Saturday, June 8, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .04 ದಾಂಡೇಲಿ ಯಲ್ಲಿ ಏನೇನ್ ಕಂಡಿ .!!

ಮುಂಜಾವಿನ ಸಂಭ್ರಮ


ಅಂತೂ ಇಂತೂ ಯಾವಾಗಲೋ ನಿದ್ದೆ  ಬಂದಿತ್ತು .  ........ !!!  ನಿದ್ದೆಯಿಂದ ಎಚ್ಚರವಾದಾಗ ದೂರದಲ್ಲಿ ಎಲ್ಲೋ  ಕಲರವ ಕೇಳಿತ್ತು ಹಕ್ಕಿಗಳ ಚಿಲಿಪಿಲಿ ಗಾನದ ಸುಪ್ರಭಾತ ,ಮುಂಜಾನೆಯ ಕೆಂಪಾದ ಆಕಾಶ ಹೊಸ ನೋಟದ ದರ್ಶನ ನಮ್ಮದಾಗಿತ್ತು, ಮುಂಜಾವಿನ  ತಂಗಾಳಿಯಲ್ಲಿ ಕ್ಯಾಮರಾ ಹಿಡಿದು ಹೊರಟೆ


ರಾತ್ರಿ ನಮ್ಮ ನೆಮ್ಮದಿ ಹಾಳಾಯ್ತು

 ಜಂಗಲ್ ಲಾಡ್ಜ್ ಸುತ್ತ ಮುತ್ತಾ   ಮುಂಜಾವಿನ ಸುಳಿಗಾಳಿ ತನ್ನ  ಜಾಲ ಬೀಸಿತ್ತು, ಪ್ರಶಾಂತವಾದ ವಾತಾವರಣ , ಪಕ್ಷಿಗಳ ಕಲರವ, ಮನಸನ್ನು ಪ್ರಸನ್ನಗೊಳಿಸಿತ್ತು , ಅಲ್ಲೇ ಸನಿಹದಲ್ಲಿ  ಮರದ ಮೇಲೆ ಎರಡು ಲಾಂಗೂರ್ ಕೋತಿಗಳು ಸಪ್ಪಗೆ  ಕುಳಿತಿದ್ದವು , ಬಹುಷಃ  ರಾತ್ರಿಯ ಸಿನಿಮ  ಶೂಟಿಂಗ್  ಶಬ್ದ, ಹೈ ಬೀಮ್ ಬೆಳಕು, ಜೆನರೆಟರ್ ಶಬ್ಧ  ಅವುಗಳ ರಾತ್ರಿ  ನರಕ ಮಾಡಿತ್ತೆಂದು ಕಾಣುತ್ತದೆ , ಲಾಂಗೂರ್ ಕೋತಿಗಳ ಬಗ್ಗೆ ಮರುಕ ಪಡುತ್ತಾ ಹಾಗೆ ಸಾಗಿದೆ , ಕಾಳಿ ನದಿಯ ದಂಡೆ, ಅಲ್ಲಿನ ಪ್ರಕೃತಿ  ವೈಭವ ನನ್ನ ಕ್ಯಾಮರಾದಲ್ಲಿ  ಸೆರೆಯಾಯಿತು .  ಸುತ್ತಾಟ ಮುಗಿಸಿ ರೂಂ ಗೆ ಮರಳಿ ಸಿದ್ದನಾಗಿ  ಬೆಳಿಗ್ಗೆಯ ಟ್ರೆಕಿಂಗ್ ಗೆ ಸಿದ್ದನಾದೆ.


ಚಾರಣ ಕ್ಕೆ ಹೋರಟ  ಮಂದಿ

ಒಣಗಿದ  ಎಲೆಗಳು , ಕಡ್ಡಿ, ಕಾಯಿಗಳು ಹಾಸಿದ್ದ ದಾರಿ

 ಬೆಳಿಗ್ಗೆ ಸುಮಾರು ಎಂಟು ಘಂಟೆಗೆ ನಮ್ಮನ್ನು ಅಲ್ಲೇ ಅಕ್ಕಪಕ್ಕದ ಕಾಡಿಗೆ ಚಾರಣಕ್ಕೆ ಕರೆದುಕೊಂಡು ಹೊಗಲಾಯಿತು.  ಒಬ್ಬರು  ಜಂಗಲ್ ಲಾಡ್ಜ್ ಸಿಬ್ಬಂದಿ  ನಮ್ಮ ಪೈಲಟ್ ಆದರು. ಅಲ್ಲೇ  ಪಕ್ಕದಲ್ಲಿದ್ದ ಗಿಡಗಳ ನರ್ಸರಿ ಒಳಗೆ ಹೊಕ್ಕು  ಕಾಡಿನ ಹಾದಿ ಹೊಕ್ಕೆವು,  ಕಾಡಿನ ಹಾದಿಯಲ್ಲಿ   ಒಣಗಿದ ಎಲೆ, ಕಡ್ಡಿ, ಕಾಯಿ ಮುಂತಾದವುಗಳು  ಹಾಸಿಗೆ ಹಾಕಿದ್ದವು.  ಯಾವುದೇ ಪಕ್ಷಿಗಳ  ದ್ವನಿಯಾಗಲಿ  ಪಕ್ಷಿಯಾಗಲಿ ಕಾಣಲು  ಸಿಗದೇ ಇದ್ದದ್ದು  ಆಶ್ಚರ್ಯವಾಗಿತ್ತು. , ಸ್ವಲ್ಪ ಹಾಗೆ ಮುಂದೆ ಬಂದ ನಮಗೆ ಅಲ್ಲೇ ಮರದ ಮೇಲೆ  ಕಂದು ಬಣ್ಣದ "ಮಲಬಾರ್ ದೊಡ್ಡ  ಅಳಿಲು" ಕಾಣಸಿಕ್ಕಿತು. ತುಂಬಾ ನಾಚಿಕೆ ಸ್ವಭಾವದ ಸಾದು ಪ್ರಾಣಿ ಇದು, 



"ಮಲಬಾರ್ ದೊಡ್ಡ  ಅಳಿಲು"


ಮುಂದೆ ನಡೆದ ನಮಗೆ ಕಾಡಿನೊಳಗೆ ಇಲ್ಲದ ಹಾದಿಯಲ್ಲಿ ಒಬ್ಬ ವ್ಯಕ್ತಿ ಸೈಕಲ್ ನಲ್ಲಿ  ಸಾಗುತ್ತಿದ್ದರು,ಇದೇಕೆ   ಹೀಗೆ ಎಂದು ಕೇಳಿದ ನಮಗೆ , ಅಲ್ಲಿನ ಸಿಬ್ಬಂದಿ   ಕಾಡಿನೊಳಗೆ ಅಲ್ಲಲ್ಲಿ  ಮನೆಗಳಿವೆ ಸಾರ್ ಅಲ್ಲಿನ ಜನ ಹೀಗೆ ಓಡಾಡುತ್ತಾರೆ   ಅಂದರು .   ಆ ಚಿತ್ರದ ಸನ್ನಿವೇಶ ಪೂರ್ಣ ಚಂದ್ರ ತೇಜಸ್ವಿಯವರ  ಕಥೆಗಳ ಪಾತ್ರಗಳನ್ನು ನೆನಪಿಗೆ ತಂದಿತು .


ಕಾಡಿನಲ್ಲಿ   ಸಿಕ್ಕ ದೃಶ್ಯ
 ಕಾಡಿನ ಚಾರಣದಿಂದ  ವಾಪಸ್ಸುಬಂದ  ನಾವು  ಬೆಳಗಿನ ಉಪಹಾರ ಸೇವಿಸಿ  ಕಾಳಿ ನದಿಯಲ್ಲಿ ಹರಿಗೋಲಿನಲ್ಲಿ ಸವಾರಿ ಹೊರಟೆವು , ಇಲ್ಲಿನ ಹರಿಗೋಲು ವ್ಯವಸ್ತೆ  ಚೆನ್ನಾಗಿದೆ, ಪ್ರವಾಸಿಗರು ಹರಿಗೋಲಿನಲ್ಲಿ  ಲೈಫ್ ಸೇವಿಂಗ್ ಜಾಕೆಟ್ ಧರಿಸಿಯೇ ಕೂರಬೇಕೆಂಬ ನಿಯಮವಿದೆ,ಹಾಗೂ , ಹರಿಗೋಲಿನಲ್ಲಿ ವೃತ್ತಾಕಾರದ ಕಬ್ಬಿಣದ ಆಸನ ಹಾಕಿ ಪ್ರವಾಸಿಗಳು ಅಲ್ಲಿನ ಸೌಂದರ್ಯ ಸವಿಯಲು ಅವಕಾಶ  ಮಾಡಿದ್ದಾರೆ 

ಹರಿಗೊಲಿನ  ಸವಾರಿ

ಹರಿಗೊಲಿನ  ಸವಾರಿ ಜೋರಾಗಿತ್ತು, ಪ್ರಶಾಂತವಾಗಿ ಹರಿಯುತ್ತಿದ್ದ ಕಾಳಿನದಿಯ ಒಡಲಲ್ಲಿ ನಮ್ಮ ಹರಿಗೋಲು ಸಾಗಿತ್ತು, ನಮ್ಮ ಕ್ಯಾಮರಾಗಳಿಗೆ  ಬೆಳಗಿನ ಬೆಡಗಿನ ಪರಿಸರದ ದರ್ಶನ  ಆಗಿತ್ತು, ನಮ್ಮನ್ನು ಕರೆದೊಯ್ದಿದ್ದ  ಸಿಬ್ಬಂಧಿಯವರು  ವಿವರಣೆ ನೀಡುತ್ತಾ ಸಾಗಿದ್ದರು.  ನಿನ್ನೆ ನಮ್ಮ ಜೊತೆ ಬಂದಿದ್ದ ಸಿಬ್ಬಂದಿ ಬದಲಾಗಿದ್ದರು.  ಸಾರ್ ಅಲ್ಲಿ ನೋಡಿ  , ಸಾರ್ ಇಲ್ಲಿ ನೋಡಿ , ಸಾರ್ ಆ ದೃಶ್ಯದ ಫೋಟೋ ತೆಗೆಯಿರಿ ಅಂತಾ  ಹುರಿದುಂಬಿಸುತ್ತಿದ್ದರು . ಅವರು ತೋರುತ್ತಿದ್ದ ದೃಶ್ಯಗಳು ಮನೋಹರವಾಗಿದ್ದವು 

 
ನೀರಿನಲ್ಲಿ ಸಾಗಿದ್ದ ಶಿಸ್ತಿನ ಸಿಪಾಯಿಗಳು


ದೈತ್ಯ ಮೊಸಳೆ

ಬಿಲದಿಂದ ಹೊರಗೆ ಬಂದ ಉರಗ

ಕಾಳೀ ನದಿಯಲ್ಲಿಸಾಗಿದ್ದ ನಮಗೆ  ನೀರಿನೊಳಗೆ  ಸಾಗಿದ್ದ  ಕಪ್ಪು ಬಣ್ಣದ ಮೀನುಗಳ ಗುಂಪು  ನೋಡಲು ಸಿಕ್ಕಿತು, ನೀರಿನೊಳಗೆ ಶಿಸ್ತಿನ ಸಿಪಾಯಿಗಳಂತೆ  ಗುಂಪಾಗಿ ಸಾಗಿದ್ದ ಮೀನುಗಳ ಆ ದೃಶ್ಯ  ಅಪರೋಪವಾಗಿತ್ತು. ಮುಂದೆ ಸಾಗಿದ ನಮಗೆ ಅಲ್ಲೇ ಸನಿಹದಲ್ಲಿ   ನೀರಿನ ಒಳಗೆ ಹಾಸಿದ್ದ ಮಣ್ಣಿನ  ಬದಿಯಲ್ಲಿ  ದೈತ್ಯ ಮೊಸಳೆ ದರ್ಶನ ನೀಡಿತ್ತು, ಮುಂಜಾವಿನ ಸೂರ್ಯ ಕಿರಣದ  ಸ್ಪರ್ಶಕ್ಕಾಗಿ  ಆ ಮೊಸಳೆ ಮೈಒಡ್ಡಿ ಮಲಗಿತ್ತು.  ಹಾಗೆ ಆ ಗುಡ್ಡೆಯನ್ನು ಬಳಸಿದ ನಮ್ಮ ಹರಿಗೋಲು  ಸಾಗಿರಲು  ಆ ಮಣ್ಣಿನ  ಗುಡ್ಡದಲ್ಲಿದ್ದ  ಒಂದು ಬಿಲದಿಂದ ನೀರು ಹಾವೊಂದು ಹೊರ ಬರುತ್ತಿತ್ತು.  ನಮ್ಮ ಕ್ಯಾಮರ ಅದನ್ನು ಸೆರೆಹಿದಿಯುತ್ತಾ ಸಾಗಿತ್ತು.



ಕಾಳಿನದಿಯ ರಮಣೀಯ ದೃಶ್ಯ

 ಕಾಳಿ ನದಿಯಲ್ಲಿ ತೇಲುತ್ತಾ  ಸಾಗಿದ್ದ ನಮಗೆ ಜೊತೆಯಾಗಿ  ಪ್ರಕೃತಿಯೂ ಸಹ  ನಲಿದಿತ್ತು. ಬೆಳಗಿನ ದೃಶ್ಯಗಳು ನೆನಪಾಗಿ ನಮ್ಮ ಕಣ್ ಹಾಗು ಕ್ಯಾಮರಾಗಳಿಗೆ ಸೆರೆಯಾದವು , ನಿನ್ನೆಯ ದಿನದ ನಿರಾಸೆ ಕಡಿಮೆಯಾಗಿತ್ತು, ಈ ಹರಿಗೊಲಿನ ಸವಾರಿ ಮನಕ್ಕೆ ಮುದ ನೀಡಿತ್ತು . , ಹರಿಗೋಲು ಸವಾರಿ ಮುಗಿಸಿ   ಬಂದ ನಾವು ಜಂಗಲ್ ಲಾಡ್ಜ್ ಸುತ್ತಾ ಒಂದಷ್ಟು ಸೈಕಲ್ ಸವಾರಿ ಮಾಡಿ  ಖುಷಿಪಟ್ಟೆವು, ನನಗೋ ಸೈಕಲ್ ಹೊಡೆದು ಎರಡು ದಶಕಗಳೇ ಆಗಿತ್ತು, ಬಾಲ್ಯದ ದಿನಗಳನ್ನು ನೆನೆಯುತ್ತಾ ನಾನೂ ಒಂದಷ್ಟು ಸೈಕಲ್ ಸವಾರಿ ಮಾಡಿ ಆನಂದಿಸಿದೆ, ಇನ್ನು ನಮ್ಮ ಮನೆಯವರೆಲ್ಲರೂ ಮತ್ತು ಮಕ್ಕಳು ಸೈಕಲ್ ಸವಾರಿ ಮಾಡಿ  ಕುಣಿದಾಡಿದರು


ಸೈಕಲ್ ಸವಾರಿ ಮಾಡಿ  ಬಾಲ್ಯಕ್ಕೆ ಜಾರಿದ ಸಮಯ


 ನಮ್ಮ ದಾಂಡೇಲಿ  ಕಾರ್ಯಕ್ರಮದ ಅಂತಿಮ ಘಟ್ಟ ತಲುಪಿದ್ದೆವು ಮುಂದಿನ ಜಾಗಕ್ಕೆ ತೆರಳಲು ಸಿದ್ದತೆ ಮಾಡಿಕೊಂಡು  ದಾಂಡೇಲಿ ಜಂಗಲ್ ಲಾಡ್ಜ್ ಸಿಬ್ಭಂದಿಗೆ ಕೃತಜ್ಞತೆ ತಿಳಿಸಿ,  ಅಲ್ಲಿಂದ ಮುಂದೆ ಸಾಗಿದೆವು. ದಾಂಡೇಲಿ  ಯಲ್ಲಿನ ಈ  "ಜಂಗಲ್ ಲಾಡ್ಜ್ " ಒಳ್ಳೆಯ ಪರಿಸರದಲ್ಲಿ ಇದೆ,  ಇಲ್ಲಿನ ಸಿಬ್ಬಂಧಿ  ಇಲ್ಲಿನ ಪರಿಸರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರವಾಸಿಗರಿಗೆ ಕೊಟ್ಟರೆ ಒಳ್ಳೆಯದು ,  ಶುಚಿಯಾದ  ರೂಮುಗಳು, . ನೀಡುವ ಊಟ ತಿಂಡಿ  ಶುಚಿಯಾಗಿತ್ತು, ಒಳ್ಳೆಯ ಅನುಭವ ಸಿಕ್ಕಿತು. ಆದರೂ  ಕೆಲವು ಬದಲಾವಣೆ ಆದರೆ ಒಳ್ಳೆಯದು ಅನ್ನಿಸಿತು .

  ಉತ್ತರ ಭಾರತ ಶೈಲಿಯ ತಿಂಡಿ ಊಟದ ಜೊತೆ ದಕ್ಷಿಣ ಭಾರತದ  ತಿಂಡಿ ತಿನಿಸುಗಳಿಗೆ ಹೆಚ್ಚಿನ ಪ್ರಾಶಸ್ತ್ಯ  ನೀಡಬೇಕು , ಉತ್ತರ ಕನ್ನಡ ಜಿಲ್ಲೆಯ  ವಿಶೇಷ  ಖಾದ್ಯಗಳನ್ನು  ಇಲ್ಲಿ ಪರಿಚಯಿಸುವ ಕಾರ್ಯ ಆದರೆ ಒಳ್ಳೆಯದು , ಪ್ರವಾಸಿಗಳಿಗೆ ಉತ್ತರ ಕನ್ನಡ ಜಿಲ್ಲೆಯ ತಿನಿಸುಗಳ ಪರಿಚಯ ಆಗುತ್ತದೆ , ಇಲ್ಲಿನ ಸುತ್ತ ಮುತ್ತಲಿನ ವಿಶೇಷತೆ ಬಗ್ಗೆ ಕೈಪಿಡಿ  ಪ್ರಕಟಿಸಿ ಪ್ರವಾಸಿಗರಿಗೆ  ಒದಗಿಸಬೇಕು ,  ಇವುಗಳನ್ನು ಅನುಷ್ಠಾನ ಮಾಡಿದಲ್ಲಿ  ಮತ್ತಷ್ಟು ಜನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ನೋಟ ಸವಿಯುತ್ತಾರೆ ಅನ್ನಿಸಿತು.     ಹಸಿರು ಕಮಾನಿನ ಹಾದಿಯಲ್ಲಿ,   ಹಸಿರ ಹಾದಿಯಲ್ಲಿ  ಕೆಲವು ಕಿಲೋಮೀಟರ್  ಕ್ರಮಿಸಿ , ಇದ್ದಕ್ಕಿದ್ದಂತೆ ನಮ್ಮ ಕಾರುಗಳು ಮಣ್ಣು  ದೂಳಿನ ಹಾದಿ ಹಿಡಿದವು


ಹಸಿರು ಕಮಾನಿನ ಹಾದಿ


ಅರೆ ಇದೇನಿದು  ಕಾರಿನ ಮೇಲೆಲ್ಲಾ ಧೂಳಿನ ಎರಚಾಟ......!!!.

Sunday, June 2, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .03 ಇವರ್ಯಾಕೆ ಬಂದರು ???

ಪ್ರವೇಶದಲ್ಲಿ ಕಂಡ ಸಿನಿಮ ಯೂನಿಟ್ ವಾಹನಗಳು

ದಾಂಡೇಲಿ ಕಥೆಯನ್ನು ಮೆಲಕು ಹಾಕುತ್ತಾ  ರೆಸಾರ್ಟ್ ಆವರಣ ಪ್ರವೇಶಿಸಿದೆ, ಅರೆ .....   ಇದೇನು ಕಾಡಿನ ಈ ಪ್ರದೇಶಕ್ಕೆ ಇವರ್ಯಾಕೆ ಬಂದರು ???  ಹೌದು ಇವರ್ಯಾಕೆ ಬಂದರು.. ?  ಇಲ್ಲಿನ ಜೀವಿಗಳ  ಜೀವನಕ್ಕೆ ತೊಂದರೆ ಮಾಡಲು ........... !!? ಹೌದು ದಾಂಡೇಲಿ ಅಭಯಾರಣ್ಯ ವನ್ಯ ಜೀವಿ ವೈವಿಧ್ಯತೆಗೆ ಹೆಸರುವಾಸಿ ಆದರೆ  ಆವರಣ ಪ್ರವೇಶಿಸಿದಂತೆ ನಮಗೆ ಕಂಡದ್ದು ಸಿನಿಮ ಯೂನಿಟ್ ವಾಹನಗಳ ದರ್ಶನ ,  ದೊಡ್ಡ ದೊಡ್ಡ ಸ್ಪಾಟ್ ಲೈಟ್ ಗಳು, ದೊಡ್ಡದಾದ ಜನರೇಟರ್ ಗಳು, ಕ್ಯಾಮರಾಗಳು , ಜೊತೆಗೆ ಸಿನಿಮಾ  ಶೂಟಿಂಗ್ ಮಾಡುವ ಸಡಗರದ ದೊಡ್ಡ  ಗಲಾಟೆ , ಶಬ್ಧ , ಇತ್ಯಾದಿಗಳೆಲ್ಲಾ ಸೇರಿ , ಇದು ಜಂಗಲ್ ಲಾಡ್ಜೋ ಅಥವಾ  ಸ್ಟುಡಿಯೋ ನೋ   ಎನ್ನುವ ಅನುಮಾನ ಬಂದಿತು,


ಸಾರಿ ಸಾರ್  ಎಲ್ಲಾ ಬುಕ್ ಆಗಿದೆ.


ಆದರೂ ನೋಡೋಣ ಅಂತಾ ಮುಂದೆ ಸಾಗಿದೆವು.  ಸ್ವಾಗತ ನೀಡಿದ ಅಲ್ಲಿನ ಸಿಬ್ಬಂಧಿ  ನಗುಮುಖದಿಂದ ಬರ ಮಾದಿಕೊಂಡರು , ಏನ್ ಸಾರ್ ರೂಮ್ಸ್ ಬುಕ್ ಆಗಿದೆಯಲ್ವಾ ??  ಎಂಬ ನಮ್ಮ ಶ್ರೀಧರ್ ಮಾತಿಗೆ , ಇಲ್ಲಾ ಸಾರ್ ಮಾಹಿತಿ ಸಿಕ್ಕಿಲ್ಲ ಎಲ್ಲಾ ರೂಂ ಗಳೂ ಬುಕ್ ಆಗಿವೆ ನಿಮಗೆ ಇಲ್ಲಾ ಸಾರ್ ಅಂತಾ  ಹೇಳಿ ದಾಗ ನಮ್ಮ ಶ್ರೀಧರ್ ಒಂದು ಕ್ಷಣ ತಬ್ಬಿಬ್ಬಾದರು , ನಂತರ ಏನೂ ಯೋಚನೆ ಬೇಡ ಸಾರ್ ಎಲ್ಲಾ ರೆಡಿ ಇದೆ ಬನ್ನಿ ಅಂತಾ ನಮ್ಮ ರೂಂ ಗಳನ್ನೂ ತೋರಿದರು .




ಗೋಲ್ ಘರ್ ನಲ್ಲಿ ಊಟ ಉಪಹಾರ



ನಮ್ಮ ಲಗ್ಗೇಜ್ ಗಳನೆಲ್ಲಾ ರೂಂ ನಲ್ಲಿ ಇಳಿಸಿ , ಸ್ವಲ್ಪ  ವಿಶ್ರಾಂತಿ ಪಡೆದು   ಮಧ್ಯಾಹ್ನದ  ಊಟಕ್ಕೆ ಗೋಲ್ ಘರ್  ಕಡಗೆ ಬಂದೆವು,  ಒಳ್ಳೆಯ ರುಚಿಯಾದ ಆಹಾರ ಸೇವನೆ ಆಯಿತು,  ಅಲ್ಲೇ ಇದ್ದ ಒಂದು ಬೆಕ್ಕು  ಮಕ್ಕಳನ್ನು  ಸೆಳೆದಿತ್ತು, ಎಲ್ಲಾ ಮಕ್ಕಳು ಆ ಬೆಕ್ಕನ್ನು ಹಿಂಬಾಲಿಸಿ ಅದಕ್ಕೆ ತಿಂಡಿ ಹಾಕಿ ಸಂಭ್ರಮ ಪಟ್ಟರು, ಮುಂದಿನ ಕಾರ್ಯಕ್ರಮಕ್ಕೆ ಸಿದ್ಧವಾದೆವು. ಮುಂದಿನ ಕಾರ್ಯಕ್ರಮ ಜೀಪ್ ಸಫಾರಿ



ಅಣಶಿ ಅರಣ್ಯ ಪ್ರದೇಶಕ್ಕೆ ಸ್ವಾಗತ

ಅರಣ್ಯ ಚೆಕ್ ಪೋಸ್ಟ್


ಸಂಜೆ ನಾಲ್ಕು ಘಂಟೆಗೆ  ನಮ್ಮ ಅರಣ್ಯ ಯಾನ ಆರಂಭ ವಾಯಿತು. ಅಣಶಿ ಅರಣ್ಯ ಪ್ರದೇಶಕ್ಕೆ ನಮ್ಮನ್ನು ಕರೆದು ಕೊಂದು ಹೊಗಲಾಯಿತು.  ಆದರೆ ನಮ್ಮ ಅದೃಷ್ಟ ಕೋಟ ಆಗಿತ್ತು ಯಾವುದೇ ವನ್ಯ ಜೀವಿ ಕಾಣ ಸಿಗಲಿಲ್ಲ.  ಜೊತೆಗೆ ಸಣ್ಣದಾಗಿ ಮಳೆ ಹನಿ ಬೀಳ ತೊಡಗಿತು ,


ಪ್ರಕೃತಿ ವೀಕ್ಷಣಾ ಸ್ಥಳ



ಬಾನಲ್ಲಿ ಮೂಡಿದ ಬಣ್ಣದ ಚಿತ್ತಾರ

 ಕಾಡಿನಲ್ಲಿ ಒಂದೆಡೆ ನಮ್ಮನ್ನೆಲ್ಲಾ ಇಳಿಸಿ ವೀಕ್ಷಣಾ ಸ್ಥಳಕ್ಕೆ ಕರೆದು ಕಂಡು ಹೊಗಲಾಯಿತು.  ಅಲ್ಲಿದ್ದ ವೀಕ್ಷಣಾ  ಸ್ಥಳದಿಂದ ಪ್ರಕೃತಿಯನ್ನು ನೋಡಲು ಬಹಳ ಸಂತಸವಾಯಿತು. ನಮ್ಮ ಕ್ಯಾಮರ ದಿಂದ ಒಂದಷ್ಟು ಚಿತ್ರಗಳನ್ನು ಸೆರೆ ಹಿಡಿದು ಮುಂದೆ  ಸಾಗಿದೆವು . ನಮ್ಮ ಜೊತೆ ಇದ್ದ  ಜಂಗಲ್ ಲಾಡ್ಜ್ ಸಿಬ್ಬಂಧಿಗೆ ಅರಣ್ಯದ ಬಗ್ಗೆ ಅಂತಹ ಮಾಹಿತಿ ಇರಲಿಲ್ಲ , ಅವರು ನಮ್ಮಂತಹ ಪ್ರವಾಸಿಗರ ಜೊತೆ ಮಾಹಿತಿ ಹಂಚಿ ಕೊಳ್ಳುವ ಉತ್ಸಾಹ ತೊರಲಿಲ್ಲ. ಅಲ್ಲಿನ ಅರಣ್ಯದ ಬಗ್ಗೆ ನಾವೇ ಕೇಳಿದ ಪ್ರಶ್ನೆಗಳಿಗೂ ಉತ್ತರ ನೀಡುವ  ಆಸಕ್ತಿ ಅವರಲ್ಲಿ ಕಾಣಲಿಲ್ಲ . ಜಂಗಲ್ ಲಾಡ್ಜಸ್ ಬಗ್ಗೆ ಇದ್ದ ಒಂದು ಕಲ್ಪನೆಕರಗುತ್ತಾ ಇರುವ ಭಾವನೆ ಉಂಟಾಯಿತು ನಮಗೆ.




ವೀಕ್ಷಣ ಗೋಪುರ 

 
ಮತ್ತೊಂದೆಡೆ  ಕಂಡ  ರಮ್ಯ ನೋಟ


 ಮುಂದೆ ಸಾಗಿದ ನಮಗೆ ವನ್ಯ ಜೀವಿಗಳೂ ಕಾಣಲಿಲ್ಲ, ಸಿಬ್ಬಂಧಿಗಳೂ ನಿರುತ್ಸಾಹ ದಿಂದ ಇದ್ದರು ಪ್ರಕೃತಿಯೂ ಸಹಕರಿಸಲಿಲ್ಲ. ಯಾಕೋ ಬೋರ್ ಆದ ಸಫಾರಿ ಇದಾಗಿತ್ತು. ಇಂತಹವೆಲ್ಲಾ ಎಷ್ಟೋ ಜನರಿಗೆ ಆಗಿರುತ್ತೆ ಅಂತಾ ಸಮಾಧಾನ ಮಾಡಿಕೊಂಡ ನಾವುಗಳು ಇರೋದರಲ್ಲೇ  ಖುಷಿ ಪಡೋಣ ಎಂಬ ಪಾಲಿಸಿಗೆ  ಹೊಂದಿಕೊಂಡೆವು.   ಅಲ್ಲೊಂದು ವೀಕ್ಷಣಾ ಗೋಪುರದಲ್ಲಿ ನನಗೆ ಸುಂದರ ರಮ್ಯ ನೋಟ ಸಿಕ್ಕಿತು. ,



ಕಾಡಿನಲ್ಲಿ ಪ್ರವಾಸಿಗಳು ಸುರಿದ  ತ್ಯಾಜ್ಯಗಳನ್ನು ನೋಡಿ



 ಅಲ್ಲೇ ಸನಿಹದಲ್ಲಿ  ನಮಗೆ ದರ್ಶನ ನೀಡಿತ್ತು  ಪ್ಲಾಸ್ಟಿಕ್ ಬಾಟಲ, ಬಿಸ್ಕೆಟ್ ಪ್ಯಾಕೆಟ್ ಗಳ ರಾಪರ್ , ಬಿಯರ್ ಬಾಟಲ , ಇತರ ತ್ಯಾಜ್ಯ ವಸ್ತುಗಳು,  ದಟ್ಟ ಕಾಡಿನಲ್ಲಿ  ಇವನ್ನೆಲ್ಲ ಸುರಿದು  ವನ್ಯ ಜೀವಿಗಳ  ಬಗ್ಗೆ ಉದ್ದುದ್ದ ಮಾತಾಡುವ ನಮ್ಮ ಬಗ್ಗೆ ಅಸಹ್ಯ  ಹುಟ್ಟಿತು .  ಇದರ ಬಗ್ಗೆ  ನಮ್ಮ  ಜೊತೆಯಲ್ಲಿದ್ದ ಸಿಬ್ಬಂಧಿಗಳಿಗೆ ಹೇಳಿದರೆ  ಅಯ್ಯೋ ಬಿಡಿ ಸಾರ್ ಇವೆಲ್ಲಾ  ಕಾಮನ್  ಅಂದ್ರು . ವಿಷಾದದ  ಮುಖ ಹೊತ್ತು  ಜಂಗಲ್ ಲಾಡ್ಜ್ ಗೆ ವಾಪಸ್ಸಾದೆವು,




ಚಿತ್ರೀಕರಣದ  ಭರಾಟೆ

ಹೈ ಬೀಮ್ ಲೈಟ್ ನ ಬೆಳಕು  ಹಾಗು ಲಾಡ್ಜ್ ತುಂಬಾ ಚಿತ್ರೀಕರಣ  ಸಾಮಗ್ರಿ ಗಳ ಚೆಲ್ಲಾಟ

 
ಅಲ್ಲಿಗೆ ಬಂದ ನಮಗೆ  ಎದುರಾದದ್ದೇ  ಚಿತ್ರೀಕರಣ  ತಂಡ  ದೊಡ್ಡ ಹೈ  ಬೀಮ್ ಲೈಟ್  ಗಳ ಬೆಳಕಿಗೆ  ಅಲ್ಲಿನ ರಾತ್ರಿ ಕೂಡ ಬೆಳಕಾಗಿತ್ತು, ಅಲ್ಲಿನ ಮರಗಳಲ್ಲಿದ್ದ  ಪಕ್ಷಿಗಳು, ಕೋತಿಗಳು  ವಿಚಿತ್ರವಾಗಿ ಕೂಗುತ್ತಿದ್ದವು, ಇದ್ಯಾವುದೂ ಆ ಚಿತ್ರೀಕರಣ ತಂಡಕ್ಕೆ ಗೊತ್ತಿರಲಿಲ್ಲ. ಅದರ ಬಗ್ಗೆ ಜಂಗಲ್ ಲಾಡ್ಜ್ ನವರೂ ಸಹ ತಲೆ ಕೆದಿಸಿಕೊಂಡಿರಲಿಲ್ಲ ,ಜಂಗಲ್ ಲಾಡ್ಜ್ ನವರ ಉದ್ದೇಶ ಪರಿಸರ ಉಳಿಸುವ ಪ್ರವಾಸ  ಎಂಬ ಕಲ್ಪನೆ ಇಲ್ಲಿ ಕಾಣಲಿಲ್ಲ . ಜಂಗಲ್ ಲಾಡ್ಜ್  ನವರ ಉದ್ದೆಶದಬಗ್ಗೆ ಈ ಲಿಂಕ್ ನೋಡಿ http://junglelodges.com/index.php/about-us.html
Our objective
   The Company promotes Eco-tourism, wildlife tourism, adventure tourism and various outdoor activities like trekking, camping, white water rafting, fishing etc., that are non consumptive components of eco-tourism and in general help in environment conservation.

ಲಾಡ್ಜ್ ನಲ್ಲಿದ್ದ ಇತರ ಪ್ರವಾಸಿಗರಿಗೂ ಇಂತದೆ ಕಿರಿ ಕಿರಿ ಆಗಿದ್ದರೂ ಯಾರೂ ಮಾತಾಡದ ಸನ್ನಿವೇಶ , ಜೊತೆಗೆ ಆಕ್ಷನ್ , ಕಟ್ , ಹಾಗು ಇತರ ತಂತ್ರಜ್ಞರಿಗೆ ನೀಡುವ ಆಜ್ಞೆಯ ದೊಡ್ಡ  ಮಾತುಗಳ ಗದ್ದಲ , ತಂತ್ರಜ್ನರ ಗಲಾಟೆ ಎಲ್ಲಾ ಸೇರಿ ಅಲ್ಲಿ ಕಾಡಿನ ಮದ್ಯದಲ್ಲಿನ ಸಂತೆ ಯಾಗಿತ್ತು . 


ಹೀರೋ ಹೀರೋಯಿನ್  ನಟನೆ ಇಲ್ಲಿದೇ
ಭಯಾನಕ ಸನ್ನಿವೇಶ ಸೃಷ್ಟಿಸಲು ಮಾಡಿದ್ದ ಬೆಳಕಿನ ವ್ಯವಸ್ಥೆ
 ನಮಗೂ  ವಿಧಿಯಿಲ್ಲದೇ  ಬಲವಂತವಾಗಿ  ಚಿತ್ರೀಕರಣ ನೋಡುವ  ಅವಕಾಶ ಸಿಕ್ಕಿತು, ಯಾವುದೋ ತೆಲುಗಿನ ಭಯಾನಕ ಕಥೆಯ ಚಿತ್ರವಂತೆ  ಅದರ ಸನ್ನಿವೇಶಗಳ  ಚಿತ್ರೀಕರಣ ನದೆಯುತ್ತಿತ್ತು.  , ಅಲ್ಲಿನವರಿಗೆ ಅಲ್ಲಪ್ಪ ಜಂಗಲ್ ಲಾಡ್ಜ್ ಉದ್ದೇಶ  ವನ್ಯ ಜೀವಿಗಳ ಬಗ್ಗೆ  ಅದರ ಉಳಿವಿನ ಬಗ್ಗೆ  ಜನರಿಗೆ ತಿಳುವಳಿಕೆ ನೀಡುವುದು ಆದರೆ ಇಲ್ಲಿ ಯಾಕೆ  ಅದರ ಉಲ್ಲಂಘನೆ ಆಗ್ತಿದೆ ಅಂದರೆ  ಅಯ್ಯೋ ಇವರು ನಮ್ಮ ದೊಡ್ಡ  ಆಫಿಸರ್ಗಳ ಹತ್ತಿರ ಅನುಮತಿ  ಪಡೆದಿದ್ದಾರೆ  ನಾವೇನು ಮಾಡಲು ಸಾಧ್ಯ ಸಾರ್ ಅಂದ್ರು  ಮನಸಿಗೆ ಬೇಸರವಾಯಿತು,  ಜಂಗಲ್ ಲಾಡ್ಜ್    ನವರ ಅಂತರ್ಜಾಲ ತಾಣದಲ್ಲಿ  ತಿಳಿಸಿದಂತೆ  
ಲಿಂಕ್ ಇಲ್ಲಿದೆ http://junglelodges.com/index.php/resorts/kali.html
"Both Dandeli Wildlife Sanctuary and its adjacent Anshi National Park house huge tracts of moist- deciduous forest. Although a know habitat of the rare black panther, the large size of the forest makes spotting them very difficult. Yet, many of our guests have spotted it and other wild animals such as spotted deer, sambar, barking deer, sloth bear, gaur (Indian bison), wild boars, fox, jackal, pangolin and elephants. Our guests have also had frequent sighting of the great pied hornbill, yellow footed pigeon, crested serpent eagle, adjutant stork, black crested baza and peafowls. The forests of Dandeli and Anshi are home to over 200 species of birds. From the Camp, one can sight Malabar hornbills nesting across the river. Ashy swallow shirkes, drongos, minivets, iora, brahminy kites, and many others birds can be spotted from the camp. "

 ಅಲ್ಲಿನ ಗೋಲ್ ಘರ್  ನಲ್ಲಿ  ಊಟ ಮಾಡಿ    ರೂಮಿಗೆ ಮಲಗಲು ಬಂದರೆ ಚಿತ್ರೀಕರಣ ತಂಡದ ಗದ್ದಲ ಸರಿ ರಾತ್ರಿವರೆಗೆ ನದೆದಿತ್ತು. ಅಂತೂ ಇಂತೂ ಯಾವಾಗಲೋ ನಿದ್ದೆ  ಬಂದಿತ್ತು .  ........ !!! ದೂರದಲ್ಲಿ ಎಲ್ಲೋ  ಕಲರವ ಕೇಳಿತ್ತು .

Sunday, May 19, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .02 ದಾಂಡೇಲಿ ಅಂತಾ ಯಾಕೆ ಕರೆಯುತ್ತಾರೆ ಗೊತ್ತಾ ??



ದಾಂಡೇಲಿ ಗೆ ಸ್ವಾಗತ



ದಾಂಡೇಲಿ  ಪಯಣ ಯಾಕೋ ಮೊದಲ  ಸಂಚಿಕೆಗೆ   ನಿಂತಿತ್ತು.  ಕಳೆದ ಸಂಚಿಕೆಯ ಕಥನ. ಏನ್ ಮಾಡೋದು ಒಮ್ಮೊಮ್ಮೆ  ಬರೆಯುವ ತುಡಿತ ಇದ್ದರೂ ಬರೆಯಲು ವಿಗ್ನಗಳು ಹಲವಾರು. ಕಳೆದ ಎರಡುವಾರಗಳಿಂದ ಬರೆಯಲು ನೂರೆಂಟು ಅಡ್ಡಿಗಳ ಸರಮಾಲೆ. ಹೌದು ಎರಡು ವಾರದ ಹಿಂದೆ ಎರಡನೇ ಕಂತನ್ನು ಬರೆಯಲು ಕುಳಿತೆ  ಎಲ್ಲ ಸಿದ್ದ ಪಡಿಸಿಕೊಂಡು  ಕಂಪ್ಯೂಟರ್ ಆನ್ ಮಾಡಿ ಚಿತ್ರಗಳಿಗೆ ಹುಡುಕಿದರೆ  ಎಲ್ಲಾ ಚಿತ್ರಗಳು ಮಂಗ ಮಾಯ , ಇದೇನಪ್ಪಾ ಅಂತಾ ನೋಡಿದ್ರೆ ನನ್ನ ಮಗ ಹೊಸ ಉತ್ಸಾಹದಲ್ಲಿ  ಸಾಫ್ಟ್ ವೇರ್ ಅಪ್ಡೇಟ್ ಮಾಡಲು ಹೋಗಿ ನನ್ನ ಕಂಪ್ಯೂಟರ್ನಲ್ಲಿ ಸುಮಾರು  ಸಾವಿರಕ್ಕೂ ಹೆಚ್ಚು ಅಮೂಲ್ಯ ಫೋಟೋಗಳನ್ನು  ಅಳಿಸಿಹಾಕಿದ್ದ , ಆದರೆ  ಲೇಖನಕ್ಕೆ ಅವಶ್ಯವಾದ ಚಿತ್ರಗಳನ್ನು  ಮತ್ತೆ ಹುಡುಕಲು ಆರಂಭಿಸಿದೆ ಕೊನೆಗೆ ನನ್ನ  ಎಕ್ಸ್ಟರ್ನಲ್ ಹಾರ್ಡ್ ಡಿಸ್ಕ್ ನಲ್ಲಿ ಅವಿತು ಕುಳಿತಿದ್ದ ಫೋಟೋಗಳನ್ನು ಮತ್ತೆ ಪಡೆದು ಬರೆಯಲು ಇವತ್ತು ಕುಳಿತೆ . 



ರಾಣಿ ಚೆನ್ನಮ್ಮ ವೃತ್ತ



 ನನ್ನ ಪುರಾಣ ಇದ್ದದ್ದೇ ಬನ್ನಿ ಹೋಗೋಣ ಎರಡನೇ ಸಂಚಿಕೆಗೆ ಹಸಿರ ದೃಶ್ಯ ವೈಭವ ನೋಡುತ್ತಾ   ಬಂದೆ ಬಿಟ್ಟೆವು  ದಾಂಡೇಲಿ ಗೆ  , ಅಲ್ಲಿ ಕಾಣಿಸಿದ್ದು "ವೆಲ್ಕಂ ಟು ದಾಂಡೇಲಿ"  ಎನ್ನುವ ಕಮಾನು.............................................ಸ್ವಾಗತ ಕೋರಿತು, ಹೊಸ ಊರಿನ ದರ್ಶನ ಹಳಿಯಾಳ ದಾಂಡೇಲಿ  ರಸ್ತೆಯಲ್ಲಿ ಊರ ಒಳಗೆ  ಪ್ರವೇಶಿಸಿದ ನಮ್ಮ ಕಾರುಗಳು   ನಿಧಾನವಾಗಿ ಚಲಿಸಿದವು , ರಾಣಿಚೆನ್ನಮ್ಮ ವೃತ್ತ ದಾಟಿ ಎಡಗಡೆಗೆ ತಿರುಗಿ  ಸ್ವಲ್ಪ ದೂರ ಹೋದ ನಮಗೆ ಕಾಳಿ ನದಿ ಗೆ ಅಡ್ಡಲಾಗಿ ಕಟ್ಟಿದ ಒಂದು ಸೇತುವೆ  ಎದುರಾಯಿತು


ದಾಂಡೇಲಿ ಪಕ್ಕದ ಸೇತುವೆ
ಅದನ್ನು ದಾಟಿ ತಲುಪಿದ್ದೆ   ಜಂಗಲ್  ಲಾಡ್ಜ್   . ಅಲ್ಲಿ ನಮ್ಮನ್ನು ಸ್ವಾಗತಿಸಿದ  ಜಂಗಲ್ ಲಾಡ್ಜ್  ಬೋರ್ಡು  ನಿಮಗೆ ಈ ಊರಿನ ಇತಿಹಾಸ ಗೊತ್ತಾ ಅಂತಾ   ಕೇಳಿತ್ತು,  ಪ್ರವಾಸ ಮುಗಿಸಿ  ಬಂದ ನಾನು ಈ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡೆ  ಆದರೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ಬಗ್ಗೆ  ಗೆಜೆತೀರ್ ಗಳಲ್ಲಿಯೂ ಹೆಚ್ಚಾಗಿ ಮಾಹಿತಿ ದೊರಕಲಿಲ್ಲ. ಹಲವು ಹಿರಿಯರ ಸಹಾಯ ಪಡೆದರೂ  ಅವರಿಂದಲೂ ಹೆಚ್ಚಿನ ಮಾಹಿತಿ ದೊರಕಲಿಲ್ಲ. ಅದ್ಯಾಕೋ ಕಾಣೆ ಉತ್ತರ ಕನ್ನಡ ಜಿಲ್ಲೆಯಲ್ಲಿ  ಇತಿಹಾಸ ದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಲಾರದು. ಈ ಬಗ್ಗೆ ಅಲ್ಲಿನ ಜ್ಞಾನವಂತರು ವಿಚಾರ ಮಾಡಬೇಕಾದ ಅವಶ್ಯಕತೆ ಇದೆ. ಆದಾಗ್ಯೂ ಅಂತರ್ಜಾಲದಲ್ಲಿ ಜಾಲಾಡಿ ಸ್ವಲ್ಪ ಮಾಹಿತಿ ಕಲೆ ಹಾಕಿದ್ದೆನೆ. ಇದಕ್ಕೆ ಪುರಾವೆಯೂ ಸಹ ಇದೆ.



ದಾಂಡೇಲ ರಾಯನ  ದೇವಾಲಯ  

ದಾಂಡೇಲಿ ಹೆಸರಿನ ಹಿಂದೆ ಒಂದು ದುರಂತ ಪ್ರೇಮದ ಕಥೆ ಇದೆ,   ಈ ಕಥೆಯ ಹೀರೋ "ದಾಂಡೇಲಪ್ಪ" ಇವನು ಒಬ್ಬ ಸಾಮಾನ್ಯ ಆಳಾಗಿ ಒಬ್ಬ  ಜಮೀನ್ದಾರನ  ಬಳಿ ಕೆಲಸ ಮಾಡುತ್ತಿರುತ್ತಾನೆ, ಜಮಿನ್ದಾರನ  ಕುಟುಂಬವನ್ನು "ಮಿರಾಶಿ " ಎಂದು ಕರೆಯುತ್ತಿದ್ದರಂತೆ,  ಆ ಕುಟುಂಬದ ಒಬ್ಬ ಯುವತಿ ಕೆಲಸಗಾರ  ಆಳು "ದಾಂಡೇಲಪ್ಪ" ನನ್ನು ಪ್ರೀತಿಸಿ ಬಯಸುತ್ತಾಳೆ ,  ಆದರೆ ಆ ಕುಟುಂಬದ ನೀಯತ್ತಿನ ಆಳು  ತನ್ನ  ಧಣಿ ಯ ಕುಟುಂಬಕ್ಕೆ ದ್ರೋಹ ಮಾಡಬಾರದೆಂಬ  ಕಾರಣಕ್ಕೆ  ಆ ಯುವತಿಯ ಪ್ರೀತಿಯನ್ನು  ನಿರಾಕರಿಸುತ್ತಾನೆ. ಇದರಿಂದ ಕೋಪ ಗೊಂಡ ಆ ಯುವತಿ  "ದಾಂಡೇಲಪ್ಪ" ನ ಮೇಲೆ ಅಪವಾದ ಹೊರೆಸಿ  ತನ್ನ ಹಿರಿಯರ ಬಳಿ  ಚಾಡಿ  ಹೇಳುತ್ತಾಳೆ , ಹಿಂದೆ ಮುಂದೆ ಯೋಚಿಸದೆ  ಆ ಯುವತಿಯ  ಸಹೋದರರು  ಹರಿತವಾದ ಕತ್ತಿಯಿಂದ   "ದಾಂಡೇಲಪ್ಪ"ನ ತಲೆಯನ್ನು  ಕೊಚ್ಚಿ ಹಾಕುತ್ತಾರೆ.   "ದಾಂಡೇಲಪ್ಪ" ನ ರುಂಡ ಒಂದು ಕಡೆ ಹಾಗು ಮುಂಡ  ಒಂದು ಕಡೆ  ಚೆಲ್ಲುತ್ತಾರೆ  . ಹೀಗೆ ಅಂತ್ಯವಾಗುತ್ತದೆ ಅ ದುರಂತ ಪ್ರೇಮಕಥೆ  , ಈ ಘಟನೆ ಯಿಂದ ದಾಂಡೇಲಪ್ಪ ಅಮರನಾಗಿ ಈ ಊರಿನ ಹೆಸರಾಗಿ ಉಳಿದು ಕೊಂಡಿದ್ದಾನೆ . ಇಂದಿಗೂ  ದಾಂಡೇಲಿಯ  ಹೊರವಲಯದಲ್ಲಿ  "ದಾಂಡೇಲಪ್ಪ" ನ  ರುಂಡ ಹಾಗು ಮುಂದ ಬಿದ್ದ  ಅವನ ಹೆಸರಿನಲ್ಲಿ ಎರಡು ದೇವಾಲಯ ಇರುವುದಾಗಿ ತಿಳಿದು ಬರುತ್ತದೆ. ಆದರೆ ನನ್ನ ಕಣ್ಣಿಗೆ ಬಿದ್ದುದು ಒಂದು ಮಾತ್ರ


ದಾಂಡೇಲಿ ರೆಸಾರ್ಟ್ ಗೆ ಪ್ರವೇಶ

 ದಾಂಡೇಲಿ ಕಥೆಯನ್ನು ಮೆಲಕು ಹಾಕುತ್ತಾ  ರೆಸಾರ್ಟ್ ಆವರಣ ಪ್ರವೇಶಿಸಿದೆ, ಅರೆ .....   ಇದೇನು ಕಾಡಿನ ಈ ಪ್ರದೇಶಕ್ಕೆ ಇವರ್ಯಾಕೆ ಬಂದರು ???  ಹೌದು ಇವರ್ಯಾಕೆ ಬಂದರು  ಇಲ್ಲಿನ ಜೀವಿಗಳ  ಜೀವನಕ್ಕೆ ತೊಂದರೆ ಮಾಡಲು ........... !!?


















Sunday, April 28, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .೦೧ . ಬನ್ನಿ ಹೊರಡೋಣ ದಾಂಡೇಲಿ ಗೆ.





ದಾಂಡೇಲಿ ಗೆ ಸ್ವಾಗತ.


ಕಳೆದ ವರ್ಷ  ದೆಹಲಿಯ ಪ್ರವಾಸದ ಬಗ್ಗೆ ಬರೆದದ್ದು ನಿಮಗೆ ನೆನಪಿದೆ, ಆ ಸಮಯದಲ್ಲಿ  ದೆಹಲಿಯಲ್ಲಿ ನನ್ನ ಕೆಲಸ ಮುಗಿಸಿ ಹೊರಡುವ ಹಿಂದಿನ ದಿನ ನನ್ನ ಪತ್ನಿ  ಫೋನ್ ಮಾಡಿ  " ರೀ  ಏನ್ ಸಮಾಚಾರ , ಮನೆಗೆ ಬರೋ ಯೋಚನೆ ಇಲ್ವಾ ಅಥವಾ ದೆಹಲಿಯಲ್ಲೇ ಬಿಡಾರ ಮಾಡೋ ಯೋಚನೆ ಮಾಡಿಬಿಟ್ರಾ...........!!!!"  ಅನ್ನುತ್ತಾ ಹುಸಿಮುನಿಸು ತೋರಿದಳು. ಇಲ್ಲಾ ಮಾರಾಯ್ತಿ  ನಾಳೆ ವಾಪಸ್ಸು  ಹೊರಟಿದ್ದೇನೆ ಅಂದೇ. ಓ ಹೌದಾ ಸರಿ ಹಾಗಿದ್ರೆ  ನೀವು ಬೆಂಗಳೂರಿನ ಶ್ರೀಧರ್  ಮನೆಗೆ ಬನ್ನಿ ನಾನೂ ಅಲ್ಲಿಗೆ ಬರ್ತಾ ಇದ್ದೀನಿ. ವೇಣು , ಶ್ರೀಧರ್ ಎಲ್ಲಾ  ದಾಂಡೇಲಿ ಗೆ ಹೋಗೋದಿಕ್ಕೆ  ನಮ್ಮ ಕುಟುಂಬವನ್ನೂ ಸೇರಿಸಿ ಬುಕ್  ಮಾಡಿದ್ದಾರೆ , ಅಂದ್ಲೂ .............!!! ಸರಿ ಮಾರಾಯ್ತಿ  ಅಮ್ಮನವರ ಅಪ್ಪಣೆ ಅಂತಾ ಫೋನ್ ಇಟ್ಟೇ. ಅಷ್ಟರಲ್ಲಿ  ನನ್ನ ಕೋ ಬ್ರದರ್  ವೇಣು ಫೋನ್ ಬಂದು ಬಾಲು ನಾಳೆ ಬರ್ತಾ ಇದೀರಂತೆ  ಬೆಂಗಳೂರ್ ಗೆ ಬನ್ನಿ  ಎಲ್ಲಾರೂ ದಾಂಡೇಲಿ  ಹೋಗಲು ಬುಕ್ ಮಾಡಿದ್ದೇನೆ  , ಮಿಸ್ ಮಾಡ್ಬೇಡಿ ಆಮೇಲೆ ಅಂದ್ರೂ.



ವೇಣು ಗೋಪಾಲ್ 

ಶ್ರೀಧರ್ ನಾಗಭೂಷಣ್  


ಅರೆ ಇದೇನಿದು ಅಂತಾ ಅಚ್ಚರಿಯಾದರೂ  ಒಮ್ಮೊಮ್ಮೆ ನಮಗೆ ಅರಿವಿಲ್ಲದಂತೆ ಇಂತಹ ಪ್ರವಾಸ ಬರುತ್ತವೆ.  ಸರಿ ದೆಹಲಿಯ ಬೇಸಿಗೆಯ  ಬಿಸಿಯಲ್ಲಿ ಬಸವಳಿದ ನನಗೆ ಅನಿವಾರ್ಯವಾಗಿ ಇಂತಹ ಪ್ರವಾಸ ಅಗತ್ಯವಿತ್ತು, ಬೆಂಗಳೂರಿಗೆ ದೌಡಾಯಿಸಿದೆ.   ಕಟ್ ಮಾಡಿದ್ರೆ  ನಮ್ಮ ಪಯಣ ದಾಂಡೇಲಿಯ ಕಡೆ ಹೊರಟಿತ್ತು. ,  ಮತ್ತೆ ದಿಬ್ಬಣ ಹೊರಟಿತ್ತು, ಮೂವರು ಅಳಿಯಂದಿರ  ಕುಟುಂಬಗಳು.  ಮೊದಲನೆಯ ಅಳಿಯ ನಾನು ಎರಡನೆಯ ಅಳಿಯ ಶ್ರೀಧರ್ , ಮೂರನೆಯ ಅಳಿಯ ವೇಣುಗೋಪಾಲ್ ,  ಮೂವರು  ಸಹ ಸಮಾನ  ಹವ್ಯಾಸಗಳು  ಇರುವ ಕಾರಣ ಯಾವುದೇ ಗೊಂದಲ ವಿಲ್ಲದೆ ಹೊರಟೆವು, ಎರಡು ಕಾರುಗಳು ಬೆಂಗಳೂರಿನಿಂದ  ಹೊರಟು  ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ   ಸಾಗಿದವು.ಬೆಂಗಳೂರು, ನೆಲಮಂಗಲ, ತುಮಕೂರು, ಶಿರ, ಹಿರಿಯೂರು ,  ಚಿತ್ರದುರ್ಗ, ದಾವಣಗೆರೆ, ಹರಿಹರ ,ರಾಣಿಬೆನ್ನೂರು , ಹಾವೇರಿ, ಧಾರವಾಡ , ಹಳಿಯಾಳ, ದಾಂಡೇಲಿ  ೪೭೭ ಕಿ.ಮಿ. ಪ್ರಯಾಣ, ಸುಮಾರು ೭.ರಿಂದ ೮ ಘಂಟೆ  ಅವಧಿಯ ಪ್ರಯಾಣ,  ಆದರೆ  ಬೆಳಿಗ್ಗೆ ಏಳು ಘಂಟೆಗೆ ಹೊರಟ ನಾವು  ಮಧ್ಯಾಹ್ನ  ಒಂದುವರೆಗೆ  ದಾಂಡೇಲಿ ಜಂಗಲ್ ರೆಸಾರ್ಟ್ ತಲುಪಬೇಕಾಗಿತ್ತು.   ಮಿಂಚಿನಂತೆ ಎರಡೂ ಕಾರುಗಳು ಹೊರಟವು.   ಪಯಣದ ಅವಧಿಯಲ್ಲಿ ನನ್ನ ಕ್ಯಾಮರಾ ಕೈಗೆ ಬಂತು ದಾರಿಯಲ್ಲಿ ನನ್ನ ಕ್ಯಾಮರಾ ಕಣ್ಣಿಗೆ ಅಂತಹ ವಿಶೇಷವೇನೂ ಕಾಣಲಿಲ್ಲ ಆದರೆ  ಚಿತ್ರದುರ್ಗ ಹತ್ತಿರ ಬಂದಂತೆ  ನಮ್ಮನ್ನು ಸ್ವಾಗತ ಮಾಡಿದ್ದು, ಗಾಳಿಯಂತ್ರ .



ಗಾಳಿಯಂತ್ರ 

ಹೌದು ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿನಾಲ್ಕರಲ್ಲಿ  ಪಯಣಿಸುವಾಗ ಚಿತ್ರದುರ್ಗಕ್ಕೆ ಮೊದಲು ನಿಮ್ಮನ್ನು ಸ್ವಾಗತಿಸಲು ಈ ಗಾಳಿಯಂತ್ರಗಳ  ಸಮೂಹವೇ ನಿಮಗೆ ಕಾಣ ಸಿಗುತ್ತವೆ, ಐತಿಹಾಸಿಕ ಕೋಟೆಯ ಈ ನೆಲದಲ್ಲಿ ಇಂದು  ಚಿತ್ರದುರ್ಗದ ಸುತ್ತಮುತ್ತ  ಇರುವ ಗುಡ್ಡ  ಬೆಟ್ಟಗಳ ಮೇಲೆ ಗಾಳಿ ಯಂತ್ರಗಳದ್ದೆ  ಕಾರು ಬಾರು.  ಹಾಗೆ ಮುಂದೆ ಚಲಿಸುತ್ತಾ  , ಸಾಗಿದ ನನಗೆ ಮುಂದೆ ದಾವಣಗೆರೆ  ಕ್ರಮಿಸಿದಾಗ ಜ್ಞಾಪಕಕ್ಕೆ ಬಂದಿದ್ದು , ಇಲ್ಲಿನ ಹತ್ತಿ ಗಿರಣಿಗಳ ನೆನಪು "ಕರ್ನಾಟಕದ  ಮ್ಯಾಂಚೆಸ್ಟರ್ " ಎಂದು ಕರೆಯುತ್ತಿದ್ದ ದಿನಗಳು, ಇಂದು ಆ ಊರು  "ಕರ್ನಾಟಕದ  ಮ್ಯಾಂಚೆಸ್ಟರ್ "    ಎಂಬ ಅರ್ಥವನ್ನು ಕಳೆದುಕೊಂಡು  ಇತಿಹಾಸ ಸೇರುವ ಹಾದಿಯಲ್ಲಿರುವುದಾಗಿ ತಿಳಿದು  ನೋವಾಯಿತು. ಇಲ್ಲಿನ  ಡಿ .ಸಿ . ಎಂ.  ಸೂಟಿಂಗ್    ಆ ದಿನಗಳಲ್ಲಿ ಬಹಳ ಪ್ರಸಿದ್ದಿ ಹೊಂದಿದ್ದು   ಇಂದು  ಹೇಳಹೆಸರಿಲ್ಲದಂತೆ ಆಗಿದೆ.  


ಯಂತ್ರಗಳ ಚಿತ್ತಾರ 

ನೆನಪಿನ ವಾಸ್ತವತೆಗೆ  ಹಿಂತಿರುಗಿ ಬಂದ ನನಗೆ  ನಮ್ಮ ಕಾರಿನ ಮುಂದೆ ಚಲಿಸುತ್ತಿದ್ದ ಎರಡು ದೊಡ್ಡ ಲಾರಿಗಳಲ್ಲಿ  ಟ್ರಾಕ್ಟರ್ ಗಳನ್ನೂ ಕೊಂದೊಯ್ಯುತ್ತಿರುವುದು ಕಣ್ಣಿಗೆ ಬಿತ್ತು , ಪ್ರತೀ ಲಾರಿಯಲ್ಲೂ  ಐದೈದು  ಟ್ರ್ಯಾಕ್ಟರ್ ಗಳನ್ನೂ ವ್ಯವಸ್ತಿತವಾಗಿ ನಿಲ್ಲಿಸಲಾಗಿತ್ತು, ನೋಡಲು  ಅಂದವಾಗಿ ಕಾಣುತ್ತಿತ್ತು,  ಚಲಿಸುತ್ತಿದ್ದ ವಾಹನಗಳ ನಡುವೆ ಇದೊಂದು ವಿಶೇಷವಾಗಿ ಗಮನ ಸೆಳೆಯುತ್ತಿತ್ತು.   ಜೊತೆಗೆ ಟ್ರಾಕ್ಟರ್  ಭಾರವನ್ನು ಹೊತ್ತ ಲಾರಿಗಳು ಬುಸುಗುಡುತ್ತಾ  ಸಾಗಿ ಹೊಗೆಯನ್ನು ಉಗುಳುತ್ತಿದ್ದವು. 


ವಾಹನಗಳ  ನಡುವೆ 


ಹಾಗೂ ಹೀಗೂ  ಹರಿಹರ  ದಾಟಿ  ಹೋರಟ ನನಗೆ  ಹೆದ್ದಾರಿಯಲ್ಲಿ ಲಾರಿಗಳ ಕಾರುಬಾರು ಗೋಚರಿಸಿತು, ಯಾವುದೇ ಶಿಸ್ತಿಲ್ಲದೆ  ತಮಗಿಷ್ಟಬಂದಂತೆ ಚಾಲಕರು  ಲಾರಿಗಳನ್ನು ಚಲಿಸುತ್ತಿದ್ದುದು  ಕಂಡು ಬಂತು, ಈ ನಡುವೆ ಹರ ಸಾಹಸ ಪಟ್ಟು  ಲಾರಿಗಳ ನಡುವೆ  ನುಸುಳಿ ದಾರಿ ಮಾಡಿಕೊಂಡು ಸಾಗಬೇಕಾದ  ಅನಿವಾರ್ಯ  ಕಾರುಗಳದ್ದಾಗಿತ್ತು ಇಲ್ಲಿ ಕಾರು ಚಾಲನೆ ಮಾಡುವ ಚಾಲಕ ಬಹಳ  ಜಾಗರೂಕನಾಗಿ ಕಾರ್ ಚಾಲನೆ ಮಾಡಬೇಕಾಗುತ್ತದೆ, ಅದೇರೀತಿ ಈ ಲಾರಿಗಳ ಜೊತೆ ಕಣ್ಣಾಮುಚ್ಚಾಲೆ ಆಡುತ್ತಾ   ಸಾಗಿದ್ದವು ಕಾರುಗಳು. 



 ಕನ್ಮಿಣಿಕೆ  ನೋಟ 


ರಾಣಿಬೆನ್ನೂರ್ ಹೊರವಲಯ ದಾಟಿ ಮುಂದೆ ಹೊರಟ  ನಮಗೆ ದಾರಿಯಲ್ಲಿ  ಹಟಕ್ಕೆ ಬಿದ್ದಂತೆ  ವೇಗವಾಗಿ  ಅಕ್ಕ ಪಕ್ಕ ದಲ್ಲಿ  ಸಾಗುತ್ತಿದ್ದ  ಎರಡು ಬಸ್ಸುಗಳು ಕಂಡವು, ಇವರಿಬ್ಬರ  ಜೂಟಾಟ ದ ಪರಿಣಾಮ ಸುಮಾರು ಕಿ.ಮಿ.ಗಳ ದೂರ ಯಾವ ವಾಹನಕ್ಕೂ ಇವುಗಳನ್ನು ದಾಟಿ   ಮುಂದೆ ಚಲಿಸಲು ಸಾಧ್ಯವಾಗಲಿಲ್ಲ  , ಇದೆ ನೋಟವನ್ನು ನೋಡುತ್ತಿದ್ದ ನನಗೆ ಕೆಲವು ಜಾಗಗಳಲ್ಲಿ  "ಕನ್ಮಿಣಿಕೆ" [mirage ] ಗೋಚರಿಸಿತು  ಇವು ವಾಹನ ಚಾಲಕರನ್ನು ಕೆಲವೊಮ್ಮೆ ಗೊಂದಲಕ್ಕೆ ದೂಡುತ್ತವೆ, ಹೀಗೆ ಸಾಗಿತ್ತು, ನಮ್ಮ ಪಯಣ. 


ರಸ್ತೆಯಲ್ಲಿ ಚಿತ್ತಾರ ಮೂಡಿಸಿದ  ವಾಹನಗಳ ಸಾಲು.

 ಅಕ್ಕ ಪಕ್ಕದ ನೋಟ ಕಾರಿನ  ವೇಗಕ್ಕೆ ತಕ್ಕಂತೆ  ಚಲಿಸುತ್ತಿದ್ದ ಕಾರಣ ಅಷ್ಟಾಗಿ  ಚಿತ್ರಗಳನ್ನು ತೆಗೆಯಲು ಕಷ್ಟವಾಗಿತ್ತು, ಹಾಗಾಗಿ ಮುಂದಿನ ನೋಟಗಳು ಮಾತ್ರ ನನ್ನ ಕ್ಯಾಮರದಲ್ಲಿ ಸೇರೆಯಾಗುತ್ತಿದ್ದವು. ಧಾರವಾಡ  ಸಮೀಪ ಒಂದು ಜಂಕ್ಷನ್ ನಲ್ಲಿ  ಹಲವು ವಾಹನಗಳು  ಹೆದ್ದಾರಿಯಲ್ಲಿ  ಚಕ್ರವ್ಯೂಹದ ಚಿತ್ತಾರ ಮೂಡಿಸಿದ್ದವು. ಈ ವ್ಯೂಹವನ್ನು ಭೇದಿಸಿ  ಮುನ್ನಡೆದ ನಾವು, ಧಾರವಾಡ ತಲುಪಿದೆವು, ಇಲ್ಲಿಗೆ ರಾಷ್ಟ್ರೀಯ  ಹೆದ್ದಾರಿ ೪ ರ ಒಂದು ಹಂತದ ಪಯಣ ಮುಗಿದಿತ್ತು, 



ಹೆದ್ದಾರಿಯಲ್ಲಿ ಹೀಗೂ   ಆಗುತ್ತೆ.


ಧಾರವಾಡ ಬಂದೊಡನೆ ನೆನಪಾದದ್ದು ಬೇಂದ್ರೆ ಅಜ್ಜ, ಸಾದನ ಕೇರಿ,  ಮಿಶ್ರ  ಪೇಡ , ಇತ್ಯಾದಿ  ಆದರೆ ನಮಗೆ ವೇಳೆಯೇ ಇಲ್ಲದ ಕಾರಣ, ಹಳಿಯಾಳ ರಸ್ತೆಯಲ್ಲಿ ಚಲಿಸಿದೆವು,  ಧಾರವಾಡ ಬಿಟ್ಟು ಸ್ವಲ್ಪ ದೂರ ಬಂದೊಡನೆ,  ರಾಷ್ಟ್ರೀಯ ಹೆದ್ದಾರಿಯಿಂದ  ಉರುಳಿಬಿದ್ದ  ಲಾರಿಯ ದರ್ಶನ ವಾಯಿತು, ನಾವು ಅಲ್ಲಿಗೆ ತೆರಳುವ ಸ್ವಲ್ಪ ಹೊತ್ತಿನ ಮೊದಲು ಈ ಘಟನೆ ನಡೆದಿತ್ತು, ಯಾರಿಗೂ ಅಪಾಯ ಆಗಿರುವ ಬಗ್ಗೆ ಅಲ್ಲಿ ಯಾವುದೇ  ಸನ್ನಿವೇಶ ಕಂಡುಬರಲಿಲ್ಲ , ಆದರೆ ಲಾರಿಗೆ  ಬಹಳಷ್ಟು ಜಖಂ ಆಗಿತ್ತು. 




ಹಸಿರ ಕಮಾನು ನಡುವೆ ಸಾಗಿದ ರಸ್ತೆ.



ಸ್ವಲ್ಪ ಮುಂದೆ ಬಂದೊಡನೆ ಹಳಿಯಾಳ ರಸ್ತೆಯಲ್ಲಿ ಹಸಿರ  ಕಮಾನು ಧರಿಸಿದ   ರಸ್ತೆ ಗೋಚರಿಸಿತು,  ತಂಪಾದ ವಾತಾವರಣ , ಬೀಸಿದ್ದ ತಂಗಾಳಿ ಪಯಣಕ್ಕೆ ಮುದ  ನೀಡಿತ್ತು. ಹಸಿರ ತಬ್ಬಿದ ರಸ್ತೆಯಲ್ಲಿ  ಸಾಗಿದ ನಾವು ದಾಂಡೇಲಿ ಅರಣ್ಯದ ಹೆಬ್ಬಾಗಿಲು   ಹಳಿಯಾಳ ತಲುಪಿದೆವು, 





ಹಳಿಯಾಳದಿಂದ  ದಾಂಡೇಲಿ  ರಸ್ತೆಯ ನೋಟ.

ಹಳಿಯಾಳದಿಂದ   ದಾಂಡೇಲಿ ಗೆ ತೆರಳುವ  ರಸ್ತೆಯ ಎರಡೂ ಬದಿಯಲ್ಲಿ ಕಾಡಿನ ನೋಟ ಸಾಮಾನ್ಯ , ರಾಷ್ಟ್ರೀಯ ಹೆದ್ದಾರಿಯಲ್ಲಿ  ವಾಹನಗಳ   ದಟ್ಟಣಿ ನೋಟ ಸಾಮಾನ್ಯವಾದರೆ  ಈ ರಸ್ತೆಯಲ್ಲಿ  ಸ್ವಲ್ಪ ಕಡಿಮೆ ದಟ್ಟಣಿ  ಇತ್ತು.  ಕಾಡನ್ನು ಕಂಡೊಡನೆ  ಮನದಲ್ಲಿ  ಆಸೆ ಜಾಸ್ತಿಯಾಗಿ   ಯಾವುದಾದರೂ ವನ್ಯ ಜೀವಿ  ದಾರಿಯಲ್ಲಿ ಕಾಣಬಹುದೇ ಎಂಬ ನಿರೀಕ್ಷೆ ಇತ್ತು, ಆದರೆ ಉ  ಹೂ  ಯಾವ ವನ್ಯ ಜೀವಿಯ  ಪದರ್ಶನ ಆಗಲಿಲ್ಲ. ಹಕ್ಕಿಗಳ ಕಲರವ ಕೇಳಲಿಲ್ಲ ,


 
ಹಳಿಯಾಳ  ತಪಾಸಣ ಕೇಂದ್ರ 



ಬರೀ  ಬೋರ್ಡುಗಳಲ್ಲಿ  ಅಲ್ಲಿನ ಜೀವ  ವೈವಿಧ್ಯತೆಯ ದರ್ಶನ ಮಾಡಿದ ನಾವು, ಹಸಿರ ಕಾಡಿನಿಂದ ತೂರಿಬಂದ ತಂಗಾಳಿಯನ್ನು  ಆಸ್ವಾದಿಸುತ್ತಾ   ಚಲಿಸಿದೆವು. ಹಸಿರ ದೃಶ್ಯ ವೈಭವ ನೋಡುತ್ತಾ   ಬಂದೆ ಬಿಟ್ಟೆವು  ದಾಂಡೇಲಿ ಗೆ  , ಆಗ ಸಮಯ ಎರಡು ಘಂಟೆ ಆಗಿತ್ತು. 





ದಾಂಡೇಲಿ ಗೆ  ಸ್ವಾಗತ.

ಅಲ್ಲಿ ಕಾಣಿಸಿದ್ದು "ವೆಲ್ಕಂ ಟು ದಾಂಡೇಲಿ"  ಎನ್ನುವ ಕಮಾನು.............................................ಸ್ವಾಗತ ಕೋರಿತು,  ಆಗಲೇ ಮನಕ್ಕೆ ಬಂತು  ದಾಂಡೇಲಿ ಗೆ  ಅದರ ಹೆಸರು ಹೇಗೆ ಬಂತು .....??? ಎನ್ನುವ   ಪ್ರಶ್ನೆ....!!     

  

Sunday, April 21, 2013

ಕಬಿನಿ ಕಾಡಿನಲ್ಲಿ ನಾನು. ......೦೨ ಟೈಗರ್ ಕಾಲಿಂಗ್

ನಮಗೆ ಉಗಿದು ಕಾನನದತ್ತ  ತೆರಳಿದ  ಅಮ್ಮ ಮಗು 


ಕಣ್ಣಾಮುಚ್ಚಾಲೆ  ಆಟ ನೋಡುತ್ತಿದ್ದ ತಾಯಿ ಆನೆ  "ಬಾ ಕಂದಾ ಹೋಗೋಣ , ಇವರು ಮರ್ಯಾದೆ ಇಲ್ಲದ ಜನ" ಅಂತಾ  ಮರಿಯಾನೆ ಜೊತೆ  ಕಾಡಿನೊಳಗೆ ತೆರಳಿತು. .ಆನೆಯಿಂದ ಉಗಿಸಿಕೊಂಡ  ನಾವು ಮುಂದೆ ಹೊರಟೆವು, ಕಾಡಿನಲ್ಲಿ  ನಮ್ಮ ಕಣ್ಣುಗಳು ವನ್ಯ ಜೀವಿಗಳ ಹುಡುಕಾಟ ನಡೆಸಿದ್ದವು, ಆದರೆ ಯಾವುದೇ ಕಾಡಿನಲ್ಲಿ ವನ್ಯಜೀವಿಗಳು ಮನುಷ್ಯರನ್ನು ಸ್ವಾಗತಿಸಲು  ಹಲ್ಲು ಕಿರಿಯುತ್ತಾ ನಿಂತಿರುವುದಿಲ್ಲ , ನಮ್ಮ ಅದೃಷ್ಟದ  ಮೇಲೆ ಅವು ಕಾಣಲು ಸಿಗುತ್ತವೆ.ಅದೃಷ್ಟವಿಲ್ಲದಿದ್ದರೆ , ನೀವು ದಿನಗಟ್ಟಲೆ  ಕಾಡಿನಲ್ಲಿ ಅಲೆದರೂ  ಏನೂ ಸಿಗದೇ ನಿರಾಸೆ ಆಗುವ ಸಂಭವ ಇರುತ್ತದೆ. ನಮಗೆ ಸ್ವಲ್ಪ ಅಲ್ಲಲ್ಲಾ ಜಾಸ್ತಿ ಅದೃಷ್ಟ ಇತ್ತು  ಬಹಳಷ್ಟು ಕಡೆ ನಮಗೆ ವನ್ಯ ಜೀವಿಗಳ ನಿರಂತರ ನೋಟ ಸಿಗುತ್ತಿತ್ತು.


ಕಾಡೆಮ್ಮೆಗಳ  [ಕಾಟಿ ಗಳ ]ಬಳಗ 







 ಕಾಡಿನಲ್ಲಿ ನಮ್ಮ ಪಯಣ ಸಾಗಿತ್ತು, ಕೆಲವೆಡೆ ಸಾರಂಗ, ಜಿಂಕೆ , ನವಿಲು ಮುಂತಾದ ಜೀವಿಗಳ ದರ್ಶನ ಆಯಿತು, ಆದರೆ ಮನದಲ್ಲಿನ ಬಯಕೆ   ಬೇರೆಯೇ  ಇತ್ತು, ಹೌದು ಬಹಷ್ಟು ಸಾರಿ ಇಲ್ಲಿ ಬಂದಿದ್ದರು ಮೊದಲ ಸಲ ಮಾತ್ರ ನಮಗೆ ಹುಲಿ ಸಿಕ್ಕಿತ್ತು, ಆ ನಂತರ ನಮಗೆ ಅದರ ದರ್ಶನ ಸಿಕ್ಕಿರಲಿಲ್ಲ. ಆದರೆ ಈ ಸಾರಿಯಾದರೂ ದರ್ಶನ ಸಿಗಲಿ ಎಂಬ ಆಸೆಯಿತ್ತು. ನಮ್ಮ ಜೊತೆಯಲ್ಲಿದ್ದವರು  ವಾಹನ ಚಾಲಕ ರಾಜು ಅವರನ್ನು  ಟೈಗರ್ ಟ್ಯಾಂಕ್ ಹತ್ತಿರ ವಾಹನ ಕೊಂಡೊಯ್ಯಲು ಕೋರಿದರು. ಅದರಂತೆ ಅಲ್ಲಿಗೆ ನಮ್ಮ ವಾಹನ ತೆರಳಿತು. ಅಲ್ಲಿ ಹೋದಾಗ ನಮಗೆ ಕಂಡಿದ್ದು ಒಂದು ಹಿಂಡು ಕಾಡೆಮ್ಮೆಗಳ ಬಳಗ ಇವುಗಳನ್ನು ಕಾಟಿ ಅಂತಾನೂ ಕರೆಯಲಾಗುತ್ತದೆ.  ಹುಲಿ  ಕೆರೆಯ[ ಟೈಗರ್ ಟ್ಯಾಂಕ್ ] ಸಮೀಪದಲ್ಲಿ ಬೀಡು ಬಿಟ್ಟಿದ್ದವು.ಕ್ಯಾಮರ ಜೂಮ್ ಮಾಡಿನೋಡಿದಾಗ ಪಕ್ಕದಲ್ಲಿ ಒಂಟಿ  ಕಾಟಿ ಎತ್ತಲೋ ನೋಡುತ್ತಾ ಕಾವಲು ಕಾಯುತ್ತಿತ್ತು.




ಗುಂಪನ್ನು ಕಾಯುತ್ತಿರುವ ಸೈನಿಕ 
 
ನಿಶ್ಯಬ್ದದ ಕಾಡು,  ಬಿಸಿಲ ತಾಪ ಕಡಿಮೆಯಾಗಿ ಸಂಜೆಯ ತಣ್ಣನೆ ಗಾಳಿ, ಬೀಸುತ್ತಿತ್ತು, ಸನಿಹದಲ್ಲಿ ಕಾಟಿ  ಗುಂಪಿನಲ್ಲಿ ಚಟುವಟಿಕೆ  ಗರಿಕೆದರಿತ್ತು. ಸನಿಹದ ಮರದ ನೆರಳಲ್ಲಿ ತಾಯಿ ಮಗುವಿನ ಅಕ್ಕರೆಯ  ಪ್ರೀತಿಯ ವಿನಿಮಯ ನಡೆದರೆ, ಮತ್ತೊಂದೆಡೆ  ಎರಡು ಜೀವಿಗಳು ಮಿಲನ ಮಹೋತ್ಸವಕ್ಕೆ ಅಣಿಯಾಗುತ್ತಿದ್ದವು . ಆದರೆ ........................ಅಷ್ಟರಲ್ಲಿ  ತೋರಿ ಬಂತು  .................. ಆ ದ್ವನಿ. ಎಲ್ಲೆಡೆ ಸ್ಥಬ್ಧ ,............. ನಿಶ್ಯಬ್ಧ .



ಅಮ್ಮನ ಅಕ್ಕರೆ ಬಲು ಚಂದ 




ಮಿಲನ ಮಹೋತ್ಸವಕ್ಕೆ ರೆಡಿ 



 ಹೌದು ಆ ದ್ವನಿಯೇ ಹಾಗೆ ಯಾವುದೇ ಚಟುವಟಿಕೆಯನ್ನು ಕಾಡಿನಲ್ಲಿ   ಸ್ಥಬ್ಧ ಗೊಳಿಸುವ ತಾಕತ್ತು ಅದಕ್ಕಿದೆ. ಮತ್ತೊಮ್ಮೆ ಅದೇ ದ್ವನಿ  ವ್ರೂಂ...............  ವ್ರೂಂ  , ನನ್ನ ಪಕ್ಕದಲ್ಲಿದ್ದ  ರಾಜು"ಸಾ ಟೈಗರ್ ಕಾಲ್ ಆಯ್ತಾ ಅದೇ , ಇಲ್ಲೇ ಇರುಮಾ  ಗ್ಯಾರಂಟೀ ಹುಲಿ ಇಲ್ಲೇ ಎಲ್ಲೋ ಅದೇ  ಸೈಟ್  ಆಯ್ತುದೆ" ಅಂದಾ, ಅಲ್ಲಿನ ಪ್ರದೇಶದಲ್ಲಿ ವಿಚಿತ್ರ ಬದಲಾವಣೆ ಮೇಯುತ್ತಿದ್ದ ಕಾಟಿಗಳ ಗುಂಪಿನಲ್ಲಿ ಎಲ್ಲಾ ಕಾಟಿಗಳು ಎಚ್ಚರಗೊಂಡವು  ತಮ್ಮ ಕ್ರಿಯೆಗಳನ್ನೆಲ್ಲ ನಿಲ್ಲಿಸಿ,  ಶಬ್ದ ಬಂದ ದಿಕ್ಕಿಗೆ  ಗಮನ  ಹರಿಸಿದವು . ಹುಲಿರಾಯ ಅಲ್ಲಿರುವ ಸೂಚನೆ ದೊರಕಿತ್ತು, ಹುಲಿಯ ಗರ್ಜನೆಗೆ ಕೆರೆಯ ಸಮೀಪ ಕುಳಿತಿದ್ದ  ಹಕ್ಕಿಗಳು ಪುರ್ ಪುರ್  ಅಂತಾ ಹಾರಿ ಹೋದವು, , ಆದರೆ ಪುಣ್ಯಕ್ಕೆ  "ಕಾಡು ಕೋಳಿ" ಹಾಗು "ಲಾಂಗೂರ್ ಕೋತಿಗಳು"  ಇರಲಿಲ್ಲ ಅವುಗಳೇನಾದರೂ ಇದ್ದಿದ್ದರೆ  ಬಹಳ ಗಲಾಟೆ ಎಬ್ಬಿಸಿ ಇಡೀ  ಕಾಡಿನಲ್ಲಿ ಮತ್ತಷ್ಟು ಗಲಬೆ ಆಗುತ್ತಿತ್ತು. ಕಾಡೆಮ್ಮೆಗಳು ಮತ್ತಷ್ಟು ಜಾಗರೂಕತೆ ಯಿಂದ  ನಿಂತಿದ್ದವು ಹುಲಿರಾಯನ ಚಲನವಲನ ಅರಿಯಲು. 
 


ಎಲ್ಲಿಹನು ಹುಲಿರಾಯ 


 ಸುಮಾರು ಹೊತ್ತು ನಿಂತರೂ ಪ್ರಯೋಜನ ಆಗಲಿಲ್ಲ, ನಮ್ಮ ಜೊತೆಯಲ್ಲಿದ್ದವರು ಸಲಹೆ ನೀಡಿದರು, ರಾಜು ಮೊದಲು ಇಲ್ಲಿಂದ ಜಾಗ ಖಾಲಿಮಾಡಿ ಕಬಿನಿ ಹಿನ್ನೀರಿಗೆ ಹೋಗೋಣ  ಆಮೇಲೆ ಇಲ್ಲ್ಗೆ ಮತ್ತೆ ಬರೋಣ ನಡೀರಿ ಅಂತಾ ಬಲವಂತ ಮಾಡಿ ಹೊರಡಿಸಿದರು ಕೊಪಬಂದರೂ ತೋರಿಸಿಕೊಳ್ಳದೆ ಚಾಲಕ ರಾಜು  ಯಾಂತ್ರಿಕವಾಗಿ ವಾಹನವನ್ನು ಕಬಿನಿ ಹಿನ್ನೀರಿಗೆ     ತೆಗೆದುಕೊಂಡು  ಹೋದರು.  ಅಲ್ಲಿ ಮತ್ತಷ್ಟು ನೋಟ ಸಿಕ್ಕಿತು,  ಹೌದು ನಾವು  ಮೊದಲು ಇಲ್ಲಿಗೆ  ಬಂದು ಬೋಟಿನಲ್ಲಿ  ತೇಲಾಡುತ್ತಿದ್ದ ಪ್ರದೇಶದಲ್ಲಿ ನೀರು ಒಣಗಿ ಬರಡಾಗಿತ್ತು. ವಿಶಾಲವಾದ ಕಬಿನಿ ನದಿ ಇಂದು ನೀರಿಲ್ಲದೆ ಒಣಗಿ ವೈಜ್ಞಾನಿಕ ಜಗತ್ತಿನ ಅಟ್ಟಹಾಸಕ್ಕೆ ಬಲಿಯಾಗಿ ಅವಮಾನದಿಂದ  ತತ್ತರಿಸಿತ್ತು.ಜೀವ ಜಲ ಇಲ್ಲದೆ ವನ್ಯ ಜೀವಿಗಳು ಸಂಕಟದಿಂದ ನರಳುತ್ತಿರುವ ದೃಶ್ಯ ಕಾಣಸಿಕ್ಕಿತು. ನೀರಿಗಾಗಿ ಮಾನವರ ಹೊಡೆದಾಟದಿಂದ  ಏನೂ ಅರಿಯದ ಈ ವನ್ಯಜೀವಿಗಳಿಗೆ ಜೀವ ಜಲ ಇಲ್ಲದಂತಾಗಿದೆ.





ಮಾನವರ  ಅವೈಜ್ಞಾನಿಕ  ಸಿದ್ದಾಂತಕ್ಕೆ  ಬಲಿಯಾಗುತ್ತಿರುವ ಪರಿಸರದ ನೋಟ.


ಒಣಗಿದ ಕಬಿನಿಯ ಅಂಗಳದಲ್ಲಿ  ಕೆಲವು ಆನೆಗಳು, ಹಾಗು ಕಾಡೆಮ್ಮೆಗಳ ಗುಂಪು ಒಟ್ಟಿಗೆ ಕಾಣಲು ಸಿಕ್ಕಿತು,  ಆಹಾರವಿಲ್ಲದೆ, ನೀರಿಲ್ಲದೆ   ಅಲ್ಲಿನ  ಜೀವಿಗಳು  ಸೊರಗಿದ್ದವು, ಆನೆಗಳ ಹಾಗು ಕಾಡೆಮ್ಮೆಗಳ ಮೂಳೆಗಳನ್ನು ಎಣಿಕೆ ಮಾಡಬಹುದಾಗಿತ್ತು. ವನ್ಯ ಜೀವಿಗಳ ದರ್ಶನ ಮುಗಿಸಿ ಮತ್ತೊಮ್ಮೆ ಟೈಗರ್ ಟ್ಯಾಂಕ್ ಬಳಿ  ಬಂದೆವು,  ಸುಮಾರು ಮುಕ್ಕಾಲು  ಘಂಟೆ ಕಳೆದು ಮತ್ತೆ ಅಲ್ಲಿಗೆ ಬಂದಿದ್ದ ನಮಗೆ ಅಲ್ಲಿನ ಪರಿಸರ ಸಂಪೂರ್ಣ ಬದಲಾಗಿತ್ತು, ಮೊದಲಿದ್ದ ಕಾಡೆಮ್ಮೆಗಳ ಗುಂಪು ಮಾಯವಾಗಿತ್ತು, ಅಲ್ಲಿದ್ದ ಕೆರೆಯಲ್ಲಿ   ಹುಲಿರಾಯ ನೀರಿನಲ್ಲಿ ವಿಶ್ರಮಿಸುತ್ತಾ  ವಿಹರಿಸಿದ್ದ.


ನನ್ನ ಮಗ ಕ್ಲಿಕ್ಕಿಸಿದ   ಚಿತ್ರ 


ನಾನು ಕ್ಲಿಕ್ಕಿಸಿದ ಚಿತ್ರ.

ಹುಲಿಯ ದರ್ಶನ ಮಾಡಿದ ಮನಸು  ಆನಂದದಿಂದ ಕುಣಿಯಿತು, ಅತ್ತ ನನ್ನ ಮಗ  ಗೌತಂ ಸದ್ದಿಲ್ಲದೇ  ಹುಲಿಯ ಚಿತ್ರ ತೆಗೆಯುತ್ತಿದ್ದ, ಹುಲಿಯ ದರ್ಶನ ಮಾಡಿದ ಖುಷಿಯಲ್ಲಿ ನನ್ನ ಕ್ಯಾಮರದಿಂದ ಫೋಟೋ ತೆಗೆಯೋದನ್ನು ಮರೆತು ಹಾಗೆ ಹುಲಿರಾಯನನ್ನು ಕಣ್ತುಂಬಾ ನೋಡುತ್ತಾ ಮೈಮರೆತಿದ್ದೆ , ನಂತರ  ವಾಸ್ತವತೆಗೆ ಬಂದು ಕ್ಯಾಮರ ಕ್ಲಿಕ್ಕಿಸಿದಾಗ  ನನಗೆ ಅಗತ್ಯವಾದ ಬೆಳಕು ಸಿಗಲಿಲ್ಲ ಸುಮಾರಾದ ಚಿತ್ರ ಕ್ಯಾಮರಾದಲ್ಲಿ ಮೂಡಿಬಂತು.  ಅಷ್ಟರಲ್ಲಿ  ಕಾಡಿನಲ್ಲಿನ ಮರಗಳ ಸಂದಿಯಿಂದ ಸೂರ್ಯನ  ಕಿರಣ ಮಂಕಾಗತೊಡಗಿತು,  ಹುಲಿರಾಯ ನಮ್ಮ ಇರುವನ್ನು ಲೆಕ್ಕಿಸದೆ  ಆರಾಮವಾಗಿ ತನ್ನ ಲೋಕದಲ್ಲಿ ಮುಳುಗಿದ್ದ.  ಹೆಚ್ಚು ಹೊತ್ತು ನಿಲ್ಲದೆ ಸುಮಾರು ಹದಿನೈದು ನಿಮಿಷಗಳ ದರ್ಶನ ಮುಗಿಸಿ  ವಾಪಸ್ಸು ಹೊರಟೆವು,  ನನ್ನ ಮಗ ಪ್ರಥಮ ಭೇಟಿಯಲ್ಲೇ ಹುಲಿ ನೋಡಿದ ಖುಷಿಯಲ್ಲಿದ್ದ, ನಾನು ಹುಲಿಯ ಚಿತ್ರ ಸರಿಯಾಗಿ ತೆಗೆಯಲಿಲ್ಲ ಎನ್ನುವ ನಿರಾಸೆಯಲ್ಲಿದ್ದೆ, ನಮ್ಮೊಡನಿದ್ದ ಕೆಲವರು  ಹೆದರಿಕೆಯಿಂದ ಮೌನವಾಗಿದ್ದರು, ಇವನ್ನೆಲ್ಲಾ  ನೋಡಿದ ಸೂರ್ಯ ತನ್ನ ಪಯಣವನ್ನು ಭೂಮಿಯ ಇನ್ನೊಂದು  ಕಡೆಗೆ ಮುಂದುವರೆಸಿದ್ದ, ಈ ಭಾಗಕ್ಕೆ ವಿಧಾಯ ಹೇಳಿದ್ದ , ವನ್ಯ ತಾಣ ವೀಕ್ಷಣೆ ಮುಗಿಸಿದ ನಮ್ಮನ್ನು ಚಾಲಕ ರಾಜು  ಸುರಕ್ಷಿತವಾಗಿ  ವಾಪಸ್ಸು ತಂದು ಬಿಟ್ಟು ನಕ್ಕಿದ್ದ.


ತನ್ನದೇ ಲೋಕದಲ್ಲಿದ್ದ ಹುಲಿರಾಯ 

ನಮ್ಮ ಕಬಿನಿ ವನ್ಯಜೀವಿ  ತಾಣದ ಪ್ರವಾಸ ಇಲ್ಲಿಗೆ ಮುಗಿದಿತ್ತು. ಅಮೂಲ್ಯ ತಾಣದ ನೂರಾರು ಚಿತ್ರಗಳು ನನ್ನ ಕ್ಯಾಮರಾದಲ್ಲಿ ಭದ್ರವಾಗಿ ಸೇರಿದ್ದವು. ವಾಪಸ್ಸು ಕಾರಿನಲ್ಲಿ ಬರುವಾಗ  "ಟೈಗರ್ ಕಾಲ್"  ನ  ಗರ್ಜನೆ ಕಿವಿಯಲ್ಲಿ  ಮಾರ್ಧನಿಸುತ್ತಿತ್ತು . .....!!

{ಮುಂದಿನ ಸಂಚಿಕೆಯಲ್ಲಿ ದಾಂಡೇಲಿ ಪ್ರವಾಸದ ಅನುಭವಗಳು ಬರಲಿವೆ }