Thursday, October 15, 2015

ಮನಸುಗಳನ್ನು ಅರ್ಥ ಮಾಡಿಕೊಳ್ಳದ ನೀವು ಹೋಗಿ ಬನ್ನಿ ನಿಮಗೆ ಶುಭವಾಗಲಿ ......!

ಜೀವನದ ಅಜ್ಞಾನದ  ಕತ್ತಲಿಗೆ  ಜ್ಞಾನ ಹಾಗು  ಪ್ರೀತಿ ವಿಶ್ವಾಸದ  ಬೆಳಕಿನ ಅಗತ್ಯ ಇದೆ

ಸಾಮಾಜಿಕ ತಾಣಗಳಲ್ಲಿ  ಬಹಳಷ್ಟು ಜನ ಸಿಗುತ್ತಾರೆ  ಆದರೆ  ಕೆಲವರು ಮಾತ್ರ  ತಮ್ಮ ಸನ್ನಡತೆಯ ಕಾರಣ  ನಮಗೆ ಬಹಳ ಹತ್ತಿರವಾಗುತ್ತಾರೆ ,   ಇವರನ್ನು ನಾವು ನಮ್ಮ ಮನೆಯ ಜನಗಳು ಎಂಬಂತೆ  ಭಾವಿಸಿ  ವಿಶೇಷ ಸ್ಥಾನ  ನೀಡುತ್ತೇವೆ, ಅವರ ಕಷ್ಟ ಸುಖಗಳಲ್ಲಿ  ಭಾಗಿಯಾಗುತ್ತೇವೆ ಸಹ.  ಇಂತಹವರಲ್ಲೂ ಕೂಡ  ಕೆಲವರು  ನಿಷ್ಕಲ್ಮಶ  ಪ್ರೀತಿಯನ್ನು   ಅರ್ಥ ಮಾಡಿಕೊಳ್ಳದೆ ಸಹೋದರ  ಪ್ರೀತಿಗೆ  ಬೆಂಕಿ ಹಚ್ಚಿ   ದೂರಸರಿದು  ತಾವು ಮಹಾ  ಜ್ಞಾನಿಗಳು ಎಂಬಂತೆ  ನಡೆದುಕೊಳ್ಳುತ್ತಾರೆ . ನನ್ನ ಗೆಳೆಯರಿಗೆ  ಅನುಭವಕ್ಕೆ ಬಂದ ಒಂದೆರಡು ಉದಾಹರಣೆ ಇಲ್ಲಿದೆ ನೋಡಿ.

ಘಟನೆ ೧ :-)  ನನ್ನ ಗೆಳೆಯರೊಬ್ಬರು  ನಿಜಕ್ಕೂ   ಪ್ರೀತಿ ವಿಶ್ವಾಸಕ್ಕೆ  ಹೆಸರುವಾಸಿ,  ನಿಜಕ್ಕೂ  ಅಜಾತ ಶತ್ರುವೇ ಈತ , ಸಾಮಾಜಿಕ ತಾಣದಲ್ಲಿ  ಇವರನ್ನು ಇಷ್ಟಪಡದೆ ಇರಲು ಸಾಧ್ಯವೇ ಇಲ್ಲಾ, ಎಲ್ಲರೊಡನೆ ನಗು ನಗುತ್ತಾ ಬೆರೆತು  ಪ್ರೀತಿ ವಿಶ್ವಾಸ ದಿಂದ ಸಹೋದರ  ಪ್ರೀತಿಗೆ ಹೊಸ ಭಾಷ್ಯ ಬರೆದ  ಮಹನೀಯ,  ಅವರ ಪತ್ನಿ ಹಾಗು ಮಕ್ಕಳೂ ಸಹ  ಇದಕ್ಕೆ ಒತ್ತಾಸೆ ನೀಡುತ್ತಿದ್ದಾರೆ ,   ಸಾಮಾಜಿಕ ತಾಣದ ಹಲವು ಹೆಣ್ಣು ಮಕ್ಕಳು  ಇವರ ಮನೆಯ  ಅಕ್ಕ ತಂಗಿಯರೇ ಆಗಿ ಹೋಗಿದ್ದಾರೆ ,   ಇನ್ನು ಆ ಹೆಣ್ಣುಮಕ್ಕಳು  ಪಟ್ಟಣದ  ಒತ್ತಡದ ಬದುಕಿಗೆ ಹರುಷ ತುಂಬಲು  ನನ್ನ  ಗೆಳೆಯನ ಕುಟುಂಬದೊಡನೆ  ಭೇಟಿ ನೀಡಿ  ಖುಷಿಯಿಂದ ಕಾಲ ಕಳೆದು  ತೆರಳುತ್ತಿದ್ದರು,  ಒಬ್ಬ  ತಂಗ್ಯವ್ವ  ಕೂಡ ಇವರಲ್ಲಿ ಒಬ್ಬಳು  , ಅವಳಿಗೆ ಆರೋಗ್ಯ ಸರಿ ಇಲ್ಲದಾಗ   ತಮ್ಮ ಮನೆಯಲ್ಲಿಯೇ  ಇರಿಸಿಕೊಂಡು  ವೈಧ್ಯಕೀಯ  ಶುಶ್ರೂಷೆ  ಕೊಡಿಸಿ , ಅವಳ ಆರೋಗ್ಯ ಸರಿಹೊಗುವವರೆಗೂ   ಅವಳ ಜೊತೆಯಾಗಿ ನಿಂತು  ತಮ್ಮ ಮಗಳಂತೆ  ಉಪಚಾರ  ಮಾಡಿದ್ದರು , ಯಾವುದೋ ದೂರದ ಊರಿನಿಂದ  ಬಂದಿದ್ದ ಆಕೆ  ಇವರ  ಈ ಕಾರ್ಯಕ್ಕೆ  ಬಹಳ  ಹರುಷ ಗೊಂಡಿದ್ದಳು, ನನ್ನ ಗೆಳೆಯನ ಪತ್ನಿಯನ್ನು ತನ್ನ ತಾಯಿಯಂತೆ ಅನ್ನುತ್ತಾ  ಹೋಗಳಿದ್ದಳು, ಆದರೆ  ಇದ್ದಕಿದ್ದಂತೆ  ಅಚ್ಚರಿ ಎಂಬಂತೆ   ಕಳೆದ  ಕೆಲವು ತಿಂಗಳಿಂದ   ಪಡೆದ ಉಪಕಾರವನ್ನು  ಮರೆತು  , ತನಗೂ ಈ ಮನೆಗೂ  ಯಾವುದೇ  ಸಂಬಂಧವೇ  ಇರಲಿಲ್ಲ ಎನ್ನುವರೀತಿ ನಡೆದುಕೊಳ್ಳುತ್ತಾ  ಇದ್ದಾಳೆ .

ಘಟನೆ ೨ :-) ಇನ್ನು ಮತ್ತೊಬ್ಬ ತಂಗ್ಯವ್ವನ ಕಥೆಯೂ ಇದೆ,  ಈ ಹೆಣ್ಣುಮಗಳು  ಬಹಳ  ದೂರದ  ಊರಿನವಳು , ಬೆಂಗಳೂರಿಗೆ ಬಂದಾಗ ನನ್ನ ಗೆಳೆಯನ ಕುಟುಂಬದ  ಭೇಟಿ ಅವಳ  ತವರು ಮನೆಯಷ್ಟೇ  ಹಿತನೀಡುತ್ತಿತ್ತು , ಮನೆಯವರೆಲ್ಲರೂ ಅವಳನ್ನು ಮನೆಯ ಮಗಳೆಂದು ಭಾವಿಸಿದ್ದರು , ತಮ್ಮ ಕುಟುಂಬದ ಎಲ್ಲರೂ ಆ ಹುಡುಗಿಯ ಜೊತೆ  ಚಿತ್ರವನ್ನು  ತೆಗೆಸಿಕೊಂಡು  ಮನೆಗೆ ಬಂದವರಿಗೆ ತಮ್ಮ ಹೆಮ್ಮೆಯ ಮಗಳೆಂದು  ಹೇಳಿಕೊಳ್ಳುತ್ತಿದ್ದರು , ಕೆಲವೊಮ್ಮೆ ಪ್ರವಾಸಕ್ಕೆ ತಮ್ಮೊಡನೆ ಕರೆದು ಕೊಂಡು ಹೋಗುತ್ತಿದ್ದರು , ಹಾಗೆ ಬರುವಾಗ ಎಷ್ಟೇ ತಡರಾತ್ರಿಯಾದರೂ ಸರಿಯೇ  ಆ ಹುದುಗಿಯನ್ನು  ಅವಳು ಓದುತ್ತಿದ್ದ  ಊರಿನ ಮನೆಗೆ  ಸುರಕ್ಷಿತವಾಗಿ ಬಿಟ್ಟುಬರುತ್ತಿದ್ದರು , ಕೆಲವೊಮ್ಮೆ ನನ್ನ ಗೆಳೆಯ ತನ್ನ ಕುಟುಂಬದೊಡನೆ  ಇದಕ್ಕಾಗಿ ರಾತ್ರಿಯಿಡೀ  ಕಾರನ್ನು ಚಲಾಯಿಸಿಕೊಂಡು  ಹೋಗಿ  ಆ ಮಗಳನ್ನು  ಬಿಟ್ಟು ಬಂದಿದ್ದಾನೆ , ವಾರಕ್ಕೆ ಒಂದೆರಡು ಬಾರಿ ಅವಳು ಫೋನ್ ಮಾಡದೆ ಇದ್ದರೆ  ಏನಾಯ್ತೋ ಎಂಬಂತೆ ಆ ಕುಟುಂಬ ತಾವೇ ಫೋನ್  ಮಾಡಿ ಅವಳ ಯೋಗಕ್ಷೇಮ  ವಿಚಾರಿಸಿದ್ದು ಸಹ ಉಂಟು,   ಅವಳ ತಮ್ಮನಿಗೆ  ಮತ್ತೊಂದು ಊರಿನಲ್ಲಿ  ದೊರೆತ ಸನ್ಮಾನದ  ಕಾರ್ಯಕ್ರಮದ   ವೀಡಿಯೊ  ಸಿ.ಡಿ  ದೊರಕಿಸಿಕೊಡಲು , ಅವಳ ಕೋರಿಕೆಯ ಮೇರೆಗೆ  ನೂರಾರು ಮೈಲು ಕಾರು ಮಾಡಿಕೊಂಡು  ಹೋಗಿ ಸಾಹಸ ಪಟ್ಟು ವೀಡಿಯೊ  ಸಿ.ಡಿ ಗೆ ತಾನೇ ಹಣ ಪಾವತಿಸಿ  ಅವಳಿಗೆ ತಲುಪಿಸಿದ್ದಾನೆ ,     ಆದರೆ ಇದೂ  ಸಹ ಅದೇ  ರಾಗ ಆಯ್ತು  ಈಕೆಯೂ ಸಹ   ಸಹೋದರ ಪ್ರೀತಿ ಹಾಗು ಒಂದು ಕುಟುಂಬದ  ವಿಶ್ವಾಸವನ್ನು  ಧಿಕ್ಕರಿಸಿ  , ತನಗೂ ಆ ಕುಟುಂಬಕ್ಕೂ  ಪರಿಚಯವೆ  ಇಲ್ಲ ಅನ್ನುವಂತೆ  ಇದ್ದಾಳೆ.




ಮೇಲಿನ ಎರಡು ಘಟನೆಗಳು  ನಿಜಕ್ಕೂ ಅಚ್ಚರಿ ಮೂಡಿಸಿದ  ವಿಚಾರಗಳು , ಸಾಮಾಜಿಕ ತಾಣದಲ್ಲಿನ   ಇಂತಹ  ವ್ಯಕ್ತಿಗಳು ಹೀಗೇಕೆ ?   ಎಂಬ ಪ್ರಶ್ನೆಗೆ ಉತ್ತರ  ಸಹ ದೊರೆಯುತ್ತಿಲ್ಲ,  ಇನ್ನು ನನ್ನ ಗೆಳೆಯನ ನಡತೆ ಬಗ್ಗೆ ಎರಡು ಮಾತಿಲ್ಲ ಅದು  ನನ್ನ ಗೆಳೆಯರ ಬಳಗದಲ್ಲಿರುವ  ನೂರಾರು  ಸಹೋದರ ಸಹೋದರಿಯರಿಗೆ ಗೊತ್ತಿರುವ ವಿಚಾರ . ಅವರೆಲ್ಲರೂ ಸಹ ಈ ವಿಚಾರದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ  ಇದೆಲ್ಲದರ ನಡುವೆಯೂ  ಸಾಮಾಜಿಕ ತಾಣದಲ್ಲಿ ದೊರೆತ  ಸಹೋದರಿಯರ  ವಿಚಾರದಲ್ಲಿ  ನನ್ನ ಗೆಳೆಯನ  ಪ್ರೀತಿ ವಾತ್ಸಲ್ಯ ಕಡಿಮೆಯಾಗಿಲ್ಲ , .    ಯಾಕ್ರೀ ಹೀಗೆ ಅಂತಾ ಕೇಳಿದ್ರೆ ಅದೇ ನಗುವಿನ ಉತ್ತರ   ಸಹೃದಯ ಪ್ರೀತಿಗೆ  ಸಾವಿಲ್ಲಾ   ಸರ್ಜಿ ,  ಅವರ ಮೇಲೆ ನಿಜಕ್ಕೂ ಕೊಪವಿಲ್ಲಾ  ಆದರೆ  ಮನಸಿನಲ್ಲಿ  ಒಂದೆಡೆ ನೋವಿರುತ್ತೆ ಅದಕ್ಕೆ  ವೆಂಗ್ಯದ  ನಗೆ ನಕ್ಕು ನನ್ನ ಕೆಲಸ ಮುಂದುವರೆಸುವೆ ಅಷ್ಟೇ ,  ಪ್ರೀತಿ ವಾತ್ಸಲ್ಯ  ಬಯಸಿದಾಗ ಕೊಡೋದು ತಪ್ಪಲ್ಲ , ಆದರೆ ಉಳಿಸಿಕೊಳ್ಳೋದು  ನಮ್ಮ  ನಮ್ಮ ಅರಿವಿಗೆ ಬಿಟ್ಟ ವಿಚಾರ ಅಂದರು .  ನನಗಂತೂ  ಪ್ರೀತಿಯ ಗೆಳೆಯನ  ಹೃದಯ ವೈಶಾಲ್ಯತೆಯ  ದರ್ಶನ ಆಯ್ತು .  ನನ್ನೊಳಗಿನ ಮನಸು   ಕೂಗಿ ಕೂಗಿ ಹೇಳ್ತಾ  ಇತ್ತು   ," ಸಾಮಾಜಿಕ ತಾಣದ ಮಹಾನ್  ಗೆಳೆಯರೇ   ನೀವು ಯಾರೇ ಆಗಿರಿ ಮೊದಲು ಪ್ರೀತಿ ವಾತ್ಸಲ್ಯಕ್ಕೆ  ಗೌರವಕೊಟ್ಟು ವಿಶ್ವಾಸ  ಉಳಿಸಿಕೊಳ್ಳಿ,  ಇಲ್ಲದಿದ್ದಲ್ಲಿ ಮನಸುಗಳನ್ನು ಅರ್ಥ  ಮಾಡಿಕೊಳ್ಳದ  ನೀವು ಹೋಗಿ ಬನ್ನಿ  ನಿಮಗೆ ಶುಭವಾಗಲಿ ......! "  ಈ ಮಾತು ಎಷ್ಟು ನಿಜಾ ಆಲ್ವಾ,



Saturday, July 18, 2015

ಹೇಳು ಗೆಳತಿ ಈ ಪ್ರೀತಿಗೆ ಏನೆಂದು ಕರೆಯೋಣ ...? ದಿನಕರ್ ಮೊಗೆರ ಅವರ ಮುಂದುವರೆದ ಎರಡನೆ ಭಾಗ ನಿನಗಾಗಿ .....!


ಹೇಳು  ಗೆಳತಿ  ಈ ಪ್ರೀತಿಗೆ  ಏನೆಂದು ಕರೆಯೋಣ ...? 
 

ಇವತ್ಯಾಕೋ  ಎಲ್ಲೋ ಹೋಗಲು ಮನಸಾಗಲಿಲ್ಲ , ಹೊರಗಡೆ  ತುಂತುರು ಮಳೆ,   ಹೊರಗಡೆಯ ಎಲ್ಲಾ ಕೆಲಸಕ್ಕೆ ತಡೆಹಾಕಿ ಮನೆಯೊಳಗೇ ಕುಳಿತೆ,  
"ಚಿನ್ನು   ಇವತ್ತು  ಮನೇಲೆ ಇರ್ತೇನೆ  ಏನಾದ್ರೂ ಸ್ಪೆಶಲ್  ಮಾಡೇ ", ಅಂದೇ ,   
"ಏನು ರಾಯರು  ಇವತ್ತು  ಬಹಳ ಹರುಷದಲ್ಲಿ ಇದ್ದೀರಾ  ಏನ್ ಸಮಾಚಾರ   , ಹೊರಗಡೆಯ  ತುಂತುರು ಮಳೆಯ   ಸಿಂಚನದ  ಸೂಚನೆ ಮನೆಯೊಳಗೂ ಕಾಣೋ  ಹಾಗಿದೆ ,   ಹುಶಾರಪ್ಪಾ   ಒಳಗಡೆ ವಾತಾವರಣ  ಈಗ ಇರೋ ಹಾಗೆ ಇರಲಿ   ಯಾವುದೇ  ಬದಲಾವಣೆ ಬೇಡ"  ಅಂತಾ  ಪ್ರೀತಿ ತುಂಬಿದ  ಎಚ್ಚರಿಕೆ  ನೀಡಿ  ಒಳಗಡೆ  ಪಾತ್ರೆಗೆ  ಮೊಗಚೋಕೈ ಯನ್ನು  ಟಣ್ ಟಣ್  ಅಂತಾ  ಬಡಿದಳು .
 ನನ್ನ  ಮಡದಿಯ ಸ್ವಭಾವವೇ ಹಾಗೆ  ಮನೆಯಲ್ಲಿ ಶಿಸ್ತಿನ  ಕಾನೂನು  ತರುವ ಮೊದಲು  ಹೀಗೆ ಸೂಚನೆ ನೀಡುತ್ತಾಳೆ .   ಕಳೆದ ಇಪ್ಪತೈದು ವರ್ಷದಿಂದ ಅವಳ ಜೊತೆ  ಬಾಳ ಪಯಣ ಸಾಗಿಸಿದ ನನಗೆ  ಅವಳು  ಅಂದರೆ ನನ್ನ ಮಡದಿ  ರೇವತಿ  ನನ್ನ ಜೀವನದ  ನ್ಯಾಯಾಧೀಶೆಯೂ ಹೌದು  ನನ್ನ  ಪ್ರೀತಿಯ  ಸಾಮ್ರಾಜ್ಯದ  ಒಡತಿಯೂ ಹೌದು ...   ಸಾವರಿಸಿಕೊಂಡ  ನಾನು  "ನೋಡು ಚಿನ್ನ  ಅಪರೂಪಕ್ಕೆ  ಮನೆಯಲ್ಲಿರುವ  ಅವಕಾಶ ವರುಣದೇವ  ಕರುಣಿಸಿದ್ದಾನೆ  ಇವತ್ತಾದರೂ   ಜೊತೆ ಜೊತೆಯಾಗಿ  ಹಾಯಾಗಿ  ಯುಗಳ ಗೀತೆ  ಹಾಡೋಣ ಬಾ  ಅಂದೇ ,

"ತಕ್ಷಣ  ಅಡಿಗೆ ಮನೆಯಿಂದ   ಟಣ್ ಟಣ್ ,ಟಣ್ ಟಣ್ ,ಟಣ್ ಟಣ್  ಅಂತಾ  ಸೂಚನೆ ನೀಡಿ ,  "ಅಯ್ಯೋ ರಾಮ ವಯಸ್ಸಾಯಿತು  ಚಪಲಾ ಮಾತ್ರ  ಬಿಡೋಲ್ಲಾ  ನೀವು ಅಂತಾ  , ಸಧ್ಯಕ್ಕೆ   ಒಬ್ಬರೇ ಹಾಡಿಕೊಳ್ಳಿ ,"   ಅಂತಾ  ನಸು ನಕ್ಕು ,  ನಕ್ಕೋ ನಕ್ಕೋ ಅಂದ್ಲೂ ,

ಇಂಗು ತಿಂದ  ಮಂಗನಂತೆ  ನಾನು ಹೋಗ್ಲಿ  ಬಿಡೂ  ಚಿನ್ನೂ  ಅಂತಾ   ಹೇಳಿ ,
ಥೂ  ಹಾಳಾದ  ಮಳೆ ಅಂತಾ  ಶಪಿಸುತ್ತಾ  ಪಕ್ಕದಲ್ಲೇ ಇದ್ದ   ಸಿ. ಡಿ . ಪ್ಲೇಯರ್  ಹಾಕಿದರೆ  ಇದು ಯಾರು ಬರೆದ  ಕಥೆಯೋ ಅಂತಾ  ಹಾಡು ಶುರು ಆಯ್ತು,   ಕೋಪದಿಂದ  ಅರೆ ಇಸ್ಕಿ  ಅಂತಾ   ಸಿ. ಡಿ . ಪ್ಲೇಯರ್  ನೋಡಿದೆ , ಆದರೆ ಪ್ರಯೋಜನ ಆಗಲಿಲ್ಲ .   ಮತ್ತೆ ನನ್ನ ಮೆಚ್ಚಿನ   ಸಿ. ಡಿ .   ಹಾಕಿ  ಹಳೆಯ ಪ್ರೇಮ ಗೀತೆಗಳನ್ನು ಕೇಳುತ್ತಾ   ಮರೆತುಹೋಗಿದ್ದ  ಕನಸುಗಳಿಗೆ  ಮತ್ತೊಮ್ಮೆ  ಬಣ್ಣ  ತುಂಬುತ್ತಾ  ಕುಳಿತೆ.
ಅಪ್ಪಾ  ಅಪ್ಪಾ  ಅಂತಾ  ಬಂದ  ಮಗ  ಸೂರ್ಯ ,   ಏನಯ್ಯಾ  ಇವತ್ತು   ಹೋಗಲಿಲ್ವಾ   ಮಗನೇ ಆಫೀಸ್ ಗೆ ಅಂದೇ  ,
"ಅಪ್ಪಾ   ನಿಮ್ಮ ಹತ್ತಿರ  ಒಂದು  ವಿಚಾರ ಮಾತನಾಡಬೇಕು  ಅದಕ್ಕೆ ಬೇಗ ಬಂದೆ ,  ಕಳೆದ ಒಂದುವಾರದಿಂದ  ಈ ವಿಚಾರ ತಿಳಿಸಲು   ನನಗೆ ಅವಕಾಶ  ಸಿಕ್ಕಿರಲಿಲ್ಲ  ಅದಕ್ಕೆ ಇವತ್ತು  ನಿಮ್ಮ ಬಳಿ  ಬಂದೆ"  ಅನ್ನುತ್ತಾ   ನನ್ನ ಭುಜದ ಮೇಲೆ ಕೈ ಹಾಕಿ  ಅಪ್ಪಿಕೊಂಡ ,

 ಈ ನನ್ನ ಮಗ ಸೂರ್ಯನೇ ಹಾಗೆ   ಬಹಳ ವಿಚಿತ್ರದ ಹುಡುಗ , ಒಮ್ಮೊಮ್ಮೆ ಇವನು ನನಗೆ ಮಗನೋ ಅಥವಾ  ನಾನು ಇವನ ಮಗನೋ ಎನ್ನುವ ಹಾಗೆ ಮಾಡಿಬಿಡುತ್ತಾನೆ ,  ಅಂದು ಬರುತ್ತಿದ್ದ  ಕಡಿಮೆ ಆದಾಯಕ್ಕೆ  ಹೆಚ್ಚು ಮಕ್ಕಳು ಬೇಡ ಅಂತಾ  ಅಂದುಕೊಂಡು  ಹೆಣ್ಣಾಗಲಿ ಗಂಡಾಗಲಿ  ಒಂದೇ ಮಗು ಸಾಕು  ಎಂದು ತೀರ್ಮಾನಿಸಿದ ನನ್ನ ಹಾಗು ನನ್ನ ಮಡದಿ  ರೇವತಿಯ   ದಾಂಪತ್ಯದ    ಸಾಕ್ಷಿಯಾಗಿ  ಜನಿಸಿದ  ಮಗು ಇದು , ಇಂದು ನನ್ನನ್ನು  ಮೀರಿ ಬೆಳೆದು   ನನ್ನನ್ನು ತನ್ನ ಪ್ರೀತಿಯ  ಬಲೆಯಲ್ಲಿ   ಬಂಧಿಸಿ  ಮಗನಿಗಿಂತ  ಹೆಚ್ಚಾಗಿ ಗೆಳೆಯನಾಗಿ   ನನ್ನ ಕಣ್ಮಣಿ ಯಾಗಿದ್ದಾನೆ . ನಮ್ಮ ಕುಟುಂಬದಲ್ಲಿ   ಅಪ್ಪಾ, ಅಮ್ಮಾ  ಮಗ ಎನ್ನುವ  ಗಡಿಮೀರಿ  ಎಲ್ಲಾ ವಿಚಾರಗಳು  ಚರ್ಚೆಯಾಗುತ್ತವೆ .
"ಲೇ ಸೂರ್ಯ  ಬಾರೋ ಅದೇನು ವಿಚಾರ ಹೇಳಯ್ಯ " ಅಂದೇ,  ಪ್ರೀತಿಯಿಂದ  ಅವನ ಮುಖ  ನೋಡುತ್ತಾ ,
"ಏನಿಲ್ಲಾ  ಅಪ್ಪಾ  ನಾನು  ನಾನು   ಮದುವೇ ಆಗೋಣಾ ಅಂತಾ
ತೀರ್ಮಾನಿಸಿದ್ದೇನೆ  ,"   ಅನ್ನುತ್ತಾ   ....... ನಗುತ್ತಾ  ನಿಂತಾ .

 ನನಗೆ ಅಚ್ಚರಿ  "ಅಲ್ಲಯ್ಯ  ಮೊನ್ನೆ ತಾನೇ  ಮದುವೇ  ಆಗಲ್ಲಾ  ಅಂತಾ  ಉಪನ್ಯಾಸ  ಕೊಟ್ಟೆ  ಅದೇನಪ್ಪಾ  ಇಷ್ಟು ಬೇಗ ಬದಲಾವಣೆ ",  
"ಲೇ  ಚಿನ್ನು  ನೋಡೇ ನಿನ್  ಮಗಾ  ಮದುವೇ  ಆಗ್ತಾನಂತೆ"  ಅಂದೇ ,
 ಆ  ಹೌದೇನೋ ರಾಜಾ  ಅಂತಾ ಓಡಿಬಂದಳು  ರೇವತಿ ,
ಹೌದಮ್ಮಾ  ಮದುವೇ  ಆಗ್ತೀನಿ  ಅಂದಾ , ಸೂರ್ಯ    

 ಸರಿ  ಬಿಡೂ  ಹಾಗಿದ್ರೆ  ಹುಡುಗಿ ಹುಡುಕಲು ಶುರು ಮಾಡ್ತೇವೆ  ನಾಳೆಯಿಂದಲೇ  ಅಂತಾ  ನಾನು  ಅನ್ನುವಷ್ಟರಲ್ಲಿ,   ರೇವತಿ ರೀ ಸುಮ್ಮನೆ ಇರ್ರೀ   ಈ ಕಾಲದಲ್ಲಿ ಅಷ್ಟು ಸುಲಭ ಅಲ್ಲಾ  ಹೆಣ್ಣುಮಕ್ಕಳು ಸಿಗೋದು  ಸರಿಯಾಗಿ ನೋಡಿ ತರೋಣ  ಅಂದಳು ,

"ಅಯ್ಯೋ ಅಪ್ಪಾ  ಅಮ್ಮ ಸರಿಯಾಗಿ ಕೇಳಿ  , ನಿಮ್ಮಿಬ್ಬರಿಗೂ ಎಷ್ಟು ಪ್ರೀತಿಯಿದೆ ನನ್ನ ಮೇಲೆ ಅಂತಾ  ಗೊತ್ತು  ಅದಕ್ಕೆ  ಈ ಮನೆಗೆ  ಸರಿಯಾಗಿ ಹೊಂದಿಕೊಳ್ಳಲು  ಸೂಕ್ತವಾದ  ಹುಡುಗಿಯನ್ನು ನಾನೇ ಆಯ್ಕೆ ಮಾಡಿಕೊಂಡಿದ್ದೇನೆ ನಿಮ್ಮ ಒಪ್ಪಿಗೆ ಮಾತ್ರ ಬೇಕು"  ಅಂದಾ ಸೂರ್ಯ ,

ಒಂದು ಕ್ಷಣಕ್ಕೆ  ನಾನು ಹಾಗು ರೇವತಿ  ಬೆಚ್ಚಿಬಿದ್ದೆವು,  ಆದರೆ ಏನೂ ಮಾಡುವ ಹಾಗಿಲ್ಲಾ , ಈ ವಿಚಾರ ವಿರೋಧ ಮಾಡಿದ್ರೆ  ಇಂದಿನ ಮಕ್ಕಳು  ತಾವೇ  ಯಾರನ್ನು ಲೆಕ್ಕಿಸದೆ  ಮುಂದುವರೆಯುತ್ತವೆ  ಎಂಬ ಸತ್ಯದ  ಮನವರಿಕೆ ಆಗಿ  ಕಣ್ಣಲ್ಲೇ ಮಾತನಾಡಿಕೊಂಡು  ,  "ನೋಡಯ್ಯ  ಸೂರ್ಯ ಮೊದಲು ಹುಡುಗಿಯನ್ನು ಕರೆದುಕೊಂಡು  ಬಾ  ಒಮ್ಮೆ ಅವಳ ಜೊತೆ ಮಾತನಾಡುತ್ತೇವೆ  ನಂತರ  ಮುಂದಿನ ಮಾತು" ಅಂದೆವು, 

 ಮಗ  ಅಯ್ಯೋ ಅಪ್ಪಾ ಅಮ್ಮಾ  ತಾಳಿ ಒಂದು ನಿಮಿಷ ಅಂತಾ  ಹೇಳಿ , ತನ್ನ ಕಾರಿನತ್ತ ಹೋಗಿ   ಒಂದು ಹುಡುಗಿಯನ್ನು  ಮನೆಗೆ ಕರೆತಂದ ,  ಒಳಗೆ ಬಂದ  ಆ ಹುಡುಗಿ  ತನ್ನ ಶಿರ ಭಾಗಿಸಿ  ನಮ್ಮಿಬ್ಬರ  ಪಾದ  ಸ್ಪರ್ಶಿಸಿ  ಆಶೀರ್ವಾದ ಬೇಡಿದಳು .  ಅಣ್ಣಾ  ಹಾಗು ಅಮ್ಮಾ  ನನ್ನ ಹೆಸರು ಪ್ರಿಯದರ್ಶಿನಿ  ಅಂದಳು   ಯಾಕೋ ಗೊತ್ತಿಲ್ಲಾ  ಆ ಹುಡುಗಿ ನೋಡಿದ ತಕ್ಷಣ  ಈ ಹುಡುಗಿ ನಮ್ಮ ಮನೆಯವಳೇ ಎಂಬ ಭಾವನೆ  ಮೂಡಿತು .  ಪಾದರಸದಂತೆ  ಮನೆಯೆಲ್ಲಾ  ಓಡಾಡಿದ  ಆ ಹುಡುಗಿ ಯಾಕೋ ಗೊತ್ತಿಲ್ಲಾ  ನನ್ನ ಹಾಗು ರೇವತಿಯ  ಮನಗೆದ್ದುಬಿಟ್ಟಳು .

ಅದು ಇದೂ ಮಾತನಾಡುತ್ತಾ   ನಿಮ್ಮ ಅಪ್ಪಾ ಅಮ್ಮಾ  ಎಲ್ಲಿದ್ದಾರೆ  ಕರೆದುಕೊಂಡು ಬಾರಮ್ಮಾ  ಅಂದೆವು, ಅಯ್ಯೋ ಅಣ್ಣಾ  ಇವತ್ತೇ ಸಂಜೆ ನಿಮ್ಮ ಮನೆಗೆ ಬರ್ತಾ ಇದ್ದಾರೆ  ತಾಳಿ ಈಗಲೇ  ಫೋನ್ ಮಾಡ್ತೀನಿ  ಅಂತಾ ಹೇಳಿ  ಬಹಳ ಖುಷಿಯಿಂದ  ನಮ್ಮಿಬ್ಬರ ಬಗ್ಗೆ ತನ್ನ ಅಪ್ಪಾ ಅಮ್ಮನಿಗೆ ಹೇಳಿ   ಬೇಗ ಬರುವಂತೆ   ಹೇಳಿದಳು,  ಮನೆಯಲ್ಲಿ   ಸಂಜೆಗೆ ಸಿದ್ದತೆ ನಡೆಯುತ್ತಿತ್ತು ,  ರೇವತಿಯ ಜೊತೆ ಪ್ರಿಯದರ್ಶಿನಿ ಕೂಡ  ಸೇರಿಕೊಂಡು   ಅಡಿಗೆಮನೆಯಲ್ಲಿ  ತಿನಿಸಿನ  ತಯಾರಿಕೆ  ನಡೆಸಿದರು,  ಅಡಿಗೆ ಮನೆಯಿಂದ  ನಗುವಿನ ಅಲೆ  ತೇಲಿಬರುತ್ತಿತ್ತು,  ಇತ್ತ ಮಗ    ಯಾವುದೋ ಕಾಲ್ ಇದೆ ಅಂತಾ  ತನ್ನ  ಕೋಣೆಯಲ್ಲಿ  ಲಾಪ್ಟಾಪ್  ಹಿಡಿದು ಕುಳಿತ ,
ಬೇಗ ಕೆಲಸ ಮುಗಿಸಿದ ಪ್ರಿಯ ದರ್ಶಿನಿ   ತಾನೂ ಸಹ ಸೂರ್ಯನ  ಕೋಣೆ  ಸೇರಿ  ಅವನ  ಕಾರ್ಯ ನೋಡುತ್ತಾ ಕುಳಿತಳು  ಹಾಸ್ಯದ  ಪಿಸು ಪಿಸು ಮಾತುಗಳು   ಅಲೆ ಅಲೆಯಾಗಿ   ಕೋಣೆಯೊಳಗೆ ಸುಳಿದಾಡುತ್ತಿದ್ದವು,   ಇತ್ತಾ   ನನ್ನ ಪಕ್ಕದ  ಸಿ. ಡಿ . ಪ್ಲೇಯರ್  ನಿಂದ  ಹೊಸ ಬೆಳಕು ಮೂಡುತಿದೆ ಅಂತಾ  ರಾಜಕುಮಾರ್  ಹಾಡುತ್ತಿದ್ದರು.


  ಸಂಜೆ  ಪ್ರಿಯದರ್ಶಿನಿಯ  ಅಪ್ಪಾ ಅಮ್ಮನ  ಸ್ವಾಗತಕ್ಕೆ ನಾವೆಲ್ಲಾ  ಸಿದ್ದರಾದೆವು,  ಅಂದುಕೊಂಡಂತೆ  ನಿಗದಿತ ಸಮಯ  ಆರು ಘಂಟೆಗೆ  ಮನೆಯ ಮುಂದೆ ಕಾರ್  ಬಂತು  ,  ಅದರಿಂದ  ಇಬ್ಬರು  ಮಧ್ಯ ವಯಸ್ಕ ದಂಪತಿಗಳು  ಇಳಿದರು,  ಹೇಳಿ ಮಾಡಿಸಿದ ಜೋಡಿ ದೂರದಲ್ಲಿ ನಡೆದು ಬರುತ್ತಿತ್ತು,  ನನ್ನವಳು  ಬಹಳ ಸಂತೋಷದಿಂದ ಅವರನ್ನು ಬರಮಾಡಿಕೊಂಡಳು ,  ಮನೆಯೊಳಗೇ ಬಂದು  ಕುಳಿತರು    ಪ್ರಿಯದರ್ಶಿನಿಯ  ಅಪ್ಪ ಅಮ್ಮ ,    ಯಾಕೋ ಮನದಲ್ಲಿ ದುಗುಡ  ಹೇಳಿಕೊಳ್ಳದ   ಅನುಭವ  ಆಗಲು ಶುರು ಆಯ್ತು, 
ಪ್ರಿಯದರ್ಶಿನಿ  ತನ್ನ ತಂದೆಯನ್ನು ಪರಿಚಯಿಸುತ್ತಾ  ಅಣ್ಣ  ಇವರು ನನ್ನ  ತಂದೆ  ಸಂಜೀವರಾಯರು  , ಅಂದಳು  ಅವರ ಕೈಯನ್ನು ಪ್ರೀತಿಯಿಂದ  ಕುಲುಕಿದೆ ,  ನಂತರ ಅಣ್ಣಾ  ಇವರು ನನ್ನ ಅಮ್ಮಾ   "ಯಶಸ್ವಿನಿ "  ಅಂದಳು   ನಮಸ್ಕಾರ ಎನ್ನುತ್ತಾ  ಪ್ರಿಯದರ್ಶಿನಿ ಅಮ್ಮನ ಕಡೆ ನೋಡಿದೆ , ನನ್ನ ಎದೆ ದಸಕ್  ಎಂದಿತು , ಯಾಂತ್ರಿಕವಾಗಿ ಕೈಮುಗಿದು    ನನ್ನ  ಕುರ್ಚಿಯಲ್ಲಿ  ಆಸಿನನಾದೆ.   ಯಾಂತ್ರಿಕವಾಗಿ  ಮಾತು ಕಥೆಗಳು ನಡೆದವು  , ಮತ್ತೊಮ್ಮೆ ಎಲ್ಲರೂ ಸೇರಿ ಮಾತನಾಡೋಣ ಎನ್ನುತ್ತಾ  ಎಲ್ಲರೂ ಪರಸ್ಪರ  ಮೊಬೈಲ್ ಫೋನ್ ನಂಬರ್ಗಳನ್ನು  ವಿನಿಮಯ ಮಾಡಿಕೊಂಡೆವು,   ಪ್ರಿಯದರ್ಶಿನಿ  ಹಾಗು ಅವರ ಮನೆಯವರು  ಹೊರಟರು .

ಒಬ್ಬನೇ ಕುಳಿತೆ   ಯಾಕೋ ಹಿತವೆನಿಸಲಿಲ್ಲ    ನನ್ನಲ್ಲಿ ಯಾರಿಗೂ ಹೇಳಿಕೊಳ್ಳಲಾಗದ  ಸಂಕಟ  ಶುರುಆಗಿತ್ತು ಮಹಡಿಯ ಮೇಲೆ ನನ್ನ   ಕೋಣೆಗೆ  ಬಂದು  ಬಾಗಿಲು  ಹಾಕಿಕೊಂಡು  ಕುಳಿತೆ ,  ಜೀವನದಲ್ಲಿ  ಕಳೆದುಕೊಂಡು  ಚೂರಾಗಿದ್ದ   ಕನಸುಗಳು  ಮತ್ತೊಮ್ಮೆ  ಬಣ್ಣ  ಬಳಿದುಕೊಂಡು  ನನ್ನ ಸುತ್ತಾ  ಗಿರಕಿ ಹೊಡೆಯಲು  ಶುರು ಮಾಡಿದವು,  ಅರೆ ಅವಳು  ಯಾಕೆ ಮತ್ತೆ ಬಂದಳು ,   ಅಯ್ಯೋ ದೇವ್ರೇ  ಎಂತಹ  ಪರೀಕ್ಷೆ  ತಂದು  ಬಿಟ್ಟೆಯಪ್ಪಾ ,  ಅಲ್ಲಾ  ಅವಳಿಗಾದರೂ  ಬುದ್ದಿ ಬೇಡವಾ , ಇವತ್ತು  ನನ್ನ ಪರಿಚಯವೇ ಇಲ್ಲದಂತೆ  ನಾಟಕ ಮಾಡಿಬಿಟ್ಟಳಲ್ಲ,  ಅಂತಾ ಯೋಚಿಸುತ್ತಾ   ಹಾಸಿಗೆ ಮೇಲೆ  ಉರುಳಿಕೊಂಡೆ  ,


ಕಾಲೇಜಿನ ದಿನದಲ್ಲಿ   ಯಶಸ್ವಿನಿ  ಎಂಬ  ಹುಡುಗಿಯ ಜೊತೆ   ನಡೆದ ಪ್ರೇಮ ಪ್ರಸಂಗ  ನೆನಪಾಯ್ತು,  ಅ ದಿನಗಳು   ನನ್ನ ಪಾಲಿನ  ಸುಂದರ  ಕನಸುಗಳೇ  ಸರಿ  ಓದುತ್ತಾ  ಓದುತ್ತಾ   ಕಾಲೇಜಿನಲ್ಲಿ  ಅಂಕ ಗಳಿಸುವಲ್ಲಿ ಪೈಪೋಟಿ  ನಡೆಸಿ  ಒಟ್ಟಿಗೆ    ಅಧಿಕಾರಿಗಳಾಗಿ  ಒಂದೇ ಸಂಸ್ಥೆಗೆ   ಸೇರಿಕೊಂಡೆವು,  ಆದರೆ  ಕೆಲಸದಲ್ಲಿಯೂ ಕೂಡ ಅದೇ ಪೈಪೋಟಿ  ಮುಂದುವರೆದು    ಇಬ್ಬರು ಉನ್ನತ ಸ್ಥಾನ ಪಡೆದೆವು,   ಇಬ್ಬರೂ ಜೊತೆಯಾಗಿ ಕೆಲಸ ಮಾಡುವಾಗ   ಅಷ್ಟಾಗಿ  ಹತ್ತಿರವಾಗದ ನಾವು   ಬೇರೆಡೆಗೆ  ವರ್ಗ ಆದಾಗ  ಸಂಕಟ ಪಟ್ಟೆವು, ಆ  ವಿದಾಯದ  ಸಮಯದಲ್ಲಿ  ಓಡಿಬಂದ  ಯಶಸ್ವಿನಿ   ತನ್ನ ಪ್ರೀತಿಯನ್ನು  ಹೇಳಿಕೊಂಡಳು , ನಾನೂ ಸಹ  ಒಪ್ಪಿಕೊಂಡು  ನನ್ನ ಬಾಳ  ಸಂಗಾತಿಯನ್ನಾಗಿ ಮಾಡಿಕೊಳ್ಳುವ  ನಿರ್ಧಾರ ಮಾಡಿದ್ದೆ ,  ಒಂದೆರಡು  ವರ್ಷ ನಮ್ಮಿಬ್ಬರ  ಪ್ರೇಮ ಕಾವ್ಯದ ದಿನಗಳು ಸ್ವರ್ಗವನ್ನು  ನಾಚಿಸಿದ್ದವು ,  ನಮ್ಮಿಬ್ಬರ ಪ್ರೇಮ ಪಯಣದಲ್ಲಿ  ಪ್ರೀತಿ ಎಂಬ ಸೂರ್ಯನ ಕಿರಣಗಳು   ಆಸೆ ಎಂಬ ಮಂಜಿನ ಹನಿಯ   ಬಯಕೆಯನ್ನು ನೀಗಿಸಿದ್ದವು, ಇಬ್ಬರೂ ಒಟ್ಟಾಗಿ  ಸಪ್ಥವರ್ಣಗಳ  ಕಾಮನಬಿಲ್ಲಿನ  ಒಡೆಯರಾಗಿ , ಸಪ್ತಪದಿ ತುಳಿಯಲು  ಕಾತರಿಸುತ್ತಿದ್ದೆವು . ......! ಆದರೆ .........?

    ಆದರೆ   ವಿಧಿ ಲಿಖಿತ  ಬೇರೆಯೇ ಆಗಿತ್ತು,  ಅವಳ ಅಪ್ಪಾ  ತೀರಿಕೊಂಡು   ಅವಳ ಅಮ್ಮ ಅನಾರೋಗ್ಯಕ್ಕೆ ಒಳಗಾದ ಕಾರಣ  ಅವರ   ನೆರವಿಗೆ ದಾವಿಸಿದಳು,   ಇಂತಹ ಸಮಯದಲ್ಲಿ   ನಬ್ಬಿಬ್ಬರ ವಿವಾಹದ ಬಗ್ಗೆ ಚರ್ಚೆ ಬೇಡವೆಂದು ಸುಮ್ಮನಾದೆ  ಅಂದು ,

ಕಾಕತಾಳಿಯ ಎಂಬಂತೆ  ಇತ್ತ  ನನ್ನ ಅಪ್ಪ   ಅನಾರೋಗ್ಯಕ್ಕೆ ಒಳಗಾದರು   ಅಪ್ಪನ   ಅನಾರೋಗ್ಯದ ಕಾರಣ  ಕೆಲಸಕ್ಕೆ ರಜಾ  ಹಾಕಿ ಊರು ಸೇರಿದೆ ,   ಅಪ್ಪನ   ಆರೋಗ್ಯ  ಸುಧಾರಿಸಲು    ಬಹಳ  ತಿಂಗಳೇ ಬೇಕಾಯ್ತು ,  ನನ್ನ ಹಾಗು   ಯಶಸ್ವಿನಿ  ಸಂಪರ್ಕವೇ ಇರಲಿಲ್ಲ    ಊರಿನಿಂದ ರಜಾ ಮುಗಿಸಿ ಬರುವ ವೇಳೆಗೆ  ಯಶಸ್ವಿನಿ  ಮದುವೆಯಾಗಿದ್ದಳು ,  ನಂತರ ತಿಳಿದಿದ್ದು   ಅವಳ ಅಮ್ಮನ ಜೀವ ಉಳಿಸಿದ  ವೈಧ್ಯರೊಬ್ಬರು  ಅವಳನ್ನು  ಮದುವೆಯಾದ  ವಿಚಾರ ,  ಮದುವೆಯ ನಂತರ  ಕೆಲಸಕ್ಕೆ ರಾಜಿನಾಮೆ ನೀಡಿ   ಯಶಸ್ವಿನಿ   ಹೊರಟುಹೋದಳು ,  ಹೋಗುವ ಮೊದಲು  "ನೋಡು    ಸಂದೇಶ್   ನಮ್ಮಿಬ್ಬರ   ಬದುಕು  ನಮಗೆ ಇಷ್ಟಾ ಇಲ್ಲದಿದ್ದರೂ   ಹೇಗೆ ತಿರುವುಪಡೆದುಕೊಂಡಿತು , ನಿನ್ನ ತಪ್ಪಿಲ್ಲಾ  ನಮ್ಮಿಬ್ಬರ  ಪ್ರೇಮ ಕಾವ್ಯದಲ್ಲಿ , ಇಷ್ಟುದಿನ  ನಾವು ಕಳೆದ   ಸುಂದರ  ದಿನಗಳನ್ನು ಇಲ್ಲಿಯೇ ಮರೆತು ಬಿಡೋಣ  , ಯಾವತ್ತಿಗೂ ನನ್ನ ನೆನೆದು ನಿನ್ನ ಜೀವನ   ವ್ಯರ್ಥ  ಮಾಡಿಕೊಳ್ಳಬೇಡ, ನೀನು ಮತ್ತಷ್ಟು  ಸಾಧಿಸು  ಅದೇ ನೀನು ನನಗೆ  ಹಾಗು ನನ್ನ ಪ್ರೇಮಕ್ಕೆ ಕೊಡುವ  ಕಾಣಿಕೆ" ಎಂದು ನನ್ನ ಕೈಗೆ  ಮುತ್ತಿಟ್ಟು  ಹೊರಟು  ಬಿಟ್ಟಳು.

   ಅಂದು ಬಹಳಷ್ಟು ತೊಳಲಾಡಿದ ನಾನು   ಒಂದು ಹಂತದಲ್ಲಿ    ಜೀವ ಕಳೆದುಕೊಳ್ಳುವ  ಹಂತ ತಲುಪಿದ್ದೆ, ಆದರೆ ನನ್ನ ಕೈಮೆಲಿದ್ದ   ಅವಳ ಮುತ್ತುಗಳ ನೆನಪು   ಜೀವನ ಮುಂದುವರೆಸಲು  ಪ್ರೇರಣೆ ನೀಡಿತ್ತು .  ನನ್ನ ಜೀವನದಲ್ಲೂ ಬದಲಾವಣೆಯಾಗಿ   ಅಪ್ಪನ ಆಶಯದಂತೆ   ರೇವತಿಯನ್ನು  ಬಾಳ  ಸಂಗಾತಿಯನ್ನಾಗಿ ಸ್ವೀಕರಿಸಿ  ಹೊಸ ಜೀವನ ಶುರುಮಾಡಿದೆ .  ರೇವತಿ ನನ್ನ ಬಾಳ  ಸಂಗಾತಿಯಾಗಿ   ಬಾಳ  ಕಾರ್ಮೊಡ ಗಳನ್ನು   ಚೆದುರಿಸಿ  ಹೊಸ ಬೆಳಕನ್ನು ನೀಡಿ  , ಯಶಸ್ವಿನಿಯ ಮುತ್ತುಗಳ ನೆನಪನ್ನು ತೊಡೆದು ಹಾಕಿದ್ದಳು .

ನಿಧಾನವಾಗಿ  ಅಂದು ಈ ಕೈಗೆ ಮುತ್ತು ನೀಡಿ ಹೊರಟು  ಹೋದ  ಯಶಸ್ವಿನಿ  ಇಂದು ಹೀಗೆ  ಮತ್ತೆ ಬಂದು ನನ್ನ ಜೀವನದಲ್ಲಿ  ಬಿರುಗಾಳಿ ಎಬ್ಬಿಸಬೇಕಿತ್ತೆ  ಅಂತಾ , ಯೋಚಿಸುತ್ತಾ    ತೊಳಲಾಡಿದೆ ,  ಪಕ್ಕದಲ್ಲಿನ  ಮೊಬೈಲ್  ನಲ್ಲಿ  ಎಂದೆಂದೂ  ನಿನ್ನನು ಮರೆತು  ಬದುಕಿರಲಾರೆ   ಅಂತಾ   ರಿಂಗ್ ಆಯಿತು,  ಮೊಬೈಲ್ ತೆಗೆದು ಹಲ್ಲೋ  ಅಂದೇ,  "ನಾನು ಸಂದೇಶ್ ಅವರೇ  ಪ್ರಿಯದರ್ಶಿನಿ ತಾಯಿ ಯಶಸ್ವಿನಿ  ಅಂತು ಆ ಕಡೆಯಿಂದ ದ್ವನಿ . ಹೇಳಿ ಅಂದೇ ನಿಮ್ಮ ಬಳಿ  ಮಾತನಾಡ ಬೇಕು  ನನ್ನ ಮಗಳ  ಮದುವೇ  ಬಗ್ಗೆ  ದಯವಿಟ್ಟು ಇಲ್ಲಾ ಅನ್ನದೆ ನಾಳೆ  ಅಮರಪ್ರೇಮಿ ಹೋಟೆಲ್ ನಲ್ಲಿ  ಬೆಳಿಗ್ಗೆ ಹತ್ತು ಘಂಟೆಗೆ  ಸಿಕ್ಕಿ "ಅಂದು ಫೋನ್ ಕಟ್  ಮಾಡಿದಳು,  ಹಾಗೆ ಯೋಚಿಸುತ್ತಾ  ನಿದ್ದೆಗೆ ಜಾರಿದೆ,

 ಮಾರನೆಯ ದಿನ  ಬೆಳಿಗ್ಗೆ ಹತ್ತು ಘಂಟೆಗೆ  ಅಮರಪ್ರೇಮಿ ಹೋಟೆಲ್ನಲ್ಲಿ  ಕಾಯುತ್ತಾ ಕುಳಿತೆ,    ಎಲ್ಲಿಂದಲೋ ತೇಲಿಬಂತು   "ಈ ಭೂಮಿ ಬಣ್ಣದ  ಬುಗುರಿ    ಶಿವನೆ ಚಾಟಿ ಕಣೋ"ಈ ಬಾಳು  ಸುಂದರ ನಗರಿ  ನೀನಿದರಾ  ಮೇಟಿ ಕಣೋ "     ಎಂಬ  ಹಾಡು ......  ಸುಮಾರು  ವರ್ಷಗಳ ಹಿಂದೆ ಇವಳಿಗಾಗಿ ಕಾಯುತ್ತಾ ಕುಳಿತ ಸನ್ನಿವೇಶಗಳು  ನೆನಪಿಗೆ ಬಂದವು,  ಸುಮಾರು ಒಂದು ಘಂಟೆ  ವಿಳಂಭವಾಗಿ  ಬಂದಳು,   ಹೋಟೆಲ್ನಲ್ಲಿ  ವಿಶಾಲವಾದ   ಆವರಣದಲ್ಲಿ   ಬಹಳ ವಿರಳವಾಗಿ ಜನರಿದ್ದರು   , ಯಾವುದೇ ಅದೇ ತಡೆ ಇರಲಿಲ್ಲ  , "ಕ್ಷಮಿಸಿ  ಸಂದೇಶ್  ನಿಮ್ಮನ್ನು ಕಾಯೋ ಹಾಗೆ ಮಾಡಿಬಿಟ್ಟೆ ಅಂದಳು,  ಸ್ವಲ್ಪ ಹೊತ್ತು ಮೌನ  ,   ಸುಮ್ಮನೆ ಒಬ್ಬರನ್ನು ಒಬ್ಬರು ನೋಡುತ್ತಾ  ಕುಳಿತೆವು,  ಕಣ್ಣಂಚಿನಲ್ಲಿ  ಹರಿದ  ಕಣ್ಣೀರ ಹನಿಗಳು  ಹೇಳಲಾಗದ  ಸಾವಿರ ಕಥೆಗಳನ್ನು ವಿನಿಮಯ ಮಾಡಿಕೊಂಡವು ,  ಬಹಳ ಹೊತ್ತು  ಕುಳಿತು, ಅಲ್ಲೇ ಸನಿಹದಲ್ಲಿದ್ದ  ನದಿಯ ಸಮೀಪ ಬಂದೆವು  

 ಯಶಸ್ವಿನಿ  ಮಾತನಾಡಿ "ನೋಡಿ ಸಂದೇಶ್ ನಮ್ಮಿಬ್ಬರದು ಎಂತಹ  ವಿಚಿತ್ರ ಸಂದಿಗ್ಧ  ಪರಿಸ್ಥಿತಿ  , ಮೊದಲೇ ನಾವಿಬ್ಬರು  ಪ್ರೇಮಿಗಳಾಗಿ ಕನಸು ಕಂಡವರು , ಕನಸ ನನಸು ಮಾಡಲು ಆಗದೆ   ಬಳಲಿ  ಹೊಸದಾರಿಯಲ್ಲಿ ಸಾಗಿ  ಹಳೆಯದನ್ನು ಮರೆತು ಬದುಕು ಸಾಗಿಸೋಣ ಎಂದರೆ  ನಮ್ಮ ಮಕ್ಕಳು   ಪ್ರೇಮಿಗಳಾಗಿ  ಈಗ ಬಾಳ  ಸಂಗಾತಿಗಳಾಗಲು  ಹೊರಟಿದ್ದಾರೆ ...!ಇವರು   ನನ್ನ ಹಾಗು ನಿಮ್ಮ ದೃಷ್ಟಿಯಲ್ಲಿ  ಗಂಡ ಹೆಂಡಿರೆಂದು ಕಲ್ಪಿಸಿಕೊಳ್ಳೋದು  ಹೇಗೆ , ?ನನಗೆ ಅರ್ಥಾ ಆಗುತ್ತಿಲ್ಲಾ   ಅದರಿಂದಾ ಈ ಸಮಸ್ಯೆ  ಹೇಗೆ ಬಗೆ ಹರಿಸೋದು ಹೇಳಿ "ಅಂದಳು ...

ನಾನು ಯೋಚಿಸುತ್ತಾ  "ಹೌದು ಯಶಸ್ವಿನಿ  ನನಗೂ ಅರ್ಥಾ  ಆಗುತ್ತಿಲ್ಲಾ ... ಇವರಿಬ್ಬರ ಈ ಪ್ರೀತಿಯ   ಸಂಬಂಧಕ್ಕೆ  ಏನು ಕರೆಯೋದು ಗೊತ್ತಾಗುತ್ತಿಲ್ಲಾ ... ??  ಮದುವೇ ಮಾಡಿದರೆ   ನಮ್ಮ ಮನಸುಗಳು   ಬೇಡ ಬೇಡ  ಈ ಸಂಬಂಧ  ಎಂದು ಕೂಗಿ ಕೂಗಿ ಹೇಳುತ್ತವೆ,   ಮಾಡದಿದ್ದರೆ  ಆ  ಹರೆಯದ  ಜೀವಗಳು  ನರಳಿ ನರಳಿ ಸಾಯುತ್ತವೆ .    ನೀನೆ ದಾರಿ ತೋರಿಸು  ಯಶಸ್ವಿನಿ  ನಿನ್ನ ಮಗಳ ಹಾಗು ನನ್ನ  ಮಗನ  ಪ್ರೀತಿಗೆ  ಏನೆಂದು ಕರೆಯೋಣ ...  ? " ಎನ್ನುತ್ತಾ    ಅವಳ ಕಡೆ ನೋಡಿದೆ .




ಮಂದಿನ ಕಥೆ .........?

  ಹೇಳಿ  ಓದುಗರೇ  ಈ ಕಥೆಯಲ್ಲಿನ ಯುವ ಪ್ರೇಮಿಗಳ  ಪ್ರೀತಿಗೆ ಯಾವ ಸಂಬಂಧ  ಕಲ್ಪಿಸೋಣ,   ಈ ಕಥೆಯ ಮುಂದುವರೆಸಲು     ನಮ್ಮ ಮೆಚ್ಚಿನ ಕಥೆಗಾರ ದಿನಕರ ಮೊಗೆರ   ಅವರಿಗೆ ಕೊಕ್  ಕೊಟ್ಟಿದ್ದೇನೆ  ......!!   ಬಹಳ  ತಿಂಗಳುಗಳ ನಂತರ  ಮತ್ತೆ ಕಥೆ ಬರೆಯುವ ಕೊಕ್ಕೋ ಆಟ ಶುರು ಆಯ್ತು . ಮುಂದಿನ ಸರದಿ ನಮ್ಮ ದಿನಕರ ಮೊಗೆರ  ಅವರದು

ದಿನಕರ ಮೊಗೆರ ಅವರ ಮುಂದುವರೆದ ಕಥೆ ಇಲ್ಲಿದೆ ನೋಡಿ

ನಿನಗಾಗಿ....!!!

 

  



 
ಮನಸ್ಸು ಒಂದು ನಿರ್ಧಾರಕ್ಕೆ ಬಂದಿತ್ತು...ಎದುರುಗಡೆ ಕುಳಿತ ಆಕೆಯ ಮುಖ ನೋಡಿದೆ... " ನಾನು ಹೇಳುವುದನ್ನು ಗಮನವಿಟ್ಟು ಕೇಳು.. ನಿನ್ನ ಮಗಳು ಸೊಸೆಯಾಗಿ ಬಂದರೂ ಸಹ ನನಗೆ ಮಗಳಾಗಿಯೇ ಇರುತ್ತಾಳೆ.. ನನ್ನ ಮಗನೂ ಸಹ ನಿನಗೆ ಅಳಿಯನಾಗಿ ಅಲ್ಲ ಮಗನಾಗಿಯೇ ಇರಲಿ... ಅವರಿಬ್ಬರ ಸಂಬಂಧ ಅವರಿಗಿಷ್ಟ ಬಂದ ಹಾಗಿರಲಿ... ಅದನ್ನೂ ನಾವೇ ನಿರ್ಧಾರ ಮಾಡುವುದು ಬೇಡ.. ನಾವು ಒಪ್ಪಿಗೆ ಕೊಡೋಣ.. ಅದ್ಯಾವ ಕೆಟ್ಟ ಗಳಿಗೆಯಲ್ಲಿ ದೇವರು ನಿನ್ನನ್ನು ನನ್ನಿಂದ ದೂರ ಮಾಡಿದನೋ, ಅದೇ ದೇವರು ಆದ ತಪ್ಪನ್ನು ತಿದ್ದಿಕೊಂಡು ನಿನ್ನನ್ನು ನನ್ನ ಹತ್ತಿರ ಕಳಿಸಿದ್ದಾನೆ ಎಂದುಕೋ... ಮಕ್ಕಳ ಖುಶಿಯಲ್ಲಿ ನಮ್ಮ ಖುಶಿ ಕಾಣೋಣ... ಈ ನೆವದಿಂದಾದರೂ ನಾವು ಹತ್ತಿರವಾಗೋಣ.." ಎಂದೆ ಸ್ವಲ್ಪ ರಸಿಕತನದಿಂದ... ಅವಳಿಗೂ ಸಹ ಇದೇ ಬೇಕಿತ್ತು ಎನಿಸುವ ಹಾಗೆ " ಹೂಂ.." ಎಂದಳು ತಲೆ ಕೆಳಗೆ ಹಾಕಿ... ಅವಳ ನಾಚಿಕೆ ನನಗೆ ಖುಶಿ ತಂದಿತ್ತು... ರೂಮ್ ಬಾಯ್ ತಂದಿಟ್ಟಿದ್ದ ಈರುಳ್ಳಿ ಬಜೆಯನ್ನು ಅವಳಿಗೆ ಕೊಟ್ಟೆ.. ಅವಳ ಇಷ್ಟದ ತಿಂಡಿ ಅದು... ನನಗೂ ಒಂದು ತುಂಡು ಕೊಟ್ಟಳು... ಟೀ ಕುಡಿದು ಅಲ್ಲಿಂದ ಬೀಳ್ಕೊಟ್ಟೆ...

   ಮನೆಗೆ ಬಂದಾಗ ನನ್ನ ಮೂಡೇ ಬದಲಾಗಿತ್ತು... ನನ್ನ ಹೆಂಡತಿಯ ಊಹೆಗೆ ಸಿಗದ ನನ್ನ ನಡವಳಿಕೆ ಅವಳಿಗೆ ಅಚ್ಚರಿ ಮೂಡಿಸಿತ್ತು... " ಏನು ಮಗನ ಮದುವೆಯ ದಿನ ಹತ್ತಿರ ಬಂದ ಹಾಗೆ ನೀವೂ ಸಿಂಗಾರಗೊಳ್ಳುತ್ತಿರುವ ಹಾಗಿದೆ... " ಎಂದು ಕಿಚಾಯಿಸಿದಳು... ನಾನೂ ಸುಮ್ಮನಿರಬೇಕಲ್ಲ..." ನನ್ನ ಮಗನ ಮದುವೆ ನಡೆದ ಚಪ್ಪರದಲ್ಲೇ ನನ್ನ ಮರುಮದುವೆಯೂ ನಡೆಯುವುದಿದೆ.." ಎಂದೆ ಮಾರ್ಮಿಕವಾಗಿ.... " ಏನೊಪ್ಪ, ನಿಮ್ಮನ್ನ ನೋಡಿದ್ರೆ ಅದಕ್ಕೂ ರೆಡಿ ಇರುವ ಹಾಗಿದೆ " ಎಂದಳು.. ನಾನು ಅನಂತ್ ನಾಗ್ ನಗೆ ನಕ್ಕು ಒಳ ಹೋದೆ... ರೂಮಿನ ಚಿಲಕ ಸಿಕ್ಕಿಸಿ, ನನ್ನ ಹಳೆಯ ಸೂಟ್ ಕೇಸಿನ ಚಾವಿ ಹುಡುಕಿದೆ... ಅದರಲ್ಲಿನ ನನ್ನ ಹಳೆಯ ಡೈರಿ ಓದ ಬೇಕಿತ್ತು ನನಗೆ... ನನ್ನ ಹೆಂಡತಿಯಿಂದ ಮುಚ್ಚಿಟ್ಟ ಏಕೈಕ ವಸ್ತು ಅದು.. ಅವಳೂ ಸಹ ಅದರಲ್ಲಿ ಆಸಕ್ತಿ ತೋರಿಸಿರಲಿಲ್ಲ... ಸೂಟಕೇಸಿನ ಚಾವಿ ಸಿಕ್ಕಿತ್ತು... ರೂಮಿನ ಬಾಗಿಲು ತಟ್ಟುತ್ತಿದ್ದ ಮಗರಾಯ... ಚಾವಿ ಕಿಸೆಯಲ್ಲಿ ಹಾಕಿಕೊಂಡು ಬಾಗಿಲು ತೆರೆದೆ... ” ಅಪ್ಪ , ಮದುವೆ ದಿನ ಗೊತ್ತುಮಾಡಬೇಕು, ಪುರೋಹಿತರ ಹತ್ತಿರ ಹೋಗೋಣ ಬನ್ನಿ. ತಯಾರಾಗಿ.." ಎಂದವನೇ ಅಮ್ಮನ ಹತ್ತಿರ ಹೊರಟ.. ನನ್ನ ಕಾಲಿಗೆ ರೆಕ್ಕೆ ಬಂದಂತಾಗಿತ್ತು... ಲಗುಬಗೆಯಲಿ ನಾನೂ ರೆಡಿಯಾದೆ... ಹಳೆಯ ಸೂಟ್ ಕೇಸಿನ ಚಾವಿ ನನ್ನ ಕಿಸೆಯಲ್ಲೇ ಉಳಿಯಿತು...

  ಪುರೋಹಿತರ ಬಳಿ ಕೂಡ ತುಂಬಾ ಹತ್ತಿರದ ದಿನಾಂಕ ಗೊತ್ತು ಮಾಡಲು ಹೇಳಿದೆ... ಮಗ, ನನ್ನ ಆತುರ ನೋಡುತ್ತಾ ಬೆರಗಾಗಿದ್ದ... ಹತ್ತೇ ದಿನದಲ್ಲಿ ಆಗುವ ಮದುವೆಯನ್ನು ಆತನೂ ಎಣಿಸಿರಲಿಕ್ಕಿಲ್ಲ.... ಆತನೂ ಖುಶಿಯಾದ, ನಾನು ಖುಶಿಯಾದ ಕಾರಣ ಆತನಿಗೆ ತಿಳಿಯಲಿಲ್ಲ... ಮನೆಗೆ ಬಂದಾಗ ಊಟದ ಹೊತ್ತು.... ಊಟ ಮಾಡಿ ನನಗೆ ಹಳೆಯ ಡೈರಿ ಓದಲಿಕ್ಕಿತ್ತು... "ನನಗೆ ಗಡದ್ದಾಗಿ ನಿದ್ದೆ ಬರ್ತಾ ಇದೆ, ಸ್ವಲ್ಪ ಹೊತ್ತು ನಂಗೆ ಡಿಸ್ಟರ್ಬ್ ಮಾಡಬೇಡ" ಎಂದು ನನ್ನಾಕೆಗೆ ಹೇಳಿ ರೂಮಿನ ಬಾಗಿಲು ಜಡಿದೆ... ಸೂಟ್ ಕೇಸಿನಲ್ಲಿದ್ದ ಹಳೆಯ ಡೈರಿ ತೆರೆಯುವಾಗ ಎದೆ ಡವ ಡವ... ಈ ವಯಸ್ಸಲ್ಲೂ ಈ ರೀತಿ ಆಗತ್ತೆಂತ ಕನಸ್ಸಲ್ಲೂ ಎಣಿಸಿರಲಿಲ್ಲ.... ನಮ್ಮ ಪ್ರೀತಿ ಉತ್ತುಂಗದ ದಿನಗಳಲ್ಲಿನ ದಿನಗಳ ಬಗ್ಗೆ ಓದಬೇಕೆನಿಸಿತು... ಎಲ್ಲರ ಹಾಗೆ ದಿನಾ ಡೈರಿ ಬರೆದಿರಲಿಲ್ಲ ನಾನು... ಉತ್ತಮ ದಿನಗಳ ಮತ್ತು ಕೆಟ್ಟ ದಿನಗಳ ಬಗ್ಗೆ ತಾರೀಖು ನಮೂದಿಸಿ ಬರೆಯುತ್ತಿದ್ದೆ.... ಅದೂ ಸಹ ಯಾರದೇ ಹೆಸರು ನಮೂದಿಸದೇ... ಬೇರೆಯವರು ಯಾರೇ ಓದಿದರೂ ಸಹ ಕಥೆ, ಲೇಖನದ ರೀತಿ ಇರುತ್ತಿತ್ತು... ಹಾಳೆ ತಿರುವುತ್ತಿದ್ದವನಿಗೆ ಫೆಬ್ರುವರಿ ಹದಿನಾಲ್ಕರ ದಿನ ಬರವಣಿಗೆ ಓದಬೇಕೆನಿಸಿತು... ಪುಟ ತಿರುವಿ ಓದಿದೆ....


    " ಅವಳಿಗಾಗಿ ಕೊಂಡು ಬಂದಿದ್ದ ಚಿನ್ನದ ಬಳೆಯನ್ನು ನೋಡಿ ಅವಳ ಸಂತೋಷವನ್ನು ಊಹಿಸಿಯೇ ಮನ ಮಿಡಿಯುತ್ತಿದೆ... ಬಳೆಯ ನಡುವಿನಲ್ಲಿದ್ದ ಲವ್ ಮಾರ್ಕ್ ನೋಡಿಯೇ ಅದನ್ನು ಖರೀದಿಸಿದ್ದೆ... ಸರಿಯಾದ ಸಮಯಕ್ಕೆ ಬಂದ ಆಕೆ ನನ್ನ ಪಕ್ಕವೇ ಕುಳಿತಳು . ಪರಸ್ಪರ ಪ್ರೀತಿಸುವ  ಬಗ್ಗೆ ಹೇಳಿಕೊಂಡು ತುಂಬಾ ಸಮಯವಾಗಿದ್ದರೂ ನಮ್ಮ ಪ್ರತೀ ಭೇಟಿಯೂ ಮೊದಲ ಭೇಟಿಯ ಹಾಗೆ ಇರುತ್ತಿದೆ... ಪಾರ್ಕ್ ನಲ್ಲಿ ತುಂಬಾ ಜನ ಇದ್ದರೂ ಸಹ ನನಗೆ ಕಾಣುತ್ತಿದ್ದುದು ಇವಳೇ ಆಗಿದ್ದಳು... ನನ್ನವಳ ಗಲ್ಲ  ಗುಲಾಬಿಯಾಗಿದ್ದು ಅವಳು ಧರಿಸಿದ್ದ ಗುಲಾಬಿ ಬಣ್ಣದ ಚುಡಿದಾರದಿಂದಲಾ ಅಥವಾ ನನ್ನನ್ನು ನೋಡಿಯಾ ತಿಳಿಯಲಿಲ್ಲ... ತಡ ಮಾಡದೇ " ಹ್ಯಾಪಿ ವೆಲಂಟೈನ್ಸ್ ಡೇ ಡಿಯರ್.. ಐ ಲವ್ ಯು..." ಎಂದವನೇ ಕೈಯಲ್ಲಿದ್ದ ಚಿನ್ನದ ಬಳೆ ಕೊಟ್ಟೆ... ಅವಳ ಕಣ್ಣಲ್ಲಿ ಬಣ್ಣದ ಚಿಟ್ಟೆಗಳು.. ಅವಳೂ ಸಹ ದುಡಿಯುತ್ತಿದ್ದರೂ ಕೈತುಂಬಾ ಸಂಬಳ ಎಣಿಸುತ್ತಿದ್ದರೂ ನಾನು ಕೊಟ್ಟ ಉಡುಗೊರೆ ಅವಳಿಗೆ ಖುಷಿ ನೀಡಿದ್ದು ಅವಳ ಕಣ್ಣಲ್ಲೇ ತಿಳಿಯುತ್ತಿತ್ತು... " ಐ ಲವ್ ಯು ಟೂ.." ಎಂದವಳೇ ಸುತ್ತಮುತ್ತಲಿದ್ದವನ್ನೂ ಕಡೆಗಣಿಸಿ ತಬ್ಬಿಕೊಂಡಳು... ಈ ಮುಂಚೆ ತಬ್ಬಿಕೊಂಡಿದ್ದರೂ ಇವತ್ತಿನ ಖುಶಿಯ ಪರಿ ಬೇರೆಯದಿತ್ತು... ”
   ಓದುತ್ತಾ ಹೋದಂತೆಲ್ಲಾ  ಇಂಥಹದೇ ಬಿಡಿ ಬಿಡಿ ಬರಹಗಳು.. ಒಂದೊಂದು ಸಹ ಮೈ ಪುಳಕಿತಗೊಳ್ಳುವ ಘಟನೆಗಳೇ ಆಗಿದ್ದವು... ಅಷ್ಟರಲ್ಲಿ ಮೊಬೈಲ್ ರಿಂಗಾಯಿತು... " ಅಬ್ಭಾ ನಿನ್ನದೇ ನೆನಪಿನಲ್ಲಿದ್ದೆ, ನಿನ್ನದೇ ಫೋನ್... ಹೇಗಿದ್ದೀಯಾ... ತಯಾರಿ ಜೋರಾಗಿ ನಡೆಯುತ್ತಿದೆಯಾ...? ಬೇಗನೇ ಬಂದು ಬಿಡು ನನ್ನ ಮನೆಗೆ... ಮನೆ ತುಂಬಿಸಿಕೊಳ್ಳುತ್ತೇನೆ.." ಆ ಕಡೆಯಿಂದ ಮುಸಿ ಮುಸಿ ನಗು..." ಮನೆ ತುಂಬಿಸಿಕೊಳ್ಳುವುದು ನನ್ನನ್ನಲ್ಲ, ನನ್ನ ಮಗಳನ್ನ" ಎಂದಳು ಮುಗುಮ್ಮಾಗಿ... ದನಿಯಲ್ಲಿನ ಸಿಹಿ ಇನ್ನೂ ಕಡಿಮೆಯಾಗಿರಲಿಲ್ಲ... " ಈಗ ನಿಮ್ಮ ಮನೆಗೆ ಬರುತ್ತಾ ಇದ್ದೇವೆ ನನ್ನ ಯಜಮಾನರೂ ಬರುತ್ತಾರೆ.. ಕೆಲವೊಂದು ವಸ್ತುಗಳ ಖರಿದಿ ಬಗ್ಗೆ ಮಾತನಾಡಬೇಕು ಅದಕ್ಕೆ " ಎಂದಳು... " ನಾನೇನೋ ನನ್ನನ್ನ ನೋಡಲಿಕ್ಕೆ ಬರ್ತಾ ಇದೀಯಾ ಅಂದುಕೊಂಡೆ" ಅಂದೆ ರಸಿಕತೆಯಿಂದ... " ಯಾವುದೋ ಒಂದು ನೆವ ಅಷ್ಟೇ.." ಅಂದು ಫೋನ್ ಕಟ್ ಮಾಡಿದಳು.. ನನ್ನನ್ನು ನೋಡೋದು ನೆವವೋ, ಇಲ್ಲಿಗೆ ಬರೋದು ನೆವವೋ ಹೇಳಲಿಲ್ಲ.. ಅವಳು ಯಾವಾಗಲೂ ಹಾಗೇನೇ... ಅವಳು ಬರುವ ಮೊದಲೇ ನಾನು ರೆಡಿಯಾಗಿ ಬಾಗಿಲಲ್ಲೇ ಕಾದೆ... ಮನೆಯಾಕೆಗೂ ವಿಷ್ಯ ತಿಳಿಸಿದ್ದರಿಂದ ಸಂಜೆಯ ಚಾ ತಿಂಡಿ ರೆಡಿ ಮಾಡುತ್ತಿದ್ದಳು...

   ಮನೆ ಮುಂದೆ ನಿಂತ ಕಾರಿಂದ ಆಕೆ ನಡೆದು ಬರುತ್ತಿದ್ದರೆ ಈ ವಯಸ್ಸಲ್ಲೂ ಓಡಿ ಹೋಗಿ ತಬ್ಬಿ ಬಿಡಲೆ ಎನಿಸುತ್ತಿತ್ತು.. ಅವಳೇ ಮುಂದೆ ಬಂದು ’ ನಮಸ್ತೆ’ ಎಂದಳು... ಪ್ರತಿಯಾಗಿ ನಾನು ’ನಮಸ್ತೆ’ ಎಂದೆ.. ಅವಳ ಗಂಡನ ಕೈ ಕುಲುಕಿ ಒಳ ಕರೆದುಕೊಂಡು ಬಂದೆ... ಅವರ ಕೈ ತಣ್ನಗಿತ್ತು... ಸ್ವಲ್ಪ ಡಲ್ ಇದ್ದರು... ’ ಇವರಿಗೇನಾದರೂ ಗೊತ್ತಿದೆಯಾ ನಮ್ಮ ವಿಷ್ಯ’ ಎನಿಸಿತು...  ವಿಷ್ಯ ಗೊತ್ತಾದರೂ ಏನಾಗತ್ತೆ,? ನಮ್ಮದೇನೂ ಓಡಿ ಹೋಗುವ ವಯಸ್ಸಲ್ಲಾ ಇದು.." ಎಂದಿತು ಹುಂಬ ಮನಸ್ಸು... ಮಗನಿಗೆ ಚಿನ್ನದ ಸರ ಮತ್ತು ಬ್ರಾಸ್ ಲೆಟ್ ಮಾಡಿಸುವ ಮಾತಾದಾಗ " ನನಗಾಗಿ ಏನೂ ಇಲ್ಲವಾ,? ಎಲ್ಲಾ ಅಳಿಯ ದೇವರಿಗೆ ಮಾತ್ರವಾ..? " ಎಂದೆ ಹುಡುಗಾಟದ ದನಿಯಲ್ಲಿ... "ನನ್ನ ಮಗಳನ್ನು ನಿಮ್ಮ ಮಗಳಾಗಿ ಕೊಡ್ತಾ ಇದೀನಿ.." ಎಂದಳು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಆಕೆ... " ಏನೂ ಹೆದರಬೇಡಿ, ನಿಮ್ಮ ಮಗಳಲ್ಲ ಅವಳು , ನಮ್ಮ ಮಗಳೇ... ನನಗೂ ಹೆಣ್ಣು ಮಕ್ಕಳಿಲ್ಲ, ನಿಮಗೂ ಗಂಡು ಮಗುವಿಲ್ಲ... ಇಬ್ಬರ ಕೊರತೆಯೂ ನೀಗಿದ ಹಾಗಾಯಿತು ಒಂದೇ ಸಂಬಂಧದಲ್ಲಿ " ಎಂದಳು ನನ್ನ ಪತ್ನಿ... ನಾನು ಆಕೆಯ ಮುಖ ನೋಡಿದೆ... ತುಂಟತನದಲಿ ಕಣ್ಣು ಹೊಡೆದೆ.. ಆಕೆಯ ಕೆನ್ನೆ ಕೆಂಪಗಾಯ್ತು ಈ ವಯಸ್ಸಲ್ಲೂ.... ಅವರನ್ನು ಬೀಳ್ಕೊಟ್ಟು ಸ್ವಲ್ಪ ಹೊತ್ತಲ್ಲೇ ಮಗ ಬಂದ.. ಆತನೂ ಸಹ ಮದುವೆಯ ಖರೀದಿ ಮುಗಿಸಿ ಬಂದಿದ್ದ..

   ಮದುವೆಯಂತೂ ನನ್ನಲ್ಲಿ ಹೊಸ ಹುಮ್ಮಸ್ಸು ತಂದಿತ್ತು... ಮದುವೆಯ ದಿನ ನಾನು ಆಕೆಯ ಸುತ್ತಲೇ ಗಿರಕಿ ಹೊಡೆಯುತ್ತಿದ್ದೆ... ಅವಳೂ ಸಹ ತುಂಬಾ ಖುಶಿಯಿಂದಿದ್ದಳು... ಮದುವೆಯ ಫೋಟೊ ತೆಗೆದುಕೊಳ್ಳುವಾಗ ಸಹ ಅವಳ ಸಾಮಿಪ್ಯ ಸಿಗುವ ಹಾಗೆ ನೋಡಿಕೊಂಡೆ... ನನ್ನಲ್ಲಿ ಇಪ್ಪತ್ತರ ಯುವಕನ ತಾರುಣ್ಯ ತುಂಬಿತ್ತು... ಮದುವೆ ಮುಗಿದು ಮಗಳನ್ನು ಬೀಳ್ಕೊಡುವಾಗ ಅವಳು ಬಿಕ್ಕಳಿಸಿ ಬಿಕ್ಕಳಿಸಿ ಅತ್ತ ರೀತಿ ನೋಡಿ ನನ್ನ ಕಣ್ಣಲ್ಲೂ ನೀರು ಜಿನುಗಿತ್ತು... ಅವಳ ಕೈಹಿಡಿದು ಸಮಧಾನ ಮಾಡಿದ್ದೆ... " ನಿನ್ನ ಮಗಳನ್ನು ನಿನಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತೇನೆ.. ನಿನ್ನ ನೆನಪೇ ಬಾರದ ಹಾಗೆ ನಡೆಸಿಕೊಳ್ಳುತ್ತೇನೆ" ಎಂದಾಗ ಆಕೆ ಹಗುರಾಗಿದ್ದಳು... ನನ್ನ ಹೆಂಡತಿ ’ಹೌದು’ ಎಂದು ದನಿಗೂಡಿಸಿದ್ದರೂ ಅವಳಿಗೆ ಮುಂದೆ ಬರುವ ಬಿರುಗಾಳಿಯ ಸುಳಿವು ಇರಲಿಲ್ಲ...

    ಮದುವೆ ಮುಗಿದು ಮಗ ಸೊಸೆ ಮಧುಚಂದ್ರಕ್ಕೆ ಹೊರಟಿದ್ದೂ ಆಯ್ತು... ಹದಿನೈದು ದಿನದ ಅವರ ಪ್ರವಾಸವನ್ನು  ವಾರಕ್ಕೇ ಮೊಟಕುಗೊಳಿಸಿ ಬಂದಿದ್ದರು... ಸೊಸೆಯ ಅಪ್ಪನ ಆರೋಗ್ಯ ತುಂಬಾ ಬಿಗಡಾಯಿಸಿ ಆತನನ್ನ ಆಸ್ಪತ್ರೆಗೆ ಸೇರಿಸಿದ್ದರು.. ನನ್ನ ಮಗ ಹೇಳುವವರೆಗೂ ನನಗೆ ತಿಳಿದಿರಲಿಲ್ಲ... ಅವರಿಗೆ ಬ್ಲಡ್ ಕ್ಯಾನ್ಸರ್ ಇತ್ತೆಂದು.... ಮಗಳನ್ನು ನೋಡಿದ ಆತ ಘಂಟೆಯಲ್ಲೇ ತೀರಿಕೊಂಡಿದ್ದರು... ಅವರ ಅಂತ್ಯ ಸಂಸ್ಕಾರಕ್ಕೆ ನಾನು ಹೋಗಿದ್ದೆನಾದರೂ ಆಕೆಯನ್ನು ನೋಡುವ ಧೈರ್ಯವಾಗಲಿಲ್ಲ... ನಮ್ಮದೇನೂ ಅಕ್ರಮ ಸಂಬಂಧವಲ್ಲವಾದರೂ , ಆಕೆಯ ಗಂಡನ ಅಗಲಿಕೆಯ ಬೆಲೆ ತೆತ್ತು, ಆಕೆಯ ಸನಿಹ ಕೋರಿರಲಿಲ್ಲ... ಯಾಕೋ, ಆಕೆಯನ್ನು ಖಾಲೀ ಹಣೆಯಲ್ಲಿ ನೋಡುವ ಧೈರ್ಯ, ಮನಸ್ಸು ಎರಡೂ ಇರಲಿಲ್ಲ... ಮಗ-ಸೊಸೆ ಒಂದು ವಾರ ಅಲ್ಲೇ ಉಳಿದು ಬಂದಿದ್ದರು.. ಕೆಲಸಕ್ಕೆ ಹಾಕಿದ್ದ ರಜೆ ಮುಗಿದ ಕಾರಣ ಅವರು ಇಲ್ಲಿಗೆ ಬಂದಿದ್ದರು... ಆಕೆಯ ಮನೆಯಲ್ಲಿ ಕೆಲಸದಾಕೆ ಬಿಟ್ಟರೆ ಬೇರೆ ಯಾರೂ ಇರಲಿಲ್ಲ... ಆಕೆಯ ನೋವು ನಾನು ಹಂಚಿಕೊಳ್ಳುವ ಆಸೆ ಇದ್ದರೂ ಪರಿಸ್ಥಿತಿ ಹಾಗಿರಲಿಲ್ಲ... ನನ್ನ ಮನೆಗೂ ಅವಳ ಮನೆಗೂ ಒಂದು ರಾತ್ರಿ ಪ್ರಯಾಣದ ದೂರ... ಒಮ್ಮೆ ಫೋನ್ ಮಾಡಿ ನಮ್ಮ ಮನೆಗೆ ಬಂದು ಇರಲು ಹೇಳಿದೆ...
    
    " ನನಗೆ ಒಬ್ಬಳೇ ಇರಬೇಕು ಅನಿಸುತ್ತಿದೆ.. ನಿನ್ನನ್ನ ಕಳೆದುಕೊಂಡ ನಂತರವೂ ನಾನು ಒಬ್ಬಳೇ ಇರಲು ನಿರ್ಧಾರ ಮಾಡಿದ್ದೆ.. ಅಮ್ಮನ ಒತ್ತಾಯಕ್ಕೆ ಮದುವೆ ಆಗಿದ್ದೆ... ನನ್ನ ಗಂಡನಿಗೂ ಸಹ ನನ್ನ ಪ್ರೇಮದ ಬಗ್ಗೆ ಗೊತ್ತಿತ್ತು... ಅದಕ್ಕೆ ಅವರೂ ಸಹ ನನ್ನ ಏಕಾಂತಕ್ಕೆ ಭಂಗ ತರುತ್ತಿರಲಿಲ್ಲ... ಮದುವೆಯಾಗಿ ಐದು ವರ್ಷದ ವರೆಗೂ ನಾನು ಅವರ ಸಾಮಿಪ್ಯ ಬೇಡಿರಲಿಲ್ಲ... ಯಾವಾಗ ಅವರಿಗೆ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಯಿತೋ ಮತ್ತು ಅವರ ಆಯುಷ್ಯದ ಅವಧಿ ಗೊತ್ತಾಯಿತೋ ನಾನು ಅಧೀರಳಾದೆ... ಗಂಡನ ನಂತರ ನನ್ನ ಜೊತೆಗೆ ಯಾರು ಎನ್ನುವ ಪ್ರಶ್ನೆ ನನ್ನನ್ನ ಕಾಡುತ್ತಿತ್ತು... ಅದೊಂದೇ ಕಾರಣಕ್ಕೆ ಅವರ ಸಾಮಿಪ್ಯ ಬಯಸಿ ಅವರಿಂದ ಒಂದು ಮಗು ಪಡೆದೆ... ಎಲ್ಲಾ ಕಾಲದಲ್ಲೂ ನಿನ್ನ ನೆನಪಿಸುತ್ತಲೇ ಇದ್ದೆ... ನೀನು ಮಾತ್ರ ಆರಾಮಾಗಿ ಇದ್ದೆ... ಡೆಲಿವರಿಯ ಸಮಯದಲ್ಲಿ   ಮಾತ್ರ ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ ಕಣೋ.. ನೀನೇ ಬೇಕಾಗಿತ್ತು ನನಗೆ ಆ ಟೈಮ್ ನಲ್ಲಿ... ಆದ್ರೆ ನೀನೆಲ್ಲಿದ್ದೆಯೋ ನನಗೆ ತಿಳಿದಿರಲಿಲ್ಲ... ಕ್ರಮೇಣ ನಿನ್ನ ಬಿಟ್ಟು ಇರೋದು, ದೈಹಿಕವಾಗಿ ನನ್ನ ಗಂಡನಿಂದ ದೂರ ಇರೋದು ಎಲ್ಲಾ ರೂಡಿಯಾಯಿತು... ನನ್ನ ಗಂಡ ಅಗಲಿದಾಗಲೂ ನನಗೆ ಅಂಥಹ ನೋವಾಗುತ್ತಿಲ್ಲ ..ಯಾಕೆ ಗೊತ್ತಾ..? ನನ್ನ ಜೀವವಾಗಿರುವ ನನ್ನ ಮಗಳು ನಿನ್ನ ಮಡಿಲಿಗೆ ಹಾಕಿದ್ದೇನೆ ಅದಕ್ಕೆ... ಇನ್ನು ಮುಂದೆ ನೀನೇ ಅವಳನ್ನು ನೋಡಿಕೊಳ್ಳಬೇಕು..." ನನ್ನ ಕಣ್ಣಲ್ಲಿ ನೀರು ಬರ್ತಾ ಇತ್ತು... ಅವಳೂ ಸಹ ಅಳುತ್ತಿದ್ದಳು...ಅಷ್ಟರಲ್ಲಿ ’ ಕಳಕ್ " ಎನ್ನುವ ಶಬ್ಧ... ನಾನು ನನ್ನ ರೂಮಿನಲ್ಲಿ ಕುಳಿತು ಮಾತನಾಡುತ್ತಿದ್ದೆ... ಹಾಲ್ ನಲ್ಲಿರುವ ಇನ್ನೊಂದು ಫೋನ್ ನಿಂದ ಯಾರೋ ಕೇಳಿಸಿಕೊಳ್ಳುತ್ತಿದ್ದರು ಎನಿಸತ್ತೆ... ಎದೆ ಬಡಿತ ಜೋರಾಯಿತು....

    ಸ್ವಲ್ಪ ಹೊತ್ತಲ್ಲೇ ಬಾಗಿಲು ಬಡಿದ ಶಬ್ಧ... " ಕಮ್ ಇನ್" ಎಂದೆ.. ಸೊಸೆ ಇದ್ದಳು.. " ಮಾವಾ, ನಾನು ಈಗ ಕೇಳಿಸಿಕೊಂಡಿದ್ದೆಲ್ಲಾ ಸತ್ಯವಾ...?  ಅಮ್ಮನಿಗೆ ಫೋನ್ ಮಾಡೋಣ ಅಂತ ಫೋನ್ ತೆಗೆದುಕೊಂಡವಳಿಗೆ ಅಮ್ಮನದೇ ಧ್ವನಿ ಕೆಳಿಸಿಕೊಂಡಾಗ ಜೊತೆಗೆ ನಿಮ್ಮ ದನಿ ಕೇಳಿದೆ... ಇದೆಲ್ಲಾ ನಿಜವಾ ಮಾವಾ..? ನಿಮ್ಮ ಸಲುವಾಗಿ ಅಮ್ಮ ಜೀವನವಿಡೀ ಕಾದಳಾ..? ಎಂದೂ ಅಮ್ಮನನ್ನು ಕಾರಣ ಕೇಳದ ನಾನು ಇವತ್ತಿಗೂ ಕೇಳಲ್ಲ... ಆದ್ರೆ..??? " ಸೊಸೆಯ ಮಾತಿನ್ನೂ ಮುಗಿದಿರಲಿಲ್ಲ... " ಹೌದಮ್ಮಾ, ನೀನು ಕೇಳಿಸಿಕೊಂಡಿದ್ದು ನಿಜ.. ನಾನು ನಿಮ್ಮಮ್ಮ ಪ್ರೀತಿಸಿದ್ದೂ ನಿಜ.. ಕಾರಣಾಂತರದಲ್ಲಿ ಬೇರೆ ಆದದ್ದೂ ನಿಜ... ಪರಸ್ಪರ ಎಲ್ಲಿದ್ದೇವೆ ಅಂತ ಗೊತ್ತಿಲ್ಲದೇ ಬದುಕಿದೆವು... ಬಾಳಿದೆವು ಬೇರೆ ಬೇರೆ.. ಈಗ ನಿನ್ನ ಮೂಲಕ ಭೇಟಿಯಾಗಿದ್ದೇವೆ... ಇದೆಲ್ಲ ಮುಗಿದು ಹೋದ ಕಥೆ... ಈಗ ಇದನ್ನು ಬೆಳೆಸುವ ಇರಾದೆ ನಿಮ್ಮಮ್ಮನಿಗೂ ಇಲ್ಲ... ನನಗೂ ಇಲ್ಲ.. ಆದರೆ ನಾನು ಅವಳ ಖುಶಿ ಆಶಿಸುತ್ತೇನೆ.. ಮತ್ತೆ ಅವಳೂ ಕೂಡ ನನ್ನ ಖುಶಿ ಹಾರೈಸುತ್ತಾಳೆ... ” ಇನ್ನೂ ಮಾತನಾಡುತ್ತಲೇ ಇದ್ದೇ..... ಅಷ್ಟರಲ್ಲೇ ಬಾಗಿಲು ಹಾಕಿ ಹೊರಟು ಹೋದಳು... ’ ಅಯ್ಯೋ ದೇವರೇ, ನಾನು ಯಾವತ್ತೂ ಮೊಬೈಲ್ ನಲ್ಲಿ ಮಾತನಾಡುವವನು , ಇವತ್ಯಾಕೆ ಲ್ಯಾಂಡ್ ಲೈನ್ ನಿಂದ ಫೋನ್ ಮಾಡಿದೆ " ಎಂದು ಹಳಹಳಿಸಿದೆ..  ’ದೇವ್ರೇ, ಈ ವಿಷ್ಯ ನನ ಹೆಂಡತಿ ಮತ್ತು ಮಗನಿಗೆ ಹೇಳದೇ ಇರಲಿ... ಅವರಿಬ್ಬರ ದ್ರಷ್ಟಿಯಲ್ಲಿ ನಾನು ಕುಬ್ಜನಾಗುವುದು ಇಶ್ಟವಿರಲಿಲ್ಲ... ಇದೆಲ್ಲದರಿಂದ ಸ್ವಲ್ಪ ಶಾಂತಿ ಸಿಗಲಿ ಎಂದು ನಾನು ರೆಡಿಯಾಗಿ ದೇವಸ್ಥಾನದ ಕಡೆ ಹೊರಟೆ..
   
     ವಾಪಸ್ ಮನೆಗೆ ಬರುವುದು ಕತ್ತಲಾಗಿತ್ತು... ಹೆಂಡತಿ ಬಾಗಿಲಲ್ಲೇ ಕುಳಿತಿದ್ದಳು... ಏನೂ ತಿಳಿಯದ , ತಿಳಿಯಲು ಆಶೆಯೂ ಪಡದ ಮುಗ್ಧ ಜೀವಿಗೆ ನಾನು ಮೋಸ ಮಾಡ್ತಾ ಇದೀನಾ ಎನ್ನುವ ಭಾವ ಕೂಡ ಕಾಡಿತು... ಮುಖ ತೊಳೆದು ಡೈನಿಂಗ್ ಟೇಬಲ್ ಮೇಲೆ ಕುಳಿತಾಗ ಮಗ ಸೊಸೆ ಕೂಡ ಬಂದರು... ” ಊಟಕ್ಕೆ ನಾನೇ ಬಡಿಸುತ್ತೇನೆ " ಎಂದು ಸೊಸೆ ಹೇಳಿದಾಗ ನಾನು ಸ್ವಲ್ಪ ಗೆಲುವಾದೆ... ಸೊಸೆಗೆ ಕಣ್ಣಲ್ಲೇ ಧನ್ಯವಾದ ಹೇಳಿದೆ... ಮಗ, ಸೊಸೆ, ಹೆಂಡತಿ ಜೊತೆ ಕುಳಿತು ಊಟ ಮಾಡಿ ಸಂತ್ರಪ್ತಿಯಿಂದ ಮಲಗಲು ಹೋದೆ... ಹೆಂಡತಿ ಸಹ ಹಿಂದೆ ಹಿಂದೆ ಬಂದಳು... " ರೀ, ನನಗೆ ಈವತ್ತು ತುಂಬಾ ಸಂತೋಷ ಆಗ್ತಾ ಇದೆ... ಮಗ, ಸೊಸೆ ಎಲ್ಲರ ಜೊತೆ ಖುಶಿ ಖುಷಿಯಾಗಿರುವ ಎಷ್ಟು ಕುಟುಂಬ ಇದೆ ಜಗತ್ತಲ್ಲಿ..? ನಮಗೆ ಸಿಕ್ಕಿದೆಯಲ್ವಾ.. ಅದೇ ಖುಷಿ... ನಿಲ್ಲಿ ತಾಂಬೂಲ ತರ್ತೇನೆ" ಅಂತ ಗ್ರೌಂಡ್ ಫ್ಲೋರನಲ್ಲಿದ್ದ ಅಡಿಗೆ ಮನೆಗೆ ಹೋಗುತ್ತಿದ್ದವಳನ್ನು ನಿಲ್ಲಿಸಿ " ಇವತ್ತು ನಾನು ತರ್ತೇನೆ... ನೀನು ರೂಮಿಗೆ ಹೋಗು.. " ಎಂದು ಹೇಳಿ ತಾಂಬೂಲ ತರಲು ಹೋದೆ... ಒಳ್ಳೆಯದೊಂದು ಊಟ ಮಾಡಿದ ದಿನ ಪಾನ್ ಹಾಕುವ ಅಭ್ಯಾಸ ನನಗೂ ಇದೆ, ನನ್ನ ಹೆಂಡತಿಗೂ ಇದೆ.. ಫ್ರಿಡ್ಜ್ ತೆರೆದರೆ ಅಲ್ಲೇ ಇತ್ತು ಕಟ್ಟಿ ಇಟ್ಟ ಪಾನ್... 

  "ತಗೋ ಪಾನ್, ಹೆಚ್ಚಿಗೇನೂ ಮಾತಾಡದೆ ಸುಮ್ಮನೇ ತಿನ್ನು... ನಾಳೆ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಬೇಕು.. ಬೇಗ ರೆಡಿಯಾಗು " ಎಂದು ಹೇಳಿ ನಾನು ಮಲಗಿದೆ... ಮಲಗುವ ಮೊದಲು ಆಕೆಯನ್ನೊಮ್ಮೆ ನೆನಸಿದೆ... ಪಾಪ, ಏನು ಮಾಡ್ತಾ ಇದ್ದಾಳೋ ಏನೋ... ಇಲ್ಲೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು... ಎನಿಸಿ ಪಿಚ್ಚೆನಿಸಿತು.... ಹೆಂಡತಿಯೂ ಸಹ ಪಾನ್ ತಿಂದು ಸ್ವಲ್ಪ ಹೊತ್ತಲ್ಲೇ ಮಲಗಿದಳು.... ನಾನು ನಿಸಾರ್ ಅಹಮ್ಮದರ ಎರಡು ಕವನ ಓದಿ ಮಲಗಿದೆ....


   ಎಂದಿನಂತೆ ಬೆಳಿಗ್ಗೆ ಆರಕ್ಕೆ ಎದ್ದು ಪಾರ್ಕ್ ಹೋಗಿ ಎರಡು ಸುತ್ತು ನಡೆದೆ... ಸೂರ್ಯ ನಮಸ್ಕಾರ, ಒಂದೆರಡು ಯೋಗ ಮುಗಿಸಿ ಮನೆಗೆ ಬರುವಾಗ ಎಂಟು ಗಂಟೆ... ಮನೆಯ ಮುಂದೆ ಅಂಬುಲನ್ಸ್... ಗಾಬರಿ ಆಯ್ತು... ಮಗ ಓಡುತ್ತಾ ಬಂದ... " ಅಪ್ಪಾ , ನಿಮ್ಮ ಮೊಬೈಲ್ ಯಾಕೆ ತೆಗೆದುಕೊಂಡೂ ಹೋಗಿಲ್ಲ..? ಅಮ್ಮ ಮಾತನಾಡುತ್ತಿಲ್ಲ... ಬೆಳಿಗ್ಗೆಯಿಂದ ಏಳದ ಅಮ್ಮನ ಸಲುವಾಗಿ ನಾನೇ ರೂಮಿಗೆ ಹೋಗಿ ಏಳಿಸಲು ಹೋದೆ... ಅಮ್ಮ ಮಾತನಾಡಲಿಲ್ಲ.. ಮೂಗಲ್ಲಿ ಸ್ವಲ್ಪ ರಕ್ತ ಬಂದಿತ್ತಪ್ಪಾ.. ಡಾಕ್ಟರ್ ಬಂದಿದ್ದಾರೆ... ನೋಡ್ತಾ ಇದ್ದಾರೆ... " ಎನ್ನುತ್ತಾ ಇರುವಾಗಲೇ ಡಾಕ್ಟರ್ ಹೊರಗೆ ಬಂದರು.. " ಐ ಆಮ್ ಸಾರಿ ಸೂರ್ಯ... ಅಮ್ಮನಿಗೆ ಸೀವಿಯರ್ ಹಾರ್ಟ್ ಆಟ್ಯಾಕ್ ಆಗಿದೆ... ಬಹುಷಃ ಪ್ರಾಣ ಹೋಗಿ ನಾಲ್ಕೈದು ಘಂಟೆಗಳಾಗಿದೆ... " ಎಂದರು.. ನನ್ನೆದೆ ಝಲ್ ಎಂದಿತು... ನನ್ನ ಕಿವಿ ನಾನೆ ನಂಬದಾದೆ... ಕುಸಿದು ಅಲ್ಲೇ ಕುಳಿತೆ....  ಮಗ ಅಂಬುಲನ್ಸ್ನಲ್ಲಿ ಹೋದ...

   ಪೋಸ್ಟ್ ಮಾರ್ಟಮ್ ಮಾಡಿದ ಡಾಕ್ಟರ್ ದೇಹವನ್ನು ನಮಗೆ ಒಪ್ಪಿಸಿದ್ದು ಸುಮಾರು ಮಧ್ಯಾನ್ಹದ ಹೊತ್ತಿಗೆ... ಅಂತಿಮ ಕಾರ್ಯ ಮುಗಿಸಿ ಮನೆಗೆ ಬಂದವನಿಗೆ ಮಗ ಕೇಳಿದ್ದು.. " ಅಪ್ಪಾ, ಅಮ್ಮ ಕೊನೆಯ ಬಾರಿ ಏನು ತಿಂದಿದ್ದರು...? ನೀವು ಮತ್ತೆ ಅಮ್ಮ ಜಗಳವಾಡಿದ್ರಾ..?"ನಾನು ಅವಾಕ್ಕಾದೆ.. ಸೊಸೆ ಅವನ ಹಿಂದೆಯೇ ನಿಂತಿದ್ದಳು... ಅವಳ ಕಣ್ನಲ್ಲೂ ಪ್ರಶ್ನೆಗಳಿದ್ದವು... ನಾನು ನನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡೆ...
    ಯಾರೇ ಸಾಯಲಿ, ಯಾರೇ ಬದುಕಲಿ ಜೀವನ ಸಾಗಲೇ ಬೇಕು... ಉಸಿರು ಬಿಡಲೇ ಬೇಕು... ಹೊಟ್ಟೆ ತುಂಬಲೇ ಬೇಕು... ಹೆಂಡತಿ ತೀರಿ ಹೋದ ಮೇಲೆ ನನ್ನನ್ನು ನಿಜಕ್ಕೂ ಸಮಾಧಾನ ಪಡಿಸಿದವಳು ಆಕೆಯೇ ಆಗಿದ್ದಳು... ಅಮ್ಮನ ಕೆಲಸಕ್ಕೆ ಸೊಸೆಯ ತಕರಾರೂ ಇರಲಿಲ್ಲ... ಆಕೆಗೆ ಅವಳ ಮನೆಯಲ್ಲಿ ಒಬ್ಬಳೇ ಇರಬೇಕಾಗಿತ್ತು... ಕೆಲಸವಳೂ ಸಹ ಅನಾರೋಗ್ಯದ ಕಾರಣ ಹೇಳಿ ಊರಿಗೆ ಹೋಗಿದ್ದಳು... ಹೊತ್ತು ಹೋಗದ ಕಾರಣ ಆಕೆ ನನ್ನ ನೋಡುವ ಸಲುವಾಗಿ ಇಲ್ಲಿಗೆ ಬರುತ್ತಾ ಇದ್ದಳು...  ಈಗೀಗ ಅವಳ ಆರೋಗ್ಯ ಕೈ ಕೊಡುತ್ತಿತ್ತು... ಸ್ವಲ್ಪ ದಿನ ಇಲ್ಲಿದ್ದು ನಂತರ ತನ್ನ ಮನೆಗೆ ಹೋಗುತ್ತಿದ್ದಳು..
   ಬದುಕು ಸಾಗಿತ್ತು... ಯಾರ ನಿರ್ಧಾರಕ್ಕೂ ಕಾಯದೇ... ಯಾರ ಮರ್ಜಿಗೂ ಕೇಳದೇ... ಹೀಗಿರಲು ಒಂದು ದಿನ ಮಗನಿಗೆ ಹೊರದೇಶದಲ್ಲಿ ಕೆಲಸ ಸಿಕ್ಕಿತು.. ಸೊಸೆಗೂ ಸಹ ಅಲ್ಲೇ ಕೆಲಸ ಸಿಗುವ ಹಾಗಿತ್ತು.... ಹಾಗಾಗಿ ಮಗ ಹೊರ ದೇಶಕ್ಕೆ ಹೋಗಲು ತಯಾರಾಗುತ್ತಿದ್ದ... ನಾನು ಅವರ ಭವಿಷ್ಯದ ಬಗ್ಗೆ ನಿರ್ಧಾರ ತಾಳದಾಗಿದ್ದೆ... ಅವರವರ ಭವಿಷ್ಯ ಅವರೇ ತಾನೇ ರೂಪಿಸಿಕೊಳ್ಳುವುದು..? ಅದಕ್ಕೆ ನನ್ನ ಅನುಮತಿ ಯಾಕೆ ಬೇಕು ಎಂದು ನಾನೇ ಸಮಾಧಾನ ಮಾಡಿಕೊಂಡೆ... ನನ್ನ ಬದುಕು ಇನ್ನು ಎಷ್ಟು ದಿನ...? ಅದಕ್ಯಾಕೆ ಇವರು ಒಳ್ಳೆಯ ಅವಕಾಶ ಹಾಳು ಮಾಡಿಕೊಳ್ಳಬೇಕು...? ಹೀಗೆಲ್ಲಾ ಯೋಚಿಸಿ ನಾನು ಅವರನ್ನು ಬೀಳ್ಕೊಡಲು ತಯಾರಾದೆ... ನನ್ನ ಮನಸ್ಸನ್ನು ಓದಿಯೋ ಏನೋ ಮಗ ನನ್ನನ್ನು ಒಂದೂ ಮಾತು ಕೇಳಲಿಲ್ಲ... ಅವರು ಹೊರಡುವ ಮೊದಲ ದಿನ ನನ್ನಲ್ಲಿ ಒಂದು ಯೋಚನೆ ಬಂತು... ಸಮಾಧಾನವಾಗಿ ಯೋಚಿಸಿದಂತೆಲ್ಲಾ ಅದು ಸರಿ ಎನಿಸಿತು.... ಸಮಯ ಕಳೆದಂತೆ ಗಟ್ಟಿಯಾಯ್ತು ಕೂಡ...

    ನಾಳೆ ಬೆಳಿಗ್ಗೆ ಮಗ ಸೊಸೆ ಹೋಗುವವರಿದ್ದರು... ಹಿಂದಿನ ದಿನ  ರಾತ್ರಿ ಊಟ ಕ್ಕೆ ಕುಳಿತಾಗ ನಾನೇ ಮಾತನಾಡಿದೆ... " ನೋಡು ಸೂರ್ಯ... ಬದುಕು ನಮ್ಮನ್ನು ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗತ್ತೆ... ನಾವು ಏನು ಆಸೆ ಪಡುತ್ತೇವೋ ಅದು ದೊರಕಲ್ಲ... ಸಿಗದ ಪ್ರೀತಿಗೆ, ಹುದ್ದೆಗೆ ಅಲೆದಾಡುತ್ತೇವೆ... ಕೆಲವೊಮ್ಮೆ ಅದೇ ಪ್ರೀತಿ, ಹುದ್ದೆ ನಮ್ಮನ್ನು ಹುಡುಕುತ್ತಾ ಇರತ್ತೆ... ನೀವು ನಿಮ್ಮ ಅವಕಾಶ ಹಾಳುಮಾಡಿಕೊಳ್ಳದಿರಿ.. ನನ್ನ ಬಗ್ಗೆ ಬಿಡಿ .. ಎಷ್ಟು ದಿನ ಬದುಕಬಹುದು... ಹೆಚ್ಚೆಂದರೆ ಹತ್ತು ವರ್ಷ...?? ಹೇಗೋ ಬದುಕುತ್ತೇನೆ ಬಿಡು.. ಆದರೆ ನನಗೆ ಚಿಂತೆ ಇರೋದು ನಿನ್ನ ಹೆಂಡತಿಯ ಅಮ್ಮನದು... ಅದಕ್ಕೆ ನಾನೊಂದು ನಿರ್ಧಾರ ಮಾಡಿದ್ದೇನೆ... ನಾನು ಅವರನ್ನ ಮದುವೆಯಾಗುತ್ತೇನೆ... ಅವರ ಜೊತೆ ನಾನೇ ಮಾತನಾಡುತ್ತೇನೆ.. ಅದರ ಬಗ್ಗೆ ನಿಮಗೆ ತಲೆಬಿಸಿ ಬೇಡ... ನನಗೆ ನಿಮ್ಮ ಅಭಿಪ್ರಾಯ ಬೇಕು ಅಷ್ಟೆ..." ಎಂದೆ ... 


ಮಗ ನನ್ನ ಮುಖ ನೋಡಿದ......  

ಮುಂದಿನ ಸರದಿ ಪ್ರಕಾಶ್ ಹೆಗ್ಡೆ ಅವರದು


    

Sunday, June 14, 2015

ಜನರ ಮುಂದೆ ಮಾತಾಡೋದು ಅಂದ್ರೆ ಉಫ಼್ಫ಼್ ಕಷ್ಟ ಕಷ್ಟಾ .....!

 ಸಾಂದರ್ಭಿಕ  ಚಿತ್ರ  ಕೃಪೆ ಅಂತರ್ಜಾಲ 



ನಮಸ್ತೆ ಗೆಳೆಯರೇ , ಗೆಳೆಯರು ಒಬ್ಬರು  ಹೇಳ್ತಾ ಇದ್ರೂ .....   ಮೊನ್ನೆ ಮೊನ್ನೆ ವರ್ಗೂ  ಅವನಿಗೆ ನೆಟ್ಟಗೆ ಮಾತಾಡೋಕೆ ಬರ್ತಾ ಇರಲಿಲ್ಲ , ಈಗೆನ್ರೀ  ಅಷ್ಟೊಂದು  ಜನರ ಮುಂದೆ ನಿಂತು   ಯಾವುದೇ ವಿಚಾರದ ಬಗ್ಗೆ ಬೇಕಾದರೂ  ಮಾತಾಡೋ ಧೈರ್ಯ ಬಂದಿದೆ , ಮೊನ್ನೆ ಅವನ ಮಾತು ಕೇಳಿದೆ  ಅಬ್ಬಬ್ಬ   ಏನ್ರೀ ಬಹಳ  ಕಮಾಲ್ ಮಾಡಿದ ಬಿಡ್ರೀ ಅಂತಾ ನನ್ನ ಇನ್ನೊಬ್ಬ ಗೆಳೆಯನೊಬ್ಬನ  ಬಗ್ಗೆ  ಮೆಚ್ಚುಗೆ ವ್ಯಕ್ತ ಪಡಿಸಿದರು .

ಈ ಜನರ ಸಮಾರಂಭ , ಮೈಕು , ವೇದಿಕೆ  ಇತ್ಯಾದಿಗಳು  ಒಂತರಾ  ಆಕರ್ಷಣೆ ಕಣ್ರೀ  ಎಲ್ಲರಿಗೂ ಒಮ್ಮೆಯಾದರೂ ನಾನು ಸಹ  ಒಮ್ಮೆ ಇಂತಹ ವಾತಾವರಣದಲ್ಲಿ  ಮಾತನಾಡಬೇಕು ಅಂತಾ ಖಂಡಿತಾ ಅನ್ಸಿರುತ್ತೆ,  ಆದರೆ ಮನದ  ಒಳಗೆ ಅಡಗಿರುವ ಭಯ, ಸಂಕೋಚ,  ನಾಚಿಕೆ ಇತ್ಯಾದಿಗಳು   ನಮ್ಮನ್ನು  ಇಂತಹ ಅವಕಾಶಗಳಿಂದ  ವಂಚಿತರನ್ನಾಗಿ ಮಾಡಿಬಿಡುತ್ತವೆ . ಆದರೆ ಒಂದು ಮಾತು,   ಯಾರೂ ಸಹ ಒಮ್ಮೆಲೇ  ಧೈರ್ಯವಾಗಿ  ವೇದಿಕೆಯಲ್ಲಿ, ಸಭೆಗಳಲ್ಲಿ,  ಮಾತನಾಡಲು  ಆಗುವುದಿಲ್ಲ,  ಹಲವಾರು ಎಡವಟ್ಟುಗಳು ಘಟಿಸಿದ ನಂತರವೇ   ನಮ್ಮ  ಮಾತನಾಡುವ ಹಾದಿ ಸುಗಮ  ಆಗೋದು  ಎಂಬಂತೂ ಸತ್ಯ .

 ಚಿಕ್ಕವಯಸ್ಸಿನಿಂದ  ತರಗತಿಗಳಲ್ಲಿ ಪಾಠ  ಮಾಡುವ ಶಿಕ್ಷಕರು, ಸಾರ್ವಜನಿಕ ಸಭೆ, ಸಮಾರಂಭ , ತರಬೇತಿ   ಕಾರ್ಯಕ್ರಮಗಳಲ್ಲಿ ಮಾತನಾಡುವ ವ್ಯಕ್ತಿಗಳನ್ನು ನೋಡಿ ನಾನೂ ಸಹ ಹೀಗೆ ಮಾತನಾಡುವ  ಆಸೆ ಆಗ್ತಾ ಇತ್ತು, ಆದರೆ ಮನದಲ್ಲಿನ ಪುಕ್ಕಲುತನ  ಇದಕ್ಕೆ ಅವಕಾಶ  ಕೊಡುತ್ತಿರಲಿಲ್ಲ .   ಬುದ್ದಿ ಬಲಿತ ನಂತರ  ಪುಕ್ಕಲುತನ ಬಿಟ್ಟು  ಅಡ್ಡಾ ದಿಡ್ಡಿಯಾಗಿ  ಎಡವಟ್ಟು ಮಾಡಿಕೊಳ್ಳುತ್ತಾ ಹಾದಿಗೆ  ಬಂದೆ . ಇಂತಹ ಎಡವಟ್ಟುಗಳ  ನೆನಪು  ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ  ಬನ್ನಿ.

೧] ನಾನಾಗ  ಆರನೇ ತರಗತಿಯ ವಿದ್ಯಾರ್ಥಿ  ಮಳವಳ್ಳಿ ಸರ್ಕಾರಿ ಪ್ರಾಥಮಿಕ  ಶಾಲೆ ಯಲ್ಲಿ     ಪುಷ್ಪಾವತಮ್ಮ  ಎನ್ನೋ  ಪೂಜ್ಯ ಮುಖ್ಯ ಶಿಕ್ಷಕಿ  ಇದ್ದರು, ಮಕ್ಕಳ ಪ್ರತಿಭೆ ಹೊರತಂದು  ಶಾಲೆಯ ಕೀರ್ತಿ ಬೆಳಗಿಸುವ  ಹಂಬಲ ಅವರದು ,  ಹೇಗಾದರೂ ಮಾಡಿ  ತಮ್ಮ ಶಾಲೆಯ ಮಕ್ಕಳಿಂದ  ಆಕಾಶವಾಣಿಯಲ್ಲಿ  ಕಾರ್ಯಕ್ರಮ ಕೊಡಿಸುವ  ಆಸೆ ಅವರದು,  ಮಕ್ಕಳ ಪ್ರತಿಭೆಯ  ಪರೀಕ್ಷೆ ಮಾಡಲು ಹೊರಟರು ,  ಪ್ರತಿಭಾ ಪರೀಕ್ಷೆಗೆ  ಆಯ್ಕೆಯಾದವರಲ್ಲಿ  ನಾನೂ ಒಬ್ಬ,   ತರಗತಿಯ ಆಯ್ಕೆ ಸುತ್ತಿನಲ್ಲಿ  ಮಿಮಿಕ್ರಿಯಲ್ಲಿ   ಆಯ್ಕೆಯಾಗಿದ್ದೆ  ನಾನು ,   ಮನೆಯಲ್ಲಿ  ಬಹಳ ಜಂಬಾ  ಕೊಚ್ಚಿಕೊಂಡಿದ್ದೆ ,  ಅಮ್ಮನಿಗೂ ತನ್ನ ಮಗ ಜಗವನ್ನೇ ಗೆದ್ದ ಎಂಬ ಖುಷಿ . ಅಂತಿಮ ಸುತ್ತಿನ  ಆಯ್ಕೆ ಇದೇ ಶಾಲೆಯ   ಶಿಕ್ಷಕರ ಹಾಗು ಮಕ್ಕಳ ಎದುರು ಪ್ರದರ್ಶನ ನೀಡಬೇಕು,   ಆ ದಿನ ಬಂದೆ ಬಿಟ್ಟಿತು,  ಕಾರ್ಯಕ್ರಮ ಶುರು ಆಯ್ತು , ಕೆಲ ಮಕ್ಕಳು  ಹೆದರದೆ  ಪ್ರದರ್ಶನ ನೀಡಿ ಚಪ್ಪಾಳೆ ಗಿಟ್ಟಿಸಿದರು , ಆದರೆ ನನ್ನ ಸರದಿ ಬಂತು, ಮೈಕಿನಲ್ಲಿ ನನ್ನ ಹೆಸರನ್ನು  ಕರೆದರೂ , ಏಳಲು ಆಗುತ್ತಿಲ್ಲಾ,   ಆದರೆ ಕುಳಿತಿದ್ದ  ಭೂಮಿ ನನ್ನ ದೇಹವನ್ನು  ಕಚ್ಚಿಕೊಂಡು   ನನ್ನನ್ನು  ಮೇಲೆ ಏಳಲು ಬಿಡಲಿಲ್ಲ,  ಮೈಯೆಲ್ಲಾ ನಡುಕ ಶುರು ಆಗಿ,  ಯೂನಿಫಾರ್ಮ್ ಚಡ್ಡಿ ಒದ್ದೆಯಾಗಿ   ,  ಬಾಯಲ್ಲಿನ  ಜೊಲ್ಲು ರಸ ಬತ್ತಿ ಹೋಗಿ  ಅವಮಾನಿತನಾಗಿ  ಜಾಗ ಖಾಲಿಮಾಡಿದೆ , ನನ್ನ ಹೆಸರನ್ನು ಕರೆದೂ ಕರೆದೂ ಸುಸ್ತಾಗಿ  ಮುಂದಿನ ವಿಧ್ಯಾರ್ಥಿಯನ್ನು  ಕರೆದಿದ್ದರು,  ಮಾರನೆಯ ದಿನ ನನಗೆ  ಬಿಸಿ ಬಿಸಿ ಏಟಿನ  ಕಜ್ಜಾಯ  ಸೇರಿದಂತೆ ಮಾರನವಮಿಯ  ಹಬ್ಬ  ತರಗತಿಯಲ್ಲಿ  .




 ಸಾಂದರ್ಬಿಕ  ಚಿತ್ರ  ಕೃಪೆ ಅಂತರ್ಜಾಲ





೨]  ಅದೊಂದು   ತರಬೇತಿಯ  ಕಾರ್ಯಕ್ರಮ ,  ನನ್ನ ಹಿರಿಯ  ಅಧಿಕಾರಿಗಳು  ತರಬೇತಿ ನೀಡಬೇಕಾಗಿತ್ತು,  ತರಬೇತಿ ಪಡೆಯಲು   ಸುಮಾರು  ೧೦೦ ಕ್ಕೂ  ಹೆಚ್ಚು ಶಿಕ್ಷಕರು, ಹಾಗು ವಿವಿಧ  ಇಲಾಖೆಯ  ಅಧಿಕಾರಿಗಳು  ಆಗಮಿಸಿದ್ದರು .  ತರಬೇತಿ  ಕಾರ್ಯಕ್ರಮ  ಉದ್ಘಾಟನೆ  ಆಯಿತು,   ನಂತರ  ನನ್ನ ಅಧಿಕಾರಿಗಳು  ಅಲ್ಲಿದವರನ್ನು ಉದ್ದೆಶಿಸಿ ,  ಈ  ತರಬೆತಿಗೆ ನೀವೆಲ್ಲಾ ಬಂದಿದ್ದು ಸಂತೋಷ  , ತರಬೇತಿ ಚೆನ್ನಾಗಿ ಪಡೆದು  ಉತ್ತಮವಾಗಿ ಕಾರ್ಯ ನಿರ್ವಹಿಸಿ ಸಮಾಜಕ್ಕೆ    ಒಳ್ಳೆ ಹೆಸರನ್ನು ತನ್ನಿ ಎನ್ನುತ್ತಾ  ಎಲ್ಲರಿಗೂ ವಂದಿಸಿದರು , ನಂತರ ಈಗ ಮುಂದಿನ  ತರಬೇತಿಯನ್ನು ಶ್ರೀ ಬಾಲೂ ನಿಮಗೆ ನೀಡ್ತಾರೆ   ಅಂದು ನನ್ನ ಕಡೆ ನೋಡಿ  ಅನಿರೀಕ್ಷಿತ ಬಾಂಬ್  ಎಸೆದು   ನಡೆದು ಬಿಟ್ಟರು, ನಿರೀಕ್ಷೆ  ಮಾಡದೆ ಇದ್ದ  ಕೆಲ್ಸಾ ಅದು, ಶಾಲೆಯ ಒಂದು   ತರಗತಿಯ  ಕೋಣೆ ಆದ ಕಾರಣ   ಮಕ್ಕಳಿಗೆ  ಪಾಠ  ಮಾಡುವಂತೆ  ಬೋರ್ಡ್  ಬಳಸಿ  ಗಂಟೆ ಗಟ್ಟಲೆ ಪಾಠ  ಮಾಡಬೇಕಾಗಿತ್ತು,  ವಿಚಿತ್ರಾ ಅಂದರೆ ಜೀವನದಲ್ಲಿ ಎಂದೂ  ಹೀಗೆ ತರಬೇತಿ ನೀಡಿದ್ದಾಗಲೀ, ಪಾಠ  ಮಾಡಿದ್ದಾಗಲಿ ಇರಲಿಲ್ಲ,   ಅದೂ ಅಲ್ಲದೆ ವಯಸ್ಸಿನಲ್ಲಿ ನಾನೂ ಅಲ್ಲಿದ್ದ ಎಲ್ಲರಿಗಿಂತಾ  ಬಹಳ ಚಿಕ್ಕವನು ,   ತರಬೇತಿ ಪಡೆಯಲು  ಬಂದವರಲ್ಲಿ ನನಗೆ ಪ್ರಾಥಮಿಕ  ಹಾಗು ಪ್ರೌಡಶಾಲೆಯಲ್ಲಿ  ಪಾಠ  ಮಾಡಿದ್ದ ಸುಮಾರು  ಆರುಜನ  ಗುರುಗಳೂ ಸಹ ಇದ್ದರು,  ಅಯ್ಯೋ ದೇವ್ರೇ   ಅಂತಾ  ಬೆಪ್ಪನಂತೆ   ನಿಂತಿದ್ದೆ , ಭೂಮಿಯೇ ಬಾಯ್ತೆರೆದು   ನನ್ನನ್ನು  ನುಂಗಿ  ಬಿಡಬಾರದೇ  ಅನ್ನಿಸುತ್ತಿತ್ತು,  ಇನ್ನು ಮುಂದಿದ್ದ   ಬಹಳಷ್ಟು ಜನ  ಇದ್ಯಾವ್ದೋ  ಚಿಕ್ಕ ಹುಡುಗನನ್ನು ತಂದು ನಿಲ್ಲಿಸಿ  ತರಬೇತಿ ಕೊಡಿಸೋಕೆ  ಹೊರಟಿದ್ದಾರೆ ನೋಡ್ರೀ ಅಂತಾ ಗೇಲಿಮಾಡಲು  ಶುರು ಮಾಡಿದ್ರು,  ನಾನು ಏನೂ ತಿಳಿಯದೆ  ಕೈ ಕಾಲು ನಡುಗಿಸುತ್ತಾ ನಿಂತಿದ್ದೆ, ನನ್ನ ಸ್ಥಿತಿಯನ್ನು ಗಮನಿಸಿದ  ನನ್ನ ಗುರುಗಳು ಒಬ್ಬರು  ಹತ್ತಿರ ಬಂದು  ಬಾಲೂ  ಹೆದರ ಬೇಡ , ನಾವು ಯಾರೂ ಇಲ್ಲಿ  ಪರಿಪೂರ್ಣರಲ್ಲಾ , ಮುಂದೆ ನಿನಗೆ ಅರ್ಥಾ ಆಗುತ್ತೆ,  ಇವತ್ತು ನಿನಗೆ ತಿಳಿದಷ್ಟನ್ನು ಹೇಳು ನಂತರ  ಮತ್ತೊಮ್ಮೆ ಸಿದ್ದವಾಗಿ ಬಾ ನಾಳೆ  ನಿನಗೆ ಸುಲಭ ಆಗುತ್ತೆ ಅಂತಾ  ಹೇಳಿ, ಅಲ್ಲಿದ್ದವರನ್ನು  ಉದ್ದೇಶಿಸಿ, ನೋಡಿ ಈ ಹುಡುಗ ತರಬೇತಿ  ನೀಡಲು ಅವಕಾಶ ಕೊಡಿ,  ಎಲ್ಲರಿಂದಲೂ ನಾವು ಕಲಿಯುವು ಇದ್ದೆ ಇರುತ್ತೆ,   ಅಂತಾ ತಿಳಿಹೇಳಿ ಗಲಾಟೆಯನ್ನು ತಹಬಂದಿಗೆ ತಂದು ಈಗ ಶುರು ಮಾಡಪ್ಪಾ ಅಂತಾ ಹೇಳಿದರು,  ಈ ಒಂದು ಮಾತು ನನ್ನಲ್ಲಿ ಆತ್ಮ ವಿಶ್ವಾಸ  ಹೆಚ್ಚಿಸಿ,  ಅಂದಿನ ತರಬೇತಿಯನ್ನು  ಶುರು ಮಾಡಿದೆ, ಆದರೆ ಹೇಳಬೇಕಾದ ವಿಚಾರಗಳ ಬಗ್ಗೆ ತಲೆ ಖಾಲಿಯಿತ್ತು,  ಆದರೆ ಸೋಲೊಪ್ಪಿಕೊಳ್ಳುವ ಮನಸಾಗಲಿಲ್ಲ,   ನನಗೆ ನಾನೇ  ಸಂಬಾಳಿಸಿಕೊಂಡು  ಧೈರ್ಯ ತಂದು ಕೊಂಡು,   ತರಬೇತಿಯ ಬಗ್ಗೆ ಮಾತನಾಡಲು ಶುರು ಮಾಡಿದೆ   ಬನ್ನಿ ತರಬೇತಿಗಾಗಿ ನಮಗೆ  ಕೊಟ್ಟಿರುವ ನಮೂನೆಗಳ ಪರಿಚಯ ಮಾಡಿಕೊಳ್ಳೋಣ ಅಂತಾ ಹೇಳಿ  ಉದ್ದೇಶಿತ ಕೆಲಸದಲ್ಲಿ  ನೀಡಿರುವ ವಿವಿಧ ನಮೂನೆಗಳು, ಅವುಗಳನ್ನು ಬಳಸುವ ರೀತಿ ಅದರಲ್ಲಿ  ಮಾಹಿತಿಯನ್ನು ಹೇಗೆ ಭರ್ತಿ ಮಾಡಬೇಕು  ಎಂಬ ರೀತಿ ಇತ್ಯಾದಿಗಳನ್ನು  ತಿಳಿಸಿಕೊಟ್ಟೆ , ಮಾತನಾಡುತ್ತಾ ಮಾತನಾಡುತ್ತಾ, ಉತ್ಸಾಹದ  ಚಿಲುಮೆ ಜಿನುಗಲು ಶುರು  ಆಯ್ತು,  ಮುಂದುವರೆದು  ದಯಮಾಡಿ  ನಿಮಗೆ ಕೊಟ್ಟಿರುವ ಕೈಪಿಡಿಯನ್ನು ಓದಿಕೊಂಡು  ಬನ್ನಿ ಅಂತಾ ಹೇಳಿ  ನಿಗದಿತ  ಸಮಯಕ್ಕಿಂತಾ  ಎರಡು ತಾಸು ಮೊದಲೇ  ತರಬೇತಿ  ಮುಕ್ತಾಯ ಗೊಳಿಸಿದೆ ,  ಅಲ್ಲಿಂದ ಹೊರಟವನೆ   ೧೫೦ ಪುಟಗಳ  ಕೈಪಿಡಿಯನ್ನು  ಸುಮಾರು ಎರಡು ಸಾರಿ ಓದಿ  ಚೆನ್ನಾಗಿ ಮನನ ಮಾಡಿಕೊಂಡು , ಜೊತೆಗೆ  ನನ್ನದೇ ಆದ ಶೈಲಿಯಲ್ಲಿ  ಚಾರ್ಟ್  ತಯಾರಿಸಿಕೊಂಡು  ಮಾರನೆಯ ದಿನದ ಯುದ್ದಕ್ಕೆ ಸಿದ್ದನಾದೆ ,  ಮಾರನೆಯ ದಿನ  ಹೇಳಬೇಕಾದ  ವಿಚಾರಗಳು   ಸುಲಭವಾಗಿ  ನಾಲಿಗೆಯ ಮೇಲೆ  ಕುಣಿದಾಡುತ್ತಾ  ಹೊರಗೆ ಬಂದವು, ತರಬೇತಿ ಪಡೆದ ನುರಿತ ಶಿಕ್ಷಕನಂತೆ  ತರಬೇತಿಯ ವಿಚಾರಗಳನ್ನು  ನನ್ನದೇ ಆದ  ಶೈಲಿಯನ್ನು ಬಳಸಿ , ಬೋರ್ಡ್  ಮೇಲೆ ಬರೆಯುತ್ತಾ , ಚಾರ್ಟ್  ಬಳಸಿ ವಿವರಿಸುತ್ತಾ  ತಿಳಿಸಿದೆ,  ಅಂದು ಸುಮಾರು ಆರು ಗಂಟೆಗಳ ಕಾಲ  ವಿವರ ನೀಡಿದರೂ  ಸಹ  ಮನದಲ್ಲಿ ಹೊಸ ಹೊಸ ವಿಚಾರಗಳು  ಹೊಳೆಯುತ್ತಲೇ ಇದ್ದವು , ಅಂದಿನ ತರಬೇತಿ ಮುಗಿದ ನಂತರ  ಮೊದಲ ದಿನ   ಗೇಲಿ ಮಾಡಿದ್ದ ಶಿಕ್ಷಕರು ಹತ್ತಿರ ಬಂದು  ಅಭಿನಂದಿಸಿ  ಖುಷಿಪಟ್ಟರು,  ಅಂದಿನ ಎಡವಟ್ಟು ಜೀವನದಲ್ಲಿ ಮರೆಯಲಾರದ್ದು ಹಾಗು ಅನುಭವ   ಅಮೂಲ್ಯವಾದದ್ದು  ಇಂದಿಗೂ ಕೂಡ   ಆ ನೆನಪು  ನನಗೆ ಬೆಂಗಾವಲಾಗಿ  ಯಾವುದೇ ವಿಚಾರ  ಅಧ್ಯಯನ  ಮಾಡದೆ , ತಿಳಿಯದೆ ಮಾತನಾಡ ಬಾರದು ಎಂಬ  ಸತ್ಯ ತಿಳಿಸಿದೆ , ಅಂದು ನನ್ನ ಬೆನ್ನು ತಟ್ಟಿದ ನನ್ನ ಗುರುಗಳಿಗೆ  ಈ ಮನಸು ಸದಾ ನಮಿಸುತ್ತದೆ.


೩] ಅದೊಂದು  ಬೀಳ್ಕೊಡುಗೆ ಸಮಾರಂಭ  , ಕಾವೇರಿಯ ನದಿಯ ದಡದಲ್ಲಿ  ನಡೆದ ಕಾರ್ಯಕ್ರಮ   ಹಲವಾರು ಹಿರಿಯ ಅಧಿಕಾರಿಗಳು ಸೇರಿದ್ದರು,  ಕಾರ್ಯಕ್ರಮದ ನಿರೂಪಣೆ ನನ್ನದೇ ಆಗಿತ್ತು, ಆದರೆ  ಪ್ರಾರ್ಥನೆ  ಮಾಡುವ ಮಹಿಳೆ  ಸಮಯಕ್ಕೆ ಬಾರದೆ ಕೈಕೊಟ್ಟರು,  ಅಲ್ಲೇ ಇದ್ದ  ನನ್ನ  ಸಹೋದ್ಯೋಗಿಗೆ  ಹೇಳುತ್ತಾ ,  ಮೊದಲು ನೀನು ನಿರೂಪಣೆ    ಮಾಡು ಪ್ರಾರ್ಥನೆ  ನಂತರ  ನಾನು ಮುಂದುವರೆಸುತ್ತೇನೆ ಅಂದೇ  ನೋಡು ಕಾರ್ಯಕ್ರಮ ಶುರು ಮಾಡು ಅಂದೇ  ಅವನು   ಹಾವು ತುಳಿದವನಂತೆ   ಅಲ್ಲಿಂದ  ಓಡಿಹೋದ ,  ಕಾರ್ಯಕ್ರಮ ಶುರು ಆಯ್ತು,    ನಾನೇ ನಿರೂಪಕ ,   ಈಗ ಕಾರ್ಯಕ್ರಮ  ಪ್ರಾರಂಭ ಅಂತಾ ಹೇಳುತ್ತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ  ಶುರುಮಾಡೋಣ ,  ಎನ್ನುತ್ತಾ    ...... ಇವರಿಂದಾ    ಪ್ರಾರ್ಥನೆ ಅಂತಾ ಹೇಳಿ    ಸ್ವಲ್ಪ  ಗ್ಯಾಪ್ ಕೊಟ್ಟು, ನಂತರ  ಜ್ಞಾಪಿಸಿಕೊಂಡವನಂತೆ ನಟಿಸಿ   ಅರೆ ಮರ್ತೆಹೊಗಿತ್ತು, ಅಂತಾ ಹೇಳಿ ಪ್ರಾರ್ಥನೆ ನನ್ನದೇ ಅಂತಾ ಘೋಷಿಸಿ   ಪ್ರಾರ್ಥನೆ ಮಾಡಲು ನಿಂತೇ,  ಮೂಷಿಕ ವಾಹನ  ಮೋದಕ ಹಸ್ತಾ  ಅಂತಾ ಹೇಳಿದ್ದೆ ಅಷ್ಟೇ  ಜೀವನದಲ್ಲೇ  ಹಾಡೇ ಹಾಡದಿದ್ದ  ನನ್ನ  ಗಂಟಲಲ್ಲಿ  ಮೋದಕ ಸಿಕ್ಕಿ ಹಾಕಿಕೊಂಡು  ಬಿಟ್ಟಿತು,  ಉಸಿರು ಬಾಯಿಗೆ ಬಂದು    ಕೆಟ್ಟ  ದ್ವನಿಯಲ್ಲಿ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಕುಲಗೆಡಿಸಿದ್ದೆ ಅಂತಾ , ತಕ್ಷಣ ಗೊತ್ತಾಗಿ ನಾಲ್ಕೇ  ನಾಲ್ಕು ಸಾಲು ಹೇಳಿ ಸುಮ್ಮನಾದೆ .   ಆ  ಮೋದಕ ಪ್ರಿಯ ಗಣಪನಿಗೆ ನನ್ನ ಸುಶ್ರಾವ್ಯವಾದ  ಗಾಯನದ   ಬಗ್ಗೆ  ಅನುಮಾನ ಮೂಡಿ  ನನ್ನ ಗಂಟಲಿಗೆ ಮೋದಕ ತುರುಕಿದ್ದ , ಪ್ರಾರ್ಥನೆಯ ನಂತರ  ನನ್ನ ನಿರೂಪಣೆಯಲ್ಲಿ  ಲಯ ಕಂಡುಕೊಳ್ಳಲು  ಬಹಳ ಸಮಯ ಹಿಡಿಯಿತು,  ಅಂದಿನ ಘಟನೆ ಮತ್ತೊಂದು ವಿಚಾರ ತಿಳಿಸಿತು,  ಗೊತ್ತಿಲ್ಲದ  ವಿಚಾರದಲ್ಲಿ ಮೂಗು ತೂರಿಸಿ   ದೊಡ್ಡ ಮನುಷ್ಯ ಆಗೋದು ಸಾಧ್ಯವಿಲ್ಲಾ  ಅಂತಾ,  ಅಂದಿನಿಂದ ಇಂದಿನ ವರೆಗೆ ಪ್ರಾರ್ಥನೆಗೆ  ನನ್ನದು ದೊಡ್ಡ ಸಲಾಂ .

೪]  ಕೆಲವೊಮ್ಮೆ   ಬಹಳಷ್ಟು ಕಾರ್ಯಕ್ರಮಗಳಲ್ಲಿ  ಭಾಗವಹಿಸಿ,  ನಿರೂಪಣೆ ಮಾಡಿ,  ಮಾಧ್ಯಮಗಳಲ್ಲಿ ವರದಿಯಾಗಿ  ಪ್ರಚಾರಕ್ಕೆ  ಬಂದಮೇಲೆ  ಜಂಭಬಂದುಬಿಡುತ್ತದೆ ,    ನನಗೂ ಸಹ  ಅಂತಹ ಅಹಂ ಬಂದಿತ್ತು  . ಅಂತಹ  ವರ್ತನೆ ಅದಕ್ಕೆ ತಕ್ಕಂತೆ  ಪಾಠ  ಸಹ ಕಲಿಸುತ್ತದೆ  . ಒಮ್ಮೆ ಹೀಗಾಯ್ತು , ಯಾವುದೋ ಒಂದು ಸಂಸ್ಥೆಯವರು  ನನ್ನನ್ನು ಇತಿಹಾಸಕಾರ ಅಂತಾ ಗುರುತಿಸಿ , ಅತಿಥಿಯನ್ನಾಗಿ  ಆಹ್ವಾನ  ನೀಡಿ ಪತ್ರಿಕೆ  ತಂದುಕೊಟ್ಟರು,  ಇನ್ನೇನು ಜಗವನ್ನೇ ಗೆದ್ದ ನೆಪೋಲಿಯನ್  ನಂತೆ  ಬೀಗಿದೆ,  ಅದರಲ್ಲಿ  ನನ್ನ ಹೆಸರಿನ ಪಕ್ಕದಲ್ಲಿ ಇತಿಹಾಸಕಾರ   ಎಂಬ ಪದ ನನ್ನ ಹಮ್ಮನ್ನು ಇನ್ನೂ ಹೆಚ್ಚಿಸಿತು, ಕಾರ್ಯಕ್ರಮದ ದಿನ ಹೊರಟೇ  ಅಲ್ಲಿಗೆ, ಕಾರ್ಯಕ್ರಮ ಶುರು ಆಯ್ತು ,   ಕಾರ್ಯಕ್ರಮದ  ಅತಿಥಿಯಾಗಿ ನನ್ನ ಭಾಷಣ  ಶುರು ಆಯ್ತು  ಮುಂದೆ ನೋಡಿದೆ ಹಲವಾರು ಶಿಕ್ಷಕರು, ಹಾಗು ಕೆಲವರು ಸಾರ್ವಜನಿಕರು  ಇದ್ದರು, ಇವರಿಗೇನು ಗೊತ್ತು ಅಂತಾ  ಭಾವಿಸಿ  ಅಗತ್ಯಕ್ಕಿಂತ  ಹೆಚ್ಚಾಗಿ ಸ್ಕೊಪ್  ತಗೊಂಡ್  ಇತಿಹಾಸದ   ವಿಚಾರ ತಿಳಿಸುತ್ತಿದ್ದೆ , ನಂತರ ಅದೇ ಸಂವಾದವಾಗಿ  ಬದಲಾಯ್ತು,  ಅಲ್ಲಿದ್ದ  ಪ್ರೇಕ್ಷಕರಲ್ಲಿ  ನನಗಿಂತಾ ಹೆಚ್ಚಿನ ಜ್ಞಾನವಿತ್ತು,  ಇತಿಹಾಸ ಗೌರವಿಸಿ ಹೆಚ್ಚಿನ ವಿಚಾರ ತಿಳಿಯುವ ಹಂಬಲ ಇತ್ತು,  ಅವರು ಕೇಳಿದ ಪ್ರಶ್ನೆಗಳು ನನ್ನ ಜ್ಞಾನದ  ಮಟ್ಟವನ್ನು  ಅಣಕಿಸಿ,  ನನ್ನ ಜಂಭದ  ಗಂಟನ್ನು  ಹೊಸಕಿಹಾಕಿತ್ತು,   ಹೇಗೋ ಅಲ್ಲಿನ ಜನರಿಗೆ ತಿಳಿದ ವಿಚಾರವನ್ನು  ಹೇಳಿ  ಅಲ್ಲಿಂದ  ಬಚಾವಾದೆ  .  ಅವತ್ತಿನಿಂದ  ಯಾವುದೇ  ಸಭೆ ಸಮಾರಂಭದಲ್ಲಿ ವೇದಿಕೆಯ  ಎದುರು ಕುಳಿತ  ಜನರನ್ನು  ಅವರ ಜ್ಞಾನವನ್ನು ಗೌರವಿಸುವುದ ಕಲಿತೆ . ವ್ಯಕ್ತಿಯ ಜ್ಞಾನ  ಸಭ್ಯ ನಡವಳಿಕೆ ಕಲಿಸುತ್ತದೆ ಎಂಬ  ವಿಚಾರ ತಿಳಿಯಿತು .



 ಸಾಂದರ್ಬಿಕ  ಚಿತ್ರ  ಕೃಪೆ ಅಂತರ್ಜಾಲ 


೫]   ಮತ್ತೊಂದು ಘಟನೆ  ಹೀಗಾಯ್ತು , ಅದೊಂದು ಸಂಸ್ಥೆಯ  ಕಾರ್ಯಕ್ರಮ, ನಿರೂಪಣೆ ಹೊಣೆ ನನ್ನದಾಗಿತ್ತು, ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯುತ್ತಿತ್ತು,   ಆ ಸಂಸ್ಥೆಯಲ್ಲಿ  ಜ್ಞಾನ ಪಡೆದ ಹಲವರು ಆ ಸಂಸ್ಥೆಯಬಗ್ಗೆ  ಕೃತಜ್ಞತಾ ಪೂರ್ವಕವಾಗಿ  ಮಾತನಾಡುತಿದ್ದರು , ನಂತರ ಅಲ್ಲಿದ್ದ ಗಣ್ಯರು ಒಬ್ಬರು  ವೇದಿಕೆಯಲ್ಲಿ  ಬಂದು ಮೈಕ್ ಮುಂದೆ ನಿಂತರು ,  ಆದರೆ  ಅವರಿಗೆ ಮಾತನಾಡಲು ಆಗುತ್ತಿಲ್ಲಾ , ಸುಮ್ಮನೆ ಕೈಮುಗಿದು  ಮೌನವಾಗಿ ನಿಂತರು .   ಮಾತನಾಡಲು  ಆಸೆ  ಇದ್ದರೂ ಸಹ ಅಪಾರ ಜನರಿದ್ದ ಆ ಸಭೆಯಲ್ಲಿ  ಅವರಿಗೆ   ಮಾತನಾಡಲು  ಆಗದೆ  ಗಂಟಲು ಒಣಗಿ  ಹೆದರಿ   ಸುಮ್ಮನೆ ನಿಂತುಬಿಟ್ಟರು ನಾನೂ ಸಹ ಎರಡು ಮೂರು ನಿಮಿಷ  ಕಾದೆ, ನಂತರ  ಅಲ್ಲಿದ್ದ ಜನಗಳ ಗದ್ದಲ ಹೆಚ್ಚಾಗುವ   ಲಕ್ಷಣ ಕಂಡು ಬಂದ ಕಾರಣ , ನಾನೇ ಮುಂದೆ ಬಂದು  ಅವರನ್ನು ಸಂತೈಸಿ   ಅವರಿಂದ ಮೈಕ್  ಪಡೆದು  ಸಭೆಯನ್ನು  ಉದ್ದೇಶಿಸಿ , ನೋಡಿ ಸರ್  ನಮ್ಮ ಈ ಗಣ್ಯರು  ಯಾಕೆ ಮೌನವಾಗಿ ಕೈಮುಗಿದು ನಿಂತರು ಗೊತಾಯ್ತಾ  ನಿಮಗೆ ...?  ಯಾರಾದ್ರೂ ಹೇಳ್ತೀರಾ  ಹೇಳೋದಾದ್ರೆ  ಬನ್ನಿ ಯಾಕೆ  ಅಂತಾ ಹೇಳಿ .. ಅಂದೇ , ಗೊತ್ತಿಲ್ಲಾ  ನೀವೇ ಹೇಳಿ ಸಾರ್ ಅಂದ್ರೂ ಸಭೆಗೆ ಬಂದಿದ್ದ  ಜನ ,    ನೋಡಿ ಯಾವುದೇ ಸಂಸ್ಥೆಯ ಅಥವಾ ವ್ಯಕ್ತಿಯ ಬಗ್ಗೆ ಅಪಾರ ಗೌರವ ಇದ್ರೆ  ಹೀಗೆ ಆಗುತ್ತೆ,   ಅವರ ಮೌನ   ಇಲ್ಲಿ  ಲಕ್ಷ  ಲಕ್ಷ  ಕೊಟ್ಟರೂ ಸಿಗದ  ವಿಚಾರವನ್ನು ತಿಳಿಸಿಕೊಟ್ಟಿದೆ,  ಹೇಗೆ ಗೊತ್ತಾ ಅಂದೇ  ಮತ್ತೆ ಸಭೆಯಲ್ಲಿ ಇಲ್ಲಾ  ಅಂತಾ ಉತ್ತರ ಬಂತು,  ನೋಡಿ ತಮಗೆ ಅಪಾರ ಜ್ಞಾನ ಕೊಟ್ಟ ಈ ಸಂಸ್ಥೆಗೆ   ಬರೀ ಮಾತಿನಲ್ಲಿ    ಎಷ್ಟು ಬೆಲೆ ಕಟ್ಟಲು ಸಾಧ್ಯ..? ಆ ಮಾತುಗಳು ಆ ಸಂಸ್ಥೆ ನೀಡಿದ ಜ್ಞಾನಕ್ಕೆ ಸಮನಾಗುವುದೇ  ಎಂಬ ಪ್ರಶ್ನೆ ಅವರನ್ನು ಕಾಡಿ  ಮಾತನಾಡದೆ ಮೌನವಾಗಿ  ಆ ಸಂಸ್ಥೆಯ ಬಗ್ಗೆ ಗೌರವದಿಂದ ಕೈಮುಗಿದು  ಕೃತಜ್ಞತೆ ಸಲ್ಲಿಸಿದ್ದಾರೆ ,  ಜೊತೆಗೆ  ಆ ಸಂಸ್ಥೆಯ ಉದ್ದಾರಕ್ಕಾಗಿ ಕೈಲಾದ   ಆರ್ಥಿಕ ಸಹಾಯ ಮಾಡಲು ಸಹ ನಿರ್ಧಾರ ಮಾಡಿದ್ದಾರೆ  ಬನ್ನಿ ಅವರ ಈ ಒಳ್ಳೆಯ ನಿರ್ಣಯಕ್ಕೆ ಚಪ್ಪಾಳೆ ಮೂಲಕ ಅಭಿನದನೆ ಸಲ್ಲಿಸೋಣ ಅಂದೇ  ಪ್ರೇಕ್ಷಕರಿಂದ ಅಪಾರ ಪ್ರಮಾಣದ ಚಪ್ಪಾಳೆ ಬಂತು  , ಹೆದರಿ ನಡುಗಿದ್ದ ಆ ಅತಿಥಿ ಗಣ್ಯರು ನನ್ನ ಕಡೆ  ಕೃತಜ್ಞತೆ ಯಿಂದ ನೋಡಿದರು .   ಕಾರ್ಯಕ್ರಮ  ನಿರೂಪಣೆ  ಮಾಡುವಾಗ  ಆಕಸ್ಮಿಕವಾಗಿ ಎದುರಾಗುವ ಅನಿರೀಕ್ಷಿತ  ಅಡೆ  ತಡೆಗಳನ್ನು  ಹೇಗೆ ನಿಭಾಯಿಸಬೇಕೆಂಬ  ಬಗ್ಗೆ ಅರಿವು ನನಗೆ  ಮೂಡಿತು.


ಸಾಂದರ್ಬಿಕ  ಚಿತ್ರ  ಕೃಪೆ ಅಂತರ್ಜಾಲ


 ಹೀಗೆ  ಜನರ ಮುಂದೆ ಮಾತನಾಡುವ ನನ್ನ ಪಯಣ ಸಾಗಿದ್ದು,  ಪ್ರತೀ ಕಾರ್ಯಕ್ರಮದಲ್ಲಿಯೂ ಸಹ  ಏನಾದರೂ ಕಲಿಯುವ ವಿಚಾರ ಇದ್ದೆ ಇರುತ್ತದೆ,  ತನ್ನ ಜನರೆದುರು ಏನೇ ಜಂಭ ಕೊಚ್ಚಿಕೊಂಡರೂ  ಸಾರ್ವಜನಿಕ ವೇದಿಕೆಯಲ್ಲಿ ಮೈ ಹಿಡಿದು ಮಾತನಾಡುವಾಗ  ಇಂತಹ ಘಟನೆಗಳು ಎಲ್ಲರಿಗೂ  ಆಗುವಂತದು , ಇದೆಲ್ಲವನ್ನು  ಮೀರಿ ಕಲಿಯುತ್ತಾ ಸಾಗಿದರೆ   ನಾವೂ ಕಲಿಯುತ್ತಾ  ಉತ್ತಮ  ಮಾತುಗಾರರಾಗಿ  ಎಲ್ಲರ ಮೆಚ್ಚುಗೆಗೆ  ಖಂಡಿತಾ    ಪಾತ್ರರಾಗುತ್ತೇವೆ  ಆಲ್ವಾ,.   ಅದಕ್ಕೆ ಹೇಳಿದ್ದೂ ಜನರ ಮುಂದೆ ಮಾತಾಡೋದು  ಅಂದ್ರೆ  ಉಫ಼್ಫ಼್  ಕಷ್ಟ ಕಷ್ಟಾ .....!





Sunday, May 31, 2015

ಕ್ಷಮಿಸಿ ಕಸ್ತೂರಿ ಅಕ್ಕ ನಿಮ್ಮ ಪ್ರೀತಿಯ ಆತಿಥ್ಯ ಪಡೆಯುವ ಅರ್ಹತೆ ನಮಗಿಲ್ಲ



ಆಗುಂಬೆಯ   ಅನ್ನಪೂರ್ಣೆ


ಕೆಲವು ದಿನಗಳ ಹಿಂದೆ ನಮ್ಮ ಬ್ಲಾಗ್  ಮಿತ್ರ  ಪ್ರವೀಣ್  ವಿವಾಹಕ್ಕೆ ಹೋಗಬೇಕಾಗಿತ್ತು,   ವಿವಾಹ ಕಾರ್ಯಕ್ರಮ ಆಗುಂಬೆ ಸನಿಹದ  ತಲ್ಲೂರಂಗಡಿ  ಎಂಬಲ್ಲಿ  ಇದ್ದ ಕಾರಣ, ಹಿಂದಿನ ದಿನವೇ  ಆಗುಂಬೆಯಲ್ಲಿ ಮೊಕ್ಕಾಂ  ಮಾಡಿದೆ, ಆಗುಂಬೆ ಬಗ್ಗೆ  ಹಲವು ವಿಚಾರಗಳು ತಿಳಿದಿತ್ತು,  ಆಗುಂಬೆಯ ಸೂರ್ಯಾಸ್ತ, ಸನಿಹದಲ್ಲೇ  ಸೂರ್ಯೋದಯ ನೋಡಲು   ಕೈ ಬೀಸಿ ಕರೆಯುವ  ಕುಂದಾದ್ರಿ,  ಗೋಪಾಲ ಕೃಷ್ಣ   ದೇಗುಲ,ಎಲ್ಲದರ ಜೊತೆಗೆ  ಆಗುಂಬೆಯ  ದೊಡ್ದಮನೆಯಲ್ಲಿ ಉಳಿಯುವ ಆಸೆ ಬಾಕಿ ಇತ್ತು.  ಈ  ಪ್ರವಾಸದಲ್ಲಿ ಅದಕ್ಕೆ ಅವಕಾಶ  ಸಿಕ್ಕಿದ್ದು  ಖುಶಿ ಕೊಟ್ಟಿತು .

 ನನ್ನ ಗೆಳೆಯರು  ಕುಟುಂಬದೊಡನೆ  ಅಲ್ಲಿಗೆ ಹೋಗಿ ಆತಿಥ್ಯ ಸವಿದು  ರಸವತ್ತಾದ ಕಥೆಗಳನ್ನು ಹೇಳಿ  ಹೊಟ್ಟೆ ಉರಿಸಿದ್ದರು , ಅವರುಗಳ ಪ್ರತೀ ಮಾತಿನಲ್ಲೂ  ಕಸ್ತೂರಿ ಅಕ್ಕನ  ನಗು ಮುಖದ  ಅತಿಥಿ ಸತ್ಕಾರದ ಬಗ್ಗೆ ಮಾಹಿತಿಗಳು   ಇರುತ್ತಿತ್ತು, ನಮ್ಮ ಪ್ರವೀಣ್ ಮದುವೆಗೆ  ಬಂದ  ನೆಪದಲ್ಲಿ  ಕಸ್ತೂರಿ ಅಕ್ಕನ  ಮನೆಗೆ ಪ್ರವೇಶ  ಪಡೆದೆ . ಇಲ್ಲಿಗೆ ಬರುವ ಮೊದಲು ಕಸ್ತೂರಿ ಅಕ್ಕನ  ಮನೆಯ ಫೋನ್ ನಂಬರ್  ಸಂಪಾದಿಸಿ  ಕರೆ ಮಾಡಿದರೆ  ಸಿಕ್ಕವರೇ  ಕಸ್ತೂರಿ ಅಕ್ಕಾ ,  ಆಗುಂಬೆಗೆ ಬರುವುದಾಗ ತಿಳಿಸಿ  ಉಳಿಯಲು ಅವಕಾಶ ಮಾಡಿಕೊಡಲು ಕೋರಿದೆ , ಬಹಳ ಸಂತೋಷದಿಂದ ಒಪ್ಪಿ  ನಾನು ಬರುವ ದಿನವನ್ನು  ಗುರುತು ಹಾಕಿಕೊಂಡರು .  ಅಕ್ಕಾ  ನಿಮ್ಮಲ್ಲಿ ಉಳಿಯಲು  ಎಷ್ಟು ದುಡ್ಡು  ಕೊಡಬೇಕು ..? ಊಟ ತಿಂಡಿಗೆ ಎಷ್ಟಾಗುತ್ತೆ   ದಯವಿಟ್ಟು ತಿಳಿಸಿ ನಿಮ್ಮ ಖಾತೆ ನಂಬರ್ ಕೊಡಿ ಅಲ್ಲಿಗೆ ಹಣ ಜಮಾ ಮಾಡುತ್ತೇನೆ ಅಂದೇ , ಅದಕ್ಕೆ ಕಸ್ತೂರಿ ಅಕ್ಕಾ  ಅಯ್ಯೋ ಅದೆಲ್ಲಾ ಬೇಡ ಇಲ್ಲಿಗೆ ಬನ್ನಿ ಉಳಿಯಿರಿ ನಂತರ ಅದರ ಬಗ್ಗೆ ಮಾತಾಡೋಣ  ಅಂದರು .


ಕಸ್ತೂರಿ ಅಕ್ಕನ  ಕುಟುಂಬದ  ಸದಸ್ಯರು




ಅವರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಲೇ ಏನೋ ಒಂದು ಬಗೆಯ  ಅನಿಸಿಕೆ  ಅವರನ್ನು ಕಾಣುವ ಆಸೆ ಜಾಸ್ತಿಯಾಯ್ತು . ಅವರ ಮನೆಗೆ ತೆರಳಿದ  ನಾನು ನನ್ನ ಹೆಸರು ಹೇಳಿದ ತಕ್ಷಣ  ಓ ಮೈಸೂರಿನವರು ಬನ್ನಿ , ಕೈಕಾಲು ತೊಳೆಯುವಿರ , ತೊಳೆದು ಬನ್ನಿ ವಿಶ್ರಾಂತಿ ಪಡೆದು  ನಂತರ  ಊಟ  ಮಾಡೊರಂತೆ , ನಿಮ್ಮ   ರೂಂ ಮೇಲಿದೆ  ಅಲ್ಲಿ ಉಳಿಯಬಹುದು ಅಂದರು, ಹಾಗೆ ಕೈ ಕಾಲು   ಮುಖಕ್ಕೆ ನೀರು ಹಾಕಿಕೊಂಡು  ದೇಹಕ್ಕೆ ವಿಶ್ರಾಂತಿ ನೀಡಿದೇ ಸ್ವಲ್ಪ ಕಷಾಯದ  ಸೇವನೆ ಆಯ್ತು . ಮನಸು  ಉಲ್ಲಾಸ  ಕಂಡಿತು . ಹಾಗೆ ಮನೆಯನ್ನೆಲ್ಲಾ ವೀಕ್ಷಣೆ ಮಾಡುತ್ತಾ  ಮನೆಯ ಮುಂದಿನ ಜಗಲಿಗೆ ಬಂದೆ  ಸುಮಾರು  ಇಪ್ಪತ್ತು ಮಂದಿ  ಅಲ್ಲಿದ್ದರು,  ಕೆಲವು ಹುಡುಗ ಹುಡುಗಿಯರು ಟ್ರೆಕಿಂಗ್  ಮಾಡಲು ಬಂದಿದ್ದರು, ಮತ್ತೊಂದು ಕುಟುಂಬ  ಆಗುಂಬೆ ಸುತ್ತಾ ಮುತ್ತಾ ನೋಡಲು ಬಂದಿತ್ತು, ಹೀಗೆ  ಗುರುತಿಲ್ಲದ ಜನರ  ನಡುವೆ  ನನ್ನ ಬಾವುಟವೂ ಹಾರಿತ್ತು.

ಅಷ್ಟರಲ್ಲಿ   ಕಸ್ತೂರಿ ಅಕ್ಕನ ಅಳಿಯ  ಶ್ರೀ  ರವಿ ಕುಮಾರ್   ಅವರು ಹೊರಗೆ ಬಂದು ಬನ್ನಿ ಬನ್ನಿ ಊಟಕ್ಕೆ ಎಲ್ಲರೂ  ಅಂತಾ ಮನೆಯ ನೆಂಟರನ್ನು  ಕರೆದಂತೆ ಕರೆದರೂ , ನನಗೂ ಅಚ್ಚರಿ  ಒಳಗೆ ಬಂದೆ  ಮನೆಯ   ಕೇಂದ್ರ ಭಾಗದಲ್ಲಿ  ಒಂದು ಸುಂದರ  ತೊಟ್ಟಿಯಂತಹ  ಜಾಗದಲ್ಲಿ  ಚೌಕಾಕ್ರುತಿಯಲ್ಲಿ    ಊಟದ  ಟೇಬಲ್ ಗಳನ್ನೂ ಜೋಡಿಸಿ  ಅದರ ಮೇಲೆ  ಬಾಳೆ  ಎಲೆಗಳನ್ನು ಹಾಕಿದ್ದರು , ಎಲ್ಲರಿಗೂ ಪ್ರೀತಿ ತುಂಬಿದ ಪ್ರೀತಿಯ  ಮಾತುಗಳೊಡನೆ   ಊಟ ಬಡಿಸಿದ್ದರು,   ರುಚಿ ರುಚಿಯಾದ ಆರೋಗ್ಯಕರ  ಊಟ ನಮ್ಮದಾಗಿತ್ತು,  ಇದೆ ರೀತಿ ರಾತ್ರಿ ಸಹ  ಪುನರಾವರ್ತನೆ,   ಉಳಿದಿದ್ದ   ಕೋಣೆ   ಶುಚಿಯಾಗಿತ್ತು,  ಹಾಸಿಗೆ ಹೊದ್ದಿಗೆ  ಬಹಳ ಶುಭ್ರವಾಗಿತ್ತು,   ಚಿಕ್ಕ ವಯಸಿನಲ್ಲಿ ಅಜ್ಜಿಯ  ಮನೆಯ  ನೆನಪುಗಳು  ಮರುಕಳಿಸಿದ ಅನುಭವ. ಜೊತೆಗೆ ಈ ಪ್ರಪಂಚದಲ್ಲಿ ಇಂತಹ  ವ್ಯಕ್ತಿಗಳು ಇದ್ದಾರ ಎನ್ನುವ  ಪ್ರಶ್ನೆ..? ಕಾಡಿತ್ತು,




 ಕಸ್ತೂರಿ ಅಕ್ಕನ  ದೊಡ್ಡ ಮನೆ


ಮುಂಜಾನೆಯ  ಹಕ್ಕಿಗಳ ಕಲರವ ನನ್ನನ್ನು ಎಚ್ಚರ ಗೊಳಿಸಿತ್ತು,   ಮಹಡಿಯ ಕೋಣೆ ಯಿಂದಾ  ಮೆಟ್ಟಿಲಿಳಿದು  ಬಂದೆ ... ಬನ್ನಿ ಬನ್ನಿ  ಬಿಸಿನೀರು ಕಾದಿದೆ , ಸ್ನಾನ ಮಾಡ್ತೀರಾ , ಅಲ್ಲೇ ಹಿಂದೆ ಸ್ನಾನದ ಮನೆ ಇದೆ ,    ಮುಖತೊಳೆದು ಬನ್ನಿ , ಟೀ , ಕಾಫಿ, ಏನಾದರೂ ಬೇಕಾ   , ಅಲ್ಲೇ ಇದೆ ನೋಡಿ ರೆಸ್ಟ್  ರೂಮು  ಅಂತಾ  ಅತಿಥಿಗಳಿಗೆ   ಪ್ರೀತಿಯಿಂದ  ತಿಳಿಸುತ್ತಾ ಇದ್ದರು .  ನನಗೆ ಈ ಮನೆ  ಹೊಸದು ಅನ್ನಿಸಲೇ ಇಲ್ಲಾ, ನಮ್ಮ  ಅಜ್ಜಿಯ  ಮನೆಗೆ ಬಂದಂತೆ ಅನ್ನಿಸಿತು, ಬೆಳಿಗ್ಗೆ ಉಪಹಾರ    ಸೇವನೆ ನಂತರ  ಕಸ್ತೂರಿ ಅಕ್ಕಾ ನಿಮ್ಮ ಜೊತೆ ಸ್ವಲ್ಪ  ಮಾತಾಡೋಕೆ  ಅವಕಾಶ ಮಾಡಿಕೊಡಿ  ಅಂದೇ,  ಅದಕ್ಕೇನಂತೆ  ಬನ್ನಿ  ನಾನು ಕೆಲ್ಸಾ ಮಾಡ್ತಾ ಮಾಡ್ತಾ ಮಾತಾಡುತ್ತೇನೆ ಅಂತಾ  ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು ,  ಅವರ ಉತ್ತರ ನನ್ನ ಜಂಘಾ ಬಲವನ್ನೇ ಉಡುಗಿಸಿಬಿಟ್ಟಿತು,  ಜೊತೆಗೆ ಪ್ರವಾಸಿಗರ ವೇಷದಲ್ಲಿ ಬರುವ  ನಾವುಗಳು  ಎಂತಹ ಕೆಟ್ಟ ಜನ  ಎನ್ನುವ ಪ್ರಶ್ನೆ ಮೂಡಿತು,





ಮನೆಯಲ್ಲಿನ ಹಿರಿಯ ಜೀವ ಕೂಡ  ಕೆಲಸ ಮಾಡಿ  ಊಟ ಮಾಡುವ ಸ್ವಾಭಿಮಾನಿ

ಕಸ್ತೂರಿ ಅಕ್ಕನ ಮನೆ   ಆಗುಂಬೆಯಲ್ಲಿ ದೊಡ್ಡ ಮನೆ ಅಂತಾನೆ ಪ್ರಸಿದ್ಧಿ, ಈ ಮನೆಯಲ್ಲಿ ಬಹಳ ಹಿಂದಿನಿಂದಲೂ   ಆತಿಥ್ಯಕ್ಕೆ  ಪ್ರಾದಾನ್ಯತೆ  ನೀಡಲಾಗಿದೆ,   ಬಹಳ ಹಿಂದೆ ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ   ಅಧಿಕಾರಿಗಳು   ಆಗುಂಬೆ ಘಟ್ಟ  ಹತ್ತಿ ಬಂದು ಇಲ್ಲಿ ಉಳಿದು  ವಿಶ್ರಾಂತಿ ಪಡೆದು ನಂತರ  ಶಿವಮೊಗ್ಗಕ್ಕೆ ಸಾಗುತ್ತಿದ್ದರು,  ಕಸ್ತೂರಿ ಅಕ್ಕ  ಸುಮಾರು ನಲವತ್ತು ವರ್ಷಗಳಿಂದ  ಒಂದು ದಿನವೂ ತಪ್ಪಿಸದೇ   ಈ ಮನೆಗೆ ಆಗಮಿಸುವ ಅತಿಥಿಗಳಿಗೆ  ಊಟ ವಸತಿ ನೀಡಿ ಆಗುಂಬೆಯ
ಅನ್ನ ಪೂರ್ಣೆ  ಯಾಗಿದ್ದಾರೆ .  ನಲವತ್ತು ವರ್ಷಗಳಿಂದ  ಆಗುಂಬೆಯ ಈ ಮನೆ ಬಿಟ್ಟು ಆಚೆ ಹೋಗಿಲ್ಲ,  ಹಾಗೆಯೇ  ಈ ಮನೆಯಲ್ಲಿ ಒಂದು ದಿನವೂ  ಈ ಕಾರ್ಯಕ್ಕೆ ರಜೆ ನೀಡಲಾಗಿಲ್ಲ . ಇಂತಹ  ಜಾಗಕ್ಕೆ  ಬಂದ  ನಾವುಗಳು ಹೇಗೆ ಇರಬೇಕು ಅಲ್ವಾ..?  ಆದರೆ ನಾವುಗಳು ಮಾಡುವ ಅವಾಂತರ ನೋಡಿ

೧] ನೀವು ಯಾವುದೇ ಊರಿಗೆ ಹೋಗಿ, ಕನಿಷ್ಠ ಒಂದು ಊಟಕ್ಕೆ  ೬೦ ರಿಂದ ೮೦ ರೂ   ರವರೆಗೆ ಖರ್ಚಾಗುತ್ತದೆ , ಬೆಳಗಿನ ಉಪಹಾರಕ್ಕೆ  ಕನಿಷ್ಠ  ೮೦ ರೂ  ಖರ್ಚಾಗುತ್ತದೆ,   ಉಳಿಯಲು  ನೀಡುವ  ಕೋಣೆ  ಬಾಡಿಗೆ ಕನಿಷ್ಠ ೮೦೦ ರೂ  ಆಗುತ್ತದೆ,  ಇದೆ ಆಧಾರದ ಮೇಲೆ   ನೀವು ಯಾವುದೇ ಪುಟ್ಟ ಪಟ್ಟಣಕ್ಕೆ ಹೋದರು   ಅಲ್ಲಿಸಿಗುವ  ಕನಿಷ್ಠ ಸೌಲಭ್ಯಕ್ಕೆ    ರೂ ೮೦ ರಿಂದ  ೧೦೦ ರವರೆಗೆ, ತೆರಬೇಕು   , ಆದರೆ ಇಲ್ಲಿ ನೀಡುವ ಆರೋಗ್ಯಕರ ರುಚಿಯಾದ ಉಪಹಾರಕ್ಕೆ  ೮೦ ರೂ  ಮುಲಾಜಿಲ್ಲದೆ ನೀಡ ಬಹುದು,   ಸುಮಾರು ೧೫೦ ವರ್ಷಗಳ ಇತಿಹಾಸ ಉಳ್ಳ ಆ ಮನೆಯಲ್ಲಿ ಉಳಿಯಲು  ಕನಿಷ್ಠ    ರೂ ೬೦೦ ,  ನೀಡ ಬಹುದು  ಆದರೆ  ಬೆಲೆಕಟ್ಟಲಾಗದ ಈ ಆತಿಥ್ಯಕ್ಕೆ  ಕೆಲವರು  ದುಡ್ಡು ಕೊಡದೆ , ಬರುವುದುಂಟು, ಮತ್ತೆ ಕೆಲವರು ೧೦೦,  ೨೦೦ ರೂಪಾಯಿ ನೀಡಿ ಕಳ್ಳ ನಗೆಯನ್ನು  ನಕ್ಕು ಬರುವುದು ಉಂಟು .  ಯಾವುದೋ  ರೆಸಾರ್ಟ್ ಗಳಿಗೆ  ಒಂದು ದಿನಕ್ಕೆ  ರೂ ೨೦೦೦ ದಿಂದ ೩೦೦೦ ದ ವರೆಗೆ ತಲಾ ಒಬ್ಬೊಬ್ಬರು  ತೆತ್ತು ಬರುವ ಜನ ಇಲ್ಲಿ ಬಂದ ತಕ್ಷಣ  ಜಿಪುಣ ರಾಗುತ್ತಾರೆ, 

೨} ನಮ್ಮ ಮನೆಯ ಟಾಯ್ಲೆಟ್ ಗಳು ಕೊಳಕಾದರೆ  ನರಳಾಡುವ ನಾವು ಸ್ವಚ್ಛತೆ ಬಗ್ಗೆ ಭಾಷಣ ಬಿಗಿಯುತ್ತೇವೆ , ಆದರೆ ಹೆಚ್ಚು ವಿಧ್ಯೆ ಗಳಿಸಿದ  ಕೆಲವು   ಪಟ್ಟಣದ ಹೆಣ್ಣು ಮಕ್ಕಳು  ತಾವು ಬಳಸಿದ  ಪ್ಯಾಡ್ ಗಳನ್ನೂ  ಸಹ  ಟಾಯ್ಲೆಟ್ ಗಳಲ್ಲಿ ತುರುಕಿ ಬರುತ್ತಾರೆ , ಇನ್ನು ಕೆಲವರು ಬಳಸಿದ  ಶೌಚಾಯಗಳಲ್ಲಿ  ನೀರು ಹಾಕದೆ  ಬೇರೆಯವರು  ಉಪಯೋಗಿಸದ  ಹಾಗೆ  ಮಾಡಿ ಬರ್ತಾರೆ ಇದನ್ನೆಲ್ಲಾ  ತೊಳೆಯುವ ಕಾರ್ಯ  ಪಾಪ  ಕಸ್ತೂರಿ ಅಕ್ಕನ  ಮನೆಯ ಸದಸ್ಯರದು ,  ಕೆಲವೊಮ್ಮೆ ಪ್ಯಾಡ್ ಗಳು   ಸಿಕ್ಕಿಕೊಂಡು ಶೌಚಾಲಯ  ಕಟ್ಟಿಕೊಂಡಾಗ ಅದನ್ನು ತೆರವುಗೊಳಿಸಲು  ಒಮ್ಮೊಮ್ಮೆ ೫೦೦ ರೂಗಳ ವರೆಗೆ  ಖರ್ಚು ಮಾಡಿ  ಕಸ್ತೂರಿ ಅಕ್ಕ  ಮತ್ತೆ ಪ್ರವಾಸಿಗರಿಗೆ ತೊಂದರೆ ಆಗದಂತೆ  ನೋಡಿಕೊಳ್ಳುತ್ತಾರೆ . ಪ್ರತಿ ನಿತ್ಯ  ಮನೆಯ ಹೆಣ್ಣುಮಕ್ಕಳೂ ಒಳಗೊಂಡಂತೆ  ಮನೆಯ ಎಲ್ಲಾ ಸದಸ್ಯರು   ಶೌಚಾಲಯಗಳನ್ನು  ಶುಚಿಗೊಳಿಸುವ   ಕಷ್ಟ  ಯಾರಿಗೂ ಕಾಣೋಲ್ಲ .  ಕಸ್ತೂರಿ ಅಕ್ಕನ  ಜೊತೆ ಮಾತನಾಡುವಾಗ  ಈ ಅಂಶ ಬೆಳಕಿಗೆ ಬಂತು .  ಎಷ್ಟು ಓದಿದರೇನು   ಜ್ಞಾನವಿಲ್ಲದಿದ್ದರೆ  . 

೩] ಇನ್ನು ಉಳಿದುಕೊಂಡ  ಕೋಣೆಗಳನ್ನು   ನಾವು ಬಳಸಿಕೊಳ್ಳೋದು ನೋಡಿ ,  ಮಲಗಲು ನೀಡಿದ  ಹೊದಿಕೆಗಳನ್ನು  ವಿರೂಪ ಗೊಳಿಸುವಿಕೆ , ಮಲಗಿ ಎದ್ದ ನಂತರ   ಹಾಸಿಗೆ ಹೊದಿಕೆ ದಿಂಬುಗಳನ್ನು   ವ್ಯವಸ್ತಿತವಾಗಿ  ಇಡದೆ  ಇಷ್ಟ ಬಂದಂತೆ  ಬಿಸಾಡಿ ಬರುವುದು , ಇದನ್ನೂ ಸಹ ಕುಟುಂಬದ ಸದಸ್ಯರು  ಸರಿಪಡಿಸುವ ಕಾರ್ಯ ಮಾಡುತ್ತಾರೆ,  ಒಬ್ಬ ಅತಿಥಿ ಬಳಸಿದ  ಹೊದಿಕೆಗಳನ್ನು ತೆಗೆದು  ಶುಚಿಗೊಳಿಸಲು  ಎಷ್ಟು ಶ್ರಮ ಆಗುತ್ತೆ ಎಂಬುದನ್ನು  ಲೆಕ್ಕಿಸದೆ  ಪ್ರವಾಸಿಗಳು ಮನಸೋ ಇಚ್ಚೆ ನಡೆದುಕೊಳ್ಳುತ್ತಾರೆ , 

೪] ಕೆಲವೊಮ್ಮೆ  ಅತಿಥಿಗಳ ರೂಪದಲ್ಲಿ ಬಂದವರು  ಕೆಲವು ವಸ್ತುಗಳನ್ನು ತಮ್ಮದೆಂಬಂತೆ  ಕದ್ದು ಹೋಗುವುದೂ ಉಂಟು,  ಮಾಲ್ಗುಡಿಡೇಸ್  ಚಿತ್ರೀಕರಣ ಸಮಯದಲ್ಲಿ  ಬಂದ  ಕೆಲವು  ವ್ಯಕ್ತಿಗಳು  ಈ ಮನೆಯ  ಅಮೂಲ್ಯ ವಸ್ತುಗಳನ್ನು   ಕದ್ದು ಹೋಗಿದ್ದಾರೆ .ಅಂದಿನಿಂದ ಈ ಮನೆಯಲ್ಲಿ ಚಿತ್ರೀಕರಣ ಮಾಡುವವರಿಗೆ  ಅವಕಾಶ  ನೀಡಿಲ್ಲ . 

೫] ಈ ಮನೆಯಲ್ಲಿ  ಕಸ್ತೂರಿ ಅಕ್ಕನ  ನಿಯಮಗಳಿವೆ  ಇಲ್ಲಿ ಬರುವವರು  ಬೇರೆ ಅತಿಥಿಗಳಿಗೆ ತೊಂದರೆ ಆಗದಂತೆ ನಡೆದು ಕೊಳ್ಳಬೇಕು , ಮಾಂಸಾಹಾರ , ಮದ್ಯ ಕುಡಿದು ಬರುವುದು ,  ಬೀಡಿ  ಸಿಗರೆಟ್ , ಸೇವನೆ  ಮಾಡುವಂತಿಲ್ಲ , ಆದರೆ ಕೆಲವರು  ಈ ನಿಯಮ ಮುರಿಯಲು ಪ್ರಯತ್ನಿಸಿ ವಿಫಲ ರಾಗುತ್ತಾರೆ .

೬]  ಮಾಲ್ಗುಡಿಡೇಸ್  ಚಿತ್ರೀಕರಣ ಆದ ಕಾರಣ ಈ ಮನೆಗೆ ಮಾಲ್ಗುಡಿ ಮನೆ ಅಂತಾ  ಕೆಲವರು ನಾಮ ಕರಣ ಮಾಡಿದ್ದಾರೆ  ಆದರೆ  ಸುಮಾರು ನಲವತ್ತು   ವರ್ಷಗಳಿಂದ   ಆತಿಥಿ ದೇವೋಭವ  ಎಂದಿರುವ  ಕಸ್ತೂರಿ ಅಕ್ಕನ  ಮನೆ ಎಂಬುದಾಗಿ ಕರೆಯದೆ  ಅವರ ವ್ಯಕ್ತಿತ್ವಕ್ಕೆ ಅವಮಾನ ಮಾಡುವ  ಪ್ರವಾಸಿಗರಿದ್ದಾರೆ . 

೭] ಹಣಕ್ಕಾಗಿ  ವ್ಯವಹಾರ ಮಾಡದೆ  ಪ್ರವಾಸಿಗರನ್ನು ಸುಲಿಗೆ ಮಾಡದೆ  ಅತಿಥಿಗಳ ಸೇವೆ ಮಾಡಿ ಕೊಟ್ಟಷ್ಟನ್ನು ಪ್ರೀತಿಯಿಂದ  ಪಡೆಯುವ  ಇವರ  ಈ ಕಾಯಕವನ್ನು  ಹೆಚ್ಚಿನ  ನ್ಯಾಯಬದ್ದವಾದ  ಮೊಬಲಗು ನೀಡಿ ಪ್ರೋತ್ಸಾಹಿಸದೆ   ಹಾಲು ಕೊಡುವ  ಹಸುವಿನ ಕೆಚ್ಚಲನ್ನು ತಿನ್ನಲು  ಪ್ರವಾಸಿಗರಾದ ನಾವು ಮುಂದಾಗಿದ್ದೇವೆ ,

೮] ಕಸ್ತೂರಿ ಅಕ್ಕಾ, ಪ್ರತಿಯೊಂದನ್ನೂ   ಖರೀದಿಸಿ ತರಬೇಕು,  ಅತಿಥಿಗಳಿಗೆ  ಉಣ್ಣಲು ನೀಡುವ  ಊಟ ತಿಂಡಿಗೆ  ಸಾಮಗ್ರಿಗಳನ್ನು  ಹಣ ನೀಡಿಯೇ  ತರಬೇಕು,  ಬಿಟ್ಟಿ ಯಾಗಿ ಏನೂ ಸಿಗಲ್ಲಾ  ಆದ್ರೆ  ನಾವು ಇದನ್ನು ತಿಳಿಯದೆ  ಮಾಡುತ್ತಿರುವ ಕಾರ್ಯ ನಮ್ಮ ನಾಗರೀಕತೆಯ  ಮೌಲ್ಯದ  ಪರಿಚಯ ಮಾಡುತ್ತಿದೆ


ಕಾಯಕವೇ ಕೈಲಾಸ  ಈ ಕಸ್ತೂರಿ ಅಕ್ಕನಿಗೆ


ಹೀಗೆ ಕಸ್ತೂರಿ ಅಕ್ಕನ ಜೊತೆ ಮಾತನಾಡುತ್ತಾ  ಅವರ ಬವಣೆಗಳನ್ನು ಕೆದಕುತ್ತಾ  ಅಲ್ಲಿನ ಪ್ರವಾಸಿಗರ ವರ್ತನೆ ಗಮಸಿಸುತ್ತಾ  ಪ್ರವಾಸಿಗರಾದ ನಮ್ಮ  ನಡತೆಯಬಗ್ಗೆ ನಾಚಿಕೆ ಪಟ್ಟುಕೊಂಡೆ ,  ಕಸ್ತೂರಿ ಅಕ್ಕ  ಮಾತಿನ ನಡುವೆ  ಹೀಗೆ ಹೇಳಿದ್ರೂ  ದಯವಿಟ್ಟು ಯಾವ ಪ್ರವಾಸಿಗರಿಗೂ ನೋವಾಗುವುದು ಇಷ್ಟ ಇಲ್ಲಾ  ಅಂತಾ,  ಆದರೆ ಪ್ರವಾಸಿಗರಾದ ನಮಗೆ  ಅವರ  ಆತಿಥ್ಯಕ್ಕೆ ತಕ್ಕ ಮರ್ಯಾದೆ ಕೊಡೊ  ಬುದ್ದಿ ಇಲ್ವಲ್ಲಾ  ಅನ್ನೋ ಯೋಚನೆ ಬಂತು .   ಆ ಮನೆಯಲ್ಲಿ ನನ್ನ ವಾಸ್ತವ್ಯ  ಪೂರ್ಣಗೊಂಡು  ಪ್ರವೀಣ್  ವಿವಾಹ ಕಾರ್ಯಕ್ಕೆ ತೆರಳಬೇಕಾದ ಕಾರಣ   ಕಸ್ತೂರಿ ಅಕ್ಕನ  ಆಶೀರ್ವಾದ ಪಡೆದು ಅವರ ಮನೆಯ ಎಲ್ಲರಿಗೂ ವಂದನೆ  ತಿಳಿಸಿ  ನನಗೆ ಸರಿ ಎನ್ನಿಸಿದ ಮೌಲ್ಯ ನೀಡಿ ಬಂದೆ , ಅಕ್ಕಾ ನಿಮ್ಮ ಈ ಪ್ರೀತಿಯ ಆತಿಥ್ಯಕ್ಕೆ ಬೆಲೆ ಕಟ್ಟಲಾರೆ  ಅನ್ನುತ್ತಾ   ಮೌಲ್ಯ ನೀಡಿದೆ  ಅಯ್ಯೋ  ಅದ್ಯಾವ ಮಾತು ಅನ್ನುತ್ತಾ ಪ್ರೀತಿಯಿಂದ ಸ್ವೀಕರಿಸಿ ಹಾರೈಸಿದರು . ಮನೆಯಿಂದ ಹೊರಗೆ ಬರುತ್ತಾ   ಕ್ಷಮಿಸಿ ಕಸ್ತೂರಿ  ಅಕ್ಕಾ  ನಮಗೆ ನಿಮ್ಮ ಪ್ರೀತಿಯ  ಆತಿಥ್ಯ ಪಡೆಯುವ  ಅರ್ಹತೆ ಇಲ್ಲಾ ಎಂಬ ಮಾತುಗಳು ಮನದಲ್ಲಿ ಮೂಡಿತು .



 ಕಸ್ತೂರಿ ಅಕ್ಕನ  ಅಳಿಯ  ಶ್ರೀ  ರವಿ ಕುಮಾರ್  


ದಯವಿಟ್ಟು ಗೆಳೆಯರೇ ಆಗುಂಬೆಗೆ ಹೋದರೆ  ದೊಡ್ಡ ಮನೆ ಊಟ ಮಾಡಿ ಕಸ್ತೂರಿ ಅಕ್ಕನ  ಕೈ ರುಚಿಯನ್ನು ಸವಿಯಲು ಮರೆಯಬೇಡಿ , ಆದರೆ  ಅವರ ಪ್ರೀತಿಯ  ಆತಿಥ್ಯಕ್ಕೆ  ತಕ್ಕ ಮರ್ಯಾದೆ ನೀಡಿ  ಒಳ್ಳೆಯ ಮೌಲ್ಯ  ನೀಡಿ ಬನ್ನಿ . ಇಂತಹ ಜನರನ್ನು  ಕಳೆದುಕೊಂಡರೆ  ನಮ್ಮ ನಾಡಿನ  ಒಂದು ಒಳ್ಳೆಯ ಸಂಸ್ಕೃತಿ ಕಳೆದುಕೊಂಡಂತೆ  ಅಲ್ವಾ.?

Sunday, May 24, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......17 ಪ್ರವಾಸದ ಅಂತಿಮ ಚರಣದಲ್ಲಿ ಕಾಗಿನೆಲೆ ಕೇಶವನ ಕಂಡು ಧನ್ಯವಾಯಿತು ಜೀವ .

ನಾನು ಹೋದರೆ ಹೋದೇನು




ಹಾವೇರಿಯಲ್ಲಿ ಊಟ ಮಾಡಿ ಕಾಗಿನೆಲೆಯತ್ತ  ಹೊರಟೆವು ನಾವು.  ಕಾಗಿನೆಲೆ ಬಗ್ಗೆ ಕನಕದಾಸರು ಹಾಗು ಅವರ ಪದಗಳಲ್ಲಿ  ಬರುವ "ಕಾಗಿನೆಲೆಯಾದಿ ಕೇಶವ"  ಎಂಬ ನಾಮಾಂಕಿತ ಹೊರತಾಗಿ ನನಗೆ ಈ ಜನುಮದಲ್ಲಿ ಬೇರೇನೂ ಗೊತ್ತಿರಲಿಲ್ಲ, ಭಕ್ತಕನಕದಾಸ ಕನ್ನಡ  ಚಲನಚಿತ್ರ ನೋಡಿದ ಮೇಲೆ  ಬಹುಷಃ ಕನಕದಾಸರು  ಹೀಗೆ ಇದ್ದಿರಬಹುದು ಎಂಬ ಒಂದು ಕಲ್ಪನೆ ಮೂಡಿತ್ತು, ಅವರ ಉಗಾಭೋಗ , ಹಾಡು ಭಕ್ತಿ ಪೂರ್ವಕ ಕೃತಿಗಳನ್ನು ಕೇಳಿದಾಗ  "ಕಾಗಿನೆಲೆಯಾದಿ ಕೇಶವ" ಎಂಬ ಪದ ಬಳಸಿ ಹಾಡನ್ನು ಮುಕ್ತಾಯಗೊಳಿಸುತ್ತಿದುದು   ಗಮನಕ್ಕೆ ಬಂದಿತು, ಹಾಡಿನಲ್ಲಿ "ಕಾಗಿನೆಲೆಯಾದಿಕೇಶವ"  ಎಂಬ ಪದ ಬಂದರೆ ಅದು ಕನಕದಾಸರ ಪದ ಎಂಬ ಅರಿವು ಮೂಡಿತ್ತು, ಆದರೆ  ಕಾಗಿನೆಲೆ ಎಂಬ ಊರಿದೆ  ಅಲ್ಲಿ ಆದಿಕೇಶವ ನೆಲೆಸಿದ್ದಾನೆ  ಯಾವತ್ತಾದರೂ  ಅವನ ದರ್ಶನ ಮಾಡುತ್ತೇನೆ ಎಂಬ  ಆಸೆ ಯಾವತ್ತು ಮನದಲ್ಲಿ ಮೂಡಿರಲಿಲ್ಲ,  ಆದರೆ  ಯಾವ ಜನ್ಮದ ಪುಣ್ಯವೋ  ಕಾಣೆ ಆ ಅವಕಾಶ ಅರಿವಿಲ್ಲದೆ  ಸಿಕ್ಕಿತ್ತು .


ಕಾಗಿನೆಲೆ  ಗ್ರಾಮದ ಒಂದು ಬೀದಿ




೧೫೦೯ ರಿಂದ ೧೬೦೯  ರ ಅವದಿಯಲ್ಲಿ  ಕನಕದಾಸರು  ಜೀವಿಸಿದ್ದರೆಂದು  ಹೇಳುತ್ತಾರೆ  . ಹಾವೇರಿ ಜಿಲ್ಲೆಯ  ಶಿಗ್ಗಾವ್  ತಾಲೂಕಿನ ಬಾಡ  ಗ್ರಾಮ ದಲ್ಲಿ ಜನಿಸಿ  ರಾಜನಂತೆ ಮೆರೆದು  ಜೀವನದ  ಹಲವು ಏಳು ಬೀಳುಗಳನ್ನು ಕಂಡು  ಜೀವನದ ತಿರುವು ಕಂಡು  ಭೋಗ ಜೀವನದಿಂದ  ವೈರಾಗ್ಯ  ಹೊಂದಿ  ಶ್ರೀ ಹರಿಯ ದಾಸನಾಗಿ  ಪುಣ್ಯ ಕ್ಷೇತ್ರಗಳಿಗೆ ಅಲೆದಾಡಿ  ಜ್ಞಾನ ಸಂಪಾದಿಸಿ  ಆದಿ ಕೇಶವ ವಿಗ್ರಹದೊಂದಿಗೆ   ಕನಕದಾಸರು  ನೆಲೆಕಂಡ ,  ಪುಣ್ಯ ಭೂಮಿ  ಈ "ಕಾಗಿನೆಲೆ  ಅಥವಾ ಕಾಗಿನೆಲ್ಲಿ" . ಕಾಗಿನೆಲೆ  ಬ್ಯಾಡಗಿ ತಾಲೂಕಿನ ಒಂದು ಗ್ರಾಮ  ಇಂದು . ತಾಲೂಕು ಕೇಂದ್ರ ಬ್ಯಾಡಗಿ ಇಂದ ೧೯ ಕಿಲೋಮೀಟರು , ಹಾಗು ಜಿಲ್ಲಾ ಕೇಂದ್ರ ಹಾವೇರಿ ಇಂದ ೧೪ ಕಿಲೋಮೀಟರ್ ದೂರದಲ್ಲಿದೆ . ಕಾಗಿನೆಲೆ ಗ್ರಾಮದಲ್ಲಿ ಆದಿಕೇಶವ  ದೇವಾಲಯ , ಸಂಗಮನಾಥ ದೇವಾಲಯ  ಹಾಗು ಕನಕದಾಸ ದೇಗುಲಗಳು ಇವೆ,  ಆದಿಕೇಶವ  ದೇವಾಲಯ ಕನಕದಾಸರು ಸ್ಥಾಪಿಸಿದ ದೇವಾಲಯವೆಂದು ಹೇಳಲಾಗುತ್ತದೆ . ಉಳಿದ ದೇವಾಲಯಗಳ ಬಗ್ಗೆ ಅಷ್ಟು ಮಾಹಿತಿ ತಿಳಿದು ಬರೋದಿಲ್ಲ .




ಕಾಗಿನೆಲೆ  ಗ್ರಾಮದ ಒಂದು ನೋಟ


ದೇಗುಲದ ಮರು ನಿರ್ಮಾಣ ಕಾರ್ಯದ ನೋಟ




ಕನಕದಾಸರ ಕಾಗಿನೆಲೆಯ ಪುಣ್ಯ ಭೂಮಿಯಲ್ಲಿ  ಕಾಲಿಟ್ಟ ನಾವು ಆದಿಕೇಶವ ದೇವಾಲಯ ತಲುಪಿದೆವು,  ಅಚ್ಚರಿಯೆಂದರೆ , ಈ ಐತಿಹಾಸಿಕ ದೇಗುಲಕ್ಕೆ  ತಲುಪಲು  ಒಂದು ರಾಜಮಾರ್ಗವೇ ಇಲ್ಲ , ಸಂದಿ ಗೊಂದಿಗಳ ಪುಟ್ಟ ಗಲ್ಲಿಗಳಲ್ಲಿ  ನಡೆದು  ಕನಕರ ಪ್ರೀತಿಯ  ಆದಿಕೇಶವನ  ದರ್ಶನ ಮಾಡಬೇಕು .  ಅಂದಿನಕಾಲದಲ್ಲಿ  ಅತ್ಯಂತ ವೈಭವಯುತವಾಗಿ ಮೆರೆದ  ಈ ದೇಗುಲ ಇಂದು  ಶಿಥಿಲಾವಸ್ಥೆ  ತಲುಪಿ ಈಗ ದುರಸ್ಥಿ  ಕಾಣುತ್ತಿದೆ.





ಶ್ರೀ ಲಕ್ಷ್ಮಿ ನರಸಿಂಹ  ಸನ್ನಿಧಿ




ಕನಕದಾಸರು ಇಲ್ಲಿಗೆ ಬರುವ ಮೊದಲು  ಈ ಊರು ಕಾಗಿನೆಲ್ಲಿ  ಆಗಿತ್ತೆಂದು ಹಾಗು ಅವರು ಬರುವ ಮೊದಲೇ ಇಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮೀ ದೇಗುಲ ಇತ್ತೆಂದು ಹೇಳುತ್ತಾರೆ, ಈ ಊರಿಗೆ  ಕಾಗಿನೆಲ್ಲಿ ಎಂಬ ಹೆಸರು ಬರಲು  ಒಂದು ಕಥೆ ಹೇಳುತ್ತಾರೆ . ಬಹಳ ಹಿಂದೆ ೬೦೦  ವರ್ಷಗಳಿಗೂ  ಹಿಂದೆ   ಒಂದು ಕಾಗೆ ನೆಲ್ಲಿ ಮರದಲ್ಲಿ  ಕುಳಿತು ನೆಲ್ಲಿ ಕಾಯಿ  ತಿನ್ನುತ್ತಿತ್ತೆಂದೂ , ಆ ನೆಲ್ಲಿಕಾಯಿ ಚಿನ್ನದ ನೆಲ್ಲಿಕಾಯಿಯಂತೆ  ಕಂಡು ಬಂದ  ಕಾರಣ ಅಲ್ಲಿನ ರೈತರು  ಆ ಕಾಗೆಯನ್ನು  ಅಟ್ಟಿಸಿಕೊಂಡು ಹೋಗಲು , ಬೆದರಿದ ಆ ಕಾಗೆ  ನೆಲ್ಲಿಕಾಯಿಯನ್ನು ಒಂದು ಹುತ್ತದೊಳಗೆ ಹಾಕಿ ಹಾರಿಹೊಯಿತೆಂದೂ , ನಂತರ  ಆ ಹುತ್ತವನ್ನು ಅಗೆದಾಗ  ಈ ಲಕ್ಷ್ಮಿ ನರಸಿಂಹ ವಿಗ್ರಹ  ಸಿಕ್ಕಿ  ಒಂದು ದೇಗುಲವನ್ನು ನಿರ್ಮಿಸಲಾಯಿತೆಂದೂ , ಅಂದಿನಿಂದ ಈ ಜಾಗವನ್ನು  ಕಾಗಿ ನೆಲ್ಲಿ ಎಂದು ಕರೆಯಲಾಯಿತೆಂದೂ ಹೇಳುತ್ತಾರೆ . ನಂತರ  ಕನಕದಾಸರು  ಇಲ್ಲಿಗೆ ಬಂದು  ವ್ಯಾಸರಾಜರ  ಸಮ್ಮುಖದಲ್ಲಿ  ಇಲ್ಲಿ ಆದಿ ಕೇಶವ ಪ್ರತಿಷ್ಟಾಪಿಸಿದರೆಂದೂ  ಹೇಳುತ್ತಾರೆ . ಏನೇ ಆದರೂ ಈ ಸ್ಥಳ  ಹಲವುಶತಮಾನಗಳ  ಐತಿಹಾಸಿಕ  ಘಟನೆಗಳಿಗೆ ಸಾಕ್ಷಿ ಯಾಗಿರುವುದಂತೂ ನಿಜ .



ಕನಕದಾಸರು  ಬಳಸಿದ ಶಂಖ ಹಾಗು ಕರಂಡ




ಶ್ರೀ  ಲಕ್ಷ್ಮಿ ನರಸಿಂಹ ದೇಗುಲದಲ್ಲಿ  ದರ್ಶನ ಪಡೆದ ನಮಗೆ ಅಲ್ಲಿನ  ಅರ್ಚಕರು  ನಮಗೆ ದೇಗುಲದ ಬಗ್ಗೆ  ಮಾಹಿತಿ ನೀಡಿ ಕನಕದಾಸರು ಬಳುಸುತ್ತಿದ್ದರೆನ್ನಲಾದ  ಶಂಖ ಹಾಗು  ಕರಂಡ ಗಳನ್ನೂ ದರ್ಶನ ಮಾಡಿಸಿ ಅದನ್ನು ಸ್ಪರ್ಶಿಸಲು ಹಾಗು ನಾವುಗಳೇ   ಶಂಖ ಮುಟ್ಟಿ  ಶಂಖ ನಾಧ  ಮಾಡಲು ಅನುವು ಮಾಡಿಕೊಟ್ಟರು , ಕನಕದಾಸರು ಸ್ಪರ್ಶಿಸಿದ  ಈ ಅಮೂಲ್ಯ  ವಸ್ತುಗಳನ್ನು ಕಂಡು ಸ್ಪರ್ಶಿಸಿ  ಆನಂದಪಟ್ಟೆವು, ನಂತರ  ತೆರಳಿದ್ದು   ಕನಕರ ಪ್ರೀತಿಯ  ಆದಿಕೇಶವನ ಸನ್ನಿಧಿಗೆ





ಕನಕದಾಸರ  ಆದಿಕೇಶವ ನೋಡಿ ಇಲ್ಲಿದ್ದಾನೆ

ಕಾಗಿನೆಲೆಯಾದಿ   ಕೇಶವನ ದರ್ಶನ ಮಾಡಿ


 ಕಾಗಿನೆಲೆ  ಆದಿಕೇಶವನ  ದರ್ಶನ ಮಾಡಲು ಮೂರ್ತಿಯ ಮುಂದೆ ನಿಂತ ನಮಗೆ  ಮಾತು ಹೊರಡಲಿಲ್ಲ ,  ಮುದ್ದಾದ  ಆದಿಕೇಶವ  ನಮ್ಮ ಮನದಲ್ಲಿ ಅಚ್ಚಳಿಯದೆ  ಉಳಿಯುವಂತಹ  ದರ್ಶನ ಕರುಣಿಸಿದ್ದ , ಮನದ ತುಂಬಾ ಸಂತಸದ  ಭಾವನೆ ಹೊಮ್ಮಿತು.  ಹನುಮ ಪೀಠದ  ಮೇಲೆ ಗರುಡದೇವನ  ಸಹಿತ ಆದಿಕೇಶವ ನೆಲೆಸಿದ್ದಾನೆ, ಶಂಖ, ಚಕ್ರ , ಗದೆಗಳು ಮೂರು  ಕೈಗಳಲ್ಲಿ  ಮತ್ತೊಂದು ಅಭಯ ಹಸ್ತ  ಈ  ಸುಂದರ ಮೂರ್ತಿಯ ವಿಶೇಷ ,  ಈ ಆದಿಕೇಶವ  ಮೂರ್ತಿಯನ್ನು  ಕನಕದಾಸರ  ಗುರುಗಳಾದ ವ್ಯಾಸರಾಜರು  ಪ್ರತಿಷ್ಟಾಪಿಸಿದರೆಂದು ಹೇಳಲಾಗುತ್ತದೆ ,   ಭಕ್ತಿಯಿಂದ   ಆದಿಕೇಶವನನ್ನು   ಆರಾಧಿಸುತ್ತಾ  ಕನಕದಾಸರು  ಈ ಪವಿತ್ರ  ಸ್ಥಳದಲ್ಲಿ  ನೆಲೆಸಿ  ನಳಚರಿತ್ರೆ , ಹರಿಭಕ್ತಿಸಾರ ,ನೃಸಿಂಹಸ್ತವ , ರಾಮಧಾನ್ಯ ಚರಿತೆ  ಹಾಗು ಉಗಾಭೋಗ  ಮುಂತಾದವುಗಳನ್ನು ರಚಿಸುತ್ತಾರೆ . "ಈಶ ನಿನ್ನ ಚರಣ  ಭಜನೆ " ಎಂಬ ಹಾಡು ಕನಕದಾಸರು  ಅವರ ಜೀವಿತ ಅವದಿಯಲ್ಲಿ ರಚಿಸಿದ ಕೊನೆಯ ಹಾಡು  ಅದರಲ್ಲಿನ ಪಾಂಡಿತ್ಯ ಒಮ್ಮೆ ನೋಡಿದರೆ  ನಿಮಗೆ ಅವರ ಜ್ಞಾನದ ಅರಿವಾಗುತ್ತದೆ https://youtu.be/lUl6VREGTXE  ಈ ಹಾಡಿನಲ್ಲಿ  ಆದಿ ಕೇಶವನನ್ನು  ಹೊಗಳಲು  ಒಮ್ಮೆ ಬಳಸಿದ  ವಿಷ್ಣುವಿನ   ಹೆಸರನ್ನು ಮತ್ತೊಮ್ಮೆ ಬಳಸದೆ  ವಿಷ್ಣುವಿನ  ೨೬  ಹೆಸರುಗಳನ್ನು  ಬಳಸುತ್ತಾ  ತಮ್ಮ ಜ್ಞಾನ ನೈಪುಣ್ಯತೆ ಮೆರೆದಿದ್ದಾರೆ .




ಯತಿಗಳ ವೃಂದಾವನ

ಮಾರುತಿಯ ದರ್ಶನ




ಆದಿಕೇಶವನ ದರ್ಶನ ಪಡೆದು ಪಾವನ ರಾದ ನಾವು  ದೇಗುಲದ ಆವರಣದಲ್ಲೇ ಇದ್ದ  ಶ್ರೀ ರಾಜ ವಂದಿತ ತೀರ್ಥರ ವೃಂದಾವನ, ಹಾಗು ಮಾರುತಿ ದೇವರ ದರ್ಶನ ಪಡೆದೆವು, ಈ ಮಾರುತಿ ದೇಗುಲದಲ್ಲಿ  ಮೂರು ಹನುಮರ ವಿಗ್ರಹ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ, ದೇಗುಲ ನೋಡುತ್ತಾ  ಅಲ್ಲಿನ  ವಾತಾವರಣದಲ್ಲಿ  ಲೀನವಾಗಿದ್ದ ನಮಗೆ  ಊರಿಗೆ ಹೋಗಬೇಕಾದ  ಬಗ್ಗೆ ಮನಸಿನಲ್ಲಿ  ಎಚ್ಚರಿಕೆ ಬಂದೀತು .  ಅಲ್ಲಿಂದ  ವಾಪಸ್ಸು ಹೊರಟು   ಆದಿಕೇಶವನ  ದೇವಾಲಯದ  ಹೊರಗೆ ಬಂದು  ಕಾಗಿನೆಲೆಯ  ನಡು ಬೀದಿಯಲ್ಲಿ ನಡೆದೆವು .




ಕಾಗಿನೆಲೆಯಲ್ಲಿ  ಸಂತೆಯ ದೃಶ್ಯ


ನಾವು ಭೇಟಿ ನೀಡಿದ ದಿನ ಕಾಗಿನೆಲೆಯಲ್ಲಿ ಸಂತೆ ಇತ್ತು,  ಅಲ್ಲಿನ ಸುತ್ತ ಮುತ್ತ ಹಳ್ಳಿಯ ಜನರು  ದವಸ ದಾನ್ಯಗಳ ಖರೀದಿಯಲ್ಲಿ ತೊಡಗಿದ್ದರು , ಹಲವಾರು  ದಶಕಗಳಿಂದ  ನಡೆದು ಬಂದಿರುವ  ಸಂತೆ  ವ್ಯಾಪಾರ  ನಮ್ಮ ಹಳ್ಳಿಗಳಿಗೆ ಸೂಪರ್  ಮಾರ್ಕೆಟ್ ನಂತೆ  ಎಲ್ಲಾ  ಅಗತ್ಯ ವಸ್ತುಗಳು ಒಂದೆಡೆ ಸಿಗುವ  ತಾಣವಾಗಿವೆ . ಅಲ್ಲಿನ ದ್ರುಶ್ಯ ನೋಡುತ್ತಾ  ಮುಂದೆ ಸಾಗಿದೆ , ನಮ್ಮ ಕಾರು ಬೆಂಗಳೂರಿನ ಹಾದಿ ಹಿಡಿಯಿತು ,



ಹಸಿವ ತಣಿಸಿದ ತಾಣ



ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ  ಹೊರಟ  ನಮಗೆ ಬಿರುಸಾದ ಮಳೆಯ ದರ್ಶನ , ಚಾಲಕರಿಗೆ ದಾರಿ ಕಾಣದಷ್ಟು  ಮಳೆ ದೋ ಎಂದು ಸುರಿಯುತ್ತಿತ್ತು,  ಕಾಗಿನೆಲೆ ಅಲೆದಾಟದಿಂದ  ಹೊಟ್ಟೆ  ಹಸಿದಿತ್ತು,  ಹಾದಿಯಲ್ಲಿ ಸಿಕ್ಕ ಒಂದು ಹೋಟೆಲ್ ಗೆ  ನುಗ್ಗಿ  ಹಸಿದ ಹೊಟ್ಟೆಗೆ  ರುಚಿಯಾದ  ದೋಸೆಗಳನ್ನು  ಬಲಿ ನೀಡಿದೆವು,  ಪ್ರಕಾಶಣ್ಣ  ಬಹಳ ಖುಷಿಯಾಯಿತು ನಿಮ್ಮಜೊತೆ ಕಳೆದ  ಮೂರುದಿನಗಳ  ಯಾತ್ರೆ ಅಂದೇ  , ಅಯ್ಯೋ ಬಾಲಣ್ಣ  ನನಗೂ ಹಾಗೆ ಅನ್ನಿಸಿದೆ,   ನಿಜಕ್ಕೂ  ಈ ಮೂರುದಿನಗಳು  ಮರೆಯಲಾರದ  ಅನುಭವ ಅಂದ್ರೂ . ನಮ್ಮಿಬ್ಬರ ಪೇಚಾಟ ಕೇಳಿ  ನಮ್ಮ  ವಾಹನ ಚಾಲಕ ನಗುತ್ತಿದ್ದ,   ಬೆಂಗಳೂರು ತಲುಪಿ  ಕೀಟಲೆ ಪ್ರಕಾಶಣ್ಣ ನನ್ನು  ಆಶಾ ಅತ್ತಿಗೆ  ವಶಕ್ಕೆ ಒಪ್ಪಿಸಿ  ಮೈಸೂರಿನ ನನ್ನ ಮನೆಗೆ  ನೆಮ್ಮದಿಯಾಗಿ ತಲುಪಿದೆ.





 ಹಸಿದ ಹೊಟ್ಟೆಗೆ  ದೋಸೆಗಳ ಸಾಂತ್ವನ 


ಕಳೆದ ವರ್ಷ ೨೦೧೪ ರ ಮೇ ೨೮ ರಿಂದ  ಇಲ್ಲಿಯವರೆಗೆ  ಸುಮಾರು  ೧೭ ಕಂತಿನ ಈ ಪ್ರವಾಸ ಯಾನದ ಅನುಭವದ  ಮಾಲಿಕೆಯನ್ನು ಬ್ಲಾಗ್ ನಲ್ಲಿ ಓದಿ  ನನ್ನನ್ನು ಪ್ರೀತಿಯ  ಮಾತುಗಳಿಂದ  ಪ್ರೋತ್ಸಾಹಿಸಿ  ಪೊರೆದ  ಎಲ್ಲಾ ಗೆಳೆಯರಿಗೆ   ವಂದಿಸುತ್ತಾ  , ಈ ಪ್ರವಾಸ ಕಥನ ಯಾನವನ್ನು ಮುಗಿಸಿದ್ದೇನೆ .  ನಿಮ್ಮೆಲ್ಲರ ಪ್ರೀತಿಗೆ ನನ್ನ ಸಲಾಂ .

Sunday, May 17, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......16 ಹಾವೇರಿಯಲ್ಲಿ ಹಸಿವಿನಲ್ಲೂ ಹುಡುಗಾಟ ,

ಜ್ಞಾನದಲ್ಲಿ  ದೇವರ ಕಂಡ ಕನಕ ದಾಸರು 





ಬಾಡ ದಲ್ಲಿನ  ವೃತ್ತದಲ್ಲಿ  ಕುಳಿತಿದ್ದ  ಕನಕದಾಸರ  ಪ್ರತಿಮೆ   "ನೀ ಮಾಯೆಯೊಳಗೋ  ಮಾಯೇಯೋಳು ನೀನೋ " ಎಂದು ಹಾಡುವ ಬದಲಾಗಿ   "ನೀ ಅಜ್ಞಾನ ದೊಳಗೋ   ಅಜ್ಞಾನ ದೊಳು  ನೀನೋ"   ಎಂದು ಹಾಡಿದಂತೆ  ಅನ್ನಿಸಿ  ಹೆಚ್ಚಿನ ಸಮಯ ವ್ಯರ್ಥ ಮಾಡಬಾರದೆಂದು   ಕಾಗಿನೆಲೆ ನೋಡಲು  ಹಾವೇರಿಯ ಕಡೆ  ಪಯಣ  ಮುಂದುವರೆಸಿದೆವು , ಹೊಟ್ಟೆ ಚುರುಗುಟ್ಟುತ್ತಿತ್ತು , ಕಾರು ಹಾವೇರಿ  ಪ್ರವೇಶ  ಮಾಡಿತ್ತು ,


ಹಾವೇರಿಯಲ್ಲಿ  ಒಂದು  ಒಳ್ಳೆಯ ಹೋಟೆಲ್


 ಹಾವೇರಿ  ಪಟ್ಟಣದೊಳಗೆ ನಮಗೆ ಮೊದಲ ಪ್ರವೇಶ ,  ಆ ಊರಿನ ಬಗ್ಗೆ ಹೆಚ್ಚು ತಿಳುವಳಿಕೆ ಇರಲಿಲ್ಲ, 
ಯಾವುದಾದರೂ ಒಳ್ಳೆ ಹೋಟೆಲ್ ಸಿಕ್ಕಿದರೆ  ಮೊದಲು ಊಟ ಮಾಡೋಣಾ  ಅಂತಾ  ಅನ್ನಿಸಿತು. ಹಾವೇರಿಗೆ  ಪ್ರವೇಶಿಸುತ್ತಿದ್ದಂತೆ  ಕಂಡಿತು ಒಂದು ಭವ್ಯ  ಕಟ್ಟಡದಲ್ಲಿ ಮಿಂಚುತ್ತಿದ್ದ   ಹೋಟೆಲ್ ಒಂದಕ್ಕೆ ನಮ್ಮ ಪ್ರವೇಶ , ಅಚ್ಚರಿ ಎಂದರೆ  ಒಬ್ಬರೂ ಗ್ರಾಹಕರು ಇರಲಿಲ್ಲ,  ಪ್ರಕಾಶಣ್ಣ  ಹೇಳಿದ್ರೂ ಕೇಳದೆ  ಬನ್ನಿ ಪ್ರಕಾಶಣ್ಣ  ಜನ ಜಾಸ್ತಿ ಇಲ್ಲಾ  ಆರಾಮವಾಗಿ  ಕುಳಿತು ಹೊಟ್ಟೆ ತುಂಬಾ ಊಟ ಮಾಡೋಣ ಅಂತಾ    ಆ ಹೋಟೆಲ್ ನೊಳಗೆ  ಪ್ರವೇಶಿಸಿ   ಮೂರು ಊಟಕ್ಕೆ  ಆರ್ಡರ್  ಮಾಡಿ  ಕೈತೊಳೆಯಲು  ಹೊರಟೆ  ಪ್ರಕಾಶಣ್ಣ  ಮೊದಲು ಹೋಗಿದ್ದವರು  ಓದಿ ಬಂದು  ಬಾಲಣ್ಣ  ಇಲ್ಲಿ ತಿಂದೆ ಇದ್ರೂ  ಪರವಾಗಿಲ್ಲ ಮೊದಲು ಆರ್ಡರ್ ಕ್ಯಾನ್ಸಲ್ ಮಾಡಿ ಅಂತಾ ಒಂದೇ ಉಸಿರಿಗೆ ಹೇಳಿದ್ರೂ  , ಅರೆ ಇದೇನಿದೂ ಅಂತಾ  ಕೈತೊಳೆಯಲು ಹೋದ್ರೆ  ಆ ವಾಶ್ ಬೇಸಿನ್ ನೋಡಿ   ಅಲ್ಲಿನ ದರ್ಶನ ಕಂಡು ಸುಸ್ತಾದೆ , ಅತ್ಯಂತ ಕೊಳಕು ವಾಶ್ ಬೇಸಿನ್,  ಊಟಮಾಡಲು ಅಸಹ್ಯ ಉಂಟುಮಾಡುವಂತಹ  ದರ್ಶನ  ನೀಡಿತ್ತು, ಈ ಹೋಟೆಲ್  ಹೊರನೋಟಕ್ಕೆ  ಥಳಕು  ಒಳಗಡೆ  ಗಬ್ಬು ನಾರುವ ಕೊಳಕು  ಎಂಬುದು ಅರ್ಥ ಆಗಿತ್ತು,  ಈ  ಗಡಿಬಿಡಿಯಲ್ಲಿ  ಆ ಹೋಟೆಲ್ ಹೆಸರನ್ನು ನೋಡೋದೇ ಮರೆತಿದ್ದೆ . ಮೊದಲೇ ಹೊಟ್ಟೆ ಹಸಿವು  ತಿನ್ನಲು ಹೋದ್ರೆ ಇಂತಹ ಹೋಟೆಲ್ ಗಳ ನರಕ ದರ್ಶನ , ನಮ್ಮ ಪ್ರವಾಸಕ್ಕೆ ಹೊಸ ಅನುಭವ ಸೇರಿಸಿತ್ತು,  ಹಸಿವಿನ ಆತುರದಲ್ಲಿ   ಮಾಡಿಕೊಂಡಿದ್ದ  ನಮ್ಮ ದಡ್ಡತನಕ್ಕೆ  ಪ್ರಕಾಶಣ್ಣ  ಹಾಗು ನಾನು ಪರಸ್ಪರ  ಮುಖ ನೋಡಿಕೊಂಡು  ನಕ್ಕು  ಮುಂದೆ ಸಾಗಿದೆವು  , ಸ್ಥಳಿಯರ  ಶಿಫಾರಸ್ಸಿನಂತೆ   ಹಾವೇರಿ ಪಟ್ಟಣದೊಳಗೆ   ಇದ್ದ  ಹೋಟೆಲ್ ಶಿವ ಶಕ್ತಿ   ಯನ್ನು ಹೊಕ್ಕೆವು .     ಇದ್ದದ್ದರಲ್ಲಿ ನಮ್ಮ   ಹಸಿವಿನ  ಸಂಕಟಕ್ಕೆ  ಇದ್ದದ್ದರಲ್ಲೇ  ಶುಚಿಯಾದ ರುಚಿಯಾದ  ಊಟ  ಸಾಂತ್ವನ  ಸಾಂತ್ವನ ನೀಡಿತ್ತು .

 
 ಪ್ರಕಾಶಣ್ಣ ಹಾಸ್ಯಕ್ಕೆ  ನೆತ್ತಿ ಹತ್ತಿತ್ತು  ನನಗೆ 


ಹೋಟೆಲ್ ಶಿವಶಕ್ತಿಯಲ್ಲಿ  ಊಟ ಮಾಡುತ್ತಾ , ಸಮಾಧಾನ ಪಟ್ಟು ಕೊಂಡೆವು ,   ಇನ್ನೇನು  ಊಟ ಮುಗಿಸಿ  ನೀರು ಕುಡಿಯುವ ವೇಳೆ  , ಪ್ರಕಾಶ್ ಹೆಗ್ಡೆ  ಹಾಸ್ಯದ  ಬಾಣ  ಬಿಟ್ಟರು ,   ಬಾಲಣ್ಣ  ಒಂದು ವೇಳೆ ಅದೇ ಕೊಳಕಿನ  ವಾಶ್ ಬೇಸಿನ್ ನಲ್ಲಿ  ಕೈತೊಳೆದು ಅದೇ ಹೋಟೆಲ್ ಊಟ ಮಾಡಿದ್ರೆ ನಮ್ಮ ಮುಖ  ಹೇಗೆ ಇರ್ತಿತ್ತು  ..?  ನೀರು ಕುಡಿಯುತ್ತಿದ್ದ ನನಗೆ ಈ ಹಾಸ್ಯಕ್ಕೆ  ನಗು ತಡೆಯಲಾಗಲಿಲ್ಲ,    ಗೊಳ್  ಅಂತಾ ನಕ್ಕೆ  ಕುಡಿಯುತ್ತಿದ್ದ  ನೀರು ಚಿಲುಮೆ ಯಂತೆ ಉಕ್ಕಿ  ಮೈಮೇಲೆ  ಚೆಲ್ಲಿತು ,   ಅದೇ ಸಮಯಕ್ಕೆ ನನ್ನ ಶಿಷ್ಯ  ನನಗೆ ಗೊತ್ತಿಲ್ಲದಂತೆ ಚಿತ್ರ ತೆಗೆದು   ಆ ಸನ್ನಿವೇಶ ದ  ದರ್ಶನ   ಮಾಡಿಸಿದ . ಅ ಕೊಳಕು ಹೋಟೆಲ್  ನಲ್ಲಿನ   ನಮ್ಮ ಎಡವಟ್ಟು  ಪ್ರಸಂಗ ನೆನೆ ನೆನೆದು ಮಸಾರೆ ನಕ್ಕು ಬಿಟ್ಟೆವು .  ರುಚಿಯಾದ  ಊಟದ ಜೊತೆ  ಈ ಹಾಸ್ಯದ ರಸಾಯನ   ನಮ್ಮ ಪ್ರಯಾಣದ  ಆಯಾಸ  ಪರಿಹಾರ ಮಾಡಿತ್ತು .



 ಹಾವೇರಿಯ ವಿಶೇಷದಲ್ಲಿ   ಈ ಪಾನ್ ಅಂಗಡಿ  ಸಹ ಒಂದು 

 ಹೊಟ್ಟೆ ತುಂಬಾ ಊಟ ಮಾಡಿ ಹೊರಗೆ ಬಂದ  ನಮಗೆ  ಪಕ್ಕದಲ್ಲೇ ಕಂಡಿದ್ದು ಈ ಬೀಡಾ  ಶಾಪ್ , ಎಲ್ಲರೊಡನೆ  ನಗು ನಗುತ್ತಾ ಪಾದರಸದಂತೆ ಬೀಡಾ  ಕಟ್ಟಿಕೊಡುತ್ತಿದ್ದ  ಈ ಹುಡುಗನನ್ನು  ರೇಗಿಸುತ್ತಾ  ಸಿಹಿಯಾದ ಬೀಡಾ  ತಿಂದು  ಖುಶಿ ಪಟ್ಟೆವು .   ಅರೆ ರುಚಿಯಾದ  ಊಟ ಕೊಟ್ಟು  ನಮಗೆ ಖುಶಿನೀಡಿದ  ಹಾವೇರಿ ಬಗ್ಗೆ ಪರಿಚಯ ಮಾಡಿಕೊಳ್ಳೋಣ ಬನ್ನಿ ,






ಈ ಹಾವೇರಿ ಯಲ್ಲಿ ನೋಡೋದು ಬಹಳಷ್ಟಿದೆ , ಆದ್ರೆ ನಮಗೆ ಸಮಯ ಬಹಳ ಕಡಿಮೆ ಇದ್ದ ಕಾರಣ , ಕಾಗಿನೆಲೆ  ಮಾತ್ರ ನೋಡಲು ಸಾಧ್ಯ ಆಯ್ತು,  ಆದರೆ  ಮುಂದೆ ಬಂದಾಗ ಇನ್ನಷ್ಟು ನೋಡಲು  ಒಂದಷ್ಟು ಮಾಹಿತಿ ಸಂಗ್ರಹ   ಮಾಡಿಕೊಂಡೆ . ಹಾವೇರಿಯಲ್ಲಿ   ಐತಿಹಾಸಿಕ  ಸಿದ್ದೇಶ್ವರ  ದೇವಾಲಯ ವಿದೆ,  ಇನ್ನು ಈ ಜಿಲ್ಲೆ   ಹಲವಾರು  ಮಹಾಪುರುಷರಿಗೆ  ಜನ್ಮ ನೀಡಿದೆ , ಸರ್ವಜ್ಞ , ಕನಕದಾಸ, ಶಿಶುನಾಳ ಶರೀಫರು ,  ಹಾನಗಲ್ ಕುಮಾರ ಶಿವಯೋಗಿಗಳು,  ವಾಗೀಶ ಪಂಡಿತರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು,  ಲೇಖಕರಾದ  ಗಳಗನಾಥರು ,  ಗೋಕಾಕ್ ಚಳುವಳಿ ನೇತಾರ, ಡಾಕ್ಟರ್ . ವಿ. ಕೆ. ಗೋಕಾಕ್ ರವರು,  ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ,   ಸ್ವಾತಂತ್ರ್ಯ ಕ್ಕಾಗಿ ಬ್ರಿಟೀಷರ ಸೆಣಸಿದ  ಮೈಲಾರ ಮಹಾದೇವ  ಈ ಮಣ್ಣಿನ ಮಗನೆ .  ಈ ಜಿಲ್ಲೆಯ ನೆಲ  ಚಾಲುಕ್ಯ , ರಾಷ್ಟ್ರಕೂಟ , ಕದಂಬ , ಹೊಯ್ಸಳ, ವಿಜಯನಗರ ಸಾಮ್ರಾಜ್ಯದ ಅರಸರ  ಆಳ್ವಿಕೆ   ಕಂಡಿದೆ .  ತುಂಗಭದ್ರ , ಹಾಗು  ವರದ ಈ ಜಿಲ್ಲೆಯ ಪ್ರಮುಖ ನದಿಗಳು , ತುಂಗಾ ಭದ್ರ ನದಿಯನ್ನು ವರದಾ ನದಿ  ಸೇರುವ   ತಾಣ ಇಲ್ಲಿದೆ .   ನಮ್ಮ ದೇಶದಲ್ಲಿ ಮೆಣಸಿನಕಾಯಿ  ಅಂದ್ರೆ ತಕ್ಷಣ ಜ್ಞಾಪಕಕ್ಕೆ ಬರೋದು   ಒಂದು  ಅಂದ್ರದ ಗುಂಟೂರು, ಮತ್ತೊಂದು  ನಮ್ಮ ರಾಜ್ಯದ ಬ್ಯಾಡಗಿ ,   ಈ ಪ್ರಸಿದ್ಧ  ಬ್ಯಾಡಗಿ ಹಾವೇರಿ ಜಿಲ್ಲೆಯ ತಾಲೂಕು ಕೇಂದ್ರ , ಇಷ್ಟೊಂದು ವಿಶೇಷ ಹೊಂದಿರುವ   ಹಾವೇರಿ ಜಿಲ್ಲಾ ದರ್ಶನ  ಮಾಡಲು ಮತ್ತೊಮ್ಮೆ ಬರುವ ಸಂಕಲ್ಪ ಮಾಡಿ   ಕನಕದಾಸರು ಪೂಜಿಸಿದ  ಆದಿಕೇಶವನ ನೋಡಲು ದೌಡಾಯಿಸಿದೆವು .