Sunday, July 13, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......05 ಕೆಳದಿಯಲ್ಲಿದೆ ಗುಂಡಾ ಜೋಯಿಸರ ಜ್ಞಾನ ಭಂಡಾರ .


ಕೆಳದಿಯ  ಐತಿಹಾಸಿಕ ದೇವಾಲಯದ ಒಂದು ನೋಟ

ನಮಸ್ತೆ  ಕಳೆದ ಸಂಚಿಕೆಯಲ್ಲಿ  ಕೆಳದಿಯ ಇತಿಹಾಸದ ಒಳಗೆ  ಒಂದು ಇಣುಕು ನೋಟ  ಹರಿಸಿದೆವು,  ಅದರಲ್ಲಿ ನಾ ಹೆಕ್ಕಿ ತೆಗೆದ ಹಲವು  ಐತಿಹಾಸಿಕ ವಿಚಾರಗಳ ಜೊತೆಯಲ್ಲಿ  ತಮ್ಮ  ಬಳಿ  ಇದ್ದ ಮಾಹಿತಿಯನ್ನು  ತಿಳಿಸಿ  ಹಲವು ಓದುಗರು ಸಹಕರಿಸಿದರು  ಎಲ್ಲರಿಗೂ ನನ್ನ ನಮನಗಳು, ಇತಿಹಾಸವೇ  ಹಾಗೆ , ಸರಿಯಾದ ನಿಟ್ಟಿನಲ್ಲಿ ಹೆಜ್ಜೆ ಇಟ್ಟಾಗ  ಹಲವು ಜ್ಞಾನ ಭಂಡಾರ ಗಳಿಂದ  ಮಾಹಿತಿ  ಸಹಜವಾಗಿ ಹರಿದು ಬರುತ್ತದೆ   ಅಮೃತದ ಹಾಗೆ. ತಮ್ಮ ಬಳಿ ಇದ್ದ ಇತಿಹಾಸದ  ಅಮೃತವನ್ನು ನನ್ನ ಮೇಲೆ ಸಿಂಚನ ಮಾಡಿದ  ಹಲವರಿಗೆ ನನ್ನ  ಕೃತಜ್ಞತೆಗಳು . 


ದೇಗುಲದಲ್ಲಿನ   ಮರದ ಕೆತ್ತನೆ


ಅದ್ಯಾಕೋ ಗೊತ್ತಿಲ್ಲ  ಕೆಳದಿಗೆ ಕಾಲಿಟ್ಟ ಗಳಿಗೆ ಚೆನ್ನಾಗಿತ್ತು ಅನ್ಸುತ್ತೆ , ಬಂದೊಡನೆ  ಒಂದು ಖುಷಿಯ ವಾತಾವರಣ  ನಿರ್ಮಾಣವಾಗಿತ್ತು, ಜೊತೆಗೆ ಪ್ರಕಾಶಣ್ಣನ  ಹಾಸ್ಯ ಚಟಾಕಿ  ಸಾಥ್ ನೀಡಿತ್ತು . ಮೊದಲು  ಕೆಳದಿಯ ಇತಿಹಾಸ  ಹೇಳಲು ಬಂದ   "ಗುಲಾಬಿ " , ನಂತರ  ದೇವಾಲಯದ ಆವರಣ ಹೊಕ್ಕಾಗ ಕಂಡ  ವಿವಿಧ ಅದ್ಭುತ  ಕಲಾ ಲೋಕ  ಜೊತೆಗೆ ಗಲಾಟೆ ಇಲ್ಲದ  ನಿಶ್ಯಬ್ಧ  ಇವುಗಳು ನಮ್ಮನ್ನು ಹೆಚ್ಚು ವಿಚಾರ ತಿಳಿಯಲು ಪ್ರೇರಣೆ ನೀಡಿದ್ದವು . ಗುಲಾಬಿಯಿಂದ  ಇತಿಹಾಸ ತಿಳಿದು ದೇವಾಲಯದ  ದರ್ಶನ ಮಾಡಿದೆವು,   ಕೆಳದಿಯ ಈ ಸುಂದರ ದೇಗುಲ  ಸುಮಾರು ಹದಿನಾರನೇ ಶತಮಾನದ  ದೇಗುಲವೆಂದು ತಿಳಿಯುತ್ತದೆ .  ಈ ದೇಗುಲದಲ್ಲಿ ಮೂರು  ಸನ್ನಿಧಿ ಇದ್ದು, ಅವುಗಳು ಕ್ರಮವಾಗಿ,  ವೀರಭದ್ರ, ರಾಮೇಶ್ವರ , ಹಾಗು  ಪಾರ್ವತಿ    ಸನ್ನಿಧಿಗಳಾಗಿವೆ .




ಕೆಳದಿ ದೇಗುಲದ  ಒಂದು ನೋಟ


ಈ ದೇಗುಲವು ಹೊಯ್ಸಳ ಹಾಗು ದ್ರಾವಿಡ  ಶೈಲಿಯನ್ನು  ಹೋಲುತ್ತದೆ .  ಬೂದುಬಣ್ಣದ  ಪದರದ ಶಿಲೆಗಳಿಂದ  ನಿರ್ಮಾಣಗೊಂಡಿರುವುದು ಕಂಡು ಬರುತ್ತದೆ.  ಈ ದೇವಾಲಯಕ್ಕೆ  ಸುಂದರವಾಗಿ  ಮುಖ ಮಂಟಪ,  ಪ್ರದಕ್ಷಿಣ ಪಥ , ಅಂತರಾಳ, ಗರ್ಭಗೃಹ , ಗಳು ನಿರ್ಮಾಣ ಗೊಂಡು  ಸೌಂದರ್ಯ ಹೆಚ್ಚಿಸಿವೆ . ಈ ದೇಗುಲಕ್ಕೆ ಮೂರು  ಪ್ರವೇಶ ದ್ವಾರಗಳಿದ್ದು, ಅವು ಉತ್ತರ, ಪೂರ್ವ ಹಾಗು ದಕ್ಷಿಣ  ದಿಕ್ಕಿಗೆ ಮುಖ ಮಾಡಿ  ನಿಂತಿವೆ .  ಹೊರ ಆವರಣದಲ್ಲಿ  ಗರುಡ,  ವಿವಿಧ ಸಂಗೀತ  ಸಾಧನಗಳನ್ನು ನುಡಿಸುವ ಸಂಗೀತಗಾರರು , ವಾಸ್ತು ಪುರುಷ , ಹರಿಹರ  ಮುಂತಾದ   ಸುಂದರ ಕೆತ್ತನೆಯನ್ನು   ಕಾಣಬಹುದು,ನವರಂಗದಲ್ಲಿ   ನಿಮಗೆ ಐದು  ಕಂಬಗಳು ಕಾಣಸಿಗುತ್ತವೆ  ಅವುಗಳಲ್ಲಿ   ಚಾಲುಕ್ಯರ ಶೈಲಿ ಹೋಲುವ  ಕೆತ್ತನೆ ಹೋಲುವ  ಮೂರ್ತಿಗಳನ್ನು ಗಮನಿಸ ಬಹುದು .  ದೇಗುಲದ  ಸ್ವಲ್ಪ  ಭಾಗ   ಮೇಲ್ಚಾವಣಿಯು  ಮರದ ಕೆತ್ತನೆ ಇಂದ ಅಲಂಕಾರ ಗೊಂಡಿದ್ದು  ಮೋಹಕವಾಗಿವೆ,  ಮತ್ತೆ ಕೆಲವು ಕಡೆ  ಕಲ್ಲಿನ ಮೇಲ್ಚಾವಣಿ  ಯಲ್ಲಿ ಅದ್ಭುತ ಕಲಾಕೃತಿಗಳು ಕಂಗೊಳಿ ಸಿವೆ. 


ಗಂಡ ಬೇರುಂಡ


ದೇವಾಲಯದ  ಅಂದ ಸವಿಯುತ್ತಾ ಬರುತ್ತಿದ್ದ ನನ್ನನ್ನು  ಚಾವಣಿಯಲ್ಲಿನ ಈ ಗಂಡ ಬೇರುಂಡ  ಪಕ್ಷಿ  ಕೆತ್ತನೆ  ತನ್ನತ್ತ ಸೆಳೆ ಯಿತು.   ಗಂಡ ಬೇರುಂಡ ಪಕ್ಷಿಯ  ಸುಂದರ ಕಲ್ಪನೆ  ಇಲ್ಲಿ ಅನಾವರಣ ಆಗಿತ್ತು,  ಎರಡು ತಲೆಯ  ದೈತ್ಯ ಪಕ್ಷಿ,  ಎರಡೂ ತಲೆಯ ಕೊಕ್ಕಿನಲ್ಲಿ  ಎರಡು ಸಿಂಹಗಳನ್ನೂ,  ಕಾಲಿನ  ಪಂಜಗಳಲ್ಲಿ  ಎರಡು ಆನೆಗಳನ್ನು  ಹಿಡಿದಿರುವ ನೋಟ  ಇಲ್ಲಿ ಕಾಣ ಸಿಗುತ್ತದೆ . ನಿಮಗೆ ತಿಳಿದಿರಲಿ ಮೈಸೂರು  ಯದುವಂಶದ  ಅರಸರ   ಲಾಂಛನ ವೂ ಸಹ ಈ ಗಂಡಬೇರುಂಡ   ಪಕ್ಷಿಯೇ ಆಗಿತ್ತು,  ಜೊತೆಗೆ  ವಿಜಯನಗರ  ಅರಸರ ಕಾಲದ ನಾಣ್ಯದ  ಮೇಲೆ ಈ  ಗಂಡ ಬೇರುಂಡ  ಪಕ್ಷಿಯ ಲಾಂಛನ   ಇರುತ್ತಿತ್ತು,  ಹಾಲಿ ನಮ್ಮ ಕರ್ನಾಟಕ  ರಾಜ್ಯದ  ರಾಜ್ಯ ಲಾಂಛನ  ಈ ಗಂಡ ಬೇರುಂಡ  ಪಕ್ಷಿಯೇ  ಆಗಿದೆ.  ಹಾಗಾಗಿ ಈ  ಲಾಂಛನ ಕ್ಕೆ   ೫೦೦ ವರ್ಷಗಳ ಇತಿಹಾಸ ವಿದೆ .  ಬಹುಷಃ  ಮೈಸೂರು ಅರಸರು  ಈ ದೇಗುಲದ   ಲಾಂಛನ ನೋಡಿ   ತಾವು ಗಂಡ ಬೇರುಂಡ  ಲಾಂಛನ  ಆರಿಸಿಕೊಂಡರೆ ಎನ್ನುವುದು   ಸಂಶೋದನಾ  ಯೋಗ್ಯ  ವಿಚಾರವಾಗಿದೆ. 


ನಾಗ  ಮಂಡಲ
ದಕ್ಷ ಪ್ರಜಾಪತಿ




ಹಾಗೆ ಮುಂದು ವರೆದು  ಅಲ್ಲಿಯೇ ಪಕ್ಕದಲ್ಲಿ  ನಾಗ ಮಂಡಲ ಕೆತ್ತನೆಯನ್ನು  ಕಣ್ತುಂಬಿ ಕೊಂಡೆ , ಅದರ ಪಕ್ಕದಲ್ಲಿ ನವಗ್ರಹಗಳ ಸುಂದರ ಕೆತ್ತನೆ  ಇನ್ನು ಮುಂತಾದವುಗಳು   ಮನಸನ್ನು ಉಲ್ಲಾಸ ಗೊಳಿಸಿದವು.  ಅಲ್ಲೇ ಸನಿಹದಲ್ಲಿ ದಕ್ಷ  ಪ್ರಜಾಪತಿಯ ಶಿಲ್ಪ ಮನಸೆಳೆಯಿತು . ಟಗರಿನ  ಮುಖ ಹೊತ್ತು ಭಕ್ತಿಯಿಂದ   ನಿಂತಿರುವ   ಆ ಅಪರೂಪದ  ವಿಗ್ರಹ   ಇತರ ದೇಗುಲದಲ್ಲಿ ಕಂಡುಬರುವುದು ಅಪರೂಪವೇ ಸರಿ. 




ಕೆಳದಿ ವೀರಭದ್ರೆಶ್ವರ  ಸನ್ನಿಧಿ


 ಕೆಳದಿ  ವೀರಭದ್ರೇಶ್ವರ   ಸನ್ನಿಧಿಯಲ್ಲಿ   ಬಾಗಿಲ ಕಂಡಿಯಿಂದ ದರ್ಶನ ಮಾಡಿ   ಅಲ್ಲಿಯೇ ಸುಮಾರು ಹೊತ್ತು ಕುಳಿತು   , ಪ್ರಕಾಶಣ್ಣ ಹಾಗು ನಾನು ಹರಟಿದೆವು,   ಅಚ್ಚರಿ ಎಂದರೆ  ಪ್ರಕಾಶಣ್ಣನ  ಮನೆ ದೇವರು ಕೆಳದಿ  ವೀರಭದ್ರ.   ತಮ್ಮ ಮನೆತನಕ್ಕೂ  ಈ ದೇವರಿಗೂ ಹೇಗೆ  ಸಂಬಂಧ   ಎಂಬ ಬಗ್ಗೆ  ಗೆಳೆಯ ಪ್ರಕಾಶ್ ಹೆಗ್ಡೆ  ತಿಳಿದು ಕೊಳ್ಳುವ  ಆಸಕ್ತಿ  ಮೂಡಿತ್ತು, ಇದಕ್ಕಾಗಿ   ಅವರ ಮನಸು ಚಡಪಡಿಸುತ್ತಿತ್ತು, ಅಲ್ಲಿಂದ ಹೊರಗೆ ಬಂದೆವು,  ಆದರೆ ನನ್ನ ಕಣ್ಣುಗಳು ಅಲ್ಲಿ ದೊರೆಯಬಹುದಾದ  ಶಾಸನಗಳ ಬಗ್ಗೆ  ಹುಡುಕಾಟ  ನಡೆಸಿತ್ತು, ದೇವಾಲಯದ  ಆವರಣದ ಸುತ್ತಾ , ಹೊರಗಡೆ  ಆವರಣದಲ್ಲಿ  ಎಲ್ಲಾ ಕಡೆ ಸುತ್ತಿದರೂ  ಯಾವುದೇ ಶಿಲಾ ಶಾಸನ  ಕಣ್ಣಿಗೆ ಬೀಳಲಿಲ್ಲ,  ಅಷ್ಟರಲ್ಲಿ  ಪ್ರಕಾಶಣ್ಣ   ಬಾಲಣ್ಣ  ಇಲ್ಲಿ ಕೆಳದಿ ಇತಿಹಾಸ ಗೊತ್ತಿರುವ ಒಬ್ಬರು ಇದ್ದಾರೆ ಬನ್ನಿ ಅಂತಾ  ಕರೆದು ಕೊಂಡು  ಹೋದರು . 




ನಮ್ಮ ನಾಡಿನ ಕೆಳದಿ ಇತಿಹಾಸ ಭಂಡಾರ


ಕಟ್ ಮಾಡಿದ್ರೆ  ನಾವು ಆ  ಮಹಾನ್ ವ್ಯಕ್ತಿಯ  ಮನೆಯಲ್ಲಿದೆವು,  ಅವರನ್ನು ಕಂಡ ನಮ್ಮ ಕಣ್ಣುಗಳು  ಧನ್ಯವಾದವು , ನಮ್ಮನ್ನು ಕಂಡೊಡನೆ ಪರಿಚಯಕ್ಕೆ ಮೊದಲೇ ನೀವು ಯಾರೇ ಆಗಿರಿ ಮೊದಲು  ಪಾನಕ ಕುಡಿಯಿರಿ ಅಂತಾ  ಹೇಳುತ್ತಾ  ಪ್ರೀತಿಯಿಂದ ಸ್ವಾಗತ   ನೀಡಿತು  ಈ ಹಿರಿಯ  ಚೇತನ .  ನನಗೋ ಈ ವ್ಯಕ್ತಿ ಯಾರೂ ಎಂಬ ಕುತೂಹಲ  , ಪ್ರಕಾಶಣ್ಣ ನನ್ನನ್ನು ಉದ್ದೇಶಿಸಿ   ಬಾಲಣ್ಣ ಇವರೇ  ಕೆಳದಿಯ ಗುಂಡಾ  ಜೋಯಿಸ್  ಎಂದರೂ  ಈ ಪೆದ್ದು ತಲೆಗೆ  ಸರಿಯಾಗಿ  ಅರ್ಥ ಆಗಲಿಲ್ಲ.   


ಬಿಸಿಲಿನಲ್ಲಿ  ಬಳಲಿ ಬಂದ  ನಮ್ಮನ್ನು ಪ್ರೀತಿಯಿಂದ  ಪಾನಕ ನೀಡಿ  ಆದರಿಸಿ , ನಮ್ಮ ಪರಿಚಯ , ಬಂದ ಉದ್ದೇಶ  ಇವುಗಳನ್ನು   ತಿಳಿದುಕೊಂಡರು , ಪ್ರಕಾಶಣ್ಣ ನ  ಪ್ರಶ್ನೆಗೆ  ಇಲ್ಲಿ ಉತ್ತರ ಸಿಕ್ಕಿತು. ಜೊತೆಗೆ ಕೆಳದಿ ಇತಿಹಾಸದ ಹಲವು  ವಿಚಾರಗಳನ್ನು  ತಿಳಿಸಿಕೊಟ್ಟರು . ಹಾಗೆ ಕೇಳುತ್ತಾ ಇವರ ಪುಸ್ತಕ ಏಲ್ಲೊ ಓದಿದ ನೆನಪಾಗಿ  ಜ್ಞಾಪಿಸಿಕೊಂಡೆ  ಅರೆ ಹೌದು   ತಮಿಳು ನಾಡಿನ  ಕನ್ನಡ ಮಂತ್ರಿ  ಗೋವಿಂದ  ದೀಕ್ಷಿತರ  ಬಗ್ಗೆ   ಪುಸ್ತಕ ಬರೆದ ಮಹನೀಯರು  ಇವರೇ ಅಂತಾ ತಿಳಿದು ಬಂದು ಮನಸಾ  ವಂದಿಸಿದೆ . 

ಗುಂಡಾ ಜೋಯಿಸರ ಬಗ್ಗೆ ಒಂದು ಇಣುಕು ನೋಟ  ಇಲ್ಲಿದೆ  ನೋಡಿ ,  ೨೭-೦೯ -೧೯೩೧ ರಲ್ಲಿ ಕೆಳದಿಯಲ್ಲಿ ಜನಿಸಿದ ಇವರು  ಅನೇಕ ಸಾಧನೆ ಮಾಡಿದ್ದಾರೆ , ಬಾಲ್ಯದ ಬಗ್ಗೆ ಹೆಚ್ಚಿನ ವಿವರ ತಿಳಿದು ಬರುವುದಿಲ್ಲ,  ಆದ್ರೆ ಅವರ ಸಾಧನೆ ಕಂಡು ಬೆರಗಾದೆ . ಗುಂಡಾ ಜೋಯಿಸರು ಬಹಳ ಜ್ಞಾನಿಗಳು   ಮೈಸೂರು ವಿಶ್ವವಿಧ್ಯಾಲಯದಲ್ಲಿನ   ಎಮ್. ಎ ., ಸಂಸ್ಕೃತದಲ್ಲಿ ಆಗಮ ಪರ್ವ ಪರೀಕ್ಷಾ , ಕನ್ನಡ ಸಾಹಿತ್ಯ ಪರಿಷತ್  ನಡೆಸುವ ಕನ್ನಡ ರತ್ನ , ಪದವಿಗಳು  ಇವರ ಜ್ಞಾನ ಬತ್ತಳಿಕೆಗೆ  ಸೇರಿವೆ , ಈಗ ಸುಮಾರು ಎಂಭತ್ತಮೂರು  ವರ್ಷ ಇರಬಹುದು, ಕೆಳದಿಯ  ಐತಿಹಾಸಿಕ  ವಸ್ತು  ಸಂಗ್ರಹಾಲಯದ  ಸ್ಥಾಪಕ  ಹಾಗು ಗೌರವ ಕಾರ್ಯದರ್ಶಿ,  ೧೯೬೨ ರಿಂದ ೧೯೭೫ ರವರೆಗೆ  ಮೈಸೂರು ಹಾಗು ಧಾರವಾಡ ದ ವಿಶ್ವವಿಧ್ಯಾಲಯ ಗಳಲ್ಲಿ  ಇತಿಹಾಸದ ಪ್ರಾಧ್ಯಾಪಕರು ,  ೧೯೮೦ ರಿಂದ ೧೯೮೫ ರವರೆಗೆ  ಕರ್ನಾಟಕ ಇತಿಹಾಸ  ದಾಖಲೆ  ಸಂಶೋದನಾ  ಸಮಿತಿಯ ಸದಸ್ಯರು,  ಹಾಗು  ಅಮೇರಿಕಾ  ಸೇರಿದಂತೆ ಹಲವಾರು ದೇಶ  ವಿದೇಶಗಳಲ್ಲಿ  ತಮ್ಮ ಸಂಶೋದನಾ ಪ್ರಬಂಧಗಳನ್ನು  ಮಂಡಿಸಿ  ಕನ್ನಡ  ತಾಯಿಯ ಕೀರ್ತಿ  ಕಿರೀಟಕ್ಕೆ  ಮೆರುಗುತಂದಿದ್ದಾರೆ . ೧೯೯೪ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಅರಸಿ ಬಂದಿದೆ,  ಹಲವಾರು ಧಾರ್ಮಿಕ  ಸಂಸ್ಥಾನಗಳು ಇವರನ್ನು  ಗೌರವಿಸಿವೆ . 

ಗುಂಡಾ ಜೋಯಿಸರ  ಜೊತೆ ಪ್ರಕಾಶ್ ಹೆಗ್ಡೆ


 ಇಂತಹ  ಮಹನೀಯರ  ಸಾಧನೆಯ ಹಿಮಾಲಯ ದ ಮುಂದೆ ನಾವೆಲ್ಲಾ ಸಣ್ಣ ಮಣ್ಣಿನ ಕಣಗಳು ಎಂದರೆ ತಪ್ಪಾಗಲಾರದು, ಇನತಹವರ ಭೇಟಿ ನನ್ನ ಜನ್ಮದ ಪುಣ್ಯವೆಂದು ಅನ್ನಿಸಿತು, ಇಂತಹ ಮಹನೀಯರು  ನಮ್ಮ ಕನ್ನಡ ತಾಯಿಯ ಅನರ್ಘ್ಯ  ರತ್ನಗಳು . ಇಂತಹ ಜ್ಞಾನ ಭಂಡಾರ  ದರ್ಶನ ಪಡೆದು  , ಅವರ ಆಶೀರ್ವಾದ ಪಡೆದು ಪ್ರಕಾಶ್ ಹೆಗ್ಡೆ ಹಾಗು ನಾನು  ಕೆಳದಿಯ ಮ್ಯೂಸಿಯಂ ಸಂದರ್ಶಿಸಿ,  ಹೊಸ  ಉತ್ಸಾಹದೊಡನೆ  ನಮ್ಮ ಪಯಣ ಮುಂದು ವರೆಸಿದೆವು. ........  ಇಕ್ಕೆರಿಯ ಕಡೆಗೆ .




Sunday, July 6, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......04 ಕೆಳದಿಯ ಮಡಿಲಲ್ಲಿ ಇತಿಹಾಸ ಬರೆದಳು ಸಂಬಾರ ರಾಣಿ .

 ಕೆಳದಿಯ  ಇತಿಹಾಸದ ಸಾಕ್ಷಿ  ಈ  ದೇಗುಲ 

ಅಯ್ಯೋ  ಇದೇನ್ರೀ  ಪಯಣದ  ಕಥೆ ಬರೆಯಲು ಶುರು ಮಾಡಿ ಅರ್ಧಕ್ಕೆ ಓಡಿ  ಹೋದ ..... !  ಅಂತಾ  ಬೈಯ್ಕೋ  ಬೇಡಿ, ಬಹಳ ದಿನಗಳ ನಂತರ ಮತ್ತೆ ಬಂದಿದ್ದೇನೆ, ಹೌದು ಬಿಡುವಿಲ್ಲದ  ದಿನಚರಿ , ಜೊತೆಗೆ  ರಜಾದಿನಗಳಲ್ಲಿ ಬಂದ  ಹಲವು  ಅನಿವಾರ್ಯದ ಕಾರ್ಯಕ್ರಮಗಳು ಈ ಬರವಣಿಗೆಗೆ ಸ್ವಲ್ಪ ಅಡಚಣೆ ಉಂಟು ಮಾಡಿದ್ದು ನಿಜ.  ಬನ್ನಿ ಕೆಳದಿಯ  ಬಗ್ಗೆ ಸ್ವಲ್ಪ ವಿಚಾರ  ತಿಳಿಯೋಣ .

 ಬಹಳ ಹಿಂದೆ  ಚಂದ್ರಗುತ್ತಿ ರಾಜ್ಯದ  ವ್ಯಾಪ್ತಿಯಲ್ಲಿ ಕೆಳದಿ ತಾಲೂಕು ಆಗಿತ್ತು , ಆ ತಾಲೂಕಿಗೆ ಸೇರಿದ  ಹಳೆ ಬಯಲು ಎಂಬ ಊರಿನಲ್ಲಿ   ಚೌಡೇಗೌಡ , ಭದ್ರೇಗೌಡ  ಎಂಬ ಇಬ್ಬರು ಅಣ್ಣ ತಮ್ಮಂದಿರು ಇದ್ದರು ,  ಆ ಕಾಲಕ್ಕೆ ಅವರು ಒಂದು ತರಹ ಜಮೀನ್ದಾರರು ಅಥವಾ ಪಾಳೆಗಾರರು  ಇರಬಹುದು , ಅವರ  ಬಳಿ ಇದ್ದ ಜಮೀನಿನ  ವ್ಯವಸಾಯದ  ಕೆಲಸವನ್ನು ಯಾದವ ಹಾಗು ಮುರಾರಿ ಎಂಬ ಇಬ್ಬರು ಆಳುಗಳು  ಮಾಡುತ್ತಾ  ಬಹಳ ನಿಷ್ಠೆಯಿಂದ  ಇದ್ದರು.  ಒಮ್ಮೆ ಅವರು ಯಜಮಾನರ  ಜಮೀನಿನಲ್ಲಿ ವ್ಯವಸಾಯದ   ಕೆಲಸ ಮಾಡುವಾಗ  ಒಂದು ಹಸು  ಹುತ್ತದ  ಬಳಿ  ಹಾಲನ್ನು ಎರೆಯುತ್ತಿರುವುದನ್ನು  ಕಂಡು ಆ ವಿಚಾರವನ್ನು ತನ್ನ ಯಜಮಾನರಿಗೆ ತಿಳಿಸುತ್ತಾರೆ , ತನ್ನ ಯಜಮಾನರ  ಆದೇಶ ಪಡೆದು ಆ ಜಾಗವನ್ನು  ಅಗೆಯುತ್ತಾರೆ, ಅಲ್ಲಿ  ಅವರಿಗೆ ಒಂದು "ಲಿಂಗ " ದೊರೆಯುತ್ತದೆ  ಆ ಜಾಗದಲ್ಲಿ ಯಜಮಾನ   ಚೌಡೇಗೌಡ  ಒಂದು ದೇವಾಲಯ ಕಟ್ಟಿಸುತ್ತಾನೆ ಆ ದೇಗುಲವೇ  ಕೆಳದಿಯ ಮೂಲ ದೇವಾಲಯ . ನಂತರ  ಸ್ವಲ್ಪ ದಿನಕ್ಕೆ ಒಂದು ಖಡ್ಗ  ಆ ಜಾಗದಲ್ಲಿ ದೊರೆಯುತ್ತದೆ ಆದನ್ನು ಚೌಡೇಗೌಡ  ಸಂರಕ್ಷಿಸುತ್ತಾನೆ , ಒಮ್ಮೆ ಕನಸಿನಲ್ಲಿ ಅವನಿಗೆ   ಮನುಷ್ಯರನ್ನು    ಬಲಿ  ನೀಡಿದರೆ  ಅಪಾರ ನಿಧಿ  ದೊರೆಯುವುದಾಗಿ  ಪ್ರೇರಣೆ ಆಗುತ್ತದೆ,  ಈ ಬಗ್ಗೆ  ಯೋಚಿಸುತ್ತಿರಲು,  ಅವನ ನಂಬಿಕೆಯ  ಇಬ್ಬರು  ಬಂಟರಾದ   ಯಾದವ ಹಾಗು ಮುರಾರಿ ಸ್ವಯಂ ಇಚ್ಚೆಯಿಂದ  ಮಂದೆಬಂದು  ತಮ್ಮನ್ನು   ಬಲಿ  ಗೆ ಅರ್ಪಣೆ ಮಾಡಿ ಕೊಳ್ಳುತ್ತಾರೆ . ಅವರ ಶಿರವನ್ನು   ಭೂಮಿಯಲ್ಲಿ  ಸಿಕ್ಕ ನಾಗಮುರಿ  ಖಡ್ಗದಿಂದ  ಕಡಿಯಲಾಗುತ್ತದೆ.  ಈ ರೀತಿ ದೊರೆತ ಸಂಪತ್ತಿ ನ  ಸಹಾಯದಿಂದ ತಮ್ಮ ರಾಜ್ಯ ಕಟ್ಟುತ್ತಾರೆ  . ಒಂದು ಸಣ್ಣ  ಸೈನಿಕ ಪಡೆ ಕಟ್ಟಿ ಸುತ್ತಮುತ್ತಲಿನ  ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಾರೆ . ಈ ವಿಚಾರ  ತಿಳಿದ  ವಿಜಯನಗರ  ಅರಸರ ಪಡೆ ಇವರನ್ನು  ಬಂಧಿಸಿ ವಿಜಯನಗರಕ್ಕೆ ಕರೆದೊಯ್ಯುತ್ತದೆ . ಕಾಲಾನಂತರ ಇವರನ್ನು   ವಿಜಯನಗರ ಅರಸರ  ಪ್ರತಿನಿಧಿ ಗಳೆಂದು ಗುರುತಿಸಿ ವಿಜಯನಗರ ಅರಸರ  ಮೊಹರು ನೀಡಿ ಬಿಡುಗಡೆ ಮಾಡುತ್ತಾರೆ .

ಕೆಳದಿಯ ದೇಗುಲದ ಒಂದು ನೋಟ

ವಿಜಯನಗರ ಅರಸರ   ಪ್ರತಿನಿಧಿಗಳಾಗಿ  ಕೆಳದಿರಾಜ್ಯ  ಸ್ಥಾಪಿಸುತ್ತಾರೆ , ಆಗಲೇ ಪ್ರಸಿದ್ದ ಕೆಳದಿ  ರಾಮೇಶ್ವರ  ದೇವಾಲಯ  ನಿರ್ಮಾಣದ ಬಗ್ಗೆ ಕಾರ್ಯ ಆರಂಭವಾಗುತ್ತದೆ . ಕೆಳದಿಯಲ್ಲಿ  ರಾಮೇಶ್ವರ ಹಾಗು ವೀರಭದ್ರ  ದೇಗುಲಗಳು  ಹೊಯ್ಸಳ ಹಾಗು ದ್ರಾವಿಡ  ಶೈಲಿಯಲ್ಲಿರುತ್ತವೆ .  ತಾಳಿ ಕೋಟೆ  ಯುದ್ದದ ನಂತರ ವಿಜಯನಗರ  ಅರಸರಿಂದ  ಬೇರ್ಪಟ್ಟ  ಕೆಳದಿ ನಾಯಕರು  ಸ್ವತಂತ್ರ ಕೆಳದಿ ಸಾಮ್ರಾಜ್ಯ ಕಟ್ಟುತ್ತಾರೆ  , ಕೆಳದಿಯಲ್ಲಿ ಶಿವಪ್ಪ ನಾಯಕ ಹಾಗು ಕೆಳದಿಯ ಚೆನ್ನಮ್ಮ ಆಳ್ವಿಕೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ . ನಂತರ  ಈ ಕೆಳದಿ ರಾಜ್ಯ  ಮೈಸೂರು ಸಂಸ್ಥಾನಕ್ಕೆ   ಹೈದರ್ ಅಲಿ ಕಾಲದಲ್ಲಿ  ಸೇರಿಕೊಳ್ಳುತ್ತದೆ.


ಕೆಳದಿಯ ಚೆನ್ನಮ್ಮ [ ಚಿತ್ರ ಕೃಪೆ  ಅಂತರ್ಜಾಲ  ಗೂಗಲ್ ಸರ್ಚ್ ]



 ಕೆಳದಿಯ  ಚೆನ್ನಮ್ಮ  ೧೬೭೭ ರಿಂದ  ೧೬೮೯ ರ ವರೆಗೆ  ಕೆಳದಿ ಸಾಮ್ರಾಜ್ಯದ   ಆಡಳಿತ ಚುಕ್ಕಾಣಿ ಹಿಡಿದು ಆಳುತ್ತಾಳೆ . ಬಹಳ ಸುಂದರ ಚೆಲುವಿ ಆಕೆ, ಅವಳ ಸೌಂದರ್ಯದ  ಬಗ್ಗೆ ಹಲವಾರು ಕಥೆಗಳು  ಆ ಭಾಗದಲ್ಲಿ  ಹರಡಿವೆ . ಕೆಳದಿಯ ಚೆನ್ನಮ್ಮನ  ಹುಟ್ಟೂರು  ಕುಂದಾಪುರ   ಅಲ್ಲಿನ ಸಿದ್ದಪ್ಪಶೆಟ್ಟಿ  ಎಂಬುವರ ಮಗಳು ಆಕೆ.   ಕೆಳದಿಯ ರಾಜ ಸೋಮಶೇಖರ ನಾಯಕನನ್ನು  ವಿವಾಹವಾಗುತ್ತಾಳೆ , ಕೆಳದಿಯ   ರಾಜ ಸೋಮಶೇಖರ  ಅಪಾರ ಸೌಂದರ್ಯವತಿ   ಚೆಮ್ಮನನ್ನು  ಪ್ರೀತಿಸಿ  ವಿವಾಹವಾಗುತ್ತಾನೆ . ೧೬೭೭  ರಲ್ಲಿ ರಾಜ ತೀರಿಕೊಂಡ  ನಂತರ  ಚೆನ್ನಮ್ಮ  ಕೆಳದಿಯ ಆಡಳಿತದ ಚುಕ್ಕಾಣಿ   ಹಿಡಿಯುತ್ತಾಳೆ .  ಹನ್ನೆರಡು ವರ್ಷದಲ್ಲಿ  ಉತ್ತಮ ಆಡಳಿತ ನೀಡಿ  ಪ್ರಖ್ಯಾತಿಯಾಗುತ್ತಾಳೆ   ಕನ್ನಡ ಮಣ್ಣಿನಲ್ಲಿ  , ಕೆಳದಿ ಸಾಮ್ರಾಜ್ಯ ಆಕ್ರಮಿಸಲು  ಬಂದ ಮೊಗಲ್  ರಾಜ  ಔರಂಗ್ ಜೇಬ್ ನ ಸೈನಿಕರನ್ನು ಎದುರಿಸಿ  ಮಣ್ಣು ಮುಕ್ಕಿಸುತ್ತಾಳೆ .   ಮರಾಟ ರಾಜ್ಯದ ಛತ್ರಪತಿ ಶಿವಾಜಿಯ ಮಗ ರಾಜಾರಾಂ ಛತ್ರಪತಿ  ಮೊಗಲರ  ಆಕ್ರಮಣಕ್ಕೆ ಹೆದರಿ ಇವಳ ಬಾಲಿ ಆಶ್ರಯ  ಪಡೆಯುತ್ತಾನೆ . ವಿದೆಶಿಯರೊಂದಿಗೆ ಅಂದಿನ ಕಾಲಕ್ಕೆ  ವ್ಯಾಪಾರ  ವ್ಯವಹಾರ ನಡೆಸಿದ ಧೀರ ಮಹಿಳೆ ಈ ಚೆನ್ನಮ್ಮ,  ಪೋರ್ಚುಗೀಸರು  ಚೆನ್ನಮ್ಮನ ಆಡಳಿತದ   ಅತ್ಯಂತ ಆತ್ಮೀಯ  ವ್ಯವಹಾರಿಕ  ಗೆಳೆಯರಾಗಿದ್ದರು . ಚೆನ್ನಮ್ಮನನ್ನು  "ಸಂಬಾರ  ರಾಣಿ " [ spice  queen ]  ಎಂದು ಕರೆಯುತ್ತಿದ್ದರು .  ಇಂತಹ  ವಿಶೇಷ  ಹೊಂದಿದ  ಕೆಳದಿಯ  ಸಾಮ್ರಾಜ್ಯಕ್ಕೆ ಒಮ್ಮೆ ಜೈ ಎನ್ನೋಣ .  ಮುಂದೆ .......    ಇತಿಹಾಸದ ನಿಧಿ .... ಈ ಪುಣ್ಯ ಪುರುಷರು ..... ?