Sunday, July 28, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .06 "ಗಣೇಶ್ ಗುಡಿ " ಎಂಬ ರಮ್ಯ ತಾಣ





ಹಸಿರು ಹಾದಿಯ ಪಯಣ

ಹ , ಹೌದು    "ಸಿಂಥೆರಿ'' ರಾಕ್ಸ್ ನಿಂದ  ನಮ್ಮ ಪ್ರವಾಸ ದಿಬ್ಬಣ  ಮುಂದುವರೆಯಿತು,ಹಸಿರು ಹಾದಿಯ  ಪಯಣ ಸಾಗಿತ್ತು, "ಸಿಂಥೆರಿ ರಾಕ್ಸ್" ನಿಂದ  "ಗಣೇಶ್ ಗುಡಿ " ಯ ಕಡೆ ಹೊರಟಿದ್ದಾದರೂ  ದಾರಿಯಲ್ಲಿ ಕಾರುಗಳಿಗೆ  ಇಂಧನ  ತುಂಬಿಸಬೇಕಾದ ಕಾರಣ,   "ಜೋಯ್ಡ'' ಪಟ್ಟಣಕ್ಕೆ ಬರಲೇ ಬೇಕಾಯ್ತು .


ಜೋಯ್ಡಾ ಪಟ್ಟಣ

"ಜೋಯ್ಡಾ " ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಒಂದು ತಾಲೂಕು ಕೇಂದ್ರ ,  ಈ ಊರಿನ ಜನ ಸಂಖ್ಯೆ ಮೂರು ಸಾವಿರ ವೆಂದು ತಿಳಿದು ಬರುತ್ತದೆ.  ಹತ್ತಿರದಲ್ಲೆ ಇರುವ  "ಸೂಪ " ಆಣೆಕಟ್ಟು ಯೋಜನೆಯ ಫಲವಾಗಿ  ಅಂಬಿಕಾನಗರ ಹತ್ತಿರವಿರುವ ಕಾರಣ ಜನ ಸಂಖ್ಯೆ  ಇನ್ನಷ್ಟು ಹೆಚ್ಚಿದೆ . ಬಹುಷಃ  ತಾಲೂಕು ಕೇಂದ್ರ ಒಂದು ಇಷ್ಟು ಕಡಿಮೆ ಜನ ಸಂಖ್ಯೆ ಹೊಂದಿರುವುದು  ಅಪರೂಪವೇ ಸರಿ, ಊರಿಗೆ ಹೊಕ್ಕ ನಮಗೆ ಯಾವುದೋ ಹೋಬಳಿ ಕೇಂದ್ರ ದಂತೆ ಕಂಡು ಬಂದಿತು ಈ ಊರು,  ಆದರೆ  ಈ ತಾಲೂಕು  ಅತೀ ಹೆಚ್ಚು ಕಾಡಿನ ಪ್ರದೇಶ ಹೊಂದಿದೆ,  ಪೋರ್ಚುಗೀಸರ ಕಾಲದಲ್ಲಿ  "ಚಾರ್ದು"  ಕುಟುಂಬಗಳು ಗೋವಾ ದಿಂದ ಇಲ್ಲಿಗೆ ಬಂದು ನೆಲೆಸಿದ್ದಾಗಿ ತಿಳಿದು ಬರುತ್ತದೆ. ಅಲ್ಲೇ ಇದ್ದ ಪೆಟ್ರೋಲ್ ಬಂಕ್  ನಲ್ಲಿ ಇಂಧನ ತುಂಬಿಸಿ   "ಗಣೇಶ್ ಗುಡಿ " ಯ ಹಾದಿ ಹಿಡಿದೆವು,



ಬನ್ನಿ ಗಣೇಶ್ ಗುಡಿ ಗೆ ಸ್ವಾಗತ

ನಿಷ್ಯಭ್ದ ವಾದ ಪರಿಸರ


ಹಾಗೆ ಸಾಗಿದ ನಮ್ಮನ್ನು ಅಲ್ಲಿದ್ದ ಒಂದು ಬೋರ್ಡು ಸ್ವಾಗತ  ನೀಡಿತು . ಮುಖ್ಯ ರಸ್ತೆಯಿಂದ ಒಳಗೆ  ಹೋಗಲು ಮಣ್ಣು ಹಾದಿ ಸಿಕ್ಕಿತು, ಆ ದಾರಿಯಲ್ಲಿ ಸಾಗಿದ ನಮಗೆ  ದರ್ಶನ ನೀಡಿದ್ದು  "ಓಲ್ಡ್ ಮ್ಯಾಗಜಿನ್ " ಪರಿಸರ  ಸುತ್ತಲೂ ದಟ್ಟ ಅರಣ್ಯ ಇದರ ನಡುವೆ ನಿರ್ಮಿತವಾಗಿರುವ " ಹಳೆಯ ಮದ್ದಿನ ಮನೆಗಳ ಗುಂಪು " ಇದೆ ಇಂದಿನ "ಗಣೇಶ್ ಗುಡಿಯ  ಓಲ್ಡ್ ಮ್ಯಾಗಜಿನ್ ಹೌಸ್"  ಇದೇನು  ಇಲ್ಲಿ ಮದ್ದಿನ ಮನೆಗಳ ಮಾತು ಏಕೆ ಬಂತು ಅನ್ನುತ್ತೀರಾ ?? ಅದೇ ಇಲ್ಲಿನ ವಿಶೇಷ



ಅಂದಿನ ಮದ್ದಿನ ಮನೆಗಳು

ಹೌದು ಈ ಮದ್ದಿನ ಮನೆಗಳ  ಇತಿಹಾಸ  1 9 7 0  ರ ದಶಕಕ್ಕೆ  ಕರೆದೊಯ್ಯುತ್ತದೆ , ಸೂಪಾದಲ್ಲಿ  ಕಾಳಿ ಜಲ ವಿಧ್ಯುತ್  ಯೋಜನೆ  ನಿರ್ಮಾಣ ಮಾಡುವ ಸಮಯದಲ್ಲಿ  ದೊಡ್ಡ ದೊಡ್ಡ ಬಂಡೆಗಳನ್ನು  ಸಿಡಿಸಲು   ಡೈನಮೆಂಟ್ , ಮುಂತಾದ ಸಿಡಿ ಮದ್ದುಗಳನ್ನು  ಬಳಸಬೇಕಾಗಿತ್ತು, ಆ ವೇಳೆಯಲ್ಲಿ ಅಗತ್ಯವಿರುವ  ಸಿಡಿಮದ್ದುಗಳನ್ನು ಸುರಕ್ಷಿತವಾಗಿ  ಮಳೆ, ಹಾಗು ಶೀತದಿಂದ  ಕಾಪಾಡಿಕೊಂಡು ಸಂಗ್ರಹ ಮಾಡಲು  ಈ ತರಹದ ಮದ್ದಿನ ಮನೆಗಳನ್ನು ನಿರ್ಮಿಸಲಾಯಿತು,  ಯೋಜನೆ ಪೂರ್ಣ ಗೊಂಡ  ನಂತರ  ಇವುಗಳನ್ನು  ಜಂಗಲ್ ಲಾಡ್ಜ್  ನವರು ವಹಿಸಿಕೊಂಡು  ಇವುಗಳನ್ನು ಮಾರ್ಪಾಡು ಮಾಡಿ ಪ್ರವಾಸಿಗಳ  ವಾಸಕ್ಕಾಗಿ  ಅನುವು   ಮಾಡಿದ್ದಾರೆ .


ಸ್ವಾಗತ  ತಾಣ


ಇಲ್ಲಿಗೆ ಬಂದ  ನಮ್ಮನ್ನು ಸ್ವಾಗತ ಮಾಡಿದ್ದು  ಯಾವುದೇ ಆಧುನಿಕತೆ ಇಲ್ಲದ  ಸ್ವಾಗತ ತಾಣ ,  ಅಲ್ಲಿನ ಸಿಬ್ಬಂಧಿ  ನಮಗೆ ಮಾರ್ಗದರ್ಶನ ನೀಡಿ  ನಮಗೆ  ರೂಂ ಗಳ ವ್ಯವಸ್ಥೆ ಒದಗಿಸಿ ಕೊಟ್ಟರು . ಸುತ್ತಲೂ ಹಸಿರಿನ ವಾತಾವರಣ  ಚಿಲಿ ಪಿಲಿ  ಹಕ್ಕಿಗಳ  ಹಾಡು  ಸುಂದರ ಪಕ್ಷಿಗಳ ನೋಟ ಸವಿಯುತ್ತಾ  ಮಧ್ಯಾಹ್ನದ ಭೋಜನ ಸವಿದೆವು.  ಮತ್ತೊಮ್ಮೆ ಅಲ್ಲಿನ ಪರಿಸರದ ಅವಲೋಕನ  ನಡೆಸಿದ  ನಮಗೆ ಅಲ್ಲಿನ ವಿವಿಧ ಬಗೆಯ ಪಕ್ಷಿ ಲೋಕದ ಪರಿಚಯ ವಾಯಿತು, ಇಲ್ಲಿನ ಸಿಬ್ಬಂಧಿಗೂ ಇಲ್ಲಿನ ಪರಿಸರದ ಬಗ್ಗೆ ಒಳ್ಳೆಯ ತಿಳುವಳಿಕೆ ಇದೆ, ಪ್ರವಾಸಿಗಳಿಗೆ ಮಾಹಿತಿ ನೀಡುತ್ತಾರೆ .


ಪಕ್ಷಿಗಳನ್ನು ಸೆಳೆಯಲು ಒಂದು ವಿಧಾನ

ಪಕ್ಷಿ ಬೇಟೆಗಾರರು


                 ಹೌದು ಈ ಪರಿಸರದಲ್ಲಿ ವಿವಿಧ ಬಗೆಯ ಪಕ್ಷಿಗಳ ನೋಟ ನೋಡ ಬಹುದು, ದೇಶದ  ವಿವಿದೆಡೆಯಿಂದ  ಬರುವ ಛಾಯಾಗ್ರಾಹಕರು ಪಕ್ಷಿ ಛಾಯಾ ಚಿತ್ರ ತೆಗೆಯಲು ಅನುಕೂಲವಾಗುವಂತೆ  ಅಲ್ಲಿ ಎತ್ತರದ ಪ್ರದೇಶದಲ್ಲಿ ಮಣ್ಣಿನ ತಟ್ಟೆ ಗಳನ್ನ ಇತ್ತು ಅವುಗಳಲ್ಲಿ ನೀರು , ಕಾಲು ಇವುಗಳನ್ನು ಇತ್ತು , ಪಕ್ಷಿಗಳು ಅವುಗಳನ್ನು ಸೇವಿಸಲು ಬರುವಾಗ  ಚಿತ್ರ ತೆಗೆಯಲು  ಪರಿಸರ ಛಾಯಾ ಚಿತ್ರ ಗಾರರು  ಮುಗಿಬೀಳುತ್ತಾರೆ, ಅಲ್ಲಿ ಪಕ್ಷಿ ಛಾಯಾಚಿತ್ರಗಾರರ  ಸಂತೆಯೇ ನೆರೆದಿತ್ತು, ಅವರ ಕ್ಯಾಮರ ಹಾಗು ದೊಡ್ಡ ದೊಡ್ಡ ಲೆನ್ಸ್ ಗಳು ನನ್ನ ಗಮನ ಸೆಳೆಯಿತು ,ನಾನು ನನ್ನ  ದೊಡ್ಡ ಲೆನ್ಸ್ ಗಳನ್ನೂ ತರದೇ ಇರಲು ಸಾಧ್ಯವಾಗದ  ಬಗ್ಗೆ   ಪಶ್ಚಾತ್ತಾಪ ಪಟ್ಟುಕೊಂಡೆ   ಆದರೆ ಅಲ್ಲಿನ  ಛಾಯಾಚಿತ್ರಗಾರರಲ್ಲಿನ ತನ್ಮಯತೆ, ಹಾಗು ಅಲ್ಲಿನ ಪಕ್ಷಿಗಳಿಗೆ ತೊಂದರೆ ಆಗದಂತೆ  ವರ್ತಿಸಿದ ಅವರ ವರ್ತನೆ  ಇಷ್ಟವಾಯಿತು . 


ಕಾಡಿನ ನಡುವೆ ಚಾರಣ

ಹಾಗೂ ಹೀಗೂ    ವೇಳೆ ಕಳೆದು ಸಂಜೆಯ ಚಾರಣಕ್ಕೆ ಸಿದ್ಧವಾದೆವು , ಅಲ್ಲಿನ ಸಿಬ್ಬಂಧಿ ನಮ್ಮನ್ನು ದಟ್ಟ ಕಾಡಿನ ನಡುವೆ ಬೆಟ್ಟಗಳನ್ನು ಹತ್ತಿಸುತ್ತಾ  ಚಾರಣಕ್ಕೆ ಕರೆದೊಯ್ದರು,ಆದರೆ ನಮ್ಮ ತಂಡದ ಜೊತೆಗಿದ್ದ ಕೆಲವರ ಗಲಾಟೆ ಕಾಡಿನಲ್ಲಿನ ಶಾಂತಿಯನ್ನು ಕದಡಿತ್ತು , ಈ ಗಲಾಟೆಗೆ ಯಾವ ಪ್ರಾಣಿ ದರ್ಶನ ನೀಡೀತು, ಹಾಗೂ ಹೇಗೋ ಗುಡ್ಡಗಳನ್ನು ಹತ್ತಿ ಒಂದು ಪ್ರದೇಶದಲ್ಲಿ  ನೆಲೆ ನಿಂತೆವು . ಆ ಪ್ರದೇಶದಲ್ಲಿ ಅನಾವರಣ ಗೊಂಡಿದ್ದೆ  ಕಾಳಿ ನದಿಯ ಸುಂದರ ಚಲುವಿನ ನೋಟ



ಚೆಲುವಿನ ಪರಿಸರ

ಕಾಳಿ ನದಿಯ ಸಂಜೆಯ ನೋಟ

ಹೌದು, ಗುಡ್ಡದ ಮೇಲೆ ನಮ್ಮ ತಂದ ತಲುಪಿದ ವೇಳೆ ಸಂಜೆಯಾಗಿತ್ತು, ಸೂರ್ಯಾಸ್ತವಾಗುವ ಹೊತ್ತು ಸಮೀಪಿಸುತ್ತಿತ್ತು ಸುಂದರ ನೋಟಗಳ ಹಬ್ಬ ನಮ್ಮದಾಗಿತ್ತು, ಅಲ್ಲಿದ್ದ ಎಲ್ಲಾ ತಂಡದ ಜನರ ಉತ್ಸಾಹ ಮೆರೆಮೀರಿತ್ತು, ತೃಪ್ತಿಯಾಗುವಷ್ಟು ಅಲ್ಲಿನ ಸಂತಸ ಕ್ಷಣಗಳನ್ನು ಸವಿದರು,  ಕ್ಯಾಮರಾಗಳು  ಪಟಪಟನೆ ಕ್ಷಣಗಳನ್ನು ಸೆರೆ ಹಿಡಿಯುತ್ತಿದ್ದವು, ಸುಮಾರು ಒಂದು ಘನತೆಯ ಕಾಲ ಎಲ್ಲರೂ ಅಲ್ಲಿನ ಸೌಂದರ್ಯ ನೋಡಿ ಧನ್ಯತೆ ಪಡೆದೆವು



ಶಿಸ್ತು ಬದ್ದ  ಆಹಾರ ವ್ಯವಸ್ತೆ


ಸುಂದರ ನೋಟಗಳ ನೋಡಿ ಮತ್ತೆ ನಮ್ಮ ತಾಣಕ್ಕೆ ವಾಪಸ್ಸು ಬರುವಷ್ಟರಲ್ಲಿ ಕತ್ತಲಾಗಿತ್ತು, ಧಣಿದ  ವಿಶ್ರಾಂತಿ ಬಯಸಿತ್ತು,   ಸ್ವಲ್ಪ ವಿಶ್ರಾಂತಿ ಪಡೆದು, ರಾತ್ರಿಯ ಊಟಕ್ಕೆ ತೆರಳಿದೆವು,  ಅಲ್ಲೇ ಸಾಗಿದ್ದ ನಮಗೆ ಅಡಿಗೆ ಮನೆಯ ದರ್ಶನ ವಾಗಿತ್ತು , ಆಹಾರದ ಸುವಾಸನೆ  ಆಸ್ವಾಧಿಸುತ್ತಾ  ಸಾಗಿದ ನಮಗೆ ಶಿಸ್ತುಬದ್ದವಾಗಿ  ಆಹಾರಗಳನ್ನು ಸಾಲಾಗಿ ಇಡಲಾಗಿತ್ತು , ಹಿತವಾದ ಗಾಳಿ, ಸುಂದರ ಪರಿಸರ  ಇನ್ನೇನು ಬೇಕು, ನಮಗೆ ಅರಿವಿಲ್ಲದಂತೆ  ಹೆಚ್ಚಾಗಿಯೇ  ಊಟ ಮಾದಿದೆವು. ಒಂದಷ್ಟು ಹರಟೆ ಮಾಡಿದ ನಮಗೆ ನಿದ್ರಾದೇವಿ ಕೈ ಬೀಸಿ ಕರೆಯುತ್ತಿದ್ದಳು , ನಮ್ಮ ರೂಮಿಗೆ  ತೆರಳಿ ನಿದ್ರಾದೇವಿ ಮಡಿಲು ಸೇರಿದೆವು,




ಮುಂಜಾವಿನ ದರ್ಶನ ನೀಡಿದ ಕಂದು  ಅಳಿಲು


ಕ್ಯಾಮರ ಹೊತ್ತ ಮಂದಿ



ಮರುದಿನ ಮುಂಜಾವಿನಲ್ಲಿ  ಹಕ್ಕಿಗಳ ಹಾಡು ನಮ್ಮನ್ನು   ಎಚ್ಚರಗೊಳಿಸಿತು , ರೂಂ ನಿಂದ ಹೊರಗೆ ಬಂದು ನೋಡಿದರೆ ಹೊರಗೆ ಆಗಲೇ ಬೆಳಕಿನ ಚಿತ್ತಾರ ಮೂಡಿತ್ತು, ಮರಗಳ ಮೇಲೆ  ಸರ ಸರ ಸದ್ದಾಗಿ ನೋಡಿದರೆ ಅಲ್ಲೊಂದು ಧೈತ್ಯ ಕಂಡು ಅಳಿಲು [malabar giant squirrel ] ಮರದಿಂದ ಮರಕ್ಕೆ ಹಾರುತ್ತಿತ್ತು. ಕ್ಯಾಮರಾಗಳನ್ನು ಸ್ಟಾಂಡ್ ಸಮೇತ ಹೊತ್ತ ಇಬ್ಬರು ಪಕ್ಷಿ ಚಿತ್ರ ತೆಗೆಯಲು ತೆರಳುತ್ತಿದ್ದರು . ಮುಂದಿನ ಪಯಣಕ್ಕೆ ನಮ್ಮ ಸಿದ್ದತೆ  ಶುರುವಾಗಿತ್ತು, ಹೌದು ನಮ್ಮ ಬಯಕೆಯಾದ  "ರಿವರ್ ರಾಫ್ಟಿಂಗ್ " ನೀರಿನ ಕೊರತೆಯಿಂದ ರದ್ದಾಗಿತ್ತು, ಹಾಗಾಗಿ ಸ್ವಲ್ಪ ನಿರಾಸೆ ಆಯಿತು.




ಹರಿಗೊಲಿನ  ಸವಾರಿ

ನವಿಲಿನ ನಲಿವು


ಮುಂಜಾನೆ ಉಪಹಾರ ಸೇವಿಸಿ , ಹೊರಟ  ನಾವು  ಕಾಳಿನದಿಯ ದಡಕ್ಕೆ ಬಂದೆವು , ನಮಗಾಗಿ ಹರಿಗೊಲಿನ ವ್ಯವಸ್ತೆ ಮಾಡಲಾಗಿತ್ತು,  ಕಾಳಿ ನದಿಯಲ್ಲಿ ಹರಿಗೊಲಿನ ತೇಲಾಟದ  ಸವಾರಿ  ಮುದನೀಡಿತ್ತು,  ದಡದಲ್ಲಿ ಕುಳಿತ ಒಂದು ನವಿಲು  ನಲಿದಾದಿತ್ತು,  ಸುಂದರ   ಈ  ಸವಾರಿಯನ್ನು ಮಕ್ಕಳು , ದೊಡ್ಡವರು ಎಲ್ಲರೂ ಆನಂದಿಸಿದರು, ಗಣೇಶ್ ಗುಡಿಯ ಪ್ರವಾಸ  ನಮ್ಮ ಪಯಣದ ಅಂತಿಮ ಘಟ್ಟ ತಲುಪಿತ್ತು, ಪರಿಸರದ ನಡುವೆ  ಮೂರುದಿನ  ಮೂರು ಕ್ಷಣಗಳಂತೆ ಕಳೆದು ಹೋಗಿತ್ತು, ಇಲ್ಲಿಗೆ ಉತ್ತರ ಕರ್ನಾಟಕದ ಮತ್ತೊಂದು ಸುಂದರ ಪ್ರವಾಸ  ಅರ್ಥಪೂರ್ಣವಾಗಿ ಮುಗಿಯಿತು. ಇಲ್ಲಿಯ ವರೆಗೆ ಈ ಪಯಣದ ಕೊರೆತ ಅನುಭವಿಸಿದ ನಿಮಗೆ ಥ್ಯಾಂಕ್ಸ್, ಮತ್ತೆ ಸಿಗೊನ. ಹೊಸ ವಿಚಾರದೊಂದಿಗೆ .







Tuesday, July 16, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .05 ಸಿಂಥೆರಿ ರಾಕ್ಸ್ ಎಂಬ ಬಯಲು ಜ್ಞಾನ ತಾಣ


ಹಸಿರ ಹೊದ್ದ ಮಣ್ಣಿನ ಹಾದಿ
 
[ಕ್ಷಮಿಸಿ  ಬಹಳ ದಿನಗಳ ನಂತರ  ಮತ್ತೆ ಬರೆಯಲು ಕುಳಿತೆ, ಇತ್ತೀಚಿಗೆ ನನ್ನ ವಯಕ್ತಿಕ ಕೆಲಸದ ಒತ್ತಡದಿಂದ ಬರೆಯಲು ವಿಳಂಭ ವಾಗಿದೆ  ಇನ್ನು ಮುಂದೆ  ನಿಯಮಿತವಾಗಿ ಬರೆಯಲು ಪ್ರಯತ್ನಿಸುತ್ತೇನೆ ] 
ಬನ್ನಿ ಮುಂದೆ ಸಾಗೋಣ 
ಅರೆ ಇದೇನಿದು  ಕಾರಿನ ಮೇಲೆಲ್ಲಾ ಧೂಳಿನ ಎರಚಾಟ......!!!. ಹೌದು  ದಾಂಡೇಲಿಯ ಸೊಬಗನ್ನು ಸವಿದ ನಮ್ಮ ತಂಡ  ಮುಂದೆ ಸಾಗಿತ್ತು, ಹಸಿರು ರಸ್ತೆಯಲ್ಲಿ ಸಾಗಿದ್ದ ನಮ್ಮ ಕಾರುಗಳು ಇದ್ದಕ್ಕಿದ್ದಂತೆ ಮಣ್ಣಿನ ಹಾದಿ ಹಿಡಿದವು,  ಆ ರಸ್ತೆಯಲ್ಲಿ ಧೂಳಿನ ಎರಚಾಟ ಸಾಗಿತ್ತು, ವಾಹನಗಳ ಮೇಲೆಲ್ಲಾ ಧೂಳಿನ ಮಜ್ಜನ ಆಗಿತ್ತು.


ವಾಹನಗಳಿಗೆ ಧೂಳಿನ ಮಜ್ಜನ


ಸ್ಥಳೀಯ ದೇವತೆಯ ಆಲಯ
 ಆದರೆ  ಏನಂತೆ  ಕೆಲವೊಮ್ಮೆ ಇಂತಹ ಸನ್ನಿವೇಶ ದಲ್ಲಿ ನಮ್ಮ ಅನಿಸಿಕೆಗಿಂತ ಹೆಚ್ಚಾಗಿ  ಒಳ್ಳೆಯ ತಾಣಗಳ ದರ್ಶನ ಆಗುತ್ತೆ  , ಹಾಗೆ ಇಲ್ಲಿಯೂ ಸಹ ನಮಗೆ ಅನುಭವ ಆಯಿತು, ಕಾರಿನಿಂದ ಇಳಿದು ಮುಂದೆ ಸಾಗಿದ ನಮಗೆ  ಸುಂದರ ಪರಿಸರದ ಹಿತಕರ ಅನುಭವ , ಅಲ್ಲೇ ಕಾಣಿಸಿದ್ದು ಯಾವುದೋ ಸ್ಥಳೀಯ  ದೈವದ ಆವಾಸ  ಸ್ಥಳ , ಪ್ರತೀ ಕಾಡಿನಲ್ಲೂ ಅಷ್ಟೇ ಅಲ್ಲಿನ ಸ್ಥಳೀಯ ಜನರು ತಾವು ನಂಬುವ   ದೈವಕ್ಕೆ ಪೂಜೆ ಸಲ್ಲಿಸುವ ವಾಡಿಕೆ ಇರುತ್ತದೆ . ಇಲ್ಲಿಯೂ ಸಹ ಹೂವಿತ್ತು ಘಂಟೆ ಕಟ್ಟಿ ಪೂಜೆ ಮಾಡಿದ್ದರು .


ಸಿಂಥೆರಿ ರಾಕ್ಸ್  ಬಗ್ಗೆ ಮಾಹಿತಿ ನೀಡುವ ಫಲಕ.

ಸನಿಹದಲ್ಲೇ ಸಿಂಥೆರಿ ರಾಕ್ಸ್ ಬಗ್ಗೆ ಮಾಹಿತಿ ನೀಡುವ ಫಲ ಕಣ್ಣಿಗೆ ಬಿತ್ತು , ಹೌದು ಈ ತಾಣದಲ್ಲಿ ಕಾಳಿ ನದಿಯ ಉಪನದಿ ಕಾನೇರಿ  ಇಲ್ಲಿ ಹರಿದು ಮಾನವರ ಜ್ಞಾನಕ್ಕೆ ಕೊಡುಗೆ ನೀಡಿದ್ದಾಳೆ, ಇಲ್ಲಿ ನಿಸರ್ಗ ನಿರ್ಮಿತ ಕಲ್ಲುಗಳು ಗಣಿ ವಿಜ್ಞಾನಕ್ಕೆ ತಮ್ಮದೇ ಆದ ಕೊಡುಗೆ   ಸಲ್ಲಿಸಿವೆ.   ಕಾನೇರಿ  ಉಪನದಿಯು ಉತ್ತರ ಕನ್ನಡ ಜಿಲ್ಲೆಯ   ಜೋಯ್ಡ  ತಾಲೂಕಿನಲ್ಲಿ  ಹುಟ್ಟಿ  ಕಾಳೀ ನದಿಯನ್ನು ಸೇರುತ್ತದೆ, ಆದರೆ ಇದರ ನಿಖರ ಮಾಹಿತಿ  ಎಲ್ಲಿಯೂ ಲಭ್ಯವಿಲ್ಲ.


 ಮಸುಕಾದ ಜ್ಞಾನ ಫಲಕಗಳು


"ಸಿಂಥೆರಿ ರಾಕ್ಸ್ " ಬಗ್ಗೆ ಇಲ್ಲಿದೆ ಸ್ವಲ್ಪ ಮಾಹಿತಿ, ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ತಾಣ ದಾಂಡೇಲಿ ಅರಣ್ಯದಲ್ಲಿ ಕಂಡುಬರುವ ಈ  ನೈಸರ್ಗಿಕ ಶಿಲೆಯು 3 0 0  ಅಡಿ ಎತ್ತರವಿದ್ದು  ಬಹಳ ಕಡಿದಾಗಿದೆ ,  ಈ  ಬೃಹತ್ ಬಂಡೆಯು ನೈಸರ್ಗಿಕ  ಶಿಥಲೀಕರಣ  ದಿಂದ ಉಂಟಾದ ಒಂದು  ನಿಸರ್ಗ ವಿಸ್ಮಯ ರಚನೆಯಾಗಿದೆ, ಈ ಬಂಡೆಗಳು ನೈಸರ್ಗಿಕ ಶಿಥಲೀಕರಣಕ್ಕೆ ಬಹಳಷ್ಟು ಪ್ರತಿರೋಧ ಒಡ್ಡಿ ಅಚಲವಾಗಿ ನಿಂತಿವೆ, ಅಗ್ನಿ ಶಿಲೆಗಳಾದ "ಗ್ರಾನೈಟ್" " ಬೆಸಾಲ್ಟ್ " , ಹಾಗೂ , ಜಲಜ ಶಿಲೆಗಳಾದ  "ಮರಳು ಶಿಲೆ" ಹಾಗೂ "ಸುಣ್ಣದ ಶಿಲೆ" ಇವುಗಳಿಂದ ಈ   "ಸಿಂಥೆರಿ  ರಾಕ್ಸ್" ರೂಪು ಗೊಂದಿರುವುದಾಗಿ ತಿಳಿದು ಬರುತ್ತದೆ.  ಇಂತಹದೆ ರಚನೆಯನ್ನು ಪಾಕಿಸ್ತಾನದ ಕಾರಾಕೊರಂ ಪರ್ವತ ಶ್ರೇಣಿಯಲ್ಲಿ ಕಾಣಬಹುದಂತೆ  ಅದರ ಎತ್ತರ         1 3 4 0 ಅಡಿಗಳೆಂದು  ದಾಖಲಿಸಲಾಗಿದೆ. 






ಕಾಡುಗಳಿಂದ ಮಳೆ ನೀರು ಕುಯ್ಲಿನ ಬಗ್ಗೆ ಮಾಹಿತಿ



ಡೈಕ್ ಶಿಲೆ



ಗ್ರೇ ವ್ಯಾಕ್




ಪೆಂಟೆಗಲ್ಲು



ಬೆಣಚುಕಲ್ಲು

 


ಕಬ್ಬಿಣಾಂಶ ಇರುವ ಶಿಲೆ


 ಕ್ವಾರ್ಟ್ಜ್ ಬೆಣಚುಕಲ್ಲಿನ  ವಿವರ
ಫಿಲೈಟ್  ಶಿಲೆ


ಕಿಡಿಗೇಡಿಗಳು  ಕದ್ದಿರುವ ಶಿಲೆ
ಮತ್ತೊಂದು ಬಗೆಯ ಬೆಣಚುಕಲ್ಲು
ಲ್ಯಾಟರೈಟ್  ಶಿಲೆ
ನಿಮಗೆಮೊದಲೇ ಹೇಳಿದಂತೆ ಸಿಂಥೆರಿ ರಾಕ್ಸ್ ಒಂದು ಬಯಲು ಜ್ಞಾನ ಆಲಯ , ವಿವಧ ಬಗೆಯ ಕಲ್ಲುಗಳ ಬಗ್ಗೆ ಇಲ್ಲಿ ಪೂರ್ಣ ಮಾಹಿತಿ ನೀಡಿದ್ದಾರೆ, ಹಾಗು ಸುಂದರ ಪರಿಸರದಲ್ಲಿ ಅರಿವು ಮೂಡಿಸುವ ಪ್ರಯತ್ನ ಇಲ್ಲಿ ಸಾಗಿದೆ. ಆದರೆ ಇಲ್ಲಿ ಮಜಾ ಮಾಡಲು ಬರುವ ನಾವು ಇದನ್ನು ನೋಡುವ ಗೋಜಿಗೆ ಹೊಗುವುದಿಲ್ಲ.  



ಮಾಹಿತಿ ನೋಡುತ್ತಾ ಸಾಗುವ ಮೆಟ್ಟಿಲುಗಳ ಹಾದಿ
ಬನ್ನಿ ನಿಮಗೆ ಸ್ವಾಗತ


ವಿವಿಧ ನೈಸರ್ಗಿಕ ಶಿಲೆಗಳ ಬಗ್ಗೆ ಮಾಹಿತಿ ತಿಳಿಯುತ್ತಾ ಮೆಟ್ಟಿಲುಗಳನ್ನು ಇಳಿಯುತ್ತಿದ್ದರೆ  ನೀವು, ಅದ್ಭುತ ರಮ್ಯ ತಾಣ ತಲುಪುತ್ತೀರಿ , ಹೌದು ನಿಮ್ಮನ್ನು ಸಿಂಥೆರಿ ರಾಕ್ಸ್ ತಳದಲ್ಲಿ ಹರಿಯುವ "ಕಾನೇರಿ ನದಿ" ಯ ಈ ಪ್ರದೇಶ ಸ್ವಾಗತ  ನೀಡುತ್ತದೆ .  ಈ ಪ್ರದೇಶದಲ್ಲಿ ಬೃಹತ್ ಗಾತ್ರದ ಶಿಲೆಗಳ ನಡುವೆ ಜುಳು ಜುಳು ಹರಿವ ನದಿಯು ಸ್ವರ್ಗವನ್ನೇ  ಸೃಷ್ಟಿಸಿದೆ . ಅಂತರ್ಜಾಲದಲ್ಲಿ ಈ ಬಗ್ಗೆ ಇರುವ ಮಾಹಿತಿ ಇಷ್ಟೇ ನೋಡಿ


 
ಪ್ರಕೃತಿ ನಿರ್ಮಿತ  ಶಿಲೆಗಳ ಕಲಾವೈಭವ



ಇದು ನಮ್ಮದೇ ಲೋಕ
 Syntheri Rock – Syntheri Rock is a 300-feet tall monolithic granite located deep inside the thick Dandeli Wildlife Sanctuary. With the Kaneri River gushing ferociously by its side, the Syntheri Rock is a spectacular sight. A jeep ride for about an hour followed by a walk through the scenic jungle will bring you to this incredibly beautiful sculpture of nature. Sykes Point is one of the most beautiful viewing spots in Karnataka. 

 
ನನ್ನನ್ನು  ನೋಡಲು ಬಂದಾಗ ಎಚ್ಛರವಾಗಿರಿ


ಜೇನು ಗೂಡುಗಳ ಅಲಂಕಾರ ಈ ಬಂಡೆಗೆ
 

ಅಂದ ಹಾಗೆ ಈ ಜಾಗದಲ್ಲಿ ಮೈಮರೆತರೆ ಜೀವಹಾನಿ ಖಚಿತ, ಹಾಗಾಗಿ ಬಹಳಷ್ಟು ಎಚ್ಚರ ವಹಿಸುವುದು ಒಳ್ಳೆಯದು, ಪ್ರತೀವರ್ಷ ಇಲ್ಲಿ ನೂರಾರು ಜನ ಸಾವನ್ನಪ್ಪುವುದಾಗಿ ತಿಳಿದುಬಂತು, ಕೆಲವೊಮ್ಮೆ ನೀರಿಗೆ ಕಲ್ಲು ಹೊಡೆಯಲು ಹೋಗಿ ಜೇನುಗೂಡಿಗೆ ಕಲ್ಲು ತಗುಲಿ ಅನಾಹುತ ಆಗಿದೆಯಂತೆ, ಇಲ್ಲಿನ ಪರಿಸರವನ್ನು ಹೆಮ್ಮೆಯ ಕನ್ನಡಿಗರಾದ ನಾವು ಕಾಪಾಡಿ ಕೊಳ್ಳಬೇಕಾದ ಕರ್ತವ್ಯ ಮಾಡಬೇಕು , ಈ ಸ್ವರ್ಗ ಲೋಕದ ಕೊಡುಗೆ ನೀಡಿದ ಉತ್ತರ ಕನ್ನಡ ಜಿಲ್ಲೆ ಗೆ ನಮಿಸಿ  ನಮ್ಮ ಪ್ರವಾಸ ದಿಬ್ಬಣ  ಮುಂದುವರೆಯಿತು,ಹಸಿರು ಹಾದಿಯ  ಪಯಣ 

 
ಅದೇ ಹಸಿರು ದಾರಿಯ ಪಯಣ
ಮುಂದ ............????