Sunday, April 24, 2016

ಸರ್ ಜಿ ನಾಳೆ ಚನ್ನರಾಯಪಟ್ಟಣಕ್ಕೆ ನೀವ್ ಬರ್ತೀರಾ ಅಷ್ಟೇ ..........!!! ನನ್ ಕಥೆ ಭಾಗ ....01

ಎಲ್ಲರಿಗೂ ನಮಸ್ಕಾರ , ಸುಮಾರು ಆರು ತಿಂಗಳ ನಂತರ  ಬ್ಲಾಗ್ ಬರಹ  ಶುರುಮಾಡಿದ್ದೇನೆ , ನನ್ನದೇ ಆದ ವೈಯಕ್ತಿಕ  ಕಾರಣಗಳು,  ಬ್ಲಾಗ್ ಬರೆಯಲು  ಆಸೆ ಇದ್ದರೂ ಬರೆಯಲಾಗದ   ಅನಿವಾರ್ಯತೆ , ಇತ್ಯಾದಿಗಳ   ಕಾರಣದ ಜೊತೆಗೆ ಸೋಮಾರಿತನ ,  ಹಾಗಾಗಿ ಫೆಸ್ ಬುಕ್ ಲೋಕದಲ್ಲೇ  ಮುಳುಗಿ ಹೋಗಿದ್ದೆ , ಅಂತೂ ಇಂತೂ ಬರೆಯಲು  ಮನಸು  ಬಂದು ಬರೆಯಲು ಶುರು ಮಾಡಿದ್ದೇನೆ . ಮನಸ್ಸು  ವ್ಯಸನ ಮುಕ್ತವಾಗಿ   ಪಕ್ಷಿ ಯಂತೆ   ಗರಿಬಿಚ್ಚಿ   ಹಾರಾಡಿ   ಬರೆಯಲು ಪ್ರೇರಣೆ ನೀಡಿದೆ.


ಮನಸೆಂಬ  ಪಕ್ಷಿ  ಗರಿಬಿಚ್ಚಿದೆ 


ಈ ಬ್ಲಾಗ್ ಲೋಕವೇ ಹಾಗೆ  ಬರೆಯುವ ಕಿಚ್ಚನ್ನು  ಸದಾ ಹೊತ್ತಿಸಿಯೇ  ಇರುತ್ತದೆ, ಅದಕ್ಕೆ ತಕ್ಕಂತೆ  ತಿದ್ದಿ ತೀಡುವ   ಬ್ಲಾಗ್ ಗೆಳೆಯರ   ದಂಡು,  ಇನ್ನು ಇವರೋ   ನಮ್ಮ  ಒಡಹುಟ್ಟಿದವರಲ್ಲಾ, ಜೊತೆಯಲ್ಲಿ ಓದಿದವರಂತೂ  ಅಲ್ಲವೇ ಅಲ್ಲಾ , ಕೆಲಸದಲ್ಲಿನ   ಗೆಳೆಯರೇ  ಉ  ಹೂ  ಅದೂ ಅಲ್ಲಾ  , ಆದರೆ   ಅಕ್ಷರದ ಮೂಲಕ   ಬ್ಲಾಗ್ ಲೋಕದಲ್ಲಿ ಪರಿಚಿತರಾಗಿ    ನನ್ನ ಹೃದಯದಲ್ಲಿ   ನೆಲೆಸಿ   ನಮ್ಮವರೇ   ಆಗಿಬಿಟ್ಟಿದ್ದಾರೆ,  ಒಬ್ಬರೇ ಇಬ್ಬರೇ   ಹೇಳುತ್ತಾ ಹೋದರೆ  ಹನುಮನ   ಬಾಲವಾದೀತು ,   ಆದರೂ ಎಲ್ಲರೂ   ಒಂದಲ್ಲಾ  ಒಂದು ರೀತಿ ನನ್ನ ಜೀವನಕ್ಕೆ ಸ್ಪೂರ್ತಿ  ತುಂಬಿರುವುದಂತೂ ನಿಜಾ .

ಇಂತಹ ಗೆಳೆಯರ ಲಿಸ್ಟ್  ನಲ್ಲಿ ಒಬ್ಬರಾದ   ನಮ್ಮ ಶ್ರೀ ಕಾಂತ್  ಮಂಜುನಾಥ್     ಅಂದು ರಾತ್ರಿ ದೂರವಾಣಿ ಮೂಲಕ  ಕರೆದಿದ್ದರು   "ಸರ್ ಜಿ   ನಾಳೆ ಚನ್ನರಾಯಪಟ್ಟಣಕ್ಕೆ  ನೀವ್ ಬರ್ತೀರಾ   ಅಷ್ಟೇ ..........!!!"   "ನಾಳೆ ಬೆಳಿಗ್ಗೆ  ೯ ಘಂಟೆಗೆ  ನಿಮ್ಮ ಮನೆಗೆ ಬರ್ತೇನೆ  ರೆಡಿ ಇರೀ, "  "ಅಲ್ಲಿಂದ  ನನ್ನ ಕಾರ್  ನಲ್ಲಿ ಚನ್ನರಾಯಪಟ್ಟಣಕ್ಕೆ  ಹೋಗೋಣ ", "ನೀವು ಸಪ್ಪಗೆ ಇರೋದನ್ನು ನೋಡೋಕೆ ಆಗ್ತಾ ಇಲ್ಲಾ  ," "ಕಳೆದ ವಾರ ನಿಮ್ಮನ್ನ ಭೇಟಿಯಾದಾಗ  ನೀವು  ಸಹಜವಾಗಿ ಇರಲಿಲ್ಲ ", "ಯಾಕೋ ನನಗೂ ನಿಮ್ಮ ನಗು  ಮಿಸ್ ಆಗ್ತಾ ಇತ್ತು, " "ಅದಕ್ಕೆ  ಅನ್ನಿಸಿತು ಫೋನ್ ಮಾಡಿದೆ , ನಾಳೆ ಹೇಗೂ ಸೆಕಂಡ್ ಸಾಟರ್ಡೆ , ರಜಾ ಇದೆ ನೀವು ಬನ್ನಿ ಒಂದು ಚೇಂಜ್  ಇರುತ್ತೆ   ನಿಮ್ಮ ಮನಸಿಗೂ ಹಿತವಾಗುತ್ತೆ"ಅಂತಾ  ಪ್ರೀತಿಯ ಆಹ್ವಾನ ನೀಡಿದರು,  ಯಾರಿಗೂ ಹೇಳದ  ನನ್ನ ನೋವನ್ನು  ಅವರು ಗಮನಿಸಿದ್ದು   ಅಚ್ಚರಿಯಾಯ್ತು,


ಚಿತ್ರ  ಕೃಪೆ  ಪ್ರದೀಪ್ ರಾವ್ 


 ಈ ನಮ್ಮ ಶ್ರೀಕಾಂತ್ ಮಂಜುನಾಥ್ ಹಾಗೆ  ಒಮ್ಮೆ ಗೆಳೆತನ  ಶುರು ಆದ್ರೆ ನಿಮ್ಮ ಮನಸನ್ನು ಸೀದಾ  ಹೊಕ್ಕಿಬಿಡುವ   ಸಹೃದಯಿ,   ಎಷ್ಟು ಹೊಗಳಿದರೂ   ಕಡಿಮೆ  ಇವರ ಬಗ್ಗೆ,  ಇನ್ನು ಈ ಯಪ್ಪನ  ಮಾತು ಕೇಳದೆ ಹೋದ್ರೆ   ನನ್ನ ಹುಟ್ಟಿದ ಹಬ್ಬಕ್ಕೆ ಯಾವ್ದಾದ್ರೂ  ದೇವರನ್ನು  ಕರೆದುಕೊಂಡು  ಬಂದು  ಲ್ಯಾಪ್ಟಾಪ್ , ಮೊಬೈಲ್ ಫೋನ್ , ಹೀಗೆ  ಏನಾದರೂ ಕೈಗೆ ಕೊಟ್ಟು, ಆ ದೇವರುಗಳ ಬಾಯಲ್ಲಿ  ನನ್ನ ಗುಣಗಾನ   ಮಾಡಿಸಿ    ಸೇಡು ತೀರಿಸಿಕೊಳ್ಳುವ   ಭೀತಿ ಕಾಡಿ ,  ಸರಿ ಶ್ರೀಕಾಂತ್ , ಬರ್ತೀನಿ ಆದ್ರೆ ಒಂದು ಕಂಡಿಶನ್   ನೀವು ಮೈಸೂರಿಗೆ ಬರೋದು ಬೇಡ , ನಾನೇ ಮೈಸೂರಿನಿಂದ   ಚನ್ನರಾಯ ಪಟ್ಟಣಕ್ಕೆ   ಬರುತ್ತೇನೆ  ಅಂತಾ   ಪೂಸಿ  ಹೊಡೆದು  ಒಪ್ಪಿಸಿದೆ. ಕಟ್ ಮಾಡಿದ್ರೆ  ಮಾರನೆಯದಿನ   ಮೈಸೂರಿನಿಂದ   ಚನ್ನರಾಯ ಪಟ್ಟಣದ  ಬಸ್ ಹತ್ತಲು   ಬಸ್ ನಿಲ್ದಾಣಕ್ಕೆ  ಬಂದಿದ್ದೆ.

ನನ್ನನ್ನು  ಚನ್ನರಾಯ ಪಟ್ಟಣಕ್ಕೆ  ಕರೆದುಕೊಂಡು  ಹೋದ  ಕೆಂಪು ಬಸ್ಸು 


ಯಾರ್ರೀ   ಚನ್ನರಾಯಪಟ್ಟಣ   ಅಂತಾ  ಕಂಡಕ್ಟರ್  ಕೂಗ್ತಾ ಇದ್ದರು,  ಆದರೂ ಈ ಬಸ್ಸು ಹತ್ತಲು ಮನ ಹಿಂಜರಿಯುತ್ತಿತ್ತು,  ಬೇರೆ ಯಾವ್ದಾದ್ರೂ   ಬಸ್ಸು ಇದ್ಯಾ ಅಂತಾ   ವಿಚಾರಿಸಿದೆ, ಸಧ್ಯಕ್ಕೆ   ಯಾವ್ದೂ  ಇಲ್ಲಾ  ಅಂದರು  ಅಲ್ಲಿದ್ದ ಟೀ.ಸಿ. , ಇನ್ನೇನು  ಬಸ್ಸು ಹತ್ತಿ ಮಲಗಿ ಬಿಡೋಣ ಅಂತಾ ಲೆಕ್ಕ ಹಾಕಿ    ಟಿಕೆಟ್  ಪಡೆದು ಬಸ್ಸು  ಹತ್ತಿ ಕಿಟಕಿ ಪಕ್ಕ ಕುಳಿತೆ,  ಮೈಸೂರು   ಬಸ್ ನಿಲ್ದಾಣ ಬಿಟ್ಟ ಬಸ್ಸು   ಸ್ವಲ್ಪ ದೂರ  ಬಂದಿತ್ತು, ಸಂತ  ಫಿಲೋಮಿನ  ಚರ್ಚ್  ಸಮೀಪದ ಸರ್ಕಲ್   ತಿರುವಿ ಬಲಕ್ಕೆ  ಹೊರಟಿತ್ತು ಅಷ್ಟೇ   ಧಡ್ ಅಂದ ಶಬ್ದ   , ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿದ   ಡ್ರೈವರ್ , ನಾವೆಲ್ಲರೂ ಇಳಿದು ನೋಡಿದ್ರೆ  ರಸ್ತೆ  ಪಕ್ಕದಲ್ಲಿ ನಿಲ್ಲಿಸಿದ್ದ    ಒಂದು ಸಿಟಿ ಬಸ್ಸು  ಈ ಬಸ್ಸು ಬರುವುದನ್ನು ಗಮನಿಸದೆ    ಚಲಿಸಿ,  ನಮ್ಮ ಬಸ್ಸಿನ  ಹಿಂಭಾಗದ  ಎಡ ಪಾರ್ಶ್ವಕ್ಕೆ  ಗುದ್ದಿತ್ತು, ಒಂದೆರಡು ಕ್ಷಣ ಮುಂಜೆ  ಈ ಬಸ್ಸು ಚಲಿಸಿದ್ದರೆ   ನಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ   ತೊಂದ್ರೆ   ಆಗ್ತಾ ಇತ್ತು,   ಬಸ್ಸಿನಿಂದ ಇಳಿದು   ವಾಪಸ್ಸು ಹೊರತು ಹೋಗೋಣಾ  ಅಂತಾ  ಮನಸಾಯಿತು, ಆದ್ರೆ  ಇನ್ನೊಂದು ಮನಸು   ಅಯ್ಯೋ  ವಿಚಿತ್ರ ಕಣಯ್ಯ  ನೀನು  ಇಂತಹ ಸಣ್ಣ ಪುಟ್ಟ ಘಟನೆ ಆಗ್ತಾ ಇರುತ್ತೆ  ಇದನ್ನೆಲ್ಲಾ ಅಪಶಕುನಾ  ಅಂತಾ  ಭಾವಿಸಿದರೆ  ಜೀವನ ನಡೆಸೋದೆ ಕಷ್ಟಾ  ,  ನಡೀ. ನಡೀ, ಬಸ್ಸು ಹತ್ತು ಅಂತಾ ಪ್ರೇರೇಪಿಸಿಯ್ತು, ಅಷ್ಟರಲ್ಲಿ   ಎರಡೂ ಬಸ್ಸಿನವರು ರಾಜಿಯಾಗಿ  ನಮ್ಮ ಪಯಣ ಸಾಗಿತು.  ಬಸ್ಸಿನಲ್ಲಿ  ನಿದ್ದೆ ಹೊಡೆಯೋಣ  ಅಂದ್ರೆ ಕಿಟಕಿ ಗಾಜಿನ  ಗಡ   ಗಡ  ಸದ್ದಿಗೆ    ಸಾಧ್ಯವೇ ಆಗಲಿಲ್ಲ,  ಒಂದು ಕಡೆ ಬಿಸಿಲಿನ  ತಾಪ ಸಹ  ಕಾಡಿತ್ತು,  ಪ್ರಯಾಣ ಪ್ರಯಾಸವಾಗಿ ಚನ್ನರಾಯ ಪಟ್ಟಣ  ತಲುಪಿದೆ,

ಚನ್ನರಾಯ ಪಟ್ಟಣ  ಮುಖ್ಯ ರಸ್ತೆ 

 ಚನ್ನರಾಯ ಪಟ್ಟಣ  ಬಸ್ ನಿಲ್ದಾಣದಿಂದ  ಶ್ರೀ ಕಾಂತ್ ಗೆ  ಫೋನ್ ಮಾಡಿದ್ರೆ  , "ಸರ್ ಜಿ  ಇಲ್ಲೇ ಇದ್ದೇನೆ   ಬಸ್ ನಿಲ್ದಾಣದ ಮುಂದಿನ ಆಟೋ ಸ್ಟಾಂಡ್ ಬಳಿ ಬನ್ನಿ" ಅಂದ್ರು .   ಹೊರಗೆ ಬಂದ್ರೆ   ಮಾಲಿಕನ ಜೊತೆ ritz ಕಾರು ನಗುತ್ತಾ ನಿಂತಿತ್ತು.   ನಮ್ಮಿಬ್ಬರ ಪಯಣ  ಶುರು  ಆಯ್ತು, ಕಾರು  ಚನ್ನರಾಯ ಪಟ್ಟಣದ  ಕಡೆಯಿಂದ    ಹಾಸನ   ರಸ್ತೆಯಲ್ಲ್ಲಿ  ಸಾಗಿತ್ತು,  ಹೊಟ್ಟೆ   ಹಸಿವಾದ ಕಾರಣ   ದಾರಿಯಲ್ಲಿ  ಸಿಕ್ಕ   ಕಾಮತ್ ಹೋಟೆಲ್ ನಲ್ಲಿ ಭರ್ಜರಿ  ಊಟದ  ಬ್ಯಾಟಿಂಗ್  ನಡೆಸಿ ,  ಶ್ರೀಕಾಂತ್  ಕಸಿನ್   ಅವರ   ಆಶ್ರಮದ    ತೋಟಕ್ಕೆ   ಹೋದೆವು

.
ಭೂಮಿತಾಯಿಯ   ಹಸಿರ ಮಡಿಲಲ್ಲಿ  ಜ್ಞಾನಿಯ ಜೊತೆ 



ದಾರಿಯುದ್ದಕ್ಕೂ  ಈ ಕೀಟಲೆ ಶ್ರೀಕಾಂತ್  ಅವರ ಕಸಿನ್ ಗೆ  ಫೋನ್ ಮಾಡಿ ನಾನು ಒಬ್ಬನೇ ಬರ್ತಾ ಇರೋದಾಗಿ ಹೇಳ್ತಾ ಇದ್ದರು,     , ಕೊನೆಗೆ    ಶ್ರೀಕಾಂತ್   ನನ್ನ ಜೊತೆ  ಇಳಿದದ್ದನ್ನು ಕಂಡು  ಅವರ ಕಸಿನ್ ಅವರಿಗೆ ಬಹಳ ಖುಷಿಯಾಯಿತು,  ಪ್ರೀತಿಯ ಸ್ವಾಗತ , ಪರಸ್ಪರ ಪರಿಚಯ  ಆಯಿತು.  ಸಾಕಷ್ಟು ಮಾತು ಕಥೆ, ಅಲ್ಲಿ ನಡೆದಿದ್ದ   ದಾರ್ಮಿಕ ಚಟುವಟಿಕೆಗಳು ಹಾಗು ಕೃಷಿ ಚಟುವಟಿಕೆಗಳ  ಪರಿಚಯ ಮಾಡಿಕೊಟ್ಟರು . ನಾವೂ ಸಹ ಖುಷಿಯಿಂದ  ಇಡೀ ಜಮೀನಿನಲ್ಲಿ ಓಡಾಡಿದೆವು , ತೆಂಗಿನ  ಗಿಡಗಳಿಗೆ  ನೀರು ಹಾಯಿಸಲು  ಖುಷಿಯಿಂದ  ಹೊರಟೆವು. ಹಾಗೂ ಹೀಗೂ   ಸುಮಾರು ಹೊತ್ತು ಕಳೆದೆವು,  ಶ್ರೀಕಾಂತ್  ಕಸಿನ್ ಅವರಿಂದ  ಪ್ರೀತಿಯಿಂದ  ಬೀಳ್ಕೊಟ್ಟು   ಮತ್ತೆ ಚನ್ನರಾಯ ಪಟ್ಟಣಕ್ಕೆ ಬಂದೆವು,.   "ಸರ್ಜಿ    ಮೈಸೂರಿಗೆ  ಬಂದು ನಿಮ್ಮನ್ನು ಬಿಟ್ಟು ಬೆಂಗಳೂರಿಗೆ ಹೋಗ್ತೇನೆ"  ಅಂತಾ  ಶ್ರೀಕಾಂತ್   ಒತ್ತಾಯ ಶುರು ಮಾಡಿದ್ರು    ಆದರೆ ಮತ್ತೆ  ನನ್ನಿಂದ  ನಯವಾದ ನಿರಾಕರಣೆ,   ಹಾಗು ಹೀಗೂ ಹಗ್ಗ ಜಗ್ಗಾಡಿ ಒಲ್ಲದ ಮನಸಿನಿಂದ   ನನ್ನನ್ನು ಚೆನ್ನರಾಯ ಪಟ್ಟಣದ  ಬಸ್ ನಿಲ್ದಾಣದ  ಮುಂಭಾಗ  ರಸ್ತೆಯಲ್ಲಿ  ಇಳಿಸಿದರು, ಮತ್ತೊಮ್ಮೆ ಶ್ರೀಕಾಂತ್ ಗೆ  ಪ್ರೀತಿಯ  ಹಾರೈಕೆ  ಹೇಳಿದೇ , ಶ್ರೀಕಾಂತ್ ಕಾರು ಬೆಂಗಳೂರಿನ ಕಡೆ  ಹೊರಟಿತ್ತು  ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ, .............!!!  ಅಷ್ಟರಲ್ಲಿ        ...........!!!


 
 ಜೀವನದ  ದೋಣಿ  ಹೊಡೆತಕ್ಕೆ ಸಿಕ್ಕಿ   ಅಲುಗಾಡುತ್ತಿತ್ತು, ...........!


1 comment:

Badarinath Palavalli said...

ಬ್ಲಾಗಿಗ ಹಿಂದಿರುಗಿದ ತಮಗೆ ಶರಣು.

ಶ್ರೀಮಾನ್ ಮತ್ತು ತಮ್ಮ ಗೆಳೆತನ ಚಿರಾಯುವಾಗಲಿ.

ಮುಂದಿನ ಕಂತುಗಳಲ್ಲಿ ನಾವು ತಿಳಿದುಕೊಳ್ಳಬೇಕಾದ ಮಾಹಿತಿಗಳಿವೆ.

ತಾವು ಖುಷಿಯಾಗಿದ್ದರೆ ಅಷ್ಟೇ ಸಾಕು ನಮಗೆ ಬಾಲಣ್ಣ.