Sunday, June 10, 2012

ಮೈ ದಿಲ್ಲಿ ಹೂ ..............ಪಯಣ.1

ಮೈ ದಿಲ್ಲಿ ಹೂ  ದೆಹಲಿಯ ಲೋಗೋ [ ಚಿತ್ರ ಕೃಪೆ ಅಂತರ್ಜಾಲ.]

ಕಳೆದ ತಿಂಗಳು ಅಂದರೆ ಮೇ ನಲ್ಲಿ ಒಂದು ದಿನ ಹೀಗೆ ಆಫಿಸ್  ಕೆಲಸ ನಡೆದಿತ್ತು. ನನ್ನ ಸಹಚರ ಒಬ್ಬ ಅಣ್ಣಾ ಬಾಸ್  ಕರೀತಿದಾರೆ ನೋಡು ಅಂದಾ. ಯಾಕೆ ಅಂತಾ ಒಳಗೆ ಹೋದೆ , ಬಾಲು,   ಡೆಲ್ಲಿಗೆ ಹೋಗ ಬೇಕು ಈಗಲೇ ರೆಡಿ ಯಾಗಿ ಬಂದುಬಿಡಿ ಅನ್ನೋದೇ!!!.ಅಲ್ಲಾ ಸಾರ್ ಅಂದೇ , ಇಲ್ಲಾ ಅರ್ಜೆಂಟಾಗಿ ಸುಪ್ರೀಂ ಕೋರ್ಟ್ ನಲ್ಲಿ ಕೆಲಸ ಇದೆ ಅದಕ್ಕೆ  ಫ್ಲೈಟ್ ಟಿಕೆಟ್ ಕೂಡಾ ಬುಕ್ ಆಗಿದೆ ಕೂಡಲೇ ಸಿದ್ದರಾಗಿ, ನಾಳೆ  ಬೆಳಿಗ್ಗೆ ಆರು ಘಂಟೆಗೆ ಫ್ಲೈಟು ,ಇವತ್ತು  ರಾತ್ರಿ  ಹನ್ನೊಂದು ಘಂಟೆಗೆ ನಿಮ್ಮ ಮನೆಗೆ ಕಾರ್ ಬರುತ್ತೆ ಅದರಲ್ಲಿ ಬಂದುಬಿಡಿ, ಅಂದ್ರೂ, ವಿಷಯ ಕಟ್ ಮಾಡಿದ್ರೆ ನಾನೂ , ನನ್ನ ಇನ್ನೊಬ್ಬ ಸಹ ಪಾಟಿ, ಹಾಗು ನನ್ನ ಆಫಿಸರ್  ಮುಂಜಾವಿನ  ಫ್ಲೈಟ್ ನಲ್ಲಿ  ಬೆಂಗಳೂರಿನಿಂದ ಹೊರಟೆವು, ರಾತ್ರಿ ನಿದ್ದೆಗೆಟ್ಟ ಪರಿಣಾಮ ವಿಮಾನದಲ್ಲಿ ನಿದ್ದೆ ಬಂದು ಕಣ್ತೆರೆದಾಗ ವಿಮಾನ  ದೆಹಲಿ ನಿಲ್ದಾಣದಲ್ಲಿ ಇಳಿದಿತ್ತು. ಸರಿ ಉಳಿದು ಕೊಳ್ಳಲು ವ್ಯವಸ್ತೆ ಇದ್ದ ಕಾರಣ "ಕರ್ನಾಟಕ ಭವನ -3 " ಕ್ಕೆ ಹೊರಟೆವು, ವಕೀಲರಿಗೆ ಫೋನ್ ಮಾಡಿ ಅವರ ಭೇಟಿಗೆ ವೇಳೆ ನಿಗದಿ ಪಡಿಸಿಕೊಂಡೆವು.ಅವರು ತಾವೂ ಸಹ ಯಾವುದೋ ವಿಚಾರದಲ್ಲಿ ಬ್ಯುಸಿ ಆಗಿದ್ದು ನಾಳೆ ಸಿಗುತ್ತೇನೆ ಅಂತಾ ಹೇಳಿ ಸಮಯ ನಿಗದಿ ಮಾಡಿದರು. ಅಲ್ಲಿಯ ವರೆಗೆ ?? ಏನು ಮಾಡೋದು, ನನ್ನ ಸಹಪಾಟಿ  ವಾಸು ಸಾರ್ ಬನ್ನಿ ಮೆಟ್ರೋದಲ್ಲಿ ಪ್ರಯಾಣ ಮಾಡಿ ಕುತಬ್ ಮಿನಾರ್ ನೋಡೋಣ ಅನ್ನೋದೇ!!
ದೆಹಲಿಯ ಮೆಟ್ರೋ ರೈಲು [ ಕೃಪೆ ಅಂತರ್ಜಾಲ ]
ದೆಹಲಿ ಮೆಟ್ರೋ ಟಿಕೆಟ್ ಕೌಂಟರ್


"ರೋಗಿ ಬಯಸಿದ್ದೂ ಹಾಲು ಅನ್ನಾ" "ವೈಧ್ಯಾ ಹೇಳಿದ್ದೂ  ಹಾಲೂ ಅನ್ನಾ " ಅನ್ನೋ ಹಾಗೆ ಎಲ್ಲರೂ ಜೈ ಅಂದ್ವಿ,ನಾನೂ ದೆಹಲಿಗೆ ಹಲವು ಸಾರಿ ಬಂದಿದ್ದರೂ  ಮೆಟ್ರೋ ಆದಮೇಲೆ ಬಂದಿರಲಿಲ್ಲ.ನಾವಿದ್ದ ಜಾಗದ ಸಮೀಪವೇ ಸುಮಾರು ಎರಡು ಕಿ.ಮೀ. ದೂರದಲ್ಲಿ  "ಮೆಟ್ರೋ  ನಿಲ್ದಾಣ "[A.I.I.M.S] ಇತ್ತು. ಅಲ್ಲಿಂದ "ಕುತಬ್ ಮಿನಾರ್"  ಕಡೆಗೆ ಮೆಟ್ರೋ ಏರಿದೆವು.ನನಗೂ ಮೆಟ್ರೋ ಅನುಭವ ಹೊಸದಾಗಿತ್ತು.ಮೆಟ್ರೋ ನಿಲ್ದಾಣಕ್ಕೆ ಬಂದೆವು, ಬರುತ್ತಿದ್ದಂತೆ ಹೊಸ ಅನುಭವ ನನಗೋ ಅಲ್ಲಿನ ಫೋಟೋ ತೆಗೆಯುವ ಖಯಾಲಿ ಕ್ಯಾಮರಾ ಕ್ಲಿಕ್ಕಿಸುತ್ತ ನಡೆದೇ  ಟಿಕೆಟ್ ಕೌಂಟರ್ ಬಳಿ ಬಂದು ಟಿಕೆಟ್ ಪಡೆದು ಅಲ್ಲಿನ  ಫೋಟೋ ತೆಗೆಯಲು ಶುರುಮಾಡಿದೆ. "ಎ ಬೈ ಇದರ್ ಫೋಟೋ ನಹಿ ಕೀಚ್ ಸಕ್ತ  " ಇಲ್ಲಿ ಫೋಟೋ ತೆಗೆಯ ಬಾರದು ಅಂತಾ ಒಬ್ಬರು ರಕ್ಷಣಾ ಸಿಬ್ಬಂದಿ ಹೇಳಿದರು . ಸರಿ ಅಂತಾ ಹೇಳಿ ಅಲ್ಲಿಂದ ಒಳಗಡೆ ಪ್ರವೇಶ ಪಡೆದು ಮೆಟ್ರೋ ರೈಲು ಹತ್ತಿದ್ದಾಯಿತು. ರೈಲಿನಲ್ಲಿನ ಅನುಭವ ಚೆನ್ನಾಗಿತ್ತು.
ದೆಹಲಿ ಮೆಟ್ರೋ ರೈಲಿನ ಒಳ ನೋಟ


ಶುಚಿಯಾದ ರೈಲುಗಳು, ಅಚ್ಚುಕಟ್ಟಾದ ನಿರ್ವಹಣೆ , ಸಮಯ ಪಾಲನೆ ಯಾವುದೇ ಅಂತರಾಷ್ಟ್ರೀಯ ಗುಣಮಟ್ಟಕ್ಕೂ ಕಡಿಮೆ ಇಲ್ಲದ ವ್ಯವಸ್ತೆ ಮನ ಸೂರೆಗೊಂಡಿತು.ದೆಹಲಿಯ ಸ್ಥಳೀಯ ಪ್ರಯಾಣಕ್ಕೆ ಮೆಟ್ರೋ ಬಹಳ ಸೂಕ್ತ ವಾಗಿದ್ದು ಪ್ರವಾಸಿಗರು ಇದರ ಉಪಯೋಗ ಬಳಸಿಕೊಳ್ಳಬಹುದು. ನಾವಂತೂ ಬಹಳಷ್ಟು ಜಾಗಗಳಿಗೆ ಮೆಟ್ರೋ ಉಪಯೋಗ ಮಾಡಿಕೊಂಡೆವು.ನಮ್ಮ ಬೆಂಗಳೂರಿಗೆ ಪೂರ್ಣ ಪ್ರಮಾಣದ ಮೆಟ್ರೋ ಬಂದಲ್ಲಿ ಜನರಿಗೆ ಆಗುವ ಉಪಯೋಗ ನೆನೆದರೆ ಬಹಳ ಸಂತಸ ವಾಗುತ್ತದೆ.ಇದನ್ನೆಲ್ಲಾ ಮನದಲ್ಲಿ ಕನಸು ಕಾಣುತ್ತಾ  ಇರುವಾಗಲೇ ಕುತಬ್ ಮಿನಾರ್ ಹತ್ತಿರ ಬಂದಿದ್ದೆವು.
ಕುತಬ್ ಮಿನಾರ್ ನ ಒಂದು ನೋಟ.

ಕುತಬ್ ಮಿನಾರ್  ದೆಹಲಿಯ ಐತಿಹಾಸಿಕ ಸ್ಥಳಗಳಲ್ಲೊಂದು , ಆದರೆ ನನಗೂ ಈ ಜಾಗಕ್ಕೂ ಬಹಳ ವಿಚಿತ್ರದ ಸಂಭಂದವಿದೆ.ಬಹಷ್ಟು ಸಾರಿ ದೆಹಲಿಗೆ ಬಂದಿದ್ದರೂ ಮೊದಲ ಸಾರಿ ಇಲ್ಲಿಗೆ ಬಂದದ್ದು ಡಿಸೆಂಬರ್ 1981  ರಲ್ಲಿ , ಆಗಿನ್ನೂ ಕಾಲೇಜಿನ ಪ್ರಥಮ ಪಿ.ಯೂ.ಸಿ. ವಿಧ್ಯಾರ್ಥಿ  ಕಾಲೇಜಿನಿಂದ ಉತ್ತರ ಭಾರತ ಪ್ರವಾಸಕ್ಕೆ ಬಂದಿದ್ದೆ. ಕುತಬ್ ಮಿನಾರ್ ಬಳಿ ಬಂದಾಗ  ಅಲ್ಲಿನ ಇಲ್ಲಿನ ಐತಿಹಾಸಿಕ ಮಾಹಿತಿ ತಿಳಿದು ಸಂತಸ ಗೊಂಡಿದ್ದೆ. ಹಾಗು ಮಿನಾರಿನ ಒಳಗಡೆ ಮೆಟ್ಟಿಲನ್ನು ಏರಿ "ಕುತಬ್ ಮಿನಾರಿನ"  ಮೇಲ್ಭಾಗ ತಲುಪಿ ದೆಹಲಿಯ ಅದ್ಭುತ ನೋಟ ಸವಿದಿದ್ದೆ. ಆಗಿನ್ನೂ ಕ್ಯಾಮರಾ ನನ್ನ ವ್ಯಾಪ್ತಿಗೆ ನಿಲುಕಾದಾಗಿದ್ದ ಕಾರಣ ಫೋಟೋ ತೆಗೆಯಲು ಆಗಲಿಲ್ಲ. ಇದನ್ನು ನೋಡಿಕೊಂಡು ಬಂದ ಮಾರನೆದಿನ ನಾವಿನ್ನೂ ದೆಹಲಿಯಲ್ಲಿ ಇರುವಾಗಲೇ 1981 ರ ಡಿಸೆಂಬರ್ 4  ರಂದು ಈ ಕುತಬ್ ಮಿನಾರ್ ಒಳಗಡೆ ಮೆಟ್ಟಿಲಿನಲ್ಲಿ  ಕಾಲ್ತುಳಿತ ದಿಂದ ಸುಮಾರು 45  ಶಾಲಾ ಮಕ್ಕಳು ಪ್ರಾಣಾ ಕಳೆದುಕೊಂಡರು . ಸಾಲಾಗಿ ಮಲಗಿಸಿದ್ದ ಮಕ್ಕಳ ದೇಹದ ಚಿತ್ರ ಕಣ್ಣ ಮುಂದೆ ಇಂದಿಗೂ ಬರುತ್ತದೆ. ಆನಂತರ ನಾನಿಲ್ಲಿಗೆ ಬಂದಿರಲಿಲ್ಲ. ಹಾಗಾಗಿ ಈ ಸಾರಿ ಅಲ್ಲಿಗೆ ಹೋದಾಗ ಮತ್ತೆ ಆ ನೆನಪು ಕಾಡಿತ್ತು. ಆ ನೆನಪಿನಲ್ಲೇ ಮತ್ತೆ ಕ್ಯಾಮರಾ ದಲ್ಲಿ ಚಿತ್ರ ತೆಗೆಯಲು ಆರಂಭಿಸಿದೆ....................!!!! ಹಳೆಯ ನೆನಪುಗಳು ಮಕ್ಕಳ ಶವ ಮತ್ತೆ ಮತ್ತೆ ಕಾಡಿ  ಕಣ್ಣಲ್ಲಿ ನೀರುಬರಲು ಶುರು ಆಗಿತ್ತು...... ಇಲ್ಲಿಗೆ ಇಷ್ಟು ಸಾಕು ಮತ್ತೆ ಬರುತ್ತೇನೆ ಮುಂದಿನ ಸಂಚಿಕೆಯಲ್ಲಿ ನಮಸ್ಕಾರ.

7 comments:

shivkumark8 said...

niroopane tumba chennagide.....

Badarinath Palavalli said...

ಯಾಕೋ ದೆಹಲಿ ಸಮಾಧಿಗಳ ಮೇಲೆ ಎದ್ದ ನಗರ ಎನ್ನೋ ಮಾತು ನೆನಪಿಗೆ ಬಂತು. ಆ ಮಕ್ಕಳ ಪಾಲಕರು ಎಷ್ಟು ಅತ್ತರೋ ಮತ್ತು ಈಗಲೂ!

ಮೆಟ್ರೋ ಫೊಟೋ ಹಾಕಿ ಹೊಟ್ಟೆ ಉರಿಸಿ ಬಿಟ್ರಿ ಬಾಲಣ್ಣ!!!

manu said...

ಸರ್ ಚೆನ್ನಾಗಿದೆ ಮುಂದಿನ ಸಂಚಿಕೆಗೆ ಕಾಯುತ್ತಿದ್ದೇನೆ
ಮನೋಹರ್ BS

ಮನಸು said...

chennagide lekhana sir. oLLe maahiti jotege nimma trip bagge tiLisidri naavu noDabeku ansutte.

Srikanth Manjunath said...

ಸಿದ್ದತೆಗಳಿಲ್ಲದೆ ದಿಡೀರ್ ಪ್ರಯಾಣ, ಪ್ರವಾಸ ಎಲ್ಲವು ಬಹಳ ಮುದ ಕೊಡುತ್ತೆ..ಕಾರಣ ಮನಸು ಪೂರ್ವಸಿದ್ದತೆ ಇಲ್ಲದೆ ಇದ್ದಾಗ...ನೋಡಿದ ನೋಟ, ಕೇಳಿದ ಮಾತುಗಳು ಎಲ್ಲವು ಸುಂದರವಾಗಿರುತ್ತದೆ..ಇದಕ್ಕೆ ನಿಮ್ಮ ಮೆಟ್ರೋ ಪ್ರಯಾಣ ಉತ್ತಮ ನಿದರ್ಶನ...ಮಾಮೂಲು ಪ್ರಯಾಣವಾಗಬಹುದಿದ್ದ ಮೆಟ್ರೋ ಯಾನ ಕಣ್ಣಲ್ಲಿ ಕುತುಬಿದುವುದು ಬಹುಶಃ ಇದೆ ಕಾರಣಕ್ಕೆ.. ಸ್ಮಾರಕಗಳು ಸ್ಮರಣೆ ಕೊಡುವ ಯಂತ್ರಗಳಾಗಿಬಿದುತ್ತವೆ..ಇದಕ್ಕೆ ಉತ್ತಮ ಉದಾಹರಣೆ ನಿಮ್ಮ ಕುತುಬ್ ಮಿನಾರ್ ಪ್ರವಾಸದ ಚಿತ್ರಣ...ಚಂದದ ಬರಹ ಮುದ್ದಾದ ಚಿತ್ರಗಳು..

prabhamani nagaraja said...

ಉತ್ತಮ ಪ್ರವಾಸ ಬರಹ ಬಾಲು ಸರ್, ಮು೦ದಿನ ಲೇಖನಕ್ಕಾಗಿ ನಿರೀಕ್ಷಿಸುತ್ತೇನೆ. ನನ್ನ ಬ್ಲಾಗ್ ಗೆ ಬನ್ನಿ.

balasubramanya said...

ಲೇಖನ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.