  ಚಾಮರಾಜ ಒಡೆಯರ್   v [೧೬೧೭-೧೬೩೭,], ಇಮ್ಮಡಿ ರಾಜ ಒಡೆಯರ್ [೧೬೩೭-೧೬೩೮],  ಕಂಠೀರವ ನರಸರಾಜ ಒಡೆಯರ್  1 ,[೧೬೩೮-೧೬೫೯],ದೇವರಾಜ ಒಡೆಯರ್ [ ೧೬೫೯-೧೬೭೩] , ಚಿಕ್ಕ ದೇವರಾಜ ಒಡೆಯರ್[೧೬೭೩-೧೭೦೪],  ನರಸರಾಜ ಒಡೆಯರ್ [ ೧೭೦೪ -೧೭೧೪],  ಒಂದನೇ ಕೃಷ್ಣರಾಜ ಒಡೆಯರ್  [ ೧೭೧೪-೧೭೩೨], ಏಳನೇ ಚಾಮರಾಜ ಒಡೆಯರ್ [ ೧೭೩೨-  ೧೭೩೪ ] , ಎರಡನೇ ಕೃಷ್ಣರಾಜ ಒಡೆಯರ್  [ ೧೭೩೪- ೧೭೬೧ ]      ಆ ನಂತರ  ಹೆಸರಿಗೆ ಮೈಸೂರ ಅರಸರೂ ಇದ್ದೂ    ಹೈದರ್ ಅಲಿಯ   ಪ್ರತಿನಿಧಿಸಿದ್ದ ಆಡಳಿತದಲ್ಲಿ   ಎರಡನೇ  ಕೃಷ್ಣ ರಾಜ ಒಡೆಯರ್ [ ೧೭೬೧- ೧೭೬೬] ನಂಜರಾಜ ಒಡೆಯರ್ [೧೭೬೬-೧೭೭೦ ],ಬೆಟ್ಟದ ಚಾಮರಾಜ ಒಡೆಯರ್ v11     {೧೭೭೦-೧೭೭೬] ನಂತರ ಖಾಸಾ ಚಾಮರಾಜ ಒಡೆಯರ್ V111  ರ  ಪ್ರತಿನಿದಿಯಾಗಿ ಹೈದರ್ ಅಲಿ ,ಆನಂತರ ಟಿಪ್ಪೂ ಸುಲ್ತಾನ್         ಆಳ್ವಿಕೆ ನಡೆಸಿ ಕ್ರಿ .ಶ.1799  ರ ಮೈಸೂರಿನ ಅಂತಿಮ ಯುದ್ದದ ಸೋಲಿನ ನಂತರ  ಶ್ರೀ ರಂಗ ಪಟ್ಟಣ ದ ಒಂದು  ಸುವರ್ಣ ಅಧ್ಯಾಯ ಮುಗಿದಿತ್ತು

                                

 ಶ್ರೀ ರಂಗಪಟ್ಟಣದ   ಹಳೆಯ ಅರಮನೆಯ  ಒಂದು ಭಾಗ 





ವಿಜಯನಗರದ ನಂತರ ಮೈಸೂರು ಅರಸರ ಆಳ್ವಿಕೆಗೆ ಹಲವಾರು  ಪ್ರದೇಶಗಳು ಬಂದರೂ ಸಹ, ವಿಜಯನಗರ  ಸಾಮ್ರಾಜ್ಯದ  ಹಲವಾರು ಸಾಂಸ್ಕೃತಿಕ  ಆಚರಣೆಗಳು, ಆಡಳಿತ ವಿಧಿ ವಿಧಾನಗಳು  ಮೈಸೂರು  ಅರಸರ ಕಾಲದಲ್ಲಿಯೂ  ಮುಂದುವರೆದವು, ಅದರಲ್ಲಿ ವಿಶೇಷವಾಗಿ  ಆಶ್ವೀಜ  ಮಾಸದ  ಶುಕ್ಲ ಪಕ್ಷದಲ್ಲಿ ಪ್ರಥಮಾ ತಿಥಿಯಿಂದ ದಶಮಿಯವರೆವಿಗೆ . ಮಹಾನವಮಿ  ಹಬ್ಬದ  ಆಚರಣೆ  ಮುಂದುವರೆಯಿತು.  


ಬನ್ನಿ  ಮೊದಲು ಮಹಾನವಮಿ   ಹಬ್ಬ ಆಚರಣೆಯ ಬಗ್ಗೆ ತಿಳಿಯೋಣ   ಮಹಾನವಮಿ / ವಿಜಯ ದಶಮಿ /  ಹಬ್ಬದ ಆಚರಣೆ ಪ್ರತೀ ಸಂವತ್ಸರದ ಆಶ್ವಯುಜ ಮಾಸದ ಶುಕ್ಲ ಪಕ್ಷದಲ್ಲಿ ಪ್ರಥಮ ಪಾಡ್ಯ  ತಿಥಿಯಿಂದ ದಶಮಿಯವರೆವಿಗೆ ದಿನ ನಿತ್ಯ ಪೂಜೆ ಪುನಸ್ಕಾರ, ಸಂತರ್ಪಣೆ, ಹಾಗೂ  ಹಬ್ಬದ ವಾತಾವರಣವನ್ನು ಕಾಣಬಹುದು. ಈ ಕಾಲವು ಎಲ್ಲ ದೇವತೆಗಳ ಉಪಾಸನೆಗಳಿಗೆ ಶ್ರೇಷ್ಠವಾಗಿದ್ದರೂ ಶಕ್ತಿದೇವತೆಯನ್ನು ಪ್ರಸನ್ನಗೊಳಿಸುವ ಕಾಲವಾಗಿದೆ .  ಮಹಾನವಮಿ ಬಗ್ಗೆ  ಹಿನ್ನೆಲೆ ಹುಡುಕುತ್ತಾ ಹೊರಟಾಗ  ಕೆಲಅಂಶಗಳು ಪೌರಾಣಿಕ ಹಿನ್ನೆಲೆಯಲ್ಲಿ  ಉಲ್ಲೇಖಗೊಂಡಿವೆ . 

 ೧]  ಪೌರಾಣಿಕ  ಹಿನ್ನೆಲೆಯ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಸಪ್ತಮಾತೃಕೆಯರ ನೆರವಿನಿಂದ ಮಹಿಷ ನನ್ನು ಶಕ್ತಿ ಮತ್ತು ಯುಕ್ತಿಯಿಂದ  ಆದಿಶಕ್ತಿ  ಚಾಮುಂಡಿ ಕೊಲ್ಲುತ್ತಾಳೆ. ಆದುದರಿಂದಲೇ ಹತ್ತನೇಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ.  ಎಂಬ ಮಾಹಿತಿ ತಿಳಿಯುತ್ತದೆ.

೨] ಪೌರಾಣಿಕ ಹಿನ್ನೆಲೆ ರಾಮಾಯಣ ದಲ್ಲಿ ಶ್ರೀ ರಾಮನು ರಾವಣನನ್ನು  ಸಂಹಾರ ಮಾಡಿ  ವಿಜಯ ಸಾಧಿಸಿದ ದಿನ ವೆಂದೂ  ಯುದ್ದಕ್ಕೆ ಮೊದಲು  ಶ್ರೀ ರಾಮನು  ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿ ರಾವಣನ ಮೇಲೆ ಶ್ರೀ ರಾಮನ ವಿಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸುವರು. 

೩] ಮಹಾಭಾರತದಲ್ಲಿ  ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ಹೇಳಲಾಗುತ್ತದೆ.ಮಹಾ ಭಾರತದ ಯುದ್ದದ ಮೊದಲು  ಪಾರ್ಥನು  ಶಮಿ ವೃಕ್ಷವನ್ನು ಪೂಜಿಸಿ  ಅದರಲ್ಲಿದ್ದ   ಆಯುಧಗಳನ್ನು  ಮತ್ತೆ ಧರಿಸುವ ಬಗ್ಗೆ  ಪ್ರಸ್ತಾಪವಿದೆ. 


 ಐತಿಹಾಸಿಕ   ಹಿನ್ನೆಲೆ   ಗಮನಿಸಿದಾಗ  ಉತ್ತರ ಭಾರತದಲ್ಲಿ   ರಾಮ ಲೀಲಾ   ಆಚರಣೆ ಮಾಡಿದರೂ ಸಹ    ಆಚರಣೆ ಇದ್ದರೂ ಸಹ  ಇದು  ವಿಷ್ಣು ಲೀಲೆಯ  ನಾಟಕದ  ಅವತಾರದಂತೆ  ಜಾನಪದ ಆಚರಣೆ ಆಗಿದೆ ಅಷ್ಟೇ.   ಆದರೆ  ಇದನ್ನು ಒಂದು   ಐತಿಹಾಸಿಕ  ಹಬ್ಬವಾಗಿ  ಆಚರಿಸಿದ ಬಗ್ಗೆ  ಮೊದಲು  ಮಹಾನವಮಿ  ಉಲ್ಲೇಖ  ವಿಜಯನಗರ   ಸಾಮ್ರಾಜ್ಯದ  ಇತಿಹಾಸದಲ್ಲಿ ಕಾಣಸಿಗುತ್ತದೆ.    ಅದಕ್ಕಿಂತ ಮೊದಲು  ಯಾವ ಯಾವ  ಅರಸರ ಸಾಮ್ರಾಜ್ಯಗಳು  ಮಹಾನವಮಿ  ಆಚರಣೆ ಮಾಡಿದರು ಎಂಬ ಬಗ್ಗೆ  ಎಲ್ಲಿಯೂ ಮಾಹಿತಿ ಲಭ್ಯವಿಲ್ಲ. ಹಾಗಾಗಿ  ಮೊದಲ ಆಚರಣೆ ವಿಜಯನಗರ   ಸಾಮ್ರಾಜ್ಯದಲ್ಲಿ   ಆಯಿತೆಂದು  ಅಂದುಕೊಳ್ಳಬೇಕಾಗಿದೆ.    ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ ಮನೆಗಳಲ್ಲೂ ಪ್ರಚಲಿತವಾಯಿತು.

ಶ್ರೀ ರಂಗನ  ಮಡಿಲಲ್ಲಿ  ದಸರಾ  ವೈಭವ ವಿತ್ತು 



ಅಧಿಕೃತ ದಾಖಲೆಗಳ ಆಧಾರದಲ್ಲಿ ಮೈಸೂರು ಸಾಮ್ರಾಜ್ಯದ  ರಾಜ ಒಡೆಯರ್ {1578–1617}  ಅವರ ಕಾಲದಲ್ಲಿ   1610 ರ ಸೆಪ್ಟೆಂಬರ್ 8   ರಿಂದ 17  ರ ವರೆಗೆ    ಮೊದಲ ಮಹಾನವಮಿ ಆಚರಣೆ ಆಯಿತೆಂದು  ತಿಳಿದು ಬರುತ್ತದೆ. ಅಚ್ಚರಿಯ ವಿಚಾರವೆಂದರೆ  1610  ರ ಸೆಪ್ಟೆಂಬರ್  6  ರಂದು  ರಾಜ ವೊಡೆಯರ್ ಅವರ ಹಿರಿಯ  ಮಗ  ನರಸರಾಜ  ಒಡೆಯರ್   ದೈವಾಧೀನವಾಗಿರುತ್ತಾರೆ , ಆದರೂ ಸಹ   ರಾಜ ಒಡೆಯರ್ ಅವರು   ಶಾಸ್ತ್ರ  ಸಂಪನ್ನರನ್ನು  ಸಂಪರ್ಕಿಸಿ,  ಮಹಾನವಮಿ ಹಬ್ಬದ ಆಚರಣೆ ಮಾಡಿಯೇ ಬಿಡುತ್ತಾರೆ, ತದನಂತರ  ಒಂದು ಶಾಸನ ರಚಿಸಿ  ಒಂದು ವೇಳೆ  ರಾಜ ಮನೆತನದಲ್ಲಿ  ಇಂತಹ ಘಟನೆ ಸಂಭವಿಸಿದರೂ ಸಹ  ಮುಂದೆ ನಡೆಯುವ  ಮಹಾನವಮಿ ಹಬ್ಬದ ಆಚರಣೆಗೆ  ಅಡಚಣೆ ಆಗಬಾರದೆಂದು  ನಿಯಮ ಮಾಡಲಾಗುತ್ತದೆ.   ಇದೆ ಆಳ್ವಿಕೆ ಕಾಲದಲ್ಲಿ ಶ್ರೀ ರಂಗಪಟ್ಟಣದಲ್ಲಿ   ಆಡಳಿತ ನಿರ್ವಹಣೆಗೆ  "ದಳವಾಯಿ " [ ನಮ್ಮಲ್ಲಿನ   ಸರ್ಕಾರದ   ಮುಖ್ಯ ಕಾರ್ಯದರ್ಶಿಗಳ ತರಹದ ಹುದ್ದೆ]    ನೇಮಕಾತಿಯನ್ನು  ಪುನಃ  ಪ್ರಾರಂಭ ಮಾಡಲಾಗುತ್ತದೆ. ಅದರಂತೆ ಮೊದಲ ದಳವಾಯಿ ಯಾಗಿ     ಕರಿಕಾಳ ಮಲ್ಲರಾಜಯ್ಯ  ಎಂಬುವರ ನೇಮಕವಾಗುತ್ತದೆ. 



1610 ರಲ್ಲಿ ಶ್ರೀ ರಂಗಪಟ್ಟಣದಲ್ಲಿ  ಪ್ರಾರಂಭವಾದ  ಮಹಾನವಮಿ ಆಚರಣೆ  ಹೇಗೆ ನಡೆಯುತ್ತಿತ್ತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ,   ಅಂದರೆ  1610 ರಿಂದ 1647  ರವರೆಗೆ ಅವಲೋಕನ ನಡೆಸಿದರೆ ,  ರಾಜ ಒಡೆಯರ್ ನಂತರ ಬಂದ  ನಾಲ್ವಡಿ ಚಾಮರಾಜ ಒಡೆಯರ್{1617–1637}  ಅವರು  ಮಹಾನವಮಿ ಆಚರಿಸಿದ ಬಗ್ಗೆ   ಮಾಹಿತಿ ಲಭ್ಯವಿಲ್ಲ  , ನಾಲ್ವಡಿ ಚಾಮರಾಜ  ಒಡೆಯರ್  ಅವರು ತಮ್ಮ 35  ವರ್ಷದಲ್ಲಿ   1637 ರ ಮೇ 2  ನೆ ತಾರೀಕು  ನಿಧನರಾಗುತ್ತಾರೆ,  ಅದೇ ವರ್ಷ ಅಂದರೆ  1637 ರ ಮೇ  14  ನೆ ತಾರೀಕಿನಂದು ಇಮ್ಮಡಿ ರಾಜ ಒಡೆಯರ್ ರಾಜ ಸಿಂಹಾಸನ ಅಲಂಕಾರ ಮಾಡುತ್ತಾರೆ   ಆದರೆ 1638 ರ ಅಕ್ಟೋಬರ್ 8  ರಂದು ತಮ್ಮ 27  ನೆ ವರ್ಷದಲ್ಲಿ   ಮರಣ ಹೊಂದುತ್ತಾರೆ, ಇವರ ಅವಧಿಯಲ್ಲಿ ಮಹಾನವಮಿ ಆಚರಣೆಯಾದ ಬಗ್ಗೆ ಮಾಹಿತಿ ಇಲ್ಲಾ,  


 ಕಂಠೀರವ ನರಸರಾಜ ಒಡೆಯರ್  {ಚಿತ್ರ ಕೃಪೆ  ಗೂಗಲ್  ಅಂತರ್ಜಾಲ } 


ನಂತರ ಮೈಸೂರಿನ  ಅರಸರಾಗಿದ್ದ ಇಮ್ಮಡಿ ರಾಜ ಒಡೆಯರ್   ಅವರಿಗೆ ಸಂತಾನವಿಲ್ಲದ ಕಾರಣ ಕಂಠೀರವ ನರಸರಾಜ ಒಡೆಯರ್  ಅವರು   ಶ್ರೀ ರಂಗಪಟ್ಟಣದಲ್ಲಿ  1638 ರ  ನವೆಂಬರ್ 22  ರಂದು  ಪ್ರಥಮವಾಗಿ  ರಾಜ್ಯಭಾರದ   ಹೊಣೆ ಹೊತ್ತು ಸಿಂಹಾಸನ ಅಲಂಕಾರ ಮಾಡುತ್ತಾರೆ.   ಇವರು ನರಸಿಂಹ ಜಯಂತಿಯಂದು ಜನಿಸಿದ ಕಾರಣ [ 1615 ಮೇ 2]   ನೆನಪಿಗಾಗಿ  ಶ್ರೀ ರಂಗಪಟ್ಟಣದಲ್ಲಿ    ಮೈಸೂರು ಯದು ವಂಶ ಅರಸರ ಅರಮನೆಯ  ಸಮೀಪವೇ .     ನರಸಿಂಹ ದೇವಾಲಯ ನಿರ್ಮಾಣ ಆಗುತ್ತದೆ,   ಅವರು ಉಪಯೋಗಿಸುತ್ತಿದ್ದ ಖಡ್ಗಕ್ಕೆ  "ವಿಜಯನಾರಸಿಂಹ  ಖಡ್ಗ"   ಎಂಬ  ನಾಮಾಂಕಿತ ವಾಗಿರುತ್ತದೆ,    ಅಸಮಾನ್ಯ ಪರಾಕ್ರಮಿ, ಒಳ್ಳೆಯ ಆಡಳಿತಗಾರ  ಎಂಬ ಕೀರ್ತಿ ಎಲ್ಲೆಡೆ ಹಬ್ಬಿರುತ್ತದೆ. ಇವರ   ಆಡಳಿತ  ಕಾಲದಲ್ಲಿ    1647 ರ ಸೆಪ್ಟೆಂಬರ್  19  ರಿಂದ 28  ರ ವರೆಗೆ  ನಡೆದ  ವೈಭವದ ಮಹಾನವಮಿ ಹಬ್ಬದ    ಆಚರಣೆ  ಬಗ್ಗೆ  ಮೊದಲ  ಮಾಹಿತಿ  ಇತಿಹಾಸದ   ಪುಟಗಳಲ್ಲಿ ದಾಖಲಾಗಿದೆ. ಬನ್ನಿ   ಸಂಭ್ರಮದ  ಘಟನೆಗಳನ್ನು  ತಿಳಿಯೋಣ. 

 ಮಹಾನವಮಿ ಆಚರಣೆಗೆ   ಇನ್ನೂ ಹಲವಾರು ತಿಂಗಳುಗಳು ಇರುವಂತೆಯೇ  ಹೊಸ  ಹೊಸ ಪಂಚಾಂಗ  ಬಂದ ತಕ್ಷಣ    ಕಂಠೀರವ ನರಸರಾಜ ಒಡೆಯರ್  ಅವರು  ಆಸ್ಥಾನದ  ಜ್ಯೋತಿಷಿ  ಗಳನ್ನೂ,  ಪಂಡಿತರನ್ನು ಕರೆಸಿ  ಸಮಾಲೋಚನೆ ನಡೆಸಿ ಮಹಾನವಮಿ ಆಚರಣೆಯ  ಕಾರ್ಯಕ್ರಮಗಳ  ರೂಪ ರೇಷೆ  ತಯಾರು ಮಾಡಿಕೊಂಡು , ಕಾರ್ಯಕ್ರಮಕ್ಕೆ  ಪ್ರಾಥಮಿಕ  ಹಂತದ  ಚಾಲನೆ   ನೀಡುತ್ತಿದ್ದರು,  ಇದರ ಜವಾಬ್ಧಾರಿಯನ್ನು  ಹೇಗೆ ನಿಭಾಯಿಸಬೇಕೂ ಎಂಬ ಬಗ್ಗೆ  ದಳವಾಯಿ   ಲಿಂಗರಾಜಯ್ಯ ನ ಜೊತೆ  ಸಮಾಲೋಚನೆ ಮಾಡಿ  ಸಂಪೂರ್ಣ  ಮಹಾನವಮಿ  ಆಚರಣೆಯ   ಕಾರ್ಯಕ್ರಮದ   ಹೊಣೆಯನ್ನು  ದಳವಾಯಿ ಲಿಂಗರಾಜಯ್ಯ ರವರಿಗೆ  ವಹಿಸಿ  ಅಧಿಕಾರ ನೀಡಲಾಗುತ್ತಿತ್ತು,  ನಂತರ  ಇದರ ಅನುಷ್ಠಾನ ವನ್ನು   ದಳವಾಯಿ ಲಿಂಗರಾಜಯ್ಯ ನವರು    ಶ್ರೀ ರಂಗಪಟ್ಟಣ  ರಾಜಧಾನಿಯ   ರಾಜ ಪ್ರಮುಖ  ಅಧಿಕಾರಿ  ಅಥವಾ  ಮೇಯರ್   ಲಿಂಗೇಗೌಡ  ಅವರಿಗೆ  ಸೂಚನೆ ನೀಡಿ   ಮಹಾನವಮಿಗೆ  ಸಿದ್ದತೆ  ಮಾಡಿಕೊಳ್ಳುತ್ತಿದ್ದರು. 

ಮೊದಲು ತಯಾರಾಗುತ್ತಿದ್ದುದೆ   ತಾಳೆಗರಿಯ   ಆಹ್ವಾನ  ಪತ್ರಿಕೆ  ಇದರಲ್ಲಿ ಮಹಾನವಮಿ  ಹಬ್ಬಕ್ಕೆ    ತಮ್ಮ ಪರಿವಾರದೊಂದಿಗೆ  ಆಗಮಿಸುವಂತೆ ಎಲ್ಲಾ ಸಾಮಂತ / ಗೆಳೆಯ ರಾಜರುಗಳಿಗೆ, ಪಾಳೆಯಗಾರರಿಗೆ ,  ಆಹ್ವಾನ  ಪತ್ರಿಕೆಗಳನ್ನು  ರಾಜ ಪ್ರತಿನಿಧಿಗಳ ಮೂಲಕ  ಕಳುಹಿಸಲಾಗುತ್ತಿತ್ತು,   ಹೊಳೆನರಸಿಪುರ,   ಬೇಲೂರು, ಕುಣಿಗಲ್,ಮಾಗಡಿ,  ನಂಜರಾಯಪಟ್ಟಣ , ಇಕ್ಕೇರಿ, ತಂಜಾವೂರು,  ಮಧುರೆ, ಕೊಡಗು, ಮಲೆಯಾಳ,  ಕೊಂಕಣ ,  ರಾಜರುಗಳಿಗೆ  ಆಹ್ವಾನ ಪತ್ರಿಕೆ   ತಲುಪುತ್ತಿತ್ತು. ಇದಷ್ಟೇ  ಅಲ್ಲದೆ,ಬೇಡ  ಜನಾಂಗದ  ನಾಯಕನಿಗೂ  ಆಹ್ವಾನ ಪತ್ರಿಕೆ  ಕಳುಹಿಸಲಾಗುತ್ತಿತ್ತು.   

ಇದರ ಜೊತೆಯಲ್ಲೇ  ರಾಜಧಾನಿ  ಶ್ರೀ ರಂಗ ಪಟ್ಟಣದಲ್ಲಿ ಅರಮನೆಯ ಅಲಂಕಾರ  ಹಾಗು ಪಟ್ಟಣದ ಪ್ರಮುಖ ಬೀದಿಗಳ  ಅಲಂಕಾರ  ಮಾಡಲಾಗುತ್ತಿತ್ತು. ಅರಮನೆಯ ದರ್ಭಾರ್ ಸಭಾಂಗಣ [ ಓಲಗ  ಶಾಲೆ,  ಆಸ್ಥಾನ ಮಂಟಪ]   ಚಂದ್ರ ಶಾಲೆ [ ಆಯುಧ ಶಾಲೆ ]  ಉಗ್ರಾಣ ಶಾಲೆ,  ಉಡುಗೊರೆಗಳ   ಬೊಕ್ಕಸ ಶಾಲೆ,  ತಪಾಸಣೆ   ಆಗುತ್ತಿತ್ತು,  ಆ ಶಾಲೆಗಳಲ್ಲಿ  ಬಣ್ಣ ಬಣ್ಣಗಳ ಚಿತ್ರಾದ  ಅಲಂಕಾರ ಮಾಡಲಾಗುತ್ತಿತ್ತು,    ಉಗ್ರಾಣ ಶಾಲೆಯಲ್ಲಿ   ಆಹಾರ   ಸಾಮಗ್ರಿಗಳ, ತೈಲಗಳ , ದವಸ, ಧಾನ್ಯ,  ಉರುವಲು,  ತುಪ್ಪ, ಬೆಣ್ಣೆ,  ಹಣ್ಣು ಹಂಪಲು,  ತರಕಾರಿ, ಹಾಗು   ಇತರ  ಎಲ್ಲಾ ಬಗೆಯ    ಅಡಿಗೆ ಸಾಮಗ್ರಿಗಳ   ತಪಶೀಲು ನಡೆಸಿ   ಮಹಾನವಮಿಗೆ  ಉಗ್ರಾಣವನ್ನು ಅಣಿಗೊಳಿಸಲಾಗುತ್ತಿತ್ತು.    ಉಡುಗೊರೆಗಳ ಬೊಕ್ಕಸ   ಮಹಾನವಮಿ ಆಚರಣೆಗೆ  ಅಗತ್ಯವಿರುವ  ಸಾಮಗ್ರಿಗಳ  ದಾಸ್ತಾನು  ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಲಾಗುತ್ತಿತ್ತು, ಒಂದು ವೇಳೆ ಅಗತ್ಯ ಬಿದ್ದರೆ ಅವುಗಳ   ಸಂಗ್ರಹಕ್ಕೆ   ತಕ್ಷಣ  ಕ್ರಮವಹಿಸಲಾಗುತ್ತಿತ್ತು.  ಚಂದ್ರ ಶಾಲೆಯಲ್ಲಿ ಆಯುಧಗಳ  ದಾಸ್ತಾನು, ಅವುಗಳ ಸಾಮರ್ಥ್ಯ ಗಳ ತಪಾಸಣೆ ಮಾಡಲಾಗುತ್ತಿತ್ತು,   ಮುಂದುವರೆದು,   ನಂತರ ಕುದುರೆ ಲಾಯ ಹಾಗು ಆನೆಗಳ  ಮನೆ ತಪಾಸಣೆ ಮಾಡಿ  ಅವುಗಳ ಆರೋಗ್ಯ,  ಲಾಯ ಹಾಗು ಮನೆಗಳ ದುರಸ್ಥಿ , ಮಹಾನವಮಿ  ಕಾರ್ಯಕ್ರಮಕ್ಕೆ   ಕುದುರೆ, ಆನೆಗಳ   ತಯಾರಿ    ಮಾಡಲಾಗುತ್ತಿತ್ತು. 


 ನಂತರ  ಶುರುವಾಗುತಿತ್ತು   ಮಹಾನವಮಿಗೆ ಆಗಮಿಸುವ   ಆಹ್ವಾನಿತರಿಗೆ  ಉಳಿಯಲು ಬಿಡದಿ ವ್ಯವಸ್ಥೆ ,   ಮಹಾನವಮಿಗೆ   ಆಗಮಿಸುವ  ವಿವಿಧ ಧಾರ್ಮಿಕ  ಸ್ವಾಮಿಗಳು,  ಸನ್ಯಾಸಿಗಳು, ವಿವಿಧ ರಾಜ್ಯಗಳ   ರಾಜರುಗಳಿಗೆ , ಅವರ ಪರಿವಾರದೊಂದಿಗೆ     ಆಗಮಿಸುತ್ತಿದ್ದ,   ವಿಧ್ವಾಂಸರು,  ಕವಿಗಳು,   ಸಂಗೀತಗಾರರು, ವಿವಿಧ ಬಗೆಯ ಕಲಾವಿದರು,   ಕುಸ್ತಿಪಟುಗಳು, ಮಲ್ಲ ಯುದ್ದದ  ಜಟ್ಟಿಗಳು,  ವ್ಯಾಪಾರಿಗಳು,   ನರ್ತಕಿಯರು, ವಿವಿಧ ಬಗೆಯ ವೃತ್ತಿಯ  ಹೆಂಗಸರುಗಳಿಗೆ   ಅವರುಗಳ  ಸ್ಥಾನ ಮಾನಗಳಿಗೆ ತಕ್ಕಂತೆ  ಯೋಜನಾಬದ್ದವಾಗಿ   ಬಿಡಾರ  ನಿರ್ಮಾಣ ಮಾಡಿ ಮಹಾನವಮಿ  ಹಬ್ಬದಲ್ಲಿ   ಅವರುಗಳಿಗೆ ವ್ಯವಸ್ಥಿತವಾಗಿ  ನೀಡಲಾಗುತ್ತಿತ್ತು. 

ಇಷ್ಟೆಲ್ಲಾ  ವ್ಯವಸ್ಥೆ  ಪೂರ್ಣಗೊಳ್ಳುತ್ತಿದ್ದಂತೆ  ಮಹಾನವಮಿಯ ಆಗಮನ ವಾಗುತ್ತಿತ್ತು  ರಾಜಧಾನಿ ಶ್ರೀ ರಂಗಪಟ್ಟಣ  ವಿವಿಧ  ಪ್ರಾಂತದ  ಜನರಿಂದ   ತುಂಬಿ ಹೋಗುತ್ತಿತ್ತು. ವಿವಿಧ     ಪ್ರಾಂತಗಳ ವೇಷ ಭೂಷಣಗಳ  ಜನರು  ಕಾಣಲು ಸಿಗುತ್ತಿದ್ದರು.  ಮಹಾನವಮಿ ಹಬ್ಬದ  ಮೊದಲ ದಿನ  ಇಡೀ ಅರಮನೆಯಲ್ಲಿ , ಅಶ್ವ ಶಾಲೆ, ಗಜ ಶಾಲೆ,  ಆಯುಧ ಶಾಲೆ  ಗಳಲ್ಲಿ    ವೇದ ಪಂಡಿತರಿಂದ  ಮಂತ್ರಗಳ ಘೋಷಣೆಗಳೊಂದಿಗೆ  ರಾಜ  ಪುರೋಹಿತರು   ಪುಣ್ಯಾವರ್ಚನೆ  ಮಾಡುತ್ತಿದ್ದರು,  ನಂತರ   ರಾಜ ಮನೆತನದ   ಚಾಮುಂಡಿಯನ್ನು    ಆವಾಹಿಸಿ   ಯಜ್ಞ ಯಾಗಗಳನ್ನು, ಚಂಡಿಕಾ ಹೋಮ ಇತ್ಯಾದಿ  ಪೂಜೆಗಳನ್ನು  ಮಾಡಲಾಗುತ್ತಿತ್ತು. ಪ್ರತಿನಿತ್ಯವೂ  ಮಹಾನವಮಿಗೆ ಆಗಮಿಸಿದ್ದ ಎಲ್ಲ  ಜನರಿಗೂ  ಊಟದ  ವ್ಯವಸ್ಥೆ  ಮಾಡಲಾಗುತ್ತಿತ್ತು,  ಎಲ್ಲರೂ  ಸಂತೃಪ್ತಿಯಿಂದ  ಖುಷಿಯಾಗಿ ಮಹಾನವಮಿ ಹಬ್ಬದಲ್ಲಿ ಭಾಗವಹಿಸುತ್ತಿದ್ದರು. ಮೊದಲ 8 ದಿನಗಳು  ಶ್ರೀ ಕಂಠೀರವ ನರಸರಾಜ ಒಡೆಯರ್  ರವರು ಬೆಳಿಗ್ಗೆ ಹಾಗು ಸಂಜೆ  ದಿನಕ್ಕೆ ಎರಡು ಸಾರಿಯಂತೆ   ಸಾರ್ವಜನಿಕ  ದರ್ಭಾರ್  ನಡೆಸುತ್ತಿದ್ದರು   ಇದನ್ನು ಮಹಾನವಮಿ ಒಡ್ಡೋಲಗ  ಎಂದು ಕರೆಯಲಾಗುತ್ತಿತ್ತು.      ಶ್ರೀರಂಗಪಟ್ಟಣದ  ಆದಿದೇವರು ಶ್ರೀ ರಂಗನಾಥ ಸ್ವಾಮಿ , ಅರಸರ ಮೆಚ್ಚಿನ  ದೇವರು ಶ್ರೀ ಲಕ್ಷ್ಮಿ ನರಸಿಂಹ ದೇವರುಗಳ   ಉತ್ಸವ ಮೂರ್ತಿಗಳನ್ನು ವೇಧ ಘೋಷಣೆ, ಮಂಗಳ ವಾಧ್ಯಗಳ  ಮೆರವಣಿಗೆ ಮೂಲಕ    ಅರಮನೆಯಾ ದರ್ಭಾರ್  ಸಭಾಂಗಣಕ್ಕೆ  ತಂದು  ಅಲ್ಲಿ  ವಿಶೇಷವಾಗಿ  ರತ್ನಾಭರಣ ಗಳಿಂದ ಅಲಂಕರಿಸಿ  ಇಡಲಾಗುತ್ತಿದ್ದ   ಚಿನ್ನದ ಸಿಂಹಾಸನದಲ್ಲಿ   ಇಡಲಾಗುತ್ತಿತ್ತು.   ಆ ನಂತರ   ದಳವಾಯಿ ಲಿಂಗರಾಜಯ್ಯ  ರಾಜ ಲಾಂಛನದ   ವಸ್ತ್ರಧರಿಸಿ ,   ಪರಾಕು ಹೇಳುವ  ಜನರಿಂದ ಪರಾಕು ಹೇಳಿಸುತ್ತಾ  ಶ್ರೀ ಕಂಠೀರವ ನರಸರಾಜ ಒಡೆಯರ್  ಅವರನ್ನು ಆಹ್ವಾನ ಮಾಡುತ್ತಾ   ಮಹಾನವಮಿಯ ರಾಜ ಒಡ್ಡೋಲಗಕ್ಕೆ   ಕರೆತರುತ್ತಿದ್ದರು,   ಛತ್ರ ಛಾಮರಗಳ  ,   ರಾಜ ಲಾಂಛನ , ರಾಜ ಬಾವುಟಗಳ  ಮರ್ಯಾದೆಯೊಂದಿಗೆ     ಮಂಗಳ ವಾದ್ಯಗಳೊಡನೆ   ಪಲ್ಲಕಿಯಲ್ಲಿ ಆಗಮಿಸಿದ ಶ್ರೀ ಕಂಠೀರವ ನರಸರಾಜ ಒಡೆಯರ್  ರವರು  ಮೊದಲು ಮನೆದೇವರು ತಾಯಿ ಚಾಮುಂಡಿ,  ಶ್ರೀ ರಂಗನಾಥ,  ಲಕ್ಷ್ಮಿ ನರಸಿಂಹ  ದೇವರುಗಳಿಗೆ  ಭಕ್ತಿಯಿಂದ   ಪೂಜಿಸಿ , ಆನಂತರ   ಸಿಂಹಾಸನ ಅಲಂಕಾರ ಮಾಡುತ್ತಿದ್ದರು.   ಆ ದರ್ಭಾರ್  ಸಭಾಂಗಣದಲ್ಲಿ  ವಿವಿಧ ಬಗೆಯ  ಪ್ರಮುಖ   ರಾಜರು,  ಅಧಿಕಾರಿಗಳು, ವಿದ್ವಾಂಸರು, ಕಲಾವಿದರು, ಇನ್ನು ಮುಂತಾದವರ  ಗೌರವಕ್ಕೆ ಚ್ಯುತಿ ಬಾರದಂತೆ  ಆಸನ ವ್ಯವಸ್ಥೆ  ಮಾಡಲಾಗಿರುತ್ತಿತ್ತು.  ವಿವಿಧ   ರಾಜ್ಯಗಳ / ಸೀಮೆಯ     ಗೆಳೆಯರ ಅಥವಾ ಸಾಮಂತ  ರಾಜರುಗಳಿಂದ ಉಡುಗೊರೆ ಅಥವಾ ಕಪ್ಪ ಕಾಣಿಕೆಗಳ ಸಮರ್ಪಣೆ   ಆಗುತ್ತಿತ್ತು, ಮೊದಲ ದಿನದ ಕಾರ್ಯ  ಪರಸ್ಪರ ಪರಿಚಯ ಹಾಗು  ಕಪ್ಪ ಕಾಣಿಕೆಗಳ  ಸಮರ್ಪಣೆ  ಇದರ ಜೊತೆಗೆ ಮನರಂಜನೆ  ಕಾರ್ಯಕ್ರಮಗಳು  ಇವುಗಳಲ್ಲೇ ಕಳೆದು ಹೋಗುತ್ತಿತ್ತು. ರಾತ್ರಿವೇಳೆಯಲ್ಲಿ   ಅರಮನೆ ಹಾಗು ಶ್ರೀರಂಗಪಟ್ಟಣ  ನಗರವನ್ನು    ಲಕ್ಷಾಂತರ  ಕಂದಿಲುಗಳಿಂದ, ಪಂಜುಗಳಿಂದ ,  ವಿವಿಧ ಬಗೆಯ  ಎಣ್ಣೆ ದೀಪಗಳಿಂದ    ಅಲಂಕಾರ ಮಾಡಲಾಗುತ್ತಿತ್ತು, ಶ್ರೀ ರಂಗಪಟ್ಟಣ  ಅರಮನೆ   ಅಂದು  ದೀಪಗಳ ಬೆಳಕಿನ   ರಂಗಿನೊಡನೆ  ಹೊಸ  ರಂಗು ಪಡೆದು   ದೀಪಗಳ  ದ್ವೀಪವಾಗಿ  ಕಂಗೊಳಿಸುತ್ತಿತ್ತು. 


ನಂತರದ ದಿನಗಳಲ್ಲಿ    ಸೈನಿಕ ಕವಾಯತು, ಗಜ ಪಡೆಯ ಮಾವುತರು, ವಿವಿಧಬಗೆಯ  ಯುದ್ದ ದಳಗಳಗಳಿಂದ , ನಾಯಕರುಗಳಿಂದ  ಗೌರವ  ಸಮರ್ಪಣೆ, ಮಲ್ಲರುಗಳಿಂದ ಕುಸ್ತಿ ಕಾಳಗ, ಮಹಾನ್ ಜಟ್ಟಿಗಳಿಂದ  ಜೋಡಿ ಕಾಳಗ, ಗಜಗಳ  ಕಾಳಗ, ಮದ್ದಾನೆಗಳೊಂದಿಗೆ ,  ಕೆರಳಿದ  ಹುಲಿಗಳೊಂದಿಗೆ  ಹಾಗು ಕರಡಿಗಳೊಂದಿಗೆ  ವೀರ ಜನರ  ಕಾಳಗ,    ದೊಣ್ಣೆ ವರೆಸೆ, ಕತ್ತಿ ವರೆಸೆ,  ಕೊಲಾಟ, ದೊಡ್ಡಾಟ,  ದೊಂಬರ  ಆಟಗಳು, ಇಂದ್ರ ಜಾಲ,  ವಿವಿಧ  ಬಗೆಯ ಸಂಗೀತ  ವಿದ್ವಾಂಸರಿಂದ  ಸಂಗೀತ  ಗಾಯನ, ಸಂಗೀತ  ಸ್ಪರ್ಧೆ , ನೃತ್ಯಗಾರರಿಂದ  ಬಗೆ ಬಗೆಯ ನೃತ್ಯ ಪ್ರದರ್ಶನ,   ಪೌರಾಣಿಕ  ನಾಟಕಗಳ   ಪ್ರದರ್ಶನ,  ಕವಿಗಳ  ಪಾಂಡಿತ್ಯ ಪ್ರದರ್ಶನ,    ಹೀಗೆ ಬಗೆ ಬಗೆಯ  ಕಾರ್ಯಕ್ರಮಗಳು  ಮಹಾನವಮಿಯ  8  ದಿನಗಳು  ನಡೆಯುತ್ತಿದ್ದವು, ನಂತರ  ಪ್ರತಿಭಾವಂತರನ್ನು  ಅವರ ಪ್ರತಿಭೆಗೆ  ತಕ್ಕಂತೆ    ಅರಮನೆ  ಆಸ್ಥಾನದ   ಮರ್ಯಾದೆಯೊಂದಿಗೆ   ಫಲ, ತಾಂಬೂಲ, ಭಕ್ಷಿಸು, ಉಡುಗೊರೆ, ಇವುಗಳಿಂದ  ಸನ್ಮಾನ ಮಾಡಲಾಗುತ್ತಿತ್ತು




ಶ್ರೀ ರಂಗಪಟ್ಟಣದ  ಲಕ್ಷ್ಮಿ ನರಸಿಂಹ  ದೇವಾಲಯದಲ್ಲಿರುವ  ಶ್ರೀ ಕಂಠೀರವ ನರಸರಾಜ ಒಡೆಯರ್  ಪ್ರತಿಮೆ 



ಮಹಾನವಮಿಯ  9 ನೆಯ ದಿನ   ಆಯುಧ ಪೂಜೆ ಕಾರ್ಯಕ್ರಮ  ಅಲಂಕಾರ ಮಾಡಲಾದ  ಆಯುಧ ಶಾಲೆಯಲ್ಲಿ    ಕತ್ತಿ, ಗುರಾಣಿ,  ಖಡ್ಗ , ಈಟಿ, ಬಿಲ್ಲು ಬಾಣಗಳು,  ರಥಗಳು,  ಅಶ್ವಗಳು, ಗಜಗಳು, ಇವುಗಳನ್ನು ಶುಚಿಗೊಳಿಸಿ, ಅಲಂಕಾರ ಮಾಡಿ,  ವ್ಯವಸ್ಥಿತವಾಗಿ  ಸಿದ್ದತೆ ಮಾಡಿಕೊಂಡು    ಅರಮನೆಯ   ಆಯುಧ ಪೂಜೆಯ ಮಂಟಪಕ್ಕೆ  ಮೆರವಣಿಗೆ ಮೂಲಕ ತರಲಾಗುತ್ತಿತ್ತು , ಶ್ರೀ ಕಂಠೀರವ ನರಸರಾಜ ಒಡೆಯರ್   ರವರು  ಆಯುಧ   ಪೂಜೆ ಮಂಟಪಕ್ಕೆ  ಆಗಮಿಸಿ   ಆಯುಧಗಳಿಗೆ , ಗಜಗಳಿಗೆ, ಅಶ್ವಗಳಿಗೆ    ಗೌರವದಿಂದ ಪೂಜೆ   ಸಲ್ಲಿಸುತ್ತಿದ್ದರು. ತದನಂತರ  ದುರ್ಗಾ ಜಪ, ಚಂಡಿಕಾ ಹೋಮ, ನಡೆದು  , ಸಂಗೀತ ನೃತ್ಯ  ಕಾರ್ಯಕ್ರಮಗಳಿಂದ   ಆ ದಿನ  ಸಂಪನ್ನವಾಗುತ್ತಿತ್ತು. 



ಹತ್ತನೆಯ ದಿನವೇ  ವಿಜಯದಶಮಿ , ಆ ದಿನ  ಶ್ರೀ ಕಂಠೀರವ ನರಸರಾಜ ಒಡೆಯರ್   ರವರು  ನಸುಕಿನಲ್ಲಿಯೇ ಎದ್ದು, ತಮ್ಮ  ಪ್ರಾತಃ  ಕರ್ಮಗಳನ್ನು ಮುಗಿಸಿ , ವಿವಿಧ  ಪುಣ್ಯ ಕ್ಷೇತ್ರಗಳ ಪುಣ್ಯ  ನದಿಗಳಿಂದ   ತರಲಾಗಿದ್ದ  ಜಲತೀರ್ಥದಿಂದ   ಸ್ನಾನ ಮಾಡಿ, ಶ್ರೀ ರಂಗನಾಥ , ಶ್ರೀ ಲಕ್ಷ್ಮಿ ನರಸಿಂಹ   ದೇವರುಗಳನ್ನು    ಪೂಜಿಸಿ      ಸಾಮ್ರಾಜ್ಯದ ವಿವಿಧ  ನದಿಗಳಿಂದ   ತರಲಾಗಿದ್ದ  ಜಲ ತೀರ್ಥವನ್ನು ಸ್ವೀಕರಿಸಿ ,   ನಂತರ  ವೇದಘೋಶಗಳಿಂದ  ಚಂಡಿಕಾ  ಪೂಜೆ  ಮಾಡಿ   ಕುಂಬಳಕಾಯಿ  ಒಡೆದು ಪೂಜೆಯನ್ನು  ಅಂತಿಮ ಗೊಳಿಸಲಾಗುತ್ತಿತ್ತು. ಅಂದು ಮಹಾರಾಜರು  ಶ್ರೀರಂಗಪಟ್ಟಣದ  ರಾಜ ಬೀದಿಯಲ್ಲಿ    ಸಾರ್ವಜನಿಕವಾಗಿ  ಜಂಬೂ ಸವಾರಿ ಮೆರವಣಿಗೆ  ಮೂಲಕ  ತೆರಳಿ ಅಂದು ಸಂಜೆ    ಶಮಿಪೂಜೆ  ನೆರವೆರಿಸಬೇಕಾದ  ದಿನ. ಅದರ  ಉಸ್ತುವಾರಿ ಹಾಗು ನಿರ್ವಹಣೆ   ಶ್ರೀ ರಂಗಪಟ್ಟಣದ  ರಾಜ ಪ್ರಮುಖ  ಅಥವಾ ಮೇಯರ್  ಲಿಂಗೇಗೌಡರದು.   ,     ರಾಜಧಾನಿ ಶ್ರೀ ರಂಗಪಟ್ಟಣದ   ಗಡಿಯ ಹೊರಗೆ ಪೂರ್ವಕ್ಕೆ  ಮೂರು ಮೈಲು  ದೂರದಲ್ಲಿ  ಇದ್ದ   ಶಮಿ ಮರದ   ಬಳಿ  ರಾಜರು ಶಮಿ[ ಬನ್ನಿ ಮರ ]  ಪೂಜೆಮಾಡಲು  ಅಲಂಕೃತ  ಮಂಟಪ ನಿರ್ಮಿಸಲಾಗುತ್ತಿತ್ತು.  ಅಂದು    ವಿಜಯ ದಶಮಿ ಪೂಜೆ ಯನ್ನು   ಅರಮನೆಯಲ್ಲಿ  ಮುಗಿಸಿ  ಅಂದು ಮದ್ಯಾಹ್ನ  ಮಹಾನವಮಿ ಜಂಬೂ ಸವಾರಿ ಮೆರವಣಿಗೆಗೆ  ಸಿದ್ದತೆ ಮಾಡಿಕೊಳ್ಳಲಾಗುತ್ತಿತ್ತು,   ನಂತರ ಜಂಬೂಸವಾರಿ  ಮೆರವಣಿಗೆ ರಾಜ ಬೀದಿಯಲ್ಲಿ  ಸಾಗುವ ಮುನ್ನ ಪರಿಶೀಲನೆ ನಡೆಸಿ, ಜಂಬೂಸವಾರಿ ಮೆರವಣಿಗೆಯನ್ನು ಪ್ರಾರಂಭಿಸಲಾಗುತ್ತಿತ್ತು.  ಅರಮನೆಯಿಂದ   ಶಮಿಪೂಜೆ ಮಾಡುವ  ಸ್ಥಳದ ವರೆಗಿನ  ಬೀದಿಗಳಲ್ಲಿ ಎರಡೂ ಬದಿಯಲ್ಲಿ  ಕಿಕ್ಕಿರಿದ  ಜನ ಸಾಗರದ ನಡುವೆ   ಅದ್ದೂರಿಯ ಜಂಬೂ ಸವಾರಿ ಸಾಗುತ್ತಿತ್ತು.  ವಿಜಯ ದಶಮಿಯ ಸಂಪ್ರದಾಯದಂತೆ  ಅರಮನೆಯ  ಜ್ಯೋತಿಷಿಗಳು  ನಿರ್ಧಾರ ಮಾಡಿದ  ಪುಣ್ಯ ಕಾಲದಲ್ಲಿ       ಶ್ರೀ ರಂಗನಾಥ  ಸ್ವಾಮಿ, ಹಾಗು  ಶ್ರೀ ನರಸಿಂಹ  ಸ್ವಾಮಿಗಳ ಉತ್ಸವ ಮೂರ್ತಿಗಳನ್ನು  ಸಕಲ ಗೌರವಗಳೊಂದಿಗೆ   ಮೆರವಣಿಗೆ ಮೂಲಕ ಶಮಿ ಮಂಟಪಕ್ಕೆ   ಒಯ್ಯಲಾಗುತ್ತಿತ್ತು. ನಂತರ ಶ್ರೀ ಕಂಠೀರವ ನರಸರಾಜ ಒಡೆಯರ್ ರವರು ಜಂಬೂ ಸವಾರಿ ಮೂಲಕ  ಶಮಿ ಪೂಜೆಗೆ ತೆರಳುತ್ತಿದ್ದರು.   ಮೈಸೂರು ಸಮ್ರಾಜ್ಯದ   ರಾಜ ಲಾಂಛನ, ಬಾವುಟಗಳು,  ಸೈನಿಕ ಕವಾಯತು, ಕುದುರೆ ಸಾಲು, ಆನೆ ಸಾಲು, ವಿವಿಧ ಬಗೆಯ ರಥಗಳು, ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಪಲ್ಲಕ್ಕಿ,  ಮುಂತಾದವುಗಳೊಂದಿಗೆ   ಮಿತ್ರ ರಾಜರು, ಸಾಮಂತ  ರಾಜರು,  ನಾಯಕರು, ಪಾಳೆಯ ಗಾರರು , ಮಂತ್ರಿಗಳು,  ರ ಸಮೇತವಾಗಿ   ರಾಜ ಗಾಂಭೀರ್ಯದ  ದೊಡ್ಡ ಆನೆಯ   ಅಂಬಾರಿಯಲ್ಲಿ  ಕುಳಿತು ಶ್ರೀ ಕಂಠೀರವ ನರಸರಾಜ ಒಡೆಯರ್ ರವರು    ಪ್ರಜೆಗಳೆಲ್ಲರ ಗೌರವ ಸ್ವೀಕರಿಸುತ್ತಾ    ಶಮಿ ಪೂಜೆಗೆ  ಜಂಬೂ ಸವಾರಿ ಹೋಗುತ್ತಿದ್ದರು. ಶಮಿ ಮಂಟಪದಲ್ಲಿ  ಇಷ್ಟ ದೇವತೆಗಳಾದ ರಂಗನಾಥ ಸ್ವಾಮಿ, ನರಸಿಂಹ ಸ್ವಾಮಿ  ಗಳಿಗೆ ಗೌರವ ಸಮರ್ಪಿಸಿ  ಶಮಿ ಪೂಜೆ  ಅಂದರೆ ಬನ್ನಿ ಮರದ ಪೂಜಾ ಕಾರ್ಯ  ನೆರವೇರಿಸಿ     ರಂಗನಾಥ ಸ್ವಾಮಿ, ನರಸಿಂಹ ಸ್ವಾಮಿ, ಉತ್ಸವ ಮೂರ್ತಿಗಳು ಹಾಗು ಬನ್ನಿ ಮರಕ್ಕೆ   ಕರ್ಪೂರ ಮಂಗಳಾರತಿಗಳನ್ನು  ಮಾಡಲಾಗುತ್ತಿತ್ತು. . ನಂತರ ಸೈನಿಕ  ತುಕುಡಿಗಳ  ವಿಸರ್ಜನೆಗೆ   ದಳವಾಯಿಗೆ   ಆದೇಶ ಮಾಡಲಾಗುತ್ತಿತ್ತು.  ಅಲ್ಲಿಗೆ    ಹತ್ತುದಿನಗಳ ಕಾಲ ನಡೆದ ವೈಭವದ  ಮಹಾನವಮಿ    ಉತ್ಸವಕ್ಕೆ  ಅಧಿಕೃತವಾಗಿ   ತೆರೆ ಬೀಳುತ್ತಿತ್ತು.    ಬನ್ನಿ ಮರದ ಪೂಜೆಯ ನಂತರ   ತಡ ರಾತ್ರಿ   ಮಹಾರಾಜರು    ಅರಮನೆಗೆ   ವಾಪಸ್ಸು ಬಂದು  ವಿಶ್ರಾಂತಿ ಪಡೆಯುತ್ತಾ ಇದ್ದರು.  ನಂತರ ಮಾರನೆಯ ದಿನ ರಾಜಾಜ್ಞೆಯಂತೆ    ವಿವಿಧ  ರಾಜರುಗಳ  ಸಂಸ್ಥಾನದಿಂದ ಆಗಮಿಸಿ ಮಹಾನವಮಿಯಲ್ಲಿ ಭಾಗವಹಿಸಿದ  ಕಲಾವಿದರು, ಜಟ್ಟಿಗಳು, ಕವಿಗಳು, ಕೋವಿದರು, ಸೈನಿಕರು, ನಾಯಕರು, ವಿದ್ವಾಂಸರುಗಳು  ಇನ್ನೂ ಹಲವಾರು ಬಗೆಯ  ಗಣ್ಯರನ್ನು  ಮೈಸೂರು  ಸಾಮ್ರಾಜ್ಯದ   ಸಂಪ್ರದಾಯದಂತೆ   ಅರಮನೆಯ  ವತಿಯಿಂದ  ಗೌರವಿಸಿ   ಬೀಳ್ಕೊಡಲಾಗುತ್ತಿತ್ತು.    ಸಂತೃಪ್ತಿ ಹೊಂದಿದ   ಎಲ್ಲರೂ ಶ್ರೀ ಕಂಠೀರವ ನರಸರಾಜ ಒಡೆಯರ್  ರವರ  ಗುಣಗಾನ ಮಾಡುತ್ತಾ  ಮಹಾನವಮಿ ಹಬ್ಬವನ್ನು ಕೊಂಡಾಡುತ್ತಾ  ರಾಜಧಾನಿ  ಶ್ರೀ ರಂಗಪಟ್ಟಣ ದಿಂದ  ನಿರ್ಗಮಿಸುತ್ತಿದ್ದರು.  ಅಲ್ಲಿಗೆ  ಮೈಸೂರು ಸಾಮ್ರಾಜ್ಯದ  ಮಹಾನವಮಿ  ಆಚರಣೆ  ಮುಕ್ತಾಯಗೊಳ್ಳುತ್ತಿತ್ತು.  ಆ ನಂತರ   ನಡೆದ  ಮಹಾನವಮಿ  ಹಬ್ಬದ ಆಚರಣೆಯಲ್ಲಿ ಕಾಲಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆ ಕಂಡಿದೆ. 





ಮೈಸೂರು ಸಾಮ್ರಾಜ್ಯದ  ರಾಜಧಾನಿ ಶ್ರೀ ರಂಗ ಪಟ್ಟಣದ  ದಸರಾ ಆಚರಣೆಯ  ಒಂದು ನೋಟ ತಮ್ಮ ಮುಂದೆ  ನನಗೆ ಲಭ್ಯವಾದ  ಮಾಹಿತಿಗಳ ಆಧಾರದಲ್ಲಿ  ಮಂಡಿಸಿದ್ದೇನೆ. ಇತಿಹಾಸದ ಈ ಪಯಣದಲ್ಲಿ ಜೊತೆ ಗೂಡಿದ ತಮಗೆಲ್ಲಾ  ವಂದಿಸಿ ನನ್ನ ಈ  ಮಾಹಿತಿ ಮುಗಿಸುತ್ತೇನೆ ವಂದನೆಗಳು.  .  ನಿಮ್ಮ ಅನಿಸಿಕೆಗಳನ್ನು  ನನಗೆ ತಿಳಿಸಿ ಪ್ರೋತ್ಸಾಹಿಸಿ. 




Sunday, July 23, 2017

ಅರಿಯದ ಇತಿಹಾಸ ಒಡಲಲ್ಲಿ ಬಚ್ಚಿಕೊಂಡ ಶಿರಸಿಯ ಬನವಾಸಿಪಕ್ಕದ ಗುಡ್ನಾಪುರ ....!

ಗುಡ್ನಾಪುರ ಬಂಗಾರೇಶ್ವರ ದೇಗುಲ





ನಮ್ಮ ಕನ್ನಡ ನಾಡಿನ  ಇತಿಹಾಸದ  ಸೆಳೆತವೆ ಹಾಗೆ ಒಮ್ಮೆ ಬಲೆಯಲ್ಲಿ ಬಿದ್ದರೆ  ನಿಮ್ಮನ್ನು ಸುಮ್ಮನೆ ಇರಲು ಬಿಡೋದಿಲ್ಲ , ನೀವು ಸುಮ್ಮನಿದ್ದರು  ಸಹ ನಮ್ಮ ನಾಡಿನ ಇತಿಹಾಸ  ನಿಮ್ಮನ್ನು  ಬಡಿದೆಬ್ಬಿಸಿ ತನ್ನ ಒಡಲೊಳಗೆ ಸೆಳೆದುಕೊಂಡು  ಅಪ್ಪಿಕೊಂಡು ಬಿಡುತ್ತದೆ.  ನಮ್ಮ ಹೆಮ್ಮೆಯ ಕನ್ನಡ ನಾಡಿನಲ್ಲಿ   ನಮ್ಮನ್ನು  ಕೆಣಕುವ  ಐತಿಹಾಸಿಕ ತಾಣಗಳು  ಬಹಳಷ್ಟಿವೆ , ನಮ್ಮ ಪ್ರೀತಿಯ ಮನಸನ್ನು ಅವುಗಳೆಡೆಗೆ ಸ್ವಲ್ಪ ತಿರುಗಿಸಿದರೆ ಸಾಕು  ನಮ್ಮ ಹೃದಯ ಸಿಂಹಾಸನದಲ್ಲಿ  ಶಾಶ್ವತವಾಗಿ ನೆಲೆಸಿಬಿಡುತ್ತವೆ  ಈ ಐತಿಹಾಸಿಕ  ತಾಣಗಳು. ನಿಜಾ  ನನ್ನನ್ನು  ಎಡಬಿಡದೆ  ಕಾಡುವ ಐತಿಹಾಸಿಕ  ತಾಣಗಳು   ಬಹಳಷ್ಟಿವೆ, ಅಂತಹ ತಾಣಗಳಲ್ಲಿ  ಇತ್ತೀಚಿನದು  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ  ಬನವಾಸಿ  ಸಮೀಪದ  "ಗುಡ್ನಾಪುರ ".



ಗುಡ್ನಾಪುರ ದ ಸುಂದರವಾದ ಕೆರೆ 




ಎರಡುವರ್ಷಗಳ ಹಿಂದೆ  ಶಿರಸಿಯ ಇತಿಹಾಸ  ಸಮ್ಮೇಳನಕ್ಕೆ  ಬಂದಿದ್ದಾಗ  ಕೆಲವು ಗೆಳೆಯರೊಡನೆ ಚರ್ಚಿಸುವಾಗ  ನಮ್ಮ  "ಶಿರಸಿ ಸಿರಿ"  ಪತ್ರಿಕೆಯ  "ಸಚಿನ್"      ಸಾರ್  ಹೇಗೂ ಬನವಾಸಿಗೆ ಹೋಗ್ತೀರಲ್ಲಾ  ಅಲ್ಲೇ ಹತ್ತಿರದಲ್ಲೇ ಗುಡ್ನಾಪುರ   ಅಂತಾ  ಒಂದು ತಾಣ ಇದೆ , ಬಹುಷಃ  ನಿಮಗೆ  ಇಷ್ಟಾ ಆಗುವ ತಾಣ ಅದು ಅಂತಾ   ಆಸೆ ಹುಟ್ಟಿಹಾಕಿದರು . ಇನ್ನೇನು  ಬನವಾಸಿಗೆ ಹೋಗ್ತೀವಲ್ಲಾ  ಗುಡ್ನಾಪುರಕ್ಕೂ  ಹೋಗೋಣಾ ಅಂದ್ರು ಜೊತೆಯಲ್ಲಿದ್ದವರು , ಹೊರಟಿತು ಸವಾರಿ   ಗುಡ್ನಾಪುರಕ್ಕೆ, ಶಿರಸಿಯಿಂದ  ಬನವಾಸಿ ರಸ್ತೆಯಲ್ಲಿ ಕ್ರಮಿಸಿದರೆ   ನಡುವೆ ಸುಮಾರು 18 ಕಿಲೋಮೀಟರು ದೂರದಲ್ಲಿ  ಎಡಕ್ಕೆ ತಿರುಗಿ  ಸ್ವಲ್ಪ ದೂರ ಮಣ್ಣಿನ  ಹಾದಿಯಲ್ಲಿ ಸಾಗಿದರೆ ನಿಮಗೆ ಗುಡ್ನಪುರದ  ಐತಿಹಾಸಿಕ  ತಾಣ ತಲುಪಬಹುದು . ತನ್ನ ಒಡಲಲ್ಲಿ  ಸುಂದರವಾದ ಹಾಗು ವಿಶಾಲವಾದ ಕೆರೆಯನ್ನು  ಅಡಗಿಸಿಕೊಂಡು , ಆ ಕೆರೆಯ ಸುತ್ತಾ  ರಚಿತವಾಗಿರುವ  ಒಂದು ಐತಿಹಾಸಿಕ  ಮಹತ್ವ ಪಡೆದಿರುವ  ಈ ಗುಡ್ನಾಪುರ. ಗುಡ್ನಾಪುರದ  ನಿಸರ್ಗದ  ವಿಶೇಷ ಅಂದ್ರೆ   ಒಂದು ಸುಂದರವಾದ  ವಿಶಾಲವಾದ  ಕೆರೆಯನ್ನು ಹೊಂದಿರುವುದು  , ಅದರ ಸುತ್ತ ಮುತ್ತ  ಹಸಿರಿನ ಗದ್ದೆಗಳು,   ಕೆರೆ ಮತ್ತು ಹಸಿರನ್ನು  ನಂಬಿ ಬದುಕುವ  ಹಲವು ಬಗೆಯ ಪಕ್ಷಿಗಳು . ಕೆರೆಯ ದಂಡೆಯ ಮೇಲೆ   ಆಧುನಿಕ ಶೈಲಿಯ    ಬಂಗಾರೇಶ್ವರ  ದೇವಾಲಯ ಕಂಡು ಬರುತ್ತದೆ.








ಬಂಗಾರೇಶ್ವರ ಸ್ವಾಮಿ ಮೂರ್ತಿ 



ಗುಡ್ನಾಪುರದ ಕೆರೆಯ ದಡದಲ್ಲಿ  ಬಂಗಾರೇಶ್ವರ, ಕರಿಯಮ್ಮ, ಮರಿಯಮ್ಮ  ಎಂಬ ಮೂರು   ದೇಗುಲಗಳು ಕಂಡುಬರುತ್ತವೆ ಸುತ್ತಮುತ್ತಲಿನ   ಗ್ರಾಮದ    ಗ್ರಾಮಸ್ಥರು / ಅದರಲ್ಲೂ  ಹೆಣ್ಣುಮಕ್ಕಳು  ತಮ್ಮ ಮನೆಯಲ್ಲಿ  ಸಂತಾನ ಪ್ರಾಪ್ತಿಯಾಗದಿದ್ದರೆ  ಈ ದೇಗುಲಗಳಿಗೆ  ತಮ್ಮ ಕುಟುಂಬದಲ್ಲಿ  ಸಂತಾನ ಪ್ರಾಪ್ತಿಯಾದರೆ   ತೊಟ್ಟಿಲನ್ನು ಅರ್ಪಿಸುವ  ಬಗ್ಗೆ  ಹರಕೆ  ಹೊತ್ತುಕೊಳ್ಳುತ್ತಾರೆ  ,    ಹಾಗು ಅದರಂತೆ ಭಕ್ತಿಯಿಂದ  ನಡೆದುಕೊಳ್ಳುವುದಾಗಿ ತಿಳಿದು ಬಂತು. ಈ ಮೂರೂ ದೇವಾಲಯಗಳು  ಗ್ರಾಮದ  ಜನಜೀವನದ ಅಂಗವಾಗಿವೆ. ಇಂತಹ  ಗ್ರಾಮಕ್ಕೆ ಬಂದ ನಮ್ಮನ್ನು  ಕೆಲವು ಗ್ರಾಮಸ್ಥರು  ಪ್ರೀತಿಯಿಂದ  ಬರಮಾಡಿಕೊಂಡರು . ಮೈಸೂರಿ ನವರು ಎಂಬುದನ್ನು ತಿಳಿದು  ಮತ್ತಷ್ಟು  ಆದರದಿಂದ  ನಮ್ಮನ್ನು  ಐತಿಹಾಸಿಕ ಜಾಗಕ್ಕೆ ಕರೆದುಕೊಂಡು ಹೋದರು.



ಗುಡ್ನಾಪುರದ  ಪರಿಸರ 


ಇವನ್ಯಾವ್ನ್ರೀ  ಅದ್ಯಾವ್ದೋ  ಇತಿಹಾಸ ಅಂತಾ  ಯಾವ್ದೋ "ಗುಡ್ನಾಪುರ"   ಅನ್ನೋ  ಹಳ್ಳಿಗೆ ಹೋಗಿ   ಬೊಗಳೆ ಹೊಡೀತಾನೆ  ಅನ್ನಬಹುದು ಕೆಲವರು,  ನಿಜಾ ಸಾರ್  ಮೊದಲು ನಾನೂ ಹಾಗೆ ಅನ್ಕೊಂಡಿದ್ದೆ , ಆದ್ರೆ ಈ ಊರಿನ ಬಗ್ಗೆ ಕೆದಕುತ್ತಾ  ಹೋದಾಗ  ಅಚ್ಚರಿ ಎಂಬ  ಇತಿಹಾಸ ಎದ್ದುಬಂತು.   ಬನ್ನಿ ಈ ಊರಿನ ಬಗ್ಗೆ ಸ್ವಲ್ಪ ತಿಳಿಯೋಣ

ಶಿರಸಿ ತಾಲೂಕಿನಲ್ಲಿ  ಇತಿಹಾಸ ಅಂದ್ರೆ  ಬನವಾಸಿ ಅನ್ನೋದು ವಾಡಿಕೆಯಾಗಿತ್ತು, ಸೋಂದಾ , ಶಿರಸಿ, ಸಹಸ್ರಲಿಂಗ , ಮುತ್ತಿನಕೆರೆ,   ಮಂಜುಗುಣಿ, ಯಾಣ, ಕೊಳಗಿ ಬೀಸ್  ಮುಂತಾದ    ತಾಣಗಳು ಐತಿಹಾಸಿಕ ಪುರಾವೆಯನ್ನು ಬಹುಬೇಗ ಪ್ರಕಟಮಾಡಿಕೊಂಡು ಜನರ ಗಮನ ಸೆಳೆದಿದ್ದವು, ಆದರೆ  ಬನವಾಸಿ ಯಿಂದ ಕೇವಲ ಮೂರು ನಾಲ್ಕು ಕಿಲೋಮೀಟರು  ದೂರವಿದ್ದ ಗುಡ್ನಾಪುರ   1988 ರವರೆಗೆ  ತನ್ನ ಇತಿಹಾಸದ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ.  ಬೆಳಗಾವಿ ಜಿಲ್ಲೆಯ  ಖಾನಾಪುರ  ತಾಲೂಕಿನ  ಹಲಸಿಯಲ್ಲಿ   ಗುಡ್ನಾಪುರದ  ಇತಿಹಾಸದ ಬಗ್ಗೆ ಸಿಕ್ಕ  ಕೆಲವು ಆಧಾರಗಳ ಮೇಲೆ  1988  ರಲ್ಲಿ   ಕೇಂದ್ರ ಪ್ರಾಚ್ಯ ವಸ್ತು ಸಂರಕ್ಷಣಾ  ಇಲಾಖೆಯವರು  ಹಾಗು ಕೆಲವು ವಿಧ್ವಾಂಸರು ಇತ್ತ ಗಮನಹರಿಸಿ  1988 ರಿಂದ 1992 ರ ವರೆಗೆ  ಉತ್ಕನನ  ನಡೆಸಿ ,  ಈ ಊರಿನ ಇತಿಹಾಸಕ್ಕೆ ಒಂದು ರೂಪ ಕೊಡುತ್ತಾರೆ,  ಸಂಶೋಧನೆ ಸಮಯದಲ್ಲಿ  ಕಂಡುಬಂದ  ಒಂದು ಶಾಸನ ಸ್ಥಂಬ ಹಾಗು  ಕೆಲವು  ಕಟ್ಟಡಗಳ ಅವಶೇಷಗಳು  ಬನವಾಸಿ ಕದಂಬರ  ಇತಿಹಾಸದ  ಬಗ್ಗೆ ಹೆಚ್ಚಿನ  ಬೆಳಕು ಚೆಲ್ಲಿವೆ.




ಗುಡ್ನಾಪುರ ಇತಿಹಾಸದ ಒಂದು ಅವಶೇಷ 


ನಮಗೆಲ್ಲಾ  ತಿಳಿದಂತೆ  ಮಯೂರ ಶರ್ಮ / ಮಯೂರ ವರ್ಮ  ನಿಂದ ಸ್ಥಾಪಿತವಾದ   ಬನವಾಸಿಯ  ಕದಂಬ  ರಾಜವಂಶ  ಕ್ರಿಸ್ತ  ಶಕ  345–565  ರವರೆಗೆ  ಮೆರೆದದ್ದು    ಇತಿಹಾಸ , ಇದೆ ಅವಧಿಯಲ್ಲಿ  ರಾಜಧಾನಿ  ಬನವಾಸಿಯಾಗಿದ್ದರೂ ಸಹ   ಹಲಸಿ, ಹಾಗು ಗುಡ್ನಾಪುರಗಳೂ ಸಹ   ಆಡಳಿತದಲ್ಲಿ  ಪ್ರಾಮುಖ್ಯತೆ ಪಡೆದ ತಾಣಗಳಾಗಿದ್ದವು, ಜೊತೆಗೆ  ಬನವಾಸಿ ಕದಂಬರ ಕಾಲದಲ್ಲಿ  ಸ್ಥಳೀಯವಾಗಿ  ಬಳಕೆಯಲ್ಲಿದ್ದ  ಕನ್ನಡವನ್ನು  ಆಡಳಿತ ಭಾಷೆ ಯನ್ನಾಗಿ  ಅಳವಡಿಸಿಕೊಳ್ಳಲಾಯಿತು,  ಹಾಗಾಗಿ  ಪ್ರಪ್ರಥಮವಾಗಿ  ಆಡಳಿತ ಭಾಷೆಯನ್ನಾಗಿ ಕನ್ನಡವನ್ನು  ಜಾರಿಗೆ ತಂದವರು ಬನವಾಸಿ ಕದಂಬರು  ಮಾತ್ರ. ಜೊತೆಗೆ ಸಂಸೃತ  ಇದ್ದಿತಾದರೂ  ಹೆಚ್ಚಾಗಿ ಬಳಕೆಯಲ್ಲಿದ್ದುದು  ಕನ್ನಡ ಭಾಷೆ.     ಕದಂಬರ ಕಾಲದಲ್ಲಿ ಅತೀ ಪ್ರಾಮುಖ್ಯತೆ  ಪಡೆದ ಎರಡು ಧರ್ಮಗಳು  ಹಿಂದೂ ಹಾಗು ಜೈನ  ಧರ್ಮಗಳು . ಹಾಗಾಗಿ ಕದಂಬರ ಕಾಲದಲ್ಲಿ ನಮಗೆ ಕಂಡು ಬರುವುದು ದೇವಾಲಯಗಳು ಹಾಗು ಜೈನ ದೇಗುಲಗಳು, ಬಸದಿಗಳು ಇತ್ಯಾದಿ. ಅಂತೆಯೇ ಗುಡ್ನಾಪುರದ ಇತಿಹಾಸ   ಬನವಾಸಿ ಕದಂಬರ  ಕಾಲಕ್ಕೆ  ಸರಿಯಾಗಿ  ಹೊಂದಾಣಿಕೆ ಆಗಿದೆ. ಕದಂಬರ ಇತಿಹಾಸ ತಿಳಿಯಲು ನಮಗೆ  ಶಿವಮೊಗ್ಗ ಜಿಲ್ಲೆಯ ತಾಳಗುಂಡ, ಗುಂಡನೂರು, ಚಿತ್ರದುರ್ಗ ಸಮೀಪದ  ಚಂದ್ರವಳ್ಳಿ,  ಬೆಳಗಾವಿ ಜಿಲ್ಲೆಯ  ಹಲಸಿ,  ಹಾಗು ಹಾಸನ ಜಿಲ್ಲೆಯ ಹಲ್ಮಿಡಿ  ಶಾಸನಗಳು  ಮಾತ್ರ ಸಹಾಯ ಮಾಡುತ್ತವೆ, ಈ ಸ್ಥಳಗಳು ಕದಂಬರ ಆಡಳಿತ ಕಾಲದಲ್ಲಿ  ಹೆಚ್ಚಿನ ಮಹತ್ವ ಪಡೆದ   ಆಡಳಿತಾತ್ಮಕ  ಸ್ಥಳಗಳೆಂದು  ತಿಳಿಯಬಹುದಾಗಿದೆ. 



ಗುಡ್ನಪುರ ಜೈನ ಮಂದಿರ ಹಾಗು ಅರಮನೆ  ಇದ್ದ ಪ್ರದೇಶಗಳ ಅವಶೇಷ 

  
ದೇಗುಲದ ಒಳಗೆ ಕಂಡುಬರುವ  ಜೈನ ಮೂರ್ತಿ 
ದೇಗುಲದ ಒಳಗೆ ನೆಲಕ್ಕೆ ಒರಗಿರುವ ಮೂರ್ತಿ 

ಶಿಥಿಲಗೊಂಡ   ರತಿ ಮನ್ಮಥ  ಮೂರ್ತಿ

.
ಶಿಥಿಲ ಗೊಂಡ ಗಣಪತಿ .





ದೇಗುಲದ ಒಳಗೆ ಕಲಾತ್ಮಕ  ಕಂಬ 





ಯಾವ  ಐತಿಹಾಸಿಕ ಘಟನೆಯ ಸಾಕ್ಷಿಯೋ   ಮೂಲೆ ಸೇರಿದೆ. 



ಕದಂಬ  ಅರಸರ  ಪೀಳಿಗೆಯ ಮೊದಲ ದೊರೆ ಮಯೂರ ಶರ್ಮ  ಹಾಗು ಕೊನೆಯ ದೊರೆ  ಕೃಷ್ಣ  ವರ್ಮ ಅಂದರೆ  ಕದಂಬರ ಆಳ್ವಿಕೆ ಕಾಲ ಕ್ರಿಸ್ತ  ಶಕ  345–565  ರವರೆಗೆ ನಡೆಯಿತು,  ಕ್ರಿಸ್ತ ಶಕ  345  ಕ್ರಮವಾಗಿ, ಮಯೂರಶರ್ಮ , ಬಗಿತರ್ಹ ,ರಘು, ಕಕುತ್ಸವರ್ಮ , ಶಾಂತಿವರ್ಮ , ಮ್ರಿಗೇಶವರ್ಮ , ಶಿವಮಂದತಿ ವರ್ಮ, ರವಿವರ್ಮ , ನಂತರ  ತ್ರಿಪರ್ವತ  ಶಾಖೆಯಿಂದ , ಕೃಷ್ಣ ವರ್ಮ 1, ವಿಷ್ಣುವರ್ಮ, ಸಿಂಹ ವರ್ಮ,  ನಂತರ   ಕದಂಬ ವಂಶದ ಕೊನೆಯ  ದೊರೆ ಕೃಷ್ಣ ವರ್ಮ2  ಮೊದಲು  ಹಿಂದೂ ಧರ್ಮ ಪಾಲಿಸಿದ ಕದಂಬರ ಅರಸರುಗಳು  ನಂತರ   ಜೈನ ಧರ್ಮಕ್ಕೆ ಕೂಡಾ ಪ್ರೋತ್ಸಾಹ ಕೊಟ್ಟಿರುವುದು  ಇತಿಹಾಸದ ದಾಖಲೆಗಳಿಂದ ತಿಳಿದು ಬರುತ್ತದೆ .     ಈ ನಡುವೆ  ಕ್ರಿಸ್ತ ಶಕ 485  ರಿಂದ 519 ರವರೆಗೆ  ಬನವಾಸಿಯಲ್ಲಿ ಆಡಳಿತ ನಡೆಸಿದ  ಕದಂಬ ರವಿವರ್ಮ  ಗುಡ್ನಾಪುರದಲ್ಲಿ  ಜೈನ  ಧರ್ಮಕ್ಕೆ ಸೇರಿದಂತೆ ಮನ್ಮಥ ದೇವಾಲಯವನ್ನು ಕಟ್ಟಿಸಿರುವುದಾಗಿ ತಿಳಿದು ಬರುತ್ತದೆ, ಜೊತೆಗೆ ಅದೇ ಕಾಲದಲ್ಲಿ  ದೇವಾಲಯದ ಜೊತೆಗೆ  ರಾಜರ  ಅರಮನೆ  ಸಹ ಇದ್ದಿತೆಂದು ತಿಳಿದು ಬರುತ್ತದೆ , ಇದನ್ನು  ಪುಷ್ಟೀಕರಿಸುವ  ಸಾಕ್ಷಿಗಳನ್ನು ಇಂದಿಗೂ ಸಹ ನಾವು ಕಾಣಬಹುದು, ಶಿವಮಂದತಿ ವರ್ಮ ಹಾಗು ಆನಂತರ   ರವಿವರ್ಮ   ಜೈನ ಧರ್ಮವನ್ನು ಪಾಲಿಸಿರುವುದು   ಕಂಡುಬರುತ್ತದೆ.  ಹಾಗಾಗಿ  ಗುಡ್ನಾಪುರದಲ್ಲಿ  ಜೈನ ಧರ್ಮಕ್ಕೆ   ಅನುಗುಣವಾಗಿ   ಬೆಳವಣಿಗೆಗಳು ಕಂಡುಬಂದಿವೆ.  ಈ ದೇಗುಲವನ್ನು   ಗುರುತಿಸುವ ಬಗ್ಗೆ   ಎರಡುಬಗೆಯ ದ್ವಂದ್ವ  ಕಂಡುಬರುತ್ತದೆ.  ಈ ದೇಗುಲವನ್ನು ರತಿ   ಮನ್ಮತ ದೇಗುಲವೆಂದು ಕರೆಯುತ್ತಿದ್ದರೆಂದೂ  ಹೇಳಲಾಗುತ್ತದೆ, ಅದಕ್ಕೆ ಪೂರಕವಾಗಿ ಇಲ್ಲಿ ವಸಂತೋತ್ಸವ  ಹಬ್ಬದ ಆಚರಣೆ ಇತ್ತೆಂದು  ಹೇಳುವ ಒಂದು ವಾದವಿದೆ, ಇನ್ನೊಂದು ವಾದ  ಮನ್ಮಥ ಅಂದರೆ ಜೈನ ಧರ್ಮದಲ್ಲಿ  ಬಾಹುಬಲಿ ಎಂಬ ಅರ್ಥ ವಿದೆ  ಹಾಗಾಗಿ ಇದು  ಮನ್ಮಥ  ಮಂದಿರ ಅಂದರೆ ಬಾಹುಬಲಿ ಗೆ ಅರ್ಪಿತವಾದ ಮಂದಿರ ಎನ್ನಲಾಗುತ್ತಿದೆ. ಇದರಲ್ಲಿ ಯಾವುದು ಸರಿ ಯಾವುದು ತಪ್ಪು  ಎಂಬ ಬಗ್ಗೆ ಸ್ಪಷ್ಟ  ಚಿತ್ರಣ ಸಿಗಬೇಕಿದೆ. ನಂತರ  ಇದೆ ಪ್ರದೇಶದಲ್ಲಿ  ರವಿವರ್ಮನ  ಕಾಲದ ಬ್ರಾಹ್ಮೀ ಲಿಪಿಯ ಐತಿಹಾಸಿಕ ಶಾಸನ ಕಂಡು ಬರುತ್ತದೆ. 





ರವಿವರ್ಮನ ಶಾಸನ ಸ್ಥಂಬ


  ಬ್ರಾಹ್ಮಿ  ಲಿಪಿಯ ಶಾಸನ 



ಗ್ರಾಮಸ್ಥರ  ನೆರವಿನೊಂದಿಗೆ ಗುಡ್ನಾಪುರದ ಐತಿಹಾಸಿಕ  ಸ್ಥಳಕ್ಕೆ ಬಂದ ನಮಗೆ  ಮೊದಲು ದರ್ಶನ ಕೊಟ್ಟಿದ್ದು  ಒಂದು ಶಾಸನ ಸ್ತಂಭ , ಶಿಥಿಲವಾಗಿದ್ದ ಅದಕ್ಕೆ  ರಕ್ಷಣೆಗಾಗಿ  ನಿಲ್ಲಿಸಿದ  ಕಬ್ಬಿಣದ  ಸರಳುಗಳು  ಹಾಗು ಸ್ಮಾರಕಕ್ಕೆ  ನೆರಳು ನೀಡಲು  ಒಂದು ಶೀಟಿನ  ಚಾವಣಿ .  ಹತ್ತಿರ  ನಡೆದು ನೋಡಿದಾಗ   ಗೋಚರಿಸಿದ್ದು ಸ್ಥಂಬದ  ನಾಲ್ಕೂ ಬದಿಯಲ್ಲಿ  ಚಪ್ಪಟೆ ಆಕಾರದ  ಜಾಗದಲ್ಲಿ  ಶಾಸನ ರಚನೆ , ಮತ್ತಷ್ಟು ಹತ್ತಿರ ಹೋಗಿ ನೋಡಿದಾಗ  ಆ ಶಾಸನದ ಕೆಲವು ಸಾಲುಗಳು, ಅಕ್ಷರಗಳು ವಿರೂಪವಾಗಿದ್ದವು.  ನಂತರ ನನ್ನ ಕ್ಯಾಮರದಲ್ಲಿ ಕೆಲವು ಚಿತ್ರಗಳನ್ನು ತೆಗೆದು  ಐತಿಹಾಸಿಕ  ದಾಖಲೆಗಳ  ಪರಿಶೀಲನೆ   ಮಾಡಿದಾಗ  ಕದಂಬ ದೊರೆ ರವಿವರ್ಮನು  ಚೈತ್ರಮಾಸದಲ್ಲಿ ಜರುಗಿದ   ಮನ್ಮತೋತ್ಸವದ  ಅಥವಾ ವಸಂತೋತ್ಸವದ  ಸಂದರ್ಭ ದಲ್ಲಿ  ಮನ್ಮತ ದೇಗುಲವನ್ನು ನಿರ್ಮಾಣ ಮಾಡಿದನೆಂದು ತಿಳಿಸಿ, ಹಲವು ಧಾರ್ಮಿಕ ಕಾರ್ಯಕ್ರಮಗಳಿಗಾಗಿ  ನೀಡಿದ ದತ್ತಿಯನ್ನು,  ಗುಡ್ನಾಪುರದ [ ಅಂದಿನ ಗುಡ್ಡ ತಟಾಕ ] ಕೆರೆಯನ್ನು ಕಟ್ಟಿಸಿದ ಬಗ್ಗೆ  ಹಾಗು  ಕದಂಬರ ವಶಾವಳಿಯ ಉಲ್ಲೇಖ ವಿರುವುದಾಗಿ ತಿಳಿದುಬರುತ್ತದೆ. ಈ ಶಾಸನದ ಅಚ್ಚರಿಯೆಂದರೆ  ಗುಡ್ನಾಪುರದ  ಕೆರೆಯನ್ನು   ಕದಂಬರ ಆಳ್ವಿಕೆಕಾಲದಲ್ಲಿ  ಗುಡ್ಡದ ತಟಾಕ  ಎನ್ನುತ್ತಿದ್ದುದು. ಜೊತೆಗೆ  ಆ ಕೆರೆ ಕದಂಬರ  ಬಳುವಳಿ ಎಂಬುದು  ಸಹ  ಹೆಮ್ಮೆಯ ವಿಚಾರ.   ಆದಿ ಕವಿ ಪಂಪನೂ  ಸಹ ತನ್ನ ಕಾವ್ಯಗಳಲ್ಲಿ   ವಸಂತೋತ್ಸವದ  ಬಗ್ಗೆ ಉಲ್ಲೇಖ ಮಾಡಿದ್ದು,   ಈ ತಾಣ  ಬನವಾಸಿಯ ಬಹಳ ಸಮೀಪವೇ ಇರುವ  ಕಾರಣ, ಗುಡ್ನಾಪುರಕ್ಕೂ  ಪಂಪನ   ಆಗಮನವಾಗಿತ್ತು ಎಂಬುದು ನಿರ್ವಿವಾದ.  







ಕದಂಬರ ಕೊಡುಗೆ ಈ ಸುಂದರವಾದ  ಗುಡ್ನಾಪುರದ ಕೆರೆ 


 ಶಾಸನ  ಸ್ತಂಭ ನೋಡಿಕೊಂಡು ಮುಂದೆ ಬಂದ ನಮಗೆ ಗೋಚರಿಸಿದ್ದು , ವಿಶಾಲವಾದ ಪ್ರದೇಶದಲ್ಲಿ  ಹರಡಿದ್ದ ಐತಿಹಾಸಿಕ  ಅರಮನೆ ಹಾಗು   ದೇಗುಲದ  ಅವಶೇಷಗಳು . ದಪ್ಪನಾದ  ಇಟ್ಟಿಗೆ , ಗಡುಸಾದ ಮಣ್ಣು,   ಅಂದಿನ ಕಾಲದಲ್ಲಿ  ತಯಾರಾಗುತ್ತಿದ್ದ  ಗಾರೆ ಗಚ್ಚು  ಗಳನ್ನೂ ಬಳಸಿ  ಕಟ್ಟಿದ್ದ  ಈ ಅರಮನೆ ಹಾಗು ದೇಗುಲ  ಗತಕಾಲದ  ತಾಂತ್ರಿಕತೆಯ  ಕೌಶಲದ  ಗುಟ್ಟನ್ನು ತನ್ನೊಳಗೆ  ಅಡಗಿಸಿಕೊಂಡಿವೆ. 





ದೇಗುಲದ ದರ್ಶನ 


ಅವಶೇಷಗಳನ್ನು ದಾಟಿಕೊಂಡು  ಒಂದು ಎತ್ತರದ  ಜಾಗದಲ್ಲಿದ್ದ  ದೇಗುಲವನ್ನು  ಪ್ರವೇಶ ಮಾಡಿದೆವು,  ದೇಗುಲದ ಒಳಗೆ ನಮಗೆ ಜೈನ ಧರ್ಮದ  ಹಾಗೂ  ಹಿಂದೂ ಧರ್ಮದ  ಶಿಥಿಲಗೊಂಡ   ಮೂರ್ತಿಗಳು ಕಂಡುಬರುತ್ತವೆ.  ಮೊದಲು ಈ ದೇಗುಲ ಜೈನ ದೇಗುಲವಾಗಿದ್ದು ಕಾಲಾನಂತರ ವೀರಭದ್ರ ದೇವಾಲಯವಾಗಿ  ಪರಿವರ್ತಿತಗೊಂಡಿರುವುದು  ಕಾಣಸಿಗುತ್ತದೆ. ಆ ದೇಗುಲದಲ್ಲಿ    ಗರ್ಭಗೃಹ, ಅರ್ಧಮಂಟಪ, ನವರಂಗ , ಕಾಣಸಿಕ್ಕರೂ  ಎಲ್ಲೆಡೆಯೂ  ಶಿಥಿಲವಾದ  ಮೂರ್ತಿಗಳಿಂದ   ತನ್ನ ಅಂದ ಕಳೆದುಕೊಂಡಿವೆ,  ದೇಗುಲದ ಒಳಗಡೆ ಸುಂದರ ಕಂಬಗಳೂ ಸಹ  ತಮ್ಮ ಅಂದ ಕಳೆದುಕೊಳ್ಳುತ್ತಾ ಇವೆ. ಎತ್ತರದ ತ್ರದೆಶದಲ್ಲಿರುವ ದೇವಾಲಯದಿಂದ  ಹೊರಬಂದರೆ ನಿಮಗೆ ದೇವಾಲಯದ ಸುತ್ತಾ  ಅರಮನೆ ಇದ್ದ ಬಗ್ಗೆ  ಅವಶೇಷಗಳು ಗೋಚರಿಸುತ್ತವೆ. ಅಂದಿನ ದಿನಗಳಲ್ಲಿ ಕದಂಬರ  ಆಡಳಿತದ  ಭಾಗವಾಗಿದ್ದ ಈ ಅರಮನೆ  ಎಷ್ಟು ಸುಸಜ್ಜಿತವಾಗಿತ್ತು ಎಂಬ ಬಗ್ಗೆ ಕಲ್ಪಿಸಿಕೊಂಡರೆ  ನಿಜಕ್ಕೂ ಅಚ್ಚರಿಯಾಗುತ್ತದೆ. 





ಅರಮನೆಯ ಅವಶೇಷ ..1



ಗುಡ್ನಾಪುರದ ಕೆರೆಯ ದಂಡೆಯ ಮೇಲಿತ್ತು ಅರಮನೆ 




ಹೌದು ಕದಂಬರ ಕಾಲದಲ್ಲಿ ಬನವಾಸಿಗೆ ಎಷ್ಟು ಪ್ರಾಮುಖ್ಯತೆ  ಇತ್ತೋ ಅಷ್ಟೇ ಪ್ರಾಮುಖ್ಯತೆ   ಗುಡ್ನಾಪುರಕ್ಕೂ ಇತ್ತೆಂದು ಕಾಣುತ್ತದೆ,  ಬನವಾಸಿಯಿಂದ  ಕೇವಲ ಮೂರು ಕಿಲೋಮೀಟರು  ಇರುವ ಈ ಪ್ರದೇಶ  ಕದಂಬರ  ಆಡಳಿತ ಕೇಂದ್ರ ಆಗಿರುವ ಎಲ್ಲ ಸಾಧ್ಯತೆಗಳನ್ನು  ಕಡೆಗಣಿಸುವಂತಿಲ್ಲ, ಹಾಗಾಗಿ ಇಲ್ಲಿ  ಗುಡ್ನಾಪುರ  ಕೆರೆಯ   ದಡದಲ್ಲಿ  ವಸಂತೋತ್ಸವ  ದ ಅಂಗವಾಗಿ  ರತಿ ಮನ್ಮಥ  ದೇವಾಲಯ ನಿರ್ಮಾಣ ಮಾಡಿದ್ದ ಕದಂಬರು  ಗುಡ್ನಾಪುರದಲ್ಲಿ   ಆಡಳಿತದ  ಅಂಗವಾಗಿ   ಅರಮನೆ ಕಟ್ಟಿದ್ದರೆಂಬುದು  ಇಲ್ಲಿನ ಅವಶೇಷಗಳ  ವಿವರಗಳನ್ನು  ಐತಿಹಾಸಿಕ ದಾಖಲೆಗಳೊಂದಿಗೆ  ತಾಳೆಮಾಡಿದಲ್ಲಿ  ಕಂಡುಬರುತ್ತದೆ.






 ಶತಮಾನಗಳ  ಇತಿಹಾಸದ  ಸಾಕ್ಷಿ ಈ ಹಳೆಯ ಮರ  ಹಾಗು ಅದರ ಪಕ್ಕದಲ್ಲಿ ಕಾಣುವ  ಕೆರೆ. 


ಆದರೆ ಕಾಲಾನಂತರ  "ಗುಡ್ನಾಪುರದ ಇತಿಹಾಸ"  ತನ್ನ ಗತ ವೈಭವಗಳನ್ನು ಕಳೆದುಕೊಂಡು , ಬನವಾಸಿಯ ಸನಿಹ ಇದ್ದರೂ  ಬನವಾಸಿಯಂತೆ  ಮೆರೆದಾಡದೆ  , ಸದ್ದಿಲ್ಲದೇ   ಮರೆಯಾಗಿಬಿಟ್ಟಿತು.  ಇಂದಿಗೂ   ತನ್ನ ಗತ ವೈಭವಕ್ಕೆ ಆದ ಗಾಯವನ್ನು  ವಾಸಿಮಾಡಿಕೊಳ್ಳಲು ಆಗದೆ  ನಿಟ್ಟುಸಿರು ಬಿಡುತ್ತಾ   ಮಲಗಿಬಿಟ್ಟಿದೆ.  ನಿಜಾ  ಈ ಎಲ್ಲಾ  ಇತಿಹಾಸದ ಸಾಕ್ಷಿಯಾಗಿ  ಗುಡ್ನಾಪುರದ ಕೆರೆ ,   ಇದನ್ನೆಲ್ಲಾ  ಕಾಣುತ್ತಾ  ಒಮ್ಮೆಲೇ ಯಾವುದೋ ನೋವಿನ  ಲೋಕದೊಳಗೆ   ಮುಳುಗಿ ಹೋಗಿದ್ದ    ನಾನು  ಎಚ್ಚರ ಗೊಂಡಿದ್ದು,  ಆ ಹಳ್ಳಿಗರ  ಮಾತಿಗೆ . 




ಬೇಲಿ ಹಾಕಿದ  ಇತಿಹಾಸಕ್ಕೆ  ಪ್ರೀತಿಯ ಕಾವಲು ನಿಂತ ಗ್ರಾಮಸ್ಥರು 


ಸಾರ್ ಬಹಳ  ದೂರದಿಂದ ಬಂದಿದ್ದೀರಿ ನಮಗೆ  ತುಂಬಾ  ಸಂತೋಷ ಆಯ್ತು , ಎನ್ನುತ್ತಾ  ನಮ್ಮ  ತಂಡವನ್ನು   ಐತಿಹಾಸಿಕ ಪ್ರದೇಶದ  ಪ್ರವೇಶ ದ್ವಾರದ ವರೆಗೂ ಬಂದು   ಪ್ರೀತಿಯಿಂದ  ಬೀಳ್ಕೊಟ್ಟರು.  ನನಗೋ  ಒಂದೆಡೆ  ಐತಿಹಾಸಿಕ   ಪ್ರದೇಶ ನೋಡಿದ  ಸಂತಸ ಮತ್ತೊಂದೆಡೆ ನರಳುತ್ತಿರುವ ಇತಿಹಾಸಕ್ಕೆ  ಸಾಂತ್ವನ ಹೇಳಲಾಗದ  ಸಂಕಟ.  ಭಾರವಾದ  ಹೃದಯದೊಡನೆ ನಿಟ್ಟುಸಿರು ಬಿಡುತ್ತಾ    ಅಲ್ಲಿಂದ ಹೊರಡಲು  ಸಿದ್ಧನಾದೆ , ದೂರದಲ್ಲಿ ಬೇಲಿ ಹಾಕಿದ  ಇತಿಹಾಸಕ್ಕೆ  ಪ್ರೀತಿಯ ಕಾವಲು ನಿಂತ ಗ್ರಾಮಸ್ಥರು  ಇತಿಹಾಸದ ಕಣ್ಣೀರು ಒರೆಸಲಾರದೆ    ನಿಟ್ಟುಸಿರು ಬಿಡುತ್ತಾ   ನಿಂತರು.  ನಿಜವಾಗಿಯೂ  ಇತಿಹಾಸವನ್ನು  ನಿರ್ಲಕ್ಷಿಸದೆ  ಉಳಿಸಿಕೊಂಡಲ್ಲಿ   ನಮ್ಮ ನಾಡಿನ ಸಂಸ್ಕೃತಿ  ಮತ್ತಷ್ಟು ಹೆಚ್ಚುತ್ತದೆ  , ಅದರ ಅರಿವು ಮೂಡಿಸುವ ಕಾರ್ಯ   ಹೆಮ್ಮೆಯ ಕನ್ನಡಿಗರಾದ  ಎಲ್ಲರಿಂದಲೂ ಆಗಲಿ ಎಂಬ  ಆಸೆಯೊಡನೆ,  ಅಲ್ಲಿಂದ ತೆರಳಿ ಬನವಾಸಿಯಲ್ಲಿ  ಸ್ವಲ್ಪ ಸಮಯ ಕಳೆದು   ತರಾತುರಿಯಿಂದ    ಶಿರಸಿಯತ್ತ  ಮುಖ ಮಾಡಿದೆ.  ಕಟ್  ಮಾಡಿದ್ರೆ  ಶಿರಸಿಯ  ಸತ್ಕಾರ್ ಹೋಟೆಲ್ನಲ್ಲಿ     ಮುಂದೆ ಕುಳಿತ ಮಸಾಲೆ ದೋಸೆ  ನನ್ನ ಇತಿಹಾಸ ಅಜ್ಞಾನವನ್ನು ಕಂಡು ಅಣಕಿಸಿ  ಕಿಸಿಕ್ ಅಂತೂ .........! 
   [ ಈ ಲೇಖನ ಬರೆಯುವಾಗ   ದಾಖಲೆ ಪರಿಶೀಲನೆ ವೇಳೆಯಲ್ಲಿ ಉಂಟಾದ ಹಲವಾರು  ಅನುಮಾನಗಳನ್ನು  ಶ್ರೀ ಲಕ್ಷ್ಮೀಶ್ ಹೆಗ್ಡೆ ಸೋಂದ  ಅವರ  ನೆರವಿನೊಂದಿಗೆ ಪರಿಹರಿಸಿಕೊಂಡಿದ್ದೇನೆ,  ಸಲಹೆ ಹಾಗು ಮಾರ್ಗ ದರ್ಶನ  ನೀಡಿದ ಲಕ್ಷ್ಮೀಶ್ ಹೆಗ್ಡೆ ಅವರನ್ನು ಕೃತಜ್ಞತೆಯಿಂದ   ಸ್ಮರಿಸಿಕೊಳ್ಳುತ್ತೇನೆ ]