Saturday, April 19, 2014

ಬೇಲಿ ಮತ್ತು ದಣಪೆ..!!! ಹಾಗೂ ಎಲ್ಲೆಯ ಮಿಂಚು !!!!

ರಂಗವಲ್ಲಿ ಕೃಪೆ ಸಂಧ್ಯಾ ಭಟ್


 ನಮಸ್ಕಾರ ಗೆಳೆಯರೇ , ಕಥೆ ಹೆಣೆಯುವ ಕೊಕ್ಕೋ  ಆಟದಲ್ಲಿ  ನನ್ನದೂ ಒಂದು ಕಥೆ ಇಲ್ಲಿದೆ , ಮೊದಲು ಗೆಳೆಯ  ಶ್ರೀ ಪ್ರಕಾಶ್ ಹೆಗ್ಡೆ ಯವರು ಬರೆದ "ಬೇಲಿ' http://ittigecement.blogspot.in/2014/04/blog-post.html ಕಥೆ ಓದಿ ಆಸ್ವಾದಿಸಿ ನಂತರ  .......!
ಮತ್ತೊಬ್ಬ ಗೆಳೆಯ  ಶ್ರೀ ದಿನಕರ ಮೊಗೆರ  ಅವರು ಬರೆದ  "ಬೇಲಿ ಮತ್ತು ದಣಪೆ..!!! " http://dinakarmoger.blogspot.in/ ಕಥೆಯನ್ನು  ಅನುಭವಿಸಿ  ನಂತರ  ಬನ್ನಿ ಎರಡೂ ಕಥೆಗಳ ಮುಂದುವರೆದ  ಭಾಗ ಇಲ್ಲಿದೆ  .

 ಬೇಲಿ ಮತ್ತು ದಣಪೆ..!!! ಹಾಗೂ ಎಲ್ಲೆಯ ಮಿಂಚು !!!!

ಹುಚ್ಚುಕೋಡಿ ಮನಸು ಗರಿಗೆದರಿತ್ತು... ಒಮ್ಮೆ ಹದಗೊಂಡ ದೇಹ ಹುರಿಗೊಳ್ಳುತ್ತಿತ್ತು... ಎದ್ದು ಬೀರುವಿನಲ್ಲಿದ್ದ ಸೀರೆ ಹುಡುಕಿದೆ... ಕೈಗೆ ಅನಾಯಾಸವಾಗಿ ಆತನಿಗಿಷ್ಟವಾದ ಆಕಾಶನೀಲಿ ಬಣ್ಣದ ಸೀರೆ ಸಿಕ್ಕಿತು... ನೆರಿಗೆ ಹಾಕುವಾಗ ಹೊಕ್ಕಳು ತಾಗಿ ನನ್ನ ಮೈಯಿ ಜುಮ್ಮೆಂದಿತು... ಯಾವಾಗಲೂ ಬಳಸದ ತುಟಿ ಲಿಪ್ಸ್ಟಿಕ್ ಬೇಡುತ್ತಿತ್ತು.... ರೆಡಿಯಾಗಿ ಒಮ್ಮೆ ಕನ್ನಡಿ ಕಡೆ ನೋಡಿದೆ... ನನ್ನ ನೋಡಿ ನಾನೇ ನಾಚಿದೆ... ಇದೇ ನಾಚಿಕೆ ಆತನಿಗೆ ಇಷ್ಟವಲ್ಲವಾ..?

ಹೌದು ಎನಿಸಿ...ಇನ್ನಷ್ಟು ನಾಚಿದೆ... ನನ್ನ ನಾಚಿಕೆಯೇ  ನನ್ನ ವ್ಯಕ್ತಿತ್ವ ಎಂಬ ಹೆಮ್ಮೆ ಮೂಡಿತ್ತು,  ಹೊರಡಲು ಅನುವಾಗ ತೊಡಗಿದೆ,  ಅರೆ ಮಗು , ನನ್ನ ಕಂದಮ್ಮ  ......!! ಅಯ್ಯೋ ಎಂತಹ ಮರೆಗುಳಿ ನಾನು  ಮೊನ್ನೆ ತಾನೇ ನನ್ನ ಎರಡುವರ್ಷದ  ಪಾಪುವನ್ನು  ನನ್ನ ತಾಯಿ ಕರೆದುಕೊಂಡು  ಹೋಗಿದ್ದು ಮರೆತೇ ಹೋಗಿತ್ತು, ಅವತ್ತು ನನ್ನ ತಾಯಿಯನ್ನು ಕಂಡ ಕಂದಮ್ಮ  ನನ್ನ ಅಪ್ಪುಗೆಯನ್ನು ಬಿಡಿಸಿಕೊಂಡು, ನಗು ನಗುತ್ತಾ ಅಜ್ಜಿಯ ಜೊತೆ ಹೊರಟಿತ್ತು ,  ಹಾಗಾಗಿ  ಪತಿ ಇಲ್ಲದ ದೊಡ್ಡ  ಮನೆಯಲ್ಲಿ ನಾನೇ ಮಹಾರಾಣಿ .ಯಾಗಿದ್ದೆ , ಸಿದ್ದವಾಗುತ್ತಿದ್ದ ಸಮಯದಲ್ಲಿ   "ನಿಲ್ಲು ನಿಲ್ಲೇ ಪತಂಗಾ ಬೇಡ ಬೇಡಾ ಬೆಂಕಿಯ ಸಂಗ" ಎಂಬ ಹಾಡು ಎಫ್.ಎಂ . ನಿಂದ ಬರುತ್ತಿತ್ತು,
ಯಾಕೋ ಕಾಣೆ  ಹೋಗುವುದು ಬೇಡಾ ಅಂತಾ  ಒಮ್ಮೊಮ್ಮೆ ಅನ್ನಿಸುತ್ತಿತ್ತು   

ಆದರೆ ..... ಮನಸು !!!ಹುಚ್ಚು ಕುದುರೆಯ ಬೆನ್ನೇರಿತ್ತು . 

ಆದರೆ  ಅಷ್ಟರಲ್ಲಿ  ಬಂತು ನನ್ನ ಪತಿಯ ಫೋನ್,

 ಚಿನ್ನು  ಇನ್ನೂ ಹೊರಟಿಲ್ವಾ , ? ಬೇಗ ಹೋಗಮ್ಮಾ  ತಡವಾದೀತು . ಎಂಬ ಒತ್ತಾಯದ  ಸೂಚನೆ  ಅವರಿಂದ ,,ಹೊರಡಲು ಪೂರಕವಾದ  ವಾತಾವರಣ  ತನ್ನಿಂದ ತಾನೇ ಸೃಷ್ಟಿಯಾಗಿ  ಹೊರಡಲು ಪ್ರೇರಣೆ ನೀಡಿತು,  
ಹೊರಡುವ ಆತುರದಲ್ಲಿ ಆ ಹಾಡನ್ನು ನಿಲ್ಲಿಸಿ  ಮನೆ ಯಿಂದ ಆಚೆ ಹೊರಟೆ .

ದಾರಿಯಲ್ಲಿ ನಾನು ಕಾರ್ ಡ್ರೈವ್ ಮಾಡುತ್ತಾ  ಬರುತ್ತಿರಲು , ಹೊಸ ತಂಗಾಳಿ ಬೀಸುತ್ತಿತ್ತು, ಕಾರಿನ ಒಳಗೆ " ನೀ ನಿರಲು ಜೊತೆಯಲ್ಲಿ ಬಾಳೆಲ್ಲ  ಹಸಿರಾದಂತೆ " ಹಾಡು ಬರುತ್ತಿತ್ತು, ಆ ಸುಂದರ ಹಾಡನ್ನು ಅವನೇ ನನಗಾಗಿ ಹಾಡುತ್ತಿರುವಂತೆ  ಕಲ್ಪಿಸಿಕೊಂಡು  ಮುಖದಲ್ಲಿ ಮಂದಹಾಸ  ಬೀರಿದೆ .......  ಸೂರ್ಯನಿದ್ದ  ಆಗಸದಲ್ಲಿ ಯಾಕೋ  ಕಪ್ಪು ಮೋಡಗಳು  ಗೋಚರಿಸಿ  ಮಳೆಯ  ಮುನ್ಸೂಚನೆ ನೀಡಿದ್ದವು . ಕೆಲವೇ ನಿಮಿಷಗಳಲ್ಲಿ  ಅವನ ಮನೆಯ ಮುಂದೆ  ಹಾಜರಾದೆ ನಾನು. 
 ಮನೆಯ ಆವರಣ ಹೊಕ್ಕ ನನ್ನನ್ನು ನಗು ನಗುತ್ತಾ ಸ್ವಾಗತಿಸಿದ ಆ ಹುಡುಗ , ಆ ಮನೆಯ ಹೊರ ಆವರಣ ಪ್ರಶಾಂತವಾಗಿತ್ತು,  ಬಣ್ಣ ಬಣ್ಣದ ಹೂಗಳು  ಅರಳಿ ನಗುತ್ತಿದ್ದವು , ಕಡು ನೀಲಿ ಜೀನ್ಸ್ ಹಾಗೂ ಬಾಟಲ್  ಗ್ರೀನ್  ಶರ್ಟ್ ಹಾಕಿದ್ದ  ಅವನನ್ನು  ಅಚ್ಚರಿಯಿಂದ ನೋಡುತ್ತಾ  ನಿಂತೇ, ಅರೆ ಇದೆ ಡ್ರೆಸ್ ಹಾಕಿಯಲ್ಲವೇ  ನನ್ನ ಕಾಲೆಜುದಿನಗಳಲ್ಲಿ ಹೋಗಿದ್ದ  ಬೇಕಲ್ ಫೋರ್ಟ್  ಪ್ರವಾಸದಲ್ಲಿ ಇವನು ಇದ್ದದ್ದು, ಅಂದು ಇವನ ಸ್ಮಾರ್ಟ್ ಡ್ರೆಸ್ ನೋಡಿ ಹಲವು ಹುಡುಗಿಯರು  ಪ್ರಪೋಸ್ ಮಾಡಿದ್ದು , ಆಗ ನಾನು ಹೊಟ್ಟೆ ಕಿಚ್ಚು ಪಟ್ಟಿದ್ದು .....!! ನೆನಪುಗಳು  ಎಲ್ಲವೂ ಕಣ್ಣ ಮುಂದೆ ಮತ್ತೊಮ್ಮೆ ತೆರೆದು ಕೊಂಡವು,  ಹಳೆಯ ನೆನಪುಗಳ  ಸರದಾರನಾದ   ಅವನನ್ನೇ ನೋಡುತ್ತಾ  ನಿಂತೇ . 

ಅರೆ ಇದೇನು ಹುಡುಗಿ ಹಾಗೆ ನಿಂತೇ , ಹೊಸಬಳಂತೆ , ಬಾ ಒಳಗೆ  , ಎಂದು ಕೈ ಹಿಡಿದು ಕೊಂಡು  ಒಳಗೆ ಕರೆದು ಕೊಂಡುಹೋದ , ಒಳಗಡೆ ಮೆಲ್ಲಗೆ ಹಿತವಾದ ಸಂಗೀತ ಬರುತ್ತಿತ್ತು, ಒಳಗಡೆ ಮುಜುಗರದಿಂದ ಕುಳಿತು  ನನ್ನ ಪತಿ ನೀಡಿದ್ದ  ಫೈಲ್ ಅವನಿಗೆ ನೀಡಿದೆ . ತಕ್ಷಣವೇ ಅವನು ಅದಕ್ಕೆ ತನ್ನ ಅನುಮೋದನೆ ನೀಡಿ  ನನ್ನ ಪತಿಯ ವ್ಯವಹಾರಕ್ಕೆ ಇದ್ದ ಕಾನೂನು ತೊಡಕನ್ನು ನಿವಾರಿಸಿದ್ದ ,  ಅವನಿಗೆ ಥ್ಯಾಂಕ್ಸ್  ಹೇಳಿ ಹೊರಡಲು  ಸಿದ್ದಳಾದೆ ....... ಆದರೆ ಮನಸು !!!   

 ಅಷ್ಟರಲ್ಲಿ ನೋಡು ಹುಡುಗಿ  ಹೊರಗಡೆ ಜೋರಾಗಿ ಮಳೆ ಬರ್ತಾ ಇದೆ, ಮಳೆ ನಿಂತ ಮೇಲೆ ಹೊರಡಬಹುದು , ಬಹಳ ದಿನಗಳ ನಂತರ ನಾನೂ ಸಹ ಫ್ರೀಯಾಗಿ ಇದ್ದೇನೆ, ಮನೆಯಲ್ಲಿ ಯಾರೂ ಇಲ್ಲಾ ನನಗೂ ಬೋರ್ ಆಗಿದೆ , ಬಾ ಇಬ್ಬರೂ ಫ್ರೀ ಯಾಗಿ ಹರಟೆ ಹೊಡೆಯೋಣ,  ಮಳೆ ನಿಂತ ನಂತರ  ಇಬ್ಬರೂ ಹೊರಗಡೆ  ಊಟ ಮಾಡೋಣ,  ಅಲ್ಲಿಯವರೆಗೂ ತಗೋ ಎನ್ನುತ್ತಾ  ಕಲ್ಲಂಗಡಿ ಚೂರುಗಳನ್ನು ಹಾಗು  ಒಂದು ಲೋಟದಲ್ಲಿ ಶರಬತ್ತು ನೀಡಿದ . ಅದೂ ಇದೂ ಮಾತನಾಡುತ್ತಾ ಸ್ವಲ್ಪ ಸಮಯ ಕಳೆಯಿತು,  

ಬಾರೆ ಹುಡುಗಿ ನಿನಗೆ ನಮ್ಮ ಮನೆ ತೋರುತ್ತೇನೆ  ಎಂದು ಕೈ ಹಿಡಿದು ಮನೆಯನ್ನೆಲ್ಲಾ ತೋರಿಸಿದ , ಮನೆಯಲ್ಲಿ ಅವನ ಹವ್ಯಾಸಕ್ಕೆ ತಕ್ಕಂತೆ  ವಿವಿಧ ಬಗೆಯ ಪುಸ್ತಕಗಳು, ಅವನೇ ಬಿಡಿಸಿದ ಸುಂದರ ಚಿತ್ರಗಳು,  ಅವನು ತೆಗೆದ ಅದ್ಭುತ ಫೋಟೋಗಳು, ಮೂಲೆಯಲ್ಲಿ ಅವನು ಸದಾ  ಪ್ರೀತಿಸಿ ನುಡಿಸುವ ಸಿತಾರ್ ,  ನನಗೆ ಹಾಗು ಅವನಿಗೆ ಇಬ್ಬರಿಗೂ ಇಷ್ಟವಾದ  ಸಂಗೀತದ  ಸಿ.ಡಿ . ಗಳು , ಜೊತೆಗೆ ಅವನು ಕವಿತೆ ಬರೆಯುತ್ತಿದ್ದ  ಪುಸ್ತಕ ನನ್ನ ಗಮನ ಸೆಳೆದವು . ಹೊರಗಡೆ  ಮಳೆ ದೋ ಎಂದು ಬರುತ್ತಲೇ ಇತ್ತು,  ಸಣ್ಣಗೆ ಬರುತ್ತಿದ್ದ  ಹಾಡಿನಲ್ಲಿ,  "ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ '' ಎನ್ನುತ್ತಾ ಎಸ್ .ಪಿ. ಬಾಲು ಹಾಡುತ್ತಿದ್ದರು , ಹಿತವಾದ ಸಂಗೀತ ಮನೆಯ ಎಲ್ಲಾ ಕೊಣೆ ಗಳಲ್ಲೂ ಕೇಳುತ್ತಿತ್ತು,  ಮನೆಯನ್ನು ಸಂಪೂರ್ಣ ನೋಡಿ  ಮತ್ತೆ ಮನೆಯ  ಹಾಲ್  ನಲ್ಲಿ ಬಂದು ಕುಳಿತೆವು,

ಅಷ್ಟರಲ್ಲಿ  ಅವನಿಗೆ ಫೋನ್ ಬಂತು , ಒಂದು ನಿಮಿಷ ಎಂದು ಹೇಳಿ , ಫೋನ್ ಕೈಯಲ್ಲಿ ಹಿಡಿದು ಆಚೆ ನಡೆದ ಹುಡುಗ , ನಾನು ಅಲ್ಲೇ ಇದ್ದ ಆಲ್ಬಮ್ ನಲ್ಲಿ  ಫೋಟೋಗಳನ್ನು ನೋಡುತ್ತಾ ಕುಳಿತೆ,  ಆಲ್ಬಮ್ ನಲ್ಲಿದ್ದ ಹಲವಾರು ಫೋಟೋಗಳು , ನಮ್ಮ ಕಾಲೇಜಿನ ದಿನದ್ದಾಗಿದ್ದವು ,  ಸ್ವಲ್ಪ ಹೊತ್ತು ನೋಡುತ್ತಾ   ಅಲ್ಲೇ ಇದ್ದ ಅವನು  ಕವಿತೆ ಬರೆದಿದ್ದ  ಪುಸ್ತಕ  ಓದುತ್ತಿದ್ದೆ ,   ನಾಚಿಕೆ ಬಗ್ಗೆ  ಬರೆದಿದ್ದ  ಹಲವು ಕವಿತೆಗಳು ಅಲ್ಲಿದ್ದವು,  

 "ಹುಣ್ಣಿಮೆಯ ರಾತ್ರಿಯ ಚಂದಿರ 
   ನನ್ನ ಹುಡುಗಿಯ  ನಾಚಿಕೆಯ 
      ಸುಂದರ ಮೊಗವ ಕಂಡು
       ಹೊಟ್ಟೆ ಕಿಚ್ಚು ಪಟ್ಟು
      ಆಗಸದಿಂದ ಪೇರಿ   ಕಿತ್ತಿದ್ದ "

  ಯಾಕೋ ಗೊತ್ತಿಲ್ಲಾ  ಆ ಕವಿತೆಯ ಸಾಲುಗಳನ್ನು ನೋಡುತ್ತಾ  ಮತ್ತೊಮ್ಮೆ  ಕಲ್ಪನಾ ಲೋಕಕ್ಕೆ ಜಾರಿದೆ,  

ಅಯ್ಯೋ ಹುಡುಗಿ ವಾಸ್ತವಕ್ಕೆ ಬಾ  ನಾನು ಬಂದು ಎಷ್ಟು ಹೊತ್ತಾಯ್ತು, ಅನ್ನುತ್ತಾ ನಗು ನಗುತ್ತಾ  ಎದುರು ನಿಂತಿದ್ದ ಹುಡುಗ , ಆ ನಗೆಯಲ್ಲಿ ತುಂಟತನವಿತ್ತು,  ಆದರೆ ಕಣ್ಣುಗಳಲ್ಲಿ ...?
 ಲೇ ಹುಡುಗಿ ನಿನ್ನ ನಾಚಿಕೆಯ ಅಭಿಮಾನಿ ನಾನು , ದಿನಕ್ಕೊಮ್ಮೆಯಾದರೂ ನಿನ್ನ ನಾಚಿಕೆ ನೋಡಬೇಕು.. ಎಂಬ  ಹಂಬಲ ನನ್ನದು  ಒಮ್ಮೆ ನಾಚಲಾರೆಯ  ಎಂಬ ಬೇಡಿಕೆ  ಕಾಣುತ್ತಿತ್ತು,  

 ಏನೇ ಆಗ್ಲಿ ಹುಡುಗಿ ನಿನ್ನ ನಾಚಿಕೆಗೆ ಬೆಲೆ ಕಟ್ಟಲಾರೆ ಎನ್ನುತ್ತಾ ಹತ್ತಿರಬಂದು ಕಿವಿಯಲ್ಲಿ ನಿನ್ನ ನಾಚಿಕೆಯ ಅಭಿಮಾನಿ ನಾನು ಕಣೆ..." ಎಂದವನು ಮುಂದೆ ನಗುತ್ತಾ ನಿಂತಾ .



 ಆ ಕಣ್ಣುಗಳನ್ನು ನೋಡುತ್ತಾ  ನನಗರಿವಿಲ್ಲದಂತೆ  ನಾಚಿಕೆಯಾಯಿತು .  ಅದನ್ನು ಕಂಡ ಅವನ ಮುಖ ಭಾವ  ಸಂತಸದ ಹೊನಲು ಹರಿಸಿತ್ತು.
  
ಆದರೆ ಅಷ್ಟರಲ್ಲಿ  ಫಳ್  ಫಳ್  ಎಂಬ ಮಿಂಚು , ಮಿಂಚಿತು , ಮನೆಯಲ್ಲಿನ  ಕರೆಂಟ್  ಆಫ್  ಆಯಿತು, ಹೆದರ ಬೇಡವೇ ಹುಡುಗಿ ಎನ್ನುತ್ತಾ  ಅವನು ಸ್ವಲ್ಪ  ದೂರದಲ್ಲಿದ್ದ  ಇನ್ವರ್ಟರ್  ಸ್ವಿಚ್  ಆನ್ ಮಾಡಿದ, ಮಂದವಾದ  ಹಿತವಾದ ಬೆಳಕು  ಮನೆಯನ್ನು ಆವರಿಸಿತು .  ಆದರೆ ಮನೆಯಲ್ಲಿ  ಕೊಳಲಿನ  ಹಿತವಾದ ಮೆಲ್ಲನಯ ಸಂಗೀತ ಹರಿದಾಡುತ್ತಿತ್ತು,  ಅದಕ್ಕೆ ಮಳೆಯ ಹನಿಗಳ ತಾಳ ಸಾಥ್ ನೀಡಿತ್ತು, ಮನದಲ್ಲಿ  ಮೋಹನ ರಾಗ  ಉಗಮವಾಗುತ್ತಿತ್ತು. ಮತ್ತೊಮ್ಮೆ ಫಳ್  ಎಂದ ಮಿಂಚು  ,ಹಾಗು  ಭೂಮಿಯನ್ನು ಅಲುಗಾಡಿಸುವ  ಶಬ್ಧ ಮಾಡುತ್ತಾ   ಭಾರೀ ಗುಡುಗು   ಅಪ್ಪಳಿಸಿತು , 

ನಾನು  ಬೆಚ್ಚಿಬಿದ್ದು  , ಚೀರುತ್ತಾ   ನನಗರಿವಿಲ್ಲದೆ  ಅವನ  ಅಪ್ಪುಗೆಯಲ್ಲಿ ಸೇರಿಕೊಂಡೆ , ಅಯ್ಯೋ ಹುಡುಗಿ  ಏಳು ಎದ್ದೇಳು ಇಷ್ಟು ದೊಡ್ದವಳಾದ್ರೂ   ಇನ್ನೂ ಹೋಗಿಲ್ವಾ ಗುಡುಗಿನ  ಹೆದರಿಕೆ ನಿನಗೆ , ಹೆದರ ಬೇಡ ನಾನಿದ್ದೇನೆ , ಎನ್ನುತ್ತಾ  ತಗೋ ತಣ್ಣಗೆ ಶರಬತ್ತು ಕುಡಿ  ಎನ್ನುತ್ತಾ ಸನಿಹ ಬಂದು ಸಾಂತ್ವನ ಗೊಳಿಸಿದ . ಅವನು ನೀಡಿದ ಸಾಂತ್ವನದ ಮಾತು  ಹಿತವಾಗಿ ಸ್ವಲ್ಪ ಸುಧಾರಿಸಿಕೊಂಡೆ .  ನನ್ನಿಂದ ಸ್ವಲ್ಪವೇ ದೂರ ಕುಳಿತು  ತನ್ನ ಮಗುವಿನ ಆಟ , ತುಂಟಾಟದ ಬಗ್ಗೆ ಹೇಳುತ್ತಿದ್ದ , 

ಅಷ್ಟರಲ್ಲಿ ಮಳೆಯ ಆರ್ಭಟ  ಹೆಚ್ಚಾಗ ತೊಡಗಿತು, ಬಿರುಗಾಳಿ ಅದಕ್ಕೆ ಸಾಥ್ ನೀಡಿತ್ತು, ನಮ್ಮ ಮಾತುಕತೆ, ನಗು , ಸರಾಗವಾಗಿ ಸಾಗಿತ್ತು, ಅಷ್ಟರಲ್ಲಿ  ಮತ್ತೊಮ್ಮೆ  ಎರಗಿ ಬಂತು ಸಿಡಿಲು
 ಫಳ್ , ಫಳ್  ಎಂಬ  ಜೊತೆಯಲ್ಲೇ ಭಯಂಕರ   ಸಿಡಿಲು   ಅಪ್ಪಳಿಸಿತು,  ಹೆದರಿದ  ನಾನು  ಓಡಿಹೋಗಿ  ನನಗರಿವಿಲ್ಲದಂತೆ ಅವನನ್ನು ಅಪ್ಪಿಕೊಂಡೆ ,     ಅವನ ಕೈ ನನ್ನ ತಲೆಯನ್ನು ಮೃದುವಾಗಿ ಸವರುತ್ತಿತ್ತು, .... ಮನಸು ಈ ಸ್ಪರ್ಶ ಸುಖಕ್ಕೆ ಕರಗುತ್ತಿತ್ತು ....... ಅವನ ತುಡಿತ , ಎದೆ ಬಡಿತ ಹೊಸ ರಾಗ ಹಾಡಲು ಸಿದ್ದ ವಾಗುತ್ತಿತ್ತು, ಆದರೆ .......... !  

"ಅನಿಸುತಿದೆ ಯಾಕೋ ಇಂದು ನೀನೇನೆ  ನನ್ನವಳೆಂದು" ಹಾಡು ನನ್ನ ಮೊಬೈಲ್ ನಿಂದ  ಬಂತು, ಆ ಹುಡುಗನ  ಅಪ್ಪುಗೆ  ಬಿಡಿಸಿಕೊಂಡು  , ಮೊಬೈಲ್  ಬಳಿ  ಓಡಿ  ಬಂದು ನನ್ನ ಪತಿಯ ಕಾಲ್  ರಿಸೀವ್  ಮಾಡಿದೆ, ಹಾಗೆ ಸ್ಪೀಕರ್ ಫೋನ್  ಆನ್ ಮಾಡಿದೆ . 

ಅತ್ತಲಿಂದ ಪತಿ ರಾಯರು   " ಚಿನ್ನು ಎಲ್ಲಿದ್ದೀ ,  ನಮ್ಮೂರಲ್ಲಿ ಭಾರಿ ಬಿರುಗಾಳಿ ಯಿಂದ ಕೂಡಿದ ಮಳೆ, ಎಂದೂ ಸಿಡಿಲಿಗೆ ಒಬ್ಬ ವ್ಯಕ್ತಿ  ಬಲಿ  ಅಂತಾ ಟಿ .ವಿ . ಯಲ್ಲಿ ಬರ್ತಾ ಇದೆ, ನಿನಗೆ ಮೊದಲೇ ಗುಡುಗು ಎಂದರೆ  ಭಯ ಅದಕ್ಕೆ ಎಲ್ಲಿ ಒಬ್ಬಳೇ  ಮನೆಯಲ್ಲಿ ಹೆದರಿಕೊಂಡು ಇರ್ತೀಯ ಅಂತಾ  ಫೋನ್ ಮಾಡಿದೆ, ನಾನು ನಿನ್ನ  ತುಂಬಾ ಮಿಸ್ ಮಾಡ್ಕೋತಾ ಇದ್ದೀನಿ ಕಣೆ , ನಿನ್ನ ನೋಡುವ ಆಸೆ ಆಗ್ತಾ ಇದೆ ಎನ್ನತ್ತಾ  ರಮಿಸಿದ ಪತಿರಾಯ. 

ನಾನು ಅವರ ಗೆಳೆಯರ ಮನೆಯಲ್ಲಿ ಇರುವುದಾಗಿ ತಿಳಿಸಿ , ಅವರ ಕೆಲಸ  ಪೂರ್ಣವಾದ ಬಗ್ಗೆ  ತಿಳಿಸಿದೆ,  ಅವರು ಸಂತಸಗೊಂಡು   , ಹುಡುಗನ ಜೊತೆ ಮಾತನಾಡಿದರು, ಅವನೂ ಸಹ ಅವರ ವ್ಯವಹಾರದ ಬಗ್ಗೆ ಇದ್ದ ಕಾನೂನು ತೊಡಕನ್ನು  ನಿವಾರಿಸಿರುವುದಾಗಿ ತಿಳಿಸಿದ . 

ನಂತರ  ಬಹಳ ಸಂತೋಷದಿಂದ ನನ್ನ ಪತಿ ಮತ್ತೊಮ್ಮೆ  ನನ್ನ ಹತ್ತಿರ ಮತ್ತೊಮ್ಮೆ ಮಾತನಾಡುತ್ತಾ , ನೋಡೂ ಚಿನ್ನು,  ಮಳೆ ಪೂರ್ಣವಾಗಿ ನಿಲ್ಲುವವರೆಗೂ ನಿನ್ನ ಗೆಳೆಯರ ಮನೆಯಲ್ಲೇ ಇರು,  ಬಹಳ ಒಳ್ಳೆಯ ಸಭ್ಯ ವ್ಯಕ್ತಿ ನಿನ್ನ ಗೆಳೆಯರು,  ಅಂತಹವರ ಮನೆಯಲ್ಲಿದ್ದರೆ ಯಾವ ಆತಂಕವೂ   ಇರೋದಿಲ್ಲಾ, ನಿಮ್ಮಿಬ್ಬರ ಗೆಳೆತನದ ಬಗ್ಗೆ ನನಗೆ  ಬಹಳ ಹೆಮ್ಮೆ ಇದೆ ,  ನಿಮ್ಮಿಬ್ಬರ ಗೆಳೆತನ ಹೀಗೆ ಇರಲಿ ನಾನು ನಾಳೆಯೇ  ಹೊರಟು  ಬರುತ್ತೇನೆ ಅಂತಾ ಹೇಳಿ ಫೋನ್  ಇಟ್ಟರು . 

 ನನ್ನ ಪತಿಯ ಫೋನ್ ಮಾತುಗಳು ಇಬ್ಬರಿಗೂ ಚಾಟಿ  ಬೀಸಿತ್ತು,   ಅವರು ಆಡಿದ ಪ್ರತೀ ಮಾತುಗಳು , ಪ್ರತೀ ಪದಗಳು, ನಮ್ಮಿಬ್ಬರ ಸುತ್ತಾ  ಗಿರಾಕಿ ಹೊಡೆಯುತ್ತಾ  ಗಹಗಹಿಸಿ  ನಗುತ್ತಾ  ನಮ್ಮಿಬ್ಬರನ್ನು  ಅಪಹಾಸ್ಯ ಮಾಡುತ್ತಿರುವಂತೆ  ಭಾಸವಾಯಿತು . 

ದಿಕ್ಕು ತೋಚದೆ  ಸುಮ್ಮನೆ ನಿಂತುಬಿಟ್ಟೆ ....  ಮನದಲ್ಲಿನ  ಹೊಯ್ದಾಟ  ನನ್ನ  ಉತ್ಸಾಹವನ್ನು  ಅಡಗಿಸಿತ್ತು .   ಹುಡುಗ  ನನ್ನತ್ತ  ನೋಡಲಾರದೆ  ತಲೆ ತಗ್ಗಿಸಿ, ಮೆದು ಮಾತಿನಲ್ಲಿ    ನನ್ನನ್ನು ಕ್ಷಮಿಸು ಹುಡುಗಿ, ನಿನ್ನ ಪತಿಯ ಮನಸು ಇಷ್ಟೊಂದು ವಿಸ್ತಾರವಾದದ್ದು  ಎಂದು ತಿಳಿದಿರಲಿಲ್ಲ, ನಮ್ಮಿಬ್ಬರ  ಗೆಳೆತನದ ಬಗ್ಗೆ  ತಮ್ಮದೇ ಆದ  ಸಭ್ಯತೆ ಪ್ರದರ್ಶಿಸಿ   ನಮ್ಮ ಗೆಳೆತನಕ್ಕೆ  ಅಳಿಸಲಾಗದ ಮಿಂಚಿನ ರೇಖೆ ಹಾಕಿ ಕೊಟ್ಟಿದ್ದಾರೆ,  ನಮ್ಮಿಬ್ಬರ ಸಂಬಂಧದ ಎಲ್ಲೇ ನನಗೆ ಅರ್ಥ ಆಯಿತು,  ಎಂದು ಗದ್ಗತಿತನಾಗಿ  ನನ್ನ ಮುಂದೆ  ಮಂಡಿಯೂರಿ  ಕುಳಿತ ........!

 ಆದರೆ ನನ್ನ ಮನಸು ತಪ್ಪು ನಿನ್ನದೇ ಅಲ್ಲವೋ ಹುಡುಗಾ  ನನ್ನದೂ ಕೂಡಾ ಎನ್ನುತ್ತಾ  ಸಾರಿ ಸಾರಿ ಹೇಳುತ್ತಿತ್ತು, ಆದರೆ  ಹೃದಯದಲ್ಲಿ ಉಳಿದ ಭಾವನೆಗಳು  ಮಾತಾಗಿ ಬರಲೇ ಇಲ್ಲಾ,  ಕಣ್ಣಿಂದ  ಕಣ್ಣೀರ ಹನಿಗಳು  ಬಿಸಿ ಹನಿಗಳಾಗಿ ನೆಲಕ್ಕೆ ಉರುಳುತ್ತಿದ್ದವು,   ನನಗರಿವಿಲ್ಲದಂತೆ  ಅವನ ಕಣ್ಣ ನೋಟದಿಂದ  ದೂರ ಸರಿದೆ,  ಹೃದಯವೂ ಕೂಡ ಅವನ  ಕಣ್ ಸೆಳೆತ  ಬಯಸದೆ  ಮೌನವಾಗಿ   ರೋದಿಸುತ್ತಿತ್ತು,   ಹೊರಗಿನ ಮಳೆ  ಇಳೆಯ  ಬಾಯಾರಿಕೆ ನೀಗಿಸಿ  ಶಾಂತವಾಗಿತ್ತು,  ಇತ್ತ ನನ್ನ ಬಾಳಿನಲ್ಲಿ  ಎರಗಿಬಂದ  ಈ ತಿರುವು  ಬರ ಸಿಡಿಲಿನಂತೆ ಅಪ್ಪಳಿಸಿತ್ತು .    

ಹುಡುಗ ಹೊರಡುವೆ ನಾನು  ಎಂದು  ಹೊರಟು   ನಾಲ್ಕು  ಹೆಜ್ಜೆ ಹಾಕಿದೆ ನಾನು,  ಅಷ್ಟರಲ್ಲಿ   ಹುಡುಗನ ಮೊಬೈಲ್  ನಿಂದ  "ಪ್ರ್ರೀತಿನೆ ಆ ದ್ಯಾವ್ರು ತಂದಾ  ಆಸ್ತಿ ನಮ್ಮ ಬಾಳಿಗೆ"  ಎಂಬ ಹಾಡಿನೊಡನೆ ಕರೆ ಬಂತು,  
ಹತ್ತಿರ ಹೋಗಿ ನೋಡಿದೆ  ಹುಡುಗನ ಪತ್ನಿ ಕರೆ ಮಾಡುತ್ತಿದ್ದಳು ..   ....  !!!!!!   



 



 




Tuesday, April 8, 2014

ಎಲೆಕ್ಸನ್ನು ಸಾ ಎಲೆಕ್ಸನ್ನು ......!! ಇದರ ಒಳಗೈತೆ ಬಾರಿ ಕನೆಕ್ಸನ್ನು ....!!! [ ಕಾಲ್ಪನಿಕ ಕಥೆ]


ಎಲೆಕ್ಸನ್ ಅಂದ್ರೆ  ಮುದ್ದೆ ತಿಂದಂಗೆ  





{ಮೊದಲ ವಿಚಾರ ಗೆಳೆಯರೇ   ಇಲ್ಲಿ ಬರೆದಿರುವುದು ಒಂದು ಸಂಪೂರ್ಣ  ಕಾಲ್ಪನಿಕ ಕಥೆ ಯಾವುದೇ ಘಟನೆಗೆ ,ಅಥವಾ  ಯಾವುದೇ ಪಕ್ಷಕ್ಕೆ ಈ ವಿಚಾರ ಸಂಬಂಧ ಪಟ್ಟಿರುವುದಿಲ್ಲಾ }



ಇಡೀ  ದೇಸಕ್ಕೆ  ಎಲೆಕ್ಸನ್ನು  ಬತ್ತದೆ ಅನ್ನೋ ಗಾಳಿ ಬೀಸ್ತು , ಇನ್ನು ನಮ್ಮ ದುರಾಸೆ ಪುರಕ್ಕೆ ಬರ್ದೇ ಇದ್ದಾತೆ , ಅಂಗೆ ಬೀಸೆ  ಬುಡ್ತು  ಎಲೆಕ್ಸನ್ನು ಗಾಳಿ ...! ಇನ್ನೆರ್ಡ್ ಮೂರು  ತಿಂಗಳಲ್ಲಿ   ಎಲೆಕ್ಸನ್ನು  ಬತ್ತದೆ  ಅನ್ನೋ ಸುದ್ದಿ .

 ಊರ ಲೀಡರುಗಳೆಂಬ ಕೆಲವು  ಜನ ಮೂಲೆಲಿದ್ದ  ಬಿಳೀ ಪಂಚೆ , ಜುಬ್ಬಾ  ಎಲ್ಲಾ  ತೊಳೆದು ಇಸ್ತ್ರೀ ಮಾಡಿ, ದುರಾಸೆ ಪುರದ  ಕಪಿಲೆ ಬಾವೀಲಿ  ಸ್ನಾನ ಮಾಡ್ಕಂಡು   ಫಳ ಫಳಾ  ಅಂತಾ ಹೊಳೀತಾ  ನಲಿಯಲು ಸುರು ಮಾಡುದ್ರು .

  ಇಡೀ  ಊರಿಗೆ ಎಲೆಕ್ಸನ್  ಜ್ವರಬಂದ ಮ್ಯಾಕೆ  ನಮ್ಮ  ಗೊಣ್ಣೆ ಗೋಪಣ್ಣನಿಗೆ ಬರ್ದೇ ಇದ್ದಾತೆ ., ಅವಂಗೂ ಸುರು ಆಯ್ತು. ಅಯ್ಯೋ ನಿಮಗೆ ನಮ್ಮ ದುರಾಸೆ ಪುರದ ಗೊಣ್ಣೆ ಗೋಪಿ  ಗೊತ್ತಿಲ್ವಾ ??

 ರೀ ಇವನ ಪರಿಚಯ ಇಲ್ಲಾಂದ್ರೆ  ಬಾಳಾ ಕಷ್ಟಾ , ದುರಾಸೆ ಪುರದ  ಪ್ರತೀ  ಘಟನೆಯಲ್ಲೂ ಇವನ ಹೆಸರಿಲ್ಲಾ ಅಂದ್ರೆ  ಅದು ಪಂಕ್ಸನ್ನೆ ಅಲ್ಲಾ ಕಣ್ರೀ,  ಪ್ರೈಮರಿ  ಸ್ಕೂಲ್ನಲ್ಲಿ  ಒಂದನೇ ಕ್ಲಾಸಿಂದ  ಎರಡನೇ ಕ್ಲಾಸ್ ವರೆಗೆ  ಚಡ್ಡೀ ಹಾಕಳ್ದೆ , ಯಾವಾಗಲೂ ಗೊಣ್ಣೆ ಸುರಿಸಿಕೊಂಡು ಓಡಾಡುತ್ತಾ ಇದ್ದ  ದಲ್ಲಾಳಿ  ಹಿಕ್ಮತ್ತೈಯ್ಯನ ಒಬ್ಬನೇ ಮಗ  ನಮ್ಮ ನಾಯಕ "ಗೊಣ್ಣೆ ಗೋಪಿ " ಶಾಲೆಗೇ ಬರುವ   ಹೈಕಳಿಂದ  ತಿಂಡಿ  ವಸೂಲಿ ಮಾಡೋದು ಇವನ ಚಾಳಿ , ಕೊಡದೆ ಇದ್ದ ಮಕ್ಕಳಿಗೆ  "ಚುರುಕಿನ ಸೊಪ್ಪಿನ  ಸೇವೆ " ಮಾಡುತ್ತಿದ್ದವ , ಸ್ವಾತಂತ್ರ್ಯ ದಿನಾಚರಣೆಗೆ  ಶಾಲಾ ಮಕ್ಕಳಿಗೆ ನೀಡಲು ತಂದಿದ್ದ ಸಿಹಿ ತಿಂಡಿಯನ್ನು  ಹೈಜಾಕ್  ಮಾಡಿದ್ದ ಪುಣ್ಯಾತ್ಮ,  ಪ್ರೌಡ ಶಾಲೆಯಲ್ಲಿ ಸ್ಕೊಲ್ ಮಾನಿಟರ್  ಆಗೋಗೆ  ಮೇಷ್ಟ್ರುಗೆ  ಅಡ್ಜಸ್ಟ್  ಮಾಡಿಕೊಂಡು  ಮಾನಿಟರ್ ಆಗಿ ಮೆರೆದಿದ್ದವ, ಅದ್ಯಾಕೋ  ಕಾಣೆ ದುರಾಸೆಪುರದ ಭಾಂದವ್ಯ ಬಿಡಲಾಗದೆ  ಹತ್ತನೇ ಕ್ಲಾಸ್ ನಲ್ಲಿ ಡುಮ್ಕಿ ಹೊಡೆದು , ರಾಜಕೀಯ ಸೇರ್ಬುಟ್  ದಾರಿ ಕಂಡ್ಕಂದ .

ಮೊದಲು ಇವನ ಚತುರತೆ  ಕಂಡ , "ಕೋಡಂಗಿ " ಪಕ್ಸದ  ಮುಖಂಡ  ಕಪ್ಪೆ ಸ್ವಾಮೀ  ಇವನನ್ನು  ಯುವ ಮುಖಂಡ ನಾಗಿ ಬೆಳೆಸಿದರು , ಅವರ ಗರಡಿಯಲ್ಲಿ ಪಳಗಿದ  ಈತ ಎಲ್ಲಾ ವರಸೆ ಕಲಿತ.  ಯಾವುದೇ ಸಮಾರಂಭಕ್ಕೆ  ಜನರನ್ನು ಜಮಾವಣೆ ಮಾಡೋದ್ರಲ್ಲಿ  ಇವನು ಭಾರಿ ನಿಸ್ಸೀಮ ಆಗಿಬಿಟ್ಟ . ಇಂತಿರ್ಪ ಗೊಣ್ಣೆ ಗೋಪಿ ಗೆ ಈ ಚುನಾವಣಾ ನಿರ್ವಹಣೆ ಜವಾಬ್ದಾರಿ ಬಂದೆ ಬಿಟ್ಟಿತು . ದುರಾಸೆ ಪುರದಲ್ಲಿ  ತನ್ನ ಅಧ್ಯಕ್ಸತೆಯಲ್ಲಿ ಎಲೆಕ್ಸನ್  ಪೂರ್ವ ಸಿದ್ದತಾ ಸಭೆಯನ್ನು  ಕರೆದೆ ಬಿಟ್ಟ .

 ನೆರದಿದ್ದ  ತನ್ನ ಪಟಾಲಂ ಗಳಿಗೆ ಹೇಳುತ್ತಾ , "ನೋಡ್ರಪ್ಪಾ,  ನಿಮಗೆಲ್ಲಾ   ಗೊತ್ತಿದ್ದಂಗೆ ಈಗ ಎಲೆಕ್ಸನ್ನು ಬತ್ತಾ  ಅದೇ , ಇಡೀ  ದೇಸವೇ  ಎಲೆಕ್ಸನ್ನು ಇಚಾರದಲ್ಲಿ ಮುಳಗದೇ .    ನಮ್ಮ ದುರಾಸೆ ಪುರದ ಎಲೆಕ್ಸನ್ ಬಗ್ಗೆ ನಮ್ ಪಕ್ಸದ ಮುಖಂಡರು  ಬೋ ಆಸೆ  ಮಡಿಕಂಡವ್ರೆ , ಸತಾಯ ಗತಾಯ  ಇಲ್ಲಿ ಗೆಲ್ಲೇ ಬೇಕೂ ಅಂತಾ ಏಳವ್ರೆ  ನಿಮ್ಮ ನೆಮ್ಕಂಡು  ಆಯ್ತು ಅಂತಾ  ಒಪ್ಕಂಡ್ ಬಂದಿವ್ನಿ , ಏನ್   ಯೋಳ್ರಪ್ಪಾ , ಹೆಂಗ್ ಮಾಡೂದು "?, ಅಂತಾ ಕಿಡಿ ಹಚ್ಚಿ ಬಿಟ್ಟ .

ಸಭೆಯಲ್ಲಿ ಗುಸು ಗುಸು  ಪಿಸು ಪಿಸು ಶುರು ಆಯ್ತು,  "ಏನ್ ಎಲೆಕ್ಸನ್ನು ಮಾಡಾಕಾಯ್ತದೆ ,  ರೇಟು ಏರ್ಕಂಡ್ ಕೂತದೆ, ಕುಂತರೂ ಕಾಸು ನಿಂತರೂ ಕಾಸು , ಬೊ  ಕಸ್ಟಾ ಕಣಪ್ಪಾ , ಸವಾಸ, ಅದ್ಸರೀ  ಏನಂತೆ , ನಮ್ಮೂರ ಬಜೇಟು , ದುರಾಸೆ ಪುರದಲ್ಲಿ  ಹತ್ರ ಹತ್ರ   ಲಕ್ಶ   ಓಟವೇ ," ಅಂತಾ ಗಣೇಸ ಬಾಯ್ಬುಟ್ಟ .

ಗೊಣ್ಣೆ  ಗೋಪಿ ಮಾತಾಡಿ , ಲೇ  ದುರಾಸೆ ಪುರದಲ್ಲಿ ಎಲೆಕ್ಸನ್ ಗೆ ಅಂತಾ ಎಲ್ಲಾ ಯವಸ್ತೆ ಆಗದೆ , ಆ ದುಗ್ಗಾಣಪ್ಪ ಅವ್ರು   ತೀರ್ಥ  ಯವಸ್ತೆ  ಮಾಡ್ತೀನಿ ಅಂತಾ  ಯೆಳವ್ರೆ , ಪ್ರಚಾರಕ್ಕೆ ಅಂತಾ  ಹೊಸ ಬಟ್ಟೆ ಹೊಲಿಸಿಕೊಳ್ಳಲು  ನಮ್  ಗುಂಪಿನ ಎಲ್ರುಗೂ ತಲಾ ಐದೈದು ಸಾವ್ರಾ  ಕೊಟ್ಟವ್ರೆ, ಉಳಿಕೆ ಖರ್ಚು  ಏನ್ ಬತ್ತದೆ ಅಂತಾ ನಮ್ಮನೆ  ಕೇಳ್ತಾ ಅವ್ರೆ , ಅದ್ಕೆ ನಾನು ನಮ್ ಕಾರ್ಯಕರ್ತರ ಕೇಳಿ ಯೋಳ್ತೀನಿ  ಅವರಿಗೆ  ಯೋಳಿ ಬಂದಿವ್ನಿ  ,  ಇವತ್ತು  ನಿಮ್ಮೆಲ್ರ  ಕರ್ದೀವ್ನಿ ,  ಅದೇನ್ ಯೋಳ್ರಪ್ಪಾ  ಈಗ . ಅಂದು  ಎಲ್ಲರ ಕಡೆಗೆ  ನೋಡಿದ .

ಅಲ್ಲೇ ಇದ್ದಾ  ಕ್ಯಾತ  ,  ಅಲ್ಲಾ ಕಣಣ್ಣಾ , ಅವ್ರಿಗೆ  ಗೊತ್ತಿಲ್ವೆ, ಖರ್ಚು ಎಂಗದೆ ಅಂತಾ , ನಮ್ ದುರಾಸೆ ಪುರ ಬಾಳ  ದೊಡ್ಡ ಊರು,  ಸುಮಾರು   ಒಂದು ಲಕ್ಸ  ವೋಟವೆ,  ಮನೆ ಮನೆ  ಸುತ್ತಿ  ಬಿಸ್ಲಲ್ಲಿ   ಎಲ್ಲಾ  ಜನಗಳ್  ತಾವ್ ಓಟ್  ಕೇಳೂಕ್  ಓದ್ರೆ ,  ಕೆಲವ್ರು , ಏನ್ ಕೊಟ್ಟೀರಿ ಅಂತಾರೆ . ಆಗ್ಲೇ "ದಗಲ್ಬಾಜಿ " ಪಕ್ಸದವ್ರು ,  ಜನಗಳ್ಗೆ  ಪರಸಾದ ತೀರ್ಥ ಕೊಡೂಕೆ , ರೆಡಿ ಆಯ್ತಾವ್ರೆ , ಇನೂ ಎಲೆಕ್ಸನ್  ಯಾವತ್ತೂ ಅಂತಲೇ ಗೊತ್ತಿಲ್ಲಾ, ಆಗ್ಲೇ ಎಲ್ಲರ ಮನೆ ಗೆ ಅವರ ಪಕ್ಸದ ಬಾವುಟದ ಜೊತ್ಗೆ   ಐನುರ್ ರುಪಾಯಿ   ಕೊಟ್ಟವರಂತೆ , ಅದ್ಕೆ ಮೆಗಲ್ ಕೇರಿ  ಜನ  ಗದ್ದೆ ಕೆಲಸಕ್ ಬರಾಕಿಲ್ಲಾ ಅಂತಾ  ಕೂತವೆ . ಇನ್ನು ನಾಮು ಅವರ ಸರೀ  ಮಾಡ್ಕದೆ  ಓದ್ರೆ , ಇಪ್ಪತ್ಸಾವ್ರಾ ವೋಟು  ನಾಮ , ಆಯ್ತದೆ .  ಅದ್ಕೆ  ಮ್ಯಾಲ್ನವರ್ಗೆ   ಯೋಳಿ ಸರಿಯಾಗಿ  ಬಜೆಟ್  ಕೊಡೂಕೆ , ಅಂದು ಮಾತನ್ನು ಹೊಸ ದಿಕ್ಕಿಗೆ ತಿರುಗಿಸಿದ.

ಈ ಮಾತನ್ನು ಕೇಳಿ  ಗೊಣ್ಣೆ ಗೋಪಿ   ಬೆಚ್ಚಿ ಬಿದ್ದ ,  ಇವರ ಪಕ್ಷಕ್ಕಿಂತ  ಬೇರೆ ಪಕ್ಷದವರು  ಬೇಗ ಶುರು ಮಾಡಿದ್ರೆ  ಜನಗಳ  ಮನ ಒಲಿಕೆ  ಕಷ್ಟಾ ಆಗುತ್ತಿತ್ತು. ಅದಕ್ಕೆ ನಿನ್ನೆ ತಾನೇ ಇವನಿಗೆ   "ಕೋಡಂಗಿ " ಪಕ್ಸದ ಮುಖಂಡ  ಕಪ್ಪೆ ಸ್ವಾಮೀ  ಇವನಿಗೆ  ಹತ್ತು ಲಕ್ಷದ  ಮುಂಗಡ ನೀಡಿದ್ದರು.  ಇದು ಇವರಿಗೆ ತಿಳಿದರೆ ನನ್ನ ಮಟ್ಟಾ  ಹಾಕ್ತಾರೆ ಅಂತಾ ತಿಳಿದು, ಯೋಚಿಸಿದವಂತೆ ನಾಟ್ಕಾ ಮಾಡಿ ಸ್ವಲ್ಪ ಹೊತ್ತು ಬಿಟ್ಟು ನೋಡ್ರಪ್ಪಾ,  ಇನ್ನೂ ಪಕ್ಸದವ್ರಿಂದ ಕಾಸ್ ಬಂದಿಲ್ಲಾ , ಆದ್ರೆ ಪಕ್ಸ್ದ  ಮರ್ವಾದೆ ಪಶ್ನೆ , ಅದ್ಕೆಯಾ  ನಾನು ಒಂದು ಪಿಲಾನ್  ಮಾಡಿವ್ನಿ  . ಎಂಗಾರು ಮಾಡಿ ನಮ್ಮ ಚಿಕಪ್ಪನ ತಾವು  ಎರಡು ಲಕ್ಷ ತತ್ತೀನಿ,  ಮೊದಲ್ನೇ  ಆಟ ನಂದೆ ಸುರು ಆಗ್ಲಿ. ಲೇ  ಗಣೇಸ  ನಮ್ಮೂರ ದ್ಯಾವ್ರ್ಗೆಪೂಜೆ  ಮಡಿಕಳುಮ ಕಲಾ  ,  ಆ ಪೂಜಾರಪ್ಪನ ಕರಿ  ಮೊದ್ಲು, ಬಂದವರೆಲ್ಲರಿಗೂ ಸೀ ಊಟ  ಮೊದ್ಲು ಆಕ್ಸಿ,  ಮುಂದಿನ ವಾರ  ಊರ್ ಒರ್ಗಿರೋ ದ್ಯಾವ್ರ ಪೂಜೆ ಮಡೀಕಂದು   ಎಲ್ರಿಗೂ ಬಾಡೂಟ  ಜೊತೆಗೆ  ಔಸ್ತಿ[ ಹೆಂಡಾ]    ಕೊಡುಮ , ಅಂತಾ ಹೇಳ್ದಾ,

ಹಾಗು ಹೀಗೂ ಮುಗಿದ ಸಭೆಯಲ್ಲಿ  ಪಕ್ಸದಿಂದ ಹೆಚ್ಚಿನ ಕಾಸು ಪಡೆಯಲು ತೀರ್ಮಾನ ಆಯ್ತು. ಮಾರನೆಯ ದಿನ ದೇವಾಲಯದ  ತಮ್ಮಡಪ್ಪ ಗಳನ್ನೂ ಕರೆಸಿ, ಅವರಿಗೆ ತಲಾ ಐದು ಸಾವಿರ ಕೊಟ್ಟ  ಗೊಣ್ಣೆ ಗೋಪಿ , ಸ್ವಾಮೀ ಪೂಜೆ  ಜೋರಾಗಿ ನಡೆಸಿ , ಅಲಂಕಾರ ಜೋರಾಗಿ ಇರಲಿ, ನಮ್ ಪಕ್ಸದ  ಮುಖಂಡರು  ಬತ್ತಾರೆ , ಊರಿನ ಮರ್ವಾದೆ  ಕಾಪಾಡೋ ಜಾವಾಬ್ದಾರಿ  ನಿಂದೆ ಅಂದಾ , ಮುಂದೆ ಇನ್ನೂ   ನಿಮಗೆ ಯವಸ್ತೆ ಮಾಡ್ತೀನಿ ,  ಹಾಲಲ್ಲಾದರೂ ಹಾಕಿ  ನೀರಲ್ಲಾದರೂ  ಹಾಕಿ ಅಂದು  ಅಡ್ಬಿದ್ದ .  ಖುಷಿಯಿಂದ ಹಣ ಪಡೆದ ಅವರು, ನೀವೇನು ಯೋಚನೆ ಮಾಡ್ಬ್ಯಾಡಿ ಗೋಪಣ್ಣ  , ಮುಂದಿನದು ನಾವ್ ನೋಡ್ಕತೀವಿ, ಬುಡಿ  ಅಂದರು .

ಮೊದಲನೇ ಸೀ ಊಟದ ಪೂಜೆಗೆ  "ಕೋಡಂಗಿ ಪಕ್ಸ" ದ ರಾಜ್ಯ ಮುಖಂಡರೆ  ದಾವಿಸಿ ಬಂದ್ರು,  ಬಂದ  ಮುಖಂಡರನ್ನು  ಅದ್ದೂರಿಯಾಗಿ ಮೆರವಣಿಗೆ ಮೂಲಕ  ,  ಇಸ್ಕೂಲ್  ಹೈಕಳ ಕೈಲಿ ಬ್ಯಾಂಡ್ ಭಾರಿಸುತ್ತಾ , ದೇವಾಲಯಕ್ಕೆ ಕರೆ ತಂದು  ದೇವರ ಮುಂದೆ ನಿಲ್ಲಿಸಿ  ದೊಡ್ಡ ಹಾರಾ ಹಾಕಿಸಿ , ಶಾಲು ಹೊದಿಸಿ,  ಸನ್ಮಾನ ಮಾಡಿ , ಸುಮಾರು ಇಪ್ಪತ್ತು ಸಾವಿರ ಜನರನ್ನು ಕರೆಸಿ  ಇವರ ಭಾಷಣ  ಕೇಳುವಂತೆ ಮಾಡಿದ್ದ .   ಅವತ್ತು ರಾತ್ರಿ ಅಲ್ಲೇ ಇದ್ದ  ಅತಿಥಿ ಗೃಹದಲ್ಲಿ  ಅದ್ದೂರಿಯಾಗಿ  ಬಾಡೂಟ ಹಾಗು ಎಣ್ಣೆ ಸಮಾರಾಧನೆ  ಮಾಡಿದ   ,   ಚುನಾವಣಾ ಘೋಷಣೆಗೆ ಮೊದಲೇ  ಗೊಣ್ಣೆ ಸಿದ್ದ ಮಾಡಿದ್ದ  ಸಿದ್ದತೆ ನೋಡಿ ಖುಷಿ ಪಟ್ಟ ಇವರು, " ಗೋಪಣ್ಣ  ಯೊಸ್ನೆ  ಮಾಡ ಬ್ಯಾಡ ಮೊದಲು  ಪಕ್ಸ ಗೆಲ್ಲಿಸು ಆಮೇಲೆ ನಿನ್ನ  ಸೂಕ್ತವಾಗಿ ಗೌರವಿಸುತ್ತೇವೆ  ಅಂದರು  ಜೊತೆಯಲ್ಲಿದ್ದವರಿಗೆ  ನೋಡ್ರಯ್ಯ   ಗೋಪಣ್ಣ ನಿಗೆ  ಬೇಕಾದ ಫಂಡ್ ಕೊಡಿ ಕಡಿಮೆ ಮಾಡ್ಬೇಡಿ" ಅಂತಾ ಫಾರ್ಮಾನ್ ಹೊರಡಿಸಿದರು .

ಮಾರನೆಯ ದಿನದಿಂದ ಗೊಣ್ಣೆ ಗೋಪಿ  ಆಟ   ಶುರು ಆಯ್ತು.ಎರಡು ಮೂರು  ದಿನ ಬಿಟ್ಟು  ದುರಾಸೆ ಪುರದ ಪಕ್ಕದಲ್ಲಿ  ಒಂದು ಚಿತ್ರದ ಶೂಟಿಂಗ್ ನಡೆಯುತ್ತಿತ್ತು, ಅಲ್ಲಿದ್ದ  ಪ್ರಖ್ಯಾತ ನಟಿ  ಮೋಹಿನಿ ಯನ್ನು ಭೇಟಿ ಮಾಡಿ  ಆಕೆ ನಡೆಸುತ್ತಿದ್ದ   ಸಂಸ್ಥೆಗೆ  ಸುಮಾರು ಮೂವತ್ತು ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿ,  ನಿಮಗೆ   ಸನ್ಮಾನ ಮಾಡ್ತೀನಿ ಅಂತಾ ಕರೆದು ಕೊಂಡು  ಬಂದು  ಊರ ತುಂಬಾ ಮೆರವಣಿಗೆ ಮಾಡಿಸಿ  ದೊಡ್ಡ ಕಾರ್ಯಕ್ರಮ ಮಾಡಿ ಊರವರ ಎದುರು ದೊಡ್ಡ ಮನುಷ್ಯನಂತೆ ಪೋಸ್ ಕೊಡುತ್ತಾ ಸಾಗಿದ,  ತನ್ನನ್ನು ವಿರೋಧಿಸುತ್ತಾ  ಇದ್ದ  ಕೆಲ ಊರ  ಹಿರಿಯರ ಕರೆದು ಮೋಹಿನಿ ಕೈಲಿ ಸನ್ಮಾನ  ಮಾಡಿಸಿ ಅವರನ್ನೂ ಬುಟ್ಟಿಗೆ ಹಾಕಿಕೊಂಡ ,  ನಂತರ  ತಾನೇ ಮುಂದೆ ನಿಂತು ಮೋಹಕ ನಟಿ ಮೋಹಿನಿ ಗೆ ಸನ್ಮಾನಮಾಡಿ ಅವಳಿಗೊಂದು ದುಭಾರೀ ಸೀರೆ, ಶ್ರೀ  ಗಂಧದ  ಮೂರ್ತಿ ನೀಡಿದನು,  ಅದನ್ನು ಸ್ವೀಕರಿಸಿದ ನಟಿ ದೇಣಿಗೆ ಪಡೆದ ಮುಲಾಜಿಗೆ  ಒಳಪಟ್ಟು   ನಮ್ಮ ಗೊಣ್ಣೆ ಗೋಪಿಯನ್ನು ಹೀರೋ ಎಂಬಂತೆ  ಹೊಗಳಿ  ಆಗಸ  ತೋರಿದಳು  . ಅವಳ ಜೊತೆ ಹಲ್ ಕಿರಿಯುತ್ತಾ  ಫೋಟೋ ತೆಗೆಸಿಕೊಂಡ  ಗೊಣ್ಣೆ ಗೋಪಿ   ಇದೆಲ್ಲವೂ ಸರಿಯಾಗಿ ಪತ್ರಿಕೆಗಳಲ್ಲಿ ಬರುವಂತೆ ಮಾಡಲು   ಅಲ್ಲಿನ  ಸ್ಥಳೀಯ  ಪೇಪರ್  ಏಜೆಂಟ್  ಗಳೊಂದಿಗೆ ವಿಶ್ವಾಸದಿಂದ ಇದ್ದ.

 ಚುನಾವಣಾ ಘೋಷಣೆಗೆ ಇನ್ನೇನು ಸಮಯ ಹತ್ತಿರ ಆಗುತ್ತಿತ್ತು, ತನ್ನ ಅಂತಿಮ ಟ್ರಂಪ್ ಕಾರ್ಡ್ ಊರ ಹೊರಗಿನ ದ್ಯಾವ್ರ ಪೂಜೆ ಸಿದ್ದತೆ  ಶುರು ಮಾಡಿದ, ಪೂಜೆಯ ದಿನ ದುರಾಸೆ ಪುರದ ತುಂಬೆಲ್ಲಾ  ಬಾಡೂಟದ ಘಮ ಘಮ  ಸುವಾಸನೆ ಹರಡಿ  ಹಲವು ಮುಖಂಡರು ಅವರ ಪಟಾಲಂ ಗಳನ್ನೂ ಎಳೆದು ತಂದಿತ್ತು . ಜೊತೆಗೆ  ಹಿಂದಿನ ದಿನ ಬಂದಿದ್ದ ತೀರ್ಥದ ಲಾರಿ  ಹಲವರ  ನಿದ್ದೆ ಕೆಡಿಸಿತ್ತು .   ಮಾರನೆ ದಿನ ದೇವರ ಪೂಜೆ ಅದ್ದೂರಿಯಾಗಿ   ಮಾಡಲಾಯಿತು  ,   ಬಂದಿದ್ದ ಸಾವಿರಾರು ಜನರಿಗೆ ಮಧ್ಯಾಹ್ನ   ಬಾಡೂಟ ಮಾಡಿಸಿ,   ಕೆಲವರಿಗೆ ಎಣ್ಣೆ ಹೊಡೆಸಿ,   ತೃಪ್ತಿ ಪಡಿಸಿದ್ದ  ರಾಜಧಾನಿಯಿಂದ  ಬಂದಿದ್ದ  ಆರ್ಕೆಸ್ಟ್ರಾ  ತಂಡದವರು   ಜನರನ್ನು ರಂಜಿಸುತ್ತಿದ್ದರು, ಇತ್ತಾ  ನಮ್ಮ ಗೊಣ್ಣೆ ಗೋಪಿ ತನ್ನ ಎಲೆಕ್ಸನ್  ಬಜೆಟ್ ತಯಾರಿ ನಡೆ ಸಿದ್ದ. ಇಷ್ಟೆಲ್ಲಾ  ಆಗ್ತಾ ಇದ್ದಂತೆ ಚುನಾವಣಾ ದಿನಾಂಕ  ಘೋಷಣೆ ಆಗಿಬಿಟ್ಟಿತು , ಎಲ್ಲ ಪಾರ್ಟಿಯವರು ಮೈಕೊಡವಿ ಎದ್ದು  ಕುಂತರು .

 ಚುನಾವಣಾ ಪೂರ್ವದಲ್ಲೇ  ತನ್ನದೇ ಆದ ರೀತಿಯಲ್ಲಿ ಪ್ಲಾನ್ ಮಾಡಿ ತನ್ನ ಪಕ್ಷದವರ ಸಹಕಾರ ಪಡೆದು ದುರಾಸೆಪುರದಲ್ಲಿ  ತನ್ನದೇ ಆದ  ಅಲೆ ಏಳುವಂತೆ  ಮಾಡಿದ್ದ, ಊರಲ್ಲಿ ಎಲ್ಲರ ಬಾಯಲ್ಲೂ ನಮ್ಮ ಗೊಣ್ಣೆ ಗೋಪಿ ಬಗ್ಗೆಯೇ ಮಾತುಗಳು, ಹೀಗಾಗಿ  ದುರಾಸೆ ಪುರದಲ್ಲಿ  ಗೊಣ್ಣೆ ಗೋಪಿ ಬೆಂಬಲ ಪಡೆದ ಅಭ್ಯರ್ಥಿ ಗೆಲ್ಲೋದು ಗ್ಯಾರಂಟೀ ಅನ್ನೋದು  ಮಾತಾಯ್ತು. ಈ ನಡುವೆ  ನಮ್ಮ ಗೊಣ್ಣೆ ಸಿದ್ದನ ಸೆಳೆಯಲು ಹಲವು ಪಾರ್ಟಿಗಳು ಮುಂದಾದವು,  ಎಲ್ಲರಿಗೂ  ಸಮಾಧಾನದ  ಉತ್ತರ ಹೇಳಿ, ತನ್ನ ಬೆಳೆಸಿದ ಪಾರ್ಟಿಯ  ಮುಖ್ಯಸ್ತರನ್ನು ಭೇಟಿ  ಮಾಡಲು ಹೊರಟ .

ಕೋಡಂಗಿ ಪಕ್ಸದ  ಮುಖಂಡರು ಇವನನ್ನು  ನಗುಮುಖದಿಂದ  ಸ್ವಾಗತಿಸಿ   ,  ಗೋಪಣ್ಣ  , ದುರಾಸೆ ಪುರದಲ್ಲಿ ನಮ್  ಪಕ್ಸದ  ಕ್ಯಾಂಡಿಡೇಟ್  ಗೆಲ್ಲಿಸ ಬೇಕೂ ಕಣಪ್ಪಾ, ನೀನು ಬಹಳ ಚೆನ್ನಾಗಿ  ಆಗ್ಲೇ ತಯಾರಿ ಮಾದ್ಕಂಡಿರೋದು  ಬಹಳ ಒಳ್ಳೆದಾಯ್ತು , ಅಂದ್ರು , ಆದ್ರೆ ಹಣದ ವಿಚಾರವೇ ಬರ್ತಿಲ್ಲಾ, ಗೊಣ್ಣೆ ಗೋಪಿ   ಎಲಾ  ಎಲಾ ,  ಇವಯ್ಯ  ಕಾಸಿನ ಇಚಾರ ಎತ್ತುತ್ತಿಲ್ಲವಲ್ಲಾ ಅಂತಾ  ಯೋಚಿಸಿ,  ಅಯ್ಯೋ ಬುಡಿ ಸಾ  ಅದೆಲ್ಲಾ ಏನ್ ಮಹಾ , ಇನ್ನೂ ಮಾಡೋದು  ಬಾಳ  ಐತೇ , ಅಂದಾ,  ಏನಾದ್ರೂ ಮಾಡಪ್ಪಾ,  ಆದ್ರೆ  ನಮ್ ಪಕ್ಸ ಗೆಲ್ಲೋ ಹಾಗೆ ಮಾಡು ಅಂದು ಮುಖಂಡರು .  ಇದ್ಯಾಕೋ ಸರಿಯಿಲ್ಲಾ ಅನ್ನಿಸಿ ತಾನೇ ಹಣದ ಬಗ್ಗೆ ಪ್ರಸ್ಥಾಪ  ಮಾಡಿದ .

ಸಾ ನಮ್ ಲೀಡ್ರೂ  ಕಪ್ಪೆ ಸ್ವಾಮಿಗಳು  ಆಶೀರ್ವಾದ  ಮಾಡಿದ್ದರಿಂದ  ಇಲ್ಲಿಗಂಟಾ ಏಗ್ದೆ , ಇನ್ಮುಂದೆ ಬೋ ಕಷ್ಟಾ  ಸಾ, ಆಗಾಕಿಲ್ಲ. ಕೊಟ್ಟ ಹತ್ತು ಲಕ್ಸ ನಮ್ಮದುರಾಸೆ ಪುರಕ್ಕೆ ಹತ್ತು ದಿನಕ್ಕೆ  ಸಾಕಾಲಿಲ್ಲ, ನಾನೇ ಅಲ್ಲಿ ಇಲ್ಲೇ ಸಾಲ ಸೋಲ ಮಾಡಿ ಪಕ್ಸದ ಮಾನಾ ಕಾಪಾಡಕ್ಕೆ   ಹತ್ತು ಲಕ್ಸ  ಹಾಕಿವ್ನಿ . ದಯವಿಟ್ಟು, ಮೊದ್ಲು ನಂ ಹತ್ತ ಲಕ್ಶ ಕೊಡಿ,  ಆಮ್ಯಾಕೆ ನಿಮಗೆ ಗೊತ್ತಲ್ಲಾ  ಎಲೆಕ್ಸನ್   ಇನ್ನು   ಒಂದು ತಿಂಗಾ  ಅದೇ ಅಲ್ಲಿಗಂಟಾ  ಜನಗಳ ನಮ್ಮ ಕೈಯ್ಯಲ್ಲಿ ಮಾಡಿಕೋ ಬೇಕು , ಇಲ್ಲಾಂದ್ರೆ  ದಗಲ್ ಬಾಜಿ ಪಕ್ಸದವರು  ನಮ್ ಪಿಲಾನ್ ಉಲ್ಟಾ  ಮಾಡ್ತಾರೆ ಅಷ್ಟೇಯ  ಅಂದ.

ಎಷ್ಟು ಬೇಕಾಗುತ್ತೆ  ಗೋಪಣ್ಣ  ದುರಾಸೆ ಪುರದ ಎಲೆಕ್ಸನ್ ಗೆ?  ಅಂದ್ರು ಮುಖಂಡರು, ನಿಮಗೆ ಗೊತ್ತಲ್ಲಾ ಸಾ,  ಇನ್ನು ಬೊ ಕೆಲ್ಸಾ ಆಗ್ಬೇಕ್  ಅಂದಾಜು   ಎಲ್ಡ್ ಕೋಟಿ  ಬಜೆಟ್ ಕೊಡಿ , ಉದ್ದಾ ತುಂಡಾ ಆಮ್ಯಾಕೆ ನೋಡುವಾ , ಅಂದಾ,

ಬೆಚ್ಚಿ ಬಿದ್ದ  ಮುಖಂಡರು,  ಏನಪ್ಪಾ ಗೋಪಣ್ಣ , ಭಾರಿ ದುಬಾರಿ ಆಯ್ತು ನಿನ್ನ ಬಜೆಟ್ , ನಮ್ ಪಕ್ಸದ ಮುಖಂಡರು  ದುರಾಸೆ ಪುರಕ್ಕೆ ಅಂತಾ  ಐವತ್ತು ಲಕ್ಷ  ಬಜೆಟ್ ನಿಗದಿ ಮಾಡಿದ್ದಾರೆ , ನೀನು ನೋಡಿದ್ರೆ ಆಕಾಶ  ತೊರಿಸುತ್ತಿ  ಅಂದ್ರು .

ಗೊಣ್ಣೆ ಗೋಪಿ  :-) ಓ ಬುಡಿ ಇದಾಗದ್ ಕೆಲ್ಸಾ , ಯಾಕೋ  ಬಜೆಟ್ ಸರಿಯಾಗಿ   ಕೊಡೋಕೆ  ಹಿಂಜರಿತಾ ಇದ್ದೀರಿ,  ಮ್ಯಾಲ್ನವರ್ ತಾವ್ ನಾನೇ ಮಾತಾಡ್ತೀನಿ ಅಂದಾ ,

ಇವನು ಮೇಲಿನವರ ಜೊತೆ ಮಾತಾಡಿದ್ರೆ  ನನ್ನ ಬಣ್ಣ ಬಯಲಾಗುತ್ತೆ ಎಂದು ಅಂಜಿದ  ಮುಖಂಡರು , ಒಂದು ನಿಮಿಷ ಇರು  ಸಿದ್ದಣ್ಣ, ನಾನೇ ನಿನ್ನ ಪರವಾಗಿ ಮೇಲಿನವರ ಜೊತೆ ಮಾತಾಡುತ್ತೇನೆ ಅಂದು ಫೋನ್ ಮಾಡಿದಂತೆ ನಟಿಸಿ , ನೋಡಪ್ಪಾ  ಮೇಲಿನವರನ್ನು ಸಮಾಧಾನ ಮಾಡಿ  ನಿನಗೆ ಒಂದು ಕೋಟಿ  ಕೊಡಿಸ ಬಲ್ಲೆ ಅಷ್ಟೇ  ಅಂದ್ರು .

ಒಗ್ಲಿ ಬುಡಿ ಸಾ ನಮ್ ನಮ್ಮಲ್ಲಿ ಯಾಕೆ ಜಗಳಾ ,  ನಮ್ ಹೈಕ್ಳಾ , ಒಂದು ಮಾತು ಕೇಳ್ತೀನಿ ಅವು ಹೂ ಅಂದ್ರೆ  ಸರಿ ಇಲ್ಲಾಂದ್ರೆ  , ತಪ್ಪು ತಿಳಕಾ ಬ್ಯಾಡಿ , ಅಂದಾ ಗೊಣ್ಣೆ ಗೋಪಿ . ಹೊರಡಲು  ಎದ್ದುನಿಂತಾ ...!

ಇವನ ಮಾತು ಬೇರೆ ದಿಕ್ಕಿಗೆ ತಿರುಗಿದ್ದನ್ನು ಕೇಳಿ ಮುಖಂಡರು  ಏನು  ಗೋಪಣ್ಣ , ಯಾಕಪ್ಪಾ  ಕೋಪ ಮಾಡ್ಕಂಡೆ  ಕುಂತ್ಕೋ  ಮಾರಾಯ  ಮಾರಾಯ  ಅಂದು, ಇದ್ಯಾಕೆ  ಗೋಪಣ್ಣ   ಏನೋ ಹೊಸ ಮಾತು  ಬರ್ತಾ ಇದೆ ಇವತ್ತು ಅಂದರು .

ಹೂ ಸಾ  ಕಮಂಗಿ ಪಕ್ಸದ ಕೆಲವರು  ಆಗ್ಲೇ ಬಂದವರೆ  ದುರಾಸೆ ಪುರದಲ್ಲಿ ಅವರ   ಕ್ಯಾಂಡಿಡೇಟ್   ಪರವಾಗಿ ಬಂದ್ರೆ  ಐದು ಕೊಡ್ತೀನಿ ಅಂತಾ ಅವ್ರೆ , ಆದ್ರೆ ನಮ್ಮ ಪಕ್ಸದ  ಮಾನ ಮುಖ್ಯ ಅಲ್ವೇ . ಅದಕ್ಕೆ ತಮ್ ತವ ಬಂದು ಈ ಬಿಕ್ಸೆ ಬೇಡ್ತಾ ಇವ್ನೀ  . ಅಂದಾ ಗೊಣ್ಣೆ ಗೋಪಿ.

ಇದ್ಯಾಕೋ ಕೈ ಕೊಡೊ ಅಸಾಮಿ ಅಂದುಕೊಂಡ  ಮುಖಂಡರು , ಅಲ್ಲಾ ಗೋಪಣ್ಣ, ನಿಮ್ಮಂತಾ  ನಿಷ್ಠಾವಂತರನ್ನು   ನಮ್ಮ  ಕೋಡಂಗಿ ಪಕ್ಷ ಕಳೆದು ಕೊಳ್ಳೋಕೆ  ರೆಡಿ ಇಲ್ಲಪ್ಪಾ,  ಅದರಲ್ಲೂ ನೀನು ನಮ್ಮ ಪಕ್ಸದ  ಆಸ್ತಿ ಇದ್ದಹಾಗೆ ,  ತಡಿ ಈಗಲೇ ಇದನ್ನು ಇತ್ಯರ್ಥ   ಮಾಡೋಣ, ಅಂತಾ,  ಗೊಣ್ಣೆ ಗೋಪಿಯನ್ನು   ಒಳ ಕೋಣೆಗೆ ಕರೆದು ಕೊಂಡು  ಹೊದ್ರು.






ಸಧ್ಯ  ನಮ್ ಪರ್ಪಂಚದಲ್ಲಿ ಎಲೆಕ್ಸನ್  ಇಲ್ಲಾ 



ಒಳಗಡೆ ಡೀಲ್  ಶುರು  ಆಯ್ತು, "ನೋಡು ಗೋಪಣ್ಣ  ನೀನೂ ಬಹಳ ವರ್ಷದಿಂದ ಪಕ್ಷಕ್ಕಾಗಿ ದುಡಿದೆ , ನಿನ್ನ ಬಗ್ಗೆ ನನಗೂ ಕನಿಕರ ಇದೆ,  ಒಂದು ಕೆಲ್ಸಾ ಮಾಡು  ಇವತ್ತೇ ರಾಜ್ಯ ಮುಖಂಡರನ್ನು ಇಬ್ಬರೂ ಭೇಟಿ ಯಾಗೋಣ , ನೀನು ದುರಾಸೆ ಪುರದ ಎಲೆಕ್ಸನ್ ಬಜಟ್  ಹತ್ತು  ಕೋಟಿ  ಕೇಳು,  ಹಾಗು ಹೀಗೂ ಎಳೆದಾಡಿ  ಏಳು ಕೋಟಿಗೆ  ನಿಲ್ಲೋಹಾಗೆ ನಾನು ನೋಡ್ಕೋತೀನಿ , ಅದರಲ್ಲಿ  ಮೂರು ಖರ್ಚು ಮಾಡು  ಉಳಿದ ನಾಲ್ಕರಲ್ಲಿ   ಇಬ್ಬರೂ ಸಮವಾಗಿ ಹಂಚಿಕೊಳ್ಳೋಣ ," ಏನಂತೀಯೇ ಅಂದ್ರು .

ಈಗ ಬೆಚ್ಚಿ ಬೀಳುವ ಸರದಿ  ಗೊಣ್ಣೆ ಸಿದ್ದನದಾಯಿತು,  ಯೋಚಿಸಿ, ತನ್ನ ಒಪ್ಪಿಗೆ ಸೂಚಿಸಿದ, ಅಂದು ಸಂಜೆಯೇ ರಾಜ್ಯ ಮುಖಂಡರ ಬಳಿ  ಇಬ್ಬರೂ  ತೆರಳಿ , ದುರಾಸೆ ಪುರದ ಎಲೆಕ್ಸನ್ ಬಜೆಟ್  ಏಳುಕೋಟಿಗೆ  ನಿಗದಿ ಪಡಿಸಿಕೊಂಡರು . ಚುನಾವಣಾ ಹಣಾಹಣಿ   ಆಯಿತು, ನಮ್ಮ ಗೊಣ್ಣೆ ಗೋಪಿ ಎಲೆಕ್ಸನ್ ಗಾಗಿ ಸ್ಥಳೀಯ  ಗುತ್ತಿಗೆದಾರರು, ವ್ಯಾಪಾರಿಗಳು, ಮುಂತಾದ ಕುಳ ಗಳಿಂದ  ಹಣ ಸಂಗ್ರಹಿಸಿ, ಅದ್ದೂರಿ ಚುನಾವಣೆ  ತಯಾರಿ ಮಾಡಿದ,  ಗೊಣ್ಣೆ ಗೋಪಿಯ ಶಿಷ್ಯ ಕೋಟಿ ಪ್ರತಿ ದಿನ  ಇಂತಿಷ್ಟು ಹಣ ಪಡೆದು   ಹಣದ ಹೊಳೆಯಲ್ಲಿ ತೇಲಾಡಿದರು ಬಡ ಜನರು , ಕೂಲಿಕಾರರು,  ಮಧ್ಯಮ ವರ್ಗದವರು  ಗೊಣ್ಣೆ ಗೋಪಿಯ  ಎಲೆಕ್ಸನ್ ಕೊಡುಗೆ ಮುಲಾಜಿಗೆ ಬಿದ್ದು ಮತ ಚಲಾಯಿಸಿದರು , ದೊಡ್ಡ ಮನುಷ್ಯರು  ಎಲೆಕ್ಸನ್ ನಲ್ಲಿ ಮತ ಹಾಕದೆ  ತಮ್ಮ ಸಿರಿವಂತಿಕೆ ಗತ್ತು ತೋರಿದರು, ಚುನಾವಣಾ ಫಲಿತಾಂಶ ನಿರೀಕ್ಷೆಯಂತೆ  ಬಂದು  ಕೋಡಂಗಿ ಪಕ್ಸದ  ಕ್ಯಾಂಡಿಡೇಟ್  ಗೆದ್ದರು .


ಪ್ರಜಾಪ್ರಭುತ್ವದ  ಮೆರವಣಿಗೆ 



ನಮ್ಮ ಗೊಣ್ಣೆ ಗೋಪಿ ಎಲೆಕ್ಸನ್ನು ಗೆದ್ದ ಖುಷಿಯಲ್ಲಿ  ನಗು ನಗುತ್ತಾ , ತನ್ನ ಮನೆಯಲ್ಲಿ  ಈ ಎಲೆಕ್ಸನ್ನಿನಲ್ಲಿ  ತನಗೆ ಬಂದ  ಲಾಭ ಲೆಕ್ಕಾ ಹಾಕಿದ,  ಸುಮಾರು  ಆರು ತಿಂಗಳಲ್ಲಿ  ಖರ್ಚು ಕಳೆದು ಸುಮಾರೋ  ಮೂರು  ಕೋಟಿ  ಲಾಭ ಬಂದಿತ್ತು,   ಅಲ್ಲೇ ಇದ್ದ ಅವರ ಅಪ್ಪನ ಫೋಟೋ ಮುಂದೆ  ಬಂದು ಹಣ ತೋರಿಸುತ್ತಾ ,

'' ನೋಡಿದ್ಯಾ ಅಪ್ಪಾ,  ನೀನು ಬದುಕಿರೋವಾಗ , ನನ್ನನ್ನು ಸರಿಯಾಗಿ ಓದಲಿಲ್ಲಾ, ಅಂತಾ  ಮನೆಗೆ  ಬಂದವರ ಎದುರಿಗೆ ಅವಮಾನ ಮಾದುತ್ತಿದ್ದೆ.  ಈಗ ನೋಡು ಹತ್ತನೇ ಕಿಲಾಸ್   ಡುಮ್ಕಿ  ಹೊಡೆದ ಮಗ  ಕೇವಲ ಆರು ತಿಂಗಳಲ್ಲಿ  ಮೂರು ಕೋಟಿ  ಸಂಪಾದನೆ ಮಾಡವ್ನೆ ,  ಇನ್ನು  ನಮ್ ಸರ್ಕಾರ ಬತ್ತದೆ ನಂದೆ ದುನಿಯಾ , ತಿಳಕಾ , ಒಗ್ಲಿ ಬುಡು ಅಪ್ಪಾ  ನಿನ್ ಎಸ್ರಲ್ಲಿ  ಒಂದು ಕಲ್ಯಾಣ ಮಂಟಪ  ಕಟ್ಟುಸ್ತೀನಿ  ಬುಡು ''ಅಂತಾ ಹೇಳಿ  ಭಕ್ತಿ ಯಿಂದ ಕೈ ಮುಗಿದ. ಫೋಟೋದ ಒಳಗಿಂದ  ಗೊಣ್ಣೆ ಗೋಪಿಯ     ಪಿತಾಶ್ರೀ ಹಿಕ್ಮತ್ತಯ್ಯ ಅಸ್ತು ಅಸ್ತು ಅನ್ತಿದ್ದ.ಇತ್ತ ಪ್ರಜಾ ಪ್ರಭುತ್ವ  ಸುಸ್ತೂ ಸುಸ್ತೂ  ಅಂತಿತ್ತು .