Wednesday, April 20, 2011

ವಿಶ್ವಾಸದಲ್ಲಿ ಸಾಲ ತೆಗೆದುಕೊಂಡ ಈರಭದ್ರ ಕೈಕೊಟ್ಟಾಗ !!!! ಸಹಾಯಮಾಡಿದವನ ಸಂಕಟ ನೋ ಡೋ ವೆಂಕಟರಮಣ ...!!! !!!!

ಇದು ಕಥೆಯೋ ,ಘಟನೆಯೋ ನಿರ್ಧಾರ ನಿಮಗೆ ಬಿಟ್ಟದ್ದು. ನಿಮಗೂ ಇಂತಹ ಘಟನೆ ನಡೆದಿರಬಹುದು.ಬ್ಲಾಗ್ ಲೋಕ ಬೆಳೆದಂತೆ ಪರಸ್ಪರ ಪರಿಚಯ , ಸ್ನೇಹ  ಬೆಳೆಯುತ್ತದೆ.ಒಮ್ಮೊಮ್ಮೆ ಕೆಲವರು ತಮ್ಮ ಅಸಾದ್ಯವೆನ್ನುವ ಕ್ರಿಯಾಶೀಲತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ.ಅಂತಹವರಬಗ್ಗೆ ಬ್ಲಾಗಿಗರಿಗೂ ಆತ್ಮೀಯತೆ ಜಾಸ್ತಿಯಾಗಿ ಅವರ ಸ್ನೇಹಕ್ಕಾಗಿ ಹಾತೊರೆಯುತ್ತಾರೆ.ಇಂತಹ ಸ್ನೇಹವನ್ನು ಉಪಯೋಗಿಸಿಕೊಂಡು ಕೆಲವರು ಹಣದ ಸಹಾಯ ಪಡೆದು ವಾಪಸ್ಸು ಮಾಡಲು ಸತಾಯಿಸಿ ಸ್ನೇಹದ ಅರ್ಥವನ್ನು ಹಾಳು ಮಾಡಿ  ಸಹಾಯಮಾಡಿದ ತಪ್ಪಿಗೆ ಅಮಾಯಕರು ನರಳುವಂತೆ ಮಾಡಿದ ಘಟನೆಗಳು ವರಧಿಯಾಗುತ್ತಿವೆ.ಕೆಳಗಿನ ಒಂದು  ಉದಾಹರಣೆ ನಿಮಗಾಗಿ.

Monday, April 4, 2011

ಯುಗಾದಿ ಹಬ್ಬದ ಶುಭಾಶಯಗಳು.




ಯುಗಾದಿ ಹಬ್ಬದ ಶುಭಾಶಯಗಳು.


ಆತ್ಮೀಯ ಬ್ಲಾಗ್ ಲೋಕದ ಗೆಳೆಯ ಗೆಳತಿಯರೆ ನಿಮಗೆ ಹಾಗು ನಿಮ್ಮ ಕುಟುಂಬದ ಎಲ್ಲರಿಗೆ ಯುಗಾದಿ ಹಬ್ಬದ ಶುಭಾಶಯಗಳು.                                                                                                                                                                                                     ಬನ್ನಿ ಬೇವು ಬೆಲ್ಲ ತಿನ್ನೋಣ.                                                         "ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ  ನಿಂಬಕಂದಳ ಭಕ್ಷಣಂ||"
ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. .                                      ತಮ್ಮೆಲ್ಲರ ಬಾಳು ಬಂಗಾರವಾಗಲಿ. ಬೇವು ಬೆಲ್ಲ ತಿಂದು ಹೋಳಿಗೆ  ಸವಿದು    ಯುಗಾದಿ  ಕವಿತೆ ಓದಿ ಸಂಭ್ರಮದಿಂದ ಶುಭ ಹಾರೈಸಿ ನಲಿಯಿರಿ.                                                                                                                                                                              ಪ್ರೀತಿಯಿಂದ ನಿಮ್ಮವ             
  ಬಾಲು.[ನಿಮ್ಮೊಳಗೊಬ್ಬ ]   

Friday, March 11, 2011

ಅದ್ಸರೀ ನೀವು ಕೈತುತ್ತಿನ ಬಾಲ್ಯ ಅನುಭವಿಸಿದ್ದೀರ??? ಆಹಾ ಆ ಸುಂದರ ನೆನಪೇ!!!!

"ಅಜ್ಜಿ ಕಥೆಯೊಂದಿಗೆ ಕೈತುತ್ತು ಬಲುರುಚಿ "

ಸ್ವಲ್ಪ  ದಿನದ  ಹಿಂದೆ  ಯಾಕೊಕಾಣೆ  ಕೈತುತ್ತು ತಿನ್ನುವ ಬಯಕೆ ಹೆಚ್ಚಾಗಿ  , ಮನೆಯವರೆಲ್ಲಾ ಟೆರಸ್ ಮೇಲೆ ಹೋಗಿ   ಚಾಪೆಹಾಸಿ ಕುಳಿತು ಹುಣ್ಣಿಮೆ  ಚಂದಿರನ ಬೆಳಕಲ್ಲಿ  ಕೈತುತ್ತಿನ ಊಟ ಮಾಡಿದೆವು.ಇದ್ದದ್ದು ನಾಲ್ಕೆಜನ  ಅಮ್ಮ ಎಲ್ಲರಿಗೂ ಸಾರನ್ನ [ ಸೊಪ್ಪಿನ ಸಾರಿನಿಂದ ಕಲೆಸಿದ ಅನ್ನ] ಹಾಗು ಮೊಸರನ್ನವನ್ನು  ಕೈ ತುತ್ತಿನ ಉಂಡೆಮಾಡಿ  ಎಲ್ಲರ ಕೈಗೂ ಹಾಕುತ್ತಿದ್ದಳು ನಾವು ಒಬ್ಬರಿಗೊಬ್ಬರು ಕೀಟಲೆ  ಮಾಡುತ್ತಾ  ನಗುತ್ತಾ  ಅಮ್ಮ ನೀಡಿದ ತುತ್ತುಗಳನ್ನು  ಸ್ವಾಹ ಮಾಡುತ್ತಿದ್ದೆವು. ಬೇಸಿಗೆಯಲ್ಲಿ  ಮನೆಯಲ್ಲಿ ಕುಳಿತು ಊಟ ಮಾಡುವುದಕ್ಕಿಂತಾ ಇದು ತುಂಬಾ ಖುಷಿಕೊಟ್ಟಿತು.  ನಾನು ಹಾಗೆ ಬಾಲ್ಯದ ನೆನಪಿಗೆ ಜಾರಿದೆ ..                                                                                                                                      ನಾನು ಚಿಕ್ಕವನಿದ್ದಾಗ ನನ್ನ ಬಾಲ್ಯ ಹಳ್ಳಿಯಲ್ಲಿ ಕಳೆದಿತ್ತು. ಹಳ್ಳಿಯಲ್ಲಿ ಮನೆಯ ಮುಂದೆ ವಿಶಾಲವಾದ ಅಂಗಳವಿತ್ತು. ನಮ್ಮ ಮನೆಯಲ್ಲಿ ಹುಣ್ಣಿಮೆ ಬಂತೆಂದರೆ ನಮ್ಮ ಅಪ್ಪ ಅಮ್ಮ ಎಲ್ಲರನ್ನೂ ಅಂಗಳದಲ್ಲಿ ಕುಳ್ಳಿರಿಸಿ ಕೈತುತ್ತು ತಿನ್ನಿಸುತ್ತಿದ್ದ ನೆನಪು ಯಾವಾಗಲೂ ಮೂಡುತ್ತದೆ.ಇನ್ನು ಬೇಸಿಗೆ ರಜೆಯಲ್ಲಿ ನಮ್ಮ ಮನೆಗೆ ಬರುವ  ನೆಂಟರು  ಹಾಗು ಅವರ ಮಕ್ಕಳು ಬಂದಾಗ ಗದ್ದೆಯ ಹತ್ತಿರವಿದ್ದ  ನಾಲೆಯ  ಬಳಿ ವೃತ್ತಾಕಾರದಲ್ಲಿ ಕುಳಿತು  ಕೈತುತ್ತು ತಿಂದು ನಲಿದದ್ದು ಮರೆಯಲಾರದ ಕ್ಷಣ .ಇಂದು ನಮ್ಮ ದುರಾದೃಷ್ಟ ನಮ್ಮ ಜೀವನ ಶೈಲಿ ಬದಲಾಗಿ ಬೆಳದಿಂಗಳ ಊಟ , ಕೈತುತ್ತು  ತಿನ್ನುವ ಆ ಮಜಾ ನಶಿಸಿಹೋಗಿ , ನಮ್ಮ ಭಾವನೆಗಳನ್ನು ಮೂರ್ಖ ಪೆಟ್ಟಿಗೆಯ ಮುಂದೆ ಹಂಚಿಕೊಂಡು ನಾವೂ ಮೂರ್ಖರಾಗಿ ಜೀವನ ವನ್ನು ಆಧುನಿಕ ಜೀವನ ಅಂತಾ ಜಂಬ ಪಡುತ್ತಿದ್ದೇವೆ.                                                                                         
" ಅಜ್ಜಿ  ಇನ್ನೂ ಸ್ವಲ್ಪ ತಿನ್ಸೂ "
                                                                                                                                                                     ಇನ್ನು  ಮಕ್ಕಳಿಗಂತೂ ಅಜ್ಜಿಯ ಕಥೆ ಕೇಳುತ್ತಾ   ಕೈತುತ್ತು ತಿನ್ನುವ ಯೋಗವೇ ಇಲ್ಲದಾಗಿದೆ. ಯಾಕೆಂದ್ರೆ  ಸುಮಾರು ಮಕ್ಕಳ ಅಜ್ಜಿ ಅಜ್ಜಂದಿರು ಇಂದು  ವೃದ್ಧ ಸೇವಾಶ್ರಮ ವಾಸಿಗಳಾಗಿ  ಮರೆಯಾಗಿದ್ದಾರೆ.ನಮಗೆ ಪ್ರೈವೆಸಿ   ಬೇಕೆಂದು  ನಾವು ಹಾಕಿಕೊಂಡ ಬದುಕು ಇಂದು ನಮ್ಮ ಜೀವನಶೈಲಿಯನ್ನು  ಹಾಳು ಮಾಡುತ್ತಾ ಅಟ್ಟಹಾಸದಿಂದ  ರಕ್ಕಸನಂತೆ ನಗುತ್ತಿದೆ.ಬನ್ನಿ ಮತ್ತೆ ಕಾಲವನ್ನು ಹಿಂದೆ ಸರಿಸೋಣ.ಆಗದಿದ್ದಲ್ಲಿ ಹಳೆಯ ಜೀವನದ ಕೆಲವು ಆಚರಣೆಗಳನ್ನು ಮತ್ತೆ ಹುಟ್ಟಿಹಾಕೋಣ. ಇದನ್ನು ಓದಿದ ನೀವು ನಿಮ್ಮ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ನಗುತ್ತಾ ಕೈತುತ್ತು ಊಟ ಮಾಡುವ ಹವ್ಯಾಸ ಶುರುಮಾಡಿಕೊಳ್ಳಿ. ಹಾಗು ಪುಟ್ಟ ಮಕ್ಕಳಿದ್ದರೆ ಅವಕ್ಕೂ ಕಥೆ ಹೇಳುತ್ತಾ ಕೈತುತ್ತಿನ ರುಚಿ ನೀಡಿ. ಸಂಭ್ರಮಿಸುವ ಹಿರಿಯರ ಕಾರ್ಯಕ್ಕೆ  ಯಾರೂ ಬೆಲೆ ಕಟ್ಟಲಾರರು.ಇಷ್ಟೆಲ್ಲಾ ಆದನಂತರ ಅಜ್ಜಿ ಅಜ್ಜಂದಿರನ್ನು ವಾಪಸ್ಸು ಮನೆಗೆ ಕರೆತರುವ ಬಗ್ಗೆ  [ಒಂದು ವೇಳೆ ವೃದ್ಧ ಸೇವಾಶ್ರಮದಲ್ಲಿದ್ದರೆ ] ಯೋಚಿಸಿ ಕರೆತಂದು ಮಕ್ಕಳಿಗೆ ಅವರ ವಾತ್ಸಲ್ಯ ನೀಡೋಣ.ಬನ್ನಿ ಇಂದೇ ಈ ಬಗ್ಗೆ ಕಾರ್ಯತತ್ಪರರಾಗೋಣ.ಕಳೆದುಹೋದ ಸಂತಸವನ್ನು ಮತ್ತೆ ವಾಪಸ್ಸು ತರೋಣ.

Saturday, March 5, 2011

ಈ ಹಾಡಿನ ಬಗ್ಗೆ ಬರೆಯಲೇ ಬೇಕಾಗಿದೆ !!!!!ಬಳಲಿದ ದೇಹಕ್ಕೆ ಔಷಧಿಯಂತೆ ಬಂದಿತ್ತು ಈ ಹಾಡು!!!

ಕಳೆದ ಸ್ವಲ್ಪ ದಿನಗಳಿಂದ ಬ್ಲಾಗ್ ಲೋಕದಿಂದ ವಿಮುಖನಾಗಿದ್ದೆ. ಕೆಲಸದ ಒತ್ತಡ ಇತ್ಯಾದಿಗಳಿಂದ ಬಳಲಿ ಕಳೆದ ಮಾರ್ಚ್ ಒಂದನೇ ತಾರೀಖು  ಅನಾರೋಗ್ಯಕ್ಕೆ ತುತ್ತಾಗಿ  ಆಸ್ಪತ್ರೆ ಸೇರಿಕೊಂಡು ಹೊರ ಲೋಕದ ಸಂಪರ್ಕ ಕಳೆದುಕೊಂಡು ಆಸ್ಪತ್ರೆ ಬೆಡ್ಡಿನ ಮೇಲೆ ನನ್ನ ದೇಹ ಚಾಚಿಕೊಂಡೆ.ಎಲ್ಲರಿಗೂ ಆತಂಕ.ಹಲವು ಪ್ರಶ್ನೆಗಳು ಉತ್ತರಿಸಲು ಶಕ್ತಿಯಿಲ್ಲದೆ ನಿತ್ರಾಣವಾದ ದೇಹ , ಶುಶ್ರೂಷೆಗೆ ಓಡಾಡುತ್ತಿರುವ ವೈಧ್ಯರುಗಳು,ನರ್ಸುಗಳು, ಸಿಸ್ಟರ್ಗಳು,  ನನ್ನ ದೇಹ ಬಗೆದುಹಾಕಲು  ಸಿದ್ದವಾದಂತೆ ಕಾಣುತ್ತಿದ್ದ ಬಗೆ ಬಗೆಯ  ಯಂತ್ರಗಳು .ಒಟ್ಟಿನಲ್ಲಿ ಅಸಹಾಯಕನಾಗಿ ವೈಧ್ಯರುಗಳು ಸೂಚನೆನೀಡಿದಂತೆ  ಆಡುತ್ತಿದ್ದ ಬೊಂಬೆಯಂತಾಗಿದ್ದೆ.ಧಣಿದು ಅನಾರೋಗ್ಯದಿಂದ ಬಳಲಿದ ದೇಹ ವಿರಾಮ ಬಯಸಿ ಈ ಸ್ಥಿತಿ ಒದಗಿಸಿತ್ತು. ಮೊದಲ ದಿನ ನನ್ನಅನಾರೋಗ್ಯದ ಕಾರಣ ತಿಳಿಯಲು ನೂರೆಂಟು ತರಹದ ಪರೀಕ್ಷೆಗಳ ಸರಮಾಲೆ.ಬಗೆ ಬಗೆಯ ಯಂತ್ರಗಳ ಮುಂದೆ ಬೆತ್ತಲಾದ ಮನಸ್ಸಿನೊಡನೆ ,ಅರೆಬೆತ್ತಲ ದೇಹದೊಡನೆ ನಿಂತು ಅವುಗಳ ಹದ್ದಿನ ಕಣ್ಣಿನ  ಧಾಳಿಗೆ ತುತ್ತಾದೆ. ದೇಹವನ್ನು ತಡಕಾಡಿದ ಯಂತ್ರಗಳು ನನ್ನ ಅನಾರೋಗ್ಯದ ಬಗ್ಗೆ ದೇಹ ಸ್ಥಿತಿಯ ವಿಚಾರವನ್ನು ಚಿತ್ರೀಕರಿಸಿ, ಫೋಟೋ ಹಾಗು ಕಾಗದದಲ್ಲಿ ಮುದ್ರಿಸಿ ಉಗಿಯುತ್ತಿದ್ದವು, ವೈಧ್ಯ ಕಾಣದ್ದನ್ನು ಯಂತ್ರಗಳು ಕಂಡು ನನ್ನ ದೇಹದಲ್ಲಿ ಅಡಗಿದ್ದ ರೋಗಗಳ ಮೇಲೆ ಆರೋಪ ಪಟ್ಟಿ ಸಾಕ್ಷಿ ಸಮೇತ ದಾಖಲೆ ಒದಗಿಸಿದ್ದವು. ತಕ್ಷಣ ಶುರುವಾಯಿತು ಯುದ್ದ .  ಅನಾರೋಗ್ಯದ ವಿರುದ್ಧ ಸಮರ ಸಾರಿದವು  ಮಾತ್ರೆಗಳು, ಹಾಗೂ ಚುಚ್ಚುಮದ್ದುಗಳು . ಮೊದಲ ರಾತ್ರಿ ಆಸ್ಪತ್ರೆ ವಾರ್ಡಿನಲ್ಲಿ ಮಾತ್ರೆಗಳು ನೀಡಿದ ಕಿಕ್ ನೊಂದಿಗೆ ಕಣ್ತುಂಬ ನಿದ್ರೆ ಬಂತು,[ ಮಾತ್ರೆಗಳಲ್ಲಿ ಸ್ಟಿರೀಯಾಯಿಡ್ಸ್ ಇರುವುದಾಗಿ ಕೇಳಿದ್ದ ನೆನಪು] ಮುಂಜಾವಿನಲ್ಲಿ ಎಚ್ಚರಗೊಂಡೆ ಪಕ್ಕದ ಬೆಡ್ಡಿನಲ್ಲಿದ್ದ  ಒಬ್ಬರು  ವಿಷ್ಣು ಸಹಸ್ರನಾಮ ಕೇಳಿ ಪುನೀತರಾಗುತ್ತಿದರು. ಮಾರನೆಯ ದಿನ ಅದೇ ರಾಗ  ಅದೇ ಹಾಡು ನನಗೋ ಹೊರಗಡೆ ಸಂಪರ್ಕವಿಲ್ಲದೆ ಮನಸ್ಸು ರಾಡಿಯಾಗಿ, ವಾರ್ಡಿನಲ್ಲಿಯ ಪ್ರಪಂಚ ಬೇಸರ ಹುಟ್ಟಿಸಿ  ಜೀವನದ ಬಗ್ಗೆ ಹೇಸಿಗೆಯಾಗಿ  ಕೆಟ್ಟ ಆಲೋಚನೆಗಳು ಮನದಲ್ಲಿ ಅವತರಿಸಿ ಹುಚ್ಚು ಹಿಡಿಸಿ ಹುಚ್ಛನಾಗುವಂತಾಗಿದ್ದೆ ಮತ್ತೆ  ರಾತ್ರಿ ಕಳೆಯಲು ಸಿದ್ಧನಾಗುತ್ತಿದ್ದೆ.    ರಾತ್ರಿಯ ನೀರವತೆಯಲ್ಲಿ ಬೀಸಿದ ಗಾಳಿಯಲ್ಲಿ  ಎಲ್ಲಿಂದಲೋ ತೂರಿಬಂತು ಈ ಹಾಡು " ಯಾರಿಗಿಲ್ಲ ನೋವು   ,ಯಾರಿಗಿಲ್ಲ ಸಾವು......ವ್ಯರ್ಥ ವ್ಯಸನದಿಂದ  ಸಿಹಿಯು ಕೂಡ ಬೇವು........!!!!  ರಾಡಿಯಾಗಿದ್ದ ಮನಸ್ಸಿಗೆ ತೇಲಿಬಂದ ಹಾಡಿನ ಈ ಪದಗಳು  ಮಸಿನ ಗೂಡಿನೊಳಗೆ ತೂರಿಕೊಂದವು.ಮತ್ತೊಮ್ಮೆ ಮನ  ಹಾತೊರೆದು ಕಿವಿಯಿಟ್ಟು ಕೇಳಿದಾಗ 
"ಬಾಳ ಕದನದಲ್ಲಿ ಭರವಸೆಗಳು ಬೇಕು !!!ನಾಳೆ ನನ್ನದೆನ್ನುವಾ ನಂಬಿಕೆಗಳು ಬೇಕು !!! ............ ಜೀವರಾಶಿಯಲ್ಲಿ ಮಾನವರಿಗೆ ಆಧ್ಯತೆ !! ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ " ..............ಹಾಡು ಕೇಳುತ್ತ  ಮನಸು ಹಗುರವಾಗಿ ಭರವಸೆಯ ಬೆಳಕು ಚೆಲ್ಲಿದಂತಾಗಿ ಮೈಮರೆತು ಹಾಗೆ ನಿದ್ರಾಪರವಶನಾದೆ. ಮತ್ತೊಮ್ಮೆ ಎಚ್ಚರವಾದಾಗ ಸಿಸ್ಟರ್ ಒಬ್ಬರು ಏನ್ ಸಾರ್ ಇಷ್ಟೊಂದು ನಿದ್ದೆ ಮಾಡಿ ಗೆಲುವಾಗಿದ್ದೀರಾ ಅಂದ್ರು. ಅವರು ನೀಡಿದ ಮಾತ್ರೆ ಹಾಗೂ ಚುಚ್ಚುಮದ್ದು ಸ್ವೀಕರಿಸಿ  ನನ್ನ ಮೊಬೈಲ್ ನಲ್ಲಿದ್ದ  ಹಾಡುಗಳಲ್ಲಿ  ಈ ಹಾಡನ್ನು ಹುಡುಕಿದಾಗ  ಮನಕೆ ಮತ್ತೊಮ್ಮೆ ಕೇಳುವ ಬಯಕೆ ಯಾಗಿ ಈ ಹಾಡನ್ನು ಕೇಳಲು ಶುರುಮಾಡಿದೆ. ಪಕ್ಕದ ಬೆಡ್ಡಿನಲ್ಲಿದ್ದವರು ಸರ್ ಸ್ವಲ್ಪ ಸೌಂಡ್ ಕೊಡಿ  ನಾನು ಕೇಳ್ತೀನಿ ಯಾಕೋ ಈ ಹಾಡು ಮನಸಿಗೆ ಸಮಾಧಾನ ಕೊಡ್ತಿದೆ ಅಂದ್ರು. ಇಬ್ಬರೂ ಹಾಡನ್ನು ಕೇಳಿದ್ವಿ.  ನಂತರ ಈ ಹಾಡನ್ನು ಆಸ್ಪತ್ರೆ ಬಿಡುವವರೆಗೂ ಕನಿಷ್ಠ  ಐವತ್ತು ಭಾರಿ ಕೇಳಿದ್ದೆ. ನೊಂದ ಮನಕ್ಕೆ ಸುಲಭ ಮಾತುಗಳಲ್ಲಿ  ಸಾಂತ್ವನ ನೀಡಿ ಸತೈಸಿದ  ಈ ಹಾಡನ್ನು ಬರೆದ ಕೈಗಳಿಗೆ ಮನಸ್ಸು ನಮನ ಸಲ್ಲಿಸಿತ್ತು. ಹಾಡಿನ ಮೂಲಕ ನನ್ನ ಮನಸ್ಸು ಶಾಂತವಾಗಿ ಅನಾರೋಗ್ಯ ಶಮನಾಗಿ  ಅರ್ಧ ಔಷಧಿಗಳಿಂದ ಹಾಗೂ ಇನ್ನರ್ಧ ಈ ಹಾಡಿನಿಂದ  ಆರೋಗ್ಯ ಮತ್ತೆ ಪಡೆದು  ಮನೆಗೆ ಬಂದೆ. ಅಂದಹಾಗೆ ಒಂದು ಕನ್ನಡ  ಚಿತ್ರದ ಹಾಡು  ನನ್ನ ಮನಸ್ಸಿನ ನೋವನ್ನು ಶಮನ ಗೊಳಿಸಿತ್ತು. ಆ ಹಾಡು ಯಾವುದು ಗೊತ್ತೇ 1993 ರಲ್ಲಿ ಬಿಡುಗಡೆಯಾದ "ಆಕಸ್ಮಿಕ" ಚಿತ್ರದ್ದು, ಹಂಸಲೇಖ ಸಾಹಿತ್ಯ ಬರೆದು  ,ಸಂಗೀತ ನೀಡಿ  ಡಾ// ರಾಜಕುಮಾರ್  ಹಾಡಿದ "ಬಾಳುವಂತ ಹೂವೆ "ಬಾಡುವಾಸೆ ಏಕೆ ?? "  ಸಾಹಿತ್ಯ ರಚಿಸಿದ ಕೈಗಳಿಗೆ ಹಾಗೂ  ಹಾಡಿದ ಗಾಯಕನಿಗೆ  ನನ್ನ ಮನಃಪೂರ್ವಕ   ನಮನಗಳು.

Wednesday, February 23, 2011

ನಿಮ್ಮೊಳಗೊಬ್ಬನಿಗೆ ಸಿಕ್ಕಿತ್ತು ಜ್ಞಾನದ ಹೊನಲು!! "ಸಾಗರದಾಚೆಯ ಇಂಚರ" "ಛಾಯಾ ಕನ್ನಡಿ" ಯಲ್ಲಿ ನಕ್ಕಾಗ !!!


ಕಳೆದ ಗುರುವಾರ ದಿನಾಂಕ 17 /02 /2011 ರಂದು   ನನ್ನ ಸಂಬಂಧಿಯ  ಮದುವೇ ನಿಶ್ಚಿತಾರ್ಥ , ಕಾರ್ಯಕ್ರಮ  ಹೆಂಡತಿಯ ಕಡೆ ನೆಂಟ , ಹಾಗಾಗಿ ಬೆಂಗಳೂರಿಗೆ  ಬರುವ  ಕಾರ್ಯಕ್ರಮ,  ಬೆಂಗಳೂರಿಗೆ ಬರುವ ಮೊದಲೇ  ಹಲವು ಬ್ಲಾಗಿಗರು ಬೆಂಗಳೂರಿಗೆ ಆಗಮಿಸುತ್ತಿರುವ ವಿಚಾರ  ಅನಿಲ್ ಬೇಡಗೆ, ಪ್ರಕಾಶಣ್ಣ, ಶಿವೂ , ಇವರ ಮೂಲಕ ತಿಳಿಯಿತು.ಹಾಗಾಗಿ ದೆಹಲಿಯಿಂದ ಬರುವ ಪ್ರವೀಣ್ ಆರ್ ಗೌಡ ಹಾಗೂ  ಸ್ವೀಡನ್ ದೇಶದಿಂದ  ಆಗಮಿಸಿದ್ದ ಗುರುಮೂರ್ತಿ ಹೆಗ್ಡೆ ರವರುಗಳನ್ನು  ನೋಡುವ ಅವಕಾಶ ಸಿಗುವುದಾಗಿ ಹಿಂದಿನ ದಿನವೇ ತಿಳಿದು ಬಂತು. ಸರಿ ಮಾರನೆ ದಿನ ಮುಂಜಾವಿಗೆ ಸಂತೋಷದ ಪಯಣ ಬೆಂಗಳೂರಿಗೆ ಆರಂಭವಾಗಿ ಬೆಂಗಳೂರಿನ ವಾಹನಗಳ ಸಾಗರ ದಾಟಿ  ತಲುಪಬೇಕಾದ ಜಾಗ ತಲುಪಿದಾಗ  ಹನ್ನೊಂದು ಘಂಟೆ.!!! ಸರಿ ಶಿವೂ ಜೊತೆ ಮಾತಾಡಿ ಭೇಟಿಯಾಗಬೇಕಾದ ಸ್ಥಳ ಹಾಗೂ ಸಮಯ ನಿಗದಿಪಡಿಸಿಕೊಂಡು ಹೊರಟೆ. ಪಾಪ ನಮ್ಮ ಪ್ರಕಾಶ್ ಹೆಗ್ಡೆಗೆ ಆದಿನ ಆರೋಗ್ಯ ಕೈ ಕೊಟ್ಟು ಅವರು ಬರುವುದಿಲ್ಲವೆಂದು ತಿಳಿಯಿತು.ಏಕಾಂಗಿ ಸಂಚಾರಿನಾನು  ಬಸವನಗುಡಿ  ಬ್ಯೂಗಲ್ ರಾಕ್  ಕಾಮತ್ ಕಡೆಗೆ ಹೊರಟೆ.  ಹೋಟೆಲ್ ಬಳಿ ಬಂದು ಶಿವೂ ಗೆ ಫೋನ್  ಮಾಡಿದ್ರೆ ಸಾರ್ ಬನ್ನಿ ಒಳಗೆ ಇಲ್ಲೇ ಇದ್ದೀವಿ ಅಂದ್ರೂ !!!ಹೌದಾ ಬಂದೆ  ಅಂತಾ ಒಳಗಡೆ ಹೊರಟೆ  "ಸಾಗರದಾಚೆಯ ಇಂಚರ''ಬ್ಲಾಗು  "ಛಾಯಾಕನ್ನಡಿ" ಬ್ಲಾಗಿನ  ಜೊತೆಯಲ್ಲಿ ಆಗಲೇ ಜುಗಲ್ಬಂದಿ ನಡೆಸಿತ್ತು !!! ಎಷ್ಟೋ ವರ್ಷದಿಂದ ಪರಿಚಯ ಇದ್ದವರಂತೆ  ಗುರುಮೂರ್ತಿ ಹೆಗ್ಡೆ "ಬನ್ನಿ ಸಾರ್" ನಗುಮುಖದಿಂದ  ಆತ್ಮೀಯವಾಗಿ  ಸ್ವಾಗತಿಸಿದರು.ಇನ್ನೂ ಶಿವೂ ಬಗ್ಗೆ ಹೇಳೋದೇ ಬೇಡ  ಅದೇ ಪ್ರೀತಿಯ ಆತ್ಮೀಯ ನುಡಿಗಳ  ಸ್ವಾಗತ .  ವಾತಾವರಣಕ್ಕೆ ಪ್ರೀತಿ ವಿಶ್ವಾಸದ ಸಿಂಚನ ವಾಯಿತು.ಅಷ್ಟರಲ್ಲಿ  ಪ್ರವೀಣ್ ಫ್ಲೈಟು ಲೇಟಾಗಿ ಅವರು ಹಾಗೂ ಅವರ ಜೊತೆ ಬರಬೇಕಾಗಿದ್ದ  ಅನಿಲ್ ತಂಡ  ಬರಲಾಗುತ್ತಿಲ್ಲವೆಂದು  ತಿಳಿಯಿತು. ಸರಿ ಮೂರು ಜನರೇ ಆತ್ಮೀಯವಾಗಿ ಹರಟೆ ,ನಗು , ಹಲವು ಕೌತುಕಗಳ ವಿಚಾರ ವಿನಿಮಯ , ಮಾಡಿದೆವು. ಸರಿ ಹೊಟ್ಟೆ ಚುರುಗುಟ್ಟಲು ಶುರುಮಾಡಿದ ಕಾರಣ  ಹೋಟೆಲ್ ಮೇಲಿನ ಆವರಣಕ್ಕೆ ತೆರಳಿ  ಊಟಕ್ಕೆ  ಆರ್ಡರ್ ಮಾಡಿ ಹರಟಲು ಕುಳಿತೆವು.ಸ್ವೀಡನ್ ದೇಶದ ವಿಶೇಷತೆ, ಅಲ್ಲಿನ ಜಾನಪದ ಹಾಡುಗಳು, ಒಪೆರಾ , ಹಳ್ಳಿಗಳಲ್ಲಿನ ಜೀವನ , ಅಲ್ಲಿನ ಸಂಗೀತ , ಇತಿಹಾಸ , ಟಿ.ವಿ.ಕಾರ್ಯಕ್ರಮಗಳು, ಉತ್ತರದ್ರುವದಲ್ಲಿನ  ಹಿಮಕರಡಿಗಳು, ಹವಾಮಾನ,  ಅಲ್ಲಿನ ಸಾರ್ವಜನಿಕರಿಗೆ ಅಲ್ಲಿ ದೇಶ ನೀಡುವ ಸೌಲಭ್ಯ , ಅಲ್ಲಿನ ತೆರಿಗೆ ಪದ್ಧತಿ  ಎಲ್ಲಾ ವಿಚಾರಗಳ ಬಗ್ಗೆ ಸಾಗರದಾಚೆಯ  ಮಿತ್ರ  ವಿಶದವಾಗಿ ಕಣ್ಣಿಗೆ ಕಟ್ಟುವಂತೆ  ವಿವರಿಸಿದರು, ನನ್ನ ಅಲ್ಪ ಜ್ಞಾನದ ಬ್ಯಾಂಕಿನ ಖಾತೆಗೆ  ಜ್ಞಾನದ  ಹರಿವು ಬಂದಿತ್ತು. ಇನ್ನೂ ಶಿವೂ  ನಿಕಾನ್ ಕ್ಯಾಮರಾಗಳ ಬಗ್ಗೆ ಒಳ್ಳೆಯ ಮಾಹಿತಿ, ಸಿರಸಿಯ ಸುಗಾವಿಯಲ್ಲಿ  ಅವರು ತೆಗೆದ ಫೋಟೋಗಳ ಬಗ್ಗೆ , ಹೀಗೆ ಹಲವಾರು ವಿಚಾರಗಳನ್ನು ತಿಳಿಸುತ್ತಿದ್ದರೆ ಅಚ್ಚರಿಗೊಳ್ಳುವ ಸರದಿ ನನ್ನದಾಗಿತ್ತು.ಸಂತಸದ ಈ ವಾತಾವರಣದಲ್ಲಿ  ಆತ್ಮೀಯತೆ ಮನೆಮಾಡಿ ರುಚಿಯಾದ ಊಟ ಹೆಚ್ಚು ರುಚಿಸಿತ್ತು.  ನಂತರ ಶಿವೂ ಕ್ಯಾಮರಾ ನಮ್ಮ ನೆನಪಿನ ಚಿತ್ರಗಳನ್ನು ಸೆರೆ ಹಿಡಿತಿತ್ತು.  ಬಹಳಷ್ಟು ಕಾರ್ಯ ಬಾಕಿ ಇದ್ದ ಕಾರಣ ಮೂರೂಜನರು  ಒಲ್ಲದ ಮನಸಿನಿಂದ ನಮ್ಮ ಹಾದಿ ಹಿಸಿದೆವು."ಸಾಗರದಾಚೆಯ ಇಂಚರ" ಹಾಗೂ   "ಛಾಯಾ ಕನ್ನಡಿ" ಯ ಪ್ರೀತಿಯ ಹೊಳೆಯಲ್ಲಿ  ತೇಲಾಡಿದ ನಿಮ್ಮೊಳಗೊಬ್ಬ ಅಂದು ನಡೆದ ಸುಂದರ ಗಳಿಗೆಗಳ ಮೆಲುಕು ಹಾಕುತಾ   ಶುಭ ವಿಧಾಯ ಹೇಳಿ  ಹೊರಟ ನನಗೆ  ಹಲವಾರು ಪ್ರಶ್ನೆಗಳು ಹುಟ್ಟಿಕೊಂಡವು.  ೧] ಇವರುಗಳು ನಾನು ಹುಟ್ಟಿದಾಗಿನಿಂದ ನೋಡಿದ ಜನಗಳಂತೂ  ಅಲ್ಲಾ ಆದರೂ ಇವ್ರು ಯಾಕೆ ಇಷ್ಟು ಹೃದಯಕ್ಕೆ ಹತ್ತಿರ ಆಗ್ತಾರೆ ??  ೨] ಎಲ್ಲೆಲ್ಲಿಯೂ ತಾವೇ ಹೆಚ್ಚು  ತಮ್ಮ ನಿಲುವೆ ಸರಿ ತಮ್ಮನ್ನು ಬಿಟ್ಟು ಈ ಪ್ರಪಂಚ ವಿಲ್ಲ  ಅನ್ನುವ ಈ ಸಮಯದಲ್ಲಿ  ನಾವುಗಳು ಯಾಕೆ ಹೀಗೆ ಹತ್ತಿರವಾಗುತ್ತಿದ್ದೇವೆ??  ೩] ಎಲ್ಲಾ ಕಡೆ ಹಣಕ್ಕೆ ಪ್ರಾಮುಖ್ಯತೆ ಕೊಡುವ ಜನ ಕಂಡುಬರುತ್ತಿರುವ ಸನ್ನಿವೇಶದಲ್ಲಿ  ನಮ್ಮ ಬ್ಲಾಗಿಗರಲ್ಲಿ  ಸ್ನೇಹದ ಚಿಲುಮೆ ಹೊಮ್ಮುತ್ತಿರಲು ಕಾರಣವೇನು??? ೪] ಇನ್ನೂ ಅತೀ ಹೆಚ್ಚು ಓದಿ ಪದವಿಗಳಿಸಿದವರು ಕಡಿಮೆ ಓದಿನ ಜನರೊಡನೆ  ಬೆರೆಯುವುದು ಕಷ್ಟ ಆದರೂ ಇಲ್ಲಿ ಅದು ಇಲ್ಲ ಯಾಕೆ ?? [ಇದೆ ಪ್ರಶ್ನೆ  ಉದ್ಯೋಗದ ಬಗ್ಗೆ ಯೂ ಉದ್ಭವಿಸುತ್ತದೆ.] ಯಾವುದೋ ಊರು, ಯಾವ್ದೋ ದೇಶ, ಯಾವುದೋ ಪರಿಸರದ ಜನಗಳಾದ ನಾವು ಹೀಗೇಕೆ  ಬೆಸೆದು ಕೊಳ್ಳುತ್ತಿದ್ದೇವೆ?? ಹಾಗಾದ್ರೆ ಈ ಬ್ಲಾಗ್ ಬರಹ ಕ್ರಾಂತಿ ಮಾಡುತ್ತಿದೆಯೇ.?? ಇತರ ಮಾಧ್ಯಮ ಯಾಕೆ ಇಂತಹ ಕ್ರಾಂತಿಗೆ ಪೂರಕವಾಗಿಲ್ಲ ??? ಎಂದೆಲ್ಲಾ ಯೋಚಿಸುತ್ತಾ  ಮನೆಗೆ ಬಂದೆ  ಆರಾಮ  ಕುರ್ಚಿಯ ಮೇಲೆ ಒರಗಿದ ನನಗೆ   ಮೆತ್ತಗೆ ಬೀಸಿದ ತಂಗಾಳಿ  ನೆನಪಿನ ಗುಂಗಿನಲ್ಲಿ  ಸಂತಸದಿಂದ  ನಿದ್ದೆ ತಂದಿತ್ತು  ಗುರು ಮೂರ್ತಿ ಹೆಗ್ಡೆ ನೀಡಿದ  ಪ್ರೀತಿ ಕಾಣಿಕೆ '' ಸಾಗರದಾಚೆಯ ಇಂಚರ " ಪುಸ್ತಕ  ನಗುತ್ತಾ ಎದೆಯ ಮೇಲೆ ಮಲಗಿತ್ತು.....!!!

Sunday, February 20, 2011

ಹೇಳು ಬೆಂಗ್ಳೂರ್ ನೀನ್ಯಾಕೆ ಹಿಂಗೆ?? ಅರ್ಥವಾಗದ ಮಾಯಾಂಗನೆ ಅಂದರೆ ನೀನೇನಾ ???

ನಮ್ ಬೆಂಗ್ಳೂರು ಒಂದ್ರೀತಿ   ಮಾಯಾ ಲೋಕ , ಒಬ್ಬೊಬ್ಬರಿಗೆ ಒಂದೊಂದು ತರಹ  ಕಾಣಿಸುವ ಮಾಯಾಂಗನೆ ಇದ್ದಂಗೆ, ಈ ಊರು.ಒಬ್ಬರಿಗೆ , ಗಾರ್ಡನ್ ಸಿಟಿ , ಮತ್ತೊಬ್ಬರಿಗೆ ಇದು ಗಾರ್ಬೇಜ್ ಸಿಟಿ,ಒಬ್ಬರಿಗೆ ಸಿಲಿಕಾನ್ ಸಿಟಿ,ಇನ್ನೊಬ್ಬರಿಗೆ ಇದು ಬಯೋಕಾನ್ ಸಿಟಿ,ಹಲವರಿಗೆ ಇದು  ಬ್ಲಾಗರ್ಸ್ ನಗರ, ಸೂಪರ್ ಫಾಸ್ಟ್ ನಗರ, ಫೋಟೋಗ್ರಾಫರ್ಸ್ ನಗರ, ಇತ್ಯಾದಿ,ಇತ್ಯಾದಿ, ಬಳಷ್ಟು ಜನರಿಗೆ ಬಹಳಷ್ಟು ತರಹ   ಕಾಣುವ ಈ ಊರು ಮಾಯಾನಗರವೇ  ಸರಿ .ಆದ್ರೆ ಯಾಕೋ ಕಾಣೆ ನನಗೆ  ಈ ಮಾಯಾನಗರಿ  ವಿಭಿನ್ನ ದರ್ಶನ ಮಾಡಿಸುತ್ತಾ  ಅರ್ಥವಾಗದ ನಗರ ಅನ್ನಿಸಿತು.. ಬನ್ನಿ ಒಂದು ಸುತ್ತು ಅರ್ಥವಾಗದ ನಗರದ ಲೋಕದೊಳಗೆ  ಒಂದು ಸುತ್ತು ಹಾಕೋಣ.                                                           ದೃಶ್ಯ...1  :-)  ಮೊನ್ನೆ "'ಕುಮಾರ ಸ್ವಾಮೀ "ಬಡಾವಣೆ ಯಲ್ಲಿ ಒಂದು ಮದುವೇ ನಿಶ್ಚಿತಾರ್ಥ  ಕಾರ್ಯಕ್ರಮವಿತ್ತು. ನಾನೂ ಹೋಗಿದ್ದೆ. ಕಾರ್ಯಕ್ರಮ ಸಂಜೆ ಇದ್ದ ಕಾರಣ ,ಮಧ್ಯಾಹ್ನ ಕೆಲಸವಿಲ್ಲದ ನಾನು ಹಾಗೆ ಅಡ್ಡಾಡುತ್ತಾ ಬಡಾವಣೆ ಪರಿಚಯ ಆಗ್ಲಿ ಅಂತಾ  ಹೊರಗೆ ಬಂದೆ ಅರೆ ಮನೆಯ ಪಕ್ಕ ಖಾಲಿ ಸೈಟ್ ನಲ್ಲಿ  ಮೇಕೆಗಳು ಮೆಯ್ತಿದ್ವು.                                                                                                  


                                                                                                                                                                                                                                                      ಅಚ್ಚರಿಯಿಂದ  ಮನೆ  ಒಳಗಡೆ  ಹೋಗಿ ನನ್ನ ಕ್ಯಾಮರ ತಂದು ನೋಟ ನೋಡಲು ನಿಂತೇ.ಆಗ ಕಂಡಿದ್ದು  ಈ ವಿಚಾರ.  ನಡುವಯಸ್ಸಿನ ಒಬ್ಬ ಗಂಡಸು ಹಾಗು ಹೆಂಗಸು  ಆಡುಗಳ[ಮೇಕೆ] ಹಿಂಡಿನೊಂದಿಗೆ ಬಡಾವಣೆಯ ಬೀದಿ ಬೀದಿಗಳಲ್ಲಿಕಂಡು ಬರುವ ಖಾಲಿ ನಿವೇಶನಗಳನ್ನು ಹುಡುಕುತ್ತಾ                                                                                                                                                                                                                                                                                                                 ಹೊರಟಿದ್ದರು!!!.  ಅಲ್ಲಾ ಈ ಬೆಂಗ್ಳೂರ್ ನಲ್ಲಿ ಆಡು ಮೆಯಿಸುವವರೂ ಇದ್ದಾರ.!!! ಅನ್ನಿಸಿ ಸ್ವಲ್ಪ ಹೊತ್ತು ಅವರನ್ನು ಗಮನಿಸಿದೆ.ಗಂದಾ ಹೆಂಡತಿ ಇರಬೇಕು ಇಬ್ಬರೂ ಕನ್ನಡ ತೆಲುಗು ಮಾತಾಡುತ್ತಿದ್ದರು  ಸುಮಾರು ಹತ್ತು ಆಡುಗಳ[ಮೇಕೆ] ಗುಂಪು,ಅವರಜೊತೆ ಇತ್ತು ,  ಹಾಗೆ ಅವರನ್ನು ಮಾತಾಡಿಸಿದೆ. "ಹೌದು ಸ್ವಾಮೀ, ನಾವಿಲ್ಲೆಯೇ ಹತ್ತಿರದ ಸ್ಲಂನಲ್ಲಿ ಇದೀವಿ,. ಜೀವನಕ್ಕೆ ಆಡು ಸಾಕ್ತೀವಿ , ಬೆಳಿಗ್ಗೆ ಒಂಬತ್ತು ಘಂಟೆಯಿಂದ ಸಂಜೆ ನಾಲ್ಕು ಘಂಟೆವರೆಗೆ ಇದೆ ಕೆಲಸ . ಮಾಂಸಕ್ಕಾಗಿ ಮೇಕೆ ಮಾರಿ ಜೀವನ ನಡೆಸ್ತೀವಿ".ಅಂತಾ ಹೇಳಿದ್ರೂ                                                       ಮುಂದೆ ನಾನು ಮಾತಾಡಿ "ಅದ್ಸರೀ ನೀವು ಬೆಳಿಗ್ಗೆ ಯಿಂದ ಹೀಗೆ  ಆಡು [ಮೇಕೆ] ಮೆಯಿಸುತ್ತೀರಲ್ಲಾ ಅವಕ್ಕೆ ಹೊಟ್ಟೆ ತುಂಬುತ್ತಾ??" ಅಂತಾ ಕೇಳ್ದೆ.                                  ಅಯಾವ್ದುದಕ್ಕೆ ಅವರು ಅಲ್ಲಾ  ಸಾ ನಮ್ ಮೇಕೆ ಎಲ್ಲಾನೂ ತಿನ್ತವೆ ಸಾ , ಖಾಲಿ ಸೈಟಿನಲ್ಲಿ ಸಿಗುವ ಬಾಳೆಲೆ, ಗಿಡ ,ಹುಲ್ಲು, ಅರ್ಧ ತಿಂದು ಬಿಸಾಕಿದ ತಿಂಡಿ, ಕಾಜಗ,[ಕಾಗದ], ಬಿಡಾಕಿಲಾ" ಅಂತಾ ಹೆಮ್ಮೆಯಿಂದ ಹೇಳಿದ್ರೂ ,"ನೀರ್ಕುಡ್ಸೋಕೆ ಏನ್ ಮಾದಿತೀರಾ?? " ಅಂದೇ ನೋಡಿ  "ಅದ್ಕೆನಂತೆ ಅಲ್ಲೇ ಅರೀತಿಲ್ವ್ರಾ ಮೋರಿ ಅಲ್ಲೇ ಆಯ್ತುದೆ ಬುಡಿ" ಅಂತಾ ಮುಂದಕ್ಕೆ  ಮೇಕೆ ಹೊಡ್ಕೊಂಡ್  ಹೋದರು.ಅಲ್ಲೇ ಇದ್ದ ಒಬ್ಬರು  ಈ ಕಾಲದಲ್ಲಿ ಯಾರ್ನೂ ನಂಬೋ ಹಂಗಿಲ್ಲ  ಬೆಳಿಗ್ಗೆ ಹಿಂಗೆ ಬಾರೋ ಇವ್ರು ರಾತ್ರಿ ಮನೆಗಳಿಗೆ ಖನ್ನ ಹಾಕಲು ಸೂಕ್ತವಾದ ಮನೆ ಹುಡುಕ್ತಾರೆ ಅಂದ್ರೂ. ಆದ್ರೆ ಇವರನ್ನು ನೋಡಿದ ಮನಸ್ಸು ಈ ವಾದ ಒಪ್ಪೋ ಸ್ಥಿತಿಯಲ್ಲಿ  ಇರಲಿಲ್ಲ.                                                                                                                                            ದೃಶ್ಯ..2 :-) ಕಳೆದ ಶನಿವಾರ ಹೈಕೋರ್ಟ್ ನಲ್ಲಿ ಕೆಲ್ಸಾ ಇತ್ತು . ನಮ್ಮ ವಕೀಲರ ಬರುವಿಗಾಗಿ ಕಾಯುವ ಕೆಲಸ ಸರಿ ಅಲ್ಲೇ ಸಿಕ್ಕ ಪರಿಚಯದವರೋಬ್ಬರೊಡನೆ ಪಕ್ಕದ ಪಾರ್ಲರ್ನಲ್ಲಿ  ಹಾಲು ಹೀರಿ ಸಮೀಪದ  ಪಾರ್ಕ್ ನಲ್ಲಿ ಅಡ್ಡಾಡಲು ಆರಂಭಿಸಿದೆ. ಅಲ್ಲಿ ಕಂಡ ಲೋಕ ಬೆರಗು ಹುಟ್ಟಿಸಿತ್ತು.ವಿಧಾನ ಸೌಧ ಹಾಗು ಹೈಕೋರ್ಟ್ ಮಧ್ಯ ಮೆಟ್ರೋ ಕೆಲಸಕ್ಕೆ ತಡೆ ಗೋಡೆ ನಿರ್ಮಿಸಿ ನಿರ್ಮಾಣ ಕಾಮಗಾರಿ ನಡೆಸಿದ್ದರು. ಪಾರ್ಕಿನಲ್ಲಿ ನಡೆಯುತ್ತಾ ಮುಂದುವರೆದೆ  ಪಾಪ ಹೈ ಕೋರ್ಟಿನಲ್ಲಿ ಅಷ್ಟೊಂದು ಮೂತ್ರಾಲಯ ಸೌಲಭ್ಯ  ಕಲ್ಪಿಸಿದ್ದರೂ  ಪಾರ್ಕಿನಲ್ಲಿದ್ದ  ಮರಗಳಿಗೆ  ನಾಗರೀಕ ಮಂದಿಯ ಮೂತ್ರ ಸಿಂಚನ ನಡೆದಿತ್ತು.ಮತ್ತೊಂದೆಡೆ ಪರಿಸರಕ್ಕೆ ನಾಗರೀಕ ಸಮಾಜ ನೀಡುತ್ತಿರುವ ಕಸದ ಉಡುಗೊರೆ ರಾಶಿಯಾಗಿ ಬಿದ್ದಿತ್ತು. ಹೈ ಟೆಕ್  ಮಂದಿ ತಮ್ಮ ಲೋ ಟೆಕ್  ಚಾಳಿಯನ್ನು ಹೀಗೆ ಮುಂದುವರೆಸಿದ್ದರು. ವಾಸನೆ ತಡೆಯಲಾರದೆ  ಮುಂದೆ ಬಂದು ಶುದ್ದಗಾಳಿ  ಪಡೆಯಲು ಕಾತರನಾಗಿ ಹೊರಟೆ  .ಪಾರ್ಕಿನ ಮತ್ತೊಂದೆಡೆ  ಸುಂದರ ಮರಗಳ ಸಾಲುಗಳು ಕಾಣಿಸಿದವು. ಹಾಗು ಮರಗಳ ನೆರಳಿನಲ್ಲಿ ಆರು ನಾಯಿಗಳು   ಮಲಗಿದ್ದವು. ಮರಗಳ ಒಂದು ಸಾಲಿನಲ್ಲಿ ಹಸಿರಿನಿಂದ ಕೂಡಿದ  ಮರಗಳಿದ್ದರೆ, ಮತ್ತೊಂದು ಸಾಲಿನಲ್ಲಿ ಬೋಳು ಬೋಳಾದ ಮರಗಳಿದ್ದವು.  ಯಾಕೋ ಕಾಣೆ ಈ ದೃಶ್ಯ ನೋಡಿದ ಕೂಡಲೇ  ಹಸಿರಮರಗಳು ಜ್ಞಾನವನ್ನೂ ,ಬೋಳು ಮರಗಳು ಅಜ್ಞಾನವನ್ನೂ  ಮಧ್ಯೆ  ಭೂಲೋಕದ ಅರಿವಿಲ್ಲದೆ  ಮಲಗಿರುವ ನಾಯಿಗಳು  ಜ್ಞಾನ ಅಜ್ಞಾನ ದ ಅರಿವಿಲ್ಲದೆ  ನಿದ್ದೆಯ ಅಮಲಿನಲ್ಲಿರುವ   ಮಾನವರನ್ನೂ  ಬಿಂಬಿಸುತ್ತಿರುವಂತೆ ಅನ್ನಿಸಿತು..ಈ ವಿಚಾರ ಕೇಳಿದ ನನ್ನ ಸ್ನೇಹಿತನಿಗೆ ಇದು ಕಂಡ ರೀತಿ  ಹೀಗೆ, ಹಸಿರಮರಗಳು  ಕೆಟ್ಟ ತನದಿ ಸಂಪಾದಿಸಿ  ಕೊಬ್ಬಿರುವ ಜನರು,[ ನೋಡಲು ಹಸಿರಾಗಿ ಕಂಡರೂ ಜೀವನ ಶೂನ್ಯವಾಗಿರುವ ಜನ. ] ಬೋಳುಮರಗಳು  ನ್ಯಾಯವಾಗಿ ಬದುಕಲು ಆಗದೆ ಶೋಷಣೆಗೆ ಒಳಗಾಗಿ [ನೋಡಲು ಒಣಗಿಹೊಗಿದ್ದರೂ  ಮನದಲ್ಲಿ ಜೀವನ ಮೌಲ್ಯ ಉಳಿಸಿಕೊಂಡಿರುವ ಜನ.] ದಿನವೂ ಸತ್ತು ಬದುಕುತ್ತಿರುವ ಜನ. ಈ ತಾರತಮ್ಯವನ್ನು ತೊಲಗಿಸಲಾಗದೆ ಗಾಢ ನಿದ್ದೆಯಲ್ಲಿ ಮಲಗಿರುವ ಸಮಾಜವನ್ನು ಆ ನಾಯಿಗಳು ಸೂಚಿಸುತ್ತವೆ ಅಂದಾ. ಯಾವುದು ಸುಳ್ಳೋ ಯಾವುದು ನಿಜವೋ ನೀವೇ ತೀರ್ಮಾನಿಸಿ. ಬನ್ನಿ ಮುಂದಿನ ದೃಶ್ಯಕ್ಕೆ.                                                                                                                                                        ದೃಶ್ಯ ...3 :-) ಮುಂದೆ ಬಂದ ನನಗೆ ಪಾರಿವಾಳಗಳ ಗುಂಪು ಕಾಣಿಸಿತು.ಮರದ ಮೇಲಿಂದ ಗುಂಪಾಗಿ  ಪುರ್ ಅಂತಾ ಹಾರಿ ಆಗಸದಲ್ಲಿ ಅಡ್ಡಾಡಿ ಭೂಮಿಗಿಳಿದು ಕಸ ಕಡ್ಡಿಯಲ್ಲಿ ಕೀಟಗಳನ್ನು ಹೆಕ್ಕಿ ತಿನ್ನುವ  ಬೆಂಗಳೂರಿನ ಪಾರಿವಾಳಗಳಿಗೆ ತಿನ್ನಲು ಕಾಳುಗಳು ಎಲ್ಲಿ ಸಿಗಬೇಕು???. ಪಾರ್ಕಿನಲ್ಲಿ ಸಿಗುವ ಹುಳು ಹುಪ್ಪಟ್ಟೆ ಗಳನ್ನೂ ತಿಂದು ನಲಿದಿರುವ ಈ ಪಾರಿವಾಳಗಳಿಗೆ ಜೈ ಅನ್ನಬೇಕು. 
                                                                                                                                                                     ಹಾಗೆ ನೋಡುತ್ತಾ ನಿಂತ ನನಗೆ .ಪಾರಿವಾಳಗಳ ಚಿನ್ನಾಟ ಚಂದವಾಗಿ  ಕಾಣಿಸಿ ನೋಡುತ್ತಾನಿಂತೆ .ಅರೆ ಇದೇನಿದುಅಂತಾ  ನೋಡಿದ್ರೆ!!,  ಗುಂಪು ಕೂಡಿದ  ಪಾರಿವಾಳಗಳು ಮೆಟ್ರೋ ಬೋರ್ಡಿನ ಕಡೆ  ಶಿಸ್ತಾಗಿ ನಡೆದಿದ್ದವು,ಸುಮಾರು ಹೊತ್ತು ಯಾವ ಚರ್ಚೆ ಮಾಡಿದವೋ ಕಾಣೆ ಯಾವುದೇ ಗುದ್ದಾಟ, ತಳ್ಳಾಟ, ಕಂಡುಬರಲಿಲ್ಲ  ಶಿಸ್ತಿನಿಂದ ಮೆಟ್ರೋ ಗೋಡೆಯ  ಬೋರ್ಡಿನ ಮುಂದೆ ತಮ್ಮ ಅಹವಾಲನ್ನು ಇಟ್ಟ ಆ ಪಾರಿವಾಳಗಳು  ಮೆಟ್ರೋ ರೈಲಿನಿಂದ ಮುಂದೆ ತಮಗೆ ಯಾವುದೇ ಹಾನಿ ಆಗದಿರಲಿ ಅಂತಾ ಪ್ರಾರ್ಥಿಸಿದಂತೆ ಹಾಗು ಮೆಟ್ರೋ ಗೋಡೆಗೆ ಮನವಿ ಮಾಡಿದಂತೆ  ಕಂಡು ಬಂತು.

Tuesday, February 15, 2011

ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ಬಿಡ್ತಾರೆ!!!!

ಇದೇನಿದೂ ಅಂದ್ರಾ ನಾನಿವತ್ತು ಮಕ್ಕಳ ಸಾಮ್ರಾಜ್ಯದಲ್ಲಿ ಮಕ್ಕಳು ದೊಡ್ಡವರಿಗೆ ನೀತಿ  ಪಾಠಮಾಡುವ ಕೆಲವು ಘಟನೆಗಳನ್ನುಮುಂದಿಡುತ್ತಿದ್ದೇನೆ. ಬನ್ನಿ   ಪಾಠ ಕಲಿಯೋಣ.                                                                                                             ಪಾಠ ..1 ] ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದೆ  ಮೈಸೂರಿಗೆ ಮೈಸೂರು ಮಲ್ಲಿಗೆ ಬಸ್ ಹೊರಡಲು ಸಿದ್ಧವಾಗಿತ್ತು. ಕೌಂಟರ್ ನಲ್ಲಿ ಟಿಕೆಟ್ ಪಡೆದ   ಪ್ರಯಾಣಿಕರು  ಬಸ್ ಏರಿ ಕುಳಿತುಕೊಳ್ಳುತ್ತಿದ್ದರು.ಈ ಮಧ್ಯೆ  ಇಬ್ಬರು ಹೆಂಗಸರು ಹಾಗು ಸುಮಾರು  ಆರು ವರ್ಷದ ಹುಡುಗ  ನನ್ನ ಸಾಲಿನ ಪಕ್ಕದ ಮೂರುಜನ ಕೂರುವ  ಸೀಟ್ ನಲ್ಲಿ ಕುಳಿತರು. ಬಸ್ ಹೊರಡುವ ಮೊದಲು ಟಿ.ಸಿ. ಬಸ್ನಲ್ಲಿದ್ದ ಪ್ರಯಾಣಿಕರ ಲೆಕ್ಕ ಹಾಕುತ್ತಿದ್ದರು. ಲೆಕ್ಕ ತಾಳೆಯಾಗದೆ "ಯಾರೋ ಒಂದು  ಟಿಕೆಟ್ ತಗೊಂಡಿಲ್ಲ      ದಯಮಾಡಿ ತಗೋಳಿ ಮುಂದೆ ಚೆಕಿಂಗ್ ಇದೆ" ಅಂದ್ರೂ. ಅಲ್ಲಿದ್ದ  ಪ್ರಯಾಣಿಕರೂ  ಇದು ನಮಗಲ್ಲಾ ಅಂತಾ ಅನ್ಕೊಂಡು ಸುಮ್ನೇ ಇದ್ರೂ. ಸರಿ ಶುರುವಾಯಿತು. ಪ್ರತಿಯೊಬ್ಬರ  ಟಿಕೆಟ್ ತಪಾಸಣೆ. ಒಬ್ಬರಾಗಿ ಚೆಕ್ ಮಾಡಿದ ಟಿ.ಸಿ.ಸಾಹೇಬರೂ ನನ್ನ ಪಕ್ಕದ ಸೀಟಿನ ಮಹಿಳೆಯರನ್ನೂ ಚೆಕ್ ಮಾಡಿದ್ರೂ,  ಟಿಕೆಟ್ ತಾಳೆಯಾಗದೆ. " ನೋಡಿಯಮ್ಮ  ಈ ಹುಡುಗನಿಗೆ ಫುಲ್ ಟಿಕೆಟ್  ತಗೊಬೇಕೂ  ನಿಮ್ಮತ್ರ ಅರ್ಧ ಟಿಕೆಟ್ ಇದೆ ಹೋಗಿ ಕೌಂಟರ್ನಲ್ಲಿ ಫುಲ್ ಟಿಕೆಟ್ ಮಾಡಿಸಿ" ಅಂದ್ರೂ .ಅಲ್ಲಿವರೆಗೋ ಸುಮ್ಮನಿದ್ದ  ಆ ಹುಡುಗ ತನ್ನ ತಾಯಿಯನ್ನು ಕುರಿತು  '' ಆಹಹ ಮನೇಲೆ ಹೇಳ್ದೆ  ನಾನು ಚಡ್ಡಿ  ಹಾಕೊತೀನಿ ಅಂತಾ!!! .......  ನೀನ್ ಕೆಳಿದ್ಯಾ ನನ್ನ  ಮಾತು,  ಪ್ಯಾಂಟ್ ಹಾಕೋ ಅಂತಾ ಬೈದೆ , ಈಗ ,ಈಗ ಕೊಡು ಫುಲ್ ಟಿಕೇಟು ", ಅನ್ಬಿಟ್ಟ . ಸ್ವಾಮೀ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು  ಗೊಳ್ ಅಂತಾ ನಕ್ಕಿದ್ದೆ  ನಕ್ಕಿದ್ದು  ಪಾಪ ಆ ಟಿ.ಸಿ.ಸಾಹೇಬರಿಗೆ ತಮ್ಮ ಮಕ್ಕಳ ನೆನಪಾಗಿರ್ಬೇಕೂ. "ಆಹಹ ಒಳ್ಳೆ ಬುದ್ಧಿವಂತಾ ಕಣಯ್ಯ ನೀನು ಅಂದು , ಪರವಾಗಿಲ್ಲ ಹೋಗ್ಲಿ ಬಿಡೀಮ್ಮಾ " ಅಂದು ಬಸ್ ನಿಂದ ಇಳಿದು ರೈ ರೈಟ್ ಅಂದ್ರೂ .                                                                                                                                                                                                                                                                 ಪಾಠ ..2 ] ಅದೊಂದು ಕ್ಲಾಸ್ ರೂಮು , ಮೇಷ್ಟ್ರು ಮಕ್ಕಳಿಗೆ ಪಾಠ ಮಾಡ್ತಾ ಇದಾರೆ , ಮಹಾತ್ಮಾ ಗಾಂದಿಜಿ  ಬಗ್ಗೆ  ಅವರ ಜೀವನ ಚರಿತ್ರೆ ಬಗ್ಗೆ,  ಮಕ್ಕಳೂ ಸಹ   ತನ್ಮಯತೆ   ಇಂದ ಪಾಠ  ಕೇಳಿಸ್ಕೊತಾ ಇದ್ವೂ . "  ನೋಡ್ರಯ್ಯ  ಮಹಾತ್ಮ ಗಾಂಧಿಜಿಯವರು  ಭಾರತ ದೇಶದ ಸ್ವಾತಂತ್ರ್ಯಕಾಗಿ  ಹೋರಾಡಿ ಕೀರ್ತಿ ಪತಾಕೆ ಹಾರಿಸಿದರೂ ಸತ್ಯವನ್ನು ಆಡುತ್ತಾ ಜೀವನದಲ್ಲಿ  ಸತ್ಯವಾಗಿ ಬಾಳಿದರೂ ನೀವು ಕೂಡ ಅವರ ಹಾಗೆ ಸತ್ಯವಾಗಿ ಬಾಳುವುದನ್ನು ಕಲಿಯಿರಿ ದೇಶಕ್ಕೆ ಕೀರ್ತಿ ತನ್ನಿ"ಅಂತಾ  ಹೇಳ್ತಿದ್ರೂ  , ಮಧ್ಯದಲ್ಲಿ ಏನೋ ಅನ್ನಿಸಿ  ನೋಡ್ತಾರೆ ಐದನೇ ಬೆಂಚಿನಲ್ಲಿ  ಕುಳಿತಿದ್ದ      ಪರಮೇಶಿ  ,ಕಲ್ಲೇಶಿ ಮಾತಾಡ್ತಾ  ಕುಳಿತಿದ್ರೂ,  ಇದನ್ನು ನೋಡಿದ ಮೇಷ್ಟ್ರಿಗೆ  ಉರ್ದೊಯ್ತು , ಲೇ ಕಲ್ಲೇಶಿ ಮಲ್ಲೇಶಿ ಬನ್ರೋ ಇಲ್ಲಿ ಅಯ್ಯೋ ಪಾಪಿಗಳ ನಾನು ಇಲ್ಲಿ  , ಕಷ್ಟಾಪಟ್ಟು ಆ ಪುಣ್ಯಾತ್ಮಾ  ಮಹಾತ್ಮಾ ಗಾಂಧಿಯವರ ಬಗ್ಗೆ  ಪಾಠ  ಮಾಡ್ತಿದೀನಿ ನೀವು ಇಲ್ಲಿ ತರ್ಲೆ ಮಾಡ್ತಾ ಕೂತಿದೀರ " ಅಂದ್ರೂ  ಈಗಿನ ಮಕ್ಕಳಲ್ಲವೇ ಭಯವೇ ಇಲ್ದೆ  ಮುಂದೆ ಬಂದ ಹುಡುಗರೂ ಮೇಷ್ಟ್ರ ಮುಂದೆ ನಿಂತ್ರೂ. ಲೇ ಹೇಳ್ರೋ  ನಾನು ಏನ್ ಹೇಳ್ತಿದ್ದೆ  , ಅಂತಾ ಅಂದ್ರೂ ಆಗ ಕಲ್ಲೇಶಿ ಮಲ್ಲೇಶಿ ಸುಮ್ಮನೆ ನಿಂತಿದ್ರು , ಲೇ ಅಲ್ಲಿ ಕೂತ್ಕೊಂಡು ತರ್ಲೆ ಮಾಡ್ತೀರ  ಇಲ್ಲಿ ತೋರ್ಸಿ ಬನ್ನಿ ಇಲ್ಲಿ ಪಾಠ ಮಾಡಿ ಗೊತ್ತಾಗುತ್ತೆ  ಅಂದ್ರೂ ,  ಮಕ್ಕಳು ಆಗ್ಲೂ  ಸುಮ್ನೆ ನಿಂತಿದ್ರು  , ಮೇಷ್ಟರಿಗೆ ಇನ್ನೂ ಕೋಪ ಬಂದು "ಪಾಠ ಮಾಡ್ತೀರೋ ಇಲ್ಲ  ಎರಡು ಕೊಡಲೋ"  ಅಂದ್ರೂ  ಭಯದಿಂದ ನಿಂತಿದ್ದ ಕಲ್ಲೇಶಿ ಧೈರ್ಯವಾಗಿ  ಮುಂದೆ ಬಂದು ಪಾಠ ಮಾಡಲು  ಶುರುಮಾಡಿ ಗಾಂಧಿಜಿ ಬಗ್ಗೆ ಮೇಷ್ಟು ಹೇಳಿದ್ದ ವಿಚಾರವನ್ನು  ಚಾಚು ತಪ್ಪದೆ ವಿವರಿಸಿದ. ಅಚ್ಚರಿ ಗೊಂಡ ಮೇಷ್ಟ್ರು " ಲೇ  ಕಲ್ಲೇಶಿ ಮಲ್ಲೇಶಿ, ನೀವಿಬ್ರೂ ಬುದ್ಧಿವಂತರು ಕಣ್ರೋ!! ಯಾಕ್ರೋ ಮಾತಾಡ್ತಾ ಇದ್ರೀ," ಅಂದ್ರೂ. ಆ ಮಕ್ಕಳು  "ಇಲ್ಲ ಸರ್ ಗಾಂಧೀ ಜಿಯವರಿಗೆ ತಮ್ಮನ್ನು ಹೋಲ್ಕೆ ಮಾಡ್ತಾ ಇದ್ವಿ" !!! ಅಂದವು ಮಕ್ಕಳು, .ಕುತೂಹಲ ,ಗೊಂಡ  ಮೇಷ್ಟ್ರೂ  "ಅದೇನು ಹೋಲ್ಕೆ ಮಾಡ್ತಾ  ಇದ್ರೀ    ಸರ್ಯಾಗಿ ಹೇಳ್ರಪ್ಪಾ!!!" ಅಂದ್ರೂಆಗ ಕಲ್ಲೇಶಿ "ಸರ್ ತಾವು ಆವತ್ತು ಕ್ಲಾಸ್ ನಲ್ಲಿ  ಮಹಾತ್ಮಾ ಗಾಂಧೀ ಜಿ ಚಿಕ್ಕವಯಸ್ಸಿನಲ್ಲಿ  ಬೀಡಿ ಸೇದಿ ತನ್ನ ತಪ್ಪನ್ನು ತಂದೆಯವರ ಹತ್ತಿರ ಒಪ್ಪಿಕೊಂಡು  ಅದನ್ನ ಸೇದೋದು ಬಿಟ್ರೂ , ಅಂತಾ ಪಾಠ ಮಾಡಿದ್ರಿ , ಆದ್ರೆ ಮಾರನೆದಿನ   ಅಂಗಡಿ ಬೀದೀಲಿ ನೀವೇ  ಸಿಗರೇಟ್ ಸೇದ್ತಾ ಇದ್ರೀ" ಅದಕ್ಕೆ ಪಾಠ ದಲ್ಲಿ ಬರೋದನ್ನೆಲ್ಲಾ ಪಾಲಿಸಬೇಕೂ ಅಂತಾ ನಿಯಮ ಇಲ್ಲಾ,  ಹಾಗಾಗಿ    ಅದೇ ವೆತ್ಯಾಸ ನಿಮಗೂ ಗಾಂಧಿಜಿ ಗೂ ಅಂತಾ ಮಾತಾಡ್ತಾ ಇದ್ವಿಸಾರ್ !!! ಅಂದ್ರೂ ಪೆಚ್ಚಾದ ಮೇಷ್ಟ್ರು  ಅಲ್ಲಿಂದ ಜಾಗ ಖಾಲಿ !!!! ಅವತಿಂದ ಸಾರ್ವಜನಿಕವಾಗಿ ಸಿಗರೇಟ್ ಸೇದೊದನ್ನು ಬಿಟ್ರೂ  .ಆ ಮೇಷ್ಟ್ರು.