Monday, October 15, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.8, ಸೊಂಧೆ ವಾಧಿರಾಜರ ಭಕ್ತಿ ದರ್ಶನ ಮಾಡೋಣ ಬನ್ನಿ .






ಬನ್ನಿ ನಿಮಗೆ ಸ್ವಾಗತ 


ಸ್ವರ್ಣವಲ್ಲಿ ಮಠದ ದರ್ಶನ ಮಾಡಿ ತೆರಳಿದ ನಾವು  ಬೈಕ್ ಹತ್ತಿ    ಸಾಗಿದೆವು...................ಐದು ಕಿ.ಮೀ. ದೂರದ  ಶ್ರೀ ವಾಧಿರಾಜ ಮಠದ  ಸನ್ನಿಧಿ  ನೋಡಲು. ಬೈಕ್  ಸೋಂದಾ ವಾಧಿರಾಜ ಮಠದ ಅಂಗಳ ತಲುಪಿದಾಗ  ಸೂರ್ಯನ ಪ್ರತಾಪ ಜೋರಾಗಿತ್ತು. ವಾಧಿರಾಜರು ನಡೆದಾಡಿದ ಪುಣ್ಯ ಭೂಮಿ ನಮ್ಮನ್ನು ಸ್ವಾಗತಿಸಿತು. ಸೋಂದೆ ನೆಲದ ವಿಶೇಷ ಎಂದರೆ  ಜೈನ ಧರ್ಮ,  ಶಂಕರಾಚಾರ್ಯರು  ಪ್ರತಿಪಾದಿಸಿದ ಅಧ್ವೈತ  ಸಿದ್ಧಾಂತ ತಳಹದಿಯ  ಸ್ವರ್ಣವಲ್ಲಿಮಠ,  ಮಧ್ವಾಚಾರ್ಯರು  ಪ್ರತಿಪಾದಿಸಿದ   ದ್ವೈತ  ಸಿದ್ಧಾಂತ ತಳಹದಿಯ  ವಾಧಿರಾಜಮಠ, ಇವುಗಳನ್ನು  ಅಕ್ಕರೆಯಿಂದ ಪೊರೆದದ್ದು  ಈ ಹೆಮ್ಮೆಯ ನೆಲ. ಇವತ್ತಿಗೂ ಕೂಡ ಇಲ್ಲಿಯ ಜನ ತಮ್ಮ ಪಾಡಿಗೆ ತಾವು  ನಂಬಿದ  ಧರ್ಮ ಸಿದ್ದಾಂತ ಗಳಿಗೆ ಅನುಗುಣವಾಗಿ ಶಾಂತಿಯಿಂದ ನಡೆದುಕೊಂಡು ಯಾವುದೇ ಘರ್ಷಣೆ ಇಲ್ಲದೆ  ಪರಸ್ಪರ ಗೌರವದಿಂದ  ಸೌಹಾರ್ಧವಾಗಿ ಜೀವಿಸಿದ್ದಾರೆ. ಇಂತಹ ನೆಲದ ಮಣ್ಣಿನಲ್ಲಿ ನಮ್ಮನಡಿಗೆ  ಸಾಗಿತ್ತು, ಮನದಲ್ಲಿ ಇಲ್ಲಿನ ಜನರ ಬಗ್ಗೆ , ಮಣ್ಣಿನ ಬಗ್ಗೆ ಗೌರವ ಮೂಡಿತ್ತು.



ಶ್ರೀ ಮದ್  ವಾದಿರಾಜರು


 ಎಲ್ಲಾ ಪುಣ್ಯ ಕ್ಷೇತ್ರಗಳಿಗೂ ಇರುವಂತೆ ಈ  ಕ್ಷೇತ್ರಕ್ಕೂ ತನ್ನದೇ ಆದ ವಿಶೇಷವಾದ ಇತಿಹಾಸವಿದೆ. ಈ ಕ್ಷೇತ್ರವನ್ನು ಆಳಿದ ಅರಸರ ಬಗ್ಗೆ ಈಗಾಗಲೇ ಹಿಂದಿನ ಸಂಚಿಕೆಗಳಲ್ಲಿ ಹೇಳಿದ್ದೇನೆ  , ಬನ್ನಿ  ವಾಧಿರಾಜರ  ಬಗ್ಗೆ ತಿಳಿಯೋಣ. ಶ್ರೀ ಮದ್ ವಾಧಿರಾಜರ  ಜನನ ಕ್ರಿ. ಶ . 1480 ರಲ್ಲಿ ದಕ್ಷಿಣ ಕನ್ನಡ ದ   ಉಡುಪಿ ಜಿಲ್ಲೆಯ "ಹೂವಿನ ಕೆರೆ" ಎಂಬಲ್ಲಿ ಆಗುತ್ತದೆ. ಬಡ ಕುಟುಂಬದಲ್ಲಿ ಹುಟ್ಟಿದ ಕೂಸಿಗೆ  "ಭೂವರಾಹ" ಎಂಬ ಹೆಸರನ್ನು ಇತ್ತು ಪೋಷಿಸುತ್ತಾರೆ. 5 ವರ್ಷ  ಕಳೆದು ಉಪನಯನ ಮಾಡಿ ಜ್ಞಾನ ಹಾದಿಯಲ್ಲಿ ಮಗುವು ಸಾಗಲಿ ಎಂಬ ಆಸೆಯಿಂದ  ಮಗುವನ್ನು ತಂದೆ ತಾಯಿಗಳು "ಶ್ರೀ ವಾಗಿಶ ತೀರ್ಥ" ರಿಗೆ   ಒಪ್ಪಿಸುತ್ತಾರೆ.    ಶ್ರೀ ವಾಗಿಶತೀರ್ಥರ ಶಿಷ್ಯರಾದ "ವಿದ್ಯಾನಿಧಿತೀಥ೯" ರ  ಬಳಿ  ಮಗುವು ತನ್ನ ಜ್ಞಾನದ ಹಣತೆಗೆ ಬೆಳಕನ್ನು ಪಡೆಯುತ್ತದೆ .ಶ್ರಿ ವಾಗಿಶತೀರ್ಥರು  ತಮ್ಮ ಬಳಿ   ಜ್ಞಾನ ದರ್ಶನ ಪಡೆದ ಬಾಲಕನಿಗೆ  ಸನ್ಯಾಸವಿತ್ತರು. "ವಾದಿರಾಜ ತೀರ್ಥ " ಎ೦ದು ಕರೆದು ತಮ್ಮ ಸ೦ಸ್ಥಾನದ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾರೆ.. ಸನ್ಯಾಸನ೦ತರವೂ ಕೆಲವು ಕಾಲದ ವರೆಗೆ   ''ಶ್ರೀ ವಾಗಿಶತೀರ್ಥ'' ರಲ್ಲಿ ವಿದ್ಯಾಬ್ಯಾಸ ಮುಂದುವರೆಯುತ್ತದೆ.


ಹಯಗ್ರೀವ  ಮೂರ್ತಿ [ ಚಿತ್ರ ಕೃಪೆ  ಅಂತರ್ಜಾಲ ವಾಧಿರಾಜ ಮಠ]




ನಂತರ ಗುರುಗಳ ಅನುಮತಿ ಪಡೆದು ಜ್ಞಾನ ಸಂಚಾರ ಮಾಡುತ್ತಾರೆ. ಆ ಸಮಯದಲ್ಲಿ ವಣ೯ಕಾರನೂಬ್ಬನು ಪ೦ಚಲೋಹದ ಗಣೇಶನನ್ನು ರಚನೆ ಮಾಡುವ ವೇಳೆ  ಎಷ್ಟೇ ಪ್ರಯತ್ನಿಸಿದರೂ  ಗಣೇಶನ ರೂಪ ತಾಳದೆ ಅದುವರೆಗೂ ಕಾಣದ ಒಂದು ರೂಪವನ್ನು ತಾಳುತ್ತಿರುತ್ತದೆ. ಅವನ  ಬಹಳಷ್ಟು ಪ್ರಯತ್ನ ವ್ಯರ್ಥವಾಗಿ   ಆ ಪ್ರತಿಮೆಯನ್ನು ಒ೦ದು ಮೂಲೆ ಯಲ್ಲಿಟ್ಟು ಚಿ೦ತಾಕ್ರಾ೦ತನಾಗಿ ಸುಮ್ಮನಿದ್ದನು. ವಾದಿರಾಜರು ಅಕಸ್ಮಾತ್ತಾಗಿ ಆ ಊರಿಗೆ  ಬರುತ್ತಾರೆ . ಆ ಸಮಯದಲ್ಲಿ , ಒ೦ದು ರಾತ್ರಿ ಹಯಗ್ರೀವ ದೇವರು ಸ್ವಣ೯ಕಾರನ ಕನಸಿನಲ್ಲಿ ಬ೦ದು "ಇಲ್ಲಿಗೆ ಬ೦ದಿರುವ ಯತಿಗಳಿಗೆ ನನ್ನನ್ನು ಕೊಟ್ಟುಬಿಡು" ಎ೦ದು ಹೇಳಿದಂತೆ ಆಗುತ್ತದೆ.. ವಾದಿರಾಜರಿಗೂ ಸ್ವಪ್ನದಲ್ಲಿ ಹಯಗ್ರೀವ ದೇವರು ದಶ೯ನ ಕೊಟ್ಟು "ನಾನು ನಿನ್ನಿ೦ದ ಪೂಜೆಯನ್ನು ಸ್ವೀಕರಿಸಲು ಬರುವೆನು" ಎ೦ದರು. ಮರುದಿನ ಸ್ವಣ೯ಕಾರನು  ಹಯಗ್ರೀವ ದೇವರನ್ನು ತ೦ದೊಪ್ಪಿಸಿದನು. ಆ ಪ್ರತಿಮೆಯನ್ನು  ಸ್ವೀಕರಿಸಿ  ಆವಾಹಿಸಿ ಪೊಜೆ ಮಾಡಲು ಪ್ರಾರಂಭ ಮಾಡುತ್ತಾರೆ... ಅವರ ಭಕ್ತಿಗೆ ಮೆಚ್ಹಿದ ಹಯಗ್ರೀವ ದೇವನು, ಅವರು ಕೊಟ್ಟ ಕಡಲೆಯ ಹೊರಣದ ಭಕ್ವ್ಯವನ್ನು ಕುದುರೆಯ ರೂಪದಿ೦ದ ಬ೦ದು ಮೆಲ್ಲುತ್ತಿದ್ದನು. ಆ ಭಕ್ಷ್ಯವನ್ನೇ  ಇಂದಿಗೂ "ಹಯಗ್ರೀವ"  ಎಂಬ ಹೆಸರಿನಿಂದ ಕರೆಯುತ್ತಾರೆ. ವಿಶೇಷ ದಿನಗಳಲ್ಲಿ "ಮಧ್ವ ಪಂಥದ ಬ್ರಾಹ್ಮಣರು "  ತಮ್ಮ ಮನೆಗಳಲ್ಲಿ ಈ " ಹಯಗ್ರೀವ " ಭಕ್ಷ್ಯವನ್ನು  ತಯಾರಿಸಿ ದೇವರಿಗೆ  ನೈವೆಧ್ಯ ಮಾಡುತಾರೆ. ಹಯಗ್ರೀವ ದೇವರು ತನ್ನ ಮು೦ಗಾಲುಗಳನ್ನು ವಾದಿರಾಜರ ಹೆಗಲುಗಳಲ್ಲಿಟ್ಟು "ಹಯಗ್ರೀವ ಭಕ್ವ್ಯವನ್ನು" ಸ್ವೀಕರಿಸಿ ಸ್ವಲ್ಪ ಪ್ರಸಾದ ಉಳಿಸಿ ಹೋಗುತ್ತಿದ್ದರು.  ಫಾಲ್ಗುಣ ಕ್ರಷ್ಣ ದ್ವಿತಿಯ ತಿಥಿಯಲ್ಲಿ ಶ್ರೀವಾದಿರಜರು  ಶಾಲಿವಾಹನ ಶಕ ೧೫೨೨ ನೇ ಶಾವ೯ರಿ ಫಾಲ್ಗುಣ ಕ್ರುಷ್ಣ ಪಕ್ಷ ತ್ರತಿಯ ಬುಧವಾರ ಸ್ವಾತಿ ನಕ್ಷತ್ರದಲ್ಲಿ ಶ್ರೀಮದ್ವಾದಿರತಿಥ೯ರು ವೃಂದಾವನ ಪ್ರವೇಶ ಮಾಡಿ ದೇಹತ್ಯಾಗ ಮಾಡುತ್ತಾರೆ. .ಎಂಬ ಪೌರಾಣಿಕ ಇತಿಹಾಸವನ್ನು ನೀವಿಲ್ಲಿ ಕೇಳಬಹುದು


ಸೋಂದೆ  ದೇವಾಲಯದ  ರಥದ ದರ್ಶನ 


ಗರುಡ ಗಂಬ 
ನಾವು ಇಲ್ಲಿಗೆ ಕಾಲಿಟ್ಟಾಗ  ನಮಗೆ ಕಾಣ ಸಿಕ್ಕಿದ್ದು ಸುಂದರವಾಗಿ ಅಲಂಕರಿಸಿದ್ದ  ರಥ , ಅದರ ದರ್ಶನ ಪಡೆದು ಸಾಗಿದ ನಮಗೆ   ಕಾಣ ಸಿಕ್ಕಿದ್ದು ಸುಮಾರು 70 ಅಡಿಗೂ ಮೀರಿದ "ಗರುಡಗಂಬ"  ಅದರಲ್ಲಿ ಗಮಸಿದರೆ ಹಂಸವಾಹಾರ ರಾಜರ ವಿಗ್ರಹ, ಹಾಗು ತುದಿಯಲ್ಲಿ ನಿರ್ಮಿಸಲಾಗಿರುವ ಮಂಟಪದಲ್ಲಿ ಸರುದ ದೇವರ ಮೂರ್ತಿ  ಕಾಣ ಸಿಗುತ್ತದೆ.

ಐತಿಹಾಸಿಕ ದೇವಾಲಯ
ದೇವಾಲಯ ಪ್ರವೇಶ ದ್ವಾರ 



ನಂತರ ದೇವಾಲಯ ಬಳಿ  ಬಂದ ನಮಗೆ  ಕಂಡಿದ್ದು ಪುರಾತನ ದೇವಾಲಯ ಕಟ್ಟಡ. ಪ್ರವೇಶ ದ್ವಾರದಲ್ಲಿ ಪ್ರಶಾಂತವಾದ ವಾತಾವರಣದ ಸ್ವಾಗತ . ಮಧ್ವ ಮಠದ ಭಕ್ತರ ಪುಣ್ಯ ಕ್ಷೇತ್ರ ಆದ ಕಾರಣ  ಭಕ್ತರು ದರ್ಶನ ಪಡೆದು ಹೊರಬರುತ್ತಿದ್ದರು. ದೇವಾಲಯದ  ಮುಂಬಾಗ ಭಕ್ತರನ್ನು  ಸ್ವಾಗತಿಸಲು ನಿಂತಿದ್ದ ಎರಡು ದೊಡ್ಡ ಬೊಂಬೆಗಳು ದೇವಾಲಯದ ಅಲಂಕಾರ ಹೆಚ್ಚಿಸಿದ್ದವು, ಒಳಗೆ ಹೋದ ನಾವು ವಾಧಿರಾಜರ ಬೃಂದಾವನ ದರ್ಶನ ಪಡೆದು  ಪುನೀತರಾಗಿ ಹೊರಬಂದೆವು.




 ಹೊರಗೆ ಬಂದ ನಮಗೆ  ಹಸಿವು ಕಾಡತೊಡಗಿ  ಹೊಟ್ಟೆ ತುಂಬಿಸಿಕೊಳ್ಳಲು  ಹೊರಟೆವು.  ಬಿಸಿಲಿನ ತಾಪಕ್ಕೆ  ಧಣಿದ ದೇಹ  ನೆರಳಿನ ಆಸರೆ ಬಯಸಿತ್ತು.  , ಹಾಗೆ ನಡೆಯುತ್ತಾ ಬಂದು ಅಲ್ಲೇ ಇದ್ದ ಒಂದು ಸಣ್ಣ ಹೋಟೆಲ್  ಬಳಿ ಬಂದೆವು., ಸಾರ್ ಈಗ ಮೂರು ಘಂಟೆ ಊಟ ಇಲ್ಲಾ , ಇಡ್ಲೀ ಇದೆ ಕೊಡಲಾ ಅಂದರು  ಹೋಟೆಲ್ ನವರು,  ಸರಿ ಎಂದು ಅದನ್ನೇ ಕೊಡಿ ಎಂದು ಹೇಳಿ  ಇಡ್ಲೀ ಸಾಂಬಾರ್ ತಿನ್ನಲು  ಆರಂಭಿಸಿದೆವು, ಹಸಿದ ಹೊಟ್ಟೆ ಆ ಇಡ್ಲೀ ಬೆಳಿಗ್ಗೆ  ಮಾಡಿದ್ದು   ಎಂಬ ಸತ್ಯ ಗೊತ್ತಾಗಿದ್ದರೂ  ಉಸಿರು ಬಿಚ್ಚದೆ ಅದನೆ ತನ್ನ ಒಡಲಿಗೆ ಸೇರಿಸಿಕೊಂಡಿತ್ತು , ಸೋಂದೆ ವಾಧಿರಾಜರ  ಕ್ಷೇತ್ರದಲ್ಲಿ ನೋಡುವ ಮತ್ತಷ್ಟು ಜಾಗಗಳನ್ನು  ನೋಡುವ ಹುಮ್ಮಸ್ಸು ಇಳಿದು  ಮಾತೊಮ್ಮೆ ಇಲ್ಲಿಗೆ ಪ್ರತ್ಯೇಕವಾಗಿ ಬಂದು  ವಿವರವಾಗಿ ನೋಡೋಣ ಎಂದು ತೀರ್ಮಾನಿಸಿ  ಅಲ್ಲಿಂದ  ಹರ್ಷನ  ಬೈಕ್ ಏರಿ ಹೊರಟೆ, ........ ಯಾವತ್ತೂ ಈ ರೀತಿ ಮಾಡದ ನಾನು  ಈ ತೀರ್ಮಾನಕ್ಕೆ ಬಂದೆ ,  ಆ ತೀರ್ಮಾನದ ಹಿಂದೆ ನನಗಿದ್ದ ಅಲ್ಪ ಸಮಯದಲ್ಲಿ ನೋಡ ಬೇಕಾದ  ಹಲವು ಜಾಗಗಳನ್ನು ನೋಡುವ ದುರಾಸೆ  ಮನೆಮಾಡಿತ್ತು.  ಆ ದುರಾಸೆಯಲ್ಲಿ ಪ್ರಥಮ  ಸ್ಥಾನ ಪಡೆದಿತ್ತು  ..............ಬನವಾಸಿ !!!ಹರ್ಷನಿಗೆ ಹೇಳಿದ್ದೆ ತಡ  ಬನ್ನಿ ಸಾರ್ ಈಗಲೇ ಹೊರಡೋಣ ಅಂತಾ  ಬೈಕ್ ಏರಿ ಸ್ಟಾರ್ಟ್ ಮಾಡಿದ .  ವೇಗವಾಗಿ ಹೋಗುತ್ತಿತ್ತು ಬೈಕು . ......................... "ಆರ್ ಅಂಕುಶ vittodam  ನೆನೆವುದೆನ್ನ ಮನಂ  ಬನವಾಸಿ ದೇಶವಂ" ಎಂಬ   ಮಾತನ್ನು ಮನದಲ್ಲಿ  ನೆನೆಯುತ್ತಾ  ಕಾತರದಿಂದ  ಬನವಾಸಿ ನೋಡಲು ಉಸಿರು ಬಿಗಿ ಹಿಡಿದು ಬೈಕಿನಲ್ಲಿ ಕುಳಿತಿದ್ದೆ.  ................!!!!   

Friday, October 12, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.7,ಸ್ವರ್ಣವಲ್ಲಿ ಮಠದ ಸನ್ನಿಧಿಯಲ್ಲಿ.!!!

ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಸನ್ನಿಧಿ.


 ಸೋಂದೆ ಅರಸರ ಕೋಟೆಯ ನೋಡಿ ಒಮ್ಮೆ ನಿಟ್ಟುಸಿರು ಬಿಟ್ಟು   ನಾನೂ ಹರ್ಷ  ಹೊರಟೆವು................ನಮ್ಮನ್ನು ಬೀಳ್ಕೊಟ್ಟ ಕೋಟೆ   ಮತ್ತೆ ಯಾವಾಗ  ಬರುವೆ ಎಂಬಂತೆ  ಕೇಳಿದಂತೆ ಆಯಿತು.  ನಮ್ಮ ಪಯಣ ಮುಂದೆ ಸಾಗಿತು..............ಮುಂದೆ ಸಾಗಿದ ನಮ್ಮ ಬೈಕು  ನಿಂತಿದ್ದು   ದಾರಿಯಲ್ಲಿ ಸಿಕ್ಕ ಒಂದು ಮ್ಯೂಸಿಯಮ್ಮಿನ  ಬಳಿ.................!!!! ಸೋಂದೆ ಕೋಟೆಯಿಂದ ಸ್ವರ್ಣವಲ್ಲಿ ಮಠದ ಕಡೆ ನಮ್ಮ ಬೈಕ್ ತೆರಳುತ್ತಿತ್ತು. ದಾರಿಯಲ್ಲಿ ಕಣ್ಣಿಗೆ  ಮ್ಯೂಸಿಯಂ  ಎಂಬ ಫಲ ನೋಡಿ , ಹರ್ಷ ಸ್ವಲ್ಪ ನಿಲ್ಲಿ  ಮ್ಯೂಸಿಯಂ  ನೋಡೋಣ ಎಂದೇ, ಇಬ್ಬರೂ ಮ್ಯೂಸಿಯಂ  ನೋಡಲು ಒಳ ಹೊಕ್ಕೆವು, ಅಲ್ಲಿದ್ದ ವ್ಯಕ್ತಿ ಒಬ್ಬರು  ನಮ್ಮನ್ನು ನೋಡಿ ಪತ್ರಕರ್ತರೆಂದು ತಿಳಿದು, ನಗು ಮುಖದಿಂದ ಸ್ವಾಗತಿಸಿದರು. ಮ್ಯೂಸಿಯಂ  ಒಳ ಹೊಕ್ಕ ನಮಗೆ ಅಂತಹ ವಿಶೇಷವೇನೂ ಕಾಣಲಿಲ್ಲ, "ಇನ್ನೂ ಸಾಕಷ್ಟು ಬರಬೇಕಿದೆ ಸಾರ್ , ಈಗಷ್ಟೇ ಎಲ್ಲಾ ತಯಾರಿ ನಡೆದಿದೆ" ಎಂದರು  , ಹಾಗೆ ಒಮ್ಮೆ ಕಣ್ಣಾಡಿಸಿ ಹೊರಬಂದೆ, ವಿಶೇಷವನ್ನು ಕಾಣಲು ಹಾತೊರೆದಿದ್ದ ನನಗೆ  ನಿರಾಸೆ ಆಗಿತ್ತು.
ಬನ್ನಿ ನಿಮಗೆ ಸ್ವಾಗತ.


ಅಲ್ಲಿಂದ ಮುಂದೆ ಸಾಗಿ  ಶ್ರೀ ಸೋಂದಾ ಸ್ವರ್ಣವಲ್ಲಿ  ಮಠದ  ಸನ್ನಿಧಿ ತಲುಪಿದೆವು. ಶ್ರೀ ಸೋಂದಾ ಸ್ವರ್ಣವಲ್ಲಿ ಮಠಕ್ಕೆ ತನ್ನದೇ ಆದ ಭವ್ಯ. ಇತಿಹಾಸವಿದೆ. ಬನ್ನಿ ಸ್ವಲ್ಪ ತಿಳಿಯೋಣ."ಆದಿ ಜಗದ್ಗುರು ಶಂಕರಾಚಾರ್ಯ" ಪರಂಪರೆಯಲ್ಲಿ   ಸ್ವರ್ಣವಲ್ಲಿ ಮಠದ ಉಗಮ ಕಾಶಿಯ [ವಾರಣಾಸಿ] "ದಶಾಶ್ವ ಘಾಟ್ " ನಲ್ಲಿ ಆಗುತ್ತದೆ. ಇದರ ಮೊದಲ ಸ್ವಾಮಿಗಳಾಗಿ "ಶ್ರೀ ವಿಶ್ವವಂಧ್ಯ ಸರಸ್ವತಿ" ಯವರು ಪ್ರಥಮವಾಗಿ ಶ್ರೀ  ಮಠದ ಚುಕ್ಕಾಣಿ  ಹಿಡಿಯುತ್ತಾರೆ. ಆನಂತರ ವಿವಿಧ ಕಾಲಕ್ಕೆ ಅನುಗುಣವಾಗಿ  ಶ್ರೀ ಮಠವು" ಕಾಶಿಯಿಂದ ಉಜ್ಜಯಿನಿ" , "ಉಜ್ಜಯಿನಿ ಇಂದ ಗೋಕರ್ಣ"  "ಗೋಕರ್ಣದಿಂದ ಕಡತೋಕೆ"  "ಕಡತೋಕೆ ಯಿಂದ ಸಹಸ್ರಲಿಂಗ" ಕೊನೆಗೆ  "ಸಹಸ್ರ ಲಿಂಗದಿಂದ  ಈಗ ಇರುವ ಸೋಂದೆ ಸ್ವರ್ಣವಲ್ಲಿ" ಗೆ ಸ್ಥಳಾಂತರ  ಗೊಂಡಿದೆ.

ಶ್ರೀ ಮಠದ ಬೆಳವಣಿಗೆಯಲ್ಲಿ ಶ್ರೀ ಮಠ ಇದ್ದ ಪ್ರದೇಶದ  ಆಳ್ವಿಕೆ ನಡೆಸಿದ  "ಕಾಶಿ ರಾಜ"  "ಉಜ್ಜಯಿನಿ ವಿಕ್ರಮಾದಿತ್ಯ"  "ವಿಜಯನಗರ ಅರಸರು" " ಚಂದಾವರದ ಚಂದ್ರ ಸೇನ" "ಸುಧಾಪುರದ  ನರಸಿಂಹ ಭೂಪಾಲ" "ಮಂಜುಗುಣಿ ಅರಸರು" ಸೋಂದೆ  ಅರಸರು, ಕೆಳದಿಯ ಅರಸರು, ಈ ಪ್ರದೇಶವನ್ನು ಆಳಿದ  ನಾಯಕ ವಂಶಸ್ಥರು  ಸ್ವರ್ಣವಲ್ಲಿ ಮಠಕ್ಕೆ  ತಮ್ಮ ಸೇವೆ ಮಾಡಿ  ಭೂದಾನ, ಆರ್ಥಿಕ ಸಹಾಯ ,ಆಶ್ರಯ ಕೊಟ್ಟು ಪೋಷಿಸಿದ್ದಾರೆ.ಆನಂತರ  ಟಿಪ್ಪೂ ಕಾಲದಲ್ಲಿ, ಬ್ರಿಟೀಷರ ಕಾಲದಲ್ಲಿಯೂ  ಈ ಶ್ರೀ ಮಠದ ಆಡಳಿತಕ್ಕೆ, ಸಂಪ್ರದಾಯಗಳಿಗೆ ತಕ್ಕ ಮನ್ನಣೆ ದೊರಕಿದೆ. ಸೋಂದಾ ಅರಸ ನರಸಪ್ಪ ನಾಯಕರು ಕ್ರಿ.ಶ .1556 ರಲ್ಲಿ ಈ ಮಠಕ್ಕೆ  ಭೂದಾನ ಮಾಡಿ ದೇಗುಲಗಳನ್ನು ಕಟ್ಟಿಸಿಕೊಟ್ಟು ತಮ್ಮ ಭಕ್ತಿ ಮೆರೆದಿದ್ದಾರೆ .

ಶ್ರೀ ಮಠದ  ಸ್ವಾಮಿಗಳು.


ಈ ಮಠದ  ಅನುಯಾಯಿಗಳಾದ  "ಹವ್ಯಕ ಬ್ರಾಹ್ಮಣರ"  ಇತಿಹಾಸವೂ  ಸಹ ಈ ಮಠದ ಪರಿಸರದ ಬೆಳವಣಿಗೆಯ ಜೊತೆಯಲ್ಲೇ ಸಾಗಿದೆ. ಅದರಂತೆ ಹವ್ಯಾಕರೂ ಸಹ  ಈ ಶ್ರೀ ಮಠಕ್ಕೆ ಗೌರವದಿಂದ ನಡೆದುಕೊಳ್ಳುತ್ತಾರೆ .  ಹವ್ಯಕರು ಈ" ಶ್ರೀ ಮಠ"  ವನ್ನು "ಹೊನ್ನಳ್ಳಿಮಠ"  ಎಂದು ಕರೆಯುತ್ತಾರೆ.

ಭವ್ಯವಾದ ಸುಧರ್ಮ ಸಭಾಂಗಣ 




ಸುಧರ್ಮ ಸಭಾ ಭವನದ ಒಳನೋಟ.

ಹಾಲಿ ಶ್ರೀ ಮಠವು ಸಮಾಜಮುಖಿ  ಕಾರ್ಯದಲ್ಲಿ ತೊಡಗಿದ್ದು, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ತಿಳಿದುಬರುತ್ತದೆ, ಮಠದ ಒಳ ಹೊಕ್ಕ ನಾವು, ಸುಧರ್ಮ ಸಭಾಂಗಣ  ನೋಡಿ  ಅಚ್ಚರಿಯಾಯಿತು,  ಸಾವಿರಾರು ಜನರು ಕುಳಿತುಕೊಳ್ಳಬಹುದಾದ  ವಿಶಾಲ ಸಭಾಂಗಣ ಅದು. ಅಲ್ಲೇ ವೇದಿಕೆಯ ಮೇಲೆ ಇಡಲಾಗಿದ್ದ ಮರದ ಆಸನ  ಗಮನ ಸೆಳೆಯಿತು. ಮುಂದುವರೆದು ಶ್ರೀ ಮಠದ ಆವರಣದಲ್ಲಿರುವ "ಶ್ರೀ ಚಂದ್ರಮೌಳೇಶ್ವರ  ಸ್ವಾಮೀ"  ದರ್ಶನ ಪಡೆದೆವು. ಅಲ್ಲಿನ ಸಂಪ್ರದಾಯ ಗೌರವಿಸಬೇಕಾದ  ಕಾರಣ  ಮೂಲ ದೇವರ ಛಾಯಾಚಿತ್ರ ತೆಗೆಯಲಿಲ್ಲ. ಅಲ್ಲೇ ಸನಿಹದಲ್ಲಿ ಕೆಲವು ವಟುಗಳು ವೇಧ ಘೋಷ  ಮಾಡಿದ್ದರು , ಭಕ್ತಿ ಮೂಡಿಸುವ ಆ ಸನ್ನಿವೇಶ  ಮನಕ್ಕೆ ಮುದನೀಡಿತು.


ಅಡಿಕೆ ಹಣ್ಣು [ ಅಡಿಕೆ ಗೋಟು ]


ಅಡಿಕೆ ಬೇಯಿಸುವ  ಒಲೆ 
 ,
ಚಂದ್ರ ಮೌಳೇಶ್ವರ  ಸನ್ನಿಧಿಯಿಂದ ಹೊರ ಬಂದ ನಾವು  ಗೋಶಾಲೆ ಕಡೆಗೆ ತೆರಳಿದೆವು. ಹಾದಿಯಲ್ಲೇ ಅಡಿಕೆ ಹಣ್ಣು [ ಗೋಟು ಅಡಿಕೆ ] ತುಂಬಿದ ಬಿದಿರಿನ  ಬುಟ್ಟಿಗಳು ಕಂಡವು ಹಾಗು  ಅಡಿಕೆ  ಬೇಯಿಸಲು ಬಳಸುವ ಒಲೆ  ಕಣ್ಣಿಗೆ ಬಿತ್ತು , ಹೌದು   ಶ್ರೀ ಮಠದ ವತಿಯಿಂದ ಅಡಿಕೆ ಬೆಳೆ  ಕಾರ್ಯ ಮಾಡುತಿದ್ದು,  ಉತ್ತಮ ಪ್ರಯೋಗ ಮಾಡುತ್ತಿರುವುದಾಗಿ ತಿಳಿದುಬಂತು. ಹಾಗೆ ಸಾಗಿ ಗೋಶಾಲೆ  ಒಳಗೆ ಕಾಲಿಟ್ಟೆವು,

ಗೋಶಾಲೆಯ ದರ್ಶನ 




 ಅಚ್ಚರಿ ನಮಗೆ ದರ್ಶನ ನೀಡಿದ್ದು  ವಿವಿಧ ಬಗೆಯ ತಳಿಯ ಆರೋಗ್ಯಕರ ಹಸುಗಳು, ಪ್ರತೀ ಹಸುವಿಗೂ ಸುಂದರ ಹೆಸರುಗಳನ್ನೂ ಇಡಲಾಗಿದೆ,  ಭಾಗೀರತಿ, ಶಾಲ್ಮಲೆ , ಕಾಮಧೇನು ಇತ್ಯಾದಿ, ಗೋಶಾಲೆ ತುಂಬಾ ವ್ಯವಸ್ತಿತವಾಗಿತ್ತು, ಅಲ್ಲಿನಹೋರಿಗಳು,  ಹಸುಗಳು, ಹಸುವಿನ ಕರುಗಳು  ನಿರಾಳವಾಗಿ ಮೇವು ತಿಂದು  ಜೀವಿಸಲು ಬಹಳ ಆಧುನಿಕ ವ್ಯವಸ್ಥೆ ಮಾಡಲಾಗಿದೆ, ಶುಚಿತ್ವ ಕಾಪಾಡಲಾಗಿದೆ. ಹೈನುಗಾರಿಗೆಯಲ್ಲಿ  ತನ್ನದೇ ಕ್ರಾಂತಿ ಮಾಡುವತ್ತ ಸಾಗುತ್ತಿದೆ ಈ  ಶ್ರೀ ಮಠ. ಹಾಗು ತಳಿ ಅಭಿವೃದ್ಧಿಯಲ್ಲೂ ಸಹ  ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ . ದೇವಾಲಯ ನಿರ್ಮಿಸಿ  ಪೂಜೆ ಮಾಡುವುದಷ್ಟೇ ಕಾರ್ಯವಲ್ಲಾ  ತಾನೂ ಸಹ ಸಮಾಜ ಮುಖಿ ಕಾರ್ಯ ನಡೆಸಿ  ವ್ಯವಸಾಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಸಾಗಿದೆ ಈ ಸನ್ನಿಧಿ.  ಸೋಂದೆ ಸ್ವರ್ಣವಲ್ಲಿ  ಮಠದ  ದರ್ಶನ  ಮನಕ್ಕೆ ಮುಧ ನೀಡಿತ್ತು,  ಮನ ತುಂಬಿ "ಹರ್ಷ ತುಂಬಾ ಥ್ಯಾಂಕ್ಸ್ ಕಣ್ರೀ, ನನ್ನನ್ನೂ ಈಜಾಗಕ್ಕೆ  ಕರೆದುಕೊಂಡು ಬಂದಿದ್ದಕ್ಕೆ " ಅಂತಾ ನನ್ನ ಕೃತಜ್ಞತೆ ತಿಳಿಸಿದೆ.  "ಅಯ್ಯೋ ಅದಕ್ಯಾಕೆ ಇಷ್ಟೊಂದು  ಭಾವುಕರಾಗ್ತೀರಿ ಬಾಲಣ್ಣ  ಬನ್ನಿ ಮುಂದೆ ಹೋಗೋಣ" ಹೇಳಿದ.

ಮಠದ  ಅಂಗಳದಲ್ಲಿ  ಜಿಂಕೆಗಳ ದರ್ಶನ 


ಅಲ್ಲೇ ಕಂಡಿದ್ದು ಒಂದು ಕಡೆ ಜಿಂಕೆಗಳ ದರ್ಶನ ವಾಯ್ತು. ಪ್ರೀತಿಯಿಂದ  ಹತ್ತಿರ ಹೋಗಿ ಮೈಮುಟ್ಟಿ ಸಂತಸ ಪಟ್ಟೆವು. ನಮಗೆ ಇಲ್ಲೇನು ಕೊರತೆ ಇಲ್ಲಾ  ಎನ್ನುವಂತೆ ಅವುಗಳು ಓಡಾಡುತ್ತಿದ್ದವು. ನಮ್ಮ ಪ್ರೀತಿ ಸಲ್ಲಿಸಿ  ಅಲ್ಲಿಂದ ತೆರಳಿದ ನಾವು  ಬೈಕ್ ಹತ್ತಿ    ಸಾಗಿದೆವು...................ಐದು ಕಿ.ಮೀ. ದೂರದ  ಶ್ರೀ ವಾಧಿರಾಜ ಮಠದ  ಸನ್ನಿಧಿ  ನೋಡಲು.

Saturday, October 6, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.5 ಮುತ್ತಿನಕೆರೆಯಲ್ಲಿ ಹೆಕ್ಕೋಣ ಬನ್ನಿ ಸ್ವಲ್ಪ ಇತಿಹಾಸ!!!



ಮುತ್ತಿನ ಕೆರೆ 

  "ಸೋಂದೆ  ಅರಸರ ಗದ್ದಿಗೆ"  ಯಿಂದ ಸುಮಾರು ಎರಡು ಮೂರು ಕಿ.ಮೀ. ಕ್ರಮಿಸಿದ ನಮ್ಮನ್ನು ಸ್ವಾಗತ ಮಾಡಿದ್ದು ಒಂದು ಮುತ್ತಿನ ಕೆರೆ  ,ಅದರ ಸನಿಹ ಒಂದು ವೆಂಕಟರಮಣ ದೇವಾಲಯ.............ಅದರ ಹೆಸರು ಸುಧಾಪುರ !!!!! ಪಕ್ಕದಲ್ಲೇ ಒಂದು ಜೈನ ದಿಗಂಬರ ದೇವಾಲಯ  ಸುಂದರ ಪ್ರಶಾಂತವಾದ ಪ್ರದೇಶ. ಸುತ್ತಲೂ ಹಸಿರು ಪರಿಸರದ ನಡುವೆ  "ಸುಧಾಪುರ"  ಇತಿಹಾಸ ಬೆರೆತು ಹೋಗಿದೆ.


ಮುತ್ತಿನ ಕೆರೆಗೂ ಒಂದು ಇತಿಹಾಸವಿದೆ.


ಬನ್ನಿ ಮೊದಲು ಮುತ್ತಿನ ಕೆರೆಗೆ ಹೋಗೋಣ  , ಸಾಮಾನ್ಯವಾಗಿ ನಾವು ನೋಡುವ ಯಾವುದೇ ಕೆರೆ ಬಗ್ಗಡದ ನೀರನ್ನು ಹೊಂದಿ   ಪಾಚಿ ತುಂಬಿಕೊಂಡು  ದರ್ಶನ ನೀಡುತ್ತವೆ. ಆದರೆ ಅಚ್ಚರಿ ಎಂದರೆ  ಈ ಮುತ್ತಿನ ಕೆರೆ ತಿಳಿ ನೀರಿನಿಂದ ಕೂಡಿ ತನ್ನ ಸುತ್ತಲ ಪರಿಸರಕ್ಕೆ  ಕನ್ನಡಿಯಾಗಿ ಕಂಗೊಳಿಸಿತ್ತು. ಸುತ್ತಲೂ ಮೆಟ್ಟಿಲುಗಳನ್ನು ನಿರ್ಮಿಸಿದ್ದು  ಚೌಕಾಕೃತಿಯನ್ನು  ಹೊಂದಿದೆ .ಈ ಕೆರೆಯನ್ನು" ಜೈನ ಮಹಾರಾಣಿ ಬೈಲಾದೇವಿ"  ತನ್ನ ಪತಿಯ ಕಾಯಿಲೆ ವಾಸಿಯಾಗುವಂತೆ ಹರಸಿಕೊಂಡು ತನ್ನ ಮೂಗುತಿಯ ನತ್ತಿನಲ್ಲಿದ್ದ ಮುತ್ತಿನ ಬೆಲೆಯಿಂದ  ಈ ಕೆರೆಯನ್ನು ನಿರ್ಮಿಸಿದಳೆಂದೂ , ಅದಕ್ಕೆ ಈ ಕೆರೆಯನ್ನು ಮುತ್ತಿನ ಕೆರೆ ಎಂದು ಕರೆಯುವುದಾಗಿ  ಹೇಳಲಾಗುತ್ತದೆ.  ಮತ್ತೊಂದು ವಿಚಾರ ಮುತ್ತಿನಕೆರೆ , ಸೋಂದಾ , ಸುಧಾಪುರ , ಸ್ವಾದಿ ಎಲ್ಲಾ ಹೆಸರುಗಳನ್ನೂ  ಒಂದೇ ಪ್ರದೇಶಕ್ಕೆ ಕರೆಯುತ್ತಾರೆ  ಈ ಬಗ್ಗೆ ಮುಂದೆ ತಿಳಿಯೋಣ. .
ಸ್ವಾದಿ ದಿಗಂಬರ  ಅಕಲಂಕ  ಪೀಟ [ ಜೈನ ಬಸದಿ]


ಈ ಕ್ಷೇತ್ರ  ಜೈನ ಕ್ಷೇತ್ರ ಆಗಿತ್ತೆಂಬ ಬಗ್ಗೆ  ಸನಿಹದಲ್ಲೇ ಜೈನ ಧರ್ಮದ  ದಿಗಂಬರ ಬಸದಿ ದರ್ಶನ ನೀಡುತ್ತದೆ.ಇದು ಜೈನರಿಗೂ ಕೊಡ ಪವಿತ್ರ ಯಾತ್ರಾ ಸ್ಥಳ.  ಬಸದಿ ಬಾಗಿಲು ಮುಚ್ಚಿದ್ದ ಕಾರಣ ಒಳಗಡೆ ಹೋಗಿ ನೋಡಲಾಗಲಿಲ್ಲ . ಅಲ್ಲಿಂದ ತೆರಳಿ ಸನಿಹದಲ್ಲೇ ಇದ್ದ  ಮುತ್ತಿನಕೆರೆ ಸಂಕಟ ಹರ ವೆಂಕಟರಮಣ  ದೇವಾಲಯ ತಲುಪಿದೆವು.ಹಾಗೆ ಮತ್ತೊಂದು ವಿಚಾರ ಸ್ವಾದಿ ಕ್ಷೇತ್ರಕ್ಕೆ ಜೈನ ಧರ್ಮವು ಬಹಳ ಹಿಂದೆ ಅಂದರೆ ಸುಮಾರು 2 ಅಥವಾ 3 ನೇ  ಶತಮಾನದಲ್ಲಿ ಬಂತೆಂದು ಹೇಳುತ್ತಾರೆ. ಈ ದೇವಾಲಯದಲ್ಲಿ ಆದಿನಾಥ ಹಾಗು ಚಂದ್ರ ಪ್ರಭ ಮೂರ್ತಿಗಲಿರುವುದಾಗಿ ತಿಳಿದು ಬರುತ್ತದೆ.ಕ್ರಿ.ಷ.900 ರಲ್ಲಿ ಸ್ವಾಧಿ ಕ್ಷೇತ್ರಕ್ಕೆ  ಶ್ರವಣಬೆಳಗೊಳದ ರುವಾರಿ   "ಚಾವುಂಡ ರಾಯರ "  ಮಗ "ಜಿನದೇವ " ಹಲವು ಸೌಲಭ್ಯಗಳನ್ನು  ಕಲ್ಪಿಸಿದನೆಂದು ಹೇಳುತ್ತಾರೆ.


ಮುತ್ತಿನಕೆರೆ  ಶ್ರೀ ವೆಂಕಟರಮಣ ದೇವಾಲಯ.


ದೇವಾಲಯದ ಆವರಣಕ್ಕೆ  ಬಂದ ನಮಗೆ  ಒಂದು ಗುಂಪಿನೊಡನೆ ದೇವಾಲಯದ ಅರ್ಚಕರು ಹೊರಗೆ ಬರುತ್ತಿದ್ದರು  ನಾವು ದೇವಾಲಯವನ್ನು ಪ್ರವೇಶಿಸಲು ಹೋಗುತ್ತಿದ್ದಂತೆ  ತಮಗೂ ಇದಕ್ಕೂ ಸಂಬಂಧ ವಿಲ್ಲದಂತೆ  ಆವರಣದ ಗೇಟ್  ಮುಚ್ಚಿಕೊಂಡು  ಬೀಗಹಾಕದೆ ತೆರಳಿದರು.  ಇನ್ನೇನು ಮಾಡೋದು ನಾವೇ ಬಾಗಿಲನ್ನು ತೆಗೆದು ದೇವಾಲಯದ ಪ್ರವೇಶ ಪಡೆದೆವು. ಮೆಟ್ಟಿಲುಗಳನ್ನು ಹತ್ತಿದ ನಮಗೆ ಸ್ವಾಗತ ನೀಡಿದ್ದೆ  ವಿಶಿಷ್ಟ ವಾದ "ಗರುಡ ಕಂಭ"  , ಎತ್ತರದ ಕಲ್ಲಿನ ಕಂಭ ತನ್ನದೇ  ಆದ  ವೈಶಿಷ್ಟ್ಯ  ಹೊಂದಿದೆ . ಕ್ಯಾಮರದಲ್ಲಿ  ಲೆನ್ಸ್ ಜೂಮ್  ಮಾಡಿದೆ  ಅಚ್ಚರಿಯಾಯಿತು,

ಎತ್ತರದ ಗರುಡ ಕಂಭ 




ನಾನು ಬಹುಷಃ ಯಾವುದೇ ದೇವಾಲಯದಲ್ಲಿ ನೋಡಿರಲಿಲ್ಲ ಎತ್ತರದ   "ಗರುಡ ಕಂಭ " ದ ಮೇಲಿನ ತುತ್ತ  ತುದಿಯಲ್ಲಿ ಒಂದು ಸುಂದರ ಮಂಟಪ ಸಿರ್ಮಿಸಿ  ವಿಷ್ಣು ವಾಹನ  "ಗರುಡ ಮೂರ್ತಿ" ಯನ್ನು  ಸ್ಥಾಪಿಸಿದ್ದರು .  ಬಹಳ ಅಪರೂಪದ  ಚಿತ್ರ  ಮನಸೆಳೆಯಿತು.



ಸುಂದರ ಕೆತ್ತನೆಯ  ಕಲ್ಲಿನ ಗೋಡೆ 

ಕಲ್ಲಿನಲ್ಲಿ ಅರಳಿದ ಕಲೆ 


ದೇವಾಲದ ಸುತ್ತಲೂ  ಅಂದದ ಚಲುವಿನ ಚಿತ್ತಾರ 



ದೇವಾಲಯ ಚಾವಣಿಯ ದೃಶ್ಯ 

ದೇವಾಲಯ ಪ್ರದಕ್ಷಿಣೆ  ಹೊರಟೆ  ಆ ದೇವಾಲಯದಲ್ಲಿ ಹಾಕಿದ್ದ  ಫಲಕದಲ್ಲಿ  ಈ ದೇವಾಲಯ ಹದಿನೇಳನೆ  ಶತಮಾನದಲ್ಲಿ ನಿರ್ಮಾಣವಾಯಿತೆಂದು  ತಿಳಿಸಲಾಗಿದೆ.  ಹಾಗಿದ್ದರೆ  ಹದಿನೇಳನೆ ಶತಮಾನದಲ್ಲಿ  ಈ ಪ್ರದೇಶದಲ್ಲಿ  ಆಳ್ವಿಕೆಯಲ್ಲಿದ್ದ   "ಸೋಂದಾ ರಾಜ ಇಮ್ಮಡಿ  ಸದಾಶಿವ ರಾವ್ " ಕಾಲದಲ್ಲಿ ನಿರ್ಮಿತ ಆಗಿರುವುದೇ ಎಂಬ ಬಗ್ಗೆ  ಸಂಶೋಧನೆ ಅಗತ್ಯ ವಿದೆ.  ದೇವಾಲಯದಲ್ಲಿನ ಕಲಾಕೃತಿಗಳು  "ವಿಜಯನಗರ " ಹಾಗು "ಕದಂಭ "ಶೈಲಿಯನ್ನು  ಹೋಲುತ್ತವೆ  ಆದರೂ ಈ ದೇವಾಲಯದಲ್ಲಿ ನನ್ನ ಕಣ್ಣಿಗೆ  ಯಾವುದೇ  ಶಾಸನ ಕಂಡು ಬರಲಿಲ್ಲ. ದೇವಾಲಯ  ಹೊರ ಆವರಣ ಪ್ರದಕ್ಷಿಣೆ  ಬಂದು ದೇವಾಲಯ ಪ್ರವೇಶ ಮಾಡಿದೆವು.

ದೇವಾಲಯ  ಒಳ ಆವರಣ.


ಮುತ್ತಿನಕೆರೆ  ಶ್ರೀ ವೆಂಕರಮಣ ಸ್ವಾಮೀ   ದರ್ಶನ 
ಹೊರಗೆ ಬಿಸಿಲಿನ ಝಳ  ಜೋರಿದ್ದರೆ ದೇವಾಲಯ ಒಳಗೆ ತಣ್ಣನೆ  ವಾತಾವರಣ  ಮನಸಿಗೆ ಶಾಂತಿ ನೀಡಿತು. ಒಳ ಆವರಣದಲ್ಲಿ ಹಾಗೆ ಕಣ್ಣು ಆಡಿದವು ವಿಷ್ಣುವಿನ ವಿವಿಧ ಅವತಾರಗಳ ಸುಂದರ ಮೂರ್ತಿಗಳ  ಅನಾವರಣ ಆಲ್ಲಿ  ಆಗಿತ್ತು ,  ಗರ್ಭ ಗುಡಿಯ  ಬಾಗಿಲಿಗೆ ಬೀಗ ಹಾಕಲಾಗಿತ್ತು,  ಆದರೂ  ಬಾಗಿಲಿನಲ್ಲಿ  ನಿರ್ಮಿಸಲಾಗಿದ್ದ ಎರಡು ಚಿಕ್ಕ ವೃತ್ತಾಕಾರದ ಕಂಡಿಯಲ್ಲಿ ಸರಳುಗಳನ್ನು  ಅಳವಡಿಸಿ  ಕಿಟಕಿಯಂತೆ ಮಾಡಲಾಗಿತ್ತು. ಮೊದಲು ದೇವರ ದರ್ಶನ ಪಡೆದು  ನಂತರ ನನ್ನ ಕ್ಯಾಮರ ಲೆನ್ಸ್  ಸರಿ ಹೊಂದಿಸಿ  ಚಿತ್ರ ತೆಗೆದೆ .  ಮನಸಿನಲ್ಲಿ ಏನೋ ಒಂದುತರಹ  ಖುಷಿ ಮೂಡಿತ್ತು, ಉತ್ಸಾಹ ಮತ್ತಷ್ಟು  ಮೂಡಿತು,

ಈ ನದಿಯಲ್ಲಿ  ಹರ್ಷ ಬೈಕ್ ಓಡಿಸಿದ್ದು 


ದೇವಾಲಯದ ಹೊರಗೆ ಬಂದು  ಮುತ್ತಿನ ಕೆರೆಯ ದಡದಲ್ಲಿ ಸ್ವಲ್ಪ ಹೊತ್ತು  ನಾನೂ ಹರ್ಷ ಕುಳಿತೆವು. ಎರಡು  ಹಕ್ಕಿಗಳು ಹಾರಾಡುತ್ತಾ  ಇಳಿಯುತ್ತಾ  ನೀರಲ್ಲಿ ಆಟ ಆಡುತ್ತಿದ್ದವು  ,  ಹೆಚ್ಚು ಕಾಲಹರಣ ಮಾಡುವುದು ಬೇಡವೆಂದು  ಬೈಕ್ ಬಳಿ ಬಂದೆವು.  ನಮ್ಮ ಹರ್ಷ''ಸಾರ್ ಎಂತಹ ದೇವಾಲಯ ಸಾರ್ ಇಲ್ಲಿಂದ ವಾಪಸ್ಸು ಹೋಗೋಕೆ ಮನಸು ಬರ್ತಾ ಇಲ್ಲ''. "ಆದರೂ ಮತ್ತೊಂದು ಜಾಗ ನೋಡಲೇ ಬೇಕು ಬನ್ನಿ ಹೋಗೋಣ " ಅಂತಾ ಬೈಕ್  ಸ್ಟಾರ್ಟ್  ಮಾಡಿದ  ನಮ್ಮ ಪಯಣ ಹೊರಟಿತು  ,  ಇಲ್ಲಿಂದ   ನಾವು ಸ್ವಲ್ಪ ಕಾಡಿನ ಹಾದಿ ಯಲ್ಲಿ ಸಾಗಿದೇವು , ಬೈಕ್  ಓಡಿಸುತ್ತಿದ್ದ ಹರ್ಷ ತನ್ನ ಬೈಕ್ ಅನ್ನು ಅಲ್ಲೇ ಅಡ್ಡಲಾಗಿ ಸಿಕ್ಕಿದ ಒಂದು ಸಣ್ಣ ನದಿಯೊಳಗೆ  ಓಡಿಸಿಯೇ ಬಿಟ್ಟ   ನನಗೋ ಅಚ್ಚರಿ , ಆದರೂ  ಅನಿರೀಕ್ಷಿತ  ಚಾಲನೆಯಿಂದ ಸ್ವಲ್ಪ ಗಲಿಬಿಲಿ ಗೊಂಡೆ , "ಇದೇನು  ಹರ್ಷ  ನದಿಯೊಳಗೆ ಓಡಿಸಿದ್ದು ಯಾಕೆ ? ಇಳಿದು ಹೊಗೊಬಹುದಿತ್ತು" ಅಂದೇ  ಅದಕ್ಕೆ  :"ಸಾರ್ ಹೆದರ ಬೇಡಿ  ನಾನು ಇಲ್ಲಿಗೆ ಬಂದಿದ್ದೇನೆ " ಎಂಬ ಅಭಯದ ಮಾತುಗಳು  ಬಂತು.  ಸಾವರಿಸಿಕೊಂಡು    "ಹರ್ಷ ಈ ನದಿ ಯಾವುದು?" ಎಂದೇ "  ಇದಾ ಸಾರ್ ಸಹಸ್ರಲಿಂಗದಲ್ಲಿ  ಕಂಡಿತಲ್ಲಾ  ಅದೇ ಶಾಲ್ಮಲಾ  ನದಿ ಸಾರ್" .

ಪೊದೆಗಳ ನಡುವೆ ಕಂಡ ಪಿರಂಗಿ 



 ನದಿ ದಾಟಿ  ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ  ನಡೆಯಲು ಆರಂಭಿಸಿದೆವು   ಅಲ್ಲೇ ಇದ್ದ ಒಂದು ಸಣ್ಣ ಗುಡ್ಡ ಏರಿದ ನಾವು ಕಾಡಿನ ವಾತಾವರಣ  ಇದ್ದ ಜಾಗದ ಒಳಗೆ ಬಂದಿದ್ದೆವು  ಅಲ್ಲಿ  ಎತ್ತರದ  ಪ್ರದೇಶದಲ್ಲಿ ಪೊದೆಗಳ  ನಡುವೆ ನಮ್ಮತ್ತ   "ದುರುಗುಟ್ಟುತ್ತಾ "  ನೋಡುತ್ತಿತು  ಒಂದು ಪಿರಂಗಿ....................!!!

Thursday, October 4, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.4 ಅರ್ಥವಾಗದ ಇತಿಹಾಸದ ಒಡಲಲ್ಲಿ !!!!


ಅಡಗಿ ಕುಳಿತ  ಇತಿಹಾಸ 
 ಬೈಕ್  ಸಾಗುತ್ತಾ ಇತ್ತು, ಅಂಕು ಡೊಂಕಿನ  ರಸ್ತೆ , ಕೆಲವುಕಡೆ ಕಚ್ಚಾ ರಸ್ತೆ , ಹರ್ಷಾ ಮಾತ್ರ  ಹರ್ಷ ಚಿತ್ತನಾಗಿ ಬೈಕ್  ಓಡಿಸುತ್ತಿದ್ದ,  ಒಂದು ಐದು ಅಥವಾ ಆರು ಕಿ.ಮೀ . ದೂರ ಕ್ರಮಿಸಿದ್ದೆವು,  ಅಲ್ಲಿ ಕಂಡಿದ್ದು  ಪೊದೆಗಳ ನಡುವೆ ಕಂಡ   ಒಂದು  ಪಾಳು  ಕಟ್ಟಡ........!!! ಇದು ಏನು ಹರ್ಷಾ??   ಎಂದೇ,  ...... ಇದಾ ಸಾರ್ !!!...............ಬನ್ನಿ ನೋಡೋಣ   ನಾನೂ ಇದೆ ಮೊದಲು ಒಳಗೆ ಬರ್ತಿರೋದು ಅಂತಾ ಹೇಳಿದ. ಇಬ್ಬರು ಬೈಕನ್ನು   ರಸ್ತೆಯ  ಪಕ್ಕದಲ್ಲಿ ನಿಲ್ಲಿಸಿ, ಹಾಕಿದ್ದ ಬೇಲಿ ದಾಟಿ ಒಳಗೆ ನಡೆದೆವು, ಅಷ್ಟರಲ್ಲಿ , ಮತ್ತೊಬ್ಬರು  ಆ ಜಾಗದ ಮಾಲಿಕರೆಂದು ಗುರುತಿಸಿಕೊಂಡವರು ನಮ್ಮ ಜೊತೆ ಸೇರಿದರು, ಹರ್ಷನಿಗೆ ಅವರ ಪರಿಚಯ ಇದ್ದ ಕಾರಣ  ನಮ್ಮನ್ನು ನೋಡಲು ಒಳಗೆ ಕರೆದೊಯ್ದರು.



ಸೋಂದೆ ಅರಸರ ಸ್ಮಾರಕ??


ವಿಶಾಲವಾದ ಪ್ರದೇಶ  ಮರ ಗಿಡಗಳಿಂದ ಸುತ್ತುವರಿದಿತ್ತು, ಒಣ ಎಲೆಗಳ  ಹಾಸಿಗೆ ಯೊಳಗೆ  ಅಡಗಿದ ಮುಳ್ಳುಗಳು , ಹಾದಿಯಲ್ಲಿ ಸ್ವಾಗತ ಕೋರಿದ್ದವು. ತಲೆಯ ಮೇಲೆ  ಸೂರ್ಯ ತನ್ನ  ಬಿಸಿಲ ಮಳೆಯನ್ನು   ನಮ್ಮ ತಲೆಗಳ ಮೇಲೆ ಸುರಿಯುತ್ತಿದ್ದ, ನಿಧಾನವಾಗಿ  ಸಾಗಿದೆವು.  ಹತ್ತಿರ ಹೋಗಿ ಸುತ್ತಾಡುತ್ತಾ  ನನ್ನ ಕಣ್ಣು  ಅಲ್ಲಿ ಏನಾದರೂ ಶಾಸನ  ಇದೆಯೇ ಎಂದು ಹುಡುಕುತ್ತಿತ್ತು.  ಊ ಹೂ  ಏನೋ ಪ್ರಯೋಜನ ವಿಲ್ಲ.  ಆದರೂ ಪ್ರಯತ್ನಾ ಸಾಗಿತ್ತು, ನನ್ನ ಕ್ಯಾಮರ ಸಿಕ್ಕ ನೋಟವನ್ನು ತಪ್ಪಿಸದೇ ಸೆರೆಹಿಡಿದು  ತನ್ನ ಒಡಲಲ್ಲಿ ತುಂಬಿ ಕೊಳ್ಳುತ್ತಿತ್ತು.

ಇಲ್ಲೆನಿತ್ತು. ನಿಮಗೆ ಗೊತ್ತಾ ??



ಅರೆ ಇದೇನಿದು  ಅಂತಾ ಹತ್ತಿರ ಹೋದರೆ ಅಲ್ಲಿ ಕಾಣಿಸಿದ್ದು ಒಂದು ಚೌಕಾಕಾರದ  ವೇದಿಕೆ  ನಾಲ್ಕೂ ಕಡೆಯೂ ಮೆಟ್ಟಿಲು ಗಳನ್ನೂ ಹೊಂದಿದ  ಕಲ್ಲಿನ ವೇದಿಕೆ  ಪೊದೆಗಳ  ಅಲಂಕಾರ ಹೊತ್ತು  ಮಲಗಿತ್ತು. ಸಾರ್ ಹುಷಾರು ಇಲ್ಲಿ ಪೊದೆಗಳಿವೆ  ಹಾವುಗಳು ಇರುತ್ತೆ  ಅಂತಾ ಜೊತೆಯಲ್ಲಿದ್ದವರ  ಸೂಚನೆ  ಹಾಗು ಎಚ್ಚರಿಕೆ.  ಯಾವುದೂ ಕಾಣಿಸಲಿಲ್ಲ ಬಿಡಿ.

ಗೋಪುರವನ್ನು ಸುತ್ತುವರೆದ ಗಿಡಗಳು 


ಗೋಪುರದ ಸನಿಹ ದೃಶ್ಯ.


ಬನ್ನಿ ಮುಂದೆ ಹೋಗೋಣ ಅಂತಾ ಹರ್ಷ ಕರೆದ, ನೋಡಿ ಸಾರ್ ಆ ಗೋಪುರಾ ಅದೇನು ಗೊತ್ತಾ ನಿಮಗೆ ?? ಅಂತಾ ಕೇಳಿ,..........ಸಾರ್ ಫೋಟೋ ತೆಗೀರಿ ಚೆನ್ನಾಗಿರುತ್ತೆ ಅಂತಾ  ಪ್ರೋತ್ಸಾಹಿಸಿದ  ಈ ತಮ್ಮ. ಒಂದು ಪಾರ್ಶ್ವದಲ್ಲಿ ಗಿಡ ಗಂಟಿಗಳು ಗೋಪುರವನ್ನು ಶಿಥಿಲಗೊಳಿಸುತ್ತಿದ್ದವು , ಮತ್ತೊಂದು ಪಾರ್ಶ್ವದಲ್ಲಿ  ಗೋಪುರ ಕಾಣುತ್ತಿತ್ತು, ಕ್ಯಾಮರ ಲೆನ್ಸೆ ಹೊಂದಿಸಿ  ಹತ್ತಿರ ಮಾಡಿ ಗೋಪುರದ ಫೋಟೋ ತೆಗೆದೇ ,ಗೋಪುರದ  ಸೌಂದರ್ಯ ಸೆರೆಯಾಯಿತು.

ಇದು ಸೋಂದೆ ಅರಸರ  ಗದ್ದಿಗೆ ಯಾಗಿತ್ತಾ??




ಇದನ್ನು ಯಾವ ಹೆಸರಿನಿದ ಕರೆಯುತ್ತಾರೆ ಹರ್ಷಾ?? ಅಂತಾ ಕೇಳಿದೆ ಸಾರ್ ಇದನ್ನು ಸ್ಥಳಿಯರು "ಕೊಪ್ಪಳ ತೋಟಾ" ಅಂತಾರೆ , ಮತ್ತೆ ಕೆಲವು ಹಿರಿಯರು  ಇದನ್ನು" ಸೋಂದೆ ಅರಸರ  ಗದ್ದಿಗೆ" ಅಂತಾರೆ , ಇನ್ನೂ ಕೆಲವರು  "ಸೋಂದೆ ರಾಜರ ಹೆಂಡತಿಯರ  ಗದ್ದಿಗೆ" ಅಂತಾರೆ  ಇದರಲ್ಲಿ ಯಾವುದು ನಿಜವೋ ಗೊತ್ತಿಲ್ಲಾ,  ನಿಮಗೆ ಇಲ್ಲಿನ ವಿವರ ಸಿಕ್ಕಿದ ಮೇಲೆ ನೀವೇ ತೀರ್ಮಾನಿಸಿ ಅಂತಾ   ಹೇಳುತ್ತಾ  ಬನ್ನಿ ಸಾರ್ ಒಳಗಡೆ ಹೋಗೋಣಾ ಅಂತಾ ಕರೆದ.


ಒಳಗಡೆ ಹೀಗಿದೆ ನೋಡಿ 



ಇಲ್ಲೂ ಕಾಣುತ್ತದೆ ಸೌಂದರ್ಯ 

ಸರಿ ಅಂತಾ ಒಳಗೆ ಹೊರಟೆವು, ಒಳಗಡೆ ಬಹಳಷ್ಟು ಕತ್ತಲೆ ಇತ್ತು , ಬಾವಲಿಗಳ ಹಾರಾಟ ಬೇರೆ  ಸಾಧ್ಯ ವಾದಷ್ಟೂ  ಜಾಗರೂಕರಾಗಿ  ಸಾಗಿ ಒಂದು ಹಜಾರ ತಲುಪಿದೆವು ಅಲ್ಲಿ ಬೆಳಕು ಕಾಣಿಸಿತು,   ಚಾವಣಿಯನ್ನು ನೋಡಿದೆ ಅಲ್ಲಿ ಕಂಡಿತು ಒಂದು ಸುಂದರ  ಕಲೆಯ  ದೃಶ್ಯ.   ಆದರೆ ಮತ್ತಿನ್ನೇನು ವಿಶೇಷ ಕಾಣಲಿಲ್ಲ


ಅಂದಿನ ಕಾಲದ ಬಾಗಿಲು ಹೀಗಿತ್ತು.




ಕಣ್ಣುಗಳು ಹುಡುಕಾಟಾ ನಡೆಸಿದ್ದರೂ ಅಲ್ಲಿ   ಶಾಸನಗಳು  ಒಂದೂ ಕಾಣಲಿಲ್ಲ. ಕಾಣಿಸಿದ  ಒಂದು ಸಣ್ಣ ಕಮಾನು ಬಾಗಿಲ ಮೂಲಕ  ಹೊರಗೆ ಬಂದೆವು,  ಒಳಗಡೆ ಕೆಟ್ಟ ಗಾಳಿ ಯಿಂದ ಉಸಿರು ಒಮ್ಮೊಮ್ಮೆ ಕಟ್ಟಿದಂತೆ ಅನ್ನಿಸುತ್ತಿತ್ತು, ಆದರೆ ಹೊರಗೆ ಬಂದು  ಒಂದು ದೊಡ್ಡ ಉಸಿರನ್ನು ಎಳೆದುಕೊಂಡೆ  ಮನಸು ಹಗುರವಾಯಿತು.  ಹೊರಗೆ ಬಂದು  ಹಿಂತಿರುಗುವ  ಬಗ್ಗೆ ಮನಸಾಯಿತು,

ಗೋಪುರದಲ್ಲಿ  ಕಂಡ ಶಿವಲಿಂಗ  ಹಾಗು ನಂದಿ.

 ಅಂತೂ ಇಂತೂ ಹೊರಡಲು ಸಿದ್ದವಾದೆವು  , ಆದರೂ ಯಾವುದೇ ಶಾಸನ ಸಿಗದೇ  ಇದು ಏನೂ ಎಂದು ಅರ್ಥ ವಾಗದೆ  ಪೆಚ್ಚಾಗಿ ನಿಂತೇ,  ಯಾಕೋ ನನ್ನ ದೃಷ್ಟಿ  ಮತ್ತೊಮ್ಮೆ ಗೋಪುರವನ್ನು ನೋಡಿತು,  ಆ ಗೋಪುರದಲ್ಲಿ  ಶಿವಲಿಂಗದ ಅಕ್ಕ ಪಕ್ಕ  ನಂದಿ ವಿಗ್ರಹಗಳ ಚಿತ್ರಣ ಕಂಡಿತು.  ಅರೆ ಹೌದಲ್ವಾ  ಸಹಸ್ರ ಲಿಂಗದಲ್ಲೀ ಕಂಡಂತ  ಶಿವಲಿಂಗ  ಹಾಗೂ ನಂದಿ ಇಲ್ಲಿಯೂ ಇವೆ,  ಹಾಗಿದ್ರೆ  ಇವು "ಸೋಂದೆ ಅರಸರ ಕಾಲದ  ಸ್ಮಾರಕ"  ಅಂತೂ ನಿಜ  ಆದರೆ ಇದು ಗದ್ದಿಗೆಯೋ, ಅರಮನೆಯೂ, ಅಥವಾ ದೇವಾಲಯವೋ,  ಎಂಬ ಬಗ್ಗೆ ಗುಟ್ಟು ಮಾತ್ರಾ ತಿಳಿಯಲಿಲ್ಲ. ಹಿಂತಿರುಗುತ್ತಿದ್ದ ನನ್ನನ್ನು  ಇತಿಹಾಸದ ಈ ಸ್ಮಾರಕ  ಎಂತಹ  ಮಹಾನ್ ಜನರಿಗೆ ನಾವು ಅರ್ಥಾ ಆಗಿಲ್ಲ  ಇನ್ನು   ಮೂರ್ಖ ನೀನೂ ಅರಿಯಲು ಸಾಧ್ಯವೇ ??  ಎಂಬ ಪ್ರಶ್ನೆ ಕೇಳಿದಂತೆ ಅನ್ನಿಸಿತು. ಸಮಾಜದ  ಅಸಡ್ಡೆಯಿಂದ  ನಿರಾಸಕ್ತಿಯಿಂದ ಅಳಿಯುತ್ತಿರುವ  ಸೋಂದೆ ಅರಸರ  ವೈಭವದ ಸ್ಮಾರಕಗಳು  ಅವನತಿಯತ್ತ  ಸಾಗುತ್ತಾ  ಕನ್ನಡ ನಾಡಿನ ಒಂದು ಭಾಗದ ಇತಿಹಾಸವನ್ನು  ಅಳಿಸಿಹಾಕುತ್ತಿರುವುದು ಸುಳ್ಳಲ್ಲ. ಆದರೆ ಉಳಿಸುವ  ಮನಸು ನಮ್ಮಲಿಲ್ಲ, ಮುಂದೊಮ್ಮೆ ಸೋಂದೆ ಅರಸರ  ಬಗೆಗಿನ ಇತಿಹಾಸ ಸುಳ್ಳು ಅಂತಾ  ನಮ್ಮ ಮಕ್ಕಳು ಹೇಳುವ ಕಾಲ ದೂರವಿಲ್ಲಾ ಅನ್ನಿಸುತ್ತದೆ.   ಮನ ಕರಗಿ  ಭಾರವಾದ ಹೆಜ್ಜೆ ಇಡುತ್ತಾ  ಮತ್ತೆ ರಸ್ತೆಗೆ ಬಂದು ಬೈಕ್ ಹತ್ತಿರ ಬಂದೆ .



ಇದು ಮುತ್ತಿನ ಕೆರೆಯೇ 




ಹರ್ಷ ಮೊದಲು ಹೋಗೋಣ ನಡೆ ಮಾರಾಯ ಅಂತಾ ಬೈಕ್  ಏರಿದೆ  ಸುಮಾರು ಎರಡು ಮೂರು ಕಿ.ಮೀ. ಕ್ರಮಿಸಿದ ನಮ್ಮನ್ನು ಸ್ವಾಗತ ಮಾಡಿದ್ದು ಒಂದು ಮುತ್ತಿನ ಕೆರೆ  , ಅದರ ಸನಿಹ ಒಂದು ವೆಂಕಟರಮಣ ದೇವಾಲಯ.............ಅದರ ಹೆಸರು ಸುಧಾಪುರ !!!!!




  

Tuesday, October 2, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.3 ಸಹಸ್ರಲಿಂಗ ಸ್ಥಾಪಕರು ಯಾರು ???



ಶಾಲ್ಮಲಾ ನದಿ 

 ಹರ್ಷ ಹೆಗ್ಡೆ  ಯಮಾಹ ಬೈಕು  ಜೋರಾಗಿ  ಮುನ್ನುಗ್ಗುತ್ತಿತ್ತು.........ಅಂಕು ಡೊಂಕು ರಸ್ತೆಯಲ್ಲಿ  ............ಸಿರ್ಸಿಯಿಂದ ಯಲ್ಲಾಪುರ ರಸ್ತೆಯಲ್ಲಿ  ಸುಮಾರು ಹದಿನಾರು ಕಿ.ಮೀ . ದೂರ ಸಾಗಿದ ನಮಗೆ ಸಿಕ್ಕಿದ್ದು , "ಸಹಸ್ರ ಲಿಂಗ  ಕ್ಷೇತ್ರ".  ಶಾಲ್ಮಲಾ ನದಿ   ಒಡಲಲ್ಲಿ  ಅತ್ಯಂತ ರಮಣೀಯವಾಗಿ ಕಾಣುವ ಶಿವ ಲಿಂಗಗಗಳ  ತಾಣ. "ಶಾಲ್ಮಲಾ ನದಿ"  ನಮ್ಮ ಕನ್ನಡ ನಾಡಿನ ಧಾರವಾಡ ಜಿಲ್ಲೆಯ ಸೋಮೇಶ್ವರ ಗುಡಿ ಎಂಬಲ್ಲಿ ಉಗಮವಾಗಿ  ಉತ್ತರ ಕನ್ನಡ ಜಿಲ್ಲೆಗೆ ಬರುತ್ತದೆ  ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿದು ಅರಬ್ಬೀ ಸಮುದ್ರ ಸೇರುತ್ತದೆ. ಇದೆ "ಶಾಲ್ಮಲಾ  ನದಿ " ಸಹಸ್ರಲಿಂಗದ ಕ್ಷೇತ್ರದಲ್ಲಿಯೂ ಸಾಗುತ್ತದೆ.



ಶಿವಲಿಂಗಕ್ಕೆ  ನೆರಳಿನ ಆಸರೆ

ಸಹಸ್ರ ಲಿಂಗ ನೋಡಲು ಬಂದ ನನಗೆ ಮೊದಲು ಕಾಣಿಸಿದ್ದು ಪ್ರಶಾಂತವಾಗಿ ಹರಿಯುತ್ತಿದ್ದ ಶಾಲ್ಮಲಾ ನದಿ .ಬೈಕಿನಿಂದ ಇಳಿದ ನನಗೆ ಹತ್ತಿರದ ಮರದಲ್ಲಿ ಎಲ್ಲೋ ಮರೆಯಾಗಿ  ಕೂಗುತ್ತಿದ್ದ  ಮಂಗಟೆ  ಹಕ್ಕಿಯ  [hornbill bird ] ದ್ವನಿ. ಆದರೆ ಈ ಪಾಪಿ ಕಣ್ಣಿಗೆ ಕಾಣದೆ ದೂರದಲ್ಲಿ ತನ್ನ ಕೂಗುವಿಕೆಯನ್ನು ಮುಂದುವರೆಸಿತ್ತು ಆ ಹಕ್ಕಿ.ಕ್ಯಾಮರಾ ಹಿಡಿದು  ತಲೆ ಮೇಲೆತ್ತಿ ಹುಡುಕಿದ್ದೇ ಬಂತು ಭಾಗ್ಯ  ಕುತ್ತಿಗೆ  ನೋವಾಗಿ  ಸೋತ ಮುಖದೊಡನೆ ಮೆಟ್ಟಿಲು ಇಳಿಯ  ತೊಡಗಿದೆ. ನದಿಯ ನಡುವೆ ಶಿವಲಿಂಗಕ್ಕೆ ಒಬ್ಬ ವ್ಯಕ್ತಿ ನದಿಯ ಜಲದಿಂದ  ಅಭಿಷೇಕ ಮಾಡುತ್ತಿದ್ದರು .


ಶಿವಲಿಂಗಕ್ಕೆ ಜಲಾಭಿಷೇಕ 


 ಹತ್ತಿರ ಹೋದರೆ ಜೊತೆಯಲ್ಲೇ  ಸುಶ್ರಾವ್ಯವಾಗಿ  ತೇಲಿಬಂತು ಪುರೋಹಿತರ  ಮಂತ್ರ , ನದಿಯ ನಡುವೆ  ಭಕ್ತಿಯ ಪೂಜೆ ಇಲ್ಲಿ ನಡೆದಿತ್ತು.ಶಿವಲಿಂಗಕ್ಕೆ ಅರ್ಪಿಸಿದ್ದ ಹೂಗಳು  ಸಾರ್ಥಕದ  ನಗೆ ಬೀರಿದ್ದವು.ಮುಂದೆ ತೆರಳಿದೆ ಹರ್ಷ ಹಾಗು ನಾನೂ ಸಹ ಇಲ್ಲಿ ಜಲಾಭಿಷೇಕ ಮಾಡಿ ಆಶೀರ್ವಾದ ಪಡೆದೆವು.ಪುರೋಹಿತರು  ಹರ್ಷನಿಗೆ ಪರಿಚಯ ಇದ್ದ ಕಾರಣ , ಹರ್ಷ ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಟ. ಮೈಸೂರು ಎಂಬ ಪದ ಕೇಳಿ ಅವರ ಮುಖದಲ್ಲಿ ಆತ್ಮೀಯ ಭಾವನೆ ಹೊಮ್ಮಿತು. ಪ್ರೀತಿಯ ನಗೆಯ ಆಶೀರ್ವಾದ ನಮಗೆ ಸಿಕ್ಕಿತು.



ನಮ್ಮನ್ನು ಕಾಯುವವರು ಯಾರು ??


ಹಾಗೆ ಮುಂದುವರೆದೆ ನಾನು ನನ್ನ ಕಣ್ಣುಗಳು ಅಲ್ಲಿ ಕಾಣುವ ವಿಶೇಷತೆಗಳನ್ನು  ಹುಡುಕುತ್ತಿದ್ದವು, ಕ್ಯಾಮಾರ  ಚಿತ್ರಗಳನ್ನು ಸೆರೆಹಿಡಿಯಲು ಹಾತೊರೆಯುತ್ತಿತ್ತು.  ನದಿಯ ನಡುವೆ ಬಹಳಷ್ಟು ಶಿವಲಿಂಗಗಳು  ಶಿಥಿಲವಾಗಿದ್ದವು , ಹತ್ತಿರ ತೆರಳಿದೆ. ಸುಂದರ ನಂದಿ  ವಿಗ್ರಹದ ಸನಿಹ ಭಗ್ನವಾದ ಅಪರೂಪದ ಕಲಾಕೃತಿ ಕಂಡಿತು.ನಂದಿ  ವಿಗ್ರಹ ನೋವಿನಿಂದ ಗತ ಕಾಲದತ್ತ  ಹಿಂತಿರುಗಿ ನೋಡುತ್ತಿದ್ದಂತೆ ಭಾಸವಾಯಿತು.  .



ಶಾಲ್ಮಲೆಯ ಒಡಲಲ್ಲಿ ಶಿವ 




ಸ್ವಲ್ಪ ದೂರ ಹೋದರೆ ಮತ್ತೊಂದು ಶಿವಲಿಂಗ ಹಾಗು ಪುಟ್ಟ ನಂದಿ  ಮನಸೆಳೆಯಿತು  , ಜುಳು ಜುಳು ಹರಿವ ಶಾಲ್ಮಲೆ ಒಡಲಲ್ಲಿ  ಶಿವಲಿಂಗ ಹಾಗು ನಂದಿ ಮೀಯುತ್ತಿದ್ದವು. ನದಿಯ ಒಡಲಲ್ಲಿ ಶಿವಲಿಂಗ ಕೆತ್ತುವ ಆಸೆ ಯಾವ ಶಿಲ್ಪಿಗೆ ಬಂತೋ ಎಂಬ ಪ್ರಶ್ನೆ ಕಾಡಿತು.  ಮತ್ತಷ್ಟು ಹೆಜ್ಜೆ ಹಾಕಿದೆ  ಅನತಿ ದೂರದಲ್ಲಿ  ಮತ್ತೊಂದು ದೃಶ್ಯ ಕಂಡಿತು.




ಯಾವ ದುಷ್ಟ ಹೀಗೆ ಮಾಡಿದ??


ಮನಸಿಗೆ ಮುದ ನೀಡಿದ ದೃಶ್ಯ

ಅರೆ ಇದೇನು ಸುಂದರ ಶಿವಲಿಂಗದ ಸನಿಹ   ಮುಖ   ಇಲ್ಲದ ನಂದಿ  , ಅಚ್ಚರಿಯಿಂದ ಸನಿಹ ಹೋದರೆ ಯಾರೋ ದುಷ್ಟ ವ್ಯಕ್ತಿಗಳು ಈ ಸುಂದರ ವಿಗ್ರಹವನ್ನು ಭಗ್ನ ಮಾಡಿದ್ದರು, ನೋವಿನ ಚಿತ್ರ ಕ್ಯಾಮರಾದಲ್ಲಿ ಮೂಡಿತು . ಸೌಂದರ್ಯತೆ ಯನ್ನು  ವಿರೂಪಗೊಳಿಸಿ  ಹಾಳುಮಾಡುವ  ಸ್ವಭಾವದ  ವಿಕೃತ ಜನಗಳಿಗೆ ಧಿಕ್ಕಾರ ಕೂಗಿತ್ತು ಮನಸ್ಸು .ಅದರ ಸನಿಹದಲ್ಲೇ ಮತ್ತೊಂದು ದೃಶ್ಯ ನನ್ನ ಮನಸನ್ನು ಸಮಾಧಾನ ಗೊಳಿಸಿತ್ತು. ಒಂದು ಮುದ್ದಾದ ಶಿವಲಿಂಗ ಹಾಗು  ಪುಟಾಣಿ ನಂದಿ  ಕಣ್ಣಿಗೆ ಬಿತ್ತು , ಅದನ್ನು ನನ್ನ ಕ್ಯಾಮರಾ  ಸೆರೆ ಹಿಡಿಯಿತು.



ಕಲ್ಲಿನಲ್ಲಿ ಕಡೆದ  ಊಟದ ತಟ್ಟೆಯೇ ಇದು ??


ಅಲ್ಲಿ ನೋಡಿ ಮತ್ತೊಂದು ದೃಶ್ಯ ಅರೆ ಹೌದಲ್ಲಾ  ಅಲ್ಲೇನೋ  ಕಾಣುತ್ತಿದೆ ಬನ್ನಿ ಹೋಗೋಣ , ಕಲ್ಲಿನಲ್ಲಿ ಕಡೆದ ಊಟದ ತಟ್ಟೆ ಯಂತೆ ಗೋಚರಿಸಿದ  ವೃತ್ತಾಕಾರದ ಕಲಾಕೃತಿ ಕಂಡಿತು.ಕಲ್ಲಿನಲ್ಲಿ ಒಂದು ದೊಡ್ಡ ತಟ್ಟೆಯಂತೆ ಕೊರೆದು, ಅದರ ಸುತ್ತಾ ಒಂದೇ ಅಳತೆಯ ಒಂಭತ್ತು ಸಣ್ಣ ಸಣ್ಣ ಗುಂಡಿಗಳನ್ನು ಕೊರೆಯಲಾಗಿದೆ. ಬಹುಷಃ ಆಹಾರ ಸೇವಿಸಲು ಮಾಡಿದ್ದ ತಟ್ಟೆ ಇರಬಹುದೇ ?ಎಂಬ ಪ್ರಶ್ನೆ ಗೆ ಉತ್ತರ   ಗೊತ್ತಾಗಲಿಲ್ಲ .



ಸಹಸ್ರ ಲಿಂಗ ಸ್ಥಾಪನೆ  ಬಗ್ಗೆ ಶಾಸನ 

ಇದರ ಅರ್ಥ ಏನು ??

ಇದನ್ನು ಕೊರೆದವರು ಯಾರು? ಯಾವ ರಾಜರು ಇದನ್ನು ಪೋಷಿಸಿದರು?  ಎಂಬ ಪ್ರಶ್ನೆ ಕಾಡತೊಡಗಿತು. ನನ್ನ ಹುಡುಕಾಟಕ್ಕೆ ಉತ್ತರ ಎಂಬಂತೆ ಅಲ್ಲೊಂದು "ಶಿಲಾ ಶಾಸನ"  ಕಣ್ಣಿಗೆ ಬಿತ್ತು ,ಹತ್ತಿರ ಹೋಗಿ ನೋಡಲು " ಸದಾಶಿವ ರಾಜೇಂದ್ರ"  ನಿರ್ಮಿತ ಎಂದು ತಿಳಿದು  ಬಂತು. ಸೋಂದೆ ಅರಸರಾಗಿದ್ದ  "ಸದಾಶಿವ ರಾಜೇಂದ್ರ " ಇದರ ಸ್ಥಾಪಕರು. ಇದಕ್ಕೆ ಪುರಾವೆಯಾಗಿ ಈ ಶಾಸನ ಸಾಕ್ಷಿ ಹೇಳುತ್ತಾ ನಿಂತಿದೆ. ಇದನ್ನು ಸಂರಕ್ಷಿಸದೀದರೆ ಈ ಸಾಕ್ಷ್ಯ ಹಾಳಾಗಿ ಈ ಕ್ಷೇತ್ರಕ್ಕೆ  ಮುಂದೊಮ್ಮೆ ಆಧಾರ ವಿಲ್ಲದೆ ಹೋಗುತ್ತದೆ. ಆದರೆ ಸಹಸ್ರ ಲಿಂಗ ಸ್ಥಾಪಕ "ಸದಾಶಿವ ರಾಜೇಂದ್ರ" , ಹದಿನೇಳನೆ ಶತಮಾನದಲ್ಲಿಸಿರಸಿಯ ಮಾರಿಕಾಂಬೆ ದೇವಾಲಯ ನಿರ್ಮಿಸಿದ   "ಸೋಂದಾ ರಾಜ ಇಮ್ಮಡಿ  ಸದಾಶಿವ ರಾವ್ " ಇವರಿಬ್ಬರು ಒಬ್ಬರೇ ಎಂಬ  ಬಗ್ಗೆ ಸಂಶೋಧನೆ ನಡೆದಲ್ಲಿ  ಸಹಸ್ರ ಲಿಂಗ ಸ್ಥಾಪನೆ ಬಗ್ಗೆ ನಿಖರ ಮಾಹಿತಿ ಲಭ್ಯ ಆಗುತ್ತದೆ.



ಶಾಲ್ಮಲೆಯ ಒಡಲು 




ಸಹಸ್ರಲಿಂಗದ  ಗತ ಇತಿಹಾಸದ ಗುಟ್ಟನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು  ಶಾಲ್ಮಲಾ  ನದಿ  ಅಂದಿನಿಂದ ಇಂದಿನ ವರೆಗೂ ನಮ್ಮ ಜ್ಞಾನಕ್ಕೆ ಸವಾಲು ಹಾಕುತ್ತಾ  ಹರಿಯುತ್ತಲೇ ಇದೆ.  ಸುಮಾರು ಒಂದು ಘಂಟೆಗಳ ಕಾಲ  ಇಲ್ಲಿದ್ದ ನಾವು ಮೆಟ್ಟಿಲು ಹತ್ತಿ ಮೇಲೆ ಬಂದೆವು . ಹಲವು ಪ್ರವಾಸಿಗರು  ಪ್ರಕೃತಿಯ ಮಡಿಲಲ್ಲಿ ಲಿಂಗಗಳ ಸನಿಹ ಬಂಡೆಗಳಲ್ಲಿ ತಮ್ಮ  ಕೆತ್ತನೆ ಮಾಡುತ್ತಾ ಅಲ್ಲಿನ ಕಲಾವಂತಿಕೆ ಯನ್ನು ಹಾಳು ಮಾಡುತ್ತಾಇದ್ದರು , ಇನ್ನು   ಕೆಲವರು ಅಟ್ಟಹಾಸ ಮೆರೆದಿದ್ದರು .



ತೂಗು ಸೇತುವೆ ಯಲ್ಲಿ ಹೊರಟಿತ್ತು  ನಮ್ಮ ಸವಾರಿ 

ಪ್ರಕೃತಿಯ ಒಡಲಲ್ಲಿ ತಾಂತ್ರಿಕತೆಯ ಚೆಲುವು.

ಸಾರ್ ಮುಂದೆ ಹೋಗೋಣವಾ ?? ಅಂತಾ ಹರ್ಷ ಹೆಗ್ಡೆ  ಎಚ್ಚರಿದಾಗ ವಾಸ್ತವಕ್ಕೆ ಬಂದೆ. ಮುಂದೆ ಬನ್ನಿ ಸಾರ್ ಹೋಗೋಣ ಇಲ್ಲೊಂದು ತೂಗು ಸೇತುವೆ ಇದೆ ಅದನ್ನು ದಾಟಬೇಕು  ಎಂದು ತನ್ನ ಬೈಕ್  ನ್ನು  ತೂಗು ಸೇತುವೆಯ ಮೇಲೆ  ತಂದ, ನಾನೂ ಸಹ ಶಾಲ್ಮಲಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸುಂದರ ತೂಗುಸೇತುವೆ  ಮೇಲೆ ನಡೆಯುತ್ತಾ  ಚಿತ್ರ ತೆಗೆಯುತ್ತಾ ಸಾಗಿದೆ.  !!!


ಇದೇನಿದು ??

ಮುಂದೆ  ಸಾಗಿದ   ನಮ್ಮ ಬೈಕ್ ದಾರಿಯಲ್ಲಿ  ಸಾಗುತ್ತಾ  ಪೊದೆಗಳ ನಡುವೆ ಕಂಡ   ಒಂದು  ಪಾಳು  ಕಟ್ಟಡ ಸಮೀಪ ನಿಂತಿತು .ಹರ್ಷಾ ಇದೇನು??  ಅಂದೇ ...... ಇದಾ ಸಾರ್ !!!...............ಬನ್ನಿ ನೋಡೋಣ  ಅಂದಾ!!!!