Thursday, June 16, 2016

ಏನಪ್ಪಾ ಕೊನೆಗೂ ಬಂದ್ಯಾ.......? ಅಂದಿತ್ತು ನನ್ನ ಬಾಲ್ಯದ ಗೆಳೆಯ ಕೆರೆ ......!

ಮರೆಯಲೆಂದರೆ   ಮರೆಯಲಿ ಹ್ಯಾಂಗ  ನಿನ್ನನ್ನ 



ಸುಮಾರು  ಒಂದು ವರ್ಷದ ಹಿಂದೆ  ಅನ್ಸುತ್ತೆ,  ಯಾವುದೋ ಒಂದು ಕೆಲಸದ ನಿಮಿತ್ತ    ಬೆಂಗಳೂರಿಗೆ ಹೋಗಿದ್ದೆ,   ವಾಪಸ್ಸು    ಬರುವಾಗ   ಏನೋ ನೆನಪಾಗಿ,     ಮದ್ದೂರಿನ  ಟಿ.ಬಿ. ಸಿರ್ಕಲ್ ನಲ್ಲಿ   ಹಾಗೇ ನಿಂತೇ  ,  ಅಲ್ಲಿಗೆ   ಹೋಗೋದೋ   ಬೇಡವೋ...?  ಅಲ್ಲಿ ಹೋಗಿ   ನನಗೆ ನಾನೇ ಮಾತನಾಡಿ ಕೊಂಡರೆ   ಜೊತೆಯಲ್ಲಿದ್ದವ   ಏನು  ಅಂದುಕೊಂಡಾನೋ...? ಅನ್ನೋ ಭಯ , ಆದ್ರೆ    ಅಲ್ಲಿಗೆ ಹೋಗಲೇ ಬೇಕೂ ಎನ್ನುವ  ಆಸೆ  ತಡೆಯಲಾಗಲಿಲ್ಲ,  ನನ್ನ ಬಾಲ್ಯದಲ್ಲಿ  ಮನಸ್ಸು ಬಿಚ್ಚಿ   ಹೇಳಿದ  ಕಷ್ಟ ಸುಖಗಳಿಗೆ    ಕಿವಿಯಾದ   ಈ ಬಾಲ್ಯದ ಮಿತ್ರನನ್ನು   ನೋಡಲೇ ಬೇಕೆಂಬ   ಹಂಬಲ  ಜಾಸ್ತಿಯಾಗಿತ್ತು,  ಯಾಕಂದ್ರೆ ಅವನನ್ನು  ಭೇಟಿಮಾಡಿ  ಸುಮಾರು 35 ವರ್ಷಗಳಿಗೂ  ಜಾಸ್ತಿಯಾಗಿತ್ತು.  ಒಮ್ಮೊಮ್ಮೆ   ಇವನನ್ನು    ಗೆಳೆಯ ಎನ್ನಬೇಕೋ  ಅಥವಾ   ವಾತ್ಸಲ್ಯ  ತೋರಿ  ನನ್ನ ಮಾತನ್ನು  ಮರುಮಾತನಾಡದೆ  ಕೇಳಿಸಿಕೊಂಡ   ತಾಯಿ ಎನ್ನಬೇಕೋ ತಿಳಿಯುತ್ತಿಲ್ಲ, ಇನ್ನು ಇವನೋ  ನನಗಿಂತಾ ಬಹಳ ಹಿರಿಯ , ನಾನು , ನನ್ನಪ್ಪ ಹುಟ್ಟುವ ಮೊದಲೇ ಇವನು  ಹುಟ್ಟಿದ್ದ,  ಹಾಗಾಗಿ ಇವನನ್ನು  ಅಜ್ಜ, ಅಥವಾ ಅಜ್ಜಿ  ಅನ್ನೋಕೆ   ಭಯ, ಯಾಕಂದ್ರೆ  ಇವನು    ಯಾವತ್ತೂ  ಅಜ್ಜ  ಅಜ್ಜಿಯರಂತೆ   ನನ್ನ   ಬಾಲ್ಯದ  ಅನುಭವಗಳನ್ನು    ಕೇಳಿಸಿಕೊಳ್ಳಲಾಗದ   ಅಸಹಾಯಕನಾಗಿರಲಿಲ್ಲ .   ಹಾಗಾಗಿ  ಇವ ನನಗೆ ಎಲ್ಲವೂ ಆಗಿದ್ದ , ಗಟ್ಟಿ ಮನಸು ಮಾಡಿ  ಅವನನ್ನು ನೋಡಲು  ತೆರಳಿದೆ.


ಕಬ್ಬಿನ  ಗದ್ದೆಯಲ್ಲಿ  ಚಾಮರ ಬೀಸಿತ್ತು ತಂಗಾಳಿ 

ನನ್ನ ಬಾಲ್ಯ ಕಳೆದ  ಊರು , ಮನೆ, ಗದ್ದೆ, ವಿ.ಸಿ. ನಾಲೆ,  ಎಲ್ಲದರ ದರ್ಶನವನ್ನು ತುರ್ತಾಗಿ  ಮಾಡಿದೆ.   ,  ಆದರೆ ನನ್ನ ಮನಸು   ಇವನನ್ನು  ಕಾಣಲು ಹಾತೊರೆಯುತ್ತಿತ್ತು,   ನನ್ನ ಗೆಳೆಯನ ಕಾಣಲು    ಒಂದೇ  ಉಸಿರಿನಲ್ಲಿ  ಓಡಿದೆ . ಜೊತೆಯಲ್ಲಿದ್ದ ಗೆಳೆಯನಿಗೆ  ನನ್ನನ್ನು  ಒಂಟಿಯಾಗಿ  ಬಿಡುವಂತೆ ಕೋರಿ, ಒಬ್ಬನೇ  ನನ್ನ ಗೆಳೆಯನ  ಸನಿಹ ಕುಳಿತೆ. ನನಗೆ ಅರಿವಿಲ್ಲದಂತೆ  ನೆನಪಿನ  ಚಿತ್ರಗಳು  ಮನದಲ್ಲಿ ಮೂಡುತ್ತಿದ್ದವು,  ಬಾಲ್ಯದ  ಚಿತ್ರಗಳನ್ನು  ಕಾಣುತ್ತಾ  ಕಣ್ಣಲ್ಲಿ   ನೀರು ಜಿನುಗಲು ಶುರು ಆಯ್ತು   ಅದು  ಆನಂದ ಕ್ಕೊ  ಅಥವಾ  ನೋವಿಗೋ ಒಂದೂ ತಿಳಿಯಲಿಲ್ಲ.      ಅಲ್ಲೇ ಸನಿಹದಿಂದ  ತಂಗಾಳಿ ಬೀಸಿ  ನನ್ನನ್ನು  ಸಂತೈಸುತ್ತಿತ್ತು.  ದಡದಲ್ಲಿ   ಸದ್ದು ಮಾಡದೆ ಕುಳಿತೇ  ಇದ್ದೆ   ನಾನು ಬಾಲ್ಯದಲ್ಲಿ ಕಂಡ  ಗೆಳೆಯ   ಮೂವತ್ತೈದು  ವರ್ಷಗಳಲ್ಲಿ  ಬಡವಾಗಿದ್ದ, ಮೊದಲಿದ್ದ  ಅಲಂಕಾರ ಇಲ್ಲವಾಗಿತ್ತು,  ಸಾವಿನ ಅಂಚಿನಲ್ಲಿ   ದಿನಗಳನ್ನು ಎಣಿಸುತ್ತಾ  ಇರುವ   ರೋಗಿಯಂತೆ  ಅವನ ದರ್ಶನ  ಆಯಿತು.     ನಾನು ಅವನನ್ನು ನೋಡುತ್ತಾ  ಕುಳಿತೇ ಇದ್ದೆ,  ನಿಶ್ಯಬ್ಧ  ನಿಶ್ಯಬ್ಧ  ನಿಶ್ಯಬ್ಧ   ,.........................   ಎತ್ತಲಿಂದಲೋ   ತೇಲಿಬಂತು    "ಓ   ಹೋ ಕೊನೆಗೂ ಬಂದ್ಯಾ....? "   "ಈಗ ನೆನಪಾದ್ನಾ    ನಾನೂ ...?"     ಎಂಬ ಮಾತು,  ಬೆಚ್ಚಿ ಬಿದ್ದು    ಅತ್ತ ಇತ್ತ ನೋಡಿದೆ, ಯಾರೂ ಇಲ್ಲ .  ಅಲ್ಲೇ ಸನಿಹದಲ್ಲಿ   ನೀರಿನ ಒಳಗಿಂದ   ಒಂದು ಕಪ್ಪೆ  ನನ್ನನ್ನು ನೋಡಿ  ಬಾಯ್ತೆರೆದು  ಕಣ್ಣಗಲಿಸಿ    ಅಣಕಿಸಿತ್ತು .   ಆದರೆ ಯಾರೂ ಇಲ್ಲ .  ಮತ್ತೆ ನಿಶ್ಯಬ್ಧ    ಸ್ವಲ್ಪ ಹೊತ್ತು ಬಿಟ್ಟು   ಮತ್ತದೇ   ಪ್ರಶ್ನೆ ತೇಲಿಬಂತು  .   ಮತ್ತೆ   ಮತ್ತೆ  ಕಣ್ಣುಗಳು  ಸುತ್ತ ಮುತ್ತ ನೋಡಿದರೂ   ಏನೂ ಕಾಣಲಿಲ್ಲ.   ಅಷ್ಟರಲ್ಲಿ    ಕಣ್ಣು ಮುಚ್ಚಿಕೋ.......   ಹಾಗೆ ಮಾತನಾಡೋಣ  ಎನ್ನುವ   ಮಾತು ತಂಗಾಳಿ  ಯೊಡನೆ ತೇಲಿಬಂತು.    ಗೆಳೆಯನ  ಜೊತೆ ಸಂವಾದ ನಡೆಸಲು   ಕಣ್ಣು ಮುಚ್ಚಿ  ಕುಳಿತೆ.

ಬಾಲ್ಯದ  ನೆನಪುಗಳ  ಸಾಕ್ಷಿ  ಇವೆಲ್ಲಾ 


 "ಓ   ಹೋ ಕೊನೆಗೂ ಬಂದ್ಯಾ....? "   "ಈಗ ನೆನಪಾದ್ನಾ    ನಾನೂ ...?"  ಅಂತೂ ಇಂತೂ  ಬಂದ್ಯಲ್ಲಪ್ಪ  ಖುಷಿಯಾಯ್ತು ,  ಹೇಗಿದ್ದೀಯ  ...?

ನಾನು :-     "ಹೌದು ಬಹಳ ವರ್ಷಗಳ   ನಿನ್ನ ನೆನಪು ಕಾಡಿತ್ತು   ನಿನ್ನ ನೋಡಲು ಬಂದೆ ,   ನನ್ನ ಹಳೆಯ  ಬಾಲ್ಯದ ನೆನಪುಗಳ  ಸಾಕ್ಷಿ   ಆಲ್ವಾ ನೀನು ಅದಕ್ಕಾಗಿ   ಓಡಿ  ಬಂದೆ . ದಯವಿಟ್ಟು ಕ್ಷಮಿಸಿ ಬಿಡೂ   ಬಹಳ ವರ್ಷಗಳಿಂದ   ನಿನ್ನನ್ನು ನೋಡಲು  ಜೀವನ ಜಂಜಾಟದ   ಕಾರಣ ಬರಲಾಗಲಿಲ್ಲ. "

ಅವನು :- "ಅಯ್ಯೋ ಕ್ಷಮೆಯಾಕೆ ಕೇಳ್ತೀಯ ...?  ಹೋಗಲಿ ಬಿಡೂ,  ಎಷ್ಟೋ  ಜನ  ನಿನ್ನ ಹಾಗೆ ನನ್ನ ಬಳಿಯಲ್ಲಿ  ಬಾಲ್ಯದ ನೆನಪಿನ  ಗಂಟನ್ನು  ಬಿಟ್ಟಿದ್ದರೂ  ಇಲ್ಲಿಯವರೆಗೆ  ಅದನ್ನು  ಹುಡುಕಿಕೊಂಡು  ಯಾರೂ ಬಂದಿಲ್ಲ,  ಬರುವುದಿಲ್ಲಾ ಕೂಡ,  ಆದರೆ ನೀನು   ಹಾಗೆ ಮಾಡಲಿಲ್ಲ  ,  ನನ್ನ  ಜೀವಿತಾವದಿಯಲ್ಲಿ   ಗೆಳೆತನ ಹುಡುಕಿಕೊಂಡು  ಒಬ್ಬನಾದರೂ   ಬಂದನಲ್ಲ  ಅದೇ ಖುಷಿ ನನಗೆ. "

ನಾನು :-  "ಅಯ್ಯೋ  ಅದರಲ್ಲಿ ನನ್ನ ದೊಡ್ಡಸ್ತಿಕೆ  ಏನೂ ಇಲ್ಲಾ,  ನಿನಗೆ ಗೊತ್ತಲ್ಲಾ   ನಿನ್ನ ಬಳಿ  ನಾನು  ಅತ್ಯಂತ ಖುಷಿಯ  ಹಾಗು  ಅತ್ಯಂತ  ನೋವಿನ  ಕ್ಷಣಗಳನ್ನು ಹಂಚಿ ಕೊಂಡಿದ್ದೇನೆ . ನಾನು ಸಂತೋಷ ಗೊಂಡಾಗ  ನಲಿದು,  ನಾನು ಸಂಕಟದಿಂದ  ನರಳಿದಾಗ  ಕರುಣೆಯಿಂದ   ಸಂತೈಸಿದವ   ನೀನು. ಪ್ರತಿನಿತ್ಯ  ಶಾಲೆಗೆ  ಹೋಗುವಾಗ    ಹಾಗು ಬರುವಾಗ   ನನ್ನ ಸೈಕಲ್  ನಿಲ್ಲಿಸಿ   ನಿನ್ನ  ಹತ್ತಿರ ಕೂರುತ್ತಿರಲಿಲ್ಲವ ನಾನು...?  ಕೆಲವೊಮ್ಮೆ   ಹಾಗೆ ಕುಳಿತು ನನಗೆ ನಾನೇ ಮಾತನಾಡುವುದನ್ನು  ಕಂಡ ಕೆಲವು  ಜನರು    ಲೇ  ಹುಡುಗ   ಯಾಕೋ ಅಲ್ಲಿ ಕುಳಿತಿದ್ದೀಯ ...?  ಕಾಲು ಜಾರಿ ನೀರಿಗೆ ಬಿದ್ದೀಯ  .....!   ಮೊದ್ಲು    ಅಲ್ಲಿಂದ  ಎದ್ದು  ಮನೆಗೆ ಹೋಗು ಅಂತಾ  ಗದರಿಸಿ ಹೇಳ್ತಾ ಇದ್ರೂ ,  ಅದಕ್ಕೆ ಸೊಪ್ಪು ಹಾಕಿರಲಿಲ್ಲ.   ಈ ವಿಚಾರ ನನ್ನಪ್ಪನಿಗೂ ಗೊತ್ತಾಗಿ  ಒಂದೆರಡು  ಏಟು  ಬಹುಮಾನ   ಕೊಟ್ಟು ಅಲ್ಲಿಗೆ ಹೋಗಿ ಕೂರದಂತೆ   ತಾಕೀತು   ಮಾಡಿದ್ದರು . ಆದರೆ  ನಾನು    ನಿನ್ನ ಹತ್ತಿರ ಕುಳಿತು  ಮಾತನಾಡುವುದನ್ನು ಮಾತ್ರ ಬಿಡಲಿಲ್ಲ.  ಸುಮಾರು ಹತ್ತು ವರ್ಷ ನಿನ್ನೊಡನೆ  ಮಾತು ಕಥೆ  ನಡೆಸಿದ ನೆನಪು ನನಗೆ ಹೌದಲ್ವಾ ...? "

ಅವನು :-) "ಹ ನಿಜ  ನಿಜ ,  ನನಗೆ ನೆನಪಿದೆ,   ನಿನ್ನ ಈ ಎಲ್ಲಾ  ನಡವಳಿಕೆ ,  ನಿನ್ನ ಮೊದಲ ಭೇಟಿ   ಹೇಗಾಯ್ತು ಗೊತ್ತಾ ...?  ಹೇಳ್ತೀನಿ ಕೇಳು.  ನೀನು ಬಹುಷಃ  ಆರನೇ ತರಗತಿ ಇರಬೇಕು,  ಒಂದು ದಿನ ಸಂಜೆ   ಶಾಲೆ ಮುಗಿಸಿ   ನಿನ್ನ ಮನೆಯ ಕಡೆ ಹೊರಟಿದ್ದೆ,  ಜಿಟಿ  ಜಿಟಿ ಮಳೆ ಬರ್ತಾ ಇತ್ತು, ಆದರೆ  ನಿನ್ನ  ಉತ್ಸಾಹಕ್ಕೆ   ಕೊರತೆ ಇರಲಿಲ್ಲ,  ಬಾಯಿಗೆ ಬಂದಂತೆ ಹಾಡುತ್ತಾ  ಜೋರಾಗಿ ಸೈಕಲ್  ತುಳಿಯುತ್ತಾ    ಬರ್ತಾ  ಇದ್ದೆ.  ನಿನಗೆ ಗೊತ್ತಲ್ಲ...?   ಆಗಿನ ರಸ್ತೆ ಈಗಿರುವಷ್ಟು ದೊಡ್ಡದಾಗಿ ಇರಲಿಲ್ಲ.   ನಿನ್ನ ಎದುರುಗಡೆ    ವೇಗವಾಗಿ  "ಉದಯರಂಗ"  ಬಸ್ ಬರ್ತಾ  ಇತ್ತು,  ನೀನು ಆ ಬಸ್ಸಿನ  ರಭಸಕ್ಕೆ  ಬೀಸಿದ     ಗಾಳಿಯಿಂದ  ಆಯತಪ್ಪಿ ಸೈಕಲ್ಲಿನಿಂದ ಬಿದ್ದೆ, ನಿನ್ನ ಪುಣ್ಯ ಚೆನ್ನಾಗಿತ್ತು   ಅಲ್ಲೇ ಇದ್ದ  ತಡೆ ಕಲ್ಲಿಗೆ ನಿನ್ನ ಸೈಕಲ್ ಗುದ್ದಿ ನಿಂತಿತು. ಹಾಗು ನಿನ್ನನ್ನು ಸಹ ನನ್ನೊಳಗೆ ಬೀಳದಂತೆ ತಡೆಯಿತು.  ನಿನ್ನ ಬಲಕಾಲಿನ  ಮಂಡಿಯಲ್ಲಿ   ಗಾಯವಾಗಿ ರಕ್ತ  ಸೋರುತ್ತಿತ್ತು,  ಅಷ್ಟರಲ್ಲಿ  ಬಂದ ಯಾರೋ ಒಬ್ಬರು  ನಿನ್ನನ್ನು ಅಲ್ಲೇ ಕೂರಿಸಿ,  ಅಲ್ಲೇ ಇದ್ದ ತುಂಬೆ ಗಿಡದ   ಎಲೆಗಳನ್ನು  ಕಿತ್ತು ತಂದು  ಅವುಗನ್ನು  ಕೈಗಳಲ್ಲಿ  ಉಜ್ಜಿ ಹಿಂಡಿ  ರಸ ತೆಗೆದು  ನಿನ್ನ ಗಾಯಕ್ಕೆ ಹಾಕಿದರು, ಅಲ್ಲೇ ಸ್ವಲ್ಪ  ಹೊತ್ತು ತುಂತುರು ಮಳೆಯಲ್ಲೇ  ನೆನೆಯುತ್ತಾ  ನನ್ನ ಬಳಿ  ಕುಳಿತಿದ್ದೆ  ನೀನು,   ಆ ದಿನ  ಶುರು ಆದ ನಿನ್ನ ನನ್ನ ಗೆಳೆತನ   ಮಾತನಾಡುವ  ಮಟ್ಟಕ್ಕೆ  ಬಂದಿತ್ತು." "



 ದಿನವೂ  ಶಾಲೆಗೇ ಹೋಗ್ತಾ ಇದ್ದ  ರಸ್ತೆ 

ನಾನು :-    "ನಿಜ, ನೀನು ಹೇಳಿದ್ದು,  ನೋಡು ಅವತ್ತು ಆದ ಗಾಯದ ಗುರುತು ಇಂದಿಗೂ ಹಾಗೆ ಇದೆ, ಅದ್ಯಾಕೋ ಗೊತ್ತಿಲ್ಲ, ಆ ಘಟನೆ ಆದ ಮಾರನೆಯ ದಿನ  ಮತ್ತೆ  ಶಾಲೆಗೇ ಹೊರಟೇ, ಮನೆಯಲ್ಲಿ ಅಮ್ಮಾ   ಲೋ ನಿನ್ನೆ ತಾನೇ  ಮಳೆಯಲ್ಲಿ ನೆನೆದು  ಬಂದೆ,  ರಾತ್ರಿಯೆಲ್ಲಾ   ಮೈ ಬಿಸಿ ಇತ್ತು   ಇವತ್ತು ಶಾಲೆ ಬೇಡ ಮನೆಯಲ್ಲಿ ಇರು ಅಂದ್ರೂ ಕೇಳದೆ . ಸೈಕಲ್ಲಿನಲ್ಲಿ  ಹೊರಟೆ,  ದಾರಿಯಲ್ಲಿ  ನಿನ್ನ ಹತ್ತಿರ ಬಂದ ತಕ್ಷಣ  ನಾನು ಬಿದ್ದ ಸ್ಥಳವನ್ನು   ಹುಡುಕಿ, ಅಲ್ಲಿ ನಿಂತೇ,  ಮನದಲ್ಲಿ  ಸ್ವಲ್ಪ ಹೆದರಿಕೆ ಇತ್ತು,  ನಿನ್ನ ಸಮೀಪ ಸ್ವಲ್ಪ ಹೊತ್ತು  ಮೌನವಾಗಿ ಕುಳಿತು,  ಶಾಲೆಗೇ ಹೊರಟೆ , ಮತ್ತೆ   ವಾಪಸ್ಸು  ಬರುವಾಗ   ಮಳವಳ್ಳಿಯ ಪರಿಮಳ ಬೇಕರಿಯಲ್ಲಿ   "ದಿಲ್ ಪಸಂದ್ " ಅನ್ನೋ  ತಿಂಡೀ  ಹಾಗು ಖಾರ  ಪಕೋಡ  ಖರೀದಿಸಿ  ನಿನ್ನ  ಬಳಿ ಬಂದು   ಕುಳಿತೆ,  ತಿಂಡೀ ತಿನ್ನುವ ಮೊದಲು   ಸ್ವಲ್ಪ  ಮುರಿದು  ನಿನಗೆ  ಕೊಟ್ಟೆ , ನೀನು ನನಗೆ ಥ್ಯಾಂಕ್ಸ್ ಸಹ ಹೇಳಲಿಲ್ಲ.  ಹಾಗೆ ಕೊಟ್ಟ ತಿಂಡಿಯನ್ನು  ಗುಳುಂ ಮಾಡಿದೆ.   ನಂತರ ನಿನ್ನೊಡನೆ ಮಾತನಾಡುತ್ತಾ   ಗಾಯದ ನೋವಿನ ಬಗ್ಗೆ   ಹೇಳಿಕೊಂಡೆ. ಬೇಗನೆ ಗಾಯ ವಾಸಿಮಾಡು  ಅಂತಾ ನಿನ್ನಲ್ಲಿ ಕೇಳಿಕೊಂಡ  ನೆನಪು.  ಮರೆತಿಲ್ಲ  ಮಿತ್ರ".


ಗೆಳೆಯನ ಇಂದಿನ ಪರಿಸ್ಥಿತಿ 


ಅವನು :-  "ಪ್ರತೀ ಶನಿವಾರ   ಶಾಲೆಯಿಂದ ವಾಪಸ್ಸು ಬರುವಾಗ   ನೀನು  ಮಸಾಲೆ ದೋಸೆ  ತಂದು  ನನ್ನ ಜೊತೆ ಹಂಚಿಕೊಂಡು  ತಿನ್ನುತ್ತಿದ್ದೆಯಲ್ಲ  ಅದನ್ನು ಮರೆತಿಲ್ಲಾ  ಕಣಪ್ಪ, ಜೊತೆಗೆ  ನಿನ್ನ ಶಾಲೆಯಲ್ಲಿ  ಶಿಕ್ಷಕರು  ಬೈದಾಗ , ಹೊಡೆದಾಗ  ಅಂದು  ಅಳುತ್ತಾ  ನನ್ನೊಡನೆ  ನೋವನ್ನು  ಹಂಚಿಕೊಳ್ತಾ  ಇದ್ದೆ.  ನನಗೂ ಅಯ್ಯೋ ಅನ್ನಿಸುತ್ತಿತ್ತು, ಪ್ರತೀ ವರ್ಷ  ಶಾಲೆಯಲ್ಲಿ ನಿನ್ನ ಫಲಿತಾಂಶ  ಬಂದಾಗ  ಖುಷಿಯಿಂದ ಬಂದು ಸಿಹಿ  ನೀಡಿ   ನಿನ್ನ ಸಾಧನೆ ಬಗ್ಗೆ  ಜಂಭ  ಕೊಚ್ಚಿ ಕೊಳ್ತಾ  ಇದ್ದೆ ನೀನು. ಒಮ್ಮೆಯಂತೂ  ಒಂದು ಹಾವು  ಕಪ್ಪೆಯನ್ನು ತಿನ್ನಲು ಬಂದಾಗ   ಅದಕ್ಕೆ ಕಲ್ಲು ಹೊಡೆದು , ಕಪ್ಪೆ  ತಿನ್ನಲು ಅವಕಾಶ ಕೊಡಲಿಲ್ಲ ನೀನು,  ನಂತರ   ಆ ಹಾವು  ನಿನ್ನನ್ನು  ಅಟ್ಟಿಸಿಕೊಂಡು ಬಂದಾಗ   ನಿನ್ನ ಸೈಕಲ್  ಏರಿ ಓಟ ಕಿತ್ತಿದ್ದೆ,  ಆ ಹಾವಿಗೆ ಹೆದರಿ ನೀನು ಎರಡುದಿನ ಬರಲಿಲ್ಲ  . ಇನ್ನೊಂದು ದಿನ  ಮೀನು ಹಿಡಿಯುವ  ಹುಡುಗರು  ಮೀನು ಹಿಡಿಯಲು ಬಂದಾಗ ,   ಗಾಳಕ್ಕೆ  ಕಟ್ಟಲು  ಅವರು ತಂದಿದ್ದ  ಎರೆಹುಳುಗಳನ್ನು   ಅಪಹರಿಸಿ   ಅವರಿಂದ  ಗೂಸ ತಿಂದೆ , ಆದರೆ ಏನ್ ಮಾಡಲಿ  ನಾನು ಅಸಹಾಯಕನಾಗಿ ಇದನ್ನೆಲ್ಲಾ   ನೋಡ್ತಾ ಇದ್ದೆ.   ಮತ್ತೊಮ್ಮೆ  ಏಡಿ  ಹಿಡಿಯಲು ಬಂದ  ಕೊಕ್ಕರೆಗೆ ಹೊಡೆದ ಕಲ್ಲು  ಯಾರಿಗೋ ಬಿದ್ದು  ಅವರಿಂದಲೂ ಸಹ  ನಿನಗೆ ಗೂಸ  ಸಿಕ್ಕಿತ್ತು   ಆದರೆ ಘಟನೆಗಳು  ನಡೆದ ಸಂಜೆಯೇ   ನೀನು ಅಳುತ್ತಾ  ಅ ಹುಡುಗರು  ಮೀನನ್ನು ಹಿಡಿದು ಸಾಯಿಸುತ್ತಿರುವುದಾಗಿ  ನನ್ನ  ಬಳಿ ಅಳುತ್ತಾ  ಸಂಕಟ ಪಟ್ಟೆ. ಇಷ್ಟೆಲ್ಲಾ  ಆದ್ರೂ  ನೀನೇನು  ಬಹಳ ಒಳ್ಳೆಯವನಲ್ಲಾ ಬಿಡೂ  ಒಮ್ಮೊಮ್ಮೆ   ನನ್ನ ಒಡಲಿಗೆ  ಮೂತ್ರ  ಸಿಂಚನ  ಮಾಡುತ್ತಾ ಇದ್ದೆ , ಆದರೆ ನಿನ್ನ ಮೇಲಿನ ಪ್ರೀತಿಯಿಂದ ಅದನ್ನೂ ಸಹ ಸಹಿಸಿಕೊಂಡಿದ್ದೆ   ಗೊತ್ತಾ ನಿನಗೆ . "

ನಾನು :-" ಅರೆ ಇದೆಲ್ಲಾ  ನೀನು ಮರೆತೇ ಇಲ್ವಾ ...? ಹೌದಯ್ಯ    ಆಗ ತಿಳುವಳಿಕೆ ಇರಲಿಲ್ಲ  ಕೆಲವೊಮ್ಮೆ ವಯಸ್ಸಿನ ಸಹಜ  ಹುಡುಗಾಟ ಆಡಿದ್ದೆ  ನಿನ್ನ ಜೊತೆ , ಈಗ ಇದನ್ನೆಲ್ಲಾ ನೆನೆದಾಗ  ಕೆಲವೊಮ್ಮೆ ನೋವಾಗುತ್ತದೆ.   ಹೌದಪ್ಪಾ  ಅ ದಿನಗಳು ಸ್ವರ್ಗದ  ದಿನಗಳು ಕಣಪ್ಪಾ,  ನೋಡು  ನೀರು  ತುಂಬಿಕೊಂಡು  ಜೋರಾಗಿ  ಎತ್ತರವಾದ ಅಲೆಗಳನ್ನು ಎಬ್ಬಿಸಿ   ದಡಕ್ಕೆ ಅಪ್ಪಳಿಸಿ  ನೀರನ್ನು  ರಸ್ತೆಗೆ  ಚೆಲ್ಲಾಡುತ್ತಿದೆ, ಆಗಂತೂ ನೀನು ಸಮುದ್ರ   ಎನ್ನುವಂತೆ  ಭಾವನೆ ಬರ್ತಾ ಇತ್ತು,  ಮಳೆಗಾಲದಲ್ಲಿ  ಮಳೆಯಲ್ಲಿ  ನೆನೆಯುತ್ತಾ   ನಿನ್ನನ್ನು  ನೋಡ್ತಾ ಇದ್ದರೆ ಅದರ ಮಜವೇ ಮಜಾ ಬಿಡೂ ,    ನಿನ್ನಲ್ಲಿ ಬಿದ್ದ ಮಳೆ ಹನಿಗಳು  ಚಕ್ಕುಲಿಯಂತೆ  ಚಿತ್ತಾರ ಬಿಡಿಸುತ್ತಿದ್ದವು.  ಇನ್ನು ಚಳಿಗಾಲ ಬಂದರೆ ನಿನ್ನಲ್ಲಿ  ನೂರಾರು  ಹಕ್ಕಿಗಳ  ಕಲರವ  ತುಂಬಿದ  ಆಟ  ಕಾಣುತ್ತಿತ್ತು, ದೂರದಲ್ಲಿ ನೀರು ನಾಯಿಗಳು  ನೆಗೆದಾಡುತ್ತಾ  ತೇಲುತ್ತಿದ್ದವು.  ಬೇಸಿಗೆಯಲ್ಲೂ ಸಹ ನಿನ್ನ ಅಂದ  ಕೆಡುತ್ತಿರಲಿಲ್ಲ, ಅಷಾಡ ಮಾಸದ  ಬಿರುಸಾದ ಗಾಳಿಗೆ  ನನ್ನ ಸೈಕಲ್  ನೆಟ್ಟಗೆ ಓಡಿಸಲು ಆಗ್ತಾ ಇರಲಿಲ್ಲ.  ಆದರು ಓರೆ ಕೊರೆಯಾಗೆ  ಸೈಕಲ್ಲನ್ನು ಓಡಿಸಿಕೊಂಡು ನಿನ್ನ ಬಳಿ   ಬರ್ತಾ ಇದ್ದೆ.   ಇನ್ನು ಮುಸ್ಸಂಜೆಯಲ್ಲಿ   ಸುಂದರ  ಸೂರ್ಯಾಸ್ತ  ನೋಡುತ್ತಿದ್ದ  ಆ  ಖುಷಿಯೇ  ಬೇರೆ  ಬಿಡೂ.    ನಿನ್ನ ಬಗ್ಗೆ ಯಾಕೆ ಹೆಮ್ಮೆ ಗೊತ್ತಾ....?  ನಾನೂ ನೀನು ಗೆಳೆಯರಾಗಿದ್ದ  ಸಮಯದಲ್ಲಿ  ನೀನು ಯಾರಿಗೂ  ತೊಂದರೆ ಕೊಡಲಿಲ್ಲ,  ಒಂದು ದಿನವೂ ನಿನ್ನಲ್ಲಿ ಅಪಘಾತದಿಂದ  ವಾಹನಗಳು  ಬಿದ್ದ ಬಗ್ಗೆಯಾಗಲಿ,  ಜನಗಳು ಸತ್ತ ಬಗ್ಗೆಯಾಗಲಿ  ವರದಿ ಆಗಲಿಲ್ಲ. ಸುತ್ತ ಮುತ್ತ ಇದ್ದ  ಗದ್ದೆಗಳ  ರೈತರಿಗೆ , ಅವರ ಬೆಳೆಗೆ  ಜೀವ ನೀಡುತ್ತಿದ್ದೆ ನೀನು,  ಇನ್ನು   ಎರಡೂ  ಕೊನೆಯಲ್ಲಿ ಇದ್ದ ಎರಡು ಕೊಡಿಗಳು  ತುಂಬಿ ಜಲಪಾತದಂತೆ  ಹರಿದಾಗ   ಅವೇ ನಮಗೆ ಗಗನ ಚುಕ್ಕಿ , ಭರಚುಕ್ಕಿ  ಜಲಪಾತ ವಾಗುತ್ತಿದ್ದವು. ಆ ರಮಣೀಯ   ದೃಶ್ಯ  ನೋಡೋ ಭಾಗ್ಯ ಈಗಿಲ್ಲಾ ಬಿಡೂ.   ಆ ಕೋಡಿಯಲ್ಲಿ  ಮನೆಯವರಿಗೆ ಗೊತ್ತಿಲ್ಲದಂತೆ  ಸ್ನಾನ ಮಾಡುತ್ತಿದ್ದುದು ಮರೆತಿಲ್ಲಾ ಕಣಯ್ಯ ."

ಅಸ್ಥಮಿಸುವ   ಸೂರ್ಯನೂ   ಕೆಂಪಗೆ 



ಅವನು :-" ನೋಡು ಹಳೆಯ  ನೆನಪನ್ನು  ಜ್ಞಾಪಿಸ ಬೇಡ  ಸಂಕಟ ಆಗುತ್ತೆ.  ನನ್ನ ಕಥೆ ಇರಲಿ ಇದೇನಯ್ಯ  ನೀನು  ಏನು  ಹೀಗೆ ಆಗಿದ್ಯಾ,.....?  ಚಿಕ್ಕ ವಯಸ್ಸಿನಲ್ಲಿ ಒಳ್ಳೆ ಹೀರೋ  ತರಹ ಇದ್ದವನು  ಈಗ  ವಿಲ್ಲನ್  ತರಹ ಆಗಿದ್ದೀ ...?  ಯಾಕೆ  ಜೀವನದಲ್ಲಿ ಖುಶಿ ಇಲ್ವಾ ...?"


ನಾನು : -  "ಹೌದು ಕಣಯ್ಯ   ಜೀವನ ಪಯಣದಲ್ಲಿ ಆದ ಬದಲಾವಣೆ  ಇದು.  ಜೀವನ ಮಾಗಿದಂತೆ ದೇಹವೂ ಮಾಗುತ್ತದೆ ಆಲ್ವಾ ..?"
 ನಂತರ   ಸ್ವಲ್ಪ ಕೋಪ ಬಂದು   "ಓ.......   ಹೋ ....   ನೀನೇನು  ಈಗ ಸುರಸುಂದರಾಂಗನ ತರಹ  ಇದ್ದೀಯ  ಅದಕ್ಕೆ ನನ್ನನ್ನು ಕಿಚ್ಹಾಯಿಸುತ್ತಿದ್ದೀಯ ಆಲ್ವಾ ...?  ನಿನ್ನ ಅವಸ್ತೆ ನೋಡಿಕೋ  ಹೇಗಿದೆ  ಅಂತಾ ..? " ಅಂದೇ

ಅವನು :-  "ನಿಜ  ಕಣಪ್ಪಾ  ನಾನು ಇಂದು ಕುರೂಪಿಯೇ , ಇಂದು ನನ್ನ ಒಡಲಲ್ಲಿ ವಿಷ ಇದೆ,  ಯಾವ ಜೀವಿಯೂ ಬದುಕಲಾಗದಷ್ಟು  ನನ್ನ ಒಡಲು ಬಂಜರಾಗಿದೆ , ನೋಡು ನಾನು  ಹೇಗಿದ್ದೇನೆ,  ಜೊಂಡು  ಹುಲ್ಲು, ತಾವರೆ ಗಿಡಗಳು,  ನಾನೇ ನಿರಡಿಕೆಯಿಂದ  ಕೆಲವೊಮ್ಮೆ  ನೀರು ಸಿಗದೇ   ನರಳುತ್ತೇನೆ,   ಹಕ್ಕಿ ಪಕ್ಷಿಗಳು  ಹೆಚ್ಚು ಬರುತ್ತಿಲ್ಲ,   ಏಡಿಗಳು, ಮೀನುಗಳು, ನೀರು ಹಾವುಗಳು  , ನೀರು ನಾಯಿಗಳು   ಎಲ್ಲಾ ನನ್ನನ್ನು ತ್ಯಜಿಸಿವೆ.  ಹೊಸ ರಸ್ತೆಯಾದ ನಂತರ   ನನ್ನೊಳಗೆ  ಬೀಳುವ  ವಾಹನ , ಜನ  ಜಾಸ್ತಿಯಾಗುತ್ತಿದ್ದು,   ಅದರ ಕೆಟ್ಟ ಹೆಸರು ನನಗೆ ಬರ್ತಾ ಇದೆ.  ಪಕ್ಕದ ಗದ್ದೆಗಳ ರೈತರು  ನನ್ನನ್ನು  ನನ್ನ ಸಂಕಟವನ್ನು ಅರಿಯದೆ   ಬೈಯ್ಯುತ್ತಾರೆ .  ಇನ್ನೆಷ್ಟು ದಿನ  ಇಂತಹ  ಜೀವನವೋ  ನಾ ಕಾಣೆ, ಕೊನೆಯ ಉಸಿರನ್ನು  ಎಳೆಯಲು  ಯಾತನಾಮಯ  ದಿನಗಳನ್ನು ಎಣಿಸುತ್ತಾ ಇದ್ದೇನೆ.   ಬೇಗ  ನನಗೆ ಸಾವು ಬರಲಿ  ಅಂತಾ     ಹಾರೈಸು  ಗೆಳೆಯ ."

ನಾನು :-) ಗೆಳೆಯನ ಮಾತನ್ನು ಕೇಳಿ   ಅದುರಿಹೋದೆ,  ಮೈ ಎಲ್ಲಾ  ಕಂಪಿಸುತ್ತಿತ್ತು,  "ಗೆಳೆಯ ನೀ ಸಾಯ ಬೇಡ..........  ನೀ ಸಾಯ ಬೇಡ ದಯವಿಟ್ಟು  ಅನ್ನುತ್ತಾ  ಜೋರಾಗಿ  ಕಿರುಚುತ್ತಿದ್ದೆ,  ಅಯ್ಯಾ    ನಿನ್ನ ಚಿತ್ರಗಳನ್ನು   ತೆಗೆಯಲೇ...?  " ಅಂದೇ.

    ಅವನು :- ಏನಯ್ಯ  ಯಾರಾದ್ರೂ   ಸಾಯೋ ಕ್ಷಣಗಳನ್ನು  ಎಣಿಸುತ್ತಿರುವ   ಮಂದಿಯ  ಅಥವಾ   ಹೆಣದ   ಚಿತ್ರ  ತೆಗೀತಾರ ...? ನಿನಗೆಲ್ಲೂ ಹುಚ್ಚು,   ಏನೂ ಬೇಡ ನಡ್ ನಡೀ ಅಂದ,

ನಾನು  :- ಏ ಸುಮ್ನಿರಪ್ಪಾ  ನಿನ್ನ ನೆನಪಿಗಾದ್ರೂ   ಕೆಲವು ಚಿತ್ರ ತೆಗೀತೀನಿ  ಅಂದೇ    ಅವನ ಸ್ಥಿತಿ ನೋಡಿ ನನ್ನ ಕರುಳು  ಚುರುಕ್  ಅಂದಿತ್ತು. ಮನದಲ್ಲಿ ಹೇಳಲಾಗದ   ಸಂಕಟ  ಶುರು ಆಯ್ತು .

ಅವನು :-   ,ಅಂತೂ ಇಂತೂ ಸಾಯುವವನಿಗೂ  ಒಮ್ಮೊಮ್ಮೆ   ಇಂತಹ ಸಂತಸ ಪಡುವ ಯೋಗ ಬರುತ್ತೆ ಕಣಯ್ಯ  ಅನ್ನುತ್ತಾ ನಕ್ಕ, [ ನನ್ನ ಕರುಳು  ಕಿವುಚಿದಂತೆ ಆಯ್ತು  ]  ಏನಾದರೂ ಮಾಡ್ಕೊಂಡು   ಹಾಳಾಗ್ ಹೋಗು . , ನಾನು   "ಏ  ನೀನು  ಮಾತ್ರ ದಯವಿಟ್ಟು ಸಾಯ ಬೇಡ ಕಣಯ್ಯ  "  ಅನ್ನುತ್ತಾ   ಚಿತ್ರಗಳನ್ನು   ಕ್ಲಿಕ್ಕಿಸುತ್ತಿದ್ದೆ

ಅಷ್ಟರಲ್ಲಿ ,  ನಮ್ಮ ಹುಡುಗ  "ಸಾರ್ ಸಾರ್   ಇದೇನ್  ಸಾರ್  ಇದು   ಇಲ್ಲಿ ಕುಳಿತು,  ನಿನಗೆ ನೀವೇ ಮಾತಾಡ್ತಾ  ಇದ್ದೀರಿ,  ಸುಮಾರು  ಜನರು   ನಿಮ್ಮನ್ನು ನೋಡಿಕೊಂಡು   ನಗುತ್ತ  ಹೋಗ್ತಿದ್ರು. ನಡೀರಿ ಹೊತ್ತಾಯ್ತು "  ಅಂತಾ ಹತ್ತಿರ ಬಂದ  . ಏ ಗೆಳೆಯ  ಮತ್ತೊಮ್ಮೆ ಬರ್ತೀನಿ   ಅಂತಾ ಹೇಳಿ ಅಲ್ಲಿಂದ  ನಮ್ಮೂರಿಗೆ   ಹೊರಟೆ. ಮನದ ತುಂಬಾ ಅವನೇ ಆವರಿಸಿಕೊಂಡಿದ್ದಾ  ಕಣ್ಣಲ್ಲಿ ಸಂಕಟದ  ನೀರು  ಬರ್ತಾ  ಇತ್ತು.

ಸೌಂದರ್ಯ  ವಲ್ಲದ ಸೌಂದರ್ಯ  ಇದು  ಪ್ರಕೃತಿಯ ಮಾಯಾಜಾಲ 

ಅರೆ ಕ್ಷಮಿಸಿ  ನನ್ನ ಗೆಳೆಯನ  ಪರಿಚಯ   ಮಾಡಿಕೊಡಲಿಲ್ಲ ನಿಮಗೆ   , ಇಷ್ಟೆಲ್ಲಾ  ಪುರಾಣ  ಯಾರ ಬಗ್ಗೆ ಅಂದ್ರಾ   ನನ್ನ ಬಾಲ್ಯದಲ್ಲಿ  ಪ್ರಮುಖ ಪಾತ್ರ ವಹಿಸಿದ    "ಮಳವಳ್ಳಿ ಕೆರೆ " ಯ ಬಗ್ಗೆ  ಹೇಳಿದ್ದು.  ಹೌದು  ಜನುಮದಲ್ಲಿ ಮರೆಯಲಾರದ  ತುಂಟ ನೆನಪುಗಳ   ನೆನಪಿಸುವ  ತಾಕತ್ತು ಈ ಕೆರೆಗೆ ಇದೆ .   ಈ ಕೆರೆಗೆ ನನ್ನ ಪ್ರೀತಿಯ   ನಮನಗಳು . 

Sunday, June 5, 2016

ಕಾವೇರಿ ನದಿಯ ಮಡಿಲ ಈ ಊರಿನಲ್ಲಿ ಸಪ್ತ ಸ್ವರ ದೇವತೆಗಳು ನೆಲಸಿದ್ದಾರೆ .....!

ಸಂಗೀತವಿಲ್ಲದ   ಸ್ಥಳ  ಯಾವುದೂ ಇಲ್ಲ



ಮೊನ್ನೆ  ಹಾಗೆ ನನ್ನ  ಹಳೆಯ ಚಿತ್ರಗಳ  ಸರಣಿಯನ್ನು ನೋಡುತ್ತಾ  ಇದ್ದೆ , ಕೆಲವು ಚಿತ್ರಗಳು  ನೆನಪಿನ ಲೋಕಕ್ಕೆ ಕರೆದೊಯ್ದವು , ಅಷ್ಟರಲ್ಲಿ   ಎಲ್ಲಿಂದಲೋ ತೇಲಿ ಬಂತು    '' ಏಳು ಸ್ವರವೂ ಸೇರಿ ಸಂಗೀತವಾಯಿತು,   ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು"    ಎಂಬ ಹಾಡು.  ಯಾವುದೋ ಲೋಕಕ್ಕೆ ಕರೆದುಕೊಂಡು ಹೋಯಿತು,  ಅರೆ  ಹೌದಲ್ವಾ,  ಸಂಗೀತಕ್ಕೆ   ಏಳು ಸ್ವರ  ಬೇಕೇ ಬೇಕು,     ಇನ್ನು  ವೈಜ್ಞಾನಿಕ  ನಿಯಮಗಳ  ರೀತ್ಯ   ಬಿಳಿಯ ಬಣ್ಣ  ದೊಳಗೆ  ಏಳು  ಬಣ್ಣಗಳು  ಮಿಳಿತಗೊಂಡಿವೆ ,   ನಮ್ಮ ಸುತ್ತ ಮುತ್ತ  ನಡೆಯುವ ಸಾಮಾನ್ಯ  ಕ್ರಿಯೆಗಳು  ನಮ್ಮ  ಅರಿವಿಗೆ ಬರುವುದಿಲ್ಲ , ಆದರೆ ಒಬ್ಬ  ಗೀತ ರಚನೆ ಕಾರ  ಇವನ್ನೆಲ್ಲಾ   ಸೂಕ್ಷ್ಮವಾಗಿ  ಗಮನಿಸಿ  ಹಾಡನ್ನು ರಚನೆ ಮಾಡಿ  ಸಾಮಾನ್ಯ  ಜನರಿಗೆ  ತಲುಪಿಸುತ್ತಾನೆ . ಇಂತಹ ಗೀತೆಗಳಿಗೆ  ಸಂಗೀತದ  ಅಲಂಕಾರ ಮಾಡಿದಾಗ   ಜನರ ಮನಸಿನಲ್ಲಿ   ಅವು  ಅತೀ ಹೆಚ್ಚುಕಾಲ  ಚಿರಾಯುವಾಗಿ  ಉಳಿದು  ಬಿಡುತ್ತವೆ . ಈ ಹಾಡಿನಲ್ಲಿ ಹೇಳುವಂತೆ   ಸಪ್ಥ ಸ್ವರಗಳು   ಅಂದ್ರೆ   ಏನೂ ಅಂತಾ  ಕೇಳುತ್ತೇವೆ ಹೊರತು  ಅದರ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ ,

 ಪುರಾತನ   ದೇಗುಲಕ್ಕೆ   ನಿತ್ಯ  ಸಂಗೀತದ  ಅಭಿಷೇಕ  


ಬನ್ನಿ ಸಪ್ತಸ್ವರ  ಗಳ ವಿಚಾರ ತಿಳಿಯೋಣ,  ಮೊದಲನೆಯದಾಗಿ   ಸ್ವರ ಅಂದ್ರೆ   ಮನುಷ್ಯನ  ಬಾಯಿಂದ  ಗಾಳಿಯ ರೂಪದಲ್ಲಿ   ಹೊರಡುವ  ಶಬ್ಧ ತರಂಗದ  ಏರಿಳಿತಗಳ   ಒಂದು ಸ್ವರೂಪ  ಅಷ್ಟೇ.  ಅವು ಕಣ್ಣಿಗೆ ಕಾಣಲಾರವು ಆದರೆ  ಕೇಳಿ ಅನುಭವಿಸಬೇಕಷ್ಟೇ .  ಬಹಳ ಹಿಂದೆಯೇ   ಹೀಗೆ ಹೊರಡಿಸುವ   ಶಬ್ಧಗಳ  ಸ್ವರೂಪ  ಏಳು  ಬಗೆಯದ್ದಾಗಿದೆ  ಎಂಬ  ವಿಚಾರವನ್ನು  ತಿಳಿದು, ಅವುಗಳಿಗೆ   ವಿವಿಧ ರೂಪದ  ಕಟ್ಟುಪಾಡುಗಳನ್ನು   ಹಾಕಿ ನಿಯಮ ಬದ್ದವಾಗಿ  ಸ್ವರಗಳಿಗೆ  ಮನುಷ್ಯನ ಉಸಿರಿನ  ಏರಿಳತಗಳ   ಸಂಯೋಜನೆ  ಮಾಡಲಾಗಿದೆ.  ಆ ನಿಯಮ ಬದ್ದ್ದ  ಸ್ವರಗಳು  ಏಳು   ಬಗೆಯದ್ದಾಗಿದ್ದು   ಅವುಗಳನ್ನು   ಸಂಕ್ಷಿಪ್ತವಾಗಿ ಸ.ರಿ.{ಅಥವಾ  ರೆ},    ಗ. ಮ.ಪ. ಧ. ನಿ. ಎನ್ನುತ್ತಾರೆ   ಈ ಏಳೂ ಸ್ವರಗಳ ವಿಸ್ತೃತ   ಹೆಸರು  ಕ್ರಮವಾಗಿ  1]  "ಸ. " ಎಂದರೆ  ಷಡ್ಜ, 2]   "ರಿ"   ಅಂದರೆ  ರಿಶಭ ,   3]  " ಗ "  ಎಂದರೆ  ಗಾಂಧಾರ  4]  " ಮ "  ಎಂದರೆ  ಮಧ್ಯಮ  5]  "ಪ " ಎಂದರೆ  ಪಂಚಮ  6]  "ಧ"  ಎಂದರೆ  ದೈವತ್     ಹಾಗು 7]  "ನಿ " ಎಂದರೆ  ನಿಶದ್   ಎಂದು  ಕರೆಯುತ್ತಾರೆ,  ಕರ್ನಾಟಕ ಸಂಗೀತದಲ್ಲಿ   "ರಿ"  ಎಂದು ಬಳಸುವ ಸ್ವರವನ್ನು   ಹಿಂದುಸ್ತಾನಿ ಸಂಗೀತದಲ್ಲಿ   "ರೆ "  ಎಂದು ಬಳಸುತ್ತಾರೆ , ಉಳಿದಂತೆ  ಎಲ್ಲಾ ಸ್ವರಗಳ ಉಚ್ಚಾರಣೆ   ಒಂದೇ ತೆರನಾಗಿರುತ್ತವೆ .  ಏಳು ಸ್ವರಗಳಿಗೂ  ಪ್ರಾಣಿ ಪಕ್ಷಿಗಳ  ಹಾಗು ದೇವತೆಗಳ   ನಾಮಕರಣ  ಮಾಡಲಾಗಿದ್ದು,    ಕ್ರಮವಾಗಿ  1]  " ಸ "   ಅಂದರೆ   "ನವಿಲು "  ಹಾಗು ಸ್ವರ   ದೇವತೆ   "ಗಣಪತಿ"    2]  "ರಿ" ಅಂದರೆ    "ಗೂಳಿ"  ಹಾಗು  ಸ್ವರ ದೇವತೆ  "ಅಗ್ನಿ" 3] " ಗ " ಎಂದರೆ   "ಮೇಕೆ " ಸ್ವರ ದೇವತೆ    "ರುದ್ರ"  4]  "ಮ"  ಎಂದರೆ  "ಪಾರಿವಾಳ " ಸ್ವರ ದೇವತೆ   "ವಿಷ್ಣು" 5]  "ಪ" ಎಂದರೆ  ಕೋಗಿಲೆ  ಸ್ವರ ದೇವತೆ  "ನಾರದ" 6]  "ಧ "  ಎಂದರೆ  "ಕುದುರೆ" ಸ್ವರ ದೇವತೆ   "ಸದಾ ಶಿವ"  7]  " ನಿ"  ಎಂದರೆ   "ಆನೆ"   ಸ್ವರ ದೇವತೆ    "ಸೂರ್ಯ"  ಈ ಸಪ್ತ ಸ್ವರಗಳಿಗೆ  ಎಷ್ಟೊಂದು ವಿಶೇಷ  ಇದೆ ಆಲ್ವಾ ...!             ಈ  ದೇಶದಲ್ಲಿ  ನಾವು  ಕೇಳುವ  ಎಲ್ಲಾ  ಬಗೆಯ ಸಂಗೀತಗಳು  ಈ   ಸಪ್ತ ಸ್ವರಗಳ ಅಡಿಪಾಯದ ಮೇಲೆ  ನಿರ್ಮಿತವಾದವು  ಎಂಬ ಮಾತು  ಸುಳ್ಳಲ್ಲ.