Showing posts with label gokak. Show all posts
Showing posts with label gokak. Show all posts

Sunday, May 17, 2015

ಹೀಗೊಂದು ತುಂಟ ಮನಸಿನ ಜೊತೆ ಪಯಣ ......16 ಹಾವೇರಿಯಲ್ಲಿ ಹಸಿವಿನಲ್ಲೂ ಹುಡುಗಾಟ ,

ಜ್ಞಾನದಲ್ಲಿ  ದೇವರ ಕಂಡ ಕನಕ ದಾಸರು 





ಬಾಡ ದಲ್ಲಿನ  ವೃತ್ತದಲ್ಲಿ  ಕುಳಿತಿದ್ದ  ಕನಕದಾಸರ  ಪ್ರತಿಮೆ   "ನೀ ಮಾಯೆಯೊಳಗೋ  ಮಾಯೇಯೋಳು ನೀನೋ " ಎಂದು ಹಾಡುವ ಬದಲಾಗಿ   "ನೀ ಅಜ್ಞಾನ ದೊಳಗೋ   ಅಜ್ಞಾನ ದೊಳು  ನೀನೋ"   ಎಂದು ಹಾಡಿದಂತೆ  ಅನ್ನಿಸಿ  ಹೆಚ್ಚಿನ ಸಮಯ ವ್ಯರ್ಥ ಮಾಡಬಾರದೆಂದು   ಕಾಗಿನೆಲೆ ನೋಡಲು  ಹಾವೇರಿಯ ಕಡೆ  ಪಯಣ  ಮುಂದುವರೆಸಿದೆವು , ಹೊಟ್ಟೆ ಚುರುಗುಟ್ಟುತ್ತಿತ್ತು , ಕಾರು ಹಾವೇರಿ  ಪ್ರವೇಶ  ಮಾಡಿತ್ತು ,


ಹಾವೇರಿಯಲ್ಲಿ  ಒಂದು  ಒಳ್ಳೆಯ ಹೋಟೆಲ್


 ಹಾವೇರಿ  ಪಟ್ಟಣದೊಳಗೆ ನಮಗೆ ಮೊದಲ ಪ್ರವೇಶ ,  ಆ ಊರಿನ ಬಗ್ಗೆ ಹೆಚ್ಚು ತಿಳುವಳಿಕೆ ಇರಲಿಲ್ಲ, 
ಯಾವುದಾದರೂ ಒಳ್ಳೆ ಹೋಟೆಲ್ ಸಿಕ್ಕಿದರೆ  ಮೊದಲು ಊಟ ಮಾಡೋಣಾ  ಅಂತಾ  ಅನ್ನಿಸಿತು. ಹಾವೇರಿಗೆ  ಪ್ರವೇಶಿಸುತ್ತಿದ್ದಂತೆ  ಕಂಡಿತು ಒಂದು ಭವ್ಯ  ಕಟ್ಟಡದಲ್ಲಿ ಮಿಂಚುತ್ತಿದ್ದ   ಹೋಟೆಲ್ ಒಂದಕ್ಕೆ ನಮ್ಮ ಪ್ರವೇಶ , ಅಚ್ಚರಿ ಎಂದರೆ  ಒಬ್ಬರೂ ಗ್ರಾಹಕರು ಇರಲಿಲ್ಲ,  ಪ್ರಕಾಶಣ್ಣ  ಹೇಳಿದ್ರೂ ಕೇಳದೆ  ಬನ್ನಿ ಪ್ರಕಾಶಣ್ಣ  ಜನ ಜಾಸ್ತಿ ಇಲ್ಲಾ  ಆರಾಮವಾಗಿ  ಕುಳಿತು ಹೊಟ್ಟೆ ತುಂಬಾ ಊಟ ಮಾಡೋಣ ಅಂತಾ    ಆ ಹೋಟೆಲ್ ನೊಳಗೆ  ಪ್ರವೇಶಿಸಿ   ಮೂರು ಊಟಕ್ಕೆ  ಆರ್ಡರ್  ಮಾಡಿ  ಕೈತೊಳೆಯಲು  ಹೊರಟೆ  ಪ್ರಕಾಶಣ್ಣ  ಮೊದಲು ಹೋಗಿದ್ದವರು  ಓದಿ ಬಂದು  ಬಾಲಣ್ಣ  ಇಲ್ಲಿ ತಿಂದೆ ಇದ್ರೂ  ಪರವಾಗಿಲ್ಲ ಮೊದಲು ಆರ್ಡರ್ ಕ್ಯಾನ್ಸಲ್ ಮಾಡಿ ಅಂತಾ ಒಂದೇ ಉಸಿರಿಗೆ ಹೇಳಿದ್ರೂ  , ಅರೆ ಇದೇನಿದೂ ಅಂತಾ  ಕೈತೊಳೆಯಲು ಹೋದ್ರೆ  ಆ ವಾಶ್ ಬೇಸಿನ್ ನೋಡಿ   ಅಲ್ಲಿನ ದರ್ಶನ ಕಂಡು ಸುಸ್ತಾದೆ , ಅತ್ಯಂತ ಕೊಳಕು ವಾಶ್ ಬೇಸಿನ್,  ಊಟಮಾಡಲು ಅಸಹ್ಯ ಉಂಟುಮಾಡುವಂತಹ  ದರ್ಶನ  ನೀಡಿತ್ತು, ಈ ಹೋಟೆಲ್  ಹೊರನೋಟಕ್ಕೆ  ಥಳಕು  ಒಳಗಡೆ  ಗಬ್ಬು ನಾರುವ ಕೊಳಕು  ಎಂಬುದು ಅರ್ಥ ಆಗಿತ್ತು,  ಈ  ಗಡಿಬಿಡಿಯಲ್ಲಿ  ಆ ಹೋಟೆಲ್ ಹೆಸರನ್ನು ನೋಡೋದೇ ಮರೆತಿದ್ದೆ . ಮೊದಲೇ ಹೊಟ್ಟೆ ಹಸಿವು  ತಿನ್ನಲು ಹೋದ್ರೆ ಇಂತಹ ಹೋಟೆಲ್ ಗಳ ನರಕ ದರ್ಶನ , ನಮ್ಮ ಪ್ರವಾಸಕ್ಕೆ ಹೊಸ ಅನುಭವ ಸೇರಿಸಿತ್ತು,  ಹಸಿವಿನ ಆತುರದಲ್ಲಿ   ಮಾಡಿಕೊಂಡಿದ್ದ  ನಮ್ಮ ದಡ್ಡತನಕ್ಕೆ  ಪ್ರಕಾಶಣ್ಣ  ಹಾಗು ನಾನು ಪರಸ್ಪರ  ಮುಖ ನೋಡಿಕೊಂಡು  ನಕ್ಕು  ಮುಂದೆ ಸಾಗಿದೆವು  , ಸ್ಥಳಿಯರ  ಶಿಫಾರಸ್ಸಿನಂತೆ   ಹಾವೇರಿ ಪಟ್ಟಣದೊಳಗೆ   ಇದ್ದ  ಹೋಟೆಲ್ ಶಿವ ಶಕ್ತಿ   ಯನ್ನು ಹೊಕ್ಕೆವು .     ಇದ್ದದ್ದರಲ್ಲಿ ನಮ್ಮ   ಹಸಿವಿನ  ಸಂಕಟಕ್ಕೆ  ಇದ್ದದ್ದರಲ್ಲೇ  ಶುಚಿಯಾದ ರುಚಿಯಾದ  ಊಟ  ಸಾಂತ್ವನ  ಸಾಂತ್ವನ ನೀಡಿತ್ತು .

 
 ಪ್ರಕಾಶಣ್ಣ ಹಾಸ್ಯಕ್ಕೆ  ನೆತ್ತಿ ಹತ್ತಿತ್ತು  ನನಗೆ 


ಹೋಟೆಲ್ ಶಿವಶಕ್ತಿಯಲ್ಲಿ  ಊಟ ಮಾಡುತ್ತಾ , ಸಮಾಧಾನ ಪಟ್ಟು ಕೊಂಡೆವು ,   ಇನ್ನೇನು  ಊಟ ಮುಗಿಸಿ  ನೀರು ಕುಡಿಯುವ ವೇಳೆ  , ಪ್ರಕಾಶ್ ಹೆಗ್ಡೆ  ಹಾಸ್ಯದ  ಬಾಣ  ಬಿಟ್ಟರು ,   ಬಾಲಣ್ಣ  ಒಂದು ವೇಳೆ ಅದೇ ಕೊಳಕಿನ  ವಾಶ್ ಬೇಸಿನ್ ನಲ್ಲಿ  ಕೈತೊಳೆದು ಅದೇ ಹೋಟೆಲ್ ಊಟ ಮಾಡಿದ್ರೆ ನಮ್ಮ ಮುಖ  ಹೇಗೆ ಇರ್ತಿತ್ತು  ..?  ನೀರು ಕುಡಿಯುತ್ತಿದ್ದ ನನಗೆ ಈ ಹಾಸ್ಯಕ್ಕೆ  ನಗು ತಡೆಯಲಾಗಲಿಲ್ಲ,    ಗೊಳ್  ಅಂತಾ ನಕ್ಕೆ  ಕುಡಿಯುತ್ತಿದ್ದ  ನೀರು ಚಿಲುಮೆ ಯಂತೆ ಉಕ್ಕಿ  ಮೈಮೇಲೆ  ಚೆಲ್ಲಿತು ,   ಅದೇ ಸಮಯಕ್ಕೆ ನನ್ನ ಶಿಷ್ಯ  ನನಗೆ ಗೊತ್ತಿಲ್ಲದಂತೆ ಚಿತ್ರ ತೆಗೆದು   ಆ ಸನ್ನಿವೇಶ ದ  ದರ್ಶನ   ಮಾಡಿಸಿದ . ಅ ಕೊಳಕು ಹೋಟೆಲ್  ನಲ್ಲಿನ   ನಮ್ಮ ಎಡವಟ್ಟು  ಪ್ರಸಂಗ ನೆನೆ ನೆನೆದು ಮಸಾರೆ ನಕ್ಕು ಬಿಟ್ಟೆವು .  ರುಚಿಯಾದ  ಊಟದ ಜೊತೆ  ಈ ಹಾಸ್ಯದ ರಸಾಯನ   ನಮ್ಮ ಪ್ರಯಾಣದ  ಆಯಾಸ  ಪರಿಹಾರ ಮಾಡಿತ್ತು .



 ಹಾವೇರಿಯ ವಿಶೇಷದಲ್ಲಿ   ಈ ಪಾನ್ ಅಂಗಡಿ  ಸಹ ಒಂದು 

 ಹೊಟ್ಟೆ ತುಂಬಾ ಊಟ ಮಾಡಿ ಹೊರಗೆ ಬಂದ  ನಮಗೆ  ಪಕ್ಕದಲ್ಲೇ ಕಂಡಿದ್ದು ಈ ಬೀಡಾ  ಶಾಪ್ , ಎಲ್ಲರೊಡನೆ  ನಗು ನಗುತ್ತಾ ಪಾದರಸದಂತೆ ಬೀಡಾ  ಕಟ್ಟಿಕೊಡುತ್ತಿದ್ದ  ಈ ಹುಡುಗನನ್ನು  ರೇಗಿಸುತ್ತಾ  ಸಿಹಿಯಾದ ಬೀಡಾ  ತಿಂದು  ಖುಶಿ ಪಟ್ಟೆವು .   ಅರೆ ರುಚಿಯಾದ  ಊಟ ಕೊಟ್ಟು  ನಮಗೆ ಖುಶಿನೀಡಿದ  ಹಾವೇರಿ ಬಗ್ಗೆ ಪರಿಚಯ ಮಾಡಿಕೊಳ್ಳೋಣ ಬನ್ನಿ ,






ಈ ಹಾವೇರಿ ಯಲ್ಲಿ ನೋಡೋದು ಬಹಳಷ್ಟಿದೆ , ಆದ್ರೆ ನಮಗೆ ಸಮಯ ಬಹಳ ಕಡಿಮೆ ಇದ್ದ ಕಾರಣ , ಕಾಗಿನೆಲೆ  ಮಾತ್ರ ನೋಡಲು ಸಾಧ್ಯ ಆಯ್ತು,  ಆದರೆ  ಮುಂದೆ ಬಂದಾಗ ಇನ್ನಷ್ಟು ನೋಡಲು  ಒಂದಷ್ಟು ಮಾಹಿತಿ ಸಂಗ್ರಹ   ಮಾಡಿಕೊಂಡೆ . ಹಾವೇರಿಯಲ್ಲಿ   ಐತಿಹಾಸಿಕ  ಸಿದ್ದೇಶ್ವರ  ದೇವಾಲಯ ವಿದೆ,  ಇನ್ನು ಈ ಜಿಲ್ಲೆ   ಹಲವಾರು  ಮಹಾಪುರುಷರಿಗೆ  ಜನ್ಮ ನೀಡಿದೆ , ಸರ್ವಜ್ಞ , ಕನಕದಾಸ, ಶಿಶುನಾಳ ಶರೀಫರು ,  ಹಾನಗಲ್ ಕುಮಾರ ಶಿವಯೋಗಿಗಳು,  ವಾಗೀಶ ಪಂಡಿತರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು,  ಲೇಖಕರಾದ  ಗಳಗನಾಥರು ,  ಗೋಕಾಕ್ ಚಳುವಳಿ ನೇತಾರ, ಡಾಕ್ಟರ್ . ವಿ. ಕೆ. ಗೋಕಾಕ್ ರವರು,  ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ,   ಸ್ವಾತಂತ್ರ್ಯ ಕ್ಕಾಗಿ ಬ್ರಿಟೀಷರ ಸೆಣಸಿದ  ಮೈಲಾರ ಮಹಾದೇವ  ಈ ಮಣ್ಣಿನ ಮಗನೆ .  ಈ ಜಿಲ್ಲೆಯ ನೆಲ  ಚಾಲುಕ್ಯ , ರಾಷ್ಟ್ರಕೂಟ , ಕದಂಬ , ಹೊಯ್ಸಳ, ವಿಜಯನಗರ ಸಾಮ್ರಾಜ್ಯದ ಅರಸರ  ಆಳ್ವಿಕೆ   ಕಂಡಿದೆ .  ತುಂಗಭದ್ರ , ಹಾಗು  ವರದ ಈ ಜಿಲ್ಲೆಯ ಪ್ರಮುಖ ನದಿಗಳು , ತುಂಗಾ ಭದ್ರ ನದಿಯನ್ನು ವರದಾ ನದಿ  ಸೇರುವ   ತಾಣ ಇಲ್ಲಿದೆ .   ನಮ್ಮ ದೇಶದಲ್ಲಿ ಮೆಣಸಿನಕಾಯಿ  ಅಂದ್ರೆ ತಕ್ಷಣ ಜ್ಞಾಪಕಕ್ಕೆ ಬರೋದು   ಒಂದು  ಅಂದ್ರದ ಗುಂಟೂರು, ಮತ್ತೊಂದು  ನಮ್ಮ ರಾಜ್ಯದ ಬ್ಯಾಡಗಿ ,   ಈ ಪ್ರಸಿದ್ಧ  ಬ್ಯಾಡಗಿ ಹಾವೇರಿ ಜಿಲ್ಲೆಯ ತಾಲೂಕು ಕೇಂದ್ರ , ಇಷ್ಟೊಂದು ವಿಶೇಷ ಹೊಂದಿರುವ   ಹಾವೇರಿ ಜಿಲ್ಲಾ ದರ್ಶನ  ಮಾಡಲು ಮತ್ತೊಮ್ಮೆ ಬರುವ ಸಂಕಲ್ಪ ಮಾಡಿ   ಕನಕದಾಸರು ಪೂಜಿಸಿದ  ಆದಿಕೇಶವನ ನೋಡಲು ದೌಡಾಯಿಸಿದೆವು .