Tuesday, October 7, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......09 ಯಕ್ಷಲೋಕದೊಳಗೆ ಹೊಕ್ಕಿಬಂದೆ ನಾನು....!!

ಬನ್ನಿ ಟಿಕೆಟ್ ಕೊಳ್ಳೋಣ 





   ಹಿಂಡುಮನೆಯಿಂದ  ನಮ್ಮ ಪಯಣ  ಹೊರಟಿದ್ದು   ಸಿದ್ದಾಪುರ ತಾಲೂಕಿನ  ದೇವಿಸರ ಗ್ರಾಮದತ್ತ ...... !  ದೇಹವು ಬೆಳಗ್ಗಿನಿಂದ   ಧಣಿದು  ಇನ್ನು  ಸಾಧ್ಯವಿಲ್ಲಾ  ಎನ್ನುವ ಹಂತಕ್ಕೆ ಬಂದಿತ್ತು,  ನಮ್ಮ ಪಯಣ  ಪ್ರಕಾಶಣ್ಣ  ಹುಟ್ಟೂರ   ಕಡೆಗೆ ಸಾಗಿತ್ತು,  ಮನೆ ತಲುಪಿದ ತಕ್ಷಣ  ಬಹಳ ಬೇಗ ಹಾಸಿಗೆ ಸೇರಿ ನಿದ್ದೆ ಹೊಡೆಯುವ  ಪ್ಲಾನ್ ಹಾಕುತ್ತಿದ್ದೆ ಮನದಲ್ಲಿ ..... ! ಅರೆ ಊರು ಬಂದೆ ಬಿಟ್ಟಿತು . ........... !  




ಮನೆಯಲ್ಲಿ ಎಲ್ಲರ ಪ್ರೀತಿಯ ಸ್ವಾಗತ ಸಿಕ್ಕಿತು , ಊಟ ಆಯಿತು  , ಮಲಗುವ ಸಿದ್ದತೆ  ನಡೆದಿತ್ತು, ಪ್ರಕಾಶಣ್ಣ ನ ಅಣ್ಣ  ನಾಗೇಶಣ್ಣ  ಮಾತಿನ ನಡುವೆ ಶಿರಸಿಯಲ್ಲಿ ಯಕ್ಷಗಾನ ಇರುವುದಾಗಿ ತಿಳಿಸಿದರು , ನನ್ನ ಕಡೆ ನೋಡಿದ  ಪ್ರಕಾಶಣ್ಣ  ..... ಬಾಲಣ್ಣ  ಅಂದ್ರೂ  ಅರ್ಥ ಆಯಿತು,  ಸರಿ ಎಸ ಅಂದೇ , ಯಕ್ಷಗಾನದ  ಗಂಧ ಗಾಳಿ ಇಲ್ಲದ  ನಾನು  ,ಈ ಪ್ರಕಾಶ್ ಹೆಗ್ಡೆ  ನಿದ್ದೆ ಮಾಡಲು ಬಿಡದೆ  ಯಕ್ಷಗಾನ  ನೋಡಲು  ಕರೆದೊಯ್ಯುತ್ತಿರುವ ಬಗ್ಗೆ  ಮನದಲ್ಲಿ  ಬೈದುಕೊಂಡೆ , ಆದ್ರೆ  ನನ್ನ ಕಳ್ಳ  ಮನಸು  ಸರಿ ನಡಿಯಪ್ಪ  ಇದು ಒಂದು ಅನುಭವ ಇರಲಿ ಅಂತಾ  ಆಸೆ ಹುಟ್ಟಿಸಿತ್ತು, ಅದಕ್ಕೆ ನಮ್ಮ ಕಾರಿನ ಸಾರಥಿ  ಸಾಥ್ ನೀಡಿದ . ನಾನು, ಪ್ರಕಾಶ್ ಹೆಗ್ಡೆ, ನಾಗೇಶಣ್ಣ  , ಹಾಗು ನಮ್ಮ ಕಾರಿನ ಸಾರಥಿ  ಯಕ್ಷಗಾನ ನೋಡಲು ಹೊರಟೆವು, 









                                             ಯಕ್ಷಲೋಕ



ಯಕ್ಷಗಾನದ  ನೋಟ 


ಅರೆ  ಯಕ್ಷಗಾನ  ಅಂದ್ರೆ ಏನೂ ಅಂತಾ  ನನಗೆ ಖಂಡಿತಾ  ಗೊತ್ತಿರ್ಲಿಲ್ಲ , ಬಹುಷಃ  ನಾನು ಯಕ್ಷಗಾನ  ಅಂತಾ ಮೊದಲು ಕಂಡಿದ್ದು,  ನಾ ನಿನ್ನ ಮರೆಯಲಾರೆ  ಚಿತ್ರದಲ್ಲಿ ಬರುವ ಒಂದು ಸನ್ನಿವೇಶದಲ್ಲಿ  , ಸರಿಯಾಗಿ ಅರಿವಿಲ್ಲದ ನಾನು  ಅದನ್ನು ಒಂದು  ಹಾಸ್ಯ ದ್ರುಶ್ಯವೆಂದು ಪರಿಗಣಿಸಿದ್ದೆ , ಆದರೆ  ಅರಿವು ಮೂಡುವ ಸಮಯ  ಬಂದಿತ್ತು . ಬನ್ನಿ ಯಕ್ಷಗಾನದ ಬಗ್ಗೆ ತಿಳಿಯೋಣ . 



ಹೌದು ಯಕ್ಷಗಾನದ  ಬಗ್ಗೆ ಅರಿಯುವ ಮನಸಾಗಿ ಮಾಹಿತಿ ಹುಡುಕಲು ತೊಡಗಿದೆ ಹಲವು ಗೆಜೆಟ್ ಗಳನ್ನೂ ಹೊಕ್ಕಾಗ ಯಕ್ಷಗಾನದ ಬಗ್ಗೆ ವಿಶೇಷ ಮಾಹಿತಿ ಸಿಕ್ಕಿತು , ಜೊತೆಗೆ ಯಕ್ಷಗಾನದ ಇತಿಹಾಸ ತೆರೆದುಕೊಂಡಿತು "ಯಕ್ಷಗಾನ " ಕಲೆಯು ಬಹು ಶತಮಾನಗಳಿಂದ ಬೆಳೆದುಬಂದ ಕಲೆಯಾಗಿದೆ , ಹಿಂದೆ ಇದನ್ನು ಬಯಲಾಟ , ಭಾಗವತರ  ಆಟ  ಎಂಬುದಾಗಿ ಕರೆಯಲಾಗುತ್ತಿತ್ತು . ಈ ಆಟಗಳು ಸಂಗೀತ ಪ್ರಧಾನ ಆಗಿದ್ದ ಕಾರಣ , ಹಾಗು ಸಂಗೀತ  ಉಪಕರಣಗಳು  ಬಹು ಮುಖ್ಯವಾಗಿ ಬಳಕೆಯಾಗಿ  ಹಾಡುಗಳಲ್ಲಿ  ಕಥೆಯನ್ನು  ಮುಂದುವರೆಸಲಾಗುತ್ತಿದ್ದ  ಈ ಕಲೆಯು  ಯಕ್ಷರ ಗಾನ ವೆಂದು ಜನರಲ್ಲಿ ಭಾವನೆ ಮೂಡಿ , ಈ ಕಲೆಗೆ ಯಕ್ಷಗಾನ  ಎಂಬ ಹೆಸರು  ಬಂದಿದೆ . ಭಾರತೀಯ  ಶಾಸ್ತ್ರೀಯ ಸಂಗೀತದ  ಜೊತೆಯಲ್ಲಿ  ತೆಲಗು ಸೀಮೆಯಲ್ಲಿ  "ಯಕ್ಕಲಗಾನ " ಎಂಬ  ಸಂಗೀತವೂ ಮಿಳಿತಗೊಂಡು  ಯಕ್ಷಗಾನ  ಕ್ಕೆ ಹೊಸ ರೂಪ ಕೊಟ್ಟಿತು .  ಯಕ್ಷಗಾನದ  ಮೊದಲ ಪ್ರಸ್ತಾಪ ಕನ್ನಡ ಕಾವ್ಯಗಳಾದ  "ಮಲ್ಲಿನಾಥ ಪುರಾಣ" ಹಾಗು "ಚಂದ್ರಪ್ರಭ ಪುರಾಣ" ಇವುಗಳಲ್ಲಿ ಬಂದಿದೆ . ೧೬ ನೆ ಶತಮಾನದಿಂದ ೧೮ ನೆ ಶತಮಾನದ ವರೆಗೆ ಯಕ್ಷಗಾನ  ಸಮೃದ್ಧವಾಗಿ ಬೆಳೆದು ಬಂತು . ಕೂಚಿಪುಡಿ ನೃತ್ಯದ ಸ್ಥಾಪಕನಾದ  ಸಿದ್ದೇಂದ್ರ ಯತಿಗಳ  ಶಿಷ್ಯ  ತೀರ್ಥನಾರಾಯಣ ಯತಿಗಳು  ಈ ಯಕ್ಷಗಾನದ ಆಟಗಳನ್ನು ತಮಿಳು ಸೀಮೆಯ ತಂಜಾವೂರಿಗೆ  ತೆಗೆದುಕೊಂಡು  ಹೋಗುತ್ತಾರೆ . ಇಂದಿಗೂ  ಈ ಕಲೆಯು  ತಮಿಳು ನಾಡಿನ ಕೆಲವು ಭಾಗಗಳಲ್ಲಿ  ಉಳಿದುಕೊಂಡಿದೆ .  ಆದರೆ ಕನ್ನಡ ನಾಡಿನ ಕರಾವಳಿಯ ಭಾಗದ ಜನರ ನೆಚ್ಚಿನ ಕಲೆಯಾಗಿ ಯಕ್ಷಗಾನ  ಅರಳಿದೆ  ಬೆಳೆದಿದೆ . ೩೦೦ ಕ್ಕೂ ಹೆಚ್ಚಿನ ಪ್ರಹಸನಗಳು  ಈ ಭಾಗದಲ್ಲಿ ರಚನೆಗೊಂಡು  ಯಕ್ಷಗಾನದ ಸೊಗಡನ್ನು ಎಲ್ಲೆಡೆ ಪಸರಿಸಿವೆ . 







ತಾಳ ಮೇಳಗಳ  ಸಂಭ್ರಮ 



ಯಕ್ಷಗಾನದಲ್ಲಿ ಭಾಗವತರೇ ನಿರ್ದೇಶಕರು , ಅವರು ವಾಧ್ಯಗಳೊಂದಿಗೆ ಇದ್ದು ಕಥೆಗೆ ತಕ್ಕಂತೆ ಪೂರಕವಾಗಿ  ಸಂಗೀತ ಒದಗಿಸಿ , ಕಥೆಯನ್ನು ಬೆಳಸುತ್ತಾ ಹೋಗುತ್ತಾರೆ  , ಜೊತೆಗೆ ಕಲಾವಿದರ ಜೊತೆ ಮಾತಿನಲ್ಲಿ ಸಾಥ್  ನೀಡುತ್ತಾ  ಸನ್ನಿವೇಶ ಕಳೆ  ಕಟ್ಟಲು  ಅನುವು ಮಾಡಿಕೊಡುತ್ತಾರೆ . ತಾಳ ಮದ್ದಲೆ ಗಳ  ನಾಧ ಯಕ್ಷಗಾನದ   ಕಲಶ ಇದ್ದಂತೆ  ಪ್ರಹಸನದ  ಕಥೆಗೆ ಪೂರಕವಾಗಿ  ಈ ವಾಧ್ಯಗಳನ್ನು  ಬಳಸಿಕೊಳ್ಳಲಾಗುತ್ತದೆ . ಇತಿಹಾಸಕಾರರ  ರೀತ್ಯ  ೧೫೫೦ ರಲ್ಲಿಯೇ ಯಕ್ಷಗಾನ  ಕಲೆ ದೇವಾಲಯಗಳ  ಸಂಪ್ರದಾಯದ  ಒಂದು ಅಂಗವಾಗಿತ್ತೆಂದು ತಿಳಿದು ಬರುತ್ತದೆ . ಹಾಗಾಗಿ  ಕನ್ನಡ ನಾಡಿನ ಕರಾವಳಿ ತೀರದ   ಅನೇಕ ಪ್ರಸಿದ್ದ ದೇವಾಲಯಗಳು ತಮ್ಮದೇ ಆದ ಮೇಳಗಳನ್ನು ಪೋಷಿಸಿವೆ , ಸೌಕೂರು, ಮಾರನಕಟ್ಟೆ , ಮಂದರ್ತಿ , ಮುಲ್ಕಿ, ದರ್ಮಸ್ಥಳ , ಕೂಡ್ಲು  ಮುಂತಾದ ಕಡೆ ಮೇಳಗಳು  ಜನ್ಮ ತಾಳಿ ಪ್ರಸಿದ್ಧಿ ಹೊಂದಿವೆ  . ನಂತರ  ದೇವಾಲಯಗಳು  ಆಟ ನಡೆಸುವ ಹಕ್ಕನ್ನು  ಹಾರಾಜು ಹಾಕುವ ಮೂಲಕ  ಹೊಸ ಸಂಪ್ರದಾಯ ಶುರುವಾಯಿತು.  ಜೊತೆಗೆ ಹೊಸದಾಗಿ  ಹಲವಾರು ಕಂಪನಿ ಗಳು  ಜನ್ಮ ತಾಳಿ ಸಹ ಯಕ್ಷಗಾನ  ನಡೆಸುವತ್ತ  ಹೆಜ್ಜೆ ಇಟ್ಟವು . ಯಕ್ಷಗಾನಕ್ಕೆ  ಆಧುನಿಕ ಆಯಾಮ  ನೀಡಲಾಯಿತು . 


ವಿಕಿ ಪೀಡಿಯಾದಲ್ಲಿ  ಕಂಡು ಬಂಡ ಮಾಹಿತಿ ಯಂತೆ ಯಕ್ಷಗಾನದ ಬೆಳವಣಿಗೆಯಲ್ಲಿ  ಕಾಸರಗೋಡು ಸಮೀಪದ ಕುಂಬ್ಳೆ ಯ  ಶ್ರೀಯುತ ಪಾರ್ಥಿ ಸುಬ್ಬ  ರವರು ಯಕ್ಷಗಾನದಲ್ಲಿ  ರಾಮಾಯಣ ಪ್ರಸಂಗ ವನ್ನು ಬರೆದರೆಂಬ  ಮಾಹಿತಿ ಇದೆ.  ಶ್ರೀ ಪಾರ್ಥಿ ಸುಬ್ಬ ರವರು ೧೯ ನೆ ಶತಮಾನದಲ್ಲಿ  ರಾಮಾಯಣ ಪ್ರಸಂಗ ಗಳನ್ನೂ ಯಕ್ಷಗಾನಕ್ಕೆ ಅಳವಡಿಸಿದರೆಂದು  ಶ್ರೀಯುತರಾದ ಮುಳ್ಳಿಯ  ತಿಮ್ಮಪ್ಪ, ಹಾಗು ಗೋವಿಂದ ಪೈ ಅವರು ತಿಳಿಸುತ್ತಾರಾದರೂ , ಈ ವಾದವನ್ನು ಕಡಲ ತೀರದ ಭಾರ್ಗವ ಶಿವರಾಮ ಕಾರಂತರು ತಳ್ಳಿ ಹಾಕುತ್ತಾರೆ . ಈ ವಿಚಾರದಲ್ಲಿ ಹೆಚ್ಚಿನ ಸಂಶೋದನೆ ಅಗತ್ಯವಿದೆ . ಈ ವಿಚಾರದಲ್ಲಿ ಹೆಚ್ಚು ತಿಳುವಳಿಕೆ ಇದ್ದವರು  ಇಲ್ಲಿ ತಮ್ಮ ಮಾಹಿತಿಯನ್ನು ಹಂಚಿಕೊಂಡರೆ  ನಿಜದ ಸಂಗತಿ ತಿಳಿಯುತ್ತದೆ. 


ಆ ಹಾ  ಯಾರೀ  ಬೆಡಗಿ 



ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸಲು ಹಾಗು ಯುವ ಪೀಳಿಗೆಗೆ ಆಸಕ್ತಿ ಮೂಡಿಸಲು ಉಡುಪಿಯಲ್ಲಿ ಎಮ್. ಜಿ. ಎಮ್. ಕಾಲೇಜು, ಕೋಟ ಹಾಗು ದರ್ಮಸ್ಥಳ ದಲ್ಲಿ   ,  ಯಕ್ಷಗಾನ ತರಬೇತಿ ಶಾಲೆಗಳನ್ನು ತೆರೆಯಲಾಗಿದೆ . ಯಕ್ಷಗಾನ ಕಲೆಯನ್ನು  ಹಲವಾರು ಕಲಾವಿದರು  ಪೋಷಿಸಿ   ಪ್ರಸಿದ್ಧಿ  ಹೊಂದಿದ್ದಾರೆ   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರಭದ್ರ ನಾಯಕ್ , ಉಪ್ಪೂರು ನಾರಾಯಣ ಭಾಗವತ , ಐರೊಡಿ ಸದಾನಂದ ಹೆಬ್ಬಾರ್ , ಪೊಳಲಿ ಶಂಕರ ನಾರಾಯಣ ಶಾಸ್ತ್ರಿ , ಮಲ್ಪೆ ಶಂಕರ ನಾರಾಯಣ ಸಾಮಗ , ಮೊವ್ವಾರು ಕಿಟ್ಟಣ್ಣ ಭಾಗವತ ,   ಅಳಿಕೆ ರಾಮಯ್ಯ ರೈ , ಹಾರಾಡಿ ಕೃಷ್ಣಯ್ಯ ಗಾಣಿಗ, ಹಾರಾಡಿ ರಾಮ ಗಾಣಿಗ , ದಾಮೋದರ  ಮಂಡೆಚ್ಹ ,ಬಸವನಾಯ್ಕ್ , ಬಲಿಪ ನಾರಾಯಣ ಭಾಗವತ , ಶೇಣಿ ಗೋಪಾಲಕೃಷ್ಣ ಭಟ್ , ಕುಂಬಳೆ ಸುಬ್ಬರಾಯ , ಹಿರಿಯಡ್ಕ ಗೋಪಾಲರಾವ್ , ಅಳಿಕೆ ಮೋನಪ್ಪ ರೈ , ಅಗರಿ ಶ್ರೀನಿವಾಸ ಭಾಗವತ , ಕುರಿಯ ವಿಟ್ಟಲ ಶಾಸ್ತ್ರಿ,  ಉತ್ತರ ಕನ್ನಡ ಜಿಲ್ಲೆಯಲ್ಲಿ  ಕೆರೆಮನೆ ಶಿವರಾಮ ಹೆಗ್ಗಡೆ, ಮಹಾಬಲ ಹೆಗ್ಡೆ , ಶಂಭು ಹೆಗ್ಡೆ , ಕೆ. ಸದಾನಂದ ಹೆಗ್ಗಡೆ  , ಮೂಡಕಣಿ  ನಾರಾಯಣ ಹೆಗ್ಗಡೆ  , ಚಿಟ್ಟಾಣಿ ರಾಮಚಂದ್ರ  ಹೆಗ್ಡೆ , ಹೊಸ ತೋಟ ಮಂಜುನಾಥ  ಭಾಗವತ, ಕರ್ಕಿಯ ಹಾಸ್ಯಗಾರ  ಮನೆತನದ ಕಲಾವಿದರು ಇವರೆಲ್ಲರೂ ಯಕ್ಷಗಾನದ  ನಕ್ಷತ್ರಗಳಾಗಿ  ಮಿಂಚಿದ್ದಾರೆ . 


ಯಕ್ಷಗಾನದ  ತವರಾಗಿ ಕನ್ನಡ ನಾಡು ವಿಶ್ವಕ್ಕೆ ತನ್ನದೇ ಆದ  ಕೊಡುಗೆ ನೀಡಿದೆ .  





ಯಕ್ಷಗಾನದ  ಕಲಾವಿದರ ಗತ್ತು 



ಶಿರಸಿಯಲ್ಲಿ ನಮಗೆ ನೋಡಲು ಸಿಕ್ಕಿದ್ದು ಪೆರ್ಡೂರು ಮೇಳ,          ಅಂದಿನ  ಪ್ರಹಸನದ ಆಟಾ  ನೋಡುತ್ತಾ ನನ್ನ ನಿದ್ದೆ ಹಾರಿಹೋಗಿ, ಹೊಸ ಉತ್ಸಾಹ ಮೂಡಿತು,  ಸನ್ನಿವೇಶಕ್ಕೆ ತಕ್ಕಂತೆ ಕಲಾವಿದರ ಮುಖದ ಭಾವನೆ   ನೋಡುತ್ತಾ, ಅವರ ನೃತ್ಯ, ಅಭಿನಯ, ಭಾವ ನೋಡುತ್ತಾ , ಭಾಗವತರ  ಹಾಡು ಕೇಳುತ್ತಾ  ಚಂಡೆ ಮದ್ದಲೆ ವಾಧ್ಯಗಳ  ಜೊತೆ ಸೇರಿಹೋಗಿ  ಯಕ್ಷಲೋಕದಲ್ಲಿ ವಿಹರಿಸಿದೆ.  ಬಹಳ ಹೊತ್ತು ಕಲಾವಿಧರ ಅದ್ಭುತ  ಅಭಿನಯ ನೋಡುತ್ತಾ  ಮೈಮರೆತೆ  , ನನ್ನ ಜೀವನಕ್ಕೆ ಹೊಸ ಚಟ  ಅಂಟಿಕೊಂಡಿತು  , ಅದು ಯಕ್ಷಗಾನ ಮೇಳಗಳ  ಆಟಾ ನೋಡುವ ಹುಚ್ಚಿಗೆ  ನಾನೂ ಸೇರಿಹೋದೆ  . 





ಯಕ್ಷಗಾನ ನೋಡಲು  ಬಿಸಿ ಬಿಸಿ  ಕಡಲೇಕಾಯಿ ಇದ್ದರೆ ಮಜಾ ಇರುತ್ತೆ 



ಬಹಳ ಹೊತ್ತು ಯಕ್ಷಗಾನದಲ್ಲಿನ  ಆಟಾ   ನೋಡುತ್ತಾ  ಮೈಮರೆತು , ಅಲ್ಲಿನ ಸನ್ನಿವೇಶಗಳನ್ನು  ನನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಾ ಸಾಗಿದೆ.  ಅಲ್ಲಿನ ಪ್ರೇಕ್ಷಕರಂತೂ  ಯಕ್ಷಗಾನದ ಪ್ರತೀ ಸನ್ನಿವೇಶವನ್ನೂ  ಅನುಭವಿಸುತ್ತಿದ್ದರು , ಆದರೆ  ಮಾರನೆಯದಿನದ  ಕಾರ್ಯಕ್ರಮಕ್ಕೆ ಸಿದ್ದವಾಗಬೇಕಾಗಿತ್ತು, ಪೆರ್ಡೂರು ಮೇಳದ  ಆಟದ  ಬಿಡಾರದಿಂದ ಹೊರಬಂದೆವು , ನಡು ರಾತ್ರಿಯಲ್ಲೂ  ಚಹಾ ಅಂಗಡಿ, ಹಾಗು ಕಳ್ಳೆ ಕಾಯಿ  ಮಾರಾಟ  ಸಾಗಿತ್ತು,  ಅಯ್ಯೋ  ಮೊದಲೇ ಕಂಡಿದ್ದರೆ  ಕಡಲೆ ಕಾಯಿ ತಿನ್ನುತ್ತಾ  ಯಕ್ಷಗಾನ  ನೋಡಬಹುದಾಗಿತ್ತು  ಅನ್ನಿಸಿತು. ಚುಮು ಚುಮು ಚಳಿಗೆ ಬಿಸಿ ಬಿಸಿ  ಕಡಲೇಕಾಯಿ ಒಳ್ಳೆಯ   ಮಜಾ ಕೊಡುತಿತ್ತು. ಆದರೆ  ನಿದ್ದೆ ಬಯಸ್ತಿದ್ದ  ದೇಹ ಕಡಲೇಕಾಯಿ ಬಯಸಲಿಲ್ಲ. 



 ಯಕ್ಷಗಾನದ ಪ್ರಹಸನ ಪೂರ್ತಿ ನೋಡಲಾಗದೆ  ಪ್ರಕಾಶಣ್ಣನ  ಊರಿಗೆ  ವಾಪಸ್ಸು ಬಂದೆವು . ಮನೆಗೆ ಬಂದು ಹಾಸಿಗೆಯಲ್ಲಿ  ಪವಡಿಸಿದಷ್ಟೇ ಗೊತ್ತು  , ನಿದ್ರಾದೇವಿ  ಆವರಿಸಿಕೊಂಡಳು . ಎಚ್ಚರವಾದಾಗ  ಹಕ್ಕಿಗಳ ಚಿಲಿಪಿಲಿ  ಗಾನ ಕೇಳುತ್ತಿತ್ತು . ಕೊಟ್ಟಿಗೆಯಲ್ಲಿದ್ದ  ಹಸು ಹಾಗು ಕರು  ಅಂಬಾ ಎಂದು ಕರೆಯುತ್ತಿತ್ತು .  ಶುಭದ ಮುಂಜಾನೆಗೆ ಮುನ್ನುಡಿ ಶುರುವಾಗಿತ್ತು . ..... !!