Sunday, December 30, 2012

ಶಿಂಷಾ ಕಾಡಿನ ಅಲೆದಾಟ ....೦೪ [ ಅಂತಿಮ ಸಂಚಿಕೆ ]ಹಕ್ಕಿಗಳ ಹುಡುಕಾಟ, ಉಳುಬ ಹಳ್ಳದ ಕಣಿವೆಯ ಸುಂದರ ನೋಟ.!!!!


ಸನ್ ಬರ್ಡ್ 


ಚುಕ್ಕೆ  ಮುನಿಯ 


ಕಳೆದ ಸಂಚಿಕೆಯಲ್ಲಿ  ವಿವರಿಸಿದಂತೆ  ಚಿಪ್ಪು ಹಂದಿಯ ಘಟನೆ ನೋಡಿ ಮನಸು ವ್ಯಾಕುಲ ಗೊಂಡಿತ್ತು, ರೆಸಾರ್ಟಿಗೆ ವಾಪಸ್ಸು ಬಂದು ಸ್ವಲ್ಪ ಹೊತ್ತು  ಕುಳಿತು ವಿಶ್ರಮಿಸಿದೆವು. ದೈನಂದಿನ ಕಾರ್ಯಕ್ರಮ ಮುಗಿಸಿ, ನಮ್ಮ ಸುತ್ತ ಮುತ್ತ ಇದ್ದ ಪ್ರದೇಶದಲ್ಲಿ ಕೆಲವು ಸಮಯ ಪಕ್ಷಿ ವೀಕ್ಷಣೆ ಮಾಡಿದೆವು,ಬೆಳಗಿನ ತಂಪಾದ ವಾತಾವರಣದಲ್ಲಿ  ನಮಗೆ ಹಲವು ಪಕ್ಷಿಗಳ ದರ್ಶನ ಭಾಗ್ಯ ಲಭಿಸಿತು.ಸನ್ ಬರ್ಡ್, ಮೈನಾ , ಚುಕ್ಕೆ ಮುನಿಯ ಬೀ  ಈಟರ್, ಮುಂತಾದ ಹಲವಾರು ಪಕ್ಷಿಗಳನ್ನು ಕಂಡೆವು, ಬಹಳಷ್ಟು ನಮ್ಮ ಕ್ಯಾಮರದಲ್ಲಿಸೆರೆಯಾದವು .


ಉಳುಬ ಹಳ್ಳ ಕಣಿವೆ 

ಉಳುಬ  ಹಳ್ಳದ   ಜಲಪಾತ 

ಮುಂದಿನ ಕಾರ್ಯಕ್ರಮದ ಸಿದ್ದತೆಗಾಗಿ ತಯಾರಿ ನಡೆಸಿದೆವು, ಬೆಳಗಿನ ಉಪಹಾರ ಮುಗಿಸಿ, ಶಿಂಷಾ ಜಲಪಾತ ದ ಕಡೆ ನಮ್ಮ  ತಂಡ  ಹೊರಟಿತು, ಶಿಂಷಾ  ಕಾಲೋನಿಯ ಪ್ರವೇಶ ದ್ವಾರದ ಪಕ್ಕದಲ್ಲಿ ಎಡಕ್ಕೆ ಸಾಗುವ ಹಾದಿಯಲ್ಲಿ ಹೊರಟೆವು, ಕಡಿದಾದ ಅಂಕು ಡೊಂಕಿನ   ಪ್ರಪಾತದಂತಹ ಇಳಿಜಾರಿನಲ್ಲಿ  ಹೊರಟ ನಮಗೆ  ಮೊದಲು ಕಂಡಿತ್ತು ಈ ಉಳುಬ ಹಳ್ಳ [ಇದನ್ನು ಹಂದಿ ಹಳ್ಳ  ಅಂತಾನೂ ಕರೀತಾರೆ]. ಶಿಂಷಾ ಊರಿನ ಸುತ್ತಾ ಗುಡ್ಡ ಬೆಟ್ಟ ಹಾಗು ಕಾಡನ್ನು ಪ್ರಕೃತಿ  ಕೊಡುಗೆಯಾಗಿ ನೀಡಿದೆ,  ಮಳವಳ್ಳಿ ಸಮೀಪವಿರುವ  ಮಾರೆಹಳ್ಳಿ ಕೆರೆ ಬಹಳ ವಿಶಾಲವಾದ ಕೆರೆ , ಅಲ್ಲಿಂದ ಒಂದು ನೀರಿನ ಹಳ್ಳ ಅಥವಾ ಸಣ್ಣ ನೀರಿನ ಜರಿ   ಸಣ್ಣ ನದಿಯಂತೆ ಮಾರ್ಪಟ್ಟು  ಹರಿಯುತ್ತದೆ. ಅದನ್ನು ಇಲ್ಲಿನ  ಸ್ಥಳೀಯರು ಹಂದಿ ಹಳ್ಳ ಎನ್ನುತ್ತಾರೆ. ಆ ಹಂದಿ ಹಳ್ಳದ ನೀರು  ಮಾರೆ ಹಳ್ಳಿ ಕೆರೆಯಿಂದ  ಹರಿದು ಇಲ್ಲಿನ ಶಿಂಷಾ ನದಿಯನ್ನು ಸೇರುತ್ತದೆ.  ದಾರಿಯ ನಡುವೆ ಇಲ್ಲಿನ ಕಣಿವೆಯಲ್ಲಿ ಸಣ್ಣ ಜಲಪಾತ ವಾಗಿ ದುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ಇಲ್ಲಿ ಜಲಪಾತದ  ಅದ್ಭತ ನೋಟವನ್ನು ಕಾಣಬಹುದು. ಕಣಿವೆಯ ನೋಟ ಹಾಗು ಜಲಪಾತದ ದರ್ಶನ ಪಡೆದ ನಾವು  ಮುಂದೆ ಸಾಗಿದೆವು.



ಜಲಪಾತಕ್ಕೆ ಸಾಗುವ ಹಾದಿ 


ಅಂಕು ಡೊಂಕಿನ ಕಡಿದಾದ ಅಪಾಯದ  ಹಾದಿ, ಸ್ವಲ್ಪ ಜಾರಿದರೂ ಪ್ರಪಾತ ಕಾಣುವುದು ಗ್ಯಾರಂಟೀ .ಈ ರಸ್ತೆಯನ್ನು ಬಹುಷಃ  ಜಲ ವಿದ್ಯುತ್ ಯೋಜನೆ ನಿರ್ಮಾಣ ಸಮಯದಲ್ಲಿ  ದೊಡ್ಡ ದೊಡ್ಡ ಯಂತ್ರಗಳನ್ನು ಸಾಗಿಸಲು  ಮಾಡಿರಬಹುದು. ಅಂದಿನವರ ಸಾಹಸಕ್ಕೆ  ಮನದಲ್ಲಿ ಕೃತಜ್ಞತೆ ಮೂಡಿತು. ಇಳಿಜಾರಿನ ಹಾದಿಯಲ್ಲಿ ನಮ್ಮ ಕಾರುಗಳು ಇಳಿದವು.



ಜಲ ವಿಧ್ಯುತ್ ಉತ್ಪಾದನಾ ಕೇಂದ್ರ 

ರಾಜ ಲಾಂಛನ ಹೊತ್ತ ಕಟ್ಟಡ 


ಪೂರ್ಣವಾಗಿ  ಗುಡ್ಡ/ಬೆಟ್ಟ ಗಳನ್ನು  ಇಳಿಯುತ್ತಿದ್ದ ನಾವು  ದೂರದಲ್ಲೇ  ಶಿಂಷಾ ಜಲ ವಿಧ್ಯುತ್ ಉತ್ಪಾದನಾ ಕೇಂದ್ರ ದ ದರ್ಶನ ಮಾಡಿದೆವು. ೧೯೩೯ ರಲ್ಲಿ ನಿರ್ಮಿತವಾದ ಈ  ಕಟ್ಟಡ  ಮೈಸೂರಿನ ಅರಸರ ರಾಜ ಲಾಂಛನ ಹೊತ್ತು ಮೆರೆದಿದೆ. ಈ ಕಟ್ಟಡದಲ್ಲಿ  ಹಲವು ದಶಕಗಳಿಂದ ಜಲ ವಿಧ್ಯುತ್  ಯೋಜನೆಯಲ್ಲಿ  ವಿಧ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇಲ್ಲಿನ  ಜನರೇಟರ್  ತಾಂತ್ರಿಕತೆ ಎಂತಹವರನ್ನೂ ಬೆರಗು ಗೊಳಿಸುತ್ತದೆ. ಪೂರ್ಣವಾಗಿ ಗುಡ್ಡ /ಬೆಟ್ಟ ಇಳಿದು ಕಾರನ್ನು ನಿಲ್ಲಿಸಿ,  ಶಿಂಷಾ  ಜಲಪಾತ ನೋಡಲು ಸಾಗಿದೆವು.  ಸಾಗಿದ ಹಾದಿ, ಕಾಡಿನಿಂದ ಕೂಡಿತ್ತು,




ಟ್ರಾಲಿಗಳು ಸಾಗುವ ಹಾದಿ 


ಸಾಗಿದ ಹಾದಿಯಲ್ಲಿ ಒಂದು ಕಡೆ ಟ್ರಾಲಿ ಮಾರ್ಗದ  ದರ್ಶನ ವಾಯಿತು .ವಿಧ್ಯುತ್ ತಯಾರಿಕಾ ಕೇಂದ್ರಕ್ಕೆ ಕಾರ್ಮಿಕರನ್ನು ಕರೆದೊಯ್ಯಲು ಈ ಟ್ರಾಲಿ ವ್ಯವಸ್ತೆ ಮಾಡಲಾಗಿದೆ. ಮೊದಲು ಪ್ರವಾಸಿಗಳೂ ಸಹ ಈ ಟ್ರಾಲಿ ಗಳಲ್ಲಿ  ಇಳಿದು  ವಿಧ್ಯುತ್ ಉತ್ಪಾದನೆ  ನೋಡಬಹುದಿತ್ತು, ನಂತರ ಇತ್ತೀಚಿಗೆ ಕೆಲವು ವರ್ಷಗಳಿಂದ  ಭದ್ರತೆ ದೃಷ್ಟಿಯಿಂದ ಇಲ್ಲಿಗೆ ಪ್ರವಾಸಿಗಳ  ಭೇಟಿಗೆ   ನಿರ್ಬಂಧ ವಿಧಿಸಲಾಗಿದೆ.ಚಿಕ್ಕವಯಸ್ಸಿನಲ್ಲಿ ನಾನೂ ಸಹ ಟ್ರಾಲಿಯಲ್ಲಿ ಹಲವಾರು ಸಾರಿ ಕುಳಿತು ಖುಶಿಪತ್ತಿದ್ದ ದಿನಗಲಿ ಜ್ಞಾಪಕಕ್ಕೆ ಬಂದವು.


ತೂಗು ಸೇತುವೆ.


ತೂಗು ಸೇತುವೆಯ ಹಾದಿಯಲ್ಲಿ 


ಮುಂದೆ ಸಾಗಿದ ನಾವು  ಮರಗಳು ಹಾಗು ಪೊದೆಗಳಿಂದ ಕೂಡಿದ ಕಾಡಿನ ಹಾದಿಯಲ್ಲಿ ಸ್ವಲ್ಪ ದೂರ ಸಾಗಿದರೆ ನಮಗೆ ಒಂದು ತೂಗು ಸೇತುವೆ ಸಿಕ್ಕಿತು. ಅದನ್ನೂ ಸಹ  ಸುಮಾರು ದಶಕಗಳ ಹಿಂದೆಯೇ ನಿರ್ಮಿಸಲಾಗಿದ್ದು,  ಬಲಿಷ್ಟವಾಗಿದೆ. ಹಲವು ಜನರು ಒಟ್ಟಿಗೆ ನಡೆದರೂ  ಅಲ್ಲಾಡದ ಇದರ ತಾಂತ್ರಿಕತೆ ಎಂತಹವರನ್ನೂ ಬೆರಗುಗೊಳಿಸುತ್ತದೆ.



ಕೊಂಡದಮ್ಮ   ಬಯಲು ದೇವಾಲಯದ ಮೆಟ್ಟಿಲು.


ತೂಗುಸೇತುವೆ ದಾಟಿ ಮುಂದೆ ಬಂದ  ನಮಗೆ ಒಂದು ಕಮಾನಿನ  ಕೆಳಗೆ ಬಣ್ಣ ಬಣ್ಣದ ಮೆಟ್ಟಿಲುಗಳು ಕಾಣಿಸಿತು. ಈ ಪ್ರದೇಶವನ್ನು ಶ್ರೀ ಕೊಂಡದಮ್ಮ  ದೇವಾಲಯ ಎನ್ನುತ್ತಾರೆ. ಇದೊಂದು ಬಯಲು ದೇವಾಲಯ , ಕೆಳಗೆ ಪಾದುಕೆಗಳಿದ್ದು ಕಾಮಾನಿನ  ಕೆಳಗೆ ಬಣ್ಣ ಬಣ್ಣ ದ ಮೆಟ್ಟಿಲುಗಳಿವೆ. ಹಸಿರ ಪ್ರಕೃತಿಯ ನಡುವೆ ಬಣ್ಣ ಬಣ್ಣದ ಮೆಟ್ಟಿಲುಗಳು  ಯಾವುದೋ ಸಿನಿಮಾ ತೆಗೆಯಲು ಸೆಟ್ಟಿಂಗ್  ಹಾಕಿದ್ದಾರೆ ಅನ್ನುವ ಭಾವನೆ ಮೂಡಿಸಿತ್ತು.  ಮೆಟ್ಟಿಲು ಹತ್ತಿ ಮೇಲೆ ಹೋದರೆ ಕೆಲವು ಮೂರ್ತಿಗಳು ಕಂಡು ಬರುತ್ತವೆ, ಮೂರ್ತಿಗಳಿಗೆ ರಕ್ಷಣೆ  ಕೊಡಲು ಯಾವುದೇ ಕಟ್ಟಡ/ಚಾವಣಿ  ಇಲ್ಲ, ಬಯಲಿನಲ್ಲೇ ಇವೆ. ಈ ದೇವರಿಗೆ ಸುತ್ತ ಮುತ್ತಲಿನ ಹಲವು ಗ್ರಾಮಗಳ, ಹಾಗು ಮಳವಳ್ಳಿಯ ಕಡೆ ಬಹಳಷ್ಟು ಜನ ಭಕ್ತಾದಿಗಳು ಇದ್ದಾರೆ. ಅವರೆಲ್ಲಾ ಇಲ್ಲಿ ಬಂದು  ದೇವರಿಗೆ ಪೂಜೆ ಮಾಡಿ ಬಹಳಷ್ಟು ಜನ ಕೋಳಿ,  ಕುರಿ ಮುಂತಾದ ಹರಕೆ ಕಾಣಿಕೆ ಸಲ್ಲಿಸಿ , ಇಲ್ಲೇ ಅಡಿಗೆ ಮಾಡಿಕೊಂಡು ಉಂಡು  ತೆರಳುತ್ತಾರೆ.


ಜಲಪಾತ ನೋಡಲು ಸಾಗಬೇಕಾದ ಹಾದಿ 


ಇಲ್ಲಿಂದ ಮುಂದೆ ಕಾಡಿನಲ್ಲಿ ಕಲ್ಲು ಬಂಡೆ ಗಳಿಂದಾ , ದೊಡ್ಡ ದೊಡ್ಡ ಮರಗಳ ಬೇರಿನಿಂದ ಕೂಡಿದ  ಹಾದಿ , ಚಪ್ಪಲಿ/ ಬೂಟು ಹಾಕಿದ್ದರೆ  ಜಾರುತ್ತದೆ , ಹುಷಾರಾಗಿ ಹೆಜ್ಜೆ  ಹಾಕುತ್ತಾ  ಸಾಗಿದೆವು. ಇಂತಹ ಹಾದಿಯಲ್ಲೂ ನನ್ನ ಕ್ಯಾಮರಾ ಪ್ರಕೃತಿಯನ್ನು ಸೆರೆ ಹಿಡಿಯಲು ಹಾತೊರೆಯುತ್ತಿತ್ತು. ದಾರಿಯಾಲಿ ಸಾಗುತ್ತಿದ್ದ ನಮಗೆ  ಜುಳು ಜುಳು ಹರಿಯುತ್ತಿದ್ದ ನದಿಯ ನೀರಿನ ಕಲರವ, ಜಲಪಾತದ  ನೀರು ದುಮ್ಮಿಕ್ಕುವ ಶಬ್ದ ಕೇಳುತ್ತಿತ್ತು. ಜಲಪಾತದ ಸನಿಹ ಬರುತ್ತಿದ್ದೆವು.


ಶಿಂಷಾ ನದಿಯ ನೋಟ  

ಶಿಂಷಾ ಜಲಪಾತ 

ಕಲ್ಲಿನ ಗವಿಯೊಳಗೆ  ದುಮ್ಮಿಕ್ಕುವ ಜಲಪಾತ.


ಹಸಿರ ಕಾಡಿನಲ್ಲಿ ಬಂಡೆ ಗಳನ್ನು ಹತ್ತಿಳಿದು, ಮರದ ಬೇರುಗಳನ್ನು  ದಾಟಿಕೊಂಡು  ನದಿಯ ಸನಿಹ ಬಂದೆವು,ಕಣ್ಣೆದುರಿಗೆ  ರಮಣೀಯ ನೋಟ ಅನಾವರಣ ಗೊಂಡಿತು, ಅಲ್ಲಿಯವರೆಗೂ ಕಷ್ಟಪಟ್ಟು ಬಂದು ಸುಸ್ತಾಗಿದ್ದ ನಮಗೆ ಅಲ್ಲಿನ ನೋಟ ಬಹಳ ಮುದ ನೀಡಿ ನಮ್ಮ ಆಯಾಸ  ಮಾಯವಾಗಿತ್ತು, ಹೊಸ ಚೈತನ್ಯ  ಮೂಡಿತು. ಶಿಂಷಾ ಜಲಪಾತ  ತನ್ನ ಸೌಂದರ್ಯ ಮೆರೆದು ದರ್ಶನ ನೀಡಿತ್ತು. ಮಳೆಗಾಲದಲ್ಲಿ ಇಲ್ಲಿಗೆ ಬರುವುದು ಅಸಾಧ್ಯ ವಾದರೂ  ಮಳೆಗಾಲ ಕಳೆದು ಇಲ್ಲಿಗೆ ಬಂದಲ್ಲಿ ಒಳ್ಳೆಯ ಅನುಭವ ಪಡೆಯಬಹುದು.ನಾವಿದ್ದ ವೇಳೆಯಲ್ಲಿ ಅಂತಹ ಮಳೆ ಇಲ್ಲದೆ  ನೀರು ಕಡಿಮೆ  ಆಗಿತ್ತು, ಆದರೂ ಒಳ್ಳೆಯ ನೋಟ ಸಿಕ್ಕಿತು.



ಸೌಂದರ್ಯದ ನೆಲೆ ಇಲ್ಲಿದೆ 

ಪ್ರಕೃತಿ ಹಾಕಿರುವ ಸೆಟ್ಟಿಂಗ್ ಇದು 

ನಿರ್ಮಲ ವಾತಾವರಣ ಎಂದರೆ ಇದೆ ಆಲ್ವಾ ??


ಜಲಪಾತದ ನೋಟ ಸವಿಯುತ್ತಾ  ಮಂತ್ರ ಮುಗ್ಧರಾಗಿ ಕುಳಿತೆವು, ನಾವು ಕುಳಿತ್ತಿದ್ದ ಬಂಡೆಯ ಮೇಲೆ ಸುತ್ತಲ ರಮಣೀಯ ದೃಶ್ಯ ಕಂಡಿತ್ತು.  ಸುಮನ ದೀಪಕ್  ತನ್ನ ಕೈಚಳಕ ದಿಂದ ದಿಡೀರ್  ತಿನಿಸು ತಯಾರು ಮಾಡಿ ನಮ್ಮ ಹಸಿವನ್ನು ನೀಗಿಸಿದರು , ನಮ್ಮ ಮುಂದೆ ಯಾವುದೋ ಹಾಲಿವುಡ್ ಚಿತ್ರದ  ನೋಟ ವೆಂಬಂತೆ ಸುಂದರ ಪರಿಸರ ಕಾಣುತ್ತಿತ್ತು. ನನಗಂತೂ "ಮೆಖಾನೆಸ್  ಗೋಲ್ಡ್' " ಚಿತ್ರದ ಹಲವು ದೃಶ್ಯಗಳು ನೆನಪಿಗೆ ಬಂದವು. ಸುಮಾರು ಘಂಟೆಗಳ ಕಾಲ  ಅ ಸ್ವೆಗದಲ್ಲಿ ವಿಹರಿಸ್ದ ನಮಗೆ ಆ ಜಾಗ ಬಿಟ್ಟು ಬರಲು ಮನಸೇ ಇರಲಿಲ್ಲ ಆದರೆ  ವಿಧಿಯಿಲ್ಲದೇ ಜಾಗ ಖಾಲಿ ಮಾಡ ಬೇಕಾಯಿತು. ಸನಿಹದಲ್ಲೇ ಹಾರಾಡುತ್ತಿದ್ದ  ಗರುಡ ಪಕ್ಷಿಯು ನಮಗೆ ಶುಭ ವಿದಾಯ ಹೇಳಿತು.



ಶುಭಾಶಯಗಳು ನಿಮಗೆ 


ಅಂದಹಾಗೆ  "ನಿಮ್ಮೊಳಗೊಬ್ಬ ಬಾಲು " ಬ್ಲಾಗ್  ಪ್ರಾರಂಭವಾಗಿ ಇಂದಿಗೆ ಐದು ವರ್ಷ ಪೂರ್ಣವಾಯಿತು. ನನ್ನ ಜ್ಞಾನ ಭಂಡಾರ ಬೆಳೆಯಿತು. ಬ್ಲಾಗ್ ಲೋಕದಲ್ಲಿ  ನಿಮ್ಮೊಳಗೆ ನಾನೂ ಒಬ್ಬನಾಗಿ  ಬೆಳೆಯುತ್ತಿದ್ದೇನೆ . ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ. ಸಂತಸದ ವಿಚಾರ ನಿಮ್ಮೊಡನೆ ಹಂಚಿಕೊಂಡಾಗ ಮನಸ್ಸಿಗೆ ಖುಷಿಯಾಗುತ್ತದೆ. ಈ ವರ್ಷ ದಲ್ಲಿ ೪೨ ಪೋಸ್ಟ್ ಗಳನ್ನು ಪ್ರಕಟಿಸಿದ್ದು. ಅವೆಲ್ಲವನ್ನು ಬಹಳಷ್ಟು ಜನ ಸ್ವಾಗತಿಸಿ ಓದಿ ಹರಸಿದ್ದೀರಿ. ಕಾಮೆಂಟ್ಗಳು ಕಡಿಮೆ ಇರಬಹುದು, ಅದನ್ನು ಓದಿ ಹರಸಿದ ಎಲ್ಲರಿಗೂ ನಾನು ಕೃತಜ್ಞ.  ಇಲ್ಲಿಯವರೆಗೂ ೨೧೫ ಲೇಖನ ಬಂದಿದ್ದು ಅದರಲ್ಲಿ ಜಳ್ಳನ್ನು ಕಳೆದರೆ ಸುಮಾರು ೧೮೦ ಕ್ಕೂ ಹೆಚ್ಚು ನಿಮಗೆ ಒಳ್ಳೆಯ ಮಾಹಿತಿ ಕೊಡುವ ಲೇಖನಗಳು. ಈ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ನನ್ನ ಕೃತಜ್ಞತೆಗಳು.  ಮುಂದಿನ ಹಾದಿಯಲ್ಲಿ ಜೋತ್ಯಾಗಿರಿ, ಒಟ್ಟಿಗೆ ಸಾಗೋಣ. ನಿಮಗೆಲ್ಲ ೨೦೧೩ ರ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು.  

9 comments:

Badarinath Palavalli said...

ಒಂದು ಬ್ಲಾಗ್ ಐದು ವರ್ಷ ತುಂಬುವುದು ಸಾಮಾನ್ಯ ವಿಚಾರವಲ್ಲ. ನಡುವೆ ಮನ ನೊಂದು ಕಳಚಿಕೊಳ್ಳುವವರೇ ಹೆಚ್ಚು. ನಿಮ್ಮ ಬ್ಲಾಗ್ ಸದಾ ನನ್ನ ಮನಸನ್ನು ತೆರೆಯುತ್ತದೆ, ಜ್ಞಾನ ತುಂಬುತ್ತದೆ ಮತ್ತು ಭಾಷೆಯ ಸದ್ಭಳಕೆಯನ್ನು ಹೇಳಿಕೊಡುತ್ತದೆ.

ನಿಮ್ಮ ಎಲ್ಲ ಬ್ಲಾಗುಗಳೂ ಸಹ ಇತಿಹಾಸ, ಪ್ರವಾಸ, ಕಾವ್ಯ ಮತ್ತು ಭಾಷೆಯ ಮೇರು ಶಿಖರಗಳೇ.

ನಿಮ್ಮೊಳಗೊಬ್ಬ ಬಾಲು ಎನ್ನುವಾಗಲೇ ನಿಮ್ಮ ಸರಳತೆಯ ಅನಾವರಣ. ನಮ್ಮನ್ನೂ ನಿಮ್ಮೊಡನೆ ಮುನ್ನಡೆಸಿರಿ.

ಶುಭವಾಗಲಿ.

Badarinath Palavalli said...

ಸನ್ ಬರ್ಡ್, ಮೈನಾ , ಚುಕ್ಕೆ ಮುನಿಯ ಬೀ ಈಟರ್ ಚಿತ್ರಗಳು ಸೂಪರ್.

ಉಳುಬ ಹಳ್ಳದ
ಜಲಪಾತದ ನಡುವೆ
ನೀರ ಸೀರೆಯ
ಒನಪು ಬಿನ್ನಾಣ
ಮೈನವಿರೇಳಿಸುವುದು

ಇಂತಹ ವರ್ಣಮಯ ರಾಜ ಲಾಂಛನ ನನ್ನ ಮನ ಸೂರೇಗೊಂಡಿತು.

ತೂಗು ಸೇತುವೆ ಹಾದಿಯಲ್ಲಿ ಸುಮನ ದೀಪಕ್ ಇದ್ದಾರ?

ಕೊಂಡದಮ್ಮ ಬಯಲು ದೇವಾಲಯದ ಮೆಟ್ಟಿಲು ಎಂತಹ ವರ್ಣಮಯ!

ಶಿಂಷಾ ಚಿತ್ರಗಳಂತೂ ಸೂಪರ್.

ಮುಂದುವರೆಯಲಿ...

ಚಿನ್ಮಯ ಭಟ್ said...

ಬಾಲು ಸರ್..
ಅಭಿನಂದನೆಗಳು ಬ್ಲಾಗಿಗೆ ಐದು ತುಂಬಿದ್ದಕ್ಕೆ...ನಾನೆಲ್ಲೋ ಅರ್ಧ ದಾರಿಯಲ್ಲಿ ನಿಮ್ಮ ಬ್ಲಾಗಿನ ಪಯಣಕ್ಕೆ ಸೇರಿದ್ದೇನೆ..ಆದರೂ ಇಲ್ಲಿನ ತನಕದ ಪ್ರಯಾಣವಂತೂ ಬಹಳ ಖುಷಿಕೊಟ್ಟಿದೆ..ನನಗೆ ಒಂದು ಪ್ರವಾಸವನ್ನು ಹೇಗೆ ಮಾಡಬೇಕು ಎಂಬುದನ್ನು ಹೇಳಿಕೊಡುತ್ತಿರುವ ಬ್ಲಾಗಿದು..
ನನಗೂ ತಿರುಗಾಟಕ್ಕೂ ಅಷ್ಟಕ್ಕಷ್ಟೇ,ಆದರೆ ನೀವು ಓಡಾಡಿಕೊಂಡು ಬಂದು,ಅದರ ಹಿಂದೆ-ಮುಂದಿನದನ್ನೆಲ್ಲಾ ಕೆದಕಿ ಹುಡುಕಿ ಒಂದಿಷ್ಟು ಸುಂದರ ಚಿತ್ರಗಳೊಂದಿಗೆ ಹಾಕುತ್ತೀರಲ್ಲಾ ಅವಾಗ್ಲೇ ನಾವು ಹೋಗಿಬಂದಂತಹ ಅನುಭವ...
ಇವತ್ತಿನದೂ ಒಳ್ಳೆಯ ಬರಹ ಸಾರ್..ಹಿಂದಿನ ಬರಹದಲ್ಲಿ ಹೆದರಿಸಿ ಬಿಟ್ಟಿದ್ದಿರಿ,ಇವತ್ತು ಖುಷಿಯಾಯ್ತು..
ಬರೆಯುತ್ತಿರಿ..
ಮುಂದುವರೆಯಲಿ ನಿಮ್ಮ ಬ್ಲಾಗು-ಯಾನ..
ನಮಸ್ತೆ :)

ಇಬ್ಬನಿಯಹಾಧಿಯಲಿ said...

Baalu sir..... alla..nammalagobba baalannanavre nivu obba blogger agi 5 varshagalalli aneka uthama vicharagalanna mana muttuvanthe bimbisiddiri nimma yasasvi payanakke abinandanegalu nive helidanthe nijavagiyu nammalagobreeeee.............

ಗಿರೀಶ್.ಎಸ್ said...

Once again best wishes on the ocassion of your blog completing five years..
may your journey in the forest,expedition through the lens,knowing the history continues forevr..

Ashok.V.Shetty, Kodlady said...

ಅಭಿನಂದನೆಗಳು ಸರ್......ನನ್ನ ಮೆಚ್ಚಿನ ಬ್ಲಾಗ್ಗಳಲ್ಲಿ ನಿಮ್ಮ ಬ್ಲಾಗ್ ಸಹ ಒಂದು....ಫ್ರೀ ಆಗಿ ನಮ್ಮನ್ನು ಎಲ್ಲಾ ಕಡೆ ತಿರುಗಾಡಿಸ್ತೀರಿ ನೋಡಿ ಅದಕ್ಕೆ..ಹಹಹ. ....ನಿಮ್ಮ ಬ್ಲಾಗ್ ನ ಜನಪ್ರೀಯತೆ ಇನ್ನೂ ಹೆಚ್ಚಾಗಲಿ....

Srikanth Manjunath said...

ಪಂಚ ವಾರ್ಷಿಕ ಪಂಚ ಕನ್ಯೆಯರು, ಪಂಚಾಗ, ಪಂಚ ಪಾಂಡವರು, ಪಂಚೇಂದ್ರಿಯಗಳು, ಪಂಚ ಭೂತಗಳು, ಪಂಚ ಪ್ರಾಣಗಳು...ಹೀಗೆ ಪಂಚ ವರ್ಷಗಳನ್ನು ದಾಟಿಬಂದ ಬಾಲೂ ಸರ್ ಅವರ ಪ್ರವಾಸಿ ಕೋಶ....ಎಲ್ಲವು ಪ್ರಾತಃ ಸ್ಮರಣೀಯ...ನಿಮ್ಮ ಬ್ಲಾಗ್ ಒಂದು ರೀತಿಯ ವೇದ ನಮಗೆ...
ಶಿಂಷಾ ಎಂದ ಕೂಡಲೇ...ಬರಿ ಗಗನಚುಕ್ಕಿ, ಭರಚುಕ್ಕಿ..ಮಧ್ಯ ರಂಗ ನೋಡಿಬರುವ ಪ್ರವಾಸಿ ಮನಸುಳ್ಳವರಿಗೆ ಇದರ ಆಚೆ ಕೂಡ ಭವ್ಯ ಪ್ರಪಂಚ ಇದೆ ಎಂದು ತೋರಿಸಿದ ಲೇಖನ ಮಾಲೆ ಇದು...ವಿದ್ಯುತ್ ಉತ್ಪಾದನ ಕೇಂದ್ರ, ಕಾಮನಬಿಲ್ಲಿನ ಬಣ್ಣಗಳನ್ನೂ ನಾಚಿಸುವ ಮೆಟ್ಟಿಲುಗಳ ಕೊಡಸಮ್ಮ ದೇವಾಲಯ..ಶಿಂಷಾದ ಅಪರೂಪದ ದರ್ಶನ ಎಲ್ಲವು ಮನಸನ್ನು ಸೂರೆಗೊಂಡಿತು..ಕಾಡಿನ ಪ್ರವಾಸ ಎದೆ ಝಲ್ ಎನಿಸುವ ಸೌಂದರ್ಯದ ಜೊತೆಗೆ ಭೀಕರತೆಯನ್ನು ವರ್ಣಿಸುವ ನಿಮ್ಮ ಲೇಖನ ಮಾಲೆ ಸುಂದರ....ಅಭಿನಂದನೆಗಳು ಐದು ವರ್ಷದ ಪ್ರಯಾಣಕ್ಕೆ..ಹೀಗೆ ನಿಮ್ಮ ಲೇಖನದ ಮುತ್ತುಗಳು ಪ್ರಕೃತಿಯ ಮಾತೆಯ ಹಾರದಿಂದ ಬೆಳೆಯುತ್ತ ಹೋಗಲಿ...

Unknown said...

Great write up !!!

Please feel free to share it on www.KannadaVishwa.Com to reach maximum people.

Swarna said...

ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ತೆರೆದದ್ದು ,
ಐದು ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು.
ಪ್ರವಾಸಕ್ಕೆ ನಿಮ್ಮ ಬರಹಗಳು ಸ್ಪೂರ್ತಿ ಮತ್ತು ಮಾಹಿತಿಗಳ ಆಗರ
ನಿಮ್ಮೊಡನೆ ಹೀಗೆ ಸಾಗಲಿ ಅಕ್ಷರಗಳ ಪ್ರವಾಸ