Sunday, July 16, 2017

ಸೋತವನು ಒಮ್ಮೆ ಗೆದ್ದೇಗೆಲ್ಲುತ್ತಾನೆ. .........! ಸೋಲು ಎಂದಿಗೂ ಸಾವಿಗೆ ದಾರಿಯಲ್ಲ

ಹಾರುವ ಹಕ್ಕಿಗೂ ಸಹ  ಬದುಕಿನ  ಸತ್ಯದ ಅರಿವಿದೆ 



ಮಸ್ಕಾರ  ಎಲ್ಲರಿಗೂ  , ಮತ್ತೊಮ್ಮೆ ಬ್ಲಾಗ್  ಕಡೆಗೆ  ಮುಖ ಮಾಡಿದ್ದೇನೆ,  ನಮ್ಮ ಮಾತುಗಳನ್ನು , ನಮ್ಮ ವಿಚಾರಗಳನ್ನು  ಎಲ್ಲರೊಡನೆ  ಹಂಚಿಕೊಂಡಾಗ  ಆಗುವ ತೃಪ್ತಿಯೇ ಬೇರೆ. ಜೀವನಪಯಣದಲ್ಲಿ  ಒಮ್ಮೊಮ್ಮೆ  ಏರು ಪೇರುಗಳು  ಇರುತ್ತವೆ  ಅದಕ್ಕೆ ಜೀವನ ಅನ್ನೋದು, ಜೀವನದಲ್ಲಿ  ಕಹಿಯ ರುಚಿ  ಗೊತ್ತಿಲ್ಲದಿದ್ದರೆ  ಸಿಹಿಯ ಬೆಲೆ ತಿಳಿಯೋದು  ಹ್ಯಾಗೆ ಆಲ್ವಾ...?  ಅದೇ ರೀತಿ  ಜೀವನದಲ್ಲಿ  ಸೋಲಿನ ರುಚಿಯ ಅನುಭವ ಪಡೆಯದೇ   ಗೆಲುವಿನ  ರುಚಿ  ಸಿಹಿಯಾಗಿರಲು ಸಾಧ್ಯವಿಲ್ಲಾ.....!   "ಸೋತವನು ಒಮ್ಮೆ ಗೆದ್ದೇಗೆಲ್ಲುತ್ತಾನೆ. .........! ಸೋಲು ಎಂದಿಗೂ ಸಾವಿಗೆ ದಾರಿಯಲ್ಲ"  ಇವೆಲ್ಲಾ  ಸತ್ಯಗಳೂ  ಗೊತ್ತಿದ್ದೂ ಸಹ ಒಮ್ಮೊಮ್ಮೆ  ಮನುಷ್ಯ  ತಾಳ್ಮೆಗೆಟ್ಟು  ದುಡುಕಿನ ನಿರ್ಧಾರ ಕೈಗೊಳ್ಳುತ್ತಾನೆ   ಅದಕ್ಕೆ ಬಹಳಷ್ಟು  ಕಾರಣಗಳು ಸಹ ಇರುತ್ತವೆ  ಬದುಕಿನ  ವೈಪಲ್ಯತೆ , ಆಕಸ್ಮಿಕ ಘಟನೆಗಳು,  ಅಸಹಾಯಕತೆ, ನೋವು, ಹತಾಶೆ ,  ಸುತ್ತ ಮುತ್ತಲಿನ  ಜನರಿಂದ ಅವಮಾನ , ತನಗೆ ಒದಗಿಬಂದಿರುವ  ಕಷ್ಟಗಳನ್ನು ಪರಿಹರಿಸಿಕೊಳ್ಳಲು  ಯಾವುದೇ ದಾರಿ ಕಾಣದಾಗ , ಬಂಧು ಬಳಗಗಳಿಂದ , ಗೆಳೆಯರಿಂದ ತಾತ್ಸಾರಕ್ಕೆ ಸಿಲುಕಿದಾಗ , ಎಲ್ಲರೂ ತನ್ನನ್ನು ನಿರ್ಲಕ್ಷ   ಮಾಡ್ತಾ  ಇದ್ದಾರೆ  ನನ್ನ ಗೋಳನ್ನು  ಕೇಳುವವರು ಯಾರೂ ಇಲ್ಲಾ  ಅನ್ನಿಸಿದಾಗ , ಅಸಹನೀಯವಾದ  ಅನಾರೋಗ್ಯ ಗಳಿಂದ  ನೋವಿನಿಂದ  ಬಳಲುವಾಗ , ಹಾಗು ಇಂತಹ ಇನ್ನೂ ಬಹಳಷ್ಟು  ವಿವಿಧ ಕಾರಣಗಳಿಂದ  ತನ್ನ  ಸಾವನ್ನು ತಾನೇ ಬಯಸಿಕೊಳ್ಳುತ್ತಾನೆ, 



    ಸಿನಿಮ ಜಗತ್ತಿನ  ಹೀರೋ  ಆಗಿದ್ದವನೂ ಸಹ  ಜೀವನದಲ್ಲಿ ಸೋತಿದ್ದ [ ಚಿತ್ರ ಕೃಪೆ  ಶ್ರೀ.ಬಿ.ಸಿ. ನಾಗೇಂದ್ರ ] 


ಹೌದಲ್ವಾ  ಎಲ್ಲರಿಗೂ ಒಮ್ಮೊಮ್ಮೆ ಹೀಗೆ ಅನ್ನಿಸಿರುತ್ತದೆ, ಕೆಲವರು  ತಮ್ಮ ಮನೋಬಲದಿಂದ ಇಂತಹ ಪರಿಸ್ಥಿತಿಗಳನ್ನು  ಗೆದ್ದುಬರುತ್ತಾರೆ, ಮತ್ತೆ  ಕೆಲವರು  ಹತಾಶರಾಗದೆ  ತಮ್ಮ ಆತ್ಮೀಯರ  ಸಲಹೆ ಸಹಾಯ ಪಡೆದು ಜೀವನದ  ಸೋಲನ್ನು  ಗೆದ್ದು ಬರುತ್ತಾರೆ , ಆದರೆ  ಇದ್ಯಾವುದು ಸಿಗದೇ ನಿರ್ಲಕ್ಷಕ್ಕೆ  ಒಳಗಾಗಿ  ಬದುಕನ್ನು  ಕಳೆದುಕೊಳ್ಳುವ  ಜನ  ನಮ್ಮ  ಆತ್ಮೀಯರಲ್ಲೇ ಇರುತ್ತಾರೆ , ಅಥವಾ  ನಮ್ಮ ಸುತ್ತ ಮುತ್ತಲೇ ಇರುತ್ತಾರೆ  , ಇಂತಹವರಿಗೆ  ಆತ್ಮೀಯರಾಗಿ  ತಮ್ಮನ್ನು ಸಂತೈಸುವ ಒಂದು  ಒಳ್ಳೆಯ ಹೃದಯವಂತ  ವ್ಯಕ್ತಿ,  ತಮ್ಮ  ಸಮಸ್ಯೆಗಳಿಗೆ/ ನೋವಿನ  ಮಾತುಗಳಿಗೆ  ಕಿವಿಯಾಗಿ  ಹಾಗು ಅದಕ್ಕೆ  ಉತ್ತರವಾಗಿ   ಸ್ಪಂದಿಸುವ  ವ್ಯಕ್ತಿಗಳ  ಅವಶ್ಯಕತೆ ಇರುತ್ತದೆ, ಆದರೆ  ಗೊತ್ತಿದ್ದೋ, ಗೊತ್ತಿಲ್ಲದೆಯೋ, ಅಥವಾ ದಿನಾ ಸಾಯೋವವರಿಗೆ  ಅಳುವವರು ಯಾರು  ಎಂಬ  ದೋರಣೆಯಿಂದ ಅವರನ್ನು ನಿರ್ಲಕ್ಷ  ಮಾಡುವ ಕಾರಣ, "ಅಯ್ಯೋ ಇಂದಿನ  ಬದುಕಿನ ಜಂಜಾಟದಲ್ಲಿ  ನಮ್ಮದೇ ನಮಗೆ ಇನ್ನೂ ಇದನ್ನೆಲ್ಲಾ  ಯಾರ್ ಮಾಡ್ತಾರೆ  ಹೋಗ್ರೀ...."  "ಅವರು ಮಾಡಿದ ಪಾಪ ಅವರು ಅನುಭವಿಸಲಿ ನಮಗ್ಯಾಕೆ  ಇದೆಲ್ಲಾ ಉಸಾಬರಿ "   ಅನ್ನುವ  ಮನಸ್ಥಿತಿಗಳಿಂದ  ಅ ಸುತ್ತ ಮುತ್ತ ಇರುವ  ಹತಾಶ ಜೀವಗಳಿಗೆ  ಬದುಕಿನ ದಾರಿಯನ್ನು  ಮತ್ತೆ ತೋರಿಸುವ   ಕೆಲಸಗಳನ್ನು  ನಾವು ಮಾಡುತ್ತಿಲ್ಲ  ಅನ್ಸುತ್ತೆ. ಹಾಗಾಗಿ ಕೆಲವೊಮ್ಮೆ  ಗೊತ್ತಿಲ್ಲದೆಯೋ / ಗೊತ್ತಿದ್ದೋ  ನಿರ್ಲಕ್ಷಕ್ಕೆ  ಒಳಗಾಗಿ   ಇಂತಹವರು  ಬದುಕನ್ನು  ಅಂತ್ಯ ಮಾಡಿಕೊಂಡಾಗ  ನಾವೇ   ವೇದಾಂತ  ಹೇಳುತ್ತಾ  ಸತ್ತವನನ್ನು  ಬಯ್ಯುತ್ತೇವೆ. 



ಜಗತ್ತನ್ನೇ ನಗಿಸಿದವನು ಸಹ  ಜೀವನದಲ್ಲಿ   ಬಹಳ  ನೋವು ತಿಂದು  ಅತ್ತಿದ್ದ [ ಚಿತ್ರ ಕೃಪೆ  ಅಂತರ್ಜಲ] 



ಬದುಕು ಅನ್ನೋದು  ದಿನದಿಂದ  ದಿನಕ್ಕೆ , ವರ್ಷದಿಂದ ವರ್ಷಕ್ಕೆ  ಬದಲಾಗುತ್ತಿರುತ್ತದೆ, ವೈಜ್ಞಾನಿಕ  ಆವಿಷ್ಕಾರಗಳು  ಹೆಚ್ಚಿದಂತೆ  ಜೀವನ  ಸುಖವನ್ನು ಬಯಸುತ್ತದೆ , ಅದಕ್ಕೆ ತಕ್ಕಂತೆ ಜೀವನ ಶೈಲಿಯೂ ಸಹ  ಬದಲಾಗಿ  ಬದುಕಿನ ಮೇಲೆ ಒತ್ತಡ  ಜಾಸ್ತಿಯಾಗುತ್ತಾ  ವಾಸ್ತವತೆಯನ್ನು ಅರ್ಥಮಾಡಿಕೊಳ್ಳದೆ  ಮನುಷ್ಯ  ಕೆಲವೊಮ್ಮೆ  ಬದುಕಿನಲ್ಲಿ   ಎಡವುತ್ತಾನೆ, ಇದಕ್ಕೆ ಇಂತಹದೆ ಕಾರಣಾ  ಅಂತಿಲ್ಲ , ಯಾವ ಕಾರಣ ಬೇಕಾದರೂ ಆಗಿರಬಹುದು. ಆದರೆ  ತನ್ನ  ಸುತ್ತ ಮುತ್ತಲಿನ ವಾಸ್ತವತೆಯನ್ನು  ಅರಿಯದೆ  ಭ್ರಮೆಯಲ್ಲಿ  ಬದುಕಿದಾಗ ಇಂತಹ  ಅಚಾತುರ್ಯ  ಆಗಿಬಿಡುತ್ತದೆ . ಬದುಕಿನ ನಿರ್ವಹಣೆ ಬಗ್ಗೆ ಯಾವ ಶಾಲೆ/ ಕಾಲೇಜುಗಳು/  ವಿಶ್ವ ವಿಧ್ಯಾಲಯಗಳೂ ಕೂಡ  ನಮಗೆ ಕಲಿಸಿಕೊಡಲಾರವು,  ಇದಕ್ಕೆ ಸಾಕ್ಷಿಯಾಗಿ ನಮ್ಮ ಸುತ್ತ ಮುತ್ತಲಿನ  ಹಲವಾರು  ದೊಡ್ಡ  ದೊಡ್ಡ ಪದವಿ ಪಡೆದ  ಜನ  ಜೀವನ ನಿರ್ವಹಣೆಯಲ್ಲಿ ಸೋತಿರೋದನ್ನು  ಗಮನಿಸಬಹುದು .ನಮ್ಮ ಜೀವನ ಹಸನಾಗಲು  ನಮ್ಮ ಜೀವನದಲ್ಲಿ  ಅನುಭವಿಸುವ ಸೋಲುಗಳೇ   ವಿಶ್ವ ವಿಧ್ಯಾನಿಲಯಗಳಾಗಿ   ಪಾಠ ಕಲಿಸುತ್ತವೆ,   ಆದರೆ  ಜೀವನದ ಸೋಲನ್ನು  ಒಪ್ಪಿಕೊಳ್ಳುವ , ವಿಮರ್ಶಿಸುವ , ಅದಕ್ಕೆ   ಉತ್ತರ ಕಂಡುಕೊಳ್ಳುವಲ್ಲಿ  ನಾವು ಬಹಳಷ್ಟು   ವಿಚಾರಗಳನ್ನು  ಬದುಕಿನಲ್ಲಿ ಕಲಿಯಬೇಕಿದೆ, ಹಾಗು ನಮ್ಮ ಆತ್ಮೀಯರಿಗೂ ಸಹ  ಕಲಿಸಬೇಕಿದೆ. 




ಚಾರ್ಲ್ಸ್  ದಾರ್ವಿನ್  ಸಿದ್ದಾಂತವನ್ನು  ಬಿಟ್ಟಿಲ್ಲ  ಬದುಕಿನ ಸತ್ಯ 


ನಮ್ಮ ಆತ್ಮೀಯರಲ್ಲಿ ಕಂಡುಬರುವ  ಹತಾಶ ವ್ಯಕ್ತಿಗಳು ಎದುರಿಸುತ್ತಿರುವ  ಸಮಸ್ಯೆ ಗಳಿಗೆ  ಒಂದು ಪ್ರೀತಿಯ  ಮಾತು, ಒಂದು  ಸಾಂತ್ವನದ ಮಾತು, "ನೀನು ಹೆದರಬೇಡ  ಮುನ್ನುಗ್ಗು" ಎಂಬ ಭರವಸೆ, "ಹೆದರ ಬೇಡ  ಧೈರ್ಯವಾಗಿ ನಿನ್ನ ಮನಸಿನ ನೋವನ್ನು ನನ್ನಲ್ಲಿ  ಹೇಳಿಕೋ  ಇಬ್ಬರೂ ಸೇರಿ ಉತ್ತರ ಹುಡುಕೋಣ ಸಮಸ್ಯೆಗೆ"   ಅನ್ನೋ  ಮಾತುಗಳು  ಹಲವಾರು ವ್ಯಕ್ತಿಗಳ ಬದುಕಿಗೆ  ಸಂಜೀವಿನಿಯಾಗಿ  ಅವರ ಬದುಕು ಹಸನಾಗಿಬಿಡುತ್ತದೆ . ... ಆದರೆ  ನಾವು ಮಾಡ್ತಿರೋದೆನು.....?    ಯಾರೋ  ಆತ್ಮೀಯರು  / ನೆಂಟರು/ ಗೆಳೆಯರು,  ಬದುಕಿನಲ್ಲಿ  ಅಸಹಾಯಕರಾಗಿ  ಹತಾಶರಾದಾಗ   ಅವರ ತಪ್ಪುಗಳನ್ನು ಟೀಕಿಸುತ್ತಾ , ಅವರ ಜೀವನ ಶೈಲಿಯನ್ನು ವಿಮರ್ಶೆ ಮಾಡುತ್ತಾ , ಅವರ  ಬಗ್ಗೆ  ಅಪಹಾಸ್ಯ  ಮಾಡುತ್ತಾ   ನಾವೇ ಗ್ರೇಟ್  ಅನ್ನೋಹಾಗೆ ವರ್ತಿಸೋದು , ಹತಾಶರಾಗಿ ನೋವು ಅನುಭವಿಸುವವರನ್ನು     ನಿರ್ಲಕ್ಷ  ಮಾಡೋದು  ಯಾವ ನ್ಯಾಯ ಆಲ್ವಾ...  ! ಇಂತಹ ಗುಣಗಳು  ನಮಗೆ ಸಹಜವಾಗಿ ಬದುಕಿನಲ್ಲಿ ಬಂದುಬಿಟ್ಟಿರುತ್ತವೆ  ಆದರೆ ಇದನ್ನು   ಸರಿಪಡಿಸ್ಕೊಂಡು  ನಿಂತಾಗ  ಇಂತಹ ವಿಚಾರಗಳಿಗೆ ಉತ್ತರ ಸಿಗುತ್ತವೆ.  ಬನ್ನಿ ನಾವೆಲ್ಲಾ  ಹೊಸ ದಿಕ್ಕಿನಲ್ಲಿ ಸಾಗೋಣ.   ''ಬದುಕಿನಲ್ಲಿ ಸೋತವನು ಒಮ್ಮೆ ಗೆದ್ದೇಗೆಲ್ಲುತ್ತಾನೆ'' . .........!   ''ಸೋಲು ಎಂದಿಗೂ ಸಾವಿಗೆ ದಾರಿಯಲ್ಲ'' ಎಂಬ ಸತ್ಯವನ್ನು ಸಾರೋಣ,  ಹತಾಶ ಮನಸುಗಳಿಗೆ  ಬದುಕಿನ ಅರ್ಥ ತಿಳಿಸೋಣ,  ಹತಾಶ ಮನಸುಗಳನ್ನು ಸಾಂತ್ವನ ಗೊಳಿಸೋಣ,  ಎಲ್ಲರ ಬದುಕು ಹಸನಾಗಲೆಂದು   ಹಾರೈಸೋಣ  ಏನಂತೀರಾ ... ?



  

Sunday, January 8, 2017

ಶಿರಸಿಯಲ್ಲೊಬ್ಬ ಆಧುನಿಕ ಬಿ.ಎಲ್. ರೈಸ್..................! ಸದ್ದಿಲ್ಲದೇ ಇತಿಹಾಸದ ಬೆನ್ನು ಹತ್ತಿದ ಸಾಹಸಿ.



ಶ್ರೀ  ಲಕ್ಷ್ಮೀಶ್ ಹೆಗ್ಡೆ  ಶಿರಸಿಯಲ್ಲೊಬ್ಬ  ಆಧುನಿಕ  ಬಿ.ಎಲ್. ರೈಸ್   



ನನಗೆ   ಒಬ್ಬರನ್ನು ಅನವಶ್ಯಕವಾಗಿ  ಹೊಗಳೋದು  ಆಗಿಬರಲ್ಲಾ,  ಹಾಗಾಗಿ  ಆದಷ್ಟು  ವ್ಯಕ್ತಿಗಳ  ಬಗ್ಗೆ  ನನ್ನ ಬ್ಲಾಗ್ನಲ್ಲಿ  ಬರಹಗಳು ಕಡಿಮೆ ಇರುತ್ತದೆ. ಆದರೂ  ಕೆಲವೊಮ್ಮೆ  ಕೆಲವು ಮಹನೀಯರು  ತಮ್ಮ   ಸಾಧನೆಗಳಿಂದ  ನನ್ನ  ಮನಸಿನಲ್ಲಿ  ನಿಂತುಬಿಡುತ್ತಾರೆ. ಇನ್ನು ಅಂತಹವರ   ಜ್ಞಾನ  ಭಂಡಾರ  ಕಂಡು ನಾನು  ಮೂಕ ವಿಸ್ಮಿತನಾಗಿಬಿಡುತ್ತೇನೆ  . ಅಂತಹ ಒಬ್ಬ   ಅಪರೂಪದ   ವ್ಯಕ್ತಿಯನ್ನು  ನನ್ನ ಬ್ಲಾಗಿನ  ಆವರಣಕ್ಕೆ ಕರೆ   ತಂದು ಅವರ ಪರಿಚಯ   ಮಾಡಿಕೊಡಲು  ನಿಜಕ್ಕೂ   ಸಂತಸ ಪಡುತ್ತೇನೆ.



ಆಗಿನ್ನೂ ಶಿರಸಿಗೆ  ಬಹಳ ವರ್ಷಗಳ ನಂತರ  ಹೊರಟ ಸಮಯ ,  ಶಿರಸಿ ಸಮೀಪದ  ಕೊಳಗಿ ಬೀಸ್  ನಲ್ಲಿ   ಶ್ರೀ ಗುರುಮೂರ್ತಿ  ಹೆಗ್ಡೆ  ಅವರ ಸಹೋದರನ  ವಿವಾಹಕ್ಕೆ   ಆಮಂತ್ರಣವಿತ್ತು, ಹೊರಡುವ ಮುಂಚೆ ಆಪ್ತ  ಮಿತ್ರ  ಪ್ರಕಾಶ್   ಹೆಗ್ಡೆ ಯವರಿಗೆ  ಶಿರಸಿ ಇತಿಹಾಸ  ತಿಳಿದವರ   ಬಗ್ಗೆ  ಮಾಹಿತಿ ಕೊಡುವಂತೆ  ಪೀಡಿಸಿದೆ , ಪಾಪ  ಅವರೂ ಸಹ   ತಮಗೆ ತಿಳಿದ  ಹಲವಾರು   ವ್ಯಕ್ತಿಗಳ  ವಿವರ ಕೊಟ್ಟರು ಆದರೆ  ಆ ಸಮಯದಲ್ಲಿ  ಶಿರಸಿ  ಮಾರಿಕಾಂಬೆ ಜಾತ್ರೆ  ಇದ್ದ ಕಾರಣ,  ನನಗೂ ಸಮಯ ಕಡಿಮೆ  ಇದ್ದ  ಕಾರಣ, ಮತ್ತೊಬ್ಬ  ಪ್ರೀತಿಯ ತಮ್ಮ  ಹರ್ಷಹೆಗ್ಡೆ  ಜೊತೆ  ಅಲೆದಾಡಿ  ಶಿರಸಿ  ಸುತ್ತ  ಮುತ್ತ  ಅಲೆದಾಡಿ ಸಾಕಷ್ಟು ಛಾಯಾಚಿತ್ರಗಳು  ಹಾಗು  ಸಿಕ್ಕಷ್ಟು   ಮಾಹಿತಿ   ದೋಚಿಕೊಂಡು  ಬಂದಿದ್ದೆ, ಆಗಿನ್ನೂ  ಶಿರಸಿಯ ಬಗ್ಗೆ ಬ್ಲಾಗ್ ನಲ್ಲಿ ಬರೆಯುವ ಮನಸು ಮಾಡಿರಲಿಲ್ಲ. ಒಂದು ದಿನ ಬ್ಲಾಗ್  ಬರಹಕ್ಕೆ ಏನೂ ವಿಚಾರ ಸಿಗದಿದ್ದಾಗ  ಶಿರಸಿಯ ಛಾಯಾಚಿತ್ರಗಳನ್ನು ನೋಡುತ್ತಾ  ಕುಳಿತೆ. ಸಹಸ್ರಲಿಂಗದ ಛಾಯಾಚಿತ್ರ ನೋಡುತ್ತಾ  ಈ ಪ್ರಾಂತದಲ್ಲಿ  ಏನೋ ವಿಶೇಷ ಇದೆ ಅನ್ನಿಸಿತು. ಅದರಂತೆ ಹುಡುಕಾಟ ನಡೆಸಿ, ಹಳೆ  ಗೆಝೆಟಿಯರ್ ಗಳನ್ನೂ ತಿರುವು ಹಾಕತೊಡಗಿದೆ. ಆಹಾ ಇಷ್ಟೆಲ್ಲಾ ಮಾಹಿತಿ ಇದೆಯಾ ಅನ್ನಿಸಿತು.  ಆದರೂ  ಸ್ಥಳೀಯ ವ್ಯಕ್ತಿಗಳ ಮಾಹಿತಿ ಇದ್ದರೆ ಚೆನ್ನ  ಅನ್ನಿಸಿ  ಹುಡುಕಾಟ ನಡೆಸುತ್ತಿದ್ದಾಗ  ನನಗೆ ಬಹುಮಾನವಾಗಿ ಸಿಕ್ಕವರೇ   ಶ್ರೀ  ಲಕ್ಷ್ಮೀಶ್ ಹೆಗ್ಡೆ  ಅವರು,  ಹೇಗೋ ಸಿಕ್ಕ  ಅವರ  ಮೊಬೈಲ್  ನಂಬರ್ ಗೆ ಕರೆ ಮಾಡಿದಾಗ  ಆತ್ಮೀಯವಾಗಿ ಪರಿಚಯ ಮಾಡಿಕೊಂಡು  ಶಿರಸಿ ಇತಿಹಾಸದ  ಬಗ್ಗೆ ಮೈಸೂರಿನಿಂದ  ಕರೆ  ಮಾಡಿದ್ದಕ್ಕೆ ಹರುಷ  ವ್ಯಕ್ತ ಪಡಿಸಿ.  ಕೆಲವು ಮಾಹಿತಿ ನೀಡಿದರು.  ಅಲ್ಲಿಂದ  ನಮ್ಮಿಬ್ಬರ  ಪರಿಚಯ ಆರಂಭವಾಯಿತು. ಹಲವಾರು ಸಾರಿ  ಶಿರಸಿಗೆ ಬಂದ್ರೂ  ಅವರ ಭೇಟಿಮಾಡಲು ಆಗಿರಲಿಲ್ಲ. 



ಇತಿಹಾಸ   ಜಾತ್ರೆಯ  ಮೆರವಣಿಗೆಗೆ   ಶಿರಸಿ ಮಾರಿಕಾಂಬೆ ಆಶೀರ್ವಾದ 


ಶಿರಸಿಯ  ಹಲವಾರು ವಿಚಾರಗಳ ಬಗ್ಗೆ  ಮಾಹಿತಿ  ತಿಳಿಯಲು ಇವರನ್ನು ಬಹಳಷ್ಟು ಸಾರಿ ಫೋನ್ ಮೂಲಕ ನಾನು ಕಾಡಿಸಿದ್ದರೂ  ಬೇಸರ ಮಾಡಿಕೊಳ್ಳದೆ, ಇತಿಹಾಸದ  ಮಾಹಿತಿ ನೀಡುತ್ತಿದ್ದ ಇವರನ್ನು ಭೇಟಿಯಾಗುವ ಹಂಬಲ  ಶುರುವಾಯ್ತು. ಅದಕ್ಕೆ ಕಾಲ ಕೂಡಿಬಂದಿದ್ದೆ  ಶಿರಸಿಯಲ್ಲಿ  ಜರುಗಿದ  ರಾಜ್ಯಮಟ್ಟದ  ಇತಿಹಾಸ ಸಮ್ಮೇಳನದಲ್ಲಿ. ನಿಜಕ್ಕೂ ಶಿರಸಿಯಂತಹ  ಒಂದು ತಾಲೂಕು ಕೇಂದ್ರದಲ್ಲಿ  ಒಂದು  ರಾಜ್ಯಮಟ್ಟದಲ್ಲಿ   ಜರುಗುವ  ಕಾರ್ಯಕ್ರಮಕ್ಕಿಂತ  ಶಿಸ್ತು ಬದ್ದವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ  ಆಯೋಜಿಸಿ  ನಿರ್ವಹಣೆ ಮಾಡಿದ್ದು  ಲಕ್ಷ್ಮೀಶ್ ಹೆಗ್ಡೆಯವರ  ಸಾಹಸಕ್ಕೆ ಸಾಕ್ಷಿ,


ನನಗೂ ಇಷ್ಟಾ  ಶಿರಸಿಯ  ಇತಿಹಾಸ  ಅಂದ್ರೂ ಕಮಲಾ ಹಂ  ಪ. ನಾ . 


ಶಿರಸಿಯ ಸುತ್ತಮುತ್ತ  ಬಹಳಷ್ಟು ಐತಿಹಾಸಿಕ ತಾಣಗಳಿವೆ, ಪ್ರಕೃತಿಯ ಮಡಿಲಲ್ಲಿ   ಅನೇಕ  ಇತಿಹಾಸದ  ಕುರುಹುಗಳನ್ನು ಬಚ್ಚಿಟ್ಟುಕೊಂಡು  ಶಿರಸಿ  ಇತಿಹಾಸಕಾರರಿಗೆ  ಸವಾಲಾಗಿ ನಿಂತಿದೆ. ಇಂತಹ ಇತಿಹಾಸದ ಚಕ್ರವ್ಯೂಹ ಭೇದಿಸುತ್ತ , ರಾಜ್ಯಮಟ್ಟದ ಇತಿಹಾಸ  ಜಾತ್ರೆ  ಏರ್ಪಡಿಸುತ್ತ   ಹಲವಾರು  ದಿಗ್ಗಜರ  ಸಮಕ್ಷಮದಲ್ಲಿ   ನೋಡ್ರಪ್ಪ  ನಮ್ಮೂರ ಇತಿಹಾಸದ ತಾಕತ್ತು ಇದು ಅಂತಾ ತೋರಿಸುವ  ಶ್ರೀ ಲಕ್ಷ್ಮೀಶ್ ಹೆಗ್ಡೆ  ರ    ಛಲಕ್ಕೆ  ಯಾರಾದ್ರೂ ಸೈ  ಅನ್ನಲೇಬೇಕು.  ಶಿರಸಿಯ ಇತಿಹಾಸ  ಹೇಳುವ  ಇವರ ಇತಿಹಾಸ   ಏನೂ ಅಂತಾ  ಕೆದಕಿದಾಗ   ಸಿಕ್ಕಿದ್ದು  ಮತ್ತೊಂದು ಇತಿಹಾಸ .

ಇತಿಹಾಸಕಾರ  ಹಾಗು ಅವರ ಅಂತರಂಗ      {ಚಿತ್ರ ಕೃಪೆ ಲಕ್ಷ್ಮೀಶ್ ಹೆಗ್ಡೆ. }



 




ಹೌದ್ರೀ  ಇತಿಹಾಸಕಾರನಿಗೂ ಒಂದು ಇತಿಹಾಸ  ಇರುತ್ತೆ,   ಬನ್ನಿ ಬನ್ನಿ ಹೀಗೆ ...! ಅದೊಂದು ದಿನ   ದಿನಾಂಖ  18 ಫೆಬ್ರವರಿ  1984  ರಂದು ಶಿರಸಿಯ  ಸೋಂದೆ ಸಮೀಪದ  ಬಾಡ್ಲಾ ಕೊಪ್ಪದ    ಶ್ರೀ ರಾಮಚಂದ್ರ ಹೆಗ್ಡೆ  ಹಾಗು ಮಮತಾ ಹೆಗ್ಡೆ ಯವರ ಮನೆಯಲ್ಲಿ  ಸಂಭ್ರಮವೋ ಸಂಭ್ರಮ.  ಅಂದು  ಒಂದು ಗಂಡು ಮಗು  ಅಳುತ್ತಾ  ಅಳುತ್ತಾ  ಐತಿಹಾಸಿಕ  ಸೋಂದಾ  ಪ್ರದೇಶದಲ್ಲಿ  ತನ್ನ ಜನ್ಮ ಪಡೆದಿತ್ತು. ಮನೆಯಲ್ಲಿನ ಹಿರಿಯರ ಪ್ರಭಾವವೋ ಅಥವಾ ಆ ಮಗು ಜನಿಸಿದ  ಮಣ್ಣಿನ  ಗುಣವೋ ಕಾಣೆ  ಆ ಮಗು ಬೆಳೆಯುತ್ತಾ  ಬೆಳೆಯುತ್ತಾ   ಇತಿಹಾಸದ ಕಡೆ  ಆಕರ್ಷಿತನಾಗಿ  ಶಿರಸಿ ಸುತ್ತ ಮುತ್ತಲಿನ    ದೇವಾಲಯ, ವೀರಗಲ್ಲು, ಮಾಸ್ತಿ ಕಲ್ಲು,  ಶಾಸನಗಳು,  ಸ್ಮಾರಕಗಳನ್ನು  ಪ್ರೀತಿಸತೊಡಗಿತು.ಆ ಮಗುವೇ  ಇಂದಿನ ಶ್ರೀಯುತರಾದ  ಲಕ್ಷ್ಮೀಶ್ ಹೆಗ್ಡೆಯವರು.      ಬಿ. ಎ . ಮುಗಿಸಿದ  ನಂತರ ಪುರಾತತ್ವ ಶಾಸ್ತ್ರ , ಇತಿಹಾಸದಲ್ಲಿ ಎಂ. ಎ . ಮಾಡಿ ನಂತರ ಎಂ. ಫಿಲ್.  ಮಾಡಿದರು, ನಂತರ ಇತಿಹಾಸಕ್ಕೆ ಶಾಸನಗಳೇ ಭದ್ರ ಬುನಾದಿ ಎಂದು ತಿಳಿದು  ಶಾಸನ ಶಾಸ್ತ್ರದಲ್ಲಿ ಡಿಪ್ಲಮೋ[ Diplama in  epigraphy] ಮಾಡಿ ಹೆಚ್ಚಿನ ಜ್ಞಾನ ಸಂಪಾದಿಸುತ್ತಾರೆ. ಇನ್ನೇನು ಇಷ್ಟೆಲ್ಲಾ ಮಾಡಿದ ಮೇಲೆ ಕೆಲ್ಸಾ ಸಿಗೋಲ್ವೆ  ಅನ್ನೋಹಾಗೆ   ಸೋಂದೆ  ಸ್ವರ್ಣವಲ್ಲಿ  ಸಂಸ್ಥಾನ ಮಠ ಕ್ಕೆ ಸೇರಿದ  ಶ್ರೀನಿಕೇತನ  ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆ  ಜೊತೆಗೆ   ಆಡಳಿತಾಧಿಕಾರಿ  ಹುದ್ದೆ  ಲಭಿಸುತ್ತದೆ. ವೃತ್ತಿ ಯಾವುದಾದ್ರೇನು ಪ್ರವೃತ್ತಿ ಗೆ ನ್ಯಾಯ ದೊರಕಬೇಕಲ್ಲ.  ಶಿರಸಿ  ಸುತ್ತಮುತ್ತಲಿನ  ಇತಿಹಾಸದ   ಸೆಳೆತ  ಇವರನ್ನು ಆವರಿಸಿದ ಕಾರಣ,  ಪ್ರವೃತ್ತಿಯನ್ನೇ  ವೃತ್ತಿ ಮಾಡಿಕೊಳ್ಳುತ್ತಾರೆ  ಶಿರಸಿಯ  ಇತಿಹಾಸಕ್ಕೆ ಏನಾದರೂ ಕೊಡುಗೆ ನೀಡುವ  ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೆ..



ಸೋಂದಾ ಅರಸರ ಕಾಲ್ಪನಿಕ  ಚಿತ್ರ. 


  2007 ರಲ್ಲಿ ಉತ್ತರ ಕನ್ನಡ  ಜಿಲ್ಲೆ ಅದರಲ್ಲೂ ವಿಶೇಷವಾಗಿ  ಶಿರಸಿಯ ಸುತ್ತ ಮುತ್ತ ಐತಿಹಾಸಿಕ  ಬನವಾಸಿ, ಸುಧಾಪುರ ಅಥವಾ ಸೋಂದೆಯ  ಅರಸು ಮನೆತನ , ಒಂದೇ ಎರಡೇ  ಬಗೆದಷ್ಟು  ಇತಿಹಾಸದ  ಅಚ್ಚರಿಗಳು, ಮಾಹಿತಿ ಸಿಗುತ್ತವೆ, ಲಕ್ಷ್ಮೀಶ್ ಹೆಗ್ಡೆ  ಅವರು ಶಿರಸಿ ಸುತ್ತ ಮುತ್ತ ಶಾಸನ, ವೀರಗಲ್ಲುಗಳ   ಅಧ್ಯಯನ,       ಐತಿಹಾಸಿಕ   ಸೋಂದೆ ಅರಸರುಗಳ  ಬಗ್ಗೆ ಅವರ  ಕೋಟೆಗಳ , ಬಗ್ಗೆ ಸಂಶೋಧನೆ , ಬನವಾಸಿಯ  ಚಾಲುಕ್ಯರ  ಬಗ್ಗೆ  ಸಂಶೋಧನೆ  ಮಾಡುತ್ತಾ ಮಾಡುತ್ತಾ   ಹಳೆ ಮೈಸೂರು ಸಂಸ್ಥಾನದಲ್ಲಿ   ಬೆಂಜಮಿನ್  ಲೆವಿಸ್  ರೈಸ್  ಅವರು ಮಾಡಿದ  ಐತಿಹಾಸಿಕ  ಸಂಶೋಧನೆಗಳಿಗೆ ಸರಿ ಸಮಾನವಾಗಿ  ಇತಿಹಾಸದ ವಿಚಾರಗಳನ್ನು ಹೆಕ್ಕಿ ತೆಗೆದು  ಜನರ ಮುಂದಿಡುತ್ತಾರೆ.  ನಂತರ ಅಮೇರಿಕಾದ ಮಿಚಿಗನ್  ವಿಶ್ವವಿದ್ಯಾಲಯದ   ಸಂಶೋಧಕರಾದ "ಎಲಿಜಬತ್ ಬ್ರಡ್ಜಸ್ "  ರವರ  ಜೊತೆಯಲ್ಲಿ  ಇಕ್ಕೇರಿ ಹಾಗು ಕೆಳದಿ   ಸಂಶೋಧನೆಯಲ್ಲಿ  ಕಾರ್ಯನಿರ್ವಹಿಸಿ, ವಿದೇಶಿಯರು  ಹೇಗೆ  ಐತಿಹಾಸಿಕ  ವಿಚಾರಗಳನ್ನು ಸಂಶೋಧನೆ ಮಾಡುತ್ತಾರೆ ಎಂಬುದನ್ನು  ತಿಳಿದುಕೊಳ್ಳುತ್ತಾರೆ. ಅನುಭವ  ಮಾಗಿದಂತೆ  ಬರೆಯುವ ಕೈಗಳು  ಬರೆಯುತೊಡಗುತ್ತವೆ.  ಈ ಬರವಣಿಗೆಯಿಂದ  ಒಂಬತ್ತು  ಐತಿಹಾಸಿಕ ಕೃತಿಗಳು, ಹತ್ತು  ಐತಿಹಾಸಿಕ  ನಾಟಕಗಳು  ಉದಯವಾಗುತ್ತವೆ. ಐತಿಹಾಸಿಕ ನಾಟಕಗಳ  ಪಾತ್ರಗಳಿಗೆ  ಜೀವಕೊಡಲು  "ರಂಗ ಚರಿತ " ಎಂಬ  ರಂಗ ಸಂಘಟನೆಯನ್ನು  ಹುಟ್ಟುಹಾಕುತ್ತಾರೆ. ಈ ಮೂಲಕ  ಸಮಾಜಕ್ಕೆ ಇತಿಹಾಸದ  ಬಗ್ಗೆ ತಿಳುವಳಿಕೆ  ನೀಡಲು  ಹಾದಿ ಕಂಡುಕೊಳ್ಳುತ್ತಾರೆ.

ಬನ್ನಿ ಇತಿಹಾಸ  ತಿಳಿಯೋಣ

ಇತಿಹಾಸದೆಡೆಗೆ  ತುಡಿಯುತ್ತಿದ್ದ  ಶ್ರೀ ಲಕ್ಷ್ಮೀಶ್ ಹೆಗ್ಡೆ  ಸುಮ್ಮನೆ ಕೂರುವ  ವ್ಯಕ್ತಿಯಲ್ಲ  ಜನರಲ್ಲಿ ಇತಿಹಾಸ ಪ್ರೀತಿ  ಬೆಳಸಲು, ರಾಜ್ಯ ಮಟ್ಟದ ಇತಿಹಾಸದ   ಜಾತ್ರೆಯನ್ನು  ಕಳೆದ ಎರಡು ವರ್ಷಗಳಿಂದ  "ಉತ್ತರ ಕನ್ನಡ  ಜಿಲ್ಲಾ ಚರಿತ್ರಾ  ಅಭಿಯಾನ" ಎಂಬ   ಹೆಸರಿನಲ್ಲಿ  ಕಾರ್ಯಕ್ರಮ  ಮಾಡುತ್ತಿದ್ದಾರೆ  , ಸುಮಾರು ಒಂದೂವರೆ ತಾಸು  ಇತಿಹಾಸದ ಹಲವು ವಿಚಾರಗಳ ಬಗ್ಗೆ  ವಿದ್ವಾಂಸರಿಂದ   ವಿಚಾರ ಮಂಡನೆ  , ಉಪನ್ಯಾಸ, ನಂತರ  ದೃಶ್ಯ ಮಾಧ್ಯಮದ ಮೂಲಕ,  ಪ್ರಹಸನಗಳ ಮೂಲಕ  , ಉತ್ತರ ಕನ್ನಡ ಜಿಲ್ಲೆಯ,   ಇತಿಹಾಸದ ವಿಚಾರಗಳನ್ನು    ಜನರಿಗೆ  ಮನಮುಟ್ಟುವಂತೆ   ತಿಳಿಸಿಕೊಡುತ್ತಿದ್ದಾರೆ.  

 
ಇತಿಹಾಸ ತಿಳಿಯಲು ಬಂದ  ಮನಸುಗಳು 


ಹರಿಯುವ ನದಿಯನ್ನು ನಿಲ್ಲಿಸಲು ಸಾಧ್ಯವೇ,   ಹರಿಯುತ್ತಲೇ ಇರುತ್ತದೆ  ಹಾಗೆಯೇ  ಇವರ ಇತಿಹಾಸದ ಅಭಿಯಾನ  ಮುಂದುವರೆದು ಕಳೆದ ನಾಲ್ಕು  ವರ್ಷಗಳಿಂದ   " ನಮ್ಮ ನೆಲದ ಕಥೆ " ಎನ್ನುವ ಅಂಕಣದ ಮೂಲಕ  ಜನರಿಗೆ ಇತಿಹಾಸದ ಕೌತುಕಮಯ ವಿಚಾರಗಳನ್ನು  ತಿಳಿಸಿಕೊಡುತ್ತಿದ್ದಾರೆ.   ಇದನ್ನು ಓದಿದ ಯಾರಾದ್ರೂ   ಅಚ್ಚರಿಯಿಂದ   "ಆಹಾ  ನಮ್ಮೂರಿನಲ್ಲಿ ಹೀಗೂ ಉಂಟಾ.....?  "   ಅನ್ನಲೇಬೇಕು ಹಾಗಿರುತ್ತವೆ    ಮಾಹಿತಿ.  ಯಾರಿಗೆ ತಾನೇ  ತಮ್ಮ ಊರಿನ ಇತಿಹಾಸದ ಬಗ್ಗೆ ಹೆಮ್ಮೆ ಇರೋಲ್ಲಾ   ಹೇಳಿ,  ಹಾಗಾಗೇ   ಶ್ರೀ ಲಕ್ಷ್ಮೀಶ್ ಹೆಗ್ಡೆ ಅವರು  ತಮ್ಮ ಸುತ್ತಮುತ್ತಲಿನ ಸ್ಥಳೀಯ ಇತಿಹಾಸ   ಕುರಿತು ಗಂಭೀರ  ಚಿಂತನೆ ನಡೆಯುವಂತಾಗಲು    ರಾಜ್ಯ ಮಟ್ಟದ  ಇತಿಹಾಸ ಸಮ್ಮೇಳನ   ಆಯೋಜನೆಗೆ ಮುಂದಾಗುತ್ತಾರೆ.  ಜೊತೆಗೆ   ಇತಿಹಾಸದ  ಪಯಣದಲ್ಲಿ ಕಾಣಸಿಗುವ ಸಾಧಕರನ್ನು ಗೌರವಿಸಲು ಸೋದೆ ಸದಾಶಿವರಾಯ  ಪ್ರಶಸ್ತಿಯನ್ನು   ಪ್ರತಿಷ್ಠಾಪಿಸುತ್ತಾರೆ  . ಕಳೆದ ಎರಡು ವರ್ಷಗಳಿಂದ   ಅದ್ಭುತವಾದ  ಯಶಸ್ಸನ್ನು   ಈ  ಇತಿಹಾಸ ಸಮ್ಮೇಳನ  ಗಳಿಸಿ ಶಿರಸಿ  ಊರಿನ   ಗೌರವಕ್ಕೆ  ಇತಿಹಾಸದ  ಹೆಮ್ಮೆಯ ಕಿರೀಟ  ತೊಡಿಸಿದೆ.  ನಾಡಿನ ಹಲವಾರು  ಪ್ರಖ್ಯಾತ  ಇತಿಹಾಸಕಾರರು   ಇದರಲ್ಲಿ ಭಾಗವಹಿಸಿ   ಶಿರಸಿಯ  ಇತಿಹಾಸದ  ಗೌರವವನ್ನು ಹೆಚ್ಚಿಸಿದ್ದಾರೆ.
ಅರೆ ಇತಿಹಾಸದ  ಸಮ್ಮೇಳನಕ್ಕೆ  ಇಷ್ಟು ಜನ ಬರ್ತಾರಾ...?


ಇತಿಹಾಸದ ಹುಚ್ಚನ್ನು ಹತ್ತಿಸಿಕೊಂಡವರು ಸುಮ್ಮನಿರಲು ಸಾಧ್ಯವೇ ...? ಮುಂದಿನ ಪೀಳಿಗೆಯವರು  ಇತಿಹಾಸದ ತೇರನ್ನು ಎಳೆಯ ಬೇಕಲ್ಲವೇ ...? ಅದಕ್ಕಾಗಿ  ತಮ್ಮ ಸಂಸ್ಥೆ   ಶ್ರೀ ನಿಕೇತನದ   ಮಕ್ಕಳಿಗೆ   ಇತಿಹಾಸದ ರುಚಿ ಹತ್ತಿಸಲು  ಶ್ರಮಿಸುತ್ತಿದ್ದಾರೆ, ಹಾಗಾಗಿ ಮಕ್ಕಳಿಂದಲೇ  ಇತಿಹಾಸದ ವಿಚಾರಗಳನ್ನು  ಅಧ್ಯಯನ  ಹಾಗು ಸಂಶೋಧನೆ ಮಾಡಿಸಿ  ನಾಡಿನ  ಐತಿಹಾಸಿಕ  ಸ್ಥಳ ಬನವಾಸಿಯ ಬಗ್ಗೆ  ಮಕ್ಕಳಿಂದಲೇ ಗ್ರಂಥ ರಚನೆ  ಮಾಡಿಸಿದ್ದು   ನಿಜಕ್ಕೂ ಹೆಮ್ಮೆ ಪಡುವ   ವಿಚಾರ.  ೨೦೧೩ ರಲ್ಲಿ  ಆ ಇತಿಹಾಸ ಕಾರರ  ಬಗ್ಗೆ ವಿಚಾರ ತಿಳಿದು ಇವರ ಸಂಶೋಧನಾ ಸಾಹಿತ್ಯಕ್ಕಾಗಿ   ಡಾಕ್ಟರ್ ಎಂ.ಎಂ. ಕಲಬುರ್ಗಿಯವರಿಂದ  " ಬಸವರಾಜ ಕಟ್ಟೇಮನಿ  ರಾಜ್ಯ ಪ್ರಶಸ್ತಿ"  ನೀಡಿ  ಗೌರವಿಸಲಾಗಿದೆ.


ಬನವಾಸಿಯ ಮೂಲ ಮಧುಕೇಶ್ವರ ದೇವಾಲಯ. 


ಇತಿಹಾಸವನ್ನೇ  ಉಸಿರಾಡುತ್ತಿರುವ  ಶ್ರೀ ಲಕ್ಷ್ಮೀಶ್ ಹೆಗ್ಡೆ ಅವರ ಸಾಧನೆಯನ್ನು ಯಾರೂ ಗುರುತಿಸಲಿಲ್ವೇ  ಅಂತಾ  ಅಂದುಕೊಂಡಿರಾ ...?  ನಿಜ   ಇಂತಹ ಸಾಧನೆಗಳನ್ನು  ಗುರುತಿಸುವವರು ಬಹಳ ಕಡಿಮೆ, ಜೊತೆಗೆ  ಇಂತಹ  ಅದ್ಭುತ  ವ್ಯಕ್ತಿಗಳು  ಪ್ರಚಾರ ಪ್ರಿಯರಲ್ಲಾ, ಸದ್ದಿಲ್ಲದೇ  ತಮ್ಮ ಪಾಡಿಗೆ   ತಾವು  ತಮ್ಮ ಕರ್ತವ್ಯ ಮಾಡುತ್ತಿರುತ್ತಾರೆ.  "ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ  " ಎನ್ನುವ ಕವಿತೆಗೆ   ಅನ್ವರ್ಥವಾಗಿ  ಬದುಕುವ  ಈ ಇತಿಹಾಸಕಾರನನ್ನು  ಕನ್ನಡ ನಾಡಿಗೆ ಕೊಡುಗೆ ನೀಡಿದ "ಶಿರಸಿ"  ಗೆ  ಅಲ್ಲಿನ ಇತಿಹಾಸಕ್ಕೆ  ಒಮ್ಮೆ ಜೈ ಅಂದುಬಿಡೋಣ.



Sunday, January 1, 2017

ಹೋಗಿಬಾ ..... 2016 ನಿನಗೆ ಶುಭವಾಗಲಿ, ನಿನಗೆ ಬಯ್ಯಬೇಕೋ ಹೊಗಳಬೇಕೋ ತಿಳಿಯುತ್ತಿಲ್ಲ

ಚಿತ್ರ ಕೃಪೆ ಅಂತರ್ಜಾಲ . 


ನಮಸ್ತೆ  ಬಹಳ ತಿಂಗಳ ನಂತರ  ನಿಮ್ಮ  ಮುಂದೆ  ಹಾಜರಾಗಿದ್ದೇನೆ, ಎಲ್ಲರೂ  ಹೊಸ ಕ್ಯಾಲಂಡರ್ ವರ್ಷವನ್ನು ಸ್ವಾಗತಿಸಿ ಖುಷಿಯಿಂದ ಮೆರೆದಾಡುತ್ತಾರೆ. ಆದರೆ  ತಾವು ಕಳೆದ ವರ್ಷದಲ್ಲಿ  ನಡೆದ  ಘಟನೆಗಳನ್ನು ಮೆಲುಕುಹಾಕಿದಾಗ   ಜೀವನ ದರ್ಶನ ಆಗುತ್ತದೆ.  ನನ್ನ    2016  ರ  ವರ್ಷದ  ಪಯಣದ ಮೆಲುಕು  ನಿಜಕ್ಕೂ  ಏನೋ ಹೊಸ  ಸಂದೇಶ ನೀಡಿ , ಜೀವನ ದರ್ಶನ ಮಾಡಿಸಿ  ಹೊರಟು  ಬಿಟ್ಟಿತು. ನಿನ್ನೆ ಹೊಸ ಕ್ಯಾಲಂಡರ್  ವರ್ಷ  ಬರಮಾಡಿಕೊಳ್ಳುವ  ಯಾವುದೇ ಅವಕಾಶ ನೀಡದೆ  ನಿದ್ರಾದೇವಿ  ನನ್ನನ್ನು  ತನ್ನ  ಮಡಿಲಿಗೆ  ಸೇರಿಸಿಕೊಂಡು ಬಿಟ್ಟಳು , ಯಾವುದೋ ಒಂದು ಹೊತ್ತಿನಲ್ಲಿ  ೨೦೧೬ ರ ವರ್ಷ  ನನ್ನ ಮುಂದೆ ಕುಳಿತು  ಅಣಕಿಸಿ ನಗುತ್ತಾ  ಇತ್ತು.  ನಾನು ಬಹಳ ಸಿಟ್ಟಿನಿಂದಾ   "ಅಂತೂ ಕೊನೆಗೂ ತೊಲಗುತ್ತಿದ್ದೀಯಲ್ಲಾ  ..... .......  ತೊಲಗಪ್ಪಾ..... ಸಾಕು ನಿನ್ನ ಸಹವಾಸ " ಅಂದೇ  .  ನಸುನಕ್ಕ   ೨೦೧೬ "ಯಾಕಯ್ಯ  ಅಷ್ಟೊಂದು ಕೋಪಾನಾ ನನ್ನ ಮೇಲೆ......?"  , "ಒಮ್ಮೆ  ಜನವರಿಯಿಂದ  ಡಿಸೆಂಬರ್  ವರೆಗೆ ನಿನ್ನ  ಜೀವನದ  ಘಟನೆಗಳನ್ನು ನೆನಪು ಮಾಡಿಕೊ  ನಂತರ  ಹೇಳು ನಿನ್ನ  ಮಾತನ್ನು"   ಅಂದಿತು, ನಾನು ನೆನಪಿನ ಲೋಕ ಹೊಕ್ಕಿದೆ .





ಜನವರಿ ೨೦೧೬  ಹೊಸ ಕ್ಯಾಲಂಡರ್ ವರ್ಷದ  ಶುಭಾಶಯಗಳ  ಮಹಾಪೂರ ಹರಿದು ಬಂತು , ಹೊಸ ವರ್ಷದ ಮುಂದಿನ ದಿನಗಳನ್ನು  ಸಂತಸವಾಗಿ ಕಳೆಯುವ   ಬಗ್ಗೆ  ಯೋಜನೆ ಹಾಕಿಕೊಳ್ಳಲು  ಮನಸು ಮಾಡಿದ್ದೆ, ಜನವರಿ ೪ ರಂದು  ಅಪ್ಪಳಿಸಿತು    ಹರಿಣಿ ಅಮ್ಮನ   ಮರಣದ  ಸುದ್ಧಿ,  ನಿಜಕ್ಕೂ  ಅಲುಗಾಡಿ ಹೋದೆ, ನಾನು ಬಹಳ ಗೌರವಿಸಿದ್ದ , ನನ್ನ ಬಗ್ಗೆ ಬಹಳ ಪ್ರೀತಿ ತೋರಿದ್ದ  ಒಂದು ಹಿರಿಯ ಜೀವ  ತನ್ನ  ಇಹಯಾತ್ರೆ   ಮುಗಿಸಿತ್ತು, ಬೆಂಗಳೂರಿಗೆ  ಓಡಿಬಂದೆ   ಅಂತಿಮ ದರ್ಶನ ಮಾಡಿದೆ , ಆದರೆ  ಈ ಒಂದು  ಹಿರಿಯ ಜೀವದ  ಸಾವು   ಮನಸಿನ ಮೇಲೆ ಪರಿಣಾಮ  ಬೀರಿತ್ತು, ನೋವನ್ನು ಮರೆಯಲು ಬಹಳ  ದಿನಗಳೇ ಬೇಕಾದವು, ೨೦೧೬  ರ ವರ್ಷದ  ಪಯಣದ ಪ್ರಾರಂಭದಲ್ಲಿ  ಈ ಘಟನೆ  ನೋವಿನ,  ಮುನ್ನುಡಿ  ಬರೆಯಿತು.  ಜನವರಿ ೧೫ ರಂದು   ನನ್ನ ತಂದೆಯವರ ವಾರ್ಷಿಕ  ಕಾರ್ಯಕ್ರಮ ನನ್ನ ಬದುಕಿಗೆ ದಾರಿದೀಪವಾದ  ತಂದೆಯವರ ಸ್ಮರಣೆಗೆ  ಕಾರಣವಾಯ್ತು .  ಜನವರಿ  ೧೭ ರಂದು ಪದ ಕಮ್ಮಟದ  ಕಾರ್ಯಕ್ರಮ ನನ್ನ ಮುಖದಲ್ಲಿ  ಸ್ವಲ್ಪ ನಗು ಬರಲು ಕಾರಣ ಆಯ್ತು.   ಈ ನಡುವೆ ಶ್ರೀಕಾಂತ್ ಮಂಜುನಾಥ್  ಜೊತೆಯಲ್ಲಿ   ಬಿಳಿಗಿರಿಗೆ  ಭೇಟಿ  ಸ್ವಲ್ಪ ಮನಸಿಗೆ ಮುದ ನೀಡಿತ್ತು.
   ಫೆಬ್ರವರಿ ೨೦೧೬  ನನ್ನ ಬದುಕಿನ  ಹಾದಿಯನ್ನು  ಬದಲಿಸಿದ ತಿಂಗಳು . ದಿನಾಂಖ ೧೩ , ಎರಡನೇ ಶನಿವಾರ  ಮಾಡದ  ತಪ್ಪಿಗೆ ಬೆಲೆತೆತ್ತ  ದಿನ,  ನಡೆದುಕೊಂಡು ರಸ್ತೆ ದಾಟುತ್ತಿದ್ದ ನನಗೆ ಬೈಕ್ ನಲ್ಲಿ ಅಪರಿಚಿತ  ಗುದ್ದಿ ಮಾಯವಾದ ದಿನ,  ನಾನು  ಸಾವಿನ  ಬಾಗಿಲನ್ನು   ತಟ್ಟಿದ್ದ  ದಿನ,      ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು, ಕಣ್ಣು  ಮಸುಕು   ಮಸುಕಾಗಿತ್ತು, ಕೊನೆಗೆ ಏನೂ ಕಾಣದಾಗಿತ್ತು .    ಎಲ್ಲೋ ದೂರದಲ್ಲಿ   ಎತ್ತಿ ಹಾಕ್ರೀ   ಬೇಗ  , ಅನ್ನುತ್ತಾ  ಇರುವ ಮಾತುಗಳು  ಕೇಳಿಸಿತು,    ಸ್ವಲ್ಪ ಹೊತ್ತು, ಯಾವುದೋ ವಾಹನದ ಶಬ್ದ   , ದೇಹವೆಲ್ಲಾ    ಭೂಮಿಯಿಂದ   ಎತ್ತರದಲ್ಲಿ    ಹಾರಾಡುತ್ತಿರುವ ಅನುಭವ,   ಎಲ್ಲೋ  ದೂರದಲ್ಲಿ   ಮಾತೊಂದು   ತೇಲಿಬಂತು  " ಎಲ್ಲೋ   ಕುಡಿದು  ಬಿದ್ದಿರಬೇಕು  ಗುರು"  ಅಂತಾ , ನಾನು ನಿಧಾನವಾಗಿ    "ನಾನು ಕುಡಿಯಲ್ಲಾ "  ಅಂದೇ,  ಮತ್ತೆ ನಿಶ್ಯಬ್ಧ, ಯಾವುದೋ  ಯಂತ್ರದ  ಸಪ್ಪಳ ,  "ಏನ್ರೀ  ಹೆಸರು ನಿಮ್ಮದು?"  ಅಂತಾ ಯಾರೋ  ಕೇಳಿದ ಹಾಗೆ ಆಯ್ತು,     ಒಣಗಿದ  ಬಾಯಿಯಲ್ಲಿ  ಮಾತನಾಡಲು   ಆಗಲಿಲ್ಲ , ಸಣ್ಣಗೆ  ತುಟಿ ಅಲ್ಲಾಡಿಸಿದೆ   ಅಷ್ಟೇ......................!  ದೇಹದಲ್ಲಿನ ಚೇತನ   ಯಾವುದೋ ಲೋಕದೆಡೆಗೆ  ಹಾರುತ್ತಿರುವಂತೆ  ಭಾಸವಾಗಿತ್ತು,   ನೋವಿನ  ಸುಳಿವಿಲ್ಲಾ,  ಮನಸು   ಹಗುರವಾದ   ಅನುಭವ,  ಯಾವ ಮಾತುಗಳು ಕೆಳುತ್ತಿಲ್ಲಾ ,  ಹಾಗೆ ನಿದ್ದೆ ಹೋದ ಅನುಭವ .   ಆಮೇಲೆ   ಕಣ್ ತೆರೆದಾಗ   ಸುತ್ತಲೂ    ಬಿಳಿ   ಬಣ್ಣದ ಪರದೆಗಳ   ದರ್ಶನ,   ಏನೋ ಸಪ್ಪಳ ಕೇಳುತ್ತಿತ್ತು,  ಕಣ್ಣು ಬಿಟ್ಟರೆ   ಕಂಡಿದ್ದು,  ನನ್ನ ತಾಯಿ ಹಾಗು ಪತ್ನಿ ಯ ಭಯಗೊಂಡ  ಮುಖಗಳು, ಅರೆ ಇಲ್ಯಾಕೆ ಬಂದ್ರು ಇವರು  ಅಂತಾ   ಎದ್ದೇಳಲು  ಪ್ರಯತ್ನಿಸಿದೆ , ಊ   ಹೂ    ಆಗಲಿಲ್ಲ, ಎಡಗಣ್ಣು ಮಾತ್ರ ಕಾಣುತ್ತಿತ್ತು,   ಬಲ ಕಣ್ಣಿನ ಮೇಲೆ ಬ್ಯಾಂಡೇಜ್  ಕಟ್ಟಿದ್ದರು,  ಯಾಕೋ ಮೈಎಲ್ಲಾ   ನೋವಾದ ಅನುಭವ ,  ಡ್ರಿಪ್ಸ್   ಹಾಕಿದ್ದರು , ಪ್ಲಾಸ್ಟಿಕ್   ನಾಳದಿಂದ  ಔಷಧಿ ಹನಿ ಹನಿಯಾಗಿ ದೇಹ ಸೇರುತ್ತಿತ್ತು.  ಪಕ್ಕದಲ್ಲಿ ಬೆಡ್ ಪ್ಯಾನ್  ಇಟ್ಟಿದ್ದರು, ನರ್ಸ್  ಹೇಳ್ತಾ ಇದ್ರೂ  ಅವರಿಗೆ ಅಗತ್ಯವಾದಾಗ   ಇದನ್ನು ಕೊಡಿ ಅಂತಾ  ಹೇಳ್ತಾ ಇದ್ರೂ , ಯಾವುದೋ ಯಾತನಾ ಮಯ  ನರಕದ ಅನುಭವ , ಅಮ್ಮಾ  ಎಂದು   ಸಣ್ಣಗೆ ಕೀರಲಿದೆ    ನನ್ನ ಅಮ್ಮಾ  ಏನಪ್ಪಾ   ಹೆದರ  ಬೇಡ ಮಗು ಒಳ್ಳೆದಾಗುತ್ತೆ  ಅಂದ್ರು,  ಪಕ್ಕದಲ್ಲಿದ್ದ ಪತ್ನಿ ಹಣೆ ಮುಟ್ಟಿ  ಬಿಕ್ಕಳಿಸಿದಳು .  ಸಧ್ಯ ಇಷ್ಟಕ್ಕೆ ಆಯ್ತು  ಹೆದರ ಬೇಡಿ  ಅಂತಾ  ಒಳಗೆ  ಬಂದರೂ  ಡಾಕ್ಟರ್  , "ನನಗೆ ಏನಾಗಿದೆ   ಡಾಕ್ಟರ್?" ಅಂದೇ   "ನಿಮಗೆ ಆಕ್ಸಿಡೆಂಟ್   ಆಗಿದೆ ಮಾತಾಡ ಬೇಡಿ ರೆಸ್ಟ್   ಮಾಡಿ" ಅಂದ್ರು ..... "   ಅಷ್ಟರಲ್ಲಿ   ಪಾಪ  ಆ ಜಗಧೀಶ್  ಗೆ  ಥ್ಯಾಂಕ್ಸ್ ಹೇಳಬೇಕು ಅನ್ನುತ್ತಾ ಇದ್ದರು ಅಲ್ಲಿ ಕೆಲವರು ,  ಪಾಪ ಆ ಹುಡುಗ ಬಹಳ ಸಹಾಯ ಮಾಡಿ  ಇಲ್ಲಿಗೆ ಕರೆದು ತಂದಾ  ಅನ್ನುವ ಮಾತುಗಳು   ಕೇಳಿಬಂದವು . ಆ   ನನಗೆ   ಆಕ್ಸಿಡೆಂಟ್ ಆಗಿದ್ಯಾ .....? "



ನಿಜಾ ನನಗೆ ಫೆಬ್ರವರಿ ೨೦೧೬  ನೋವಿನ ದಿನಗಳಿಗೆ ಹೆಬ್ಬಾಗಿಲು ತೆರೆದು ಸ್ವಾಗತಿಸಿತ್ತು. ನನ್ನದೇ ಕಲ್ಪನೆಯಲ್ಲಿ, ಪರಿಸರ  ನೋಡುತ್ತಾ, ನಗುನಗುತ್ತಾ    ಎಲ್ಲೆಡೆ  ಓಡಾಡುತ್ತಿದ್ದ  ನನಗೆ  ಸಾಕು ನಿನ್ನ ಮೆರೆದಾಟ  ಅಂತಾ  ಹಾಸಿಗೆಗೆ ಎತ್ತಿ ಬಿಸಾಕಿದ  ತಿಂಗಳು ಫೆಬ್ರವರಿ ೨೦೧೬ . ಜೀವ ಉಳಿಸಿದ   ಜಗದೀಶ್  ನನ್ನ ಬಾಳಿಗೆ ಬೆಳಕಾಗಿ  ಬಂದ ತಿಂಗಳು  ಸಹ ಹೌದು.




ಮಾರ್ಚಿ ೨೦೧೬ ರಿಂದ ಆಗಸ್ಟ್ ೨೦೧೬ ವರೆಗೆ ಹಾಸಿಗೆಯಲ್ಲಿ  ಮಲಗಿ  ಸಾವು ಬದುಕಿನ ನಡುವೆ ನನ್ನ ಹೋರಾಟ , ಮನೆಯವರೆಲ್ಲಾ  ಅಂದ್ರೆ  ನನ್ನ ಪತ್ನಿ, ತಾಯಿ, ಮಗ  ಇವರೆಲ್ಲರೂ ಆತಂಕದಲ್ಲಿ ಕಳೆದ ದಿನಗಳು, ಆಸ್ಪತ್ರೆ, ಮನೆ, ಹಾಸಿಗೆ, ಅಷ್ಟೇ ನನ್ನ ಪ್ರಪಂಚ,  ಓದುವ ಹಾಗಿಲ್ಲ, ಟಿ .ವಿ . ನೋಡುವ ಹಾಗಿಲ್ಲ, ಹೆಚ್ಚು ಹೊತ್ತು ಕೂರಲು ಆಗುತ್ತಿರಲಿಲ್ಲ,  ದೇಹ ದಲ್ಲಿ ಚೈತನ್ಯ ವಿಲ್ಲದೆ ಕುಟುಕು ಜೀವ ಇಟ್ಟುಕೊಂಡು  ಬದುಕು ಸವೆಸಿದ ದಿನಗಳವು,  ಗೆಳೆಯರು  ನೆಂಟರು, ಆಗಮಿಸಿದರು  ಪ್ರೀತಿಯ  ಹೊನಲು ಹರಿಸಿದರು , ನಾನು ಬದುಕಲೇ ಬೇಕೆಂಬ  ಆಸೆ ಹುಟ್ಟಿಸಿ ಚೈತನ್ಯ ನೀಡಿದರು. ಆಗಸ್ಟ್ ೨೦೧೬ ರ ಅಂತ್ಯಕ್ಕೆ   ಸ್ವಲ್ಪ ಚೇತರಿಕೆ ಕಾಣಿಸಿತು, ಬದುಕಿನಲ್ಲಿ ಭರವಸೆ ಹುಟ್ಟಿತ್ತು, ಆದರೆ ಕೆಲವೇ ದಿನಗಳು ಅಷ್ಟೇ .

ಆಗಸ್ಟ್ ೨೦೧೬ ರಿಂದ ನವೆಂಬರ್  ೨೦೧೬ ಮತ್ತೆ ಕೈಕೊಟ್ಟ  ಆರೋಗ್ಯ  , ನನ್ನ  ಕುತ್ತಿಗೆಯ ನರಗಳು, ಎಡಗಾಲಿನ ನರಗಳು ತೊಂದರೆ ಕೊಡಲು ಶುರುಮಾಡಿದವು, ಅಸಾಧ್ಯ ನೋವು, ದೇಹದಲ್ಲಿ  ಸರಿಯಾದ ಚಾಲನೆ ಇಲ್ಲಾ, ನೋವನ್ನು ತಡೆದುಕೊಂಡೆ,  ನೋವಿನಲ್ಲಿ ಜೋರಾಗಿ  ಅತ್ತುಬಿಡೋಣ  ಅಂದ್ರೆ  ಮನೆಯಲ್ಲಿನ  ಎಲ್ಲರೂ  ಹೆದರಿಕೊಳ್ಳುತ್ತಾರೆ,  ಯಾರಿಗೂ ಹೇಳಲಾಗದ ಸಂಕಟ,  ವೈದ್ಯರು  ನೀಡಿದ   ನೋವು  ನಿವಾರಕ ಮಾತ್ರೆಗಳು , ಔಷದಿ , ಚುಚ್ಚುಮದ್ದು  ಪಡೆದು  ದಿನ ದೂಡುತ್ತಿದ್ದೆ,   ಒಮ್ಮೊಮ್ಮೆ ನೋವಿನಿಂದ   ಬೇಸರವಾಗಿ  ಆತ್ಮಹತ್ಯೆ ಮಾಡಿಕೊಳ್ಳುವ ಮನಸಾಗುತ್ತಿತ್ತು, ಆದರೆ   ನನ್ನ ನೋವನ್ನು ನಾನೇ ಅನುಭವಿಸುವ ಅನಿವಾರ್ಯ ನನ್ನದಾಯಿತು. ನೋವು, ಹತಾಶೆ, ನಿರಾಸೆ, ನನ್ನ ಮನದ  ನಗುವನ್ನು ಹತ್ಯೆಮಾಡಿ ಸಮಾಧಿ ಮಾಡಿದ್ದವು. ಆದರೆ ನನ್ನ ಕುಟುಂಬದಲ್ಲಿ  ಎಲ್ಲರೂ  ಮಗುವಿನಂತೆ ನನ್ನನ್ನು ಪೋಷಣೆ ಮಾಡಿದರು . ಬದುಕುವ ಭರವಸೆ ಕಳೆದುಕೊಂಡ ನನಗೆ ಅಮ್ಮನ  ಮಾತುಗಳು ಸಂಜೀವಿನಿ ಆಗಿದ್ದವು. ಹಾಗು ಹೀಗೂ  ನರಳುತ್ತಾ  ಡಿಸೆಂಬರ್ ೨೦೧೬ ಬಂದಿತು.
ಡಿಸೆಂಬರ್ ೨೦೧೬  ರಲ್ಲಿ  ನನ್ನ ದೇಹ ನನ್ನ ಮಾತು ಕೇಳುವ ಹಂತಕ್ಕೆ ಬಂದಿತು, ನರಗಳ ನೋವು ಕಾಲಿನದು ಕಡಿಮೆಯಾಗಿ, ಕುತ್ತಿಗೆಯದು  ಸಹ ನೋವು ತಹಬದಿಗೆ   ಬರಲು ಶುರು ಆಯ್ತು,  ಆದರೂ  ಒಮ್ಮೆ ತಲೆ ನೋವು ಬಂದರೆ  ಕನಿಷ್ಠ  ಮೂರು ನಾಲ್ಕು ದಿನ, ಇರುತ್ತಿತ್ತು,  ಜೀವನ ಸಾಕು ಅನ್ನುವ ಹಂತಕ್ಕೆ  ತಲುಪಿ ಬಿಟ್ಟೆ, ಅಪಘಾತದಲ್ಲಿ  ಬದುಕಲೇ ಬಾರದಿತ್ತು  ಅನ್ನಿಸಿತ್ತು, ಆದರೆ  ಆತ್ಮೀಯ ಕುಟುಂಬ , ಗೆಳೆಯರು , ಪ್ರೀತಿಯಿಂದ  ಸಹಾಯಮಾಡಿ , ಪೋಷಿಸಿ , ಶುಭ ಹಾರೈಸಿ  ೨೦೧೭ ರಲ್ಲಿ  ನನ್ನ ನೋವನ್ನು ಗೆದ್ದು   ಮತ್ತೊಮ್ಮೆ  ನಗು ನಗುತ್ತಾ  ಹಕ್ಕಿಯಂತೆ ಹಾರುವ  ಭರವಸೆ   ಮೂಡಲು ಕಾರಣರಾಗಿದ್ದಾರೆ.

೨೦೧೬ ರ ಕ್ಯಾಲಂಡರ್ ವರ್ಷ  ಜೀವನದಲ್ಲಿ  ಅನುಭವದ  ಸತ್ಯ ದರ್ಶನ ಮಾಡಿಸಿತು. ಅದರ  ವಿವರ ಇಲ್ಲಿದೆ ನೋಡಿ.
 ೧] ಸಾಯುತ್ತಿದ್ದವನನ್ನು  ಅಪರಿಚಿತ  ರಕ್ಷಿಸುತ್ತಾನೆ ಅಂದ್ರೆ  ಅವನು ಖಂಡಿತಾ ನನಗೆ  ಮರುಜನ್ಮ  ನೀಡಿದ  ದೇವರು.ಅನ್ನಿಸಿದ್ದು ನಿಜ. 
೨] ಎಲ್ಲಾ  ವೈದ್ಯರೂ ಕೆಟ್ಟವರಲ್ಲಾ  ಅವರಲ್ಲೂ ಮಾನವೀಯತೆ ಇದೆ, ಕೆಲವು ವೈದ್ಯರು   ಮನೆಗೆ ಬಂದು ನನಗೆ ಚಿಕಿತ್ಸೆ ನೀಡಿ        ಹಣ ನಿರಾಕರಣೆ ಮಾಡಿದ್ದು  ನಿಜಕ್ಕೂ  ಮನತುಂಬಿ ಬಂತು.
೩] ಸಾಮಾಜಿಕ ತಾಣದ ಗೆಳೆತನ  ಅಂದ್ರೆ ಬರೀ  ಓಳು ಗುರು ಅನ್ನೋಮಾತಿಗೆ  ಅಪವಾದವಾಗಿ, ನೂರಾರು ಸಂಖ್ಯೆಯಲ್ಲಿ  ಗೆಳೆಯರು  ಖುದ್ದುಬಂದು ಮಾನಸಿಕ ಸ್ಥೈರ್ಯ ತುಂಬಿದ್ದು, ಜೊತೆಗೆ ನನ್ನ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು  ನನ್ನ ಬಗ್ಗೆ ಕಾಳಜಿ ವಹಿಸಿದ್ದು  ಮರೆಯಲಾಗದ ವಿಚಾರ.
೪] ನನ್ನಿಂದ  ಸಹಾಯ ಪಡೆದಿದ್ದ  ಕೆಲವು ಗೆಳೆಯರು   , ನನ್ನ ಆರೋಗ್ಯದ ಬಗ್ಗೆ ಅಪಹಾಸ್ಯ ಮಾಡುತ್ತಾ , ಏನೂ ಆಗಿಲ್ಲಾ   ರೀ  ಇವನದು ನಾಟಕ  ಅಂದಿದ್ದು  ಗೆಳೆತನದ ಅರ್ಥಕ್ಕೆ ಹೊಸ ಅನರ್ಥ ಬರೆದಿತ್ತು,
೫] ಹತ್ತಿರ ಹೋದರೆ  ನಾವೆಲ್ಲಿ  ಹಣ ಖರ್ಚು ಮಾಡಬೇಕಾಗುತ್ತೋ  ಅಂತಾ  ದೂರದಲ್ಲೇ ಉಳಿದ ಕೆಲವು ನೆಂಟರು. ಹಾಗು ಗೆಳೆಯರು.
೬] ಬೇಡವೆಂದರೂ ಕೇಳದೆ ನೀನು ನಮಗಾಗಿ ಬದುಕ ಬೇಕು  ಅಂತಾ ಹಠ ತೊಟ್ಟು  ಹಲವಾರು ರೀತಿಯ  ಸಹಾಯ ಮಾಡಿದ     ಆತ್ಮೀಯ ಗೆಳೆಯರು .
೭] ನನ್ನ  ಶತ್ರು ಎಂದು ಭಾವಿಸಿದ್ದ ವ್ಯಕ್ತಿ  ಮನೆಗೆ ಬಂದು ನನ್ನನ್ನು ಆಲಂಗಿಸಿ  ನನ್ನ ಬೆನ್ನಿಗೆ ನಿಂತದ್ದು  ಒಂದು ಅಚ್ಚರಿ.
೮] ಅಯ್ಯೋ ಅವನು ಇನ್ನೂ ಸತ್ತಿಲ್ವಾ  , ಹಾಳಾದವನು ಸತ್ತಿದ್ರೆ ಹಾರ ಹಾಕಿ ಮರೆಯಬಹುದಿತ್ತು  ಅಂದಾ  ಕೆಲವು ಹಿತೈಷಿಗಳು, ಹಾಗು ಮಿತ್ರರು , ಬಡ್ಡಿಮಗ  ಮೆರೀತಿದ್ದ ಕಣ್ರೀ   ಹಾಗೆ ಆಗಬೇಕೋ ಅವನಿಗೆ  ಅಂದಾ ಮತ್ತಷ್ಟು ಗೆಳೆಯರು ಹಾಗಿ ಹಿತೈಷಿಗಳು. "ದಿನಾ ಸಾಯೋವ್ರ್ಗೆ ಅಳೋವ್ರ್ಯಾರು  ನಡೀರಿ ಇವೆಂದು ಇದ್ದದ್ದೇ" ಅಂದುಕೊಂಡ ಮಹನೀಯರುಗಳು . ನನ್ನ ಮುಂದೆ  ಅನುಕಂಪದ ನಾಟಕ ಮಾಡಿ  ತಮ್ಮ  ನಿಜ ಬಣ್ಣದ ದರ್ಶನ ಮಾಡಿಸಿದ್ದರು .

೯] ಎಷ್ಟು ಹಣ ಸುರಿದರೂ  ಆಯಸ್ಸು ಇಲ್ಲದಿದ್ರೆ  ಸಾವನ್ನು ಗೆಲ್ಲಲು  ಆಗೋಲ್ಲ  ಅನ್ನುವ ಸತ್ಯ .
೧೦] ಸತ್ತ ಮೇಲೆ ಮನುಷ್ಯ ನಿಗೆ ಆಗುವ ಅನುಭವದ ದರ್ಶನ [ ನಾನು  ಬಸ್ ನಿಲ್ದಾಣದ ಕಡೆ ಬರಲು  ರಸ್ತೆ  ದಾಟುತ್ತಿದ್ದೆ,   .............!!!   ಯಾರೋ ಎಳೆದಂತೆ    ಅನ್ನಿಸಿತು,  ಮಸುಕು ಮಸುಕಾಗಿ   ಒಂದು ಬೈಕ್  ಕಂಡಿತ್ತು,   ಕಣ್ಣು  ಮುಚ್ಚಿತ್ತು,  ಎಲ್ಲೋ ದೂರದಲ್ಲಿ   ಎತ್ತಿ ಹಾಕ್ರೀ   ಬೇಗ  , ಅನ್ನುತ್ತಾ  ಇರುವ ಮಾತುಗಳು  ಕೇಳಿಸಿತು,   ಸ್ವಲ್ಪ ಹೊತ್ತು, ಯಾವುದೋ ವಾಹನದ ಶಬ್ದ   , ದೇಹವೆಲ್ಲಾ    ಭೂಮಿಯಿಂದ   ಎತ್ತರದಲ್ಲಿ    ಹಾರಾಡುತ್ತಿರುವ ಅನುಭವ,   ಎಲ್ಲೋ  ದೂರದಲ್ಲಿ   ಮಾತೊಂದು   ತೇಲಿಬಂತು  " ಎಲ್ಲೋ   ಕುಡಿದು  ಬಿದ್ದಿರಬೇಕು  ಗುರು"  ಅಂತಾ , ನಾನು ನಿಧಾನವಾಗಿ    "ನಾನು ಕುಡಿಯಲ್ಲಾ "  ಅಂದೇ,  ಮತ್ತೆ ನಿಶ್ಯಬ್ಧ, ಯಾವುದೋ  ಯಂತ್ರದ  ಸಪ್ಪಳ ,  "ಏನ್ರೀ  ಹೆಸರು ನಿಮ್ಮದು?"  ಅಂತಾ ಯಾರೋ  ಕೇಳಿದ ಹಾಗೆ ಆಯ್ತು,   ಮಾತನಾಡಲು   ಒಣಗಿದ  ಬಾಯಿಯಲ್ಲಿ  ಆಗಲಿಲ್ಲ , ಸಣ್ಣಗೆ  ತುಟಿ ಅಲ್ಲಾಡಿಸಿದೆ   ಅಷ್ಟೇ......................! ಯಾವುದೋ ಲೋಕದೆಡೆಗೆ  ಹಾರುತ್ತಿರುವಂತೆ  ಭಾಸವಾಗಿತ್ತು,   ನೋವಿನ  ಸುಳಿವಿಲ್ಲಾ,  ಮನಸು   ಹಗುರವಾದ   ಅನುಭವ,  ಯಾವ ಮಾತುಗಳು ಕೆಳುತ್ತಿಲ್ಲಾ ,  ಹಾಗೆ ನಿದ್ದೆ ಹೋದ ಅನುಭವ .}

೧೧]  ನನ್ನ ಒಳಿತಿಗಾಗಿ  ಯಾವ ಯಾವುದೋ ದೇವಾಲಯಗಳಿಗೆ  ತೆರಳಿ ನನ್ನ ಹೆಸರಿನಲ್ಲಿ ಪೂಜೆ ಮಾಡಿಸಿ , ಪ್ರಾರ್ಥನೆ ಮಾಡಿ  ಪ್ರಸಾದ ನೀಡಿದ ಸಾಮಾಜಿಕ ತಾಣದ  ಹಲವಾರು ಗೆಳೆಯರು.  ಗೆಳೆತನಕ್ಕೆ ಹೊಸ ಭಾಷ್ಯ ಬರೆದರು . 

೧೨] ನಗುವನ್ನು, ಸಂತೋಷವನ್ನು   ಬೇರೆಯವರಿಗೆ ಹಂಚಿಕೊಳ್ಳ ಬಹುದು,  ಆದರೆ  ಸಂಕಟ, ನೋವು, ನರಳಾಟ  ಇವಿಗಳನ್ನು ಯಾರಿಗೂ  ವರ್ಗಾಯಿಸಲು  ಆಗೋಲ್ಲ ಎನ್ನುವ ಸತ್ಯ ದರ್ಶನ . ಹಾಗು  ಅಪರಿಚಿತನಾದ  ನನ್ನನ್ನು ಬದುಕಿಸಿದ  ಚನ್ನರಾಯಪಟ್ಟಣದ  ಜಗದೀಶ್ ಹಾಗು ಅಲ್ಲಿನ ಸರ್ಕಾರಿ ಆಸ್ಪತ್ರೆಯ  ವೈದ್ಯರಾದ  ಶ್ರೀನಿವಾಸ್ ಅವರುಗಳು  ನನ್ನ ಜೀವನದ ಪವಾಡಕ್ಕೆ ಕಾರಣ ಕರ್ತರು . 


ಜೀವನದ  ನೋವಿನ  ಸುಳಿಯ ಬಲೆ  ಹೀಗೆ ಇರುತ್ತದೆ. 


ಎಷ್ಟೆಲ್ಲಾ   ವಿವಿಧ  ಮುಖಗಳ ದರ್ಶನ  ಮಾಡಿದ್ದಾಯ್ತು  ಈ ವರ್ಷದಲ್ಲಿ  ನಿಜಕ್ಕೂ  ನಾನು  ಏನೂ ಅಂತಾ   ನನ್ನಲ್ಲೇ ವಿಮರ್ಶೆ ಮಾಡಿಕೊಳ್ಳೋ  ಒಂದು ಅವಕಾಶ ಸಿಕ್ಕಿದ್ದು ಸುಳ್ಳಲ್ಲ. ಆ ನಿಟ್ಟಿನಲ್ಲಿ  ನಾನು ೨೦೧೬ ರಲ್ಲಿ ಕಳೆದ ಈ ದಿನಗಳು ಒಂದು ವಿಶ್ವವಿದ್ಯಾಲಯದಲ್ಲಿ  ಕಲಿಸಲಾರದ್ದನ್ನು ಕಲಿಸಿತು .೨೦೧೬ ರ ಬಗ್ಗೆ ಈಗ ಬರೆಯುತ್ತಿದ್ದರೂ ಮನಸಿಗೆ ಆಗಿರುವ ಆಘಾತದಿಂದ ಹೊರಬರಲು  ೨೦೧೭ ರ ಹೊಸ ಬೆಳಕು ಕಾಣುತ್ತಿದೆ, ಸುಮಾರು ಹನ್ನೊಂದು ತಿಂಗಳು  ನಾಲ್ಕು ಗೋಡೆಗಳ ನಡುವೆ  ಹಾಸಿಗೆಯಲ್ಲಿನ  ಬದುಕು, ಹಲವಾರು  ವಿಚಾರಗಳನ್ನು  ದರ್ಶನ ಮಾಡಿಸಿದೆ.  ನೋವು ಹತಾಶೆ ಯನ್ನು ಗೆಲ್ಲುವ   ಛಲ  ಮೂಡಿಸಿದೆ. ೨೦೧೬ ಜೀವನದ ಮರೆಯಲಾರದ ಒಂದು ಘಟ್ಟವಾಗಿ ನನ್ನ ಬಾಳಿನ  ಇತಿಹಾಸ ರಚಿಸಿದೆ. 



ಚಿತ್ರ ಕೃಪೆ ಅಂತರ್ಜಾಲ 
                                                 




೨೦೧೭ ಬಾರಯ್ಯ  ಮುಂದೆ ಸಾಗೂ ಅಂತಾ  ನಗು ನಗುತ್ತಾ  ಕರೆಯುತ್ತಿದೆ . ನಾನೂ ಆಸೆಗಣ್ಣಿನಿಂದ ನೋವಿನ  ಮುಖದಲ್ಲಿ ನಗುವ  ಮೂಡಿಸಿಕೊಂಡು  ೨೦೧೭ ಎಂಬ  ಗೆಳೆಯನ ಕೈಹಿಡಿದು ಸಾಗಲು  ಹೆಜ್ಜೆ ಹಾಕುತ್ತಿದ್ದೇನೆ. ಮುಂದಿನದು  ಏನೋ ಗೊತ್ತಿಲ್ಲ.




ಚಿತ್ರ ಕೃಪೆ ಅಂತರ್ಜಾಲ 



ಅಂದ ಹಾಗೆ ನನ್ನ ಬ್ಲಾಗಿಗೆ ೯ ವರ್ಷ ಆಯ್ತು , ಅದಕ್ಕಾಗಿ ಸ್ವಲ್ಪ ಸಂಭ್ರಮ ಪಡುತ್ತೇನೆ. ನಿಮಗೆಲ್ಲಾ  ಹೊಸ ಕ್ಯಾಲಂಡರ್ ವರ್ಷದ   ಶುಭಾಶಯಗಳು , ನಿಮ್ಮ ಎಲ್ಲಾ  ಸುಂದರ ಕನಸುಗಳು ನನಸಾಗಲಿ,  ನಿಮ್ಮೆಲ್ಲರಿಗೆ ಶುಭವಾಗಲಿ.  ಮತ್ತೆ ಸಿಗೋಣ ನಮಸ್ಕಾರ .   

Friday, August 12, 2016

ಅಯ್ಯೋ ಗೆಳೆಯ ನೀನೇಕೆ ಅಪರಾಧಿಯಾದೆ ...?


ನ್ಯಾಯಾಧೀಶರು  ಮಿಂಡಿ  ಗ್ಲಜೆರ್  [ ಚಿತ್ರ ಕೃಪೆ  ಅಂತರ್ಜಾಲ ] 
ನಮಸ್ಕಾರ ಬಹಳ ದಿನಗಳ ನಂತರ ನಿಮ್ಮ ಭೇಟಿ ಮತ್ತೊಮ್ಮೆ,  ನೋವಿನಿಂದ   ಬಳಲುತ್ತಾ ಇದ್ದರೂ ನೀನು ಬರೆಯಲೇ ಬೇಕೆಂಬ  ಮನಸಿನ ಒತ್ತಾಯಕ್ಕೆ ಮಣಿದು  ನನ್ನ ಬ್ಲಾಗ್  ಬರಹ  ಪ್ರಾರಂಭ   ಮಾಡುತ್ತಿದ್ದೇನೆ. ಪ್ರತಿನಿತ್ಯ  ನಾವುಗಳು  ಹಲವಾರು ವಿಚಾರಗಳನ್ನು  ಪತ್ರಿಕೆಗಳಲ್ಲಿ,  ಸಾಮಾಜಿಕ ತಾಣಗಳಲ್ಲಿ,  ಲೇಖನಗಳ  ಅಥವಾ ವೀಡಿಯೊ  ಮೂಲಕ   ಗಮನಿಸುತ್ತಾ ಇರುತ್ತೇವೆ, ಬಹಳಷ್ಟು  ವಿಚಾರಗಳು ಅಯ್ಯೋ  ಇವೆಲ್ಲಾ  ಮಾಮೂಲಿ ಬಿಡ್ರೀ  ಅನ್ನಿಸಿ  ಅವುಗಳನ್ನು  ನಾವು  ನಿರ್ಲಕ್ಷ್ಯ  ಮಾಡುತ್ತೇವೆ,  ಆದಾಗ್ಯೂ  ಕೆಲವು  ವಿಚಾರಗಳು,  ಘಟನೆಗಳು  ಮನಸಿನಲ್ಲಿ   ಆಳವಾಗಿ ಬೇರೂರಿ,  ನಮ್ಮನ್ನು ಕಾಡುತ್ತವೆ,

ಇತ್ತೀಚಿಗೆ  ನನ್ನನ್ನು ಬಹಳ ಕಾಡಿದ   ಒಂದು ಘಟನೆ ಇದು,  ಇದು ಯಾವುದೇ ದೇಶದಲ್ಲಿ ನಡೆದಿರಬಹುದಾದ  ಅಥವಾ ನಡೆಯ ಬಹುದಾದ  ಘಟನೆ,  ನ್ಯಾಯಾಂಗ ವ್ಯವಸ್ಥೆಯಲ್ಲಿ  ವಿಶ್ವದ    ಬಹಳಷ್ಟು ದೇಶಗಳು  ತಮ್ಮದೇ ಆದ ವಿಧಿ ವಿಧಾನಗಳನ್ನು  ತಮ್ಮ   ದೇಶದ  ಸಂವಿಧಾನದಂತೆ  ರಚನೆ ಮಾಡಿರುತ್ತವೆ.


ಕೆಲವೊಂದು    ದೇಶದ ನ್ಯಾಯಾಧೀಶರು  ತಮ್ಮ ಮನಸಿನ ಭಾವನೆ ವ್ಯಕ್ತ ಪಡಿಸಲು  ಅಲ್ಲಿನ ಸಂವಿಧಾನ ಅವಕಾಶ ಮಾಡಿಕೊಟ್ಟಿರುತ್ತವೆ. ಹಾಗಾಗಿ  ಆ   ದೇಶದ  ಕಾನೂನಿನ  ರೀತ್ಯ   ಅಲ್ಲಿನ  ನ್ಯಾಯಾಲಯಗಳ ಕಲಾಪ  ಪ್ರತಿಯೊಂದೂ  ಪಾರದರ್ಶಕ  ಆಗಿರುತ್ತದೆ, ಅಲ್ಲಿನ  ನ್ಯಾಯಾಲಯಗಳ  ಪ್ರತಿಯೊಂದೂ ಚಟುವಟಿಕೆ   ವೀಡಿಯೊ ದಲ್ಲಿ ದಾಖಲಾಗುತ್ತದೆ.  ಹಾಗೆ ದಾಖಲಾದ   ವೀಡಿಯೊಗಳಲ್ಲಿ ಸಾರ್ವಜನಿಕರಿಗೆ   ಅನುಕೂಲ ಆಗುವ  ಕೆಲವು ನ್ಯಾಯಾಲಯಗಳ  ಕಲಾಪ  ಅಲ್ಲಿನ  ಮಾಧ್ಯಮಗಳಲ್ಲಿ ಪ್ರಸಾರ  ಆಗುತ್ತದೆ. ಇಂತಹ  ಒಂದು  ನ್ಯಾಯಾಲಯದ  ಕೌತುಕ  ಕಲಾಪದ ಘಟನೆ ಇಲ್ಲಿದೆ. ಇದು ನಡೆದದ್ದು  ದಿನಾಂಖ  27 ನೆ  ಜುಲೈ 2015 ರಲ್ಲಿ  ಅಮೇರಿಕಾದ  ಮಿಯಾಮಿ ಯಲ್ಲಿ ನ  ಒಂದು ನ್ಯಾಯಾಲಯದಲ್ಲಿ. ಬನ್ನಿ ಕಥೆಗೆ  ಹೋಗೋಣ .


ಚಿತ್ರ ಕೃಪೆ ಅಂತರ್ಜಾಲ 




ನಾನು ಲಿಂಡಿ  ಗ್ಲೆಜರ್  ಈ  ನ್ಯಾಯಾಲಯದ  ನ್ಯಾಯಾಧೀಶೆ.........   ಬನ್ನಿ   ಬನ್ನಿ  ಆ ಕಥೆ  ಏನೂ ಅಂತಾ   ಹೇಳ್ತೀನಿ, ಅವತ್ತು  2015 ಜೂನ್  30  , ಎಂದಿನಂತೆ   ನ್ಯಾಯಾಲಯದ   ಕಲಾಪ  ನಡೆಸಲು  ಸಿದ್ದಳಾಗಿದ್ದೆ,   "ಸೈಲೆನ್ಸ್  ಸೈಲೆನ್ಸ್   ನ್ಯಾಯಾಧೀಶರು ಬರ್ತಾ ಇದ್ದಾರೆ,"  ಅಂತಾ ಒಬ್ಬ  ನ್ಯಾಯಾಲಯದ   ನೌಕರ    ಕೂಗಿದ  , ನಾನು ನನ್ನ  ಕೋಣೆಯಿಂದ   ಆಚೆಗೆ ಬಂದೆ   ನ್ಯಾಯಾಲಯ  ಸ್ಥಬ್ಧ  ಆಗಿತ್ತು, , ಅಲ್ಲಿದ್ದವರ  ಎಲ್ಲರ  ಗೌರವ ಮಿಶ್ರಿತ  ಕಣ್ಣುಗಳೂ  ನ್ಯಾಯಾಧೀಶರ  ಆಗಮನದ  ಕಡೆಗೆ ನೆಟ್ಟಿದ್ದವು , ನಿಧಾನವಾಗಿ  ಆಗಮಿಸಿ   ನ್ಯಾಯಾಧೀಶರ   ಆಸನವನ್ನು ಗೌರವ ಪೂರ್ವಕವಾಗಿ  ಏರಿ ಕುಳಿತೆ,

 ಎಂದಿನಂತೆ ಪ್ರಕರಣಗಳ ವಿಚಾರಣೆ  ಶುರು ಆಯ್ತು,  ನಿಜಾ  ಹೇಳಬೇಕೂ  ಅಂದ್ರೆ  ನನ್ನ ನಿತ್ಯದ  ಕಲಾಪಗಳಲ್ಲಿ   ವಾದಿಗಳ  ಪ್ರತಿವಾದಿಗಳ  ಪರ  ವಕೀಲರ  ವಾದ/ ಪ್ರತಿವಾದ   ಕೇಳುವುದು  , ಕಲಾಪದಲ್ಲಿ ನ  ಪ್ರತಿಯೊಂದೂ ಪ್ರಕರಣದಲ್ಲಿ    ವಾದಿಗಳ  ಪ್ರತಿವಾದಿಗಳ ವಿಚಾರಣೆ  ನಡೆಸುವುದು,    ಸಾಕ್ಷಿಗಳ  ಹಾಗು ದಾಖಲೆಗಳ  ಪರಿಶೀಲನೆ,  ಕಾನೂನು  ಪುಸ್ತಕಗಳ  ಪರಿಶೀಲನೆ ,  ಇವೆಲ್ಲಾ  ಮಾಡ ಬೇಕಾಗುತ್ತದೆ, ಕೆಲವೊಮ್ಮೆ  ಮನಸಿಗೆ ಇಷ್ಟಾ ಇರಲಿ ಇಲ್ಲದಿರಲಿ,   ಗಂಟೆಗಟ್ಟಲೆ  ವಾದ   ಪ್ರತಿವಾದಗಳನ್ನು ಕೇಳಬೇಕಾಗುತ್ತದೆ, ಕೆಲವೊಮ್ಮೆ  ಇಂತಹ  ಕಲಾಪಗಳಲ್ಲಿ  ಬಹಳವಾಗಿ ದೇಹ  ಹಾಗು ಮೆದುಳಿಗೆ  ಧಣಿವಾಗುವುದು ಉಂಟು,  ಆದರೆ ಕರ್ತವ್ಯ ....?     ಇವೆಲ್ಲವನ್ನೂ  ಸಹಿಸಿಕೊಂಡು,  ಇದ್ಯಾವುದನ್ನೂ  ಹೊರಗಡೆ  ತೋರಿಸಿಕೊಳ್ಳದೆ    ಕಾರ್ಯ ನಿರ್ವಹಣೆ   ಮಾಡಬೇಕಾಗುತ್ತದೆ,  ಇವೆಲ್ಲವನ್ನೂ ಸಹಿಸಿಕೊಂಡು  ದಿನಪೂರ್ತಿ   ಕಲಾಪ ನಡೆಸಿ   ಕೊನೆಗೆ  ನನ್ನ ಕೋಣೆಗೆ ಬರುವಷ್ಟರಲ್ಲಿ  ಹೈರಾಣಾಗಿರುತ್ತೇನೆ. ಆದಾಗ್ಯೂ   ಕೆಲವೊಮ್ಮೆ  ಕಲಾಪದಲ್ಲಿ   ಹಾಸ್ಯ  ಘಟನೆಗಳು/ ಅಚ್ಚರಿಯ  ಘಟನೆಗಳು  ನಡೆದಾಗ  ಮನಸಿಗೆ  ಖುಷಿಕೊಡುತ್ತದೆ.

ಅಂದೂ ಸಹ  ಹಾಗೆ  ಆಯಿತು,  ಒಂದೆರಡು ಪ್ರಕರಣ ಮುಗಿದ ನಂತರ   ಒಂದು ಪ್ರಕರಣ ಬಂತು  ಅದು ಕಳ್ಳತನದ ಪ್ರಕರಣ   "ಆರ್ಥರ್  ಬೂತ್"  ಎಂಬ   ಹೆಸರನ್ನು ಕೂಗಿದ ತಕ್ಷಣ   ಅಪರಾದಿ   ಬಂದು  ಕಟಕಟೆಯಲ್ಲಿ   ನಿಂತ ,


ಚಿತ್ರ  ಕೃಪೆ   ಅಂತರ್ಜಾಲ 



ವಿಚಾರಣೆ ಪ್ರಾರಂಭ ಆಯ್ತು, "ಏನಪ್ಪಾ ನಿನ್ನ ಹೆಸರು ಅಂದೇ ...? "   "ಅರ್ಥರ್  ಬೂತ್"  ಅಂದಾ   , "ನೀನು ಮಾಡಿದ ತಪ್ಪು  ಗೊತ್ತಾಯ್ತಾ  ...?"   ಅಂದಾಗ    ಅವನ ಮುಖ ಪಾಪ ಪ್ರಜ್ಞೆಯಿಂದ  ಬಾಡಿ ಹೋಯ್ತು ,  ಅವನನ್ನು ನೋಡಿದರೆ  ಎಲ್ಲೋ ನೋಡಿದ ನೆನಪು ಸರಿಯಾಗಿ ಜ್ಞಾಪಕಕ್ಕೆ ಬರಲಿಲ್ಲ ,  ಅವನಿಗೆ ಹಲವಾರು ಪ್ರಶ್ನೆಗಳನ್ನು  ಕೇಳುತ್ತಾ   ವಿವರಗಳನ್ನು ಕೆದಕುತ್ತಾ    ಅವನ ಬಗ್ಗೆ  ಪೋಲಿಸ್  ಇಲಾಖೆಯವರು  ಒದಗಿಸಿದ್ದ    ಮಾಹಿತಿ ಪರಿಶೀಲನೆ ನಡೆಸತೊಡಗಿದೆ,

  ಅರೆ  ಇವನಾ ....? ಮನಸಿನಲ್ಲಿ   ತಟ್ಟನೆ   ನನ್ನ ಶಾಲಾ ದಿನಗಳ ನೆನಪು ಬಂತು. ನನ್ನ ಪ್ರಾಥಮಿಕ  ಶಾಲೆಯಲ್ಲಿ  "ಅರ್ಥರ್  ಬೂತ್ " ಎಂಬ  ಬುದ್ದಿವಂತ  ಸಹಪಾಟಿ ಯಿದ್ದ , ಬಹಳ ಒಳ್ಳೆಯ ಹುಡುಗ   ಅವನನ್ನು ಕಂಡರೆ   ಶಾಲೆಯಲ್ಲಿ  ಎಲ್ಲರಿಗೂ ಇಷ್ಟ , ತನ್ನ ಒಳ್ಳೆಯ  ಸ್ವಭಾವದಿಂದ  ಎಲ್ಲರ  ಪ್ರೀತಿಗೆ ಪಾತ್ರನಾಗಿದ್ದ,  ಆ ದಿನಗಳಲ್ಲಿ ನನಗೂ ಸಹ   ಇವನ ಗೆಳೆತನ   ಇಷ್ಟಾ ಆಗಿತ್ತು, ಜೊತೆಗೆ ಶಾಲೆಯಲ್ಲಿ ಅವನ ಜೊತೆ ಫುಟ್ ಬಾಲ್ ಆಡಿದ್ದ ನೆನಪು ಬಂತು.  ............. , ಆದರೆ ಅವನೇ ಇವನಾ ...?  ಎಂಬ ಅನುಮಾನ  ಕಾಡತೊಡಗಿತು.


ವಿಚಾರಣೆ ಮುಂದುವರೆಸಿದೆ,  ಏನಪ್ಪಾ  ನೀನು   ಪ್ರಾಥಮಿಕ   ಶಾಲೆ  ಓದಿದ್ದು ಎಲ್ಲಿ,  ...?["Did you go to Nautilus?"]   ಅವನು  ತಾನು ಓದಿದ್ದು ನಟಾಒಲಿಸ್ ನಲ್ಲಿ ಅಂದ ತಕ್ಷಣ   ಇವನು ಅವನೇ ಎಂಬ  ತೀರ್ಮಾನಕ್ಕೆ ಬಂದೆ  ,  ಆ ಕ್ಷಣದಲ್ಲಿ  "oh my goodness"  ಎಂಬ ಮಾತು  ನಮ್ಮಿಬ್ಬರ  ಬಾಯಿಂದ  ಒಟ್ಟಿಗೆ ಹೊರಟಿತ್ತು.   ನಿನಗೆ   ನನ್ನ ನೆನಪಿದೆಯಾ  ಎನ್ನುತ್ತಾ   ಪ್ರಾಥಮಿಕ  ಶಾಲೆಯ  ಕೆಲ ಘಟನೆಗಳನ್ನು ಹೇಳಿದೆ,  ಅವನಿಗೆ ನನ್ನ ಗುರುತು ಸಿಕ್ಕಿತು, ಬಿಕ್ಕಿ ಬಿಕ್ಕಿ ಅಳಲು  ಶುರು ಮಾಡಿದ,  ತನ್ನ ಜೊತೆ ಓದಿದ   ಶಾಲಾ ಗೆಳತಿಯ ಮುಂದೆ    ಅಪರಾಧಿಯಾಗಿ  ನಿಂತಿದ್ದ  ನೋವು  ಅವನ ಮುಖದಲ್ಲಿ  ಮೂಡಿತ್ತು,  ನಾನೇ   ಮುಂದುವರೆಸಿ  "  "ಶಾಲೆ ದಿನಗಳ ನಂತರ  ನೀನು ಏನಾದೆ ...? ಎಂದು ಬಹಳಷ್ಟು   ಸಾರಿ ನಿನ್ನನ್ನು  ನೆನೆಯುತ್ತಿದ್ದೆ,    ಆದರೆ ನೋಡು ನಾವಿಬ್ಬರು  ಇಲ್ಲಿ ಭೇಟಿ ಮಾಡಬೇಕಾಯ್ತು. "  "ನಿಜಕ್ಕೂ ಬೇಸರ  ಆಗ್ತಿದೆ,  ಆದಾಗ್ಯೂ ನನ್ನ ಕೆಲಸ   ಮಾಡಬೇಕಿದೆ " ಎಂದು  ಮುಂದು ವರೆದೆ.


ಚಿತ್ರ ಕೃಪೆ ಅಂತರ್ಜಾಲ 


ವಿಧಿ ಎಷ್ಟು ವಿಚಿತ್ರ ನೋಡ್ರೀ, ಶಾಲೆಯಲ್ಲಿ  ಒಟ್ಟಿಗೆ ಓದಿದ  ಈ ಗೆಳೆಯ  ಹಲವು ದಶಕಗಳ ನಂತರ  ನನ್ನ ಮುಂದೆ ಅಪರಾಧಿಯಾಗಿ ಬಂದು ನಿಂತಿದ್ದ.  ಜೀವನ ಅಂದ್ರೆ ಹೀಗೆ ಆಲ್ವಾ  ಕೆಲವೊಮ್ಮೆ, ನಾವು ನಿರೀಕ್ಷಿಸದ  ಘಟನೆಗಳು ನಡೆದುಬಿಡುತ್ತವೆ.  ಶಾಲೆಯಲ್ಲಿ  ಒಳ್ಳೆಯ ವಿಧ್ಯಾರ್ಥಿ ಯಾಗಿದ್ದ ಈ ಹುಡುಗ , ದೇಶದಲ್ಲಿ  ಒಳ್ಳೆಯ ನಾಗರೀಕ ಆಗಿ  ಒಳ್ಳೆಯ ಸ್ಥಾನ  ಪಡೆಯಬೇಕಿದ್ದ  ಇವನ ಜೀವನದಲ್ಲಿ  ಕೆಟ್ಟ ಬಿರುಗಾಳಿ ಬೀಸಿ , ಇವನ  ಭವಿಷ್ಯವನ್ನು  ಮಣ್ಣುಪಾಲು ಮಾಡಿತ್ತು,  ಕನಸುಗಳು  ಛಿದ್ರವಾಗಿದ್ದವು, ಸಮಾಜದಲ್ಲಿ ಕಳ್ಳನಾಗಿ  ಕೆಟ್ಟ ಹೆಸರು ಪಡೆದು  ಈ ಗೆಳೆಯ    ನ್ಯಾಯಾಧೀಶೆಯಾದ ನನ್ನ ಮುಂದೆ  ನಿಂತಿದ್ದ,


   ನ್ಯಾಯಾಲಯದ ಕಲಾಪದಲ್ಲಿ  ಇವನ ವಿಚಾರಣೆ ನಡೆಸಿ  ಇವನ ಒಳ್ಳೆಯ ತನದ  ಪರಿಚಯ ಮಾಡಿಕೊಡುತ್ತಾ "This was the nicest kid in middle school,"  "He was the best kid in middle school. I used to play football with him, all the kids, and look what has happened."   "What's sad is how old we've become,"  

 ಎಂಬ ಮಾತನ್ನು  ಕಲಾಪದಲ್ಲಿ ಹಾಜರಿದ್ದ ಎಲ್ಲರಿಗೂ  ಹೇಳಿದಾಗ  ಅಲ್ಲಿದ್ದ ಎಲ್ಲರೂ  ಅಚ್ಚರಿಗೊಂಡಿದ್ದರು .  ಮುಂದೇನು ಎಂಬ ಪ್ರಶ್ನೆಯೋಡನೆ  ನ್ಯಾಯಾಧೀಶೆಯಾದ  ನನ್ನನ್ನೂ   ಅಪರಾಧಿಯಾದ   ಅವನನ್ನು  ನೋಡುತ್ತಿದ್ದರು,  ಆದರೆ    ನಾನು  ನನ್ನ ಸ್ಥಾನದ ಗೌರವ  ಉಳಿಸುವ  ಜವಾಬ್ದಾರಿ  ಹೊತ್ತಿದ್ದೆ,  ನನ್ನೆಲ್ಲಾ ಭಾವನೆಗಳನ್ನು  ಹತ್ತಿಕ್ಕಿ ಕರ್ತವ್ಯ  ನಿರ್ವಹಣೆಗೆ  ಮುಂದಾದೆ,    "ನಿನಗೆ ಒಳ್ಳೆಯದಾಗಲಿ ಗೆಳೆಯ  ಮುಂದೆ ಕಾನೂನು ಬದ್ದವಾಗಿ ಜೀವನ ಸಾಗಿಸು"  ಎಂದು ಹೇಳಿ  ಅವನ ಅಪರಾದಕ್ಕೆ  ತಕ್ಕಂತೆ  43000  ಡಾಲರ್  ಬಾಂಡ್  ಹಾಗು  ಹತ್ತು ತಿಂಗಳ  ಜೈಲು ಶಿಕ್ಷೆ  ವಿಧಿಸಿ  ಆದೇಶ ಮಾಡಿ   ಪ್ರಕರಣ ಮುಗಿಸಿದೆ,


 ಅವನೂ ಸಹ  ನನ್ನನ್ನು ಭೇಟಿಮಾಡಿದ   ಖುಷಿಯನ್ನು ಅನುಭವಿಸಲಾರದೆ     ಅವಮಾನ ದಿಂದ  ನ್ಯಾಯಾಲಯದ  ಕಟಕಟೆಯಿಂದ   ಇಳಿದು ಹೋದ , ನನ್ನ ಮನಸು  ವಿಶಾದದ  ಮನಸಿನಿಂದ  ಮುದುಡಿ ಹೋಗಿತ್ತು.  ಇಡೀ ನ್ಯಾಯಾಲಯ ದಲ್ಲಿದ್ದ  ಎಲ್ಲರೂ     ನನ್ನನ್ನು ಮೆಚ್ಚುಗೆಯಿಂದ  ನೋಡಿದರು,  ಅವರೆಲ್ಲರ  ಕಣ್ಣುಗಳಲಿ  ನನ್ನ  ಬಗ್ಗೆ  ಸಾಂತ್ವನದ ಮೆಚ್ಚುಗೆ ಕಂಡೆ. ಅಂದಿನ ಕಲಾಪ ಮುಗಿಸಿ  ಮನೆಗೆ ಬಂದು ಅವನಿಗಾಗಿ  ಮರುಗುತ್ತಾ , ಅವನ  ಬಾಲ್ಯದ  ಗೆಳೆತನದ  ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ   ನಿದ್ದೆ ಹೋದೆ. 




ಚಿತ್ರ ಕೃಪೆ ಅಂತರ್ಜಾಲ 




  ಹೀಗೆ  ದಿನಗಳು ಸಾಗಿದವು , ಗೆಳೆಯನ ಬಿಡುಗಡೆ  ದಿನ ಬಂದೆ ಬಿಟ್ಟಿತು,  ಆ ಗೆಳೆಯನ ಭೇಟಿ ಮಾಡಲು  ಮನಸು  ಪೀಡಿಸುತ್ತಾ ಇತ್ತು,  ನ್ಯಾಯಾಲಯಕ್ಕೆ ರಜೆ   ಹಾಕಿ,  ಜೈಲಿನಿಂದ  ಬಿಡುಗಡೆ ಆಗುವ   "ಅರ್ಥರ್  ಬೂತ್"  ಕಾಣಲು ಹೋದೆ,  ಅಲ್ಲಿನವರಿಗೂ ಅಚ್ಚರಿ, ಒಬ್ಬ ಖೈದಿಯನ್ನು ಸ್ವಾಗತಿಸಲು  ನ್ಯಾಯಾಧೀಶರು  ಬಂದಿದ್ದು  ಅವರಿಗೆ ವಿಚಿತ್ರವಾಗಿತ್ತು,


ಆದರೆ ಅವರಿಗೇನು ಗೊತ್ತು,  ನನ್ನ ಬಾಲ್ಯದ  ಗೆಳೆಯನ  ಮಹತ್ವ.   ಜೈಲಿನ   ನಿಯಮಗಳನ್ನು   ಪಾಲಿಸಿದ    ಜೈಲಿನಿಂದ   ಹೊರಬಂದ ಗೆಳಯ , ಮೊದಲು ಅವನ ಕುಟುಂಬದ   ಎಲ್ಲರೂ ಅವನನ್ನು ಅಪ್ಪಿಕೊಂಡು ಸ್ವಾಗತಿಸಿದರು,  ಅವನ ಮುಖದಲ್ಲಿ  ಬಿಡುಗಡೆಯ  ಸಂತೋಷವಿತ್ತು,  ಅವನ ಕುಟುಂಬದ  ನಂತರ  ಅಲ್ಲೇ ಇದ್ದ ನಾನು    ಆರ್ಥರ್    ಅನ್ನುತ್ತಾ  ಅವನ ಮುಂದೆ ಪ್ರತ್ಯಕ್ಷಳಾದೆ ...!  ಅವನಿಗೆ ನಂಬಲು ಆಗಲಿಲ್ಲ,  ಅವನಿಗೆ ಅದು ಕನಸೋ ನನಸೋ ತಿಳಿಯದಾಯಿತು,  ಅಪರಾಧಿಯಾದ  ತನ್ನನ್ನು  ನ್ಯಾಯಾಧೀಶೆ ಯಾದ  ನಾನು  ಭೇಟಿ  ಮಾಡಬಹುದು ಎಂಬ  ಕಲ್ಪನೆ  ಅವನಿಗೆ ಇರಲಿಲ್ಲ,  ಮುಖದಲ್ಲಿ ಸಂತೋಷ ಉಕ್ಕಿತ್ತು,  ಅವನನ್ನು ನಾನು    ಸೋದರ   ವಾತ್ಸಲ್ಯದಿಂದ   ಅಪ್ಪಿಕೊಂಡೆ  , ಅವನ ಕಣ್ಣಲ್ಲಿ  ಧನ್ಯತೆಯ ಮಿಂಚು ಹರಿದಿತ್ತು,




ಅವನ ಕುಟುಂಬವನ್ನು ಪರಿಚಯಿಸಿದ  ಅವನು, ತನ್ನ ತಪ್ಪಿನ  ಅರಿವಾಗಿ  ಹೊಸ    ಜೀವನ ನಡೆಸಲು  ಸಿದ್ದನಾಗಿದ್ದ,  ಬಹಳ ಹೊತ್ತು, ಅವನ ಜೊತೆಯಲ್ಲಿ ಶಾಲಾ ದಿನಗಳ  ನೆನಪುಗಳನ್ನು  ಮೆಲುಕು ಹಾಕಿದೆ,  ಮುಂದೆ ಒಳ್ಳೆಯ ಗೆಳೆಯರಾಗಿ  ಮುಂದುವರೆಯಲು  ಸಂಕಲ್ಪ ಮಾಡಿದೆವು, ಅವನೂ ತಾನು ಇನ್ನುಮುಂದೆ   ನ್ಯಾಯವಾದ  ಜೀವನ ಮಾಡುವುದಾಗಿ   ನನಗೆ ಮಾತುಕೊಟ್ಟ,  ಅವನ ಬಗ್ಗೆ ಗೌರವ    ಮತ್ತಷ್ಟು  ಜಾಸ್ತಿಯಾಯಿತು,  ಒಬ್ಬ  ಗೆಳೆಯ   ನನಗೆ ಹೀಗೆ  ಒಳ್ಳೆಯವನಾಗಿ ಬದಲಾಗಿದ್ದು ಖುಷಿಕೊಟ್ಟಿತು,  ನಗು ನಗುತ್ತಾ ಅವನಿಗೆ ಶುಭ ಹಾರೈಸಿ  ವಿದಾಯ   ಹೇಳಿದೆ.


 ಒಂದು  ವಿನಂತಿ  :-) ಈ  ಲೇಖನದಲ್ಲಿ ಬಳಸಿರುವ    ಎಲ್ಲಾ   ಚಿತ್ರಗಳನ್ನು   ಅಂತರ್ಜಾಲದಿಂದ   ಕೃತಜ್ಞತಾ  ಪೂರ್ವಕವಾಗಿ  ಪಡೆಯಲಾಗಿದೆ. ಓದುಗರೇ ಇದೊಂದು ಅಮೇರಿಕಾದಲ್ಲಿ    ನಡೆದ   ಸತ್ಯ ಘಟನೆ    ಇದಕ್ಕೆ ನನ್ನ ಕಲ್ಪನೆಯನ್ನೂ ಸೇರಿಸಿ  ಒಂದು ಕಥೆಯ ಚೌಕಟ್ಟು  ನೀಡಿದ್ದೇನೆ.  ನಮ್ಮ ದೇಶದ  ಸಂವಿಧಾನದ  ಕಾನೂನಿಗೂ   ಅಮೆರಿಕದೇಶದ   ಸಂವಿಧಾನದ ಕಾನೂನಿಗೂ  ಬಹಳಷ್ಟು ಅಂತರವಿದೆ,  ಆ ದೇಶದ   ಜನರ   ಜೀವನ ಶೈಲಿಗೆ ತಕ್ಕಂತೆ  ಸಂವಿದಾನ  ರಚನೆ ಆಗಿರುತ್ತದೆ,  ಅಲ್ಲಿನ ಕಾನೂನಿಗೂ  ನಮ್ಮ ದೇಶದ ಕಾನೂನಿಗೂ  ಹೋಲಿಕೆ   ಮಾಡಲಾಗದು,  ಹಾಗಾಗಿ ಈ ಅಂಶಗಳನ್ನು  ಗಮನದಲ್ಲಿ ಇಟ್ಟುಕೊಂಡು ನಿಮ್ಮ ಅನಿಸಿಕೆ ಹಾಕಿ,  ಉದ್ವೇಗದಿಂದ  ನಮ್ಮ ದೇಶದ   ಕಾನೂನನ್ನು, ನ್ಯಾಯಾಲಯಗಳನ್ನು , ನ್ಯಾಯಾಂಗ   ವ್ಯವಸ್ಥೆಯನ್ನು, ದೂಷಿಸುವ  ಅನಿಸಿಕೆ    ಹಾಕಬೇಡಿ ದಯವಿಟ್ಟು.

Thursday, June 16, 2016

ಏನಪ್ಪಾ ಕೊನೆಗೂ ಬಂದ್ಯಾ.......? ಅಂದಿತ್ತು ನನ್ನ ಬಾಲ್ಯದ ಗೆಳೆಯ ಕೆರೆ ......!

ಮರೆಯಲೆಂದರೆ   ಮರೆಯಲಿ ಹ್ಯಾಂಗ  ನಿನ್ನನ್ನ 



ಸುಮಾರು  ಒಂದು ವರ್ಷದ ಹಿಂದೆ  ಅನ್ಸುತ್ತೆ,  ಯಾವುದೋ ಒಂದು ಕೆಲಸದ ನಿಮಿತ್ತ    ಬೆಂಗಳೂರಿಗೆ ಹೋಗಿದ್ದೆ,   ವಾಪಸ್ಸು    ಬರುವಾಗ   ಏನೋ ನೆನಪಾಗಿ,     ಮದ್ದೂರಿನ  ಟಿ.ಬಿ. ಸಿರ್ಕಲ್ ನಲ್ಲಿ   ಹಾಗೇ ನಿಂತೇ  ,  ಅಲ್ಲಿಗೆ   ಹೋಗೋದೋ   ಬೇಡವೋ...?  ಅಲ್ಲಿ ಹೋಗಿ   ನನಗೆ ನಾನೇ ಮಾತನಾಡಿ ಕೊಂಡರೆ   ಜೊತೆಯಲ್ಲಿದ್ದವ   ಏನು  ಅಂದುಕೊಂಡಾನೋ...? ಅನ್ನೋ ಭಯ , ಆದ್ರೆ    ಅಲ್ಲಿಗೆ ಹೋಗಲೇ ಬೇಕೂ ಎನ್ನುವ  ಆಸೆ  ತಡೆಯಲಾಗಲಿಲ್ಲ,  ನನ್ನ ಬಾಲ್ಯದಲ್ಲಿ  ಮನಸ್ಸು ಬಿಚ್ಚಿ   ಹೇಳಿದ  ಕಷ್ಟ ಸುಖಗಳಿಗೆ    ಕಿವಿಯಾದ   ಈ ಬಾಲ್ಯದ ಮಿತ್ರನನ್ನು   ನೋಡಲೇ ಬೇಕೆಂಬ   ಹಂಬಲ  ಜಾಸ್ತಿಯಾಗಿತ್ತು,  ಯಾಕಂದ್ರೆ ಅವನನ್ನು  ಭೇಟಿಮಾಡಿ  ಸುಮಾರು 35 ವರ್ಷಗಳಿಗೂ  ಜಾಸ್ತಿಯಾಗಿತ್ತು.  ಒಮ್ಮೊಮ್ಮೆ   ಇವನನ್ನು    ಗೆಳೆಯ ಎನ್ನಬೇಕೋ  ಅಥವಾ   ವಾತ್ಸಲ್ಯ  ತೋರಿ  ನನ್ನ ಮಾತನ್ನು  ಮರುಮಾತನಾಡದೆ  ಕೇಳಿಸಿಕೊಂಡ   ತಾಯಿ ಎನ್ನಬೇಕೋ ತಿಳಿಯುತ್ತಿಲ್ಲ, ಇನ್ನು ಇವನೋ  ನನಗಿಂತಾ ಬಹಳ ಹಿರಿಯ , ನಾನು , ನನ್ನಪ್ಪ ಹುಟ್ಟುವ ಮೊದಲೇ ಇವನು  ಹುಟ್ಟಿದ್ದ,  ಹಾಗಾಗಿ ಇವನನ್ನು  ಅಜ್ಜ, ಅಥವಾ ಅಜ್ಜಿ  ಅನ್ನೋಕೆ   ಭಯ, ಯಾಕಂದ್ರೆ  ಇವನು    ಯಾವತ್ತೂ  ಅಜ್ಜ  ಅಜ್ಜಿಯರಂತೆ   ನನ್ನ   ಬಾಲ್ಯದ  ಅನುಭವಗಳನ್ನು    ಕೇಳಿಸಿಕೊಳ್ಳಲಾಗದ   ಅಸಹಾಯಕನಾಗಿರಲಿಲ್ಲ .   ಹಾಗಾಗಿ  ಇವ ನನಗೆ ಎಲ್ಲವೂ ಆಗಿದ್ದ , ಗಟ್ಟಿ ಮನಸು ಮಾಡಿ  ಅವನನ್ನು ನೋಡಲು  ತೆರಳಿದೆ.


ಕಬ್ಬಿನ  ಗದ್ದೆಯಲ್ಲಿ  ಚಾಮರ ಬೀಸಿತ್ತು ತಂಗಾಳಿ 

ನನ್ನ ಬಾಲ್ಯ ಕಳೆದ  ಊರು , ಮನೆ, ಗದ್ದೆ, ವಿ.ಸಿ. ನಾಲೆ,  ಎಲ್ಲದರ ದರ್ಶನವನ್ನು ತುರ್ತಾಗಿ  ಮಾಡಿದೆ.   ,  ಆದರೆ ನನ್ನ ಮನಸು   ಇವನನ್ನು  ಕಾಣಲು ಹಾತೊರೆಯುತ್ತಿತ್ತು,   ನನ್ನ ಗೆಳೆಯನ ಕಾಣಲು    ಒಂದೇ  ಉಸಿರಿನಲ್ಲಿ  ಓಡಿದೆ . ಜೊತೆಯಲ್ಲಿದ್ದ ಗೆಳೆಯನಿಗೆ  ನನ್ನನ್ನು  ಒಂಟಿಯಾಗಿ  ಬಿಡುವಂತೆ ಕೋರಿ, ಒಬ್ಬನೇ  ನನ್ನ ಗೆಳೆಯನ  ಸನಿಹ ಕುಳಿತೆ. ನನಗೆ ಅರಿವಿಲ್ಲದಂತೆ  ನೆನಪಿನ  ಚಿತ್ರಗಳು  ಮನದಲ್ಲಿ ಮೂಡುತ್ತಿದ್ದವು,  ಬಾಲ್ಯದ  ಚಿತ್ರಗಳನ್ನು  ಕಾಣುತ್ತಾ  ಕಣ್ಣಲ್ಲಿ   ನೀರು ಜಿನುಗಲು ಶುರು ಆಯ್ತು   ಅದು  ಆನಂದ ಕ್ಕೊ  ಅಥವಾ  ನೋವಿಗೋ ಒಂದೂ ತಿಳಿಯಲಿಲ್ಲ.      ಅಲ್ಲೇ ಸನಿಹದಿಂದ  ತಂಗಾಳಿ ಬೀಸಿ  ನನ್ನನ್ನು  ಸಂತೈಸುತ್ತಿತ್ತು.  ದಡದಲ್ಲಿ   ಸದ್ದು ಮಾಡದೆ ಕುಳಿತೇ  ಇದ್ದೆ   ನಾನು ಬಾಲ್ಯದಲ್ಲಿ ಕಂಡ  ಗೆಳೆಯ   ಮೂವತ್ತೈದು  ವರ್ಷಗಳಲ್ಲಿ  ಬಡವಾಗಿದ್ದ, ಮೊದಲಿದ್ದ  ಅಲಂಕಾರ ಇಲ್ಲವಾಗಿತ್ತು,  ಸಾವಿನ ಅಂಚಿನಲ್ಲಿ   ದಿನಗಳನ್ನು ಎಣಿಸುತ್ತಾ  ಇರುವ   ರೋಗಿಯಂತೆ  ಅವನ ದರ್ಶನ  ಆಯಿತು.     ನಾನು ಅವನನ್ನು ನೋಡುತ್ತಾ  ಕುಳಿತೇ ಇದ್ದೆ,  ನಿಶ್ಯಬ್ಧ  ನಿಶ್ಯಬ್ಧ  ನಿಶ್ಯಬ್ಧ   ,.........................   ಎತ್ತಲಿಂದಲೋ   ತೇಲಿಬಂತು    "ಓ   ಹೋ ಕೊನೆಗೂ ಬಂದ್ಯಾ....? "   "ಈಗ ನೆನಪಾದ್ನಾ    ನಾನೂ ...?"     ಎಂಬ ಮಾತು,  ಬೆಚ್ಚಿ ಬಿದ್ದು    ಅತ್ತ ಇತ್ತ ನೋಡಿದೆ, ಯಾರೂ ಇಲ್ಲ .  ಅಲ್ಲೇ ಸನಿಹದಲ್ಲಿ   ನೀರಿನ ಒಳಗಿಂದ   ಒಂದು ಕಪ್ಪೆ  ನನ್ನನ್ನು ನೋಡಿ  ಬಾಯ್ತೆರೆದು  ಕಣ್ಣಗಲಿಸಿ    ಅಣಕಿಸಿತ್ತು .   ಆದರೆ ಯಾರೂ ಇಲ್ಲ .  ಮತ್ತೆ ನಿಶ್ಯಬ್ಧ    ಸ್ವಲ್ಪ ಹೊತ್ತು ಬಿಟ್ಟು   ಮತ್ತದೇ   ಪ್ರಶ್ನೆ ತೇಲಿಬಂತು  .   ಮತ್ತೆ   ಮತ್ತೆ  ಕಣ್ಣುಗಳು  ಸುತ್ತ ಮುತ್ತ ನೋಡಿದರೂ   ಏನೂ ಕಾಣಲಿಲ್ಲ.   ಅಷ್ಟರಲ್ಲಿ    ಕಣ್ಣು ಮುಚ್ಚಿಕೋ.......   ಹಾಗೆ ಮಾತನಾಡೋಣ  ಎನ್ನುವ   ಮಾತು ತಂಗಾಳಿ  ಯೊಡನೆ ತೇಲಿಬಂತು.    ಗೆಳೆಯನ  ಜೊತೆ ಸಂವಾದ ನಡೆಸಲು   ಕಣ್ಣು ಮುಚ್ಚಿ  ಕುಳಿತೆ.

ಬಾಲ್ಯದ  ನೆನಪುಗಳ  ಸಾಕ್ಷಿ  ಇವೆಲ್ಲಾ 


 "ಓ   ಹೋ ಕೊನೆಗೂ ಬಂದ್ಯಾ....? "   "ಈಗ ನೆನಪಾದ್ನಾ    ನಾನೂ ...?"  ಅಂತೂ ಇಂತೂ  ಬಂದ್ಯಲ್ಲಪ್ಪ  ಖುಷಿಯಾಯ್ತು ,  ಹೇಗಿದ್ದೀಯ  ...?

ನಾನು :-     "ಹೌದು ಬಹಳ ವರ್ಷಗಳ   ನಿನ್ನ ನೆನಪು ಕಾಡಿತ್ತು   ನಿನ್ನ ನೋಡಲು ಬಂದೆ ,   ನನ್ನ ಹಳೆಯ  ಬಾಲ್ಯದ ನೆನಪುಗಳ  ಸಾಕ್ಷಿ   ಆಲ್ವಾ ನೀನು ಅದಕ್ಕಾಗಿ   ಓಡಿ  ಬಂದೆ . ದಯವಿಟ್ಟು ಕ್ಷಮಿಸಿ ಬಿಡೂ   ಬಹಳ ವರ್ಷಗಳಿಂದ   ನಿನ್ನನ್ನು ನೋಡಲು  ಜೀವನ ಜಂಜಾಟದ   ಕಾರಣ ಬರಲಾಗಲಿಲ್ಲ. "

ಅವನು :- "ಅಯ್ಯೋ ಕ್ಷಮೆಯಾಕೆ ಕೇಳ್ತೀಯ ...?  ಹೋಗಲಿ ಬಿಡೂ,  ಎಷ್ಟೋ  ಜನ  ನಿನ್ನ ಹಾಗೆ ನನ್ನ ಬಳಿಯಲ್ಲಿ  ಬಾಲ್ಯದ ನೆನಪಿನ  ಗಂಟನ್ನು  ಬಿಟ್ಟಿದ್ದರೂ  ಇಲ್ಲಿಯವರೆಗೆ  ಅದನ್ನು  ಹುಡುಕಿಕೊಂಡು  ಯಾರೂ ಬಂದಿಲ್ಲ,  ಬರುವುದಿಲ್ಲಾ ಕೂಡ,  ಆದರೆ ನೀನು   ಹಾಗೆ ಮಾಡಲಿಲ್ಲ  ,  ನನ್ನ  ಜೀವಿತಾವದಿಯಲ್ಲಿ   ಗೆಳೆತನ ಹುಡುಕಿಕೊಂಡು  ಒಬ್ಬನಾದರೂ   ಬಂದನಲ್ಲ  ಅದೇ ಖುಷಿ ನನಗೆ. "

ನಾನು :-  "ಅಯ್ಯೋ  ಅದರಲ್ಲಿ ನನ್ನ ದೊಡ್ಡಸ್ತಿಕೆ  ಏನೂ ಇಲ್ಲಾ,  ನಿನಗೆ ಗೊತ್ತಲ್ಲಾ   ನಿನ್ನ ಬಳಿ  ನಾನು  ಅತ್ಯಂತ ಖುಷಿಯ  ಹಾಗು  ಅತ್ಯಂತ  ನೋವಿನ  ಕ್ಷಣಗಳನ್ನು ಹಂಚಿ ಕೊಂಡಿದ್ದೇನೆ . ನಾನು ಸಂತೋಷ ಗೊಂಡಾಗ  ನಲಿದು,  ನಾನು ಸಂಕಟದಿಂದ  ನರಳಿದಾಗ  ಕರುಣೆಯಿಂದ   ಸಂತೈಸಿದವ   ನೀನು. ಪ್ರತಿನಿತ್ಯ  ಶಾಲೆಗೆ  ಹೋಗುವಾಗ    ಹಾಗು ಬರುವಾಗ   ನನ್ನ ಸೈಕಲ್  ನಿಲ್ಲಿಸಿ   ನಿನ್ನ  ಹತ್ತಿರ ಕೂರುತ್ತಿರಲಿಲ್ಲವ ನಾನು...?  ಕೆಲವೊಮ್ಮೆ   ಹಾಗೆ ಕುಳಿತು ನನಗೆ ನಾನೇ ಮಾತನಾಡುವುದನ್ನು  ಕಂಡ ಕೆಲವು  ಜನರು    ಲೇ  ಹುಡುಗ   ಯಾಕೋ ಅಲ್ಲಿ ಕುಳಿತಿದ್ದೀಯ ...?  ಕಾಲು ಜಾರಿ ನೀರಿಗೆ ಬಿದ್ದೀಯ  .....!   ಮೊದ್ಲು    ಅಲ್ಲಿಂದ  ಎದ್ದು  ಮನೆಗೆ ಹೋಗು ಅಂತಾ  ಗದರಿಸಿ ಹೇಳ್ತಾ ಇದ್ರೂ ,  ಅದಕ್ಕೆ ಸೊಪ್ಪು ಹಾಕಿರಲಿಲ್ಲ.   ಈ ವಿಚಾರ ನನ್ನಪ್ಪನಿಗೂ ಗೊತ್ತಾಗಿ  ಒಂದೆರಡು  ಏಟು  ಬಹುಮಾನ   ಕೊಟ್ಟು ಅಲ್ಲಿಗೆ ಹೋಗಿ ಕೂರದಂತೆ   ತಾಕೀತು   ಮಾಡಿದ್ದರು . ಆದರೆ  ನಾನು    ನಿನ್ನ ಹತ್ತಿರ ಕುಳಿತು  ಮಾತನಾಡುವುದನ್ನು ಮಾತ್ರ ಬಿಡಲಿಲ್ಲ.  ಸುಮಾರು ಹತ್ತು ವರ್ಷ ನಿನ್ನೊಡನೆ  ಮಾತು ಕಥೆ  ನಡೆಸಿದ ನೆನಪು ನನಗೆ ಹೌದಲ್ವಾ ...? "

ಅವನು :-) "ಹ ನಿಜ  ನಿಜ ,  ನನಗೆ ನೆನಪಿದೆ,   ನಿನ್ನ ಈ ಎಲ್ಲಾ  ನಡವಳಿಕೆ ,  ನಿನ್ನ ಮೊದಲ ಭೇಟಿ   ಹೇಗಾಯ್ತು ಗೊತ್ತಾ ...?  ಹೇಳ್ತೀನಿ ಕೇಳು.  ನೀನು ಬಹುಷಃ  ಆರನೇ ತರಗತಿ ಇರಬೇಕು,  ಒಂದು ದಿನ ಸಂಜೆ   ಶಾಲೆ ಮುಗಿಸಿ   ನಿನ್ನ ಮನೆಯ ಕಡೆ ಹೊರಟಿದ್ದೆ,  ಜಿಟಿ  ಜಿಟಿ ಮಳೆ ಬರ್ತಾ ಇತ್ತು, ಆದರೆ  ನಿನ್ನ  ಉತ್ಸಾಹಕ್ಕೆ   ಕೊರತೆ ಇರಲಿಲ್ಲ,  ಬಾಯಿಗೆ ಬಂದಂತೆ ಹಾಡುತ್ತಾ  ಜೋರಾಗಿ ಸೈಕಲ್  ತುಳಿಯುತ್ತಾ    ಬರ್ತಾ  ಇದ್ದೆ.  ನಿನಗೆ ಗೊತ್ತಲ್ಲ...?   ಆಗಿನ ರಸ್ತೆ ಈಗಿರುವಷ್ಟು ದೊಡ್ಡದಾಗಿ ಇರಲಿಲ್ಲ.   ನಿನ್ನ ಎದುರುಗಡೆ    ವೇಗವಾಗಿ  "ಉದಯರಂಗ"  ಬಸ್ ಬರ್ತಾ  ಇತ್ತು,  ನೀನು ಆ ಬಸ್ಸಿನ  ರಭಸಕ್ಕೆ  ಬೀಸಿದ     ಗಾಳಿಯಿಂದ  ಆಯತಪ್ಪಿ ಸೈಕಲ್ಲಿನಿಂದ ಬಿದ್ದೆ, ನಿನ್ನ ಪುಣ್ಯ ಚೆನ್ನಾಗಿತ್ತು   ಅಲ್ಲೇ ಇದ್ದ  ತಡೆ ಕಲ್ಲಿಗೆ ನಿನ್ನ ಸೈಕಲ್ ಗುದ್ದಿ ನಿಂತಿತು. ಹಾಗು ನಿನ್ನನ್ನು ಸಹ ನನ್ನೊಳಗೆ ಬೀಳದಂತೆ ತಡೆಯಿತು.  ನಿನ್ನ ಬಲಕಾಲಿನ  ಮಂಡಿಯಲ್ಲಿ   ಗಾಯವಾಗಿ ರಕ್ತ  ಸೋರುತ್ತಿತ್ತು,  ಅಷ್ಟರಲ್ಲಿ  ಬಂದ ಯಾರೋ ಒಬ್ಬರು  ನಿನ್ನನ್ನು ಅಲ್ಲೇ ಕೂರಿಸಿ,  ಅಲ್ಲೇ ಇದ್ದ ತುಂಬೆ ಗಿಡದ   ಎಲೆಗಳನ್ನು  ಕಿತ್ತು ತಂದು  ಅವುಗನ್ನು  ಕೈಗಳಲ್ಲಿ  ಉಜ್ಜಿ ಹಿಂಡಿ  ರಸ ತೆಗೆದು  ನಿನ್ನ ಗಾಯಕ್ಕೆ ಹಾಕಿದರು, ಅಲ್ಲೇ ಸ್ವಲ್ಪ  ಹೊತ್ತು ತುಂತುರು ಮಳೆಯಲ್ಲೇ  ನೆನೆಯುತ್ತಾ  ನನ್ನ ಬಳಿ  ಕುಳಿತಿದ್ದೆ  ನೀನು,   ಆ ದಿನ  ಶುರು ಆದ ನಿನ್ನ ನನ್ನ ಗೆಳೆತನ   ಮಾತನಾಡುವ  ಮಟ್ಟಕ್ಕೆ  ಬಂದಿತ್ತು." "



 ದಿನವೂ  ಶಾಲೆಗೇ ಹೋಗ್ತಾ ಇದ್ದ  ರಸ್ತೆ 

ನಾನು :-    "ನಿಜ, ನೀನು ಹೇಳಿದ್ದು,  ನೋಡು ಅವತ್ತು ಆದ ಗಾಯದ ಗುರುತು ಇಂದಿಗೂ ಹಾಗೆ ಇದೆ, ಅದ್ಯಾಕೋ ಗೊತ್ತಿಲ್ಲ, ಆ ಘಟನೆ ಆದ ಮಾರನೆಯ ದಿನ  ಮತ್ತೆ  ಶಾಲೆಗೇ ಹೊರಟೇ, ಮನೆಯಲ್ಲಿ ಅಮ್ಮಾ   ಲೋ ನಿನ್ನೆ ತಾನೇ  ಮಳೆಯಲ್ಲಿ ನೆನೆದು  ಬಂದೆ,  ರಾತ್ರಿಯೆಲ್ಲಾ   ಮೈ ಬಿಸಿ ಇತ್ತು   ಇವತ್ತು ಶಾಲೆ ಬೇಡ ಮನೆಯಲ್ಲಿ ಇರು ಅಂದ್ರೂ ಕೇಳದೆ . ಸೈಕಲ್ಲಿನಲ್ಲಿ  ಹೊರಟೆ,  ದಾರಿಯಲ್ಲಿ  ನಿನ್ನ ಹತ್ತಿರ ಬಂದ ತಕ್ಷಣ  ನಾನು ಬಿದ್ದ ಸ್ಥಳವನ್ನು   ಹುಡುಕಿ, ಅಲ್ಲಿ ನಿಂತೇ,  ಮನದಲ್ಲಿ  ಸ್ವಲ್ಪ ಹೆದರಿಕೆ ಇತ್ತು,  ನಿನ್ನ ಸಮೀಪ ಸ್ವಲ್ಪ ಹೊತ್ತು  ಮೌನವಾಗಿ ಕುಳಿತು,  ಶಾಲೆಗೇ ಹೊರಟೆ , ಮತ್ತೆ   ವಾಪಸ್ಸು  ಬರುವಾಗ   ಮಳವಳ್ಳಿಯ ಪರಿಮಳ ಬೇಕರಿಯಲ್ಲಿ   "ದಿಲ್ ಪಸಂದ್ " ಅನ್ನೋ  ತಿಂಡೀ  ಹಾಗು ಖಾರ  ಪಕೋಡ  ಖರೀದಿಸಿ  ನಿನ್ನ  ಬಳಿ ಬಂದು   ಕುಳಿತೆ,  ತಿಂಡೀ ತಿನ್ನುವ ಮೊದಲು   ಸ್ವಲ್ಪ  ಮುರಿದು  ನಿನಗೆ  ಕೊಟ್ಟೆ , ನೀನು ನನಗೆ ಥ್ಯಾಂಕ್ಸ್ ಸಹ ಹೇಳಲಿಲ್ಲ.  ಹಾಗೆ ಕೊಟ್ಟ ತಿಂಡಿಯನ್ನು  ಗುಳುಂ ಮಾಡಿದೆ.   ನಂತರ ನಿನ್ನೊಡನೆ ಮಾತನಾಡುತ್ತಾ   ಗಾಯದ ನೋವಿನ ಬಗ್ಗೆ   ಹೇಳಿಕೊಂಡೆ. ಬೇಗನೆ ಗಾಯ ವಾಸಿಮಾಡು  ಅಂತಾ ನಿನ್ನಲ್ಲಿ ಕೇಳಿಕೊಂಡ  ನೆನಪು.  ಮರೆತಿಲ್ಲ  ಮಿತ್ರ".


ಗೆಳೆಯನ ಇಂದಿನ ಪರಿಸ್ಥಿತಿ 


ಅವನು :-  "ಪ್ರತೀ ಶನಿವಾರ   ಶಾಲೆಯಿಂದ ವಾಪಸ್ಸು ಬರುವಾಗ   ನೀನು  ಮಸಾಲೆ ದೋಸೆ  ತಂದು  ನನ್ನ ಜೊತೆ ಹಂಚಿಕೊಂಡು  ತಿನ್ನುತ್ತಿದ್ದೆಯಲ್ಲ  ಅದನ್ನು ಮರೆತಿಲ್ಲಾ  ಕಣಪ್ಪ, ಜೊತೆಗೆ  ನಿನ್ನ ಶಾಲೆಯಲ್ಲಿ  ಶಿಕ್ಷಕರು  ಬೈದಾಗ , ಹೊಡೆದಾಗ  ಅಂದು  ಅಳುತ್ತಾ  ನನ್ನೊಡನೆ  ನೋವನ್ನು  ಹಂಚಿಕೊಳ್ತಾ  ಇದ್ದೆ.  ನನಗೂ ಅಯ್ಯೋ ಅನ್ನಿಸುತ್ತಿತ್ತು, ಪ್ರತೀ ವರ್ಷ  ಶಾಲೆಯಲ್ಲಿ ನಿನ್ನ ಫಲಿತಾಂಶ  ಬಂದಾಗ  ಖುಷಿಯಿಂದ ಬಂದು ಸಿಹಿ  ನೀಡಿ   ನಿನ್ನ ಸಾಧನೆ ಬಗ್ಗೆ  ಜಂಭ  ಕೊಚ್ಚಿ ಕೊಳ್ತಾ  ಇದ್ದೆ ನೀನು. ಒಮ್ಮೆಯಂತೂ  ಒಂದು ಹಾವು  ಕಪ್ಪೆಯನ್ನು ತಿನ್ನಲು ಬಂದಾಗ   ಅದಕ್ಕೆ ಕಲ್ಲು ಹೊಡೆದು , ಕಪ್ಪೆ  ತಿನ್ನಲು ಅವಕಾಶ ಕೊಡಲಿಲ್ಲ ನೀನು,  ನಂತರ   ಆ ಹಾವು  ನಿನ್ನನ್ನು  ಅಟ್ಟಿಸಿಕೊಂಡು ಬಂದಾಗ   ನಿನ್ನ ಸೈಕಲ್  ಏರಿ ಓಟ ಕಿತ್ತಿದ್ದೆ,  ಆ ಹಾವಿಗೆ ಹೆದರಿ ನೀನು ಎರಡುದಿನ ಬರಲಿಲ್ಲ  . ಇನ್ನೊಂದು ದಿನ  ಮೀನು ಹಿಡಿಯುವ  ಹುಡುಗರು  ಮೀನು ಹಿಡಿಯಲು ಬಂದಾಗ ,   ಗಾಳಕ್ಕೆ  ಕಟ್ಟಲು  ಅವರು ತಂದಿದ್ದ  ಎರೆಹುಳುಗಳನ್ನು   ಅಪಹರಿಸಿ   ಅವರಿಂದ  ಗೂಸ ತಿಂದೆ , ಆದರೆ ಏನ್ ಮಾಡಲಿ  ನಾನು ಅಸಹಾಯಕನಾಗಿ ಇದನ್ನೆಲ್ಲಾ   ನೋಡ್ತಾ ಇದ್ದೆ.   ಮತ್ತೊಮ್ಮೆ  ಏಡಿ  ಹಿಡಿಯಲು ಬಂದ  ಕೊಕ್ಕರೆಗೆ ಹೊಡೆದ ಕಲ್ಲು  ಯಾರಿಗೋ ಬಿದ್ದು  ಅವರಿಂದಲೂ ಸಹ  ನಿನಗೆ ಗೂಸ  ಸಿಕ್ಕಿತ್ತು   ಆದರೆ ಘಟನೆಗಳು  ನಡೆದ ಸಂಜೆಯೇ   ನೀನು ಅಳುತ್ತಾ  ಅ ಹುಡುಗರು  ಮೀನನ್ನು ಹಿಡಿದು ಸಾಯಿಸುತ್ತಿರುವುದಾಗಿ  ನನ್ನ  ಬಳಿ ಅಳುತ್ತಾ  ಸಂಕಟ ಪಟ್ಟೆ. ಇಷ್ಟೆಲ್ಲಾ  ಆದ್ರೂ  ನೀನೇನು  ಬಹಳ ಒಳ್ಳೆಯವನಲ್ಲಾ ಬಿಡೂ  ಒಮ್ಮೊಮ್ಮೆ   ನನ್ನ ಒಡಲಿಗೆ  ಮೂತ್ರ  ಸಿಂಚನ  ಮಾಡುತ್ತಾ ಇದ್ದೆ , ಆದರೆ ನಿನ್ನ ಮೇಲಿನ ಪ್ರೀತಿಯಿಂದ ಅದನ್ನೂ ಸಹ ಸಹಿಸಿಕೊಂಡಿದ್ದೆ   ಗೊತ್ತಾ ನಿನಗೆ . "

ನಾನು :-" ಅರೆ ಇದೆಲ್ಲಾ  ನೀನು ಮರೆತೇ ಇಲ್ವಾ ...? ಹೌದಯ್ಯ    ಆಗ ತಿಳುವಳಿಕೆ ಇರಲಿಲ್ಲ  ಕೆಲವೊಮ್ಮೆ ವಯಸ್ಸಿನ ಸಹಜ  ಹುಡುಗಾಟ ಆಡಿದ್ದೆ  ನಿನ್ನ ಜೊತೆ , ಈಗ ಇದನ್ನೆಲ್ಲಾ ನೆನೆದಾಗ  ಕೆಲವೊಮ್ಮೆ ನೋವಾಗುತ್ತದೆ.   ಹೌದಪ್ಪಾ  ಅ ದಿನಗಳು ಸ್ವರ್ಗದ  ದಿನಗಳು ಕಣಪ್ಪಾ,  ನೋಡು  ನೀರು  ತುಂಬಿಕೊಂಡು  ಜೋರಾಗಿ  ಎತ್ತರವಾದ ಅಲೆಗಳನ್ನು ಎಬ್ಬಿಸಿ   ದಡಕ್ಕೆ ಅಪ್ಪಳಿಸಿ  ನೀರನ್ನು  ರಸ್ತೆಗೆ  ಚೆಲ್ಲಾಡುತ್ತಿದೆ, ಆಗಂತೂ ನೀನು ಸಮುದ್ರ   ಎನ್ನುವಂತೆ  ಭಾವನೆ ಬರ್ತಾ ಇತ್ತು,  ಮಳೆಗಾಲದಲ್ಲಿ  ಮಳೆಯಲ್ಲಿ  ನೆನೆಯುತ್ತಾ   ನಿನ್ನನ್ನು  ನೋಡ್ತಾ ಇದ್ದರೆ ಅದರ ಮಜವೇ ಮಜಾ ಬಿಡೂ ,    ನಿನ್ನಲ್ಲಿ ಬಿದ್ದ ಮಳೆ ಹನಿಗಳು  ಚಕ್ಕುಲಿಯಂತೆ  ಚಿತ್ತಾರ ಬಿಡಿಸುತ್ತಿದ್ದವು.  ಇನ್ನು ಚಳಿಗಾಲ ಬಂದರೆ ನಿನ್ನಲ್ಲಿ  ನೂರಾರು  ಹಕ್ಕಿಗಳ  ಕಲರವ  ತುಂಬಿದ  ಆಟ  ಕಾಣುತ್ತಿತ್ತು, ದೂರದಲ್ಲಿ ನೀರು ನಾಯಿಗಳು  ನೆಗೆದಾಡುತ್ತಾ  ತೇಲುತ್ತಿದ್ದವು.  ಬೇಸಿಗೆಯಲ್ಲೂ ಸಹ ನಿನ್ನ ಅಂದ  ಕೆಡುತ್ತಿರಲಿಲ್ಲ, ಅಷಾಡ ಮಾಸದ  ಬಿರುಸಾದ ಗಾಳಿಗೆ  ನನ್ನ ಸೈಕಲ್  ನೆಟ್ಟಗೆ ಓಡಿಸಲು ಆಗ್ತಾ ಇರಲಿಲ್ಲ.  ಆದರು ಓರೆ ಕೊರೆಯಾಗೆ  ಸೈಕಲ್ಲನ್ನು ಓಡಿಸಿಕೊಂಡು ನಿನ್ನ ಬಳಿ   ಬರ್ತಾ ಇದ್ದೆ.   ಇನ್ನು ಮುಸ್ಸಂಜೆಯಲ್ಲಿ   ಸುಂದರ  ಸೂರ್ಯಾಸ್ತ  ನೋಡುತ್ತಿದ್ದ  ಆ  ಖುಷಿಯೇ  ಬೇರೆ  ಬಿಡೂ.    ನಿನ್ನ ಬಗ್ಗೆ ಯಾಕೆ ಹೆಮ್ಮೆ ಗೊತ್ತಾ....?  ನಾನೂ ನೀನು ಗೆಳೆಯರಾಗಿದ್ದ  ಸಮಯದಲ್ಲಿ  ನೀನು ಯಾರಿಗೂ  ತೊಂದರೆ ಕೊಡಲಿಲ್ಲ,  ಒಂದು ದಿನವೂ ನಿನ್ನಲ್ಲಿ ಅಪಘಾತದಿಂದ  ವಾಹನಗಳು  ಬಿದ್ದ ಬಗ್ಗೆಯಾಗಲಿ,  ಜನಗಳು ಸತ್ತ ಬಗ್ಗೆಯಾಗಲಿ  ವರದಿ ಆಗಲಿಲ್ಲ. ಸುತ್ತ ಮುತ್ತ ಇದ್ದ  ಗದ್ದೆಗಳ  ರೈತರಿಗೆ , ಅವರ ಬೆಳೆಗೆ  ಜೀವ ನೀಡುತ್ತಿದ್ದೆ ನೀನು,  ಇನ್ನು   ಎರಡೂ  ಕೊನೆಯಲ್ಲಿ ಇದ್ದ ಎರಡು ಕೊಡಿಗಳು  ತುಂಬಿ ಜಲಪಾತದಂತೆ  ಹರಿದಾಗ   ಅವೇ ನಮಗೆ ಗಗನ ಚುಕ್ಕಿ , ಭರಚುಕ್ಕಿ  ಜಲಪಾತ ವಾಗುತ್ತಿದ್ದವು. ಆ ರಮಣೀಯ   ದೃಶ್ಯ  ನೋಡೋ ಭಾಗ್ಯ ಈಗಿಲ್ಲಾ ಬಿಡೂ.   ಆ ಕೋಡಿಯಲ್ಲಿ  ಮನೆಯವರಿಗೆ ಗೊತ್ತಿಲ್ಲದಂತೆ  ಸ್ನಾನ ಮಾಡುತ್ತಿದ್ದುದು ಮರೆತಿಲ್ಲಾ ಕಣಯ್ಯ ."

ಅಸ್ಥಮಿಸುವ   ಸೂರ್ಯನೂ   ಕೆಂಪಗೆ 



ಅವನು :-" ನೋಡು ಹಳೆಯ  ನೆನಪನ್ನು  ಜ್ಞಾಪಿಸ ಬೇಡ  ಸಂಕಟ ಆಗುತ್ತೆ.  ನನ್ನ ಕಥೆ ಇರಲಿ ಇದೇನಯ್ಯ  ನೀನು  ಏನು  ಹೀಗೆ ಆಗಿದ್ಯಾ,.....?  ಚಿಕ್ಕ ವಯಸ್ಸಿನಲ್ಲಿ ಒಳ್ಳೆ ಹೀರೋ  ತರಹ ಇದ್ದವನು  ಈಗ  ವಿಲ್ಲನ್  ತರಹ ಆಗಿದ್ದೀ ...?  ಯಾಕೆ  ಜೀವನದಲ್ಲಿ ಖುಶಿ ಇಲ್ವಾ ...?"


ನಾನು : -  "ಹೌದು ಕಣಯ್ಯ   ಜೀವನ ಪಯಣದಲ್ಲಿ ಆದ ಬದಲಾವಣೆ  ಇದು.  ಜೀವನ ಮಾಗಿದಂತೆ ದೇಹವೂ ಮಾಗುತ್ತದೆ ಆಲ್ವಾ ..?"
 ನಂತರ   ಸ್ವಲ್ಪ ಕೋಪ ಬಂದು   "ಓ.......   ಹೋ ....   ನೀನೇನು  ಈಗ ಸುರಸುಂದರಾಂಗನ ತರಹ  ಇದ್ದೀಯ  ಅದಕ್ಕೆ ನನ್ನನ್ನು ಕಿಚ್ಹಾಯಿಸುತ್ತಿದ್ದೀಯ ಆಲ್ವಾ ...?  ನಿನ್ನ ಅವಸ್ತೆ ನೋಡಿಕೋ  ಹೇಗಿದೆ  ಅಂತಾ ..? " ಅಂದೇ

ಅವನು :-  "ನಿಜ  ಕಣಪ್ಪಾ  ನಾನು ಇಂದು ಕುರೂಪಿಯೇ , ಇಂದು ನನ್ನ ಒಡಲಲ್ಲಿ ವಿಷ ಇದೆ,  ಯಾವ ಜೀವಿಯೂ ಬದುಕಲಾಗದಷ್ಟು  ನನ್ನ ಒಡಲು ಬಂಜರಾಗಿದೆ , ನೋಡು ನಾನು  ಹೇಗಿದ್ದೇನೆ,  ಜೊಂಡು  ಹುಲ್ಲು, ತಾವರೆ ಗಿಡಗಳು,  ನಾನೇ ನಿರಡಿಕೆಯಿಂದ  ಕೆಲವೊಮ್ಮೆ  ನೀರು ಸಿಗದೇ   ನರಳುತ್ತೇನೆ,   ಹಕ್ಕಿ ಪಕ್ಷಿಗಳು  ಹೆಚ್ಚು ಬರುತ್ತಿಲ್ಲ,   ಏಡಿಗಳು, ಮೀನುಗಳು, ನೀರು ಹಾವುಗಳು  , ನೀರು ನಾಯಿಗಳು   ಎಲ್ಲಾ ನನ್ನನ್ನು ತ್ಯಜಿಸಿವೆ.  ಹೊಸ ರಸ್ತೆಯಾದ ನಂತರ   ನನ್ನೊಳಗೆ  ಬೀಳುವ  ವಾಹನ , ಜನ  ಜಾಸ್ತಿಯಾಗುತ್ತಿದ್ದು,   ಅದರ ಕೆಟ್ಟ ಹೆಸರು ನನಗೆ ಬರ್ತಾ ಇದೆ.  ಪಕ್ಕದ ಗದ್ದೆಗಳ ರೈತರು  ನನ್ನನ್ನು  ನನ್ನ ಸಂಕಟವನ್ನು ಅರಿಯದೆ   ಬೈಯ್ಯುತ್ತಾರೆ .  ಇನ್ನೆಷ್ಟು ದಿನ  ಇಂತಹ  ಜೀವನವೋ  ನಾ ಕಾಣೆ, ಕೊನೆಯ ಉಸಿರನ್ನು  ಎಳೆಯಲು  ಯಾತನಾಮಯ  ದಿನಗಳನ್ನು ಎಣಿಸುತ್ತಾ ಇದ್ದೇನೆ.   ಬೇಗ  ನನಗೆ ಸಾವು ಬರಲಿ  ಅಂತಾ     ಹಾರೈಸು  ಗೆಳೆಯ ."

ನಾನು :-) ಗೆಳೆಯನ ಮಾತನ್ನು ಕೇಳಿ   ಅದುರಿಹೋದೆ,  ಮೈ ಎಲ್ಲಾ  ಕಂಪಿಸುತ್ತಿತ್ತು,  "ಗೆಳೆಯ ನೀ ಸಾಯ ಬೇಡ..........  ನೀ ಸಾಯ ಬೇಡ ದಯವಿಟ್ಟು  ಅನ್ನುತ್ತಾ  ಜೋರಾಗಿ  ಕಿರುಚುತ್ತಿದ್ದೆ,  ಅಯ್ಯಾ    ನಿನ್ನ ಚಿತ್ರಗಳನ್ನು   ತೆಗೆಯಲೇ...?  " ಅಂದೇ.

    ಅವನು :- ಏನಯ್ಯ  ಯಾರಾದ್ರೂ   ಸಾಯೋ ಕ್ಷಣಗಳನ್ನು  ಎಣಿಸುತ್ತಿರುವ   ಮಂದಿಯ  ಅಥವಾ   ಹೆಣದ   ಚಿತ್ರ  ತೆಗೀತಾರ ...? ನಿನಗೆಲ್ಲೂ ಹುಚ್ಚು,   ಏನೂ ಬೇಡ ನಡ್ ನಡೀ ಅಂದ,

ನಾನು  :- ಏ ಸುಮ್ನಿರಪ್ಪಾ  ನಿನ್ನ ನೆನಪಿಗಾದ್ರೂ   ಕೆಲವು ಚಿತ್ರ ತೆಗೀತೀನಿ  ಅಂದೇ    ಅವನ ಸ್ಥಿತಿ ನೋಡಿ ನನ್ನ ಕರುಳು  ಚುರುಕ್  ಅಂದಿತ್ತು. ಮನದಲ್ಲಿ ಹೇಳಲಾಗದ   ಸಂಕಟ  ಶುರು ಆಯ್ತು .

ಅವನು :-   ,ಅಂತೂ ಇಂತೂ ಸಾಯುವವನಿಗೂ  ಒಮ್ಮೊಮ್ಮೆ   ಇಂತಹ ಸಂತಸ ಪಡುವ ಯೋಗ ಬರುತ್ತೆ ಕಣಯ್ಯ  ಅನ್ನುತ್ತಾ ನಕ್ಕ, [ ನನ್ನ ಕರುಳು  ಕಿವುಚಿದಂತೆ ಆಯ್ತು  ]  ಏನಾದರೂ ಮಾಡ್ಕೊಂಡು   ಹಾಳಾಗ್ ಹೋಗು . , ನಾನು   "ಏ  ನೀನು  ಮಾತ್ರ ದಯವಿಟ್ಟು ಸಾಯ ಬೇಡ ಕಣಯ್ಯ  "  ಅನ್ನುತ್ತಾ   ಚಿತ್ರಗಳನ್ನು   ಕ್ಲಿಕ್ಕಿಸುತ್ತಿದ್ದೆ

ಅಷ್ಟರಲ್ಲಿ ,  ನಮ್ಮ ಹುಡುಗ  "ಸಾರ್ ಸಾರ್   ಇದೇನ್  ಸಾರ್  ಇದು   ಇಲ್ಲಿ ಕುಳಿತು,  ನಿನಗೆ ನೀವೇ ಮಾತಾಡ್ತಾ  ಇದ್ದೀರಿ,  ಸುಮಾರು  ಜನರು   ನಿಮ್ಮನ್ನು ನೋಡಿಕೊಂಡು   ನಗುತ್ತ  ಹೋಗ್ತಿದ್ರು. ನಡೀರಿ ಹೊತ್ತಾಯ್ತು "  ಅಂತಾ ಹತ್ತಿರ ಬಂದ  . ಏ ಗೆಳೆಯ  ಮತ್ತೊಮ್ಮೆ ಬರ್ತೀನಿ   ಅಂತಾ ಹೇಳಿ ಅಲ್ಲಿಂದ  ನಮ್ಮೂರಿಗೆ   ಹೊರಟೆ. ಮನದ ತುಂಬಾ ಅವನೇ ಆವರಿಸಿಕೊಂಡಿದ್ದಾ  ಕಣ್ಣಲ್ಲಿ ಸಂಕಟದ  ನೀರು  ಬರ್ತಾ  ಇತ್ತು.

ಸೌಂದರ್ಯ  ವಲ್ಲದ ಸೌಂದರ್ಯ  ಇದು  ಪ್ರಕೃತಿಯ ಮಾಯಾಜಾಲ 

ಅರೆ ಕ್ಷಮಿಸಿ  ನನ್ನ ಗೆಳೆಯನ  ಪರಿಚಯ   ಮಾಡಿಕೊಡಲಿಲ್ಲ ನಿಮಗೆ   , ಇಷ್ಟೆಲ್ಲಾ  ಪುರಾಣ  ಯಾರ ಬಗ್ಗೆ ಅಂದ್ರಾ   ನನ್ನ ಬಾಲ್ಯದಲ್ಲಿ  ಪ್ರಮುಖ ಪಾತ್ರ ವಹಿಸಿದ    "ಮಳವಳ್ಳಿ ಕೆರೆ " ಯ ಬಗ್ಗೆ  ಹೇಳಿದ್ದು.  ಹೌದು  ಜನುಮದಲ್ಲಿ ಮರೆಯಲಾರದ  ತುಂಟ ನೆನಪುಗಳ   ನೆನಪಿಸುವ  ತಾಕತ್ತು ಈ ಕೆರೆಗೆ ಇದೆ .   ಈ ಕೆರೆಗೆ ನನ್ನ ಪ್ರೀತಿಯ   ನಮನಗಳು . 

Sunday, June 5, 2016

ಕಾವೇರಿ ನದಿಯ ಮಡಿಲ ಈ ಊರಿನಲ್ಲಿ ಸಪ್ತ ಸ್ವರ ದೇವತೆಗಳು ನೆಲಸಿದ್ದಾರೆ .....!

ಸಂಗೀತವಿಲ್ಲದ   ಸ್ಥಳ  ಯಾವುದೂ ಇಲ್ಲ



ಮೊನ್ನೆ  ಹಾಗೆ ನನ್ನ  ಹಳೆಯ ಚಿತ್ರಗಳ  ಸರಣಿಯನ್ನು ನೋಡುತ್ತಾ  ಇದ್ದೆ , ಕೆಲವು ಚಿತ್ರಗಳು  ನೆನಪಿನ ಲೋಕಕ್ಕೆ ಕರೆದೊಯ್ದವು , ಅಷ್ಟರಲ್ಲಿ   ಎಲ್ಲಿಂದಲೋ ತೇಲಿ ಬಂತು    '' ಏಳು ಸ್ವರವೂ ಸೇರಿ ಸಂಗೀತವಾಯಿತು,   ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು"    ಎಂಬ ಹಾಡು.  ಯಾವುದೋ ಲೋಕಕ್ಕೆ ಕರೆದುಕೊಂಡು ಹೋಯಿತು,  ಅರೆ  ಹೌದಲ್ವಾ,  ಸಂಗೀತಕ್ಕೆ   ಏಳು ಸ್ವರ  ಬೇಕೇ ಬೇಕು,     ಇನ್ನು  ವೈಜ್ಞಾನಿಕ  ನಿಯಮಗಳ  ರೀತ್ಯ   ಬಿಳಿಯ ಬಣ್ಣ  ದೊಳಗೆ  ಏಳು  ಬಣ್ಣಗಳು  ಮಿಳಿತಗೊಂಡಿವೆ ,   ನಮ್ಮ ಸುತ್ತ ಮುತ್ತ  ನಡೆಯುವ ಸಾಮಾನ್ಯ  ಕ್ರಿಯೆಗಳು  ನಮ್ಮ  ಅರಿವಿಗೆ ಬರುವುದಿಲ್ಲ , ಆದರೆ ಒಬ್ಬ  ಗೀತ ರಚನೆ ಕಾರ  ಇವನ್ನೆಲ್ಲಾ   ಸೂಕ್ಷ್ಮವಾಗಿ  ಗಮನಿಸಿ  ಹಾಡನ್ನು ರಚನೆ ಮಾಡಿ  ಸಾಮಾನ್ಯ  ಜನರಿಗೆ  ತಲುಪಿಸುತ್ತಾನೆ . ಇಂತಹ ಗೀತೆಗಳಿಗೆ  ಸಂಗೀತದ  ಅಲಂಕಾರ ಮಾಡಿದಾಗ   ಜನರ ಮನಸಿನಲ್ಲಿ   ಅವು  ಅತೀ ಹೆಚ್ಚುಕಾಲ  ಚಿರಾಯುವಾಗಿ  ಉಳಿದು  ಬಿಡುತ್ತವೆ . ಈ ಹಾಡಿನಲ್ಲಿ ಹೇಳುವಂತೆ   ಸಪ್ಥ ಸ್ವರಗಳು   ಅಂದ್ರೆ   ಏನೂ ಅಂತಾ  ಕೇಳುತ್ತೇವೆ ಹೊರತು  ಅದರ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ ,

 ಪುರಾತನ   ದೇಗುಲಕ್ಕೆ   ನಿತ್ಯ  ಸಂಗೀತದ  ಅಭಿಷೇಕ  


ಬನ್ನಿ ಸಪ್ತಸ್ವರ  ಗಳ ವಿಚಾರ ತಿಳಿಯೋಣ,  ಮೊದಲನೆಯದಾಗಿ   ಸ್ವರ ಅಂದ್ರೆ   ಮನುಷ್ಯನ  ಬಾಯಿಂದ  ಗಾಳಿಯ ರೂಪದಲ್ಲಿ   ಹೊರಡುವ  ಶಬ್ಧ ತರಂಗದ  ಏರಿಳಿತಗಳ   ಒಂದು ಸ್ವರೂಪ  ಅಷ್ಟೇ.  ಅವು ಕಣ್ಣಿಗೆ ಕಾಣಲಾರವು ಆದರೆ  ಕೇಳಿ ಅನುಭವಿಸಬೇಕಷ್ಟೇ .  ಬಹಳ ಹಿಂದೆಯೇ   ಹೀಗೆ ಹೊರಡಿಸುವ   ಶಬ್ಧಗಳ  ಸ್ವರೂಪ  ಏಳು  ಬಗೆಯದ್ದಾಗಿದೆ  ಎಂಬ  ವಿಚಾರವನ್ನು  ತಿಳಿದು, ಅವುಗಳಿಗೆ   ವಿವಿಧ ರೂಪದ  ಕಟ್ಟುಪಾಡುಗಳನ್ನು   ಹಾಕಿ ನಿಯಮ ಬದ್ದವಾಗಿ  ಸ್ವರಗಳಿಗೆ  ಮನುಷ್ಯನ ಉಸಿರಿನ  ಏರಿಳತಗಳ   ಸಂಯೋಜನೆ  ಮಾಡಲಾಗಿದೆ.  ಆ ನಿಯಮ ಬದ್ದ್ದ  ಸ್ವರಗಳು  ಏಳು   ಬಗೆಯದ್ದಾಗಿದ್ದು   ಅವುಗಳನ್ನು   ಸಂಕ್ಷಿಪ್ತವಾಗಿ ಸ.ರಿ.{ಅಥವಾ  ರೆ},    ಗ. ಮ.ಪ. ಧ. ನಿ. ಎನ್ನುತ್ತಾರೆ   ಈ ಏಳೂ ಸ್ವರಗಳ ವಿಸ್ತೃತ   ಹೆಸರು  ಕ್ರಮವಾಗಿ  1]  "ಸ. " ಎಂದರೆ  ಷಡ್ಜ, 2]   "ರಿ"   ಅಂದರೆ  ರಿಶಭ ,   3]  " ಗ "  ಎಂದರೆ  ಗಾಂಧಾರ  4]  " ಮ "  ಎಂದರೆ  ಮಧ್ಯಮ  5]  "ಪ " ಎಂದರೆ  ಪಂಚಮ  6]  "ಧ"  ಎಂದರೆ  ದೈವತ್     ಹಾಗು 7]  "ನಿ " ಎಂದರೆ  ನಿಶದ್   ಎಂದು  ಕರೆಯುತ್ತಾರೆ,  ಕರ್ನಾಟಕ ಸಂಗೀತದಲ್ಲಿ   "ರಿ"  ಎಂದು ಬಳಸುವ ಸ್ವರವನ್ನು   ಹಿಂದುಸ್ತಾನಿ ಸಂಗೀತದಲ್ಲಿ   "ರೆ "  ಎಂದು ಬಳಸುತ್ತಾರೆ , ಉಳಿದಂತೆ  ಎಲ್ಲಾ ಸ್ವರಗಳ ಉಚ್ಚಾರಣೆ   ಒಂದೇ ತೆರನಾಗಿರುತ್ತವೆ .  ಏಳು ಸ್ವರಗಳಿಗೂ  ಪ್ರಾಣಿ ಪಕ್ಷಿಗಳ  ಹಾಗು ದೇವತೆಗಳ   ನಾಮಕರಣ  ಮಾಡಲಾಗಿದ್ದು,    ಕ್ರಮವಾಗಿ  1]  " ಸ "   ಅಂದರೆ   "ನವಿಲು "  ಹಾಗು ಸ್ವರ   ದೇವತೆ   "ಗಣಪತಿ"    2]  "ರಿ" ಅಂದರೆ    "ಗೂಳಿ"  ಹಾಗು  ಸ್ವರ ದೇವತೆ  "ಅಗ್ನಿ" 3] " ಗ " ಎಂದರೆ   "ಮೇಕೆ " ಸ್ವರ ದೇವತೆ    "ರುದ್ರ"  4]  "ಮ"  ಎಂದರೆ  "ಪಾರಿವಾಳ " ಸ್ವರ ದೇವತೆ   "ವಿಷ್ಣು" 5]  "ಪ" ಎಂದರೆ  ಕೋಗಿಲೆ  ಸ್ವರ ದೇವತೆ  "ನಾರದ" 6]  "ಧ "  ಎಂದರೆ  "ಕುದುರೆ" ಸ್ವರ ದೇವತೆ   "ಸದಾ ಶಿವ"  7]  " ನಿ"  ಎಂದರೆ   "ಆನೆ"   ಸ್ವರ ದೇವತೆ    "ಸೂರ್ಯ"  ಈ ಸಪ್ತ ಸ್ವರಗಳಿಗೆ  ಎಷ್ಟೊಂದು ವಿಶೇಷ  ಇದೆ ಆಲ್ವಾ ...!             ಈ  ದೇಶದಲ್ಲಿ  ನಾವು  ಕೇಳುವ  ಎಲ್ಲಾ  ಬಗೆಯ ಸಂಗೀತಗಳು  ಈ   ಸಪ್ತ ಸ್ವರಗಳ ಅಡಿಪಾಯದ ಮೇಲೆ  ನಿರ್ಮಿತವಾದವು  ಎಂಬ ಮಾತು  ಸುಳ್ಳಲ್ಲ.