Sunday, January 26, 2014

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...9 ಬಾರಪ್ಪಾ ಬಾ ಎಂದು ಕರೆದಿತ್ತು ಬಾ ಬಾ ಬುಡನ್ ಗಿರಿ .!

ಹೊನ್ನಮ್ಮ ದೇವಿ


ಕಳೆದ ಸಂಚಿಕೆಯಲ್ಲಿ ಮುಳ್ಳಯ್ಯನ ಗಿರಿ , ಸೀತಾಳ ಮಲ್ಲಿಕಾರ್ಜುನ  ಬೆಟ್ಟಕ್ಕೆ ಹೋಗಿದ್ದು ನಿಮಗೆ ಗೊತ್ತು, ಬನ್ನಿ ನಮ್ಮ ಮುಂದಿನ ಪಯಣಕ್ಕೆ ಸಿದ್ದರಾಗಿ , ಮುಂದೆ ಹೊರಟ   ನಾವು ತಲುಪಿದ್ದು "ಹೊನ್ನಮ್ಮನ ಹಳ್ಳ"  ಎಂಬ ಸಣ್ಣ ಜಲಪಾತ ದ ದರ್ಶನಕ್ಕೆ , ಮುಳ್ಳಯ್ಯನ  ಗಿರಿಯಿಂದ ಬಾ ಬಾ ಬುಡನ್ ಗಿರಿಗೆ ತೆರಳುವ ದಾರಿಯಲ್ಲಿ ಅತ್ತಿಗುಂಡಿ ಎಂಬ ಊರು ಸಿಗುತ್ತದೆ , ಅದರ ಸನಿಹದಲ್ಲೇ ಇದೆ ಈ "ಹೊನ್ನಮ್ಮನ ಹಳ್ಳ"  ಜಲಪಾತ , ಸಾಮಾನ್ಯವಾಗಿ ಚಿಕ್ಕ ಮಗಳೂರಿನ  ಪ್ರೇಕ್ಷಣೀಯ  ಸ್ಥಳ   ವಿವರವಾಗಿ ನೋಡಲು  ಪ್ರತೀ ಸ್ಥಳಕ್ಕೂ  ದಿನಗಳೇ ಬೇಕಾಗುತ್ತದೆ , ನಮಗೆ ಇದ್ದ ಅಲ್ಪ ಸಮಯದಲ್ಲೇ   ಇವುಗಳನ್ನು ನೋಡಬೇಕಾದ ಕಾರಣ ಹೆಚ್ಚು ವಿಚಾರ ಕೆದಕಲು ಆಗಲಿಲ್ಲ ಹಾಗು ನೋಡಲೂ ಸಹಾ  ಅವಕಾಶ ಸಿಗಲಿಲ್ಲ . 



ಹೊನ್ನಮ್ಮನ ಹಳ್ಳ  ಸೇತುವೆ



ಹೊನ್ನಮ್ಮ ದೇವಿ ದರ್ಶನ



"ಹೊನ್ನಮ್ಮನ ಹಳ್ಳ " ಪಶ್ಚಿಮ ಘಟ್ಟದ ಬೆಟ್ಟ  ಗುಡ್ಡ ಗಳಿಂದ ಹರಿದು ಬರುವ ಜರಿ ಗಳಿಂದ ಹರಿದು ಬರುವ ಜಲಧಾರೆ ಅಷ್ಟೇ , ಪ್ರತೀ ಪ್ರದೇಶಕ್ಕೂ , ಅದು ಕಾನನವೇ  ಆಗಿರಲಿ ಅಥವಾ ನಾಡೆ ಆಗಿರಲಿ , ಅಲ್ಲಿನ ಜನರ ನಂಬಿಕೆಗೆ  ತಕ್ಕಂತೆ ಅಲ್ಲಿ ಒಂದು ಶಕ್ತಿ ದೇವತೆ  ಇರುವುದನ್ನು ಕಾಣಬಹುದು , ಈ ಪ್ರದೇಶದಲ್ಲಿ ಅಲ್ಲಿನ ಸ್ಥಳೀಯ ಜನರ ಆರಾಧ್ಯ ದೇವತೆ ಹೊನ್ನಮ್ಮ  ಅದರಂತೆ ಅಲ್ಲಿ ದುಮ್ಮಿಕ್ಕುವ ಜಲಪಾತಕ್ಕೆ  ಹೊನ್ನಮ್ಮನ  ಹಳ್ಳ ಎಂದು  ಕರೆದಿದ್ದಾರೆ . ನಿಸರ್ಗದಿಂದ  ಬರುವ ಈ  ಜಲಪಾತದ ನೀರನ್ನು ಸಾರ್ವಜನಿಕರು  ದಾಟಿ ಓಡಾಡಲು ಅಂದಿನ ಮೈಸೂರು ಸರ್ಕಾರ  ಇಲ್ಲಿ ಒಂದು ಸೇತುವೆ ನಿರ್ಮಾಣ ಮಾಡಿದೇ .



ಹೊನ್ನಮ್ಮನ ಹಳ್ಳದ  ನೋಟ



ನೀರಲ್ಲಿ ಮಿಂದು ಪುನೀತರಾಗಿ

ಪಯಣದ  ಹಾದಿಯಲ್ಲಿ  ಈ ಜಲಪಾತದಲ್ಲಿ ಮಿಂದು  ಆಯಾಸ ಪರಿಹರಿಕೊಳ್ಳಲು ಈ ಸ್ಥಳ  ಒಳ್ಳೆಯದು , ಈ ಹಾದಿಯಲ್ಲಿ ಪಯಣಿಸುವ ಪ್ರವಾಸಿಗಳು  ಇಲ್ಲಿ ಇಳಿಯದೆ ಮುಂದೆ ಹೋಗಲು ಸಾಧ್ಯವೇ ಇಲ್ಲ. ಹಸಿರ ಸಿರಿಯ ನಡುವೆ ಹಿತವಾದ  ವಾತಾವರಣ ಇರಲು ಹೊನ್ನಮ್ಮನ ಹಳ್ಳ ಜಲಪಾತ  ನಿಮಗೆ ಸೌಂದರ್ಯದ  ದರ್ಶನ ಮಾಡಿಸುತ್ತದೆ . ನಾವಿಲ್ಲಿ ಸ್ವಲ್ಪ ಸಮಯ ಕಳೆದು ಉಲ್ಲಾಸದಿಂದ   ಬಾ ಬಾ ಬುಡನ್ ಗಿರಿಯ ನೋಡಲು ತೆರಳಿದೆವು,



ರಸ್ತೆಯಲ್ಲದ  ರಸ್ತೆ
ಹದಗೆಟ್ಟ  ಹಾದಿಯಲ್ಲಿ ಬಸವಳಿದ ವಾಹನಗಳು



ಬಾ ಬಾ   ಬುಡನ್ ಗಿರಿ ಕಡೆಗೆ ಹೊರಟ ರಸ್ತೆ ನಮಗೆ ಕಾರಿನಲ್ಲಿ ಕುಲುಕಾಡುತ್ತಾ ಸಾಗುವ ಅವಕಾಶ ನೀಡಿತು, ಹೌದು ಸರ್ ಹದಗೆಟ್ಟ  ರಸ್ತೆ ನಮ್ಮ  ದೇಹದ ಪ್ರತೀ ಭಾಗವನ್ನೂ  ಕುಲುಕಾಡುತ್ತಾ ತನ್ನ ಪ್ರತಾಪ ಮೆರೆದಿತ್ತು, ಹದಗೆಟ್ಟ  ಹಾದಿಯಲ್ಲಿ ಏಗಲಾರದೇ  ಬಸವಳಿದು  ಕೆಟ್ಟು ನಿಂತ ಹಲವಾರು ವಾಹನಗಳು  ಯಾರನ್ನೋ ಶಪಿಸುತ್ತ  ನಿಂತಿದ್ದವು . ಹಸಿರ ಹೊದ್ದ ಬೆಟ್ಟಗಳ  ನಡುವೆ  ಸಾಗಿದ್ದ  ಹದಗೆಟ್ಟ  ರಸ್ತೆಯಲ್ಲಿ  ಬಾ ಬಾ  ಬುಡನ್ ಗಿರಿ  ನೋಡುವ ಉತ್ಸಾಹ ಕರಗಿಹೊಗುತ್ತಿತ್ತು.



ಹಸಿರ  ನಡುವೆ  ಹಾದಿಯ ಚೆಲುವು




ಈ ಚಿತ್ರ ಹೇಗಿದೆ ...?

ಇಲ್ಲಿ ನಾವೆಲ್ಲ ಹೀರೋಗಳೇ

ಅಂತೂ ಇಂತೂ  ಹಾದಿಯ ಮದ್ಯದಲ್ಲಿ ಒಂದು ಕಡೆ ನಿಂತೆವು, ಹ ಹೌದು ಇಲ್ಲಿಂದ ಮುಂದೆ ರಸ್ತೆ ದುರಸ್ತಿ ನಡೆಯುತ್ತಿದ್ದ  ಕಾರಣ , ನಮ್ಮ ವಾಹನ ಅಲ್ಲೇ ಬಿಟ್ಟು,  ಮುಂದಕ್ಕೆ  ಅಲ್ಲಿನ ಸ್ಥಳೀಯರು  ಪ್ರವಾಸಿಗಳನ್ನು ಕರೆದೊಯ್ಯಲು  ಏರ್ಪಡಿಸಿದ್ದ  ಬೈಕ್  ಗಳಲ್ಲಿ ಅಥವಾ  ಜೀಪು ಗಳಲ್ಲಿ  ತೆರಳಬೇಕಾಗಿತ್ತು ,ನಾವು ಅಲ್ಲಿಗೆ ತಲುಪಿದಾಗ ಸಿಕ್ಕ ಒಂದು ಬೈಕ್  ನಲ್ಲಿ   ಆಗಲೇ ಒಬ್ಬರು ತೆರಳಿದ್ದರು,  ಅಗ ಅ ಬೈಕ್ ನವರು  ಸರ್ ಹಾಗೇ  ಬರ್ತಾ ಇರಿ ನಾನು  ಇವರನ್ನು ಬಿಟ್ಟು ಮತ್ತೊಂದು ಬೈಕ್ ಜೊತೆ ಬರುವೆ ಎಂದು ಹೇಳಿದ  ಮಾತನ್ನು ಕೇಳಿ ಸ್ವಲ್ಪ ದೂರ ನಡೆಯಲು ಶುರು ಮಾಡಿದೆವು, ಸಾಗುತ್ತಿರುವ  ಹಾದಿಯಲ್ಲಿ  ಫೋಟೋ ಕ್ಲಿಕ್ಕಿಸುತ್ತ  , ಕ್ಲಿಕ್ಕಿಸಿದ  ಫೋಟೋಗಳ  ಬಗ್ಗೆ ತೃಪ್ತಿ ಪಡುತ್ತಾ   ಹೋಗುತ್ತಿದ್ದೆವು,  ದಾರಿಯಲ್ಲಿ ಎದುರು ಬಂದ ಒಂದುಜೀಪಿನಲ್ಲಿ  ಸುಮಾರು ಇಪ್ಪತ್ತು ಜನ  ಬರುತ್ತಿದ್ದರು, ಒಂದಷ್ಟು ಜನರು  ತಾವು ಯಾರಿಗೂ ಕಮ್ಮಿ ಇಲ್ಲಾ  ಅಂತ  ಜೀಪಿನ ಮೇಲ್ಭಾಗದಲ್ಲಿ  ,ಬಾನೆಟ್  ಮೇಲೆಲ್ಲಾ  ಕುಳಿತು  ಬರುತ್ತಿದ್ದರು,  ಸ್ವಲ್ಪ ಎಡವಟ್ಟು ಅದರೂ  ಇವರ ಕಥೆ ಗೋವಿಂದ ಆಗ್ತಿತ್ತು, ಕೆಲವೊಮ್ಮೆ  ನಾವು ಯಾಕೆ ಹೀಗೆ ಆಡ್ತೀವಿ ಎನ್ನುವ  ಪ್ರಶ್ನೆ ಹುಟ್ಟಿತು,  ಆದರೆ   ಮನಸು  ಅವರ ಇಷ್ಟಾ , ಅವರ ಕಥೆ  ನೀನ್ಯಾರು ಕೇಳೋಕೆ  ಅಂತ ಬುದ್ದಿ ಹೇಳಿತು , ಬುದ್ದಿ ಹೇಳಿದ್ರೆ ಕೇಳುವವರು ಯಾರು ?   ನಸು ನಕ್ಕು ಮುಂದೆ ಹೋದೆ , ಅಷ್ಟರಲ್ಲಿ ನಮ್ಮನ್ನು  ಕರೆದೊಯ್ಯಲು  ಎರಡು ಬೈಕ್ ಗಳು ಬಂದವು,   ಅವುಗಳನ್ನು ಹತ್ತಿ ತಲುಪಿದ್ದು  ದತ್ತ ಪೀಠದ ಬಳಿ .


ಬಾ ಬಾ ಬುಡನ್ ಗಿರಿ  ಯಲ್ಲಿನ  ನೋಟ

ಶೀರ್ಷಿಕೆ ಸೇರಿಸಿ


ದತ್ತ ಪೀಠದ ಬಗ್ಗೆ ಎಲ್ಲರಿಗೂ ಗೊತ್ತು,  ಇದು ಹಿಂದೂ ಹಾಗು ಮುಸಲ್ಮಾನರು  ಇಬ್ಬರಿಗೂ  ನಂಬಿಕೆಯ ತಾಣ . ಬಾ ಬಾ ಬುಡನ್ ಗಿರಿ  ಗಿರಿ ಶ್ರೇಣಿ ಉತ್ತರದ  ಹಿಮಾಲಯ ಹಾಗು  ದಕ್ಷಿಣದ ನೀಲಗಿರಿ ನಡುವೆ  ಬಹು  ಎತ್ತರದ ಗಿರಿ ಧಾಮ , ಇದು  ಸಮುದ್ರ ಮಟ್ಟದಿಂದ  ೬೩೧೭  ಅಡಿ ಎತ್ತರದಲ್ಲಿದೆ  , ಇಲ್ಲಿರುವ ಗುಹೆಗಳಲ್ಲಿ ಸಾಧು  ಸಂತರು ತಪಸ್ಸು ಮಾಡುತ್ತಿದ್ದರೆಂದು   ನಂಬಲಾಗಿದೆ . ನಮ್ಮ ದೇಶಕ್ಕೆ ಕಾಫಿ  ಬೀಜದ  ಆಗಮನ ಇಲ್ಲಿಂದಲೇ ಅಯಿತೆಂಬ  ಹೆಗ್ಗಳಿಕೆ ಇದೆ, ಕೆಲವು ಧಾರ್ಮಿಕ  ಕಾರಣಗಳ  ಬಗ್ಗೆ  ಗೊಂದಲ ಇರುವ ಕಾರಣ , ಪ್ರವಾಸಿಗಳನ್ನು  ಹತ್ತಿರ ಹೋಗಲು ಬಿಡಲಿಲ್ಲ, ದೂರದಲ್ಲೇ ನೋಡಿ ಬರಬೇಕಾಯಿತು,   ಅಲ್ಲೇ ಇದ್ದ ಒಂದು ಜೀಪನ್ನು  ಬಾಡಿಗೆಗೆ ಪಡೆದು ಮಾಣಿಕ್ಯ ಧಾರಾ  ಜಲಪಾತ ನೋಡಲು  ಹೊರಟೆವು .


ಮಾಣಿಕ್ಯ ಧಾರಾ ಕಡೆಗೆ ತೆರಳುವ ಹಾದಿ

ವೀಕ್ಷಣ  ಗೋಪುರ

ಸೂಚನೆಗೆ  ಬೆಲೆ ಎಲ್ಲಿ

ಮಾಣಿಕ್ಯ ದಂತೆ  ಬೀಳುತ್ತಿತ್ತು  ಜಲಪಾತ

ಗಿಡ ಮೂಲಿಕೆ


ಮತ್ತೆ ಅದೇ ಹಸಿರ ಹೊದ್ದ ಬೆಟ್ಟಗಳ ದರ್ಶನ , ನಡುವೆ ಸಾಗಿದ್ದ  ಕಚ್ಚಾ  ಹಾದಿಯಲ್ಲಿ ಅಡ್ಡಾ  ದಿಡ್ಡಿ ಚಲಿಸಿದ್ದ   ಜೀಪು,  ಆಗಲೇ ಮುಸ್ಸಂಜೆಯ ಮಬ್ಬು ಕವಿಯುತ್ತಿತ್ತು,   ಬೇಗ ಬೇಗ  ಗಡಿಬಿಡಿಯಿಂದ ತೆರಳಿದ ನಾವು ಮಾಣಿಕ್ಯ ಧಾರಾ  ಜಲಪಾತಕ್ಕೆ  ಓಡಿದೆವು , ನಮಗಿಂತಾ ವೇಘವಾಗಿ ಕತ್ತಲೆ ಕವಿಯುತ್ತಿತ್ತು, ಅದರೂ ಮಾಣಿಕ್ಯ ಧಾರಾ  ಜಲಪಾತ  ನೋಡೇ ಬಿಟ್ಟೆವು,  ಅಲ್ಪ ಸ್ವಲ್ಪ ಉಳಿದಿದ್ದ ಮಬ್ಬು ಬೆಳಕಿನಲ್ಲಿ  ಜಲಪಾತದ  ಚಿತ್ರ ತೆಗೆದು, ಜಲಪಾತದ ನೀರನ್ನು ಸ್ಪರ್ಶಿಸಿ  ಖುಷಿಪಟ್ಟೆವು, ಮುಖಕ್ಕೆ ನೀರನ್ನು ಹಾಕಿ ತೊಳೆದೊಡನೆ ನವ ಚೈತನ್ಯ ಬಂತು , ನಮ್ಮ ಪ್ರವಾಸದ  ಎರಡನೇ ದಿನದ  ಅಂತಿಮ  ಸ್ಥಳ ಇದಾಗಿತ್ತು . ಮೆಟ್ಟಿಲು ಹತ್ತಿಮೇಲೆ ಬಂದ ನಾವು  ಮರಳಿ ಜೀಪಿಗೆ ಬರುವ  ಹಾದಿಯಲ್ಲಿ  ಕಂಡ ಗಿಡ ಮೂಲಿಕೆಗಳ ಅಂಗಡಿ  ಕೈ  ಬೀಸಿ ಕರೆದಿತ್ತು, ಆದರೆ  ಅದನ್ನು ನೋಡುವ ತಾಳ್ಮೆ ಇಲ್ಲದೆ   ವಾಪಸ್ಸು ಬರಬೇಕಾಯಿತು,



ಮತ್ತೆ ಜೀಪಿನಲ್ಲಿ ಸ್ವಸ್ಥಾನ ಸೇರಿ ನಮ್ಮ ಕಾರನ್ನು  ಸೇರಿಕೊಂಡು  ಚಿಕ್ಕಮಗಳೂರಿಗೆ  ಬಂದು ತಲುಪಿದೆವು, ಅಲ್ಲಿಂದ ಮೈಸೂರಿಗೆ ಬರುವ ಹಾದಿಯಲ್ಲಿ   ಹಿರೆಮಗಳೂರಿನಲ್ಲಿ  ಚಿನ್ಮೈ ಭಟ್ ಬಿಡುವ  ಕಾರ್ಯಕ್ರಮ  ಇತ್ತು,  ಅಲ್ಲೇ ಕಾದಿತ್ತು, ನನ್ನ ಜೀವನದ ಕನಸು ನನಸಾಗುವ  ಒಂದು  ಸನ್ನಿವೇಶ ......... !!?

































































Sunday, January 12, 2014

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...8 ಮುಳ್ಳಯ್ಯನ ಗಿರಿ ಕಂಡ ಮನ ಹಿಗ್ಗಿತು ಹಿರಿ ಹಿರಿ

ಕಾಫಿ ತೋಟದ ನಡುವೆ ಸಾಗಿದ ರಸ್ತೆ



ಚಿಕ್ಕಮಗಳೂರಿನಲ್ಲಿ   ಈ ಟೌನ್ ಕ್ಯಾಂಟೀನ್  ತನ್ನದೇ ಆದ   ಹೆಗ್ಗಳಿಕೆ ಹೊಂದಿದೆ , ಇಲ್ಲಿನ  ತಿಂಡಿ ತಿನಿಸಿನ ಬಗ್ಗೆ ಅಂತರ್ಜಾಲದಲ್ಲಿ ಬಹಳಷ್ಟು ಜನ  ಬರೆದಿದ್ದಾರೆ , ಇಲ್ಲಿನ  ವಿವಿಧ ಬಗೆಯ ದೊಸೆಗಳಿಗೆ  ಬಹಳ ಜನ ಅಭಿಮಾನಿಗಳಿದ್ದಾರೆ, ಆದರೂ ಟೌನ್ ಕ್ಯಾಂಟೀನ್ ತನ್ನದೇ  ರೀತಿಯಲ್ಲಿ ಸದ್ದಿಲ್ಲದೇ  ಇಲ್ಲಿಗೆ ಬರುವ ಪ್ರವಾಸಿಗಳಿಗೆ  ಒಳ್ಳೆಯ ತಿಂಡಿ ತಿನಿಸು ನೀಡುತ್ತಿದೆ . ನಾನಂತೂ ಚಿಕ್ಕಮಗಳೂರಿಗೆ ಬಂದ್ರೆ  ಇಲ್ಲಿಗೆ ಬರದೆ ಹೋಗೋದಿಲ್ಲ, ಇಲ್ಲಿ ಗೆ  ಬಂದ ನಾವು ಹೊಟ್ಟೆ ತುಂಬಾ  ಉಪಹಾರ ಮೈಯ್ದು , ಪಾರ್ಸೆಲ್  ಮಾಡಿಸಿಕೊಂಡು   ಮುಂದಿನ ಪಯಣಕ್ಕೆ ಸಜ್ಜಾದೆವು ... ನಮ್ಮ  ಪಯಣ ಸಾಗಿತು 'ಮುಳ್ಳಯ್ಯನ ಗಿರಿ''  ಕಡೆಗೆ . ....!!! ಮತ್ತೊಂದು ವಿಚಾರ  ಚಿಕ್ಕಮಗಳೂರಿನಲ್ಲಿ  ನಮಗೆ ಪರಿಚಯವಾದ ಚಿನ್ಮಯ್ ಭಟ್ ಗೆಳೆಯ "ದರ್ಶನ್" ನಮ್ಮ ಜೊತೆಗೂಡಿದರು , ಪ್ರವಾಸಕ್ಕೆ ಮತ್ತಷ್ಟು ಕಳೆ  ಬಂದಿತು.


ಹಸಿರ ಹೊದ್ದ  ಭೂರಮೆ

ಚಿಕ್ಕಮಗಳೂರಿನಿಂದ   ಮುಳ್ಳಯ್ಯನ ಗಿರಿಗೆ  ೨೨ ಕಿಲೋಮೀಟರ್ ದೂರವಿದೆ, ಕಡೂರು ರಸ್ತೆಯಲ್ಲಿ ಸಾಗಿ ಮುಂದೆ ದೊರೆಯುವ ಒಂದು  ಕವಲು  ರಸ್ತೆಯಲ್ಲಿ  ಎಡಕ್ಕೆ ಚಲಿಸಿದರೆ   ಮುಳ್ಳಯ್ಯನ ಗಿರಿಗೆ ಕರೆದೊಯ್ಯುತ್ತದೆ , ಕಿರಿದಾದ  ರಸ್ತೆ ಕಾಫಿ ತೋಟದ ನಡುವೆ  ಸಾಗುತ್ತದೆ , ಜೊತೆಯಲ್ಲೇ ಸುಂದರ  ದೃಶ್ಯಗಳ ಸರಮಾಲೆ ಎಲ್ಲರನ್ನೂ     ಸ್ವಾಗತಿಸುತ್ತದೆ .. ನಮ್ಮ ಕ್ಯಾಮರ  ಹಸಿದ  ಹುಲಿಯಂತೆ  ಕಂಡ ಸುಂದರ ದೃಶ್ಯಗಳನ್ನು ಸೆರೆಹಿಡಿತು  ಹೊಟ್ಟೆಗೆ   ತುಂಬಿಕೊಳ್ಳುತ್ತಿತ್ತು .


ರಸ್ತೆ  ತುಂಬಾ ಬರುವ  ಇವರನ್ನು ದಾಟುವುದು ಹೇಗೆ


ಸದ್ದಿಲ್ಲದೇ ನಮ್ಮ ಪಯಣ ಸುಂದರ ಗಿರಿ ಪಂಗ್ತಿಗಳ  ನಡುವೆ ಸಾಗಿತ್ತು, ಕಿರಿದಾದ ರಸ್ತೆಯಲ್ಲಿ  ಎದುರುಗಡೆ  ಭಾರಿವಾಹನ ಬಂದಾಗ ನಮ್ಮ ಕಾರಿನ  ಚಾಲಕ ಚಾಕಚಕ್ಯತೆ ಕಾರನ್ನು   ಪಕ್ಕಕ್ಕೆ ಸರಿಸಿ   ನುಗ್ಗಿಸಿ  ಬಿಡುತ್ತಿದ್ದ , ಕೆಲವೊಮ್ಮೆ ಎರಡೂ ವಾಹನಗಳೂ ತಾವೇ  ಹಿಂದೆ ತಾವೇ  ಮುಂದೆ ಸರಿದು ಅನುಸರಣೆ ಮಾಡಿಕೊಂಡು ಚಲಿಸುತ್ತ   ಮುಂದೆ ಹೋಗುತ್ತಿದ್ದವು


ಯಾವ  ಕಲೆಗಾರನ  ಕೈಚಳಕ  ಇದು

ಹಸಿರ ಮಡಿಲಲ್ಲಿ  ಗಿರೀಶ್

ಪಯಣ ಸಾಗುತ್ತಾ   ಮುಳ್ಳಯ್ಯನ  ಗಿರಿ ಕಾಣುವ  ಅಸೆ  ಹೆಚ್ಚುತ್ತಿತ್ತು .  ನಾವೋ  ಒಳ್ಳೆಯ ದೃಶ್ಯ ಕಂಡೊಡನೆ  ಕಾರು ನಿಲ್ಲಿಸಿ   ಸ್ವಲ್ಪ ಕಣ್ಣು ತಂಪು ಮಾಡಿಕೊಂಡು , ಫೋಟೋ ಕ್ಲಿಕ್ಕಿಸಿ  ಮುಂದು ವರೆಯುತ್ತಿದ್ದೆವು,ಕೆಲವೊಮ್ಮೆ ಬಹಳ ಹೊತ್ತು ನಿಲ್ಲುವ  ಆಸೆ ಆಗುತ್ತಿತ್ತು,  ಆದರೆ ಹಸಿರ ಬೆಟ್ಟಗಳ  ಸವರಿಕೊಂಡು  ಬರುತ್ತಿದ್ದ ತಣ್ಣನೆ ಗಾಳಿ  ಮನಸನ್ನು ಪುಳಕ ಗೊಳಿಸುತ್ತಿತ್ತು,  ಶುದ್ದ ಗಾಳಿಯನ್ನು  ಸೇರಿಸಿಕೊಂಡ  ದೇಹ  ಉತ್ಸಾಹದಿಂದ ಪುಟಿಯುತ್ತಿತ್ತು,  ಜೊತೆಗೆ  ಕುರುಕಲು ತಿಂಡಿಯ  ರುಚಿ  ನಾಲಿಗೆ  ಯ ಮೇಲೆ ನರ್ತನ  ಮಾಡುತ್ತಿತ್ತು .


ಸುಂದರ ಅತೀ ಸುಂದರ

ಒಂದು ಸುಂದರ  ನೋಟ

ಮತ್ತೆ ಮುಂದೆ ಹೋದ ನಮಗೆ   ಶಿಖರದ  ಮೇಲೆ ಮೇಲೆ ಹೋದಂತೆ   ಪ್ರಕೃತಿಯ  ಚಿತ್ರ ಬದಲಾಗುತ್ತಿತ್ತು ,  ಹಸಿರು ಗಿರಿ, ಕೆಂಪು ಮಣ್ಣಿನ  ನೋಟ , ಕೆಂಪು ಮಣ್ಣಿನ  ರಂಗೋಲಿ,  ನೀಲಿಯ ಅಗಸ , ಜೊತೆಗೆ  ನಲಿಯುತ್ತ ಸಾಗಿದ್ದ ಕೆಲವು ಪ್ರವಾಸಿಗರು  ಇವುಗಳು ಒಳ್ಳೆಯ  ದರ್ಶನ ನೀಡಿತು , ಇಂತಹ ಪರಿಸರದಲ್ಲಿ  ಯಾರ ಮನಸು  ಸಂತಸದಿಂದ  ಅರಳೋಲ್ಲ ಹೇಳಿ,  ನಾವೂ ಸಹ ನಮ್ಮ ವಯಸನ್ನು ಮರೆತು  ನಲಿದಾಡಿದೆವು .



ಮುಳ್ಳಯ್ಯನ  ಗಿರಿ ದರ್ಶನ

ಮುಳ್ಳಯ್ಯನ  ಗಿರಿಯ ಮತ್ತೊಂದು ನೋಟ


ಅಗೋ ಅಲ್ಲೇ ಕಾಣಿಸಿತು ಮುಳ್ಳಯ್ಯನ  ಗಿರಿ , ಹ ..... ಹೌದು  ಮುಳ್ಳಯ್ಯನ ಗಿರಿಗೆ ಬಂದೆ ಬಿಟ್ಟೆವು,  ಕಾರ್  ಇಳಿದರೆ ದೂರದಿಂದ  ಒಳ್ಳೆಯ ನೋಟ ಸಿಕ್ಕಿತು,  ಪ್ರವಾಸಕ್ಕೆಂದು ಬಂದ ಜನರು ಇರುವೆಗಳ ಹಾಗೆ  ಬೆಟ್ಟವನ್ನು  ಹತ್ತುತ್ತಿದ್ದರು, ಕೆಲವರು ಇಳಿಯುತ್ತಿದ್ದರು, ಹಸಿರ ಹೊದ್ದ ಗಿರಿಯ ಮೇಲೆ ಬಣ್ಣ ಬಣ್ಣ ದ ಬಟ್ಟೆ ತೊಟ್ಟ ಜನರು   ಬಣ್ಣದ ರಂಗು   ಬಳಿದಿದ್ದರು . ಗಿರಿಯ ಮೇಲೆ ಕಲ್ಲಿನಿಂದ  ನಿರ್ಮಿತವಾದ ಒಂದು ಕೋಟೆಯ ಗೋಡೆ ಕಾಣುತ್ತಿತ್ತು . ಮೆಟ್ಟಿಲುಗಳನ್ನು ಹತ್ತುವ ಮೊದಲು ಕ್ಯಾಮರ  ಲೆನ್ಸ್  ಜೋಪಾನ ಪಡಿಸುತ್ತಾ  , ಮೆಟ್ಟಿಲುಗಳ ಬಳಿ ಸಾಗಿದೆವು,


ಗಿರಿಯ ಮೇಲೆ  ವಿಶ್ರಾಂತಿ ಗೋವುಗಳಿಗೂ  ಪ್ರೀತಿ


ನಮ್ಮ ಕರುನಾಡ  ಚೆಲುವು

ಮೆಟ್ಟಿಲು ಹತ್ತುತ್ತಾ , ಸುಂದರ್ ಪ್ರಕೃತಿಯನ್ನು   ಅಸ್ವಾದಿಸುತ್ತಾ , ನಡೆದೆವು ಅಲ್ಲೇ ಸನಿಹದಲ್ಲಿ ಗಿರಿಯ ಮೇಲೆ ಒಂದಷ್ಟು ಹಸುಗಳ ಗುಂಪು ವಿಶ್ರಾಂತಿ ಪಡೆದಿತ್ತು,  ಪಕ್ಕದಲ್ಲೇ  ಹಸಿರ ಹೊದ್ದ ಬೆಟ್ಟಕ್ಕೆ   ನೀಲಿಯ  ಅಗಸ  ಹಿನ್ನೆಲೆ ನೀಡಿತ್ತು, ಯಾವುದೇ   ಕಸ ವಿಲ್ಲದೆ  ಶುಭ್ರವಾದ ಪರಿಸರ ಮನ ಸೂರೆಗೊಂಡಿತ್ತು




ಮಂಟಪ ದೊಳಗೆ ಕುಳಿತ  ಬಸವ



ಗುಹೆಯೊಳಗೆ  ಗೆಳೆಯರು



ಗುಹೆಯ ಒಂದು ನೋಟ




ಮುಳ್ಳಯ್ಯನ  ಗಿರಿಯ  ತುದಿಯ ತಲುಪಿದ ನಾವು ಅಲ್ಲಿನ ಗದ್ದುಗೆ  ಮಂಟಪದಲ್ಲಿನ  ಬಸವ , ಗುಹೆ ಇವುಗಳನ್ನು ದರ್ಶನ ಮಾಡಿದೆವು, ಇಲ್ಲಿರುವುದು ಒಂದು ಶೈವ  ಸಮುದಾಯಕ್ಕೆ ಸೇರಿದ ಒಂದು ಗದ್ದುಗೆ , ಹೆಚ್ಚಿನ ವಿಚಾರ ಎಲ್ಲಿಯೂ ದಾಖಲಾಗಿಲ್ಲ ಇತಿಹಾಸದ ಪುಟ ತಿರುವಿ ಹಾಕಿದರೂ ಮಹಿತಿ ದೊರಕಲಿಲ್ಲ, ಯಾವುದೇ ಶಾಸನ ದರ್ಶನ್ ಆಗಲಿಲ್ಲ , ಮಂಜಿನ ತೆರೆ  ಬಿಸಿಲಿನ ಜೊತೆ ಆಟ ಆಡುತ್ತಿತ್ತು,  ಸುಂದರ ಪರಿಸರದಲ್ಲಿ ಎಷ್ಟು ಹೊತ್ತು ಕಳೆದರೂ ತರು ಅಸೆ ಪೂರ್ತಿಯಾಗದು , ಆದ್ರೆ ಮತ್ತಷ್ಟು  ನೋಡ್ ಬೇಕಿತ್ತು, ಒಲ್ಲದ ಮನಸಿನಿಂದ  ಹೊರಟೆವು



ಮುಳ್ಳಯ್ಯನ  ಗಿರಿಯಲ್ಲಿ ತೆಗೆದ ಕೊನೆಯ ಚಿತ್ರ


ಮುಂದಿನ ಪಯಣ   ಸೀತಾಳ ಮಲ್ಲಿಕಾರ್ಜುನ  ಬೆಟ್ಟಕ್ಕೆ  ನಮ್ಮ ತಂಡ  ಚಲಿಸಿತು ,  ಹಾದಿಯುದ್ದಕ್ಕೂ  ಮತ್ತೊಮ್ಮೆ ಹಸಿರ ಗಿರಿಯ ಸುಂದರ ದರ್ಶನ , ಮುಳ್ಳಯ್ಯನ ಗಿರಿಯ ನೋಟಗಳ ಚಿತ್ರ ನೆನಪು ಮಾಡಿಕೊಳ್ಳುತ್ತಾ , ಒಬ್ಬರನ್ನು ಒಬ್ಬರು  ತಮಾಷೆ ಮಾಡುತ್ತಾ  ತೆರಳಿದೆವು , ಸೀತಾಳ ಮಲ್ಲಿಕಾರ್ಜುನ ಸ್ವಾಮೀ ದೇಗುಲದ ಸಮೀಪ ನಮ್ಮ  ಕಾರು  ನಿಂತಿತು,



ದೇಗುಲ ದರ್ಶನ
 ಶ್ರೀ ಸೀತಾಳ ಮಲ್ಲಿಕಾರ್ಜುನ ಸ್ವಾಮಿ


ಇಲ್ಲಿ ಬೇರೆಯದೇ ಪರಿಸರ ಬೇರೆ ಇತ್ತು, ಮುಳ್ಳಯ್ಯನ ಗಿರಿಗಿಂತ ಕೆಳ ಪ್ರದೇಶದಲ್ಲಿ  ಇರುವ ಈ ದೇಗುಲ ನೋಡಲು  ಯಾವುದೊ  ಯೂರೋಪಿನ    ಕಟ್ಟಡದಂತೆ  ಕಂಡರೂ ಎರಡು ಗೋಪುರಗಳು ಇದು ದೇವಾಲಯ ಎಂಬುದನ್ನು   ಸಾರುತ್ತವೆ . ಸುತ್ತಲಿನ  ಹಸಿರ ಗಿರಿಗಳ   ಕೋಟೆಯ ನಡುವೆ  ಇಲ್ಲಿ  ಶ್ರೀ ಸೀತಾಳ ಮಲ್ಲಿಕಾರ್ಜುನ ದೇವಾಲಯವಿದೆ , ದರ್ಶನ ಪಡೆದ  ನಾವು  ಹೊರಗೆ ಬಂದೆವು,  ಹೊಟ್ಟೆ ಚುರುಗುಟ್ಟಿತ್ತು ,  ನಮ್ಮ  ಮಧ್ಯಹ್ನ ದ  ಆಹಾರ  ಸೇವನೆ ಸನಿಹದಲ್ಲೇ ಇದ್ದ ಒಂದು ಗುಡ್ಡದ  ಮೇಲೆ ಆಯಿತು,   ಟೌನ್ ಕ್ಯಾಂಟೀನ್ ನಿಂದ  ಪಾರ್ಸೆಲ್  ಮಡಿಸಿಕೊಂಡು ತಂದಿದ್ದ  ತಿಂಡಿ ತಿಂದು  , ಸ್ವಲ್ಪ ವಿಶ್ರಾಂತಿ ಪಡೆದೆವು, ....    ಹೊರಡೋಣ  ಮುಂದಕ್ಕೆ ಲೇಟ್  ಆಗುತ್ತೆ ಎಂದು ಗಿರೀಶ್ ಹೇಳಿದಾಗ  ಗಡಿಬಿಡಿ ಯಿಂದ ಸಿದ್ದರಾಗಿ ಮುಂದೆ ಹೊರಟೆವು,


ಹಾದಿಯಲ್ಲಿ  ಸಿಕ್ಕ  ಸ್ಥಳೀಯ  ಜನರು 


ಮುಂದಿನ ಪಯಣಕ್ಕೆ ಶುಭ ಕೋರುವಂತೆ  ಸಾಗಿತ್ತು, ಕಾಫಿ ತೋಟದ  ಕಾರ್ಮಿಕರ   ಒಂದು  ಗುಂಪು , ತಮ್ಮದೇ ಲೋಕದಲ್ಲಿ ವಿಹರಿಸುತ್ತಾ  ತೆರಳಿದ್ದ  ಅ ಜನರ  ಗುಂಪು ಚಿಕ್ಕಮಗಳೂರಿನ    ಜನರ ದರ್ಶನ ಮಾಡಿಸಿತ್ತು , ನಮ್ಮ ಪಯಣ  .... ಹೊನ್ನಮ್ಮನ  ಹಳ್ಳದ ಕಡೆಗೆ  ಹೊರಟಿತ್ತು . .......... !