Showing posts with label kanakadaasa. Show all posts
Showing posts with label kanakadaasa. Show all posts

Sunday, May 24, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......17 ಪ್ರವಾಸದ ಅಂತಿಮ ಚರಣದಲ್ಲಿ ಕಾಗಿನೆಲೆ ಕೇಶವನ ಕಂಡು ಧನ್ಯವಾಯಿತು ಜೀವ .

ನಾನು ಹೋದರೆ ಹೋದೇನು




ಹಾವೇರಿಯಲ್ಲಿ ಊಟ ಮಾಡಿ ಕಾಗಿನೆಲೆಯತ್ತ  ಹೊರಟೆವು ನಾವು.  ಕಾಗಿನೆಲೆ ಬಗ್ಗೆ ಕನಕದಾಸರು ಹಾಗು ಅವರ ಪದಗಳಲ್ಲಿ  ಬರುವ "ಕಾಗಿನೆಲೆಯಾದಿ ಕೇಶವ"  ಎಂಬ ನಾಮಾಂಕಿತ ಹೊರತಾಗಿ ನನಗೆ ಈ ಜನುಮದಲ್ಲಿ ಬೇರೇನೂ ಗೊತ್ತಿರಲಿಲ್ಲ, ಭಕ್ತಕನಕದಾಸ ಕನ್ನಡ  ಚಲನಚಿತ್ರ ನೋಡಿದ ಮೇಲೆ  ಬಹುಷಃ ಕನಕದಾಸರು  ಹೀಗೆ ಇದ್ದಿರಬಹುದು ಎಂಬ ಒಂದು ಕಲ್ಪನೆ ಮೂಡಿತ್ತು, ಅವರ ಉಗಾಭೋಗ , ಹಾಡು ಭಕ್ತಿ ಪೂರ್ವಕ ಕೃತಿಗಳನ್ನು ಕೇಳಿದಾಗ  "ಕಾಗಿನೆಲೆಯಾದಿ ಕೇಶವ" ಎಂಬ ಪದ ಬಳಸಿ ಹಾಡನ್ನು ಮುಕ್ತಾಯಗೊಳಿಸುತ್ತಿದುದು   ಗಮನಕ್ಕೆ ಬಂದಿತು, ಹಾಡಿನಲ್ಲಿ "ಕಾಗಿನೆಲೆಯಾದಿಕೇಶವ"  ಎಂಬ ಪದ ಬಂದರೆ ಅದು ಕನಕದಾಸರ ಪದ ಎಂಬ ಅರಿವು ಮೂಡಿತ್ತು, ಆದರೆ  ಕಾಗಿನೆಲೆ ಎಂಬ ಊರಿದೆ  ಅಲ್ಲಿ ಆದಿಕೇಶವ ನೆಲೆಸಿದ್ದಾನೆ  ಯಾವತ್ತಾದರೂ  ಅವನ ದರ್ಶನ ಮಾಡುತ್ತೇನೆ ಎಂಬ  ಆಸೆ ಯಾವತ್ತು ಮನದಲ್ಲಿ ಮೂಡಿರಲಿಲ್ಲ,  ಆದರೆ  ಯಾವ ಜನ್ಮದ ಪುಣ್ಯವೋ  ಕಾಣೆ ಆ ಅವಕಾಶ ಅರಿವಿಲ್ಲದೆ  ಸಿಕ್ಕಿತ್ತು .


ಕಾಗಿನೆಲೆ  ಗ್ರಾಮದ ಒಂದು ಬೀದಿ




೧೫೦೯ ರಿಂದ ೧೬೦೯  ರ ಅವದಿಯಲ್ಲಿ  ಕನಕದಾಸರು  ಜೀವಿಸಿದ್ದರೆಂದು  ಹೇಳುತ್ತಾರೆ  . ಹಾವೇರಿ ಜಿಲ್ಲೆಯ  ಶಿಗ್ಗಾವ್  ತಾಲೂಕಿನ ಬಾಡ  ಗ್ರಾಮ ದಲ್ಲಿ ಜನಿಸಿ  ರಾಜನಂತೆ ಮೆರೆದು  ಜೀವನದ  ಹಲವು ಏಳು ಬೀಳುಗಳನ್ನು ಕಂಡು  ಜೀವನದ ತಿರುವು ಕಂಡು  ಭೋಗ ಜೀವನದಿಂದ  ವೈರಾಗ್ಯ  ಹೊಂದಿ  ಶ್ರೀ ಹರಿಯ ದಾಸನಾಗಿ  ಪುಣ್ಯ ಕ್ಷೇತ್ರಗಳಿಗೆ ಅಲೆದಾಡಿ  ಜ್ಞಾನ ಸಂಪಾದಿಸಿ  ಆದಿ ಕೇಶವ ವಿಗ್ರಹದೊಂದಿಗೆ   ಕನಕದಾಸರು  ನೆಲೆಕಂಡ ,  ಪುಣ್ಯ ಭೂಮಿ  ಈ "ಕಾಗಿನೆಲೆ  ಅಥವಾ ಕಾಗಿನೆಲ್ಲಿ" . ಕಾಗಿನೆಲೆ  ಬ್ಯಾಡಗಿ ತಾಲೂಕಿನ ಒಂದು ಗ್ರಾಮ  ಇಂದು . ತಾಲೂಕು ಕೇಂದ್ರ ಬ್ಯಾಡಗಿ ಇಂದ ೧೯ ಕಿಲೋಮೀಟರು , ಹಾಗು ಜಿಲ್ಲಾ ಕೇಂದ್ರ ಹಾವೇರಿ ಇಂದ ೧೪ ಕಿಲೋಮೀಟರ್ ದೂರದಲ್ಲಿದೆ . ಕಾಗಿನೆಲೆ ಗ್ರಾಮದಲ್ಲಿ ಆದಿಕೇಶವ  ದೇವಾಲಯ , ಸಂಗಮನಾಥ ದೇವಾಲಯ  ಹಾಗು ಕನಕದಾಸ ದೇಗುಲಗಳು ಇವೆ,  ಆದಿಕೇಶವ  ದೇವಾಲಯ ಕನಕದಾಸರು ಸ್ಥಾಪಿಸಿದ ದೇವಾಲಯವೆಂದು ಹೇಳಲಾಗುತ್ತದೆ . ಉಳಿದ ದೇವಾಲಯಗಳ ಬಗ್ಗೆ ಅಷ್ಟು ಮಾಹಿತಿ ತಿಳಿದು ಬರೋದಿಲ್ಲ .




ಕಾಗಿನೆಲೆ  ಗ್ರಾಮದ ಒಂದು ನೋಟ


ದೇಗುಲದ ಮರು ನಿರ್ಮಾಣ ಕಾರ್ಯದ ನೋಟ




ಕನಕದಾಸರ ಕಾಗಿನೆಲೆಯ ಪುಣ್ಯ ಭೂಮಿಯಲ್ಲಿ  ಕಾಲಿಟ್ಟ ನಾವು ಆದಿಕೇಶವ ದೇವಾಲಯ ತಲುಪಿದೆವು,  ಅಚ್ಚರಿಯೆಂದರೆ , ಈ ಐತಿಹಾಸಿಕ ದೇಗುಲಕ್ಕೆ  ತಲುಪಲು  ಒಂದು ರಾಜಮಾರ್ಗವೇ ಇಲ್ಲ , ಸಂದಿ ಗೊಂದಿಗಳ ಪುಟ್ಟ ಗಲ್ಲಿಗಳಲ್ಲಿ  ನಡೆದು  ಕನಕರ ಪ್ರೀತಿಯ  ಆದಿಕೇಶವನ  ದರ್ಶನ ಮಾಡಬೇಕು .  ಅಂದಿನಕಾಲದಲ್ಲಿ  ಅತ್ಯಂತ ವೈಭವಯುತವಾಗಿ ಮೆರೆದ  ಈ ದೇಗುಲ ಇಂದು  ಶಿಥಿಲಾವಸ್ಥೆ  ತಲುಪಿ ಈಗ ದುರಸ್ಥಿ  ಕಾಣುತ್ತಿದೆ.





ಶ್ರೀ ಲಕ್ಷ್ಮಿ ನರಸಿಂಹ  ಸನ್ನಿಧಿ




ಕನಕದಾಸರು ಇಲ್ಲಿಗೆ ಬರುವ ಮೊದಲು  ಈ ಊರು ಕಾಗಿನೆಲ್ಲಿ  ಆಗಿತ್ತೆಂದು ಹಾಗು ಅವರು ಬರುವ ಮೊದಲೇ ಇಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮೀ ದೇಗುಲ ಇತ್ತೆಂದು ಹೇಳುತ್ತಾರೆ, ಈ ಊರಿಗೆ  ಕಾಗಿನೆಲ್ಲಿ ಎಂಬ ಹೆಸರು ಬರಲು  ಒಂದು ಕಥೆ ಹೇಳುತ್ತಾರೆ . ಬಹಳ ಹಿಂದೆ ೬೦೦  ವರ್ಷಗಳಿಗೂ  ಹಿಂದೆ   ಒಂದು ಕಾಗೆ ನೆಲ್ಲಿ ಮರದಲ್ಲಿ  ಕುಳಿತು ನೆಲ್ಲಿ ಕಾಯಿ  ತಿನ್ನುತ್ತಿತ್ತೆಂದೂ , ಆ ನೆಲ್ಲಿಕಾಯಿ ಚಿನ್ನದ ನೆಲ್ಲಿಕಾಯಿಯಂತೆ  ಕಂಡು ಬಂದ  ಕಾರಣ ಅಲ್ಲಿನ ರೈತರು  ಆ ಕಾಗೆಯನ್ನು  ಅಟ್ಟಿಸಿಕೊಂಡು ಹೋಗಲು , ಬೆದರಿದ ಆ ಕಾಗೆ  ನೆಲ್ಲಿಕಾಯಿಯನ್ನು ಒಂದು ಹುತ್ತದೊಳಗೆ ಹಾಕಿ ಹಾರಿಹೊಯಿತೆಂದೂ , ನಂತರ  ಆ ಹುತ್ತವನ್ನು ಅಗೆದಾಗ  ಈ ಲಕ್ಷ್ಮಿ ನರಸಿಂಹ ವಿಗ್ರಹ  ಸಿಕ್ಕಿ  ಒಂದು ದೇಗುಲವನ್ನು ನಿರ್ಮಿಸಲಾಯಿತೆಂದೂ , ಅಂದಿನಿಂದ ಈ ಜಾಗವನ್ನು  ಕಾಗಿ ನೆಲ್ಲಿ ಎಂದು ಕರೆಯಲಾಯಿತೆಂದೂ ಹೇಳುತ್ತಾರೆ . ನಂತರ  ಕನಕದಾಸರು  ಇಲ್ಲಿಗೆ ಬಂದು  ವ್ಯಾಸರಾಜರ  ಸಮ್ಮುಖದಲ್ಲಿ  ಇಲ್ಲಿ ಆದಿ ಕೇಶವ ಪ್ರತಿಷ್ಟಾಪಿಸಿದರೆಂದೂ  ಹೇಳುತ್ತಾರೆ . ಏನೇ ಆದರೂ ಈ ಸ್ಥಳ  ಹಲವುಶತಮಾನಗಳ  ಐತಿಹಾಸಿಕ  ಘಟನೆಗಳಿಗೆ ಸಾಕ್ಷಿ ಯಾಗಿರುವುದಂತೂ ನಿಜ .



ಕನಕದಾಸರು  ಬಳಸಿದ ಶಂಖ ಹಾಗು ಕರಂಡ




ಶ್ರೀ  ಲಕ್ಷ್ಮಿ ನರಸಿಂಹ ದೇಗುಲದಲ್ಲಿ  ದರ್ಶನ ಪಡೆದ ನಮಗೆ ಅಲ್ಲಿನ  ಅರ್ಚಕರು  ನಮಗೆ ದೇಗುಲದ ಬಗ್ಗೆ  ಮಾಹಿತಿ ನೀಡಿ ಕನಕದಾಸರು ಬಳುಸುತ್ತಿದ್ದರೆನ್ನಲಾದ  ಶಂಖ ಹಾಗು  ಕರಂಡ ಗಳನ್ನೂ ದರ್ಶನ ಮಾಡಿಸಿ ಅದನ್ನು ಸ್ಪರ್ಶಿಸಲು ಹಾಗು ನಾವುಗಳೇ   ಶಂಖ ಮುಟ್ಟಿ  ಶಂಖ ನಾಧ  ಮಾಡಲು ಅನುವು ಮಾಡಿಕೊಟ್ಟರು , ಕನಕದಾಸರು ಸ್ಪರ್ಶಿಸಿದ  ಈ ಅಮೂಲ್ಯ  ವಸ್ತುಗಳನ್ನು ಕಂಡು ಸ್ಪರ್ಶಿಸಿ  ಆನಂದಪಟ್ಟೆವು, ನಂತರ  ತೆರಳಿದ್ದು   ಕನಕರ ಪ್ರೀತಿಯ  ಆದಿಕೇಶವನ ಸನ್ನಿಧಿಗೆ





ಕನಕದಾಸರ  ಆದಿಕೇಶವ ನೋಡಿ ಇಲ್ಲಿದ್ದಾನೆ

ಕಾಗಿನೆಲೆಯಾದಿ   ಕೇಶವನ ದರ್ಶನ ಮಾಡಿ


 ಕಾಗಿನೆಲೆ  ಆದಿಕೇಶವನ  ದರ್ಶನ ಮಾಡಲು ಮೂರ್ತಿಯ ಮುಂದೆ ನಿಂತ ನಮಗೆ  ಮಾತು ಹೊರಡಲಿಲ್ಲ ,  ಮುದ್ದಾದ  ಆದಿಕೇಶವ  ನಮ್ಮ ಮನದಲ್ಲಿ ಅಚ್ಚಳಿಯದೆ  ಉಳಿಯುವಂತಹ  ದರ್ಶನ ಕರುಣಿಸಿದ್ದ , ಮನದ ತುಂಬಾ ಸಂತಸದ  ಭಾವನೆ ಹೊಮ್ಮಿತು.  ಹನುಮ ಪೀಠದ  ಮೇಲೆ ಗರುಡದೇವನ  ಸಹಿತ ಆದಿಕೇಶವ ನೆಲೆಸಿದ್ದಾನೆ, ಶಂಖ, ಚಕ್ರ , ಗದೆಗಳು ಮೂರು  ಕೈಗಳಲ್ಲಿ  ಮತ್ತೊಂದು ಅಭಯ ಹಸ್ತ  ಈ  ಸುಂದರ ಮೂರ್ತಿಯ ವಿಶೇಷ ,  ಈ ಆದಿಕೇಶವ  ಮೂರ್ತಿಯನ್ನು  ಕನಕದಾಸರ  ಗುರುಗಳಾದ ವ್ಯಾಸರಾಜರು  ಪ್ರತಿಷ್ಟಾಪಿಸಿದರೆಂದು ಹೇಳಲಾಗುತ್ತದೆ ,   ಭಕ್ತಿಯಿಂದ   ಆದಿಕೇಶವನನ್ನು   ಆರಾಧಿಸುತ್ತಾ  ಕನಕದಾಸರು  ಈ ಪವಿತ್ರ  ಸ್ಥಳದಲ್ಲಿ  ನೆಲೆಸಿ  ನಳಚರಿತ್ರೆ , ಹರಿಭಕ್ತಿಸಾರ ,ನೃಸಿಂಹಸ್ತವ , ರಾಮಧಾನ್ಯ ಚರಿತೆ  ಹಾಗು ಉಗಾಭೋಗ  ಮುಂತಾದವುಗಳನ್ನು ರಚಿಸುತ್ತಾರೆ . "ಈಶ ನಿನ್ನ ಚರಣ  ಭಜನೆ " ಎಂಬ ಹಾಡು ಕನಕದಾಸರು  ಅವರ ಜೀವಿತ ಅವದಿಯಲ್ಲಿ ರಚಿಸಿದ ಕೊನೆಯ ಹಾಡು  ಅದರಲ್ಲಿನ ಪಾಂಡಿತ್ಯ ಒಮ್ಮೆ ನೋಡಿದರೆ  ನಿಮಗೆ ಅವರ ಜ್ಞಾನದ ಅರಿವಾಗುತ್ತದೆ https://youtu.be/lUl6VREGTXE  ಈ ಹಾಡಿನಲ್ಲಿ  ಆದಿ ಕೇಶವನನ್ನು  ಹೊಗಳಲು  ಒಮ್ಮೆ ಬಳಸಿದ  ವಿಷ್ಣುವಿನ   ಹೆಸರನ್ನು ಮತ್ತೊಮ್ಮೆ ಬಳಸದೆ  ವಿಷ್ಣುವಿನ  ೨೬  ಹೆಸರುಗಳನ್ನು  ಬಳಸುತ್ತಾ  ತಮ್ಮ ಜ್ಞಾನ ನೈಪುಣ್ಯತೆ ಮೆರೆದಿದ್ದಾರೆ .




ಯತಿಗಳ ವೃಂದಾವನ

ಮಾರುತಿಯ ದರ್ಶನ




ಆದಿಕೇಶವನ ದರ್ಶನ ಪಡೆದು ಪಾವನ ರಾದ ನಾವು  ದೇಗುಲದ ಆವರಣದಲ್ಲೇ ಇದ್ದ  ಶ್ರೀ ರಾಜ ವಂದಿತ ತೀರ್ಥರ ವೃಂದಾವನ, ಹಾಗು ಮಾರುತಿ ದೇವರ ದರ್ಶನ ಪಡೆದೆವು, ಈ ಮಾರುತಿ ದೇಗುಲದಲ್ಲಿ  ಮೂರು ಹನುಮರ ವಿಗ್ರಹ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ, ದೇಗುಲ ನೋಡುತ್ತಾ  ಅಲ್ಲಿನ  ವಾತಾವರಣದಲ್ಲಿ  ಲೀನವಾಗಿದ್ದ ನಮಗೆ  ಊರಿಗೆ ಹೋಗಬೇಕಾದ  ಬಗ್ಗೆ ಮನಸಿನಲ್ಲಿ  ಎಚ್ಚರಿಕೆ ಬಂದೀತು .  ಅಲ್ಲಿಂದ  ವಾಪಸ್ಸು ಹೊರಟು   ಆದಿಕೇಶವನ  ದೇವಾಲಯದ  ಹೊರಗೆ ಬಂದು  ಕಾಗಿನೆಲೆಯ  ನಡು ಬೀದಿಯಲ್ಲಿ ನಡೆದೆವು .




ಕಾಗಿನೆಲೆಯಲ್ಲಿ  ಸಂತೆಯ ದೃಶ್ಯ


ನಾವು ಭೇಟಿ ನೀಡಿದ ದಿನ ಕಾಗಿನೆಲೆಯಲ್ಲಿ ಸಂತೆ ಇತ್ತು,  ಅಲ್ಲಿನ ಸುತ್ತ ಮುತ್ತ ಹಳ್ಳಿಯ ಜನರು  ದವಸ ದಾನ್ಯಗಳ ಖರೀದಿಯಲ್ಲಿ ತೊಡಗಿದ್ದರು , ಹಲವಾರು  ದಶಕಗಳಿಂದ  ನಡೆದು ಬಂದಿರುವ  ಸಂತೆ  ವ್ಯಾಪಾರ  ನಮ್ಮ ಹಳ್ಳಿಗಳಿಗೆ ಸೂಪರ್  ಮಾರ್ಕೆಟ್ ನಂತೆ  ಎಲ್ಲಾ  ಅಗತ್ಯ ವಸ್ತುಗಳು ಒಂದೆಡೆ ಸಿಗುವ  ತಾಣವಾಗಿವೆ . ಅಲ್ಲಿನ ದ್ರುಶ್ಯ ನೋಡುತ್ತಾ  ಮುಂದೆ ಸಾಗಿದೆ , ನಮ್ಮ ಕಾರು ಬೆಂಗಳೂರಿನ ಹಾದಿ ಹಿಡಿಯಿತು ,



ಹಸಿವ ತಣಿಸಿದ ತಾಣ



ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ  ಹೊರಟ  ನಮಗೆ ಬಿರುಸಾದ ಮಳೆಯ ದರ್ಶನ , ಚಾಲಕರಿಗೆ ದಾರಿ ಕಾಣದಷ್ಟು  ಮಳೆ ದೋ ಎಂದು ಸುರಿಯುತ್ತಿತ್ತು,  ಕಾಗಿನೆಲೆ ಅಲೆದಾಟದಿಂದ  ಹೊಟ್ಟೆ  ಹಸಿದಿತ್ತು,  ಹಾದಿಯಲ್ಲಿ ಸಿಕ್ಕ ಒಂದು ಹೋಟೆಲ್ ಗೆ  ನುಗ್ಗಿ  ಹಸಿದ ಹೊಟ್ಟೆಗೆ  ರುಚಿಯಾದ  ದೋಸೆಗಳನ್ನು  ಬಲಿ ನೀಡಿದೆವು,  ಪ್ರಕಾಶಣ್ಣ  ಬಹಳ ಖುಷಿಯಾಯಿತು ನಿಮ್ಮಜೊತೆ ಕಳೆದ  ಮೂರುದಿನಗಳ  ಯಾತ್ರೆ ಅಂದೇ  , ಅಯ್ಯೋ ಬಾಲಣ್ಣ  ನನಗೂ ಹಾಗೆ ಅನ್ನಿಸಿದೆ,   ನಿಜಕ್ಕೂ  ಈ ಮೂರುದಿನಗಳು  ಮರೆಯಲಾರದ  ಅನುಭವ ಅಂದ್ರೂ . ನಮ್ಮಿಬ್ಬರ ಪೇಚಾಟ ಕೇಳಿ  ನಮ್ಮ  ವಾಹನ ಚಾಲಕ ನಗುತ್ತಿದ್ದ,   ಬೆಂಗಳೂರು ತಲುಪಿ  ಕೀಟಲೆ ಪ್ರಕಾಶಣ್ಣ ನನ್ನು  ಆಶಾ ಅತ್ತಿಗೆ  ವಶಕ್ಕೆ ಒಪ್ಪಿಸಿ  ಮೈಸೂರಿನ ನನ್ನ ಮನೆಗೆ  ನೆಮ್ಮದಿಯಾಗಿ ತಲುಪಿದೆ.





 ಹಸಿದ ಹೊಟ್ಟೆಗೆ  ದೋಸೆಗಳ ಸಾಂತ್ವನ 


ಕಳೆದ ವರ್ಷ ೨೦೧೪ ರ ಮೇ ೨೮ ರಿಂದ  ಇಲ್ಲಿಯವರೆಗೆ  ಸುಮಾರು  ೧೭ ಕಂತಿನ ಈ ಪ್ರವಾಸ ಯಾನದ ಅನುಭವದ  ಮಾಲಿಕೆಯನ್ನು ಬ್ಲಾಗ್ ನಲ್ಲಿ ಓದಿ  ನನ್ನನ್ನು ಪ್ರೀತಿಯ  ಮಾತುಗಳಿಂದ  ಪ್ರೋತ್ಸಾಹಿಸಿ  ಪೊರೆದ  ಎಲ್ಲಾ ಗೆಳೆಯರಿಗೆ   ವಂದಿಸುತ್ತಾ  , ಈ ಪ್ರವಾಸ ಕಥನ ಯಾನವನ್ನು ಮುಗಿಸಿದ್ದೇನೆ .  ನಿಮ್ಮೆಲ್ಲರ ಪ್ರೀತಿಗೆ ನನ್ನ ಸಲಾಂ .

Sunday, May 17, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......16 ಹಾವೇರಿಯಲ್ಲಿ ಹಸಿವಿನಲ್ಲೂ ಹುಡುಗಾಟ ,

ಜ್ಞಾನದಲ್ಲಿ  ದೇವರ ಕಂಡ ಕನಕ ದಾಸರು 





ಬಾಡ ದಲ್ಲಿನ  ವೃತ್ತದಲ್ಲಿ  ಕುಳಿತಿದ್ದ  ಕನಕದಾಸರ  ಪ್ರತಿಮೆ   "ನೀ ಮಾಯೆಯೊಳಗೋ  ಮಾಯೇಯೋಳು ನೀನೋ " ಎಂದು ಹಾಡುವ ಬದಲಾಗಿ   "ನೀ ಅಜ್ಞಾನ ದೊಳಗೋ   ಅಜ್ಞಾನ ದೊಳು  ನೀನೋ"   ಎಂದು ಹಾಡಿದಂತೆ  ಅನ್ನಿಸಿ  ಹೆಚ್ಚಿನ ಸಮಯ ವ್ಯರ್ಥ ಮಾಡಬಾರದೆಂದು   ಕಾಗಿನೆಲೆ ನೋಡಲು  ಹಾವೇರಿಯ ಕಡೆ  ಪಯಣ  ಮುಂದುವರೆಸಿದೆವು , ಹೊಟ್ಟೆ ಚುರುಗುಟ್ಟುತ್ತಿತ್ತು , ಕಾರು ಹಾವೇರಿ  ಪ್ರವೇಶ  ಮಾಡಿತ್ತು ,


ಹಾವೇರಿಯಲ್ಲಿ  ಒಂದು  ಒಳ್ಳೆಯ ಹೋಟೆಲ್


 ಹಾವೇರಿ  ಪಟ್ಟಣದೊಳಗೆ ನಮಗೆ ಮೊದಲ ಪ್ರವೇಶ ,  ಆ ಊರಿನ ಬಗ್ಗೆ ಹೆಚ್ಚು ತಿಳುವಳಿಕೆ ಇರಲಿಲ್ಲ, 
ಯಾವುದಾದರೂ ಒಳ್ಳೆ ಹೋಟೆಲ್ ಸಿಕ್ಕಿದರೆ  ಮೊದಲು ಊಟ ಮಾಡೋಣಾ  ಅಂತಾ  ಅನ್ನಿಸಿತು. ಹಾವೇರಿಗೆ  ಪ್ರವೇಶಿಸುತ್ತಿದ್ದಂತೆ  ಕಂಡಿತು ಒಂದು ಭವ್ಯ  ಕಟ್ಟಡದಲ್ಲಿ ಮಿಂಚುತ್ತಿದ್ದ   ಹೋಟೆಲ್ ಒಂದಕ್ಕೆ ನಮ್ಮ ಪ್ರವೇಶ , ಅಚ್ಚರಿ ಎಂದರೆ  ಒಬ್ಬರೂ ಗ್ರಾಹಕರು ಇರಲಿಲ್ಲ,  ಪ್ರಕಾಶಣ್ಣ  ಹೇಳಿದ್ರೂ ಕೇಳದೆ  ಬನ್ನಿ ಪ್ರಕಾಶಣ್ಣ  ಜನ ಜಾಸ್ತಿ ಇಲ್ಲಾ  ಆರಾಮವಾಗಿ  ಕುಳಿತು ಹೊಟ್ಟೆ ತುಂಬಾ ಊಟ ಮಾಡೋಣ ಅಂತಾ    ಆ ಹೋಟೆಲ್ ನೊಳಗೆ  ಪ್ರವೇಶಿಸಿ   ಮೂರು ಊಟಕ್ಕೆ  ಆರ್ಡರ್  ಮಾಡಿ  ಕೈತೊಳೆಯಲು  ಹೊರಟೆ  ಪ್ರಕಾಶಣ್ಣ  ಮೊದಲು ಹೋಗಿದ್ದವರು  ಓದಿ ಬಂದು  ಬಾಲಣ್ಣ  ಇಲ್ಲಿ ತಿಂದೆ ಇದ್ರೂ  ಪರವಾಗಿಲ್ಲ ಮೊದಲು ಆರ್ಡರ್ ಕ್ಯಾನ್ಸಲ್ ಮಾಡಿ ಅಂತಾ ಒಂದೇ ಉಸಿರಿಗೆ ಹೇಳಿದ್ರೂ  , ಅರೆ ಇದೇನಿದೂ ಅಂತಾ  ಕೈತೊಳೆಯಲು ಹೋದ್ರೆ  ಆ ವಾಶ್ ಬೇಸಿನ್ ನೋಡಿ   ಅಲ್ಲಿನ ದರ್ಶನ ಕಂಡು ಸುಸ್ತಾದೆ , ಅತ್ಯಂತ ಕೊಳಕು ವಾಶ್ ಬೇಸಿನ್,  ಊಟಮಾಡಲು ಅಸಹ್ಯ ಉಂಟುಮಾಡುವಂತಹ  ದರ್ಶನ  ನೀಡಿತ್ತು, ಈ ಹೋಟೆಲ್  ಹೊರನೋಟಕ್ಕೆ  ಥಳಕು  ಒಳಗಡೆ  ಗಬ್ಬು ನಾರುವ ಕೊಳಕು  ಎಂಬುದು ಅರ್ಥ ಆಗಿತ್ತು,  ಈ  ಗಡಿಬಿಡಿಯಲ್ಲಿ  ಆ ಹೋಟೆಲ್ ಹೆಸರನ್ನು ನೋಡೋದೇ ಮರೆತಿದ್ದೆ . ಮೊದಲೇ ಹೊಟ್ಟೆ ಹಸಿವು  ತಿನ್ನಲು ಹೋದ್ರೆ ಇಂತಹ ಹೋಟೆಲ್ ಗಳ ನರಕ ದರ್ಶನ , ನಮ್ಮ ಪ್ರವಾಸಕ್ಕೆ ಹೊಸ ಅನುಭವ ಸೇರಿಸಿತ್ತು,  ಹಸಿವಿನ ಆತುರದಲ್ಲಿ   ಮಾಡಿಕೊಂಡಿದ್ದ  ನಮ್ಮ ದಡ್ಡತನಕ್ಕೆ  ಪ್ರಕಾಶಣ್ಣ  ಹಾಗು ನಾನು ಪರಸ್ಪರ  ಮುಖ ನೋಡಿಕೊಂಡು  ನಕ್ಕು  ಮುಂದೆ ಸಾಗಿದೆವು  , ಸ್ಥಳಿಯರ  ಶಿಫಾರಸ್ಸಿನಂತೆ   ಹಾವೇರಿ ಪಟ್ಟಣದೊಳಗೆ   ಇದ್ದ  ಹೋಟೆಲ್ ಶಿವ ಶಕ್ತಿ   ಯನ್ನು ಹೊಕ್ಕೆವು .     ಇದ್ದದ್ದರಲ್ಲಿ ನಮ್ಮ   ಹಸಿವಿನ  ಸಂಕಟಕ್ಕೆ  ಇದ್ದದ್ದರಲ್ಲೇ  ಶುಚಿಯಾದ ರುಚಿಯಾದ  ಊಟ  ಸಾಂತ್ವನ  ಸಾಂತ್ವನ ನೀಡಿತ್ತು .

 
 ಪ್ರಕಾಶಣ್ಣ ಹಾಸ್ಯಕ್ಕೆ  ನೆತ್ತಿ ಹತ್ತಿತ್ತು  ನನಗೆ 


ಹೋಟೆಲ್ ಶಿವಶಕ್ತಿಯಲ್ಲಿ  ಊಟ ಮಾಡುತ್ತಾ , ಸಮಾಧಾನ ಪಟ್ಟು ಕೊಂಡೆವು ,   ಇನ್ನೇನು  ಊಟ ಮುಗಿಸಿ  ನೀರು ಕುಡಿಯುವ ವೇಳೆ  , ಪ್ರಕಾಶ್ ಹೆಗ್ಡೆ  ಹಾಸ್ಯದ  ಬಾಣ  ಬಿಟ್ಟರು ,   ಬಾಲಣ್ಣ  ಒಂದು ವೇಳೆ ಅದೇ ಕೊಳಕಿನ  ವಾಶ್ ಬೇಸಿನ್ ನಲ್ಲಿ  ಕೈತೊಳೆದು ಅದೇ ಹೋಟೆಲ್ ಊಟ ಮಾಡಿದ್ರೆ ನಮ್ಮ ಮುಖ  ಹೇಗೆ ಇರ್ತಿತ್ತು  ..?  ನೀರು ಕುಡಿಯುತ್ತಿದ್ದ ನನಗೆ ಈ ಹಾಸ್ಯಕ್ಕೆ  ನಗು ತಡೆಯಲಾಗಲಿಲ್ಲ,    ಗೊಳ್  ಅಂತಾ ನಕ್ಕೆ  ಕುಡಿಯುತ್ತಿದ್ದ  ನೀರು ಚಿಲುಮೆ ಯಂತೆ ಉಕ್ಕಿ  ಮೈಮೇಲೆ  ಚೆಲ್ಲಿತು ,   ಅದೇ ಸಮಯಕ್ಕೆ ನನ್ನ ಶಿಷ್ಯ  ನನಗೆ ಗೊತ್ತಿಲ್ಲದಂತೆ ಚಿತ್ರ ತೆಗೆದು   ಆ ಸನ್ನಿವೇಶ ದ  ದರ್ಶನ   ಮಾಡಿಸಿದ . ಅ ಕೊಳಕು ಹೋಟೆಲ್  ನಲ್ಲಿನ   ನಮ್ಮ ಎಡವಟ್ಟು  ಪ್ರಸಂಗ ನೆನೆ ನೆನೆದು ಮಸಾರೆ ನಕ್ಕು ಬಿಟ್ಟೆವು .  ರುಚಿಯಾದ  ಊಟದ ಜೊತೆ  ಈ ಹಾಸ್ಯದ ರಸಾಯನ   ನಮ್ಮ ಪ್ರಯಾಣದ  ಆಯಾಸ  ಪರಿಹಾರ ಮಾಡಿತ್ತು .



 ಹಾವೇರಿಯ ವಿಶೇಷದಲ್ಲಿ   ಈ ಪಾನ್ ಅಂಗಡಿ  ಸಹ ಒಂದು 

 ಹೊಟ್ಟೆ ತುಂಬಾ ಊಟ ಮಾಡಿ ಹೊರಗೆ ಬಂದ  ನಮಗೆ  ಪಕ್ಕದಲ್ಲೇ ಕಂಡಿದ್ದು ಈ ಬೀಡಾ  ಶಾಪ್ , ಎಲ್ಲರೊಡನೆ  ನಗು ನಗುತ್ತಾ ಪಾದರಸದಂತೆ ಬೀಡಾ  ಕಟ್ಟಿಕೊಡುತ್ತಿದ್ದ  ಈ ಹುಡುಗನನ್ನು  ರೇಗಿಸುತ್ತಾ  ಸಿಹಿಯಾದ ಬೀಡಾ  ತಿಂದು  ಖುಶಿ ಪಟ್ಟೆವು .   ಅರೆ ರುಚಿಯಾದ  ಊಟ ಕೊಟ್ಟು  ನಮಗೆ ಖುಶಿನೀಡಿದ  ಹಾವೇರಿ ಬಗ್ಗೆ ಪರಿಚಯ ಮಾಡಿಕೊಳ್ಳೋಣ ಬನ್ನಿ ,






ಈ ಹಾವೇರಿ ಯಲ್ಲಿ ನೋಡೋದು ಬಹಳಷ್ಟಿದೆ , ಆದ್ರೆ ನಮಗೆ ಸಮಯ ಬಹಳ ಕಡಿಮೆ ಇದ್ದ ಕಾರಣ , ಕಾಗಿನೆಲೆ  ಮಾತ್ರ ನೋಡಲು ಸಾಧ್ಯ ಆಯ್ತು,  ಆದರೆ  ಮುಂದೆ ಬಂದಾಗ ಇನ್ನಷ್ಟು ನೋಡಲು  ಒಂದಷ್ಟು ಮಾಹಿತಿ ಸಂಗ್ರಹ   ಮಾಡಿಕೊಂಡೆ . ಹಾವೇರಿಯಲ್ಲಿ   ಐತಿಹಾಸಿಕ  ಸಿದ್ದೇಶ್ವರ  ದೇವಾಲಯ ವಿದೆ,  ಇನ್ನು ಈ ಜಿಲ್ಲೆ   ಹಲವಾರು  ಮಹಾಪುರುಷರಿಗೆ  ಜನ್ಮ ನೀಡಿದೆ , ಸರ್ವಜ್ಞ , ಕನಕದಾಸ, ಶಿಶುನಾಳ ಶರೀಫರು ,  ಹಾನಗಲ್ ಕುಮಾರ ಶಿವಯೋಗಿಗಳು,  ವಾಗೀಶ ಪಂಡಿತರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು,  ಲೇಖಕರಾದ  ಗಳಗನಾಥರು ,  ಗೋಕಾಕ್ ಚಳುವಳಿ ನೇತಾರ, ಡಾಕ್ಟರ್ . ವಿ. ಕೆ. ಗೋಕಾಕ್ ರವರು,  ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ,   ಸ್ವಾತಂತ್ರ್ಯ ಕ್ಕಾಗಿ ಬ್ರಿಟೀಷರ ಸೆಣಸಿದ  ಮೈಲಾರ ಮಹಾದೇವ  ಈ ಮಣ್ಣಿನ ಮಗನೆ .  ಈ ಜಿಲ್ಲೆಯ ನೆಲ  ಚಾಲುಕ್ಯ , ರಾಷ್ಟ್ರಕೂಟ , ಕದಂಬ , ಹೊಯ್ಸಳ, ವಿಜಯನಗರ ಸಾಮ್ರಾಜ್ಯದ ಅರಸರ  ಆಳ್ವಿಕೆ   ಕಂಡಿದೆ .  ತುಂಗಭದ್ರ , ಹಾಗು  ವರದ ಈ ಜಿಲ್ಲೆಯ ಪ್ರಮುಖ ನದಿಗಳು , ತುಂಗಾ ಭದ್ರ ನದಿಯನ್ನು ವರದಾ ನದಿ  ಸೇರುವ   ತಾಣ ಇಲ್ಲಿದೆ .   ನಮ್ಮ ದೇಶದಲ್ಲಿ ಮೆಣಸಿನಕಾಯಿ  ಅಂದ್ರೆ ತಕ್ಷಣ ಜ್ಞಾಪಕಕ್ಕೆ ಬರೋದು   ಒಂದು  ಅಂದ್ರದ ಗುಂಟೂರು, ಮತ್ತೊಂದು  ನಮ್ಮ ರಾಜ್ಯದ ಬ್ಯಾಡಗಿ ,   ಈ ಪ್ರಸಿದ್ಧ  ಬ್ಯಾಡಗಿ ಹಾವೇರಿ ಜಿಲ್ಲೆಯ ತಾಲೂಕು ಕೇಂದ್ರ , ಇಷ್ಟೊಂದು ವಿಶೇಷ ಹೊಂದಿರುವ   ಹಾವೇರಿ ಜಿಲ್ಲಾ ದರ್ಶನ  ಮಾಡಲು ಮತ್ತೊಮ್ಮೆ ಬರುವ ಸಂಕಲ್ಪ ಮಾಡಿ   ಕನಕದಾಸರು ಪೂಜಿಸಿದ  ಆದಿಕೇಶವನ ನೋಡಲು ದೌಡಾಯಿಸಿದೆವು .

Saturday, May 9, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......15 ಹೋಗಿದ್ದು ಕಾಗಿನೆಲೆಗೆ ಮೊದಲು ಕಂಡಿದ್ದು ಬಾಡಾ !


ಎತ್ತ ಪೋಗುವುದೆಂದು ಕೇಳಿತ್ತು ಚಿತ್ತ


ಕಳೆದ ಸಂಚಿಕೆಯಲ್ಲಿ  "ದೇವಿಸರ"  ದ ಅನುಭವ  ಬರೆದ ಬಗ್ಗೆ ಓದಿದ ಹಲವರು  ಬಹಳ ಖುಷಿಪಟ್ಟು ತಮ್ಮ ಅನಿಸಿಕೆ ಹಾಕಿದ್ದಾರೆ, ಕೆಲವರ  ಆತ್ಮೀಯ ಸಂಬಂಧಿಕರು  ನಾನು ಹಾಕಿದ ಚಿತ್ರದಲ್ಲಿ  ಆಕಸ್ಮಿಕವಾಗಿ  ಇದ್ದದ್ದು    ಗೆಳೆಯರಿಗೆ  ಬಾಲ್ಯದ ನೆನಪಾಗಿ  ಖುಷಿಕೊಟ್ಟಿದೆ . ಅದರಲ್ಲೂ  ಗೆಳೆಯರಾದ ನಂಜುಂಡ ಭಟ್ , ರಾಮಕೃಷ್ಣ  ಅವರ  ಸಂತಸದ ಮಾತುಗಳು  ಮನಮುಟ್ಟಿದವು ,  ಈ ಒಂದು ಬ್ಲಾಗ್ ಬರಹ  ಓದುಗರಿಗೆ  ಅವರ  ಬಾಲ್ಯದ ನೆನಪನ್ನು ನೆನಪಿಸಿ  ತಮ್ಮ ಬಂಧು ಗಳ ದರ್ಶನ ಪಡೆಯಲು  ಕಾರಣವಾಗಿದ್ದಕ್ಕೆ  ನನಗೂ ಖುಶಿತಂದಿತು . ಬನ್ನಿ ಮುಂದೆ ಹೋಗೋಣ .


ಮರಕ್ಕೂ  ಬೇಕಂತೆ ಬದಲಾವಣೆ



ಅಣ್ಣಾ ಪ್ರಕಾಶಣ್ಣ  ಯಾವ ಕಡೆಯಿಂದ ಹೋಗೋದು  ಅಂದೇ .....?   ಹ .. ಬಾಲಣ್ಣ   ಯಾವಕಡೆ ಯಿಂದ ಹೋಗಬಹುದು   ಅಂತಾ ಯೋಚಿಸ್ತೀನಿ ತಾಳಿ ಅಂದರು  ............!   
  ಶಿರಸಿಯ  ಮಾರಿಕಾಂಬ  ದೇಗುಲದ ಬಳಿ ನಿಂತು   ಯಾವ ಕಡೆಯಿಂದ   ಊರಿಗೆ ವಾಪಸ್ಸ್ ಹೋಗೋದು ಅಂತಾ  ಯೋಚಿಸುತ್ತಾ  ನಿಂತೆವು ....!  ನಮ್ಮ ಪಯಣದ ಅಂತಿಮ ದಿನ  ಇಂದು   ಊರಿಗೆ ಹೋಗಲೇ ಬೇಕಾದ ಅನಿವಾರ್ಯತೆ , ಆದರು ಮನಸಿನಲ್ಲಿ ದುರಾಸೆ  ಇನ್ನೇನಾದರೂ ನೋಡಲು ಸಿಕ್ಕರೆ ಅದನ್ನು ನೋಡಿಬಿಡುವಾ  ಎಂಬ ತವಕ,  ಚರ್ಚೆಮಾಡುತ್ತಾ  ಅಣ್ಣಾ  ಬೆಂಗಳೂರಿಗೆ  ಶಿರಸಿಯಿಂದ ಹಾವೇರಿ ಕಡೆಯಿಂದ ಹೋದರೆ  ಹತ್ತಿರ ಆಗುತ್ತೆ ಏನ್ .ಹೆಚ್ . ೪ ರಲ್ಲಿ  ವೇಗವಾಗಿ  ಬೆಂಗಳೂರು ತಲುಪೋಣ , ದಾರಿಯಲ್ಲಿ ಸಾಧ್ಯಾ ಆದರೆ ಕಾಗಿನೆಲೆ ನೋಡೋಣ ಅಂತಾ  ತೀರ್ಮಾನ ಮಾಡಿದೆವು,  ಸರಿ ಶಿರಸಿಯಿಂದ  ಹಾವೇರಿ ಕಡೆ ಪಯಣ ಸಾಗಿತು . ದಾರಿಯಲ್ಲಿ  ಸಿಕ್ಕ ಒಂದು ಮರ  ಡೈನಾಸರಸ್ ತರಹ ತಲೆ ಎತ್ತಿ ನಿಂತಿತ್ತು ,  ಅರೆ  ಈ ಮರಕ್ಕೆ  ಯಾಕೆ   ಹೀಗೆ ಬದಲಾವಣೆ  ಆಸೆ  ಮೂಡಿತು ? ಅಂತಾ  ಪ್ರಶ್ನೆ ಮೂಡಿತು,  ಉತ್ತರ ಹೊಳಿಲಿಲ್ಲ  ತಲೆ ಕೆರೆದರೆ  ಕೂದಲು ಉದುರುವ  ಸಂಭವ  ಇದೆ  ಅಂತಾ ಮುನ್ನಡೆದೆವು .


ರೈತನ ಬದುಕಿಗೆ  ಇಲ್ಲೂ  ಕಾಟ ಕೊಟ್ಟ  ವಾಹನಗಳು




ಶಿರಸಿ ಯಿಂದ  ಹಾವೇರಿಯ ಕಡೆ ಸಾಗುವ ರಸ್ತೆ ದುರಸ್ತಿಕಾರ್ಯ  ನಡೆದಿತ್ತು, ಕೆಲವೊಂದು ಕಡೆ  ವಾಹನಗಳನ್ನು ಊರಿನೊಳಗೆ  ಹೋಗುವಂತೆ  ಮಾಡಲಾಗಿದ್ದ ಕಾರಣ ಕೆಲವು ಹಳ್ಳಿಗಳ  ಬೀದಿಗಳ ದರ್ಶನ ಆಯ್ತು , ಮಳೆ  ಇಲ್ಲದೆ  ಒಣಗಿದ ಭೂಮಿ, ದೂಳು ತುಂಬಿದ  ಹಾದಿಗಳು,   ಈ ನಡುವೆ  ರಸ್ತೆ ದುರಸ್ತಿಕಾರಣ  ಊರಿನೊಳಗೆ ಹಾದುಹೋಗುವ  ವಾಹನಗಳ ಕಿರಿ ಕಿರಿ , ಇವುಗಳೆಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡ ಜನರ ದರ್ಶನ ಆಯ್ತು .   ಶಿರಸಿಯಿಂದ ಹಾವೇರಿಗೆ ನಡುವೆ ಸಿಕ್ಕ  ಹಾನಗಲ್  ಎಂಬ ಊರನ್ನು ನೋಡಿ   "ಗಂಗೂಬಾಯಿ  ಹಾನಗಲ್ "  ಅವರ ಊರು ಇದೆ ಇರಬೇಕೂ  ಅಂತಾ  ಕಾರಿನಿಂದ  ಇಳಿದು ಅಲ್ಲೇ ಇದ್ದ ಅಂಗಡಿಯವರನ್ನು ವಿಚಾರಿಸಿದರೆ   " ಗಂಗೂಬಾಯಿ ಹಾನಗಲ್ " ಅವರ ಊರು ಇದಲ್ಲಾ  ಸರಾ ಅಂತಾ ಉತ್ತರ ನೀಡಿದರು,  ಏನೋ  ಮಹಾ ಹೊಸ ಜಾಗ  ನೋಡಲು ಸಿಕ್ಕಿತು ಎಂದು ಜಂಬದಿಂದ   ಬೀಗಿದ್ದ ನನಗೆ   ಸರಿಯಾದ ಶಾಸ್ತಿ  ಆಗಿತ್ತು ಇಲ್ಲಿ.  ಮತ್ತೆ ಪಯಣ ಮುಂದುವರಿಸಿದೆವು,  ಹಾಗೂ ಹೀಗೂ  ತೆವಳುತ್ತಾ  ದುರಸ್ತಿಕಾರ್ಯ ನಡೆದಿದ್ದ  ರಸ್ತೆಯಲ್ಲಿ ಸುಮಾರು ೭೦ ಕಿಲೋಮೀಟರು  ಹಾದಿಯನ್ನು ೨ಘಂಟೆಗೂ ಹೆಚ್ಚು  ಅವಧಿಯಲ್ಲಿ ಕ್ರಮಿಸಿದೆವು ,



ಬಾಡಾ  ದಲ್ಲಿ ಕಂಡ   ಸ್ಮಾರಕ

 ಹಾವೇರಿ ಗೆ ಪ್ರವೇಶಿಸುವ  ಮೊದಲು  ಕಾಗಿನೆಲೆ ದಾರಿಯಾವುದು  ತಿಳಿಯೋಣ ಎಂದು  ಅಲ್ಲೇ ಬರುತ್ತಿದ್ದ  ಆಟೋ ನಿಲ್ಲಿಸಿ  ಅಣ್ಣಾ   ಕಾಗಿನೆಲೆಗೆ  ಹೋಗ ಬೇಕು ದಾರಿ ಯಾವುದು ಹೇಳ್ತೀರಾ ? ಎಂದು  ಅದರ ಚಾಲಕರನ್ನು ಕೇಳಿದೆ ,  ಬಹಳ ಖುಷಿಯಾಯ್ತು  ಅನ್ನಿಸುತ್ತೆ ಅವರಿಗೆ
 ಸರ ,    ಕಾಗಿನೆಲೆ   ನೋಡುವ ಮೊದಲು  ಬಾಡಾ  ನೋಡ್ರೀ  ಸರಾ , ಇಲ್ಲಿಂದ  ಸುಮಾರು  ಹದಿನಾರು ಕಿಲೋಮೀಟರು  ಆಗ್ತೈತಿ  ನಂತರ  ಮತ್ತೆ ಹಾವೇರಿಗೆ ಬಂದು ಅಲ್ಲಿಂದ ಕಾಗಿನೆಲೆ ನೋಡಬಹುದು  ಎಂದು ಹೇಳಿ ಒಂದು ರೂಟ್  ಮ್ಯಾಪ್  ಹಾಕಿಕೊಟ್ಟರು .  ಅದರಂತೆ ಮೊದಲು ತಲುಪಿದ್ದೆ   ಕನದಾಸರ  ಬಾಡ  ಗ್ರಾಮಕ್ಕೆ .


ಕನಕದಾಸರ ಮೂರ್ತಿ


ಬನ್ನಿ ಬಾಡ ಗ್ರಾಮದ ಬಗ್ಗೆ ತಿಳಿಯೋಣ , ನಮಗೆಲ್ಲಾ  ತಿಳಿದಿರೋದು  ಕನಕದಾಸರು ಅಂದ್ರೆ  ಕಾಗಿನೆಲೆಯಲ್ಲಿ  ಜನಿಸಿದವರು,  ದಾಸಪಂಥಕ್ಕೆ  ಸೇರಿದವರು, ಉಡುಪಿಯಲ್ಲಿ  ತಮ್ಮ ಭಕ್ತಿಯ ಬಲದಿಂದ  ಶ್ರೀ ಕೃಷ್ಣನನ್ನು   ಒಲಿಸಿಕೊಂಡವರು , ಕನಕನಕಿಂಡಿ ಯ ಕಾರಣಕರ್ತರು  ಇತ್ಯಾದಿ  ವಿಚಾರಗಳು ತಿಳಿದಿವೆ,  ಆದರೆ ನಮಗೆ ತಿಳಿಯದ  ಅನೇಕ ವಿಸ್ಮಯದ  ವಿಚಾರಗಳನ್ನು  ಕನಕದಾಸರ ಬಗ್ಗೆ ಈ ಊರು ತನ್ನ ಒಡಲಿನಲ್ಲಿ  ಇಟ್ಟುಕೊಂಡಿದೆ . ಇಲ್ಲಿಗೆ ಬರುವವರೆಗೂ  ನಮಗೂ ಇದ್ದ ಜ್ಞಾನ ಇಷ್ಟೇ , ಇಲ್ಲಿಗೆ ಬಂದ ಮೇಲೆ ಕಂಡಿದ್ದು  ತಿಳಿದದ್ದು  ಬಹಳ ಆಸಕ್ತಿದಾಯಕ ವಿಚಾರಗಳು . ಬನ್ನಿ ಹೋಗೋಣ "ಕನಕದಾಸರ ಬಾಡ" ನೋಡಲು .  ಬಾಡ  ಗ್ರಾಮ ಇರೋದು  ಹಾವೇರಿ ಜಿಲ್ಲೆಯ  ಶಿಗ್ಗಾವ್  ತಾಲೂಕಿನಲ್ಲಿ ,  ಮೊದಲು ಈ ಗ್ರಾಮ ಧಾರವಾಡ ಜಿಲ್ಲೆಗೆ ಸೇರಿತ್ತು ೧೯೯೭-೯೮ ರಲ್ಲಿ  ಜಿಲ್ಲೆಗಳ ಪುನರ್ವಿಂಗಡಣೆ  ಆದಾಗ . ಶಿಗ್ಗಾವ್  ತಾಲೂಕು   ಹಾವೇರಿ ಜಿಲ್ಲೆಗೆ ಸೇರಿದ ಕಾರಣ  ಬಾಡ ಗ್ರಾಮ  ಹಾವೇರಿ ಜಿಲ್ಲೆಯ  ಇತಿಹಾಸದ ಭಾಗವಾಗಿ ನಿಂತಿದೆ .  ಹಾಲಿ ಇಲ್ಲಿ  ಕನಕದಾಸರ ನೆನೆಯಲು  ಒಂದು ಸುಂದರ ಕೋಟೆಯನ್ನು ನಿರ್ಮಿಸಿ ಅದರೊಳಗೆ  ಒಂದು ಸಂಗ್ರಹಾಲಯ  ಮಾಡಲಾಗಿದೆ.  ಒಳಗಡೆ ಕನಕದಾಸರ ಜೀವನದ ಬಗ್ಗೆ  ಹಲವು ಚಿತ್ರಗಳನ್ನು  ಪ್ರದರ್ಶಿಸಲಾಗಿದೆ , ಎಲ್ಲವನ್ನೂ  ನೋಡುತ್ತಾ ಸಾಗಿದೆವು ಇಲ್ಲಿನ ಅಚ್ಚುಕಟ್ಟು  ಗಮನ ಸೆಳೆಯಿತು .



ಕನಕದಾಸರ  ಜನ್ಮಸ್ಥಳ  ಬಾಡ


ಕನಕದಾಸರ  ನೆನಪಿಗಾಗಿ ಒಂದು ಸ್ಮಾರಕ


ಬಾಡ  ಗ್ರಾಮ  ಮೊದಲು  ಒಬ್ಬ ವಿಜಯ ನಗರದ  ಪ್ರತಿನಿಧಿ  ಅಥವಾ ಪಾಳಯಗಾರರ  ಆಡಳಿತಕ್ಕೆ ಒಳಪಟ್ಟ ಕೇಂದ್ರ ಸ್ಥಾನ  ಆಗಿತ್ತು, ಈ ಆಡಳಿತಕ್ಕೆ  ಸುಮಾರು ೮೦ ಹಳ್ಳಿಗಳು ಒಳಪಟ್ಟಿದ್ದವು ,  ಆ ಎಲ್ಲಾ ಹಳ್ಳಿಗಳ ಆಡಳಿತ  ನಡೆಸಲು ಇಲ್ಲಿ  ಮೂರುಸುತ್ತಿನ  ಒಂದು ಕೋಟೆ  ಕಟ್ಟಿ  ಆಡಳಿತ ನಡೆಸಿದ್ದವರೇ  ಬೀರೇಗೌಡ  ಎಂಬ ಸರದಾರರು , ಇವರ ಮಡದಿ ಬಿಚ್ಚಮ್ಮ ಅಥವಾ  ಬೆಚ್ಚಮ್ಮ   ಪತಿಗೆ ಆಡಳಿತದಲ್ಲಿ ಸಹಕಾರ ಕೊಡುತ್ತಿದ್ದರು , ಇವರಿಬ್ಬರ  ಅಪರೂಪದ  ಸಂತಾನವೇ  ಕನಕದಾಸರು ,  ಕನಕದಾಸರ ಮೂಲ ಹೆಸರು ತಿಮ್ಮಣ್ಣ ಅಥವಾ ತಿಮ್ಮಣ್ಣ ನಾಯಕ   ಎಂದು  ಕರೆಯಲಾಗಿತ್ತಂತೆ , ಹೌದು ಬಾಲಕ  ತಿಮ್ಮಣ್ಣ ಸಿರಿವಂತ ಕುಟುಂಬಕ್ಕೆ ಸೇರಿದವರು , ಮೊದಲೇ ರಾಜ ಪ್ರತಿನಿಧಿಯ  ಅರಮನೆ, ಹಾಗು ಕೋಟೆ ಇಲ್ಲಿ  ಆಡಳಿತ ವಿಚಾರಗಳು, ಸೈನ್ಯದ ಮೇಲ್ವಿಚಾರಣೆ  , ಅಪಾರ ಪ್ರಮಾಣದ  ಸಿರಿವಂತಿಕೆ , ಗೌರವ   ಇವೆಲ್ಲಾ ಬಾಲಕ ತಿಮ್ಮಣ್ಣ ನಿಗೆ ಬಳುವಳಿಯಾಗಿ  ಬಂದಿತ್ತು  ಆ ಕಾರಣ ಇವರು ರಾಜಕುಮಾರ ರಂತೆ ಬಾಲ್ಯ ಕಳೆದರು , ಜನನ  ಕಾಲ  ೧೪೮೯ ಎಂದು  ಊಹಿಸಲಾಗಿದ್ದರೂ  ಸರಿಯಾದ ಮಾಹಿತಿ ಲಭ್ಯವಿಲ್ಲ.  ಬಾಲಕ ತಿಮ್ಮಣ್ಣನ  ತಂದೆತಾಯಿಗಳು  ತಿರುಪತಿಯ  ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದ ಕಾರಣ ಈ ಮಗುವಿಗೆ ತಿಮ್ಮಣ್ಣ  ಎಂದು ನಾಮಕರಣ ಮಾಡುತ್ತಾರೆ . ತಿಮ್ಮಣ್ಣ  ಅಥವಾ  ಬಾಲ ಕನಕದಾಸ ರ ವಿಧ್ಯಾಭ್ಯಾಸ   ಬಾಡ  ಸಮೀಪದ ಸದಾಶಿವಪೇಟೆ ಎಂಬಲ್ಲಿದ್ದ ಶೈವ  ಮಠದಲ್ಲಿ  ಆಯಿತೆಂದು ತಿಳಿದುಬರುತ್ತದೆ, ಆ ನಂತರ  ವಿಜಯನಗರದ  ಕಾಲದ  "ಆನೆಗೊಂದಿ"   ಯಲ್ಲಿನ ತಿರುಮಲೆತಾತಾಚಾರ್ಯ  ಎಂಬುವರ  ಆಶ್ರಮದಲ್ಲಿ ಆಯಿತೆಂದು ಹೇಳುತ್ತಾರೆ . ತಂದೆಯ ಕಾಲಾನಂತರ  ಆಡಳಿತದ ಚುಕ್ಕಾಣಿ  ತಿಮ್ಮಣ್ಣನ  ಕೈಗೆ ಬರುತ್ತದೆ  , ಆಡಳಿತ ನಡೆಸುವ ಕಾಲದಲ್ಲಿ  ಒಮ್ಮೆ ಅಪಾರ ಪ್ರಮಾಣದ  ಚಿನ್ನ  ಲಭ್ಯವಾದ ಕಾರಣ  ತಿಮ್ಮಣ್ಣ  ಎಂಬ ಹೆಸರು  ಕನಕ  ಎಂದಾಗುತ್ತದೆ,  ವಿಜಯ ನಗರ  ಸಾಮ್ರಾಜ್ಯದ ಹಿತ ಕಾಯಲು  ಯುದ್ದ ಮಾಡಿ  ಯುದ್ದದಲ್ಲಿ ಗಾಯಗೊಂಡ  ಕನಕ  ಚೇತರಿಸಿಕೊಳ್ಳುವ ಹಂತದದಲ್ಲಿ   ತಾಯಿ,  ಹೆಂಡತಿ ಹಾಗು ಮಕ್ಕಳ   ಸಾವು ಜೀವನದಲ್ಲಿ  ವಿರಕ್ತಿ ಮೂಡಿಸುತ್ತದೆ ,  ಹಣ , ಐಶ್ವರ್ಯ ಎಲ್ಲವನ್ನೂ ತ್ಯಜಿಸಿ   ವಿಷ್ಣುವಿನ ಆರಾಧಕನಾಗಿ  ದಾಸ ನಾಗಿ  ಭಕ್ತಿ ಪಂಥದ  ಮೂಲಕ ವಿಷ್ಣುವನ್ನು ಕಾಣಲು  ಕನಕದಾಸರಾಗಿ  ಲೋಕ ಸಂಚಾರ ಮಾಡುತ್ತಾ   ಅಮರರಾಗುತ್ತಾರೆ, ಕನಕದಾಸರ  ಬಾಳಿನಲ್ಲಿ  ಬಹು ಮುಖ್ಯ ಪಾತ್ರವಹಿಸಿದ  ಗ್ರಾಮವೇ  ಈ  "ಬಾಡ " ಎಂಬ ಐತಿಹಾಸಿಕ ಸ್ಥಳ .


ಬಾಡ ದಲ್ಲಿ ಕಂಡುಬರುವ  ಅರಮನೆಯ ಅವಶೇಷಗಳು



ಅರಮನೆಯ  ಸನಿಹ ಕಂಡುಬರುವ  ಪುರಾತನ ಕೊಳ



ನಾನೂ ಪ್ರಕಾಶ್ ಹೆಗ್ಡೆ  ಅಲ್ಲೇ ಇದ್ದ ಸ್ಥಳೀಯ  ವ್ಯಕ್ತಿಯೊಬ್ಬರ ಮೂಲಕ  ಬಾಡ  ದಲ್ಲಿ ಸುತ್ತಾಡಿದೆವು,   ನಮಗೆ ಒಂದು ಅರಮನೆಯ ಅವಶೇಷ ಗೋಚರಿಸಿತು, ಹತ್ತಿರ  ಹೋಗಿ ಗಮನಿಸಿದರೆ  ಆಕಾಲದಲ್ಲಿ  ಅರಮನೆ ಕಟ್ಟಲು ಉಪಯೋಗಿಸಿದ್ದ  ಗಾರೆ  ಗಚ್ಚು , ಬಂಡೆಗಳ  ಬಳಕೆ, ವಿನ್ಯಾಸ , ಮುಂತಾದ ವಿಚಾರಗಳು ತಿಳಿದುಬಂದವು , ಸನಿಹದಲ್ಲಿ ಒಂದು ದೊಡ್ಡ ವೃತ್ತಾಕಾರದ  ಕೊಳ ಕಾಣಿಸಿತು ಇಲ್ಲಿಯೂ ಸಹ  ವರ್ತುಲಾಕಾರವಾಗಿ ಕೊಳವನ್ನು  ನಿರ್ಮಿಸುವಾಗ  ಬಂಡೆಗಳನ್ನುಅದಕ್ಕೆ ಅನುಗುಣವಾಗಿ   ಅಂದಗೆಡದಂತೆ  ಬಳಸಿರುವುದು  ಕಂಡು ಬಂತು,  ಹಾಗೆ ನೋಡುತ್ತಾ  ಅಲೆದಾಡಿದ್ದ ನಮಗೆ ನಮ್ಮ ಜೊತೆ ಬಂದಿದ್ದ ಸ್ಥಳಿಯರು   ಸಾರ್ ಬನ್ನಿ ಇಲ್ಲಿ ಒಂದು ಪುರಾತನ  ದೇವಾಲಯ ಇದೆ ಎಂದು ಹೇಳಿ  ಅಲ್ಲಿಗೆ ಕರೆದುಕೊಂಡು ಹೋದರು


.
ಪುರಾತನ ವಿಷ್ಣು ದೇಗುಲ  ಇದ್ದ ಬಗ್ಗೆ ಸಾಕ್ಷಿ

ದೇಗುಲದಲ್ಲಿ  ಅಂದು ಉಪಯೋಗಿಸಿದ್ದ  ಸುಂದರ  ಕಲ್ಲಿನ ಕೆತ್ತನೆಯ ಕಂಬದ  ಅವಶೇಷಗಳು

ಈ  ಸಾಕ್ಷಿಯ  ಮೂಲಕ  ಹೇಳೋದಾದ್ರೆ  ಬಾಡ ದಲ್ಲಿ  ಮೂರು ಸುತ್ತಿನ ಕೋಟೆ ಇತ್ತು .


 ಸ್ಥಳೀಯರ  ಹೇಳಿಕೆಯಂತೆ  ಹಾಲಿ ಕಾಗಿನೆಲೆಯಲ್ಲಿರುವ  ಕೇಶವನ   ಮೂರ್ತಿ  ರಂಗನಾಥ  ಎಂಬ ಹೆಸರಿನಲ್ಲಿ  ಬಾಡ  ಗ್ರಾಮದ  ರಂಗನಾಥ ದೇವಾಲಯದಲ್ಲಿ   ಇದ್ದಿತೆಂದು  ಹೇಳುತ್ತಾರೆ, ಅದಕ್ಕೆ ಪುಷ್ಟಿಕೊಡುವಂತೆ  ಅಲ್ಲಿ ಒಂದು ಪುರಾತನ  ವಿಷ್ಣು ದೇವಾಲಯ ಇದ್ದ ಬಗ್ಗೆ ಇಂದಿಗೂ  ಸಾಕ್ಷಿದೊರಕುತ್ತದೆ .  ದೇಗುಲದ ಅವಶೇಷಗಳು  ಚೆಲ್ಲಾಪಿಲ್ಲಿಯಾಗಿ    ಅಲ್ಲಲ್ಲಿ ಅಲ್ಲಲ್ಲಿ ಬಿದ್ದಿದ್ದು  , ಕನಕದಾಸರ ಹಿಂದಿನ ವೈಭವದ  ಕಥೆಯನ್ನು  ನೆನಪಿಸುತ್ತವೆ ,  ಅಲ್ಲೇ ಕಂಡುಬರುವ  ಮತ್ತೊಂದು ಚಿತ್ರವೂ ಒಗಟಾಗಿ  ಕಾಡಿ  ಬಾಡ  ಗ್ರಾಮದಲ್ಲಿ ಮೂರು ಸುತ್ತಿನ  ಕೋಟೆ ಇತ್ತು ಎನ್ನುತ್ತದೆ . ಈ ಊರು ಅವನತಿ ಹೊಂದುವುದನ್ನು ಅರಿತಿದ್ದ  ಕನಕದಾಸರು  ಇಲ್ಲಿನ ರಂಗನಾಥ ಮೂರ್ತಿಯನ್ನು  ಕಾಗಿನೆಲೆಗೆ ಸಾಗಿಸಿ  ಅಲ್ಲೇ ನೆಲೆ ನಿಂತರೆಂದು  ಸ್ಥಳೀಯರು  ಹೇಳುತ್ತಾರೆ .  ಇವುಗಳನ್ನು ಪರಿಶೀಲಿಸೋಣ ಎಂದರೆ   ಹೆಚ್ಚಿನ ಮಾಹಿತಿ  ಲಭ್ಯವಾಗುತ್ತಿಲ್ಲಾ, ವಿಕಿಪೀಡಿಯದಲ್ಲಿಯೂ  ಹೆಚ್ಚು ಮಾಹಿತಿ ಇಲ್ಲಾ,  ಗೆಜೆತೀರ್ ಗಳು ಮೌನವಾಗಿವೆ  . ಸಧ್ಯಕ್ಕೆ  ಸ್ಥಳೀಯರ ನಂಬಿಕೆಯೇ  ಇತಿಹಾಸವಾಗಿದೆ ಇಲ್ಲಿ.




ಕನಕದಾಸರ ಗದ್ದಿಗೆ ಇರುವ ಸ್ಥಳ


 ಹಾಗೆ ಮುನ್ನಡೆದ ನಾವು  ಕನಕದಾಸರ ಗದ್ದಿಗೆ  ಇದೆಯೆಂದು ತಿಳಿದು ನೋಡಲು ಹೋದೆವು  ಅಲ್ಲಿಗೆ ಹೋದರೆ ಬಹಳಷ್ಟು  ಜನ ದೂರದ ಊರಿನಿಂದ  ಕನಕದಾಸರ ಗದ್ದಿಗೆ ನೋಡಲು  ಬಂದಿದ್ದರು, ಆದರೆ   ಸುಮಾರು ಒಂದು ತಾಸು ಕಳೆದರೂ  ಬಾಗಿಲು ತೆಗೆದು ಕನಕದಾಸರ ಗದ್ದಿಗೆ ದರ್ಶನ ಮಾಡಿಸಲು ಯಾರೂ ಬರಲಿಲ್ಲ ,  ಅಲ್ಲೇ ಅಡ್ಡಾಡುತ್ತಾ ಇದ್ದ ನಮಗೆ ಸನಿಹದಲ್ಲೇ ಮತ್ತಷ್ಟು ಪುರಾತನ ಅವಶೇಷಗಳು ಗೋಚರಿಸಿದವು




ಕನಕದಾಸರ ಗದ್ದಿಗೆ ಸಮೀಪ ಇರುವ ದೇಗುಲದ ಒಳ ನೋಟ




ಬಾಡ  ಗ್ರಾಮದಲ್ಲಿ  ಕಂಡುಬಂದ  ಶಾಸನ



ಇತಿಹಾಸದ  ಘಟನೆ ನೆನಪಿಸುವ ವೀರಗಲ್ಲುಗಳು






 ಹೌದು ಕನಕದಾಸರ  ಗದ್ದಿಗೆ  ಸಮೀಪ    ಬಿಳೀ ಬಣ್ಣದ ಒಂದು ಸಣ್ಣ ಮನೆ  ಗಮನ ಸೆಳೆಯಿತು ಹತ್ತಿರ ಹೋಗಿ ನೋಡಲು ನಮಗೆ  ಮತ್ತಷ್ಟು ಅಚ್ಚರಿತರುವ  ವಿವರಗಳು  ಕಂಡವು  , ಆ ಬಿಳಿ ಮನೆ ಒಂದು ಹಳೆ ಶಿವನ ದೇಗುಲವಾಗಿದ್ದು , ಒಳಗಡೆ ಪುರಾತನ  ಶಿವಲಿಂಗ , ಬಸವ ಹಾಗು ಮತ್ತೆ ಕೆಲವು ವಿಗ್ರಹಗಳನ್ನು ಕಂಡೆವು,  ದೇಗುಲದ ಹೊರಗೆ ಬಂದರೆ  ಶಾಸನ ಕಲ್ಲು  ಕಾಣಿಸಿತು , ಹತ್ತಿರ ಹೋಗಿ ನೋಡಲು  ಶಾಸನ  ಕಾಲನ ಹೊಡೆತಕ್ಕೆ ಸಿಕ್ಕಿ  ಮಸುಕಾಗಿ ಅಳಿಸಿ ಹೋಗಿತ್ತು , ಅಸ್ಪಷ್ಟ ವಾಗಿಯೂ ಓದಲು ಆಗಲಿಲ್ಲ ಇರಲಿ ಎಂದು ವಿವಿಧ ಕೋನಗಳಿಂದ ಇದರ ಚಿತ್ರ   ಸೆರೆಹಿದಿದೆ , ನಂತರ ಆ ಶಾಸನದ ಕಲ್ಲಿನಲ್ಲಿ ಕಂಡ  ಶಿವಲಿಂಗ , ಹಸುಕರು,  ಸೂರ್ಯ ಚಂದ್ರ  ಇವುಗಳು  ಯಾವುದೋ ಸಂದೇಶ ನೀಡುತ್ತಿವೆ ಎನ್ನೋದು ಸ್ಪಷ್ಟವಾಗಿತ್ತು ಆದರೆ  ಈ ಶಾಸನ ಸಂರಕ್ಷಣೆ ಆಗದೆ ಇದರ  ವಿವರ ಸಂಶೋಧನೆ ಆಗದೆ  ಜಗತ್ತಿಗೆ ವಿಚಾರ ತಿಳಿಯದಾಗಿದೆ, ದಕ್ಷಿಣ ಕರ್ನಾಟಕದ  ಭಾಗದ ಹೆಚ್ಚು ಶಾಸನಗಳನ್ನು  ಬಿ .ಎಲ್ . ರೈಸ್  ರವರು  ಸಂಶೋದಿಸಿ  ಎಪಿಗ್ರಾಫಿಯಾ  ಸಂಚಿಕೆ ತಂದು  ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ , ಆದರೆ  ಇದೆ ರೀತಿ  ಉತ್ತರ ಭಾಗದ  ಕಡೆ  ಶಾಸನಗಳ  ಸಂರಕ್ಷಣೆ , ಸಂಶೋಧನೆ  ಹೆಚ್ಚು ಆಗಿಲ್ಲದಿರುವುದು ಕಂಡು ಬರುತ್ತದೆ . ಹಾಗಾಗಿ  ಇಂತಹ ಪ್ರದೇಶಗಳಲ್ಲಿ ಕಂಡು ಬರುವ  ಶಾಸನಗಳ  ಬಗ್ಗೆ ಮಾಹಿತಿ ಶೂನ್ಯವಾಗಿದೆ .


ಪಾಳು ಬಿದ್ದ ಪುರಾತನ  ದೇಗುಲ


ನಿರಾಸೆಯಿಂದ  ಬರಲು ಅಣಿಯಾಗುತ್ತಿದ್ದ ನಮಗೆ  ಪಾಳು  ಬಿದ್ದ ಮತ್ತೊಂದು ದೇಗುಲದ ದರ್ಶನ ಆಯ್ತು , ದೇಗುಲದ ತಲೆಯಮೇಲೆ ಮಣ್ಣಿನ ಗುಡ್ಡೆ, ಸುತ್ತಲೂ  ಗಿಡ ಗಂಟಿಗಳ  ಅಲಂಕಾರ, ಬಿರುಕುಬಿಟ್ಟ ಗೋಡೆಗಳು,  ಮುಕ್ಕಾದ  ಕೆತ್ತನೆಗಳು ಎಲ್ಲವೂ ರೋಧಿಸುತ್ತಾ   ನಮ್ಮಗಳ   ಇತಿಹಾಸ ಪ್ರಜ್ಞೆಯನ್ನು ಶಪಿಸುತ್ತಾ   ಅಸಹಾಯಕತೆಯಿಂದ  ಅಳಿವಿನತ್ತ ಮುಖಮಾಡಿ ನಿಂತಿದ್ದವು ,



"ನೀ ಮಾಯೆಯೊಳಗೋ  ಮಾಯೇಯೋಳು ನೀನೋ "



ಇತ್ತಾ ಬಾಡ ದಲ್ಲಿನ  ವೃತ್ತದಲ್ಲಿ  ಕುಳಿತಿದ್ದ  ಕನಕದಾಸರ  ಪ್ರತಿಮೆ   "ನೀ ಮಾಯೆಯೊಳಗೋ  ಮಾಯೇಯೋಳು ನೀನೋ " ಎಂದು ಹಾಡುವ ಬದಲಾಗಿ   "ನೀ ಅಜ್ಞಾನ ದೊಳಗೋ   ಅಜ್ಞಾನ ದೊಳು  ನೀನೋ"   ಎಂದು ಹಾಡಿದಂತೆ  ಅನ್ನಿಸಿ  ಹೆಚ್ಚಿನ ಸಮಯ ವ್ಯರ್ಥ ಮಾಡಬಾರದೆಂದು   ಕಾಗಿನೆಲೆ ನೋಡಲು  ಹಾವೇರಿಯ ಕಡೆ  ಪಯಣ  ಮುಂದುವರೆಸಿದೆವು , ಹೊಟ್ಟೆ ಚುರುಗುಟ್ಟುತ್ತಿತ್ತು , ಕಾರು ಹಾವೇರಿ ಪ್ರವೆಶಿಸುತ್ತಿತ್ತು.