Sunday, July 6, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......04 ಕೆಳದಿಯ ಮಡಿಲಲ್ಲಿ ಇತಿಹಾಸ ಬರೆದಳು ಸಂಬಾರ ರಾಣಿ .

 ಕೆಳದಿಯ  ಇತಿಹಾಸದ ಸಾಕ್ಷಿ  ಈ  ದೇಗುಲ 

ಅಯ್ಯೋ  ಇದೇನ್ರೀ  ಪಯಣದ  ಕಥೆ ಬರೆಯಲು ಶುರು ಮಾಡಿ ಅರ್ಧಕ್ಕೆ ಓಡಿ  ಹೋದ ..... !  ಅಂತಾ  ಬೈಯ್ಕೋ  ಬೇಡಿ, ಬಹಳ ದಿನಗಳ ನಂತರ ಮತ್ತೆ ಬಂದಿದ್ದೇನೆ, ಹೌದು ಬಿಡುವಿಲ್ಲದ  ದಿನಚರಿ , ಜೊತೆಗೆ  ರಜಾದಿನಗಳಲ್ಲಿ ಬಂದ  ಹಲವು  ಅನಿವಾರ್ಯದ ಕಾರ್ಯಕ್ರಮಗಳು ಈ ಬರವಣಿಗೆಗೆ ಸ್ವಲ್ಪ ಅಡಚಣೆ ಉಂಟು ಮಾಡಿದ್ದು ನಿಜ.  ಬನ್ನಿ ಕೆಳದಿಯ  ಬಗ್ಗೆ ಸ್ವಲ್ಪ ವಿಚಾರ  ತಿಳಿಯೋಣ .

 ಬಹಳ ಹಿಂದೆ  ಚಂದ್ರಗುತ್ತಿ ರಾಜ್ಯದ  ವ್ಯಾಪ್ತಿಯಲ್ಲಿ ಕೆಳದಿ ತಾಲೂಕು ಆಗಿತ್ತು , ಆ ತಾಲೂಕಿಗೆ ಸೇರಿದ  ಹಳೆ ಬಯಲು ಎಂಬ ಊರಿನಲ್ಲಿ   ಚೌಡೇಗೌಡ , ಭದ್ರೇಗೌಡ  ಎಂಬ ಇಬ್ಬರು ಅಣ್ಣ ತಮ್ಮಂದಿರು ಇದ್ದರು ,  ಆ ಕಾಲಕ್ಕೆ ಅವರು ಒಂದು ತರಹ ಜಮೀನ್ದಾರರು ಅಥವಾ ಪಾಳೆಗಾರರು  ಇರಬಹುದು , ಅವರ  ಬಳಿ ಇದ್ದ ಜಮೀನಿನ  ವ್ಯವಸಾಯದ  ಕೆಲಸವನ್ನು ಯಾದವ ಹಾಗು ಮುರಾರಿ ಎಂಬ ಇಬ್ಬರು ಆಳುಗಳು  ಮಾಡುತ್ತಾ  ಬಹಳ ನಿಷ್ಠೆಯಿಂದ  ಇದ್ದರು.  ಒಮ್ಮೆ ಅವರು ಯಜಮಾನರ  ಜಮೀನಿನಲ್ಲಿ ವ್ಯವಸಾಯದ   ಕೆಲಸ ಮಾಡುವಾಗ  ಒಂದು ಹಸು  ಹುತ್ತದ  ಬಳಿ  ಹಾಲನ್ನು ಎರೆಯುತ್ತಿರುವುದನ್ನು  ಕಂಡು ಆ ವಿಚಾರವನ್ನು ತನ್ನ ಯಜಮಾನರಿಗೆ ತಿಳಿಸುತ್ತಾರೆ , ತನ್ನ ಯಜಮಾನರ  ಆದೇಶ ಪಡೆದು ಆ ಜಾಗವನ್ನು  ಅಗೆಯುತ್ತಾರೆ, ಅಲ್ಲಿ  ಅವರಿಗೆ ಒಂದು "ಲಿಂಗ " ದೊರೆಯುತ್ತದೆ  ಆ ಜಾಗದಲ್ಲಿ ಯಜಮಾನ   ಚೌಡೇಗೌಡ  ಒಂದು ದೇವಾಲಯ ಕಟ್ಟಿಸುತ್ತಾನೆ ಆ ದೇಗುಲವೇ  ಕೆಳದಿಯ ಮೂಲ ದೇವಾಲಯ . ನಂತರ  ಸ್ವಲ್ಪ ದಿನಕ್ಕೆ ಒಂದು ಖಡ್ಗ  ಆ ಜಾಗದಲ್ಲಿ ದೊರೆಯುತ್ತದೆ ಆದನ್ನು ಚೌಡೇಗೌಡ  ಸಂರಕ್ಷಿಸುತ್ತಾನೆ , ಒಮ್ಮೆ ಕನಸಿನಲ್ಲಿ ಅವನಿಗೆ   ಮನುಷ್ಯರನ್ನು    ಬಲಿ  ನೀಡಿದರೆ  ಅಪಾರ ನಿಧಿ  ದೊರೆಯುವುದಾಗಿ  ಪ್ರೇರಣೆ ಆಗುತ್ತದೆ,  ಈ ಬಗ್ಗೆ  ಯೋಚಿಸುತ್ತಿರಲು,  ಅವನ ನಂಬಿಕೆಯ  ಇಬ್ಬರು  ಬಂಟರಾದ   ಯಾದವ ಹಾಗು ಮುರಾರಿ ಸ್ವಯಂ ಇಚ್ಚೆಯಿಂದ  ಮಂದೆಬಂದು  ತಮ್ಮನ್ನು   ಬಲಿ  ಗೆ ಅರ್ಪಣೆ ಮಾಡಿ ಕೊಳ್ಳುತ್ತಾರೆ . ಅವರ ಶಿರವನ್ನು   ಭೂಮಿಯಲ್ಲಿ  ಸಿಕ್ಕ ನಾಗಮುರಿ  ಖಡ್ಗದಿಂದ  ಕಡಿಯಲಾಗುತ್ತದೆ.  ಈ ರೀತಿ ದೊರೆತ ಸಂಪತ್ತಿ ನ  ಸಹಾಯದಿಂದ ತಮ್ಮ ರಾಜ್ಯ ಕಟ್ಟುತ್ತಾರೆ  . ಒಂದು ಸಣ್ಣ  ಸೈನಿಕ ಪಡೆ ಕಟ್ಟಿ ಸುತ್ತಮುತ್ತಲಿನ  ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಾರೆ . ಈ ವಿಚಾರ  ತಿಳಿದ  ವಿಜಯನಗರ  ಅರಸರ ಪಡೆ ಇವರನ್ನು  ಬಂಧಿಸಿ ವಿಜಯನಗರಕ್ಕೆ ಕರೆದೊಯ್ಯುತ್ತದೆ . ಕಾಲಾನಂತರ ಇವರನ್ನು   ವಿಜಯನಗರ ಅರಸರ  ಪ್ರತಿನಿಧಿ ಗಳೆಂದು ಗುರುತಿಸಿ ವಿಜಯನಗರ ಅರಸರ  ಮೊಹರು ನೀಡಿ ಬಿಡುಗಡೆ ಮಾಡುತ್ತಾರೆ .

ಕೆಳದಿಯ ದೇಗುಲದ ಒಂದು ನೋಟ

ವಿಜಯನಗರ ಅರಸರ   ಪ್ರತಿನಿಧಿಗಳಾಗಿ  ಕೆಳದಿರಾಜ್ಯ  ಸ್ಥಾಪಿಸುತ್ತಾರೆ , ಆಗಲೇ ಪ್ರಸಿದ್ದ ಕೆಳದಿ  ರಾಮೇಶ್ವರ  ದೇವಾಲಯ  ನಿರ್ಮಾಣದ ಬಗ್ಗೆ ಕಾರ್ಯ ಆರಂಭವಾಗುತ್ತದೆ . ಕೆಳದಿಯಲ್ಲಿ  ರಾಮೇಶ್ವರ ಹಾಗು ವೀರಭದ್ರ  ದೇಗುಲಗಳು  ಹೊಯ್ಸಳ ಹಾಗು ದ್ರಾವಿಡ  ಶೈಲಿಯಲ್ಲಿರುತ್ತವೆ .  ತಾಳಿ ಕೋಟೆ  ಯುದ್ದದ ನಂತರ ವಿಜಯನಗರ  ಅರಸರಿಂದ  ಬೇರ್ಪಟ್ಟ  ಕೆಳದಿ ನಾಯಕರು  ಸ್ವತಂತ್ರ ಕೆಳದಿ ಸಾಮ್ರಾಜ್ಯ ಕಟ್ಟುತ್ತಾರೆ  , ಕೆಳದಿಯಲ್ಲಿ ಶಿವಪ್ಪ ನಾಯಕ ಹಾಗು ಕೆಳದಿಯ ಚೆನ್ನಮ್ಮ ಆಳ್ವಿಕೆ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ . ನಂತರ  ಈ ಕೆಳದಿ ರಾಜ್ಯ  ಮೈಸೂರು ಸಂಸ್ಥಾನಕ್ಕೆ   ಹೈದರ್ ಅಲಿ ಕಾಲದಲ್ಲಿ  ಸೇರಿಕೊಳ್ಳುತ್ತದೆ.


ಕೆಳದಿಯ ಚೆನ್ನಮ್ಮ [ ಚಿತ್ರ ಕೃಪೆ  ಅಂತರ್ಜಾಲ  ಗೂಗಲ್ ಸರ್ಚ್ ]



 ಕೆಳದಿಯ  ಚೆನ್ನಮ್ಮ  ೧೬೭೭ ರಿಂದ  ೧೬೮೯ ರ ವರೆಗೆ  ಕೆಳದಿ ಸಾಮ್ರಾಜ್ಯದ   ಆಡಳಿತ ಚುಕ್ಕಾಣಿ ಹಿಡಿದು ಆಳುತ್ತಾಳೆ . ಬಹಳ ಸುಂದರ ಚೆಲುವಿ ಆಕೆ, ಅವಳ ಸೌಂದರ್ಯದ  ಬಗ್ಗೆ ಹಲವಾರು ಕಥೆಗಳು  ಆ ಭಾಗದಲ್ಲಿ  ಹರಡಿವೆ . ಕೆಳದಿಯ ಚೆನ್ನಮ್ಮನ  ಹುಟ್ಟೂರು  ಕುಂದಾಪುರ   ಅಲ್ಲಿನ ಸಿದ್ದಪ್ಪಶೆಟ್ಟಿ  ಎಂಬುವರ ಮಗಳು ಆಕೆ.   ಕೆಳದಿಯ ರಾಜ ಸೋಮಶೇಖರ ನಾಯಕನನ್ನು  ವಿವಾಹವಾಗುತ್ತಾಳೆ , ಕೆಳದಿಯ   ರಾಜ ಸೋಮಶೇಖರ  ಅಪಾರ ಸೌಂದರ್ಯವತಿ   ಚೆಮ್ಮನನ್ನು  ಪ್ರೀತಿಸಿ  ವಿವಾಹವಾಗುತ್ತಾನೆ . ೧೬೭೭  ರಲ್ಲಿ ರಾಜ ತೀರಿಕೊಂಡ  ನಂತರ  ಚೆನ್ನಮ್ಮ  ಕೆಳದಿಯ ಆಡಳಿತದ ಚುಕ್ಕಾಣಿ   ಹಿಡಿಯುತ್ತಾಳೆ .  ಹನ್ನೆರಡು ವರ್ಷದಲ್ಲಿ  ಉತ್ತಮ ಆಡಳಿತ ನೀಡಿ  ಪ್ರಖ್ಯಾತಿಯಾಗುತ್ತಾಳೆ   ಕನ್ನಡ ಮಣ್ಣಿನಲ್ಲಿ  , ಕೆಳದಿ ಸಾಮ್ರಾಜ್ಯ ಆಕ್ರಮಿಸಲು  ಬಂದ ಮೊಗಲ್  ರಾಜ  ಔರಂಗ್ ಜೇಬ್ ನ ಸೈನಿಕರನ್ನು ಎದುರಿಸಿ  ಮಣ್ಣು ಮುಕ್ಕಿಸುತ್ತಾಳೆ .   ಮರಾಟ ರಾಜ್ಯದ ಛತ್ರಪತಿ ಶಿವಾಜಿಯ ಮಗ ರಾಜಾರಾಂ ಛತ್ರಪತಿ  ಮೊಗಲರ  ಆಕ್ರಮಣಕ್ಕೆ ಹೆದರಿ ಇವಳ ಬಾಲಿ ಆಶ್ರಯ  ಪಡೆಯುತ್ತಾನೆ . ವಿದೆಶಿಯರೊಂದಿಗೆ ಅಂದಿನ ಕಾಲಕ್ಕೆ  ವ್ಯಾಪಾರ  ವ್ಯವಹಾರ ನಡೆಸಿದ ಧೀರ ಮಹಿಳೆ ಈ ಚೆನ್ನಮ್ಮ,  ಪೋರ್ಚುಗೀಸರು  ಚೆನ್ನಮ್ಮನ ಆಡಳಿತದ   ಅತ್ಯಂತ ಆತ್ಮೀಯ  ವ್ಯವಹಾರಿಕ  ಗೆಳೆಯರಾಗಿದ್ದರು . ಚೆನ್ನಮ್ಮನನ್ನು  "ಸಂಬಾರ  ರಾಣಿ " [ spice  queen ]  ಎಂದು ಕರೆಯುತ್ತಿದ್ದರು .  ಇಂತಹ  ವಿಶೇಷ  ಹೊಂದಿದ  ಕೆಳದಿಯ  ಸಾಮ್ರಾಜ್ಯಕ್ಕೆ ಒಮ್ಮೆ ಜೈ ಎನ್ನೋಣ .  ಮುಂದೆ .......    ಇತಿಹಾಸದ ನಿಧಿ .... ಈ ಪುಣ್ಯ ಪುರುಷರು ..... ?



Thursday, June 19, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......03 ಕೆಳದಿಯ ಇತಿಹಾಸವನ್ನು ಗುಲಾಬಿ ಹೇಳಲು ಬಂದಿತ್ತು !!

ಚಿತ್ರ ಕೃಪೆ ಅಂತರ್ಜಾಲ




 ಸಂಚಿಕೆಯಲ್ಲಿ ವರದ ಹಳ್ಳಿಯ   ಬರೆದಿದ್ದೆ,ಸುಂದರ ಅನುಭವದ ಮೂಟೆ ಹೊತ್ತು ಸಂತ್ರುಪ್ತನಾಗಿ ವಾಪಸ್ಸು ನಮ್ಮ ಕಾರಿನ ಬಳಿ ಬರುವ  ಹಾದಿಯಲ್ಲಿ ಕಣ್ಣಿಗೆ  ಬಿತ್ತು , ಆ ಬನವಾಸಿ  ಸೂಪರ್  ಬಸ್ಸು  ,  ಕೀಟಲೆಯ  ಮನಸು ಜಾಗೃತವಾಯಿತು,  ಪ್ರಕಾಶಣ್ಣ  ಇಲ್ಲಿ ನೋಡಿ ಅಂದೇ  '' ರಾತ್ರಿ ಡಿಮ್ ಡಿಪ್  ಕೊಡು ಮಗಾ''  ಎಂಭ ಘೋಷ ವಾಕ್ಯ ,  ನಮ್ಮ  ಪಟ್ಟಣ ಗಳಲ್ಲಿ ಇರಬೇಕಾದ  "ಡಕೋಟಾ   ಎಕ್ಸ್ಪ್ರೆಸ್ "   ಸ್ವಚ್ಚಂದ  ಪರಿಸರ ಇರುವ ಇಲ್ಲಿಗ್ಯಾಕೆ ಬಂತೂ  ಅಂತಾ   ಜೋರಾಗಿ ನಕ್ಕೆವು.  ಇಂತಹ ಸಮಯದಲ್ಲಿಯೂ   ನಮ್ಮ ಮುಖದಲ್ಲಿ ನಗು ಅರಳಿಸಿದ ಈ ಬಸ್ಸಿಗೆ ಥ್ಯಾಂಕ್ಸ್ ಹೇಳುತ್ತಾ , ಸಾಗರ ಪಟ್ಟಣಕ್ಕೆ  ವಾಪಸ್ಸು  ಹೊರಟೆವು . ಸಾಗರ ತಾಲೂಕು  ಕೇಂದ್ರ ,

 ವರದಹಳ್ಳಿ ಇಂದ ವಾಪಸ್ಸು ಬರುವಾಗ  ಸಾಗರ ಪಟ್ಟಣದಲ್ಲಿ  ಇರುವ ಬ್ಲಾಗ್ ಮಿತ್ರ  ಜಿತೇಂದ್ರ ಹಿಂಡುಮನೆ  ಯವರನ್ನು ಭೇಟಿ ಮಾಡಿ ಖುಷಿ ಪಟ್ಟೆವು,  ಅವರಿಂದ ಪ್ರಕಾಶಣ್ಣ ಹಾಗು ನನಗೆ ಮನೆಗೆ ಬರಲು ಆತ್ಮೀಯ  ಆಮಂತ್ರಣ ಸಿಕ್ಕಿತು.  ಅವಕಾಶ ಸಿಕ್ಕಲ್ಲಿ ಖಂಡಿತಾ ಬರುವುದಾಗಿ ಅವರಿಗೆ  ತಿಳಿಸಿದೆವು .


ಸಾಗರ ಪಟ್ಟಣದಲ್ಲಿನ  ಮಾರಿಕಾಂಬ ದೇಗುಲ

ಅವರಿಂದ ಬೀಳ್ಕೊಂಡು  ಸಾಗರ ಪಟ್ಟಣದ ಒಳಗೆ  ನಮ್ಮ ಪಯಣ ಸಾಗಿತು.  ಅರೆ  ಊರಿನ ಒಳಗೆ  ಕಂಡ ಒಂದು ಸುಂದರ ದೇಗುಲ  ಮನ ಸೆಳೆಯಿತು,  ಅಲ್ಲೇ ನಿಂತು ನೋಡಿದರೆ  ಶಿರಸಿಯ  ಮಾರಿಕಾಂಬಾ  ದೇವಾಲಯದಂತೆ  ಸಾಗರದಲ್ಲಿಯೂ  ಒಂದು ಮಾರಿಕಾಂಬೆ  ದೇವಾಲಯ ಇರುವುದು  ತಿಳಿಯಿತು . ದೇವಾಲಯದ  ಬಾಗಿಲು  ಮುಚ್ಚಿದ್ದ ಕಾರಣ, ತಡಮಾಡದೆ  ಕೆಳದಿಯ ಕಡೆ  ಹೊರಟೆವು . ಕೆಳದಿಯ ಬಗ್ಗೆ ಹೆಚ್ಚು  ಗೊತ್ತಿಲ್ಲದ ನನಗೆ  ಅಲ್ಲಿ ಏನು ನೋಡಬೇಕೆಂಬ  ಕಲ್ಪನೆ ಇರಲಿಲ್ಲ, ಜೊತೆಗೆ  ಅಲ್ಲಿ ಇರುವುದೇನು  ಎಂಬುದೂ  ತಿಳಿದಿರಲಿಲ್ಲ . ಸಾಗರದಿಂದ  ಆರು ಕಿ. ಮೀ . ದೂರದಲ್ಲಿ  ಕೈಬೀಸಿ ಕರೆಯುತ್ತಿತ್ತು  ಐತಿಹಾಸಿಕ ಕೆಳದಿ


ಕೆಳದಿಯ  ಐತಿಹಾಸಿಕ  ರಾಮೇಶ್ವರ  ದೇವಾಲಯ



 ಕೆಳದಿಯ  ನೆಲ  ಸ್ಪರ್ಶ ಮಾಡುತ್ತಿದಂತೆ  ಇಲ್ಲಿ ಏನೋ ಮಹತ್ವವಾದ ವಿಚಾರ ಇದೆ ಎಂದು ನನ್ನ ಮನಸು ಹೇಳುತ್ತಿತ್ತು, ಆದರೆ ಕೇಳುವುದು ಯಾರನ್ನು,  ನಮಗೆ ಇಲ್ಲಿನ ವಿಚಾರ ತಿಳಿಸಲು  ಯಾರೂ ಇರಲಿಲ್ಲ,  ನಮ್ಮ  ಎದುರಿಗೆ  ಕೆಳದಿ ರಾಮೇಶ್ವರ  ದೇವಾಲಯ ಎಂಬ ಬೋರ್ಡ್  ಇತ್ತು,  ಆದರೆ ದೇವಾಲಯದ  ರೂಪದ ಯಾವ  ಕಟ್ಟಡ ಸಹ ನನಗೆ ಮೊದಲ ನೋಟಕ್ಕೆ ಕಾಣಲಿಲ್ಲ,  ಸುತ್ತಲೂ ಇಟ್ಟಿಗೆಯ ಕಾಂಪೌಂಡ್  ಹಾಕಿದ್ದು ನಡುವೆ  ಬಹುಶ ಹಳೆಯಕಾಲದ ಜಮೀನು ದಾರರ  ಮನೆ ಅಥವಾ ಅರಮನೆ ಯಂತಹ ಒಂದು ಕಟ್ಟಡ  ಕಾಣಲು ಸಿಕ್ಕಿತು, ಇದು ಕೆಳದಿ ಚೆನ್ನಮ್ಮನ  ಅರಮನೆ ಇರಬಹುದೇ ಎಂಬ  ಅನುಮಾನ ಬಂದಿತ್ತು,




ಇದು ದೇಗುಲವೋ  ಅಥವಾ ಅರಮನೆಯೂ



ನಂದಿ ವಾಹನ ಸಹಿತ ಹರ ದಂಪತಿಗಳು


ಹತ್ತಿರ ಹೋಗಿ ನೋಡಿದರೆ  ಒಂದು ಹಳೆಯಕಾಲದ ದೊಡ್ಡ ಮನೆಯನ್ನು ನವೀಕರಿಸಿದಂತೆ ಕಂಡಿತು, ಮನೆಯ ಮುಂದೆ ವಿಶಾಲವಾದ  ಹಸಿರಿನ ಪಾರ್ಕ್, ಹತ್ತಿರ ಹೋಗುತ್ತಿದಂತೆ ಕಾಣುವ ಸುಂದರವಾದ  ಮರದ ಕಂಬಗಳು, , ಒಳಗೆ ಬರುವಂತೆ  ಪ್ರೇರೇಪಿಸುವ ಮೆಟ್ಟಿಲುಗಳನ್ನು  ದಾಟಿ ಒಳಗೆ  ಬಂದರೆ ನಿಮಗೆ ದರ್ಶನ ನೀಡಲು  ನಂದಿ ವಾಹನ ಸಹಿತ ಹರ ದಂಪತಿಗಳು ಕಾಯುತ್ತಿರುವಂತೆ ಅನ್ನಿಸುತ್ತದೆ . ಸುಂದರ ಕಲಾಕೃತಿಯನ್ನು  ನೋಡದೆ ನೀವು ದೇಗುಲದ ಒಳಗೆ ಪ್ರವೇಶಿಸುವುದು ಸಾಧ್ಯವೇ ಇಲ್ಲ.

ಕೆಳದಿಯ ಇತಿಹಾಸ ಹೇಳಲು  ಬಂದ  ದಿಟ್ಟೆ ಗುಲಾಬಿ


ಒಳಗೆ ಪ್ರವೇಶಿಸಿದ ನಮಗೆ ಅಲ್ಲೊಂದು ಪುರಾತನ ದೇವಾಲಯ ಇರುವುದು ಕಾಣ ಸಿಕ್ಕಿತು,  ಸುತ್ತಲೂ  ನಿರ್ಮಾಣ ಗೊಂಡ  ಒಳಜಗುಲಿ ಹೊಂದಿದ ಪ್ರದೇಶದ ನಡುವೆ  ರಾಮೇಶ್ವರ ದೇಗುಲ ನಿರ್ಮಾಣ  ಗೊಂಡಿದೆ . . ಪ್ರವೇಶಿಸಿದ ನಾವು, ಸುತ್ತಲೂ ನೋಡಿದೆವು, ಅಲ್ಲಿನ ವಿವರ ನೀಡಲು ಯಾರೂ ಇರಲಿಲ್ಲ, ನಮ್ಮ ಪಾಡಿಗೆ ಅಲ್ಲಿನ  ದೇಗುಲದ ವಿವರಗಳನ್ನು  ಫೋಟೋ ತೆಗೆಯುತ್ತಿದ್ದೆವು, ಅಲ್ಲೇ ಕಾಣ ಸಿಕ್ಕರು  ಒಬ್ಬ ಹೆಂಗಸು , ಅಲ್ಲಿನ ಆವರಣವನ್ನು ಶುಚಿ  ಮಾಡುತ್ತಿದ್ದರು, ಆ  ಬಿಸಿಲಿನಲ್ಲಿ  ಬಂದು ಫೋಟೋ ತೆಗೆಯುತ್ತಿದ್ದ ನಮ್ಮನ್ನು  ಕಂಡು ಹತ್ತಿರ ಬಂದರು,  ಏನಮ್ಮಾ  ಇಲ್ಲಿನ  ವಿವರ ನೀಡಲು ಯಾರೂ ಇಲ್ವಾ?   ಅಂತಾ ವಿಚಾರಿಸಿದೆವು , ಇಲ್ಲಾ ಸಾರ್ ಇಷ್ಟು ಹೊತ್ತಿನಲ್ಲಿ ಯಾರೂ ಇರಲ್ಲಾ, ಅನ್ನುತ್ತಾ  ಬನ್ನಿ ಸಾರ್ ನಾನೇ ಹೇಳ್ತೀನಿ ಅಂತಾ ತನಗೆ ತಿಳಿದಿದ್ದ ವಿಚಾರವನ್ನು  ನಮಗೆ  ಹೇಳಿದರು, ನಗು ನಗುತ್ತಾ  ತನ್ನದೇ ರೀತಿಯಲ್ಲಿ  ಅಲ್ಲಿನ ದೇಗುಲದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾ ಹೋದರು, ಪಾಪ  ತಾನು ಕೆಲಸ ಮಾಡುವ  ಪ್ರದೇಶವನ್ನು  ನೋಡಲು ಬಂದ  ಪ್ರವಾಸಿಗಳನ್ನು ನಿರಾಸೆ ಗೊಳಿಸಬಾರದು ಎಂಬ   ಆ ಹೆಂಗಸಿನ  ಆ ತುಡಿತಕ್ಕೆ  ನಿಜಕ್ಕೂ ಅಭಿಮಾನ  ಬಂತು . ಪ್ರಕಾಶಣ್ಣ ಹಾಗು ನಾನು ನಗುತ್ತಾ  ಅಮ್ಮ ನಿಮ್ಮ ಹೆಸರೇನು ಅಂತಾ ಕೇಳಿದೆವು  ಸಾರ್ ನಾನ್ ಇಲ್ಲೇ ಕೆಲ್ಸಾ ಮಾಡೋದು ,  ನನ್ ಹೆಸರು "ಗುಲಾಬಿ" ಅಂತಾ  ಅಂದರು .

ಕೆಳದಿಯ  ಇತಿಹಾಸ ಹೇಳಲು ಬಂದ  "ಗುಲಾಬಿ "


ಒಮ್ಮೆಲೇ ಬೆಚ್ಚಿ ಬಿದ್ದೆ , ಆ ನಿಮ್ಮ ಹೆಸರು ಏನೂ? ಅಂದೇ ಸಾರ್ "ಗುಲಾಬಿ " ಅಂತಾ ಅಂದ್ರೂ, ಜನುಮದಲ್ಲಿ ಮೊದಲ ಸಾರಿ ಒಬ್ಬ ಮಹಿಳೆ  "ಗುಲಾಬಿ"  ಎಂಬ ಹೆಸರನ್ನು  ಇಟ್ಟುಕೊಂಡ  ಬಗ್ಗೆ  ಕಂಡಿದ್ದು . ಯಾವ ಯಾವ್ದೋ  ಹೆಸರನ್ನು ಇಟ್ಟುಕೊಳ್ಳುವ  ನಮ್ಮ ಜನ  ಗುಲಾಬಿ, ತಾವರೆ, ಸಂಪಿಗೆ, ಮಲ್ಲಿಗೆ , ಜಾಜಿ, ಸೇವಂತಿಗೆ, ಮುಂತಾದ ಹೆಸರನ್ನು  ಯಾಕೆ ಮರೆತಿದ್ದಾರೆ ಅನ್ನಿಸಿತು, ಈ ಮಹಿಳೆ ತನ್ನ ಹೆಸರನ್ನು "ಗುಲಾಬಿ " ಎಂದು ಇಟ್ಟುಕೊಂಡು   ತನ್ನ ಮುಖದಲ್ಲಿನ ನಗುವಿನಲ್ಲಿ ನಿಜಕ್ಕೂ  ಆ ಹೂವಿನ  ಹೆಸರನ್ನು ಸಾರ್ಥಕ ಗೊಳಿಸಿದ್ದರು .



ಚಿತ್ರ ಕೃಪೆ ಅಂತರ್ಜಾಲ



ಮತ್ತೊಂದು ವಿಚಾರ  ಅಷ್ಟಾಗಿ ವಿಧ್ಯೆ ಇಲ್ಲದ  ಈ  ಹೆಂಗಸು  ತಾನು ಕೆಲಸ ಮಾಡುವ  ದೇವಾಲಯದ  ಬಗ್ಗೆ  ಅಲ್ಲಿ ಇಲ್ಲಿ ಕೇಳಿದ, ಹಾಗು ಹಿರಿಯರಿಂದ  ತಿಳಿದ ವಿಚಾರಗಳನ್ನು ಸಂಕೋಚವಿಲ್ಲದೆ  ಹೆಮ್ಮೆಯಿಂದ  ಹೇಳುವ ವಿಧಾನ ಇಷ್ಟಾ ಆಯಿತು. ಇತಿಹಾಸ ವೆಂದರೆ  ಮೂಗುಮುರಿಯುವ  ಇಂದಿನ ಪೀಳಿಗೆ  ಯಾವುದೇ  ಪ್ರತಿಫಲದ  ಆಸೆ ಇಲ್ಲದೆ  ಕಾರ್ಯ ನಿರ್ವಹಿಸುವ  ಇಂತಹವರನ್ನು ನೋಡಿ  ಕಲಿಯಬೇಕಾಗಿದೆ . ಪ್ರೀತಿಯಿಂದ  ಇತಿಹಾಸ ಹೇಳಲು ಬಂದ  ನಗು ಮುಖದ "ಗುಲಾಬಿ" ಗೆ ಮನದಲ್ಲಿ  ಸಲಾಂ ಹೇಳಿದೆವು .


ನಂತರ ಅವರಿಂದ  ಬೀಳ್ಕೊಂಡು  ದೇವಾಲಯದ ಒಳಗಡೆ ಪ್ರವೇಶಿಸಿದೆವು .  ಅರೆ ಕೆಳದಿಯ  ವಿಚಾರ ನಿಮಗೆ  ತಿಲಿಸಲಿಲ್ಲಾ ಅಲ್ವೇ ಕ್ಷಮಿಸಿ,  ಕೆಳದಿಯ ಬಗ್ಗೆ  ಹೇಳದಿದ್ದರೆ  ನಮಗೆ  ಈ ಊರಿನ ಇತಿಹಾಸದ ಬಗ್ಗೆ ಅರಿವಾಗದು, ಮುಂದಿನ ಸಂಚಿಕೆಯಲ್ಲಿ  ಕೆಳದಿಯ ಬಗ್ಗೆ ತಿಳಿಯೋಣ
























Tuesday, June 10, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......02 ವರದಹಳ್ಳಿಯ ಅವದೂತನ ಸನ್ನಿಧಿಯಲ್ಲಿ .

ಅವದೂತ  ಶ್ರೀಧರ ಸ್ವಾಮಿಗಳು


ಕಳೆದ  ಸಂಚಿಕೆಯಲ್ಲಿ   ಬೆಂಗಳೂರಿನಿಂದ  ಸಾಗರದ ವರೆಗಿನ ಪಯಣದ  ಅನುಭವ ದಾಖಲಾಗಿತ್ತು, ಮುಂದಿನ ಪಯಣ  ವರದ ಹಳ್ಳಿಯ  ಅವದೂತನ ಸನ್ನಿಧಿಗೆ  ಸಾಗುತ್ತಿತ್ತು. ಬನ್ನಿ ವರದಹಳ್ಳಿಯ ಬಗ್ಗೆ  ತಿಳಿಯೋಣ . ವರದಹಳ್ಳಿ  ಒಂದು ಸಣ್ಣ ಹಳ್ಳಿ  ಶಿವಮೊಗ್ಗ ಜಿಲ್ಲೆಯ  ಸಾಗರ ತಾಲೂಕಿಗೆ  ಸೇರಿದೆ . ಸಾಗರ ಪಟ್ಟಣದಿಂದ  ಆರು ಕಿ.ಮಿ  ದೂರದಲ್ಲಿದೆ .  ಅವದೂತ ಶ್ರೀಧರ ಸ್ವಾಮಿಗಳು  ನೆಲೆಗೊಂಡು  ತಮ್ಮದೇ ಆದ  ವಿಶಿಷ್ಟತೆ ಮೆರೆದ ಪುಣ್ಯ  ಕ್ಷೇತ್ರ ಇದು .



ಸರ್ವರಿಗೂ ಶುಭವಾಗಲಿ


ಬನ್ನಿ ಶ್ರೀಧರ ಸ್ವಾಮಿಗಳ  ಜೀವನದ  ಇತಿಹಾಸ ನೋಡೋಣ . ಕನ್ನಡ ನಾಡಿನ  ಮಣ್ಣಿನಲ್ಲಿ  ಹಲವು  ಐತಿಹಾಸಿಕ  ಪುಣ್ಯ ಪುರುಷರು ಜನಿಸಿದ್ದಾರೆ.  ಹಾಗೆಯೇ ಶ್ರೀಧರ ಸ್ವಾಮಿಗಳ ಜನನ  ಕರ್ನಾಟಕದ  ಗುಲಬರ್ಗ  ಜಿಲ್ಲೆಯ  ಆಳಂದ್ ತಾಲೂಕಿನ  ಲಾಡ್  ಚಿಂಚೋಳಿ  ಎಂಬ  ಹಳ್ಳಿಯಲ್ಲಿ  ಆಯಿತು.  ೧೯೦೮ ರ  ಡಿಸೆಂಬರ್  ೦೭ ರಂದು  ನಾರಾಯಣ್ ರಾವ್  ಹಾಗೂ ಕಮಲಾಬಾಯಿ ದೇಗುಲ್ಕರ್  ದಂಪತಿಗಳ  ಮಗನಾಗಿ ಜನಿಸಿದರು . ಈ ಬಾಲಕ  ಮೂರು ವರ್ಷದವನಿದ್ದಾಗ   ತನ್ನ  ತಂದೆ ತಾಯಿಯವರನ್ನು ಕಳೆದು  ಕೊಳ್ಳುತ್ತಾನೆ . ಮನೆಯ ಹಿರಿಮಗ   ತ್ರಿಂಬಕ್ ಮನೆಯ ಜವಾಬ್ಧಾರಿ ಹೊರುತ್ತಾರೆ . ಬಾಲಕ ಶ್ರೀಧರರನ್ನು   ಪ್ರಾಥಮಿಕ ಶಾಲೆಗೇ  ಹೈದರಾಬಾದಿನಲ್ಲಿ  ಸೇರಿಸುತ್ತಾರೆ. , ನಂತರ ಅನಾರೋಗ್ಯದ ಕಾರಣ,  ಅವರ ವಿಧ್ಯಾಭ್ಯಾಸ  ಗುಲಬರ್ಗ  ನಂತರ ಪುಣೆಯಲ್ಲಿ  ಸಾಗುತ್ತದೆ.   ಪುಣೆಯಲ್ಲಿರುವಾಗ  ಅಲ್ಲಿನ  ಪಲ್ನಿಟ್ಕರ್   ಎಂಬುವರು  ಈ ಬಾಲಕನ  ಆಧ್ಯಾತ್ಮಿಕ  ಲಕ್ಷಣಗಳನ್ನು ಗುರುತಿಸಿ "ಸಜ್ಜನಘಡ್ " ಎಂಬಲ್ಲಿಗೆ ಕಳುಹಿಸುತ್ತಾರೆ . ಸಂತ  ಶ್ರೀ ರಾಮದಾಸ್  ಅವರು  ನೆಲಸಿ  ಸಾಧನೆಯ ಶಿಖರ ಏರಿದ    ಜಾಗ  ಆ "ಸಜ್ಜನ್ ಘಡ್ " [ ಮಹಾರಾಷ್ಟ್ರ  ರಾಜ್ಯ] . ಆ ಜಾಗದಲ್ಲಿ  ಸಂತ ರಾಮದಾಸರ  ವಿಚಾರಗಳಿಗೆ  ಮನಸೋತು , ಅಲ್ಲಿಯೇ ಬಹುಕಾಲ ನೆಲಸಿ ಅವರ ಅನುಯಾಯಿಯಾಗಿ  ಸಾಧನೆಗೆ ತೊಡಗುತ್ತಾರೆ  ಶ್ರೀಧರ ಸ್ವಾಮಿಗಳು .  ಈ ಅವಧಿಯಲ್ಲಿ ಸಂತ ರಾಮದಾಸರ  ಪ್ರೇರಣೆಯಂತೆ  ದಕ್ಷಿಣ  ಭಾರತದ ಹಲವು ಪುಣ್ಯ ಕ್ಷೇತ್ರಗಳ  ದರ್ಶನ ಮಾಡಿ , ೧೯೪೨ ರಲ್ಲಿ  ಉತ್ತರ ಕನ್ನಡ  ಜಿಲ್ಲೆಯ  ಶೀಗೆ ಹಳ್ಳಿಯಲ್ಲಿ  ಸ್ವಾಮಿ ಶಿವಾನಂದರ  ಸಮ್ಮುಖದಲ್ಲಿ  ಸನ್ಯಾಸ ಧೀಕ್ಷೆ ಪಡೆಯುತ್ತಾರೆ .  ೧೯೪೨ ರಿಂದ ೧೯೬೭  ಸುಮಾರು ಇಪ್ಪತೈದು ವರ್ಷಗಳ  ಕಾಲ  ಭಾರತ ದೇಶದ ಹಲವು  ಪ್ರದೇಶಗಳಲ್ಲಿ  ತಮ್ಮದೇ ಹಾದಿಯಲ್ಲಿ  ಸಾಧನೆ ಮಾಡುತ್ತಾ , ೧೯೬೭ ರಲ್ಲಿ ಶಿವಮೊಗ್ಗ ಜಿಲ್ಲೆಯ  ಸಾಗರ ತಾಲೂಕಿನ  "ವರದ ಹಳ್ಳಿ" ಗೆ ಬಂದು  ನೆಲೆ ನಿಲ್ಲುತ್ತಾರೆ.   ೧೯೬೭ ರಿಂದ  ೧೯೭೩ ರ ವರೆಗೆ   ವರದ  ಹಳ್ಳಿಯಲ್ಲಿ ನೆಲೆಸಿ   ಇಲ್ಲಿನ ಸುತ್ತಮುತ್ತಲಿನ ಜನರಿಗೆ   ಆರಾಧ್ಯ ದೈವವಾಗಿ   ಪ್ರಕಾಶಿಸಿ  ೧೯ ಏಪ್ರಿಲ್ ೧೯೭೩ ರಲ್ಲಿ ದೇಹ ತ್ಯಾಗ ಮಾಡುತ್ತಾರೆ .


ವರದಹಳ್ಳಿಯ  ಒಂದು ನೋಟ


ಇಂತಹ  ಇತಿಹಾಸ ಉಳ್ಳ ಮಹನೀಯರ ಬಗ್ಗೆ ಹಲವರು ಹೇಳುವುದನ್ನು ಕೇಳಿದ್ದೆ  ಇಂದು ಆ ಜಾಗವನ್ನು  ನೋಡುವ ಅವಕಾಶ ಸಿಕ್ಕಿತ್ತು. ವರದ ಹಳ್ಳಿಯನ್ನು  ಪ್ರವೇಶಿಸುವಾಗ  ಅಸಾಧ್ಯ ಬಿಸಿಲು  ನಮಗೆ ಸ್ವಾಗತ ಕೊರಿತು. ಸುತ್ತಲೂ ಹಸಿರಿನಿಂದ ಕೂಡಿದ ಬೆಟ್ಟಗಳ ಶ್ರೇಣಿ  ಅವುಗಳ ನಡುವೆ ನೆಲೆಗೊಂಡಿದೆ ಈ ಪ್ರದೇಶ, ಪ್ರಕಾಶಣ್ಣ  ಇಲ್ಲಿನ ಆಚಾರಗಳ ಬಗ್ಗೆ ಮೊದಲು ಸಂಕ್ಷಿಪ್ತ  ವಿವರ ನೀಡಿದ್ದ ಕಾರಣ , ನಮ್ಮ ಪ್ಯಾಂಟು  ಷರಟು  ತೆಗೆದು ಪಂಚೆ ಉಟ್ಟು  ದೇವಾಲಯಕ್ಕೆ ಹೋಗುವ ತಯಾರಿ ನಡೆಸಿದೆವು . ಮೊದಲು ದೇವಾಲಯದ ಕಛೇರಿಗೆ  ಹೋಗಿ ಸೇವೆಯ  ಚೀಟಿ ಪಡೆದೆವು .
 

ಭಕ್ತಿಗೆ ಒಲಿಯದ  ದೇವರಿಲ್ಲ

ಅಲ್ಲಿಂದ  ನಮ್ಮ ನಡಿಗೆ  ಶ್ರೀಧರ  ತೀರ್ಥ  ಎಂದು ಕರೆವ  ಜಾಗಕ್ಕೆ ಸಾಗಿತು.  ಅಲ್ಲಿನ ನೋಟ ಬಹಳ ಹಿತಕರವಾಗಿತ್ತು,  ಹಲವಾರು ಭಕ್ತರು  ಭಕ್ತಿಯಿಂದ  ಅಲ್ಲಿನ ತೀರ್ಥದಲ್ಲಿ ಸ್ನಾನ ಮಾಡುತ್ತಿದ್ದರು,  ನಾವು  ಸಹ ಹಾಕಿದ ಬಟ್ಟೆಯನ್ನು ಬಿಚ್ಚದೆ  ಹಾಗೆಯೇ  ತೀರ್ಥದಲ್ಲಿ  ಮಿಂದೆವು,  ಬಹಳ ಹಿತಕರವಾದ ಅನುಭವ ಅದು.

 ಅರೆ ವರದ ಹಳ್ಳಿಯಲ್ಲಿ ನೋಡಬೇಕಾದ ಜಾಗಗಳ ಬಗ್ಗೆ  ಹೇಳಿಲ್ಲಾ ಆಲ್ವಾ  , ಬನ್ನಿ ಸನ್ನಿಧಿಗೆ ಹೋಗುವ ಮೊದಲು  ನೋಡ ಬೇಕಾದ ಜಾಗಗಳ  ಬಗ್ಗೆ ತಿಳಿಯೋಣ , ವರದ ಹಳ್ಳಿಯಲ್ಲಿ  ನೀವು ನೋಡಬೇಕಾದದ್ದು , ಮೊದಲು  ಅಲ್ಲಿನ ವರದ ತೀರ್ಥ , ಆ ನಂತರ  ಸುಂದರ ಬೆಟ್ಟ ಗುಡ್ಡಗಳ ನೋಟವನ್ನು  ಸವಿಯಿರಿ,  ಅಲ್ಲಿಂದ ಮೆಟ್ಟಿಲುಗಳನ್ನು ಹತ್ತಿದರೆ ನಿಮಗೆ ಸಿಗುವುದು ಶ್ರೀಧರ ಸ್ವಾಮಿಗಳ   ಸಮಾಧಿ ಇರುವ ದೇವಾಲಯ, ಅಲ್ಲೇ ಇದೆ  ಒಂದು ಗುಹೆ ,  ಮೂವತ್ತು ಅಡಿ  ಎತ್ತರದ ಧರ್ಮ ಸ್ಥಂಭ , ಯಜ್ಞ ಮಂಟಪ, ಗೋ ಶಾಲೆ, ಸಂಸ್ಕೃತ ಪಾಠ ಶಾಲೆ. ಅಣ್ಣ ದಾಸೋಹ ಮಂದಿರ  ಇತ್ಯಾದಿ .


ಶ್ರೀಧರ  ಸನ್ನಿಧಿಗೆ  ಸಾಗುವ ಮೆಟ್ಟಿಲುಗಳು


ಭಕ್ತಿಯಿಂದ ಸ್ನಾನ ಮಾಡಿದ ನಾವು ಶ್ರೀಧರ  ಗುಡ್ಡದ ಮೆಟ್ಟಿಲುಗಳನ್ನು  ಹತ್ತುತ್ತಾ ಸಾಗಿದೆವು . ಹಲವು ಭಕ್ತರು ದರುಶನ ಭಾಗ್ಯ ಪಡೆದು  ಪುನೀತರಾಗಿ ಎದರುಗಡೆಯಿಂದ ಬರುತ್ತಿದ್ದರು .  ಶ್ರೀಧರ ತೀರ್ಥದಲ್ಲಿ ಸ್ನಾನಮಾಡಿದ  ನಮಗೆ ಬಿಸಿಲು ಅಷ್ಟಾಗಿ ಕಾಡಲಿಲ್ಲ,  ಮೆಟ್ಟಿಲುಗಳನ್ನು ಹತ್ತಿ ಅವದೂತನ ಸನ್ನಿಧಿಗೆ ಬಂದೆವು. ಅಲ್ಲಿನ ನೋಟ ಬಹಳ ಹರ್ಷ ದಾಯಕ ವಾಗಿತ್ತು.


ಶ್ರೀಧರ  ದೇಗುಲದ  ಹೊರ ನೋಟ



ದೇವಾಲಯದ  ಸನ್ನಿಧಿಯ ನೋಟ ಸವಿದು  , ಒಳಗಡೆ ಬಂದೆವು ಧಿವ್ಯ ಸನ್ನಿಧಿಯ ದರ್ಶನ ಲಭಿಸಿತು. ಮಂಗಳಾರತಿ , ನಂತರ ಅಲ್ಲಿನ  ನಿಶ್ಯಬ್ಧ  ವಾತಾವರಣದಲ್ಲಿ  ಸುಮಾರು ಇಪ್ಪತ್ತು ನಿಮಿಷಗಳ ಕಾಲ  ಏಕ ಚಿತ್ತತೆ ಇಂದ   ನಿಶ್ಯಬ್ಧವಾಗಿ ಕುಳಿತೆ . ಮನಸಿನಲ್ಲಿದ್ದ ಕಲ್ಮಶ  ಕರಗಿ ಹೋಯಿತು,  ಮನದಲ್ಲಿ  ಹೊಸ ಉತ್ಸಾಹದ ಚಿಲುಮೆ ಚಿಮ್ಮಿತ್ತು,  ಅಲ್ಲಿನ  ಪ್ರಶಾಂತತೆ  ಮನ ಸೂರೆಗೊಂಡಿತ್ತು, 
ಬೆಳಗಿನಿಂದ ಧಣಿದಿದ್ದ ದೇಹದ ಆಯಾಸ  ದೂರವಾಗಿ, ಹೊಸ  ಚೈತನ್ಯ  ಲಭಿಸಿತ್ತು.  ದರ್ಶನ ನಂತರ  ದೇವಾಲಯದ ಸುತ್ತ  ಹಲವು ನೋಟ ನೋಡುತ್ತಾ  ಕ್ಯಾಮರಾದಲ್ಲಿ   ನೆನಪಿನ  ನೋಟಗಳನ್ನು ಸೆರೆ  ಹಿಡಿಯುತ್ತಾ ಸಾಗಿದೆ.




 ಶ್ರೀಧರ  ಸ್ವಾಮಿಗಳ  ಜೀವನದ  ಹಲವು ನೋಟಗಳು ಇಲ್ಲಿವೆ




ವಿವಿಧ ಸೇವೆ, ನಡೆಯುವ   ಪುಣ್ಯ ಮಂಟಪ ಇದು

ಸರ್ವ ಜನರ ಹಿತ ಕಾಯುವ  ಧ್ಯೇಯ  ಇಲ್ಲಿದೆ

ಶ್ರೀಧರ ಸ್ವಾಮಿಗಳು  ಬಳಸುತ್ತಿದ್ದ  ರುದ್ರಾಕ್ಷಿ  ಮಾಲೆ , ಗುಹೆಯಲ್ಲಿ ಕಂಡಿದ್ದು

ಯಾಗ ಶಾಲಾ

ಶ್ರೀಧರ ಸ್ವಾಮಿಗಳ ಪಾದುಕೆ

ಸುಂದರ ವೃಂದಾವನ

ಶ್ರೀಧರ ಸ್ವಾಮಿಗಳ ದೇವಾಲಯದ  ಸುತ್ತ   ಹೆಜ್ಜೆ ಹಾಕುತ್ತಾ ನಿಧಾನವಾಗಿ ಸಾಗುತ್ತಿದ್ದೆವು, ನಾನೂ ಹಾಗು ಪ್ರಕಾಶಣ್ಣ , ಅಲ್ಲಿಯೇ ಗೋಡೆಯ ಮೇಲೆ ಕಂಡಿತು ಹಲವು ವಿಶೇಷತೆ , ಶ್ರೀಧರ  ಸ್ವಾಮಿಗಳ  ಜೀವನದ ಹಲವು  ಚಿತ್ರಗಳು ಅಲ್ಲಿ  ಕಂಡವು .
ನಮ್ಮ  ಹಿಂಭಾಗದಲ್ಲಿ  ಇತ್ತು , ಸೇವಾ ಮಂಟಪ,  ಸುಂದರ ಮಂಟಪ  ದರ್ಶನ ಪಡೆದು,  ಮುಂದುವರೆದೆವು,


ದೇವಾ  ದರುಶನವ  ನೀಡೆಯ



ಅಲ್ಲೇ ಸಮೀಪದಲ್ಲಿ ಒಬ್ಬ  ವೃದ್ಧರು  ಗಾಲಿ  ಕುರ್ಚಿಯಲ್ಲಿ ಕುಳಿತ್ತಿದ್ದರು, ಅವರನ್ನು ದರ್ಶನಕ್ಕೆ ಕರೆದೊಯ್ಯಲು, ಅವರ ಕುಟುಂಬ  ಸಾಹಸ ಪಡುತ್ತಿತ್ತು,  ಆ ನೋಟ ನನ್ನ ಮನ ಕರಗಿಸಿತು,  ದೇವರೇ ಇವರಿಗೆ ಒಳ್ಳೆಯದು ಮಾಡಪ್ಪಾ ಅನ್ನುತ್ತಾ  ಮುಂದೆ ಸಾಗಿದೆ,  ಶ್ರೀಧರ ಸ್ವಾಮಿಗಳ  ಹಲವು ಅರ್ಥ ಪೂರ್ಣ ವಾಕ್ಯಗಳನ್ನು ಅಲ್ಲಿ  ಪ್ರಕಟ ಮಾಡಿದ್ದಾರೆ, ಅವುಗಳನ್ನು ನೋಡುತ್ತಾ ಸಾಗಿದೆ,  ಪ್ರಕಾಶಣ್ಣ ನನ್ನನ್ನು  ಶ್ರೀಧರ ಸ್ವಾಮಿಗಳು ಧ್ಯಾನ ಮಾಡಿದ  ಗುಹೆಯ  ಬಳಿ ಕರೆದೊಯ್ದರು, ಅಲ್ಲಿನ ಫೋಟೋ ತೆಗೆಯಲು ಬೆಳಕಿನ  ಅಡಚಣೆ ಇದ್ದರೂ  ಕಷ್ಟಪಟ್ಟು, ಸುಮಾರಾದ ಒಂದು ಫ್ತೋ ತೆಗೆದೇ ಅದು ಶ್ರೀಧರ ಸ್ವಾಮಿಗಳು ಉಪಯೋಗಿಸುತ್ತಿದ್ದ  ರುದ್ರಾಕ್ಷಿಮಾಲೆಯಾಗಿತ್ತು. ನಂತರ, ಯಾಗ ಶಾಲೆ, ಪಾದುಕೆ, ದರ್ಶನ ಮಾಡಿ  ಪುನೀತ ನಾದೆ.



 ಪ್ರಸಾದ ಸ್ವೀಕರಿಸಲು ನಿಂತ ಭಕ್ತರು 



ಅಲ್ಲಿನ ನೋಟ ನೋಡುತ್ತಾ , ಆ ಪ್ರದೇಶವನ್ನು  ಬಿಟ್ಟು ಹೋಗಲು ಮನಸು ತಕರಾರು ಮಾಡುತ್ತಿತ್ತು, ಆದರೂ ಒಲ್ಲದ ಮಸಿನಿಂದ ಮೆಟ್ಟಿಲುಗಳನ್ನು ಇಳಿಯುತ್ತಾ  ಸಾಗಿದೆವು, ದ್ವಜ ಸ್ಥಂಭ ನೋಡಲು  ಆಗಲಿಲ್ಲ, ಮತ್ತೊಮ್ಮೆ ನೋಡುವ  ಅವಕಾಶ  ಸಿಗಲೆಂದು  ಆಶಿಸಿ  ಮುಂದುವರೆದೆವು, ಪ್ರಸಾದ ಸ್ವೀಕಾರ ಮಾಡಲು ಭೋಜನ ಶಾಲೆಗೇ  ಬಂದೆವು . ವ್ಯವಸ್ಥಿತವಾದ  ಭೋಜನ ಶಾಲೆಯಲ್ಲಿ  ಪ್ರಸಾದ ಸ್ವೀಕರಿಸಿದೆವು. ಜೊತೆಗೆ ಅಲ್ಲಿನ  ಕೆಲವು ನಿಯಮಗಳು  ಇಷ್ಟವಾದವು, ಅವುಗಳಲ್ಲಿ,  ಊಟ ಮಾಡಿದ ತಟ್ಟೆಗಳನ್ನು  ಶುಚಿಗೊಳಿಸುವುದು,  ಊಟದ ಸಮಯದಲ್ಲಿ ಮೊಬೈಲ್  ಬಳಸದಂತೆ ತಾಕೀತು ಮಾಡಿರುವುದು  ನಿಜಕ್ಕೂ ಶ್ಲಾಘನೀಯ .



ಬೆಂಗಳೂರಿನಿಂದ  ಬರುವ ಬಸ್ಸು

ಪ್ರವಾಸ ಸ್ವೀಕರಿಸಿದ  ನಾವು ಹೊರಗೆ ಬಂದಾಗ  ಅಲ್ಲೊಂದು ಬಸ್ಸಿನಲ್ಲಿ  ವರದಹಳ್ಳಿ, ಸಾಗರ, ಪುಣೆ ಎನ್ನುವ ಬೋರ್ಡು ಇತ್ತು,   ಹೌದು ವರದ ಹಳ್ಳಿಗೆ  ಮಹಾರಾಷ್ಟ್ರದಿಂದಲೂ  ಹೆಚ್ಚಿನ ಭಕ್ತರು ಆಗಮಿಸುತ್ತಾರೆ, ಜೊತೆಗೆ ಬೆಂಗಳೂರಿನಿಂದ  ಇಲ್ಲಿಗೆ ಹಲವು ಖಾಸಗಿ  ಬಸ್ಸುಗಳು ಇಲ್ಲಿಗೆ ಭಕ್ತರನ್ನು ಕರೆತರುತ್ತವೆ.

ಇಲ್ಲಿನ ತೀರ್ಥದ  ವಿಸ್ಮಯ ನಿಜಕ್ಕೂ ಅಚ್ಚರಿ

ಮತ್ತೊಂದು ವಿಚಾರ ಇಲ್ಲಿನ  ಶ್ರೀಧರ  ತೀರ್ಥದ್ದು , ಈ  ಜಲ ಇಲ್ಲಿನ ಸುತ್ತ ಮುತ್ತಲಿನ  ಗುಡ್ಡಗಳಿಂದ  ಹಲವು ಕಾಡನ್ನು  ಬಳಸಿ ಬರುತ್ತದೆ. ಹಲವು ಔಷಧಿ ಸ್ವರೂಪದ  ಗಿಡ ಮರಗಳು, ಬೇರುಗಳನ್ನು  ಈ ಜಲ ಸ್ಪರ್ಶಿಸುವ ಕಾರಣ  ಇದು ಬಹಳ ಪವಿತ್ರ ಅನ್ನಿಸುತ್ತದೆ.   ನಿಮಗೆ ಅಲ್ಲಿ  ಹಲವು ಜನರು ದೊಡ್ಡ ದೊಡ್ಡ ಕ್ಯಾನುಗಳಲ್ಲಿ  ಅಲ್ಲಿನ ಪುಣ್ಯ ಜಲವನ್ನು ತುಂಬಿಕೊಳ್ಳುವ  ನೋಟ ಕಾಣಿಸುತ್ತದೆ,  ಮೊದಲು ನಿಮಗೆ  ಇದು ವಿಚಿತ್ರವಾಗಿ ಕಂಡರೂ  ನಿಮಗೆ ಅನುಭವ ಆದಾಗ  ಅಚ್ಚರಿ ಆಗುತ್ತದೆ . ಇಲ್ಲಿನ ತೀರ್ಥವನ್ನು ನಿಮ್ಮ ಮನೆಯಲ್ಲಿ ಎಷ್ಟು ದಿನ ಇಟ್ಟರೂ ವಾಸನೆಯಾಗಲಿ, ಅಥವಾ ಅದರ ಮೂಲ ರುಚಿಯಾಗಲಿ ಕೆಡುವುದಿಲ್ಲ, ಇದು ನಿಜಕ್ಕೂ ಅಚ್ಚರಿಯ ವಿಚಾರ . ಇದು ನನ್ನ ಅನುಭವದ ವಿಚಾರ ಕೂಡ,  ಹಲವು ಕ್ಷೇತ್ರಗಳ  ತೀರ್ಥ ತಂದು  ಮನೆಯಲ್ಲಿ ಇಟ್ಟುಕೊಂಡ ಕೆಲ  ದಿನಗಳಲ್ಲಿ  ಆ ಜಲ  ವಾಸನೆ ಬರುವುದನ್ನು ಕಂಡಿದ್ದೇನೆ, ನೀರನ್ನು  ಹಾಗೆಯೇ ಒಂದು ಬಾಟಲಿನಲ್ಲಿ  ತುಂಬಿ ಇಟ್ಟರೆ  ಕೆಲದಿನಗಳಲ್ಲಿ  ಆ ನೀರಿನಲ್ಲಿ  ಹುಳುಗಳು ಕಾಣ ಸಿಗುತ್ತವೆ, ಇದು ವೈಜ್ಞಾನಿಕ  ಸತ್ಯ, ಆದರೆ  ಶ್ರೀಧರ  ತೀರ್ಥ ಜಲ ಮನೆಗೆ ತಂದು  ಸುಮಾರು ಒಂದು ತಿಂಗಳಾದರೂ  ಮೊದಲ ದಿನ ಆ ಜಲ ಕುಡಿದಾಗ ಯಾವ  ರುಚಿ ಯಿತ್ತೋ , ಹಾಗೆ ಇಂದಿಗೂ ಇರುವುದು ನನಗೆ ವಿಸ್ಮಯ ಅನ್ನಿಸಿದೆ.


ರಾತ್ರಿ ಡಿಮ್ ಅಂಡ್ ಡಿಪ್ ಕೊಡು ಮಗಾ


ಸುಂದರ ಅನುಭವದ ಮೂಟೆ ಹೊತ್ತು ಸಂತ್ರುಪ್ತನಾಗಿ ವಾಪಸ್ಸು ನಮ್ಮ ಕಾರಿನ ಬಳಿ ಬರುವ  ಹಾದಿಯಲ್ಲಿ ಕಣ್ಣಿಗೆ  ಬಿತ್ತು , ಆ ಬನವಾಸಿ  ಸೂಪರ್  ಬಸ್ಸು  ,  ಕೀಟಲೆಯ  ಮನಸು ಜಾಗೃತವಾಯಿತು,  ಪ್ರಕಾಶಣ್ಣ  ಇಲ್ಲಿ ನೋಡಿ ಅಂದೇ  '' ರಾತ್ರಿ ಡಿಮ್ ಡಿಪ್  ಕೊಡು ಮಗಾ''  ಎಂಭ ಘೋಷ ವಾಕ್ಯ ,  ನಮ್ಮ  ಪಟ್ಟಣ ಗಳಲ್ಲಿ ಇರಬೇಕಾದ  "ಡಕೋಟಾ   ಎಕ್ಸ್ಪ್ರೆಸ್ "   ಸ್ವಚ್ಚಂದ  ಪರಿಸರ ಇರುವ ಇಲ್ಲಿಗ್ಯಾಕೆ ಬಂತೂ  ಅಂತಾ   ಜೋರಾಗಿ ನಕ್ಕೆವು.  ಇಂತಹ ಸಮಯದಲ್ಲಿಯೂ   ನಮ್ಮ ಮುಖದಲ್ಲಿ ನಗು ಅರಳಿಸಿದ ಈ ಬಸ್ಸಿಗೆ ಥ್ಯಾಂಕ್ಸ್ ಹೇಳುತ್ತಾ , ಸಾಗರ ಪಟ್ಟಣಕ್ಕೆ  ವಾಪಸ್ಸು  ಹೊರಟೆವು .  ಕೆಳದಿಯ ಇತಿಹಾಸದ  ಕೂಗು ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ... !







Wednesday, May 28, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ .....!!

ತುಂಟ ಮನಸಿನ  ಸರದಾರನೊಡನೆ  ಐಸ್ ಕ್ಯಾಂಡಿ ತಿನ್ನುವ ಯೋಗ


ನಮಸ್ಕಾರ  ಗೆಳೆಯರೇ  ಇತೀಚೆಗೆ   ಘಟನೆ ನಡೆಯಿತು,  ನಮ್ಮ ಬ್ಲಾಗ್ ಲೋಕದ  ಸಹೋದರಿ  ಪುಟ್ಟಿ ಒಬ್ಬಳು  ಪ್ರೀತಿಯಿಂದ ಮದುವೇ   ನಿಶ್ಚಯ  ಆಗಿರುವುದಾಗಿ ತಿಳಿಸಿ , ಅಣ್ಣಾ ನೀವು  ಮದುವೆಗೆ ಬರಲೇಬೇಕು ಅಂದಳು ,  ನಿನ್ನ ಮದುವೆ ಯಾವತ್ತು  ಪುಟ್ಟಿ ಅಂದೇ , ಅಣ್ಣಾ  ಅದು ಮೇ  ೧೧ ರಂದು ಬರಲೇಬೇಕು   ಒತ್ತಾಯದ ಕರೆ  ಬಂತು , ಯೋಚಿಸಿದೆ  ಅಲ್ಲಮ್ಮ  ಮೇ ೧೧ ಕ್ಕೆ  ಬೇರೆ  ಕಾರ್ಯಕ್ರಮ ಇದೆ  ಬಲವಂತಾ  ಮಾಡಬೇಡ , ನಿನ್ನ  ಮದುವೆ ನಿಶ್ಚಿತಾರ್ಥಕ್ಕೆ  ಬರುತ್ತೇನೆ ಯಾವತ್ತು ಹೇಳು  ಅಂದೇ,  ಏಪ್ರಿಲ್ ೧೩ ಕ್ಕೆ ಇದೆ  ಮಂಜುಗುಣಿ ಹತ್ತಿರ ನಮ್ಮೂರು ಬರಲೇ ಬೇಕು  ಅಂದಳು .  ಹೀಗೆ ಶುರು ಆಗಿತ್ತು ಮತ್ತೊಂದು ಪ್ರವಾಸದ  ಸಿದ್ದತೆ .

ಮುಂದಿನ ಸಿದ್ದತೆ  ಯಾರ ಜೊತೆ ಹೊರಡ  ಬೇಕೂ ಎನ್ನುವುದು,  ಮೊದಲು ಗೆಳೆಯ  ಶ್ರೀಕಾಂತ್ ಮಂಜುನಾಥ್  ಅವರ  ಜೊತೆ ಹೊರಡಲು  ಸಿದ್ದತೆ ನಡೆಯಿತು, ಆದರೆ  ಆಕಸ್ಮಿಕವಾಗಿ ಬಂದ  ಅವರ ಕಾರ್ಯ ಕ್ಷೇತ್ರದ  ಅಡಚಣೆ  ಅವರ ಪ್ರವಾಸ ರದ್ದು ಪಡಿಸಿತು, ಇನ್ನು  ನಮ್ಮ ಪ್ರಕಾಶಣ್ಣ   ಬರುವ ಬಗ್ಗೆ  ಫೋನ್ ಮಾಡಿದೆ,  ಅಣ್ಣ ಟ್ರೈ ಮಾಡ್ತೀನಿ  ಎರಡು ದಿನ ಟೈಮ್  ಕೊಡಿ ಅಂದರು, ನಂತರ  ಎರಡು ದಿನ ಬಿಟ್ಟು ಫೋನ್ ಮಾಡಿದ್ರೆ  ಸ್ವಲ್ಪ ಅವರ ಕೆಲಸದ  ಒತ್ತಡದಲ್ಲಿ   ಡೋಲಾಯಮಾನದ ಮನಸ್ಸಿನಿಂದ  ಸ್ವಲ್ಪ ತಡಕಾಡಿದರು , ಪ್ರಕಾಶಣ್ಣ  ದಾರಿಯಲ್ಲಿ  ಹೋಗ್ತಾ  ವರದಹಳ್ಳಿ  ನೋಡೋ ಆಸೆ ಇದೆ ಅಂತಾ  ನನಗೆ ಅರಿವಿಲ್ಲದೆ ಬಾಯಿಂದ  ಬಂದಿತ್ತು,   ಅರೆ ಅಚ್ಚರಿ  ಅಣ್ಣ  ಬರುತ್ತೇನೆ ನಡೆಯಿರಿ ಅಂತಾ  ಒಪ್ಪಿಗೆ ಕೊಟ್ರು, ಹೊರಡುವ  ಹಿಂದಿನ ದಿನ  ಅವರ ಮನೆಯಲ್ಲಿ ಆಶಾ ಅತ್ತಿಗೆ ಇಂದ ಒಳ್ಳೆಯ  ಊಟ ಹೊಡೆದು , ಮಾತುಕತೆ ಹರಟೆ  ಮಾಡಿದೆವು,  ಅಯ್ಯೋ ಬಾಲಣ್ಣ ಅವರು  ಕಾರ್  ಡ್ರೈವ್ ಮಾಡದೆ  ನಿಮ್ಮ ಜೊತೆ ಬರ್ತಾ ಇರೋದೇ  ಸೋಜಿಗ  ನನಗೆ,  ಬಹುಷಃ  ಇದೆ ಮೊದಲ ಸಾರಿ  ಕಾರ್ ಡ್ರೈವ್ ಮಾಡದೆ  ಬೇರೆಯವರು ಡ್ರೈವ್ ಮಾಡುವ ಕಾರಿನಲ್ಲಿ ಊರಿಗೆ ಹೋಗ್ತಾ ಇರೋದು ಎನ್ನುವ ವಿಚಾರ  ಬಿಚ್ಚಿಟ್ಟರು ......!  ಹರಟೆ ಹೊಡೆದು  ನಿದ್ದೆಗೆ ಜಾರಿದೆ,

ಕಟ್ ಮಾಡಿದ್ರೆ ಮುಂಜಾವಿನ  ಐದು ಘಂಟೆಗೆ  ನಮ್ಮ ಪಯಣ ಆರಂಭ  ಅಣ್ಣಾ , ಎನ್. ಹೆಚ್ . ೪ ರಲ್ಲಿ ಹೋಗೋಣ  ಬೇಗ ಹೋಗ ಬಹುದು ಅಂತಾ  ಸೂಚನೆ  ಪ್ರಕಾಶ್ ಹೆಗ್ಡೆ ಯವರಿಂದ  ಆದರೆ ಈ ತರಲೆ ಕೇಳಬೇಕಲ್ಲಾ , ಅಣ್ಣಾ  ಶಿವಮೊಗ್ಗಾ ಕಡೆಯಿಂದಾ  ಹೋಗೋಣ , ಸಕ್ರೆ  ಬೈಲು  ನೋಡ ಬೇಕು  ಅಂತಾ  ವರಾತ  ನನ್ನಿಂದ  ಇಲ್ಲೇ ಮೊದಲ ತುಂಟಾಟ  ಶುರು .ಆಗಿತ್ತು,  ಆದರೆ  ಪ್ರೀತಿಯ ಮನದ ಗೆಳೆಯ  ನನ್ನ ಮಾತಿಗೆ ತಲೆ ಆಡಿಸಿ  ಜೈ ಅಂದರು, ಬೆಂಗಳೂರಿನಿಂದ  , ನೆಲಮಂಗಲ,  ತಲುಪುವಷ್ಟರಲ್ಲಿ  ಹೊಟ್ಟೆ ಲಾವ್ ಲಾವ್  ಎನ್ನುತ್ತಿತ್ತು,   ಆದ್ರೆ    ಪ್ರಕಾಶಣ್ಣ  ತುಮಕೂರಿನಲ್ಲಿ  ಒಳ್ಳೆ ಹೋಟೆಲ್ನಲ್ಲಿ  ತಿಂಡಿ ತಿನ್ನೋಣ  ಎನ್ನುತ್ತಾ  ಮಾತಿನಲ್ಲಿ ತೊಡಗಿದೆವು, ಮಾತನಾಡುತ್ತಾ  ತುಮಕೂರು, ತಲುಪಿದೆವು,  ನಮ್ಮ ಹೊಟ್ಟೆ ಹಸಿವನ್ನು ನೀಗಿಸಲು  ಮುಂಜಾನೆ ಆರು ಘಂಟೆಗೆ  ಯಾವ ಹೋಟೆಲ್ಗಳೂ  ತೆರೆದಿರಲಿಲ್ಲ,  ಸರಿ ಮುಂದೆ ನೋಡೋಣ ಅಂತಾ ಗುಬ್ಬಿ, ಗೆ ಬಂದರೆ  ಆಲ್ಲಿಯೂ  ಅದೇ ಕಥೆ,   ಪಯಣದಲ್ಲಿ  ಹೊಟ್ಟೆ ಹಸಿವು   ನಮ್ಮ ಮಾತಿಗೆ ಕಡಿವಾಣ  ಹಾಕಿತ್ತಾದರೂ  , ಹಸಿವನ್ನು ಮರೆಯಲು   ಒಂದಷ್ಟು ಜೋಕ್  ಹೇಳಿಕೊಂಡರೂ  ಹೊಟ್ಟೆಯಲ್ಲಿನ ಹಸಿವು  ನಗಲೂ  ತ್ರಾಣ ಇಲ್ಲದಂತೆ  ಮಾಡಿತ್ತು . ತಿಪಟೂರು  ತಲುಪಷ್ಟರಲ್ಲಿ  ಹೈರಾನಾಗಿದ್ದೆವು . ಕೊನೆಗೂ ಕಂಡಿತ್ತು,  ತಿಪಟೂರು  ಪಟ್ಟಣದಲ್ಲಿ   ಪೈ ಹೋಟೆಲ್ .  ನೋ ಪಾರ್ಕಿಂಗ್ ಇದ್ದ ಬೋರ್ಡ್  ಬಳಿ  ಕಾರುನಿಲ್ಲಿಸಲು  ಹೋಟೆಲ್ನವರು  , ನೋ ಪಾರ್ಕಿಂಗ್  ಬೋರ್ಡ್ ಅನ್ನೇ  ಮುಂದೆ ಸರಿಸಿ  ಅನುವು ಮಾಡಿಕೊಟ್ಟರು .


 ತಿಪಟೂರಿನ ಪೈ ಹೋಟೆಲ್ ಬಳಿ  ತುಂಟ ಪ್ರಕಾಶಣ್ಣ ತೋರಿದ  ಭೂತರಾಜ  


ದಡಬಡಾಯಿಸಿ  ಕಾರಿನಿಂದ ಇಳಿದು ಬಕಾಸುರನಂತೆ  ಹೋಟೆಲ್ ಹೊಕ್ಕೆ, ಹಿಂದೆ ನಗುನಗುತ್ತಾ  ತುಂಟ ಪ್ರಕಾಶಣ್ಣ  ಬರುತ್ತಿದ್ದರು.  ಸಪ್ಲೆಯರ್  ಬಂದ  ತಕ್ಷಣ  ಅಯ್ಯಾ ಮೊದಲು ಏನಿದೆ ಅಂತಾ ಕೇಳೋದು ಬಿಟ್ಟು, ಇಡ್ಲೀ  ವಡೆ ತಗೊಂಡು ಬಾರಪ್ಪಾ  ಅಂದೇ . ಪುಣ್ಯಾತ್ಮ ನಮ್ಮ ಹಸಿವಿನ ಹಪ ಹಪಿಯ   ಮುಖನೋಡಿ,  ಪಾಪ ಎನ್ನಿಸಿರಬೇಕು  ತಕ್ಷಣವೇ  ಇಡ್ಲೀ ವಡೆ ತಂದಿಟ್ಟ . ಕ್ಷಣಮಾತ್ರದಲ್ಲಿ  ಎಲ್ಲವೂ ಗಾಯಬ್,  ಮತ್ತೆ ಇನ್ನೊಂದು  ಬಗೆಯ ತಿಂಡಿ ತಿಂದು ಕಾಫಿ ಕುಡಿದು  ಹಸಿವಿನ ಸಂಕಟದಿಂದ  ಪಾರಾದೆವು.  ಹೊಟ್ಟೆ ತುಂಬಿದ  ನಂತರ  ಮತ್ತೆ ತುಂಟತನ ಶುರು ಆಯಿತು.  ಹೋಟೆಲ್ ಹೊರಗೆ ಬಂದ  ಅಲ್ಲಿನ ಸುತ್ತ ಮುತ್ತಲ ಪರಿಸರ  ಅವಲೋಕನ ಮಾಡುತ್ತಿದ್ದೆವು . ಅಷ್ಟರಲ್ಲಿ ಪ್ರಕಾಶಣ್ಣ  ,  ಬಾಲಣ್ಣ ಅಂದ್ರು , ತಿರುಗಿ ನೋಡಿದರೆ  ಹಾರಿನ ಹಿಂದೆ ನಿಂತು ಪೋಸ್ ಕೊಡುತ್ತಿದ್ದರು  , ಬಲ ಕೈಬೆರಳು  ಏನನ್ನೋ ತೋರುತ್ತಿತ್ತು,  ನೋಡಿದರೆ ಕಾರಿನ ಹಿಂದೆ ಬರೆದಿದ್ದ  "ಭೂತರಾಜ"  ಎಂಬ ಪದ ಕಾಣಿಸಿ  ಜೋರಾಗಿ ನಗು ಬಂತು, ಸ್ವಲ್ಪ ಸಮಯದ ಮೊದಲು  ಹಸಿವಿನಿಂದ  ಬಳಲಿ , ಏನು ಸಿಕ್ಕರೂ  ತಿನ್ನಲು ಸಿದ್ದರಿದ್ದ  ನಾವೂ ಭೂತರಾಜರೆ  ಆಗಿದ್ದದ್ದು ನೆನಪಿಗೆ  ಬಂತು .        ನಮ್ಮ    ಪಯಣ ಮುಂದುವರೆಯಿತು  ಅರಸೀಕೆರೆ ಕಡೆಗೆ .


ಬತ್ತಿರುವ ಈ ಕೆರೆಯಲ್ಲಿ ಈಜು  ಹೊದೆದೀರಿ ಜೋಕೆ 


ಅರಸೀಕೆರೆ ಹತ್ತಿರವಾಗುತ್ತಿದ್ದಂತೆ  ಕಂಡಿದ್ದು ಒಂದು ಬತ್ತಿದ ವಿಶಾಲವಾದ ಕೆರೆ  ಅಲ್ಲೊಂದು ಬೋರ್ಡು, "ಕೆರೆಯ ಈ ಪ್ರದೇಶದಲ್ಲಿ ಈಜಾಡುವುದನ್ನು ನಿಷೇಧಿಸಲಾಗಿದೆ , ಈಜಾಡುವುದು ಕಂಡುಬಂದಲ್ಲಿ  ಶಿಕ್ಷೆಗೆ  ಗುರಿಪಡಿಸಲಾಗುವುದು "  ಎಂಬ ಸೂಚನೆ ನೋಡಿ ನಮ್ಮ ತುಂಟ ಪ್ರಕಾಶಣ್ಣ  ಈಜಲು  ತೆರಳಿದರು  , . ಅತ್ತ ಈ  ಸೂಚನಾ ಫಲಕ ನೋಡಿ  ನಗುತ್ತಾ  ಒಂದಷ್ಟು ಸುತ್ತಮುತ್ತಲಿನ ಫೋಟೋ ತೆಗೆದೇ , ಅರಸೀಕೆರೆ ಊರಿಗೆ  ಹೆಸರು ಬರಲು ಕಾರಣ ಈ ವಿಶಾಲವಾದ ಕೆರೆ . ಹೊಯ್ಸಳ ಅರಸರ ಕಾಲದಲ್ಲಿ  ಒಬ್ಬ  ರಾಣಿ ಕಟ್ಟಿಸಿದ  ಕೆರೆ ಇದು, ಹಾಗಾಗಿ ಅರಸಿ ಕಟ್ಟಿಸಿದ  ಕೆರೆ " ಅರಸೀಕೆರೆ "  ಆಯಿತು. ಈ ಊರನ್ನು " ಬಲ್ಲಾಳಪುರ"  ಅಂತಾನು ಕರೆಯುತ್ತಿದ್ದರು . ಅರಸಿಕೆರೆಗೆ  ಹೆಸರು ಬರಲು ಕಾರಣವಾದ  ಹೊಯ್ಸಳರ ಕಾಲದ  ಈ ಕೆರೆಯನ್ನು ಸಂರಕ್ಷಿಸಿ  ಇತಿಹಾಸವನ್ನು  ಕಾಪಾಡಿ ಅಲ್ಲಿನ ಪರಿಸರವನ್ನೂ ಕಾಪಾಡಬೇಕಾದ  ಅನಿವಾರ್ಯತೆ ಇಂದು ಆಗ ಬೇಕಾಗಿದೆ .


ನೀರಿಗಾಗಿ ಬಾಯ್ಬಿಟ್ಟ  ಕೆರೆಯ ಅಂಗಳ

ಬಿಸಿಲಿನ  ತಾಪಕ್ಕೆ  ಒಣಗಿ  ಭೂಮಿ ಬಿರಿದು  ಕೆರೆಯ ಅಂಗಳ   ಜೀವ ಜಲಕ್ಕಾಗಿ  ಬಕಪಕ್ಷಿಯಂತೆ  ಕಾದು  ಕುಳಿತ್ತಿತ್ತು,  ಕೆರೆಯ ಅಕ್ಕಪಕ್ಕ ಹಸು, ಎಮ್ಮೆ , ಹಕ್ಕಿ,   ಮುಂತಾದ ಜೀವಿಗಳು  ಬತ್ತಿದ   ಕೆರೆ  ನೋಡಿ ನೀರಡಿಕೆ  ತಾಳದೆ  ಸಂಕಟ ಪಡುತ್ತಿದ್ದವು.  ಒಮ್ಮೆ ಮನಸು ಭಾರವಾಯಿತು,


 ತಣ್ಣನೆ ಐಸ್ ಕ್ಯಾಂಡಿ  ಕೈಯಲ್ಲಿ   ಹಿತವಾದ ಮಾತು ಮೊಬೈಲ್ ನಲ್ಲಿ



 ನೆತ್ತಿಯ ಮೇಲೆ ಸೂರ್ಯ ಕೆಂಡ ಸುರಿಯುತ್ತಿದ್ದ , ಪಯಣ ಮುಂದೆ ಸಾಗಿತು.   ಅರಸೀಕೆರೆ  ಪಟ್ಟಣ,  ಬಾಣಾವರ, ಕಡೂರು, ಬೀರೂರು, ತರೀಕೆರೆ .ದಾಟಿ  ಪಯಣ  ಸಾಗಿತ್ತು,  ಬಿಸಿಲ  ತಾಪ  ಏರುತ್ತಲೇ ಇತ್ತು, ದಾರಿಯಲ್ಲಿ ಸಿಕ್ಕಿದ  ಒಬ್ಬ ಐಸ್ ಕ್ಯಾಂಡಿ  ಮಾರುವ  ವ್ಯಾಪಾರಿ , ತಕ್ಷಣವೇ  ಕಾರನ್ನು ನಿಲ್ಲಿಸಿ,  ಹಳ್ಳಿಯಲ್ಲಿ ಕಳೆದ ಬಾಲ್ಯವ ನೆನೆಯುತ್ತಾ  ಐಸ್ ಕ್ಯಾಂಡಿ ಚೀಪುತ್ತಾ  ರಸ್ತೆ ಬದಿಯಲ್ಲಿ  ನಿಂತೆವು . ಕುಳಿತು ಕುಳಿತೂ  ಕೈ ಕಾಲು   ಸೋಮಾರಿಯಾಗಿದ್ದವು .  ಓಡಾಡಿದ ನಂತರ  ಸ್ವಲ್ಪ   ಆರಾಮು ಅನ್ನಿಸಿತು,  ಪಯಣ  ಮುಂದುವರೆಯಿತು . ಭದ್ರಾವತಿ,ದಾಟಿ   ಶಿವಮೊಗ್ಗ  ತಲುಪಿದೆವು.


ಅಭಿವೃದ್ದಿಯ  ಹಾದಿಯಲ್ಲಿ ಶಿವಮೊಗ್ಗ



ಹಿಂದೆ ಬಂದಾಗ  ಹೇಗೇಗೋ ಇದ್ದ  ಶಿವಮೊಗ್ಗ  ಹೊಸ ರೂಪ  ದರ್ಶನ  ಮಾಡಿಸಿತು .  ಅಗಲವಾದ ರಸ್ತೆಗಳು,  ಹೊಸ ಹೊಸ  ಬಿಲ್ದಿಂಗುಗಳು , ಮಾಲುಗಳ ದರ್ಶನ, ಹೈ  ಟೆಕ್ ಬಸ್ ನಿಲ್ದಾಣ , ಮುಂತಾದವು ಕಣ್ಣಿಗೆ ಬಿದ್ದವು.  ಸುಂದರ ಶಿವಮೊಗ್ಗ  ಶುಚಿಯಾಗಿ   ಕಾಣುತ್ತಿತ್ತು . ನಮ್ಮ ಪಯಣ  ಮುಂದೆ ಸಾಗುತ್ತಿತ್ತು.    ಸಾಗರ ನಮ್ಮನ್ನು  ಕೈ ಬೀಸಿ ಕರೆಯುತ್ತಿತ್ತು,  ಕಟ್ ಮಾಡಿದ್ರೆ  ಸಾಗರದಲ್ಲಿನ ಹೋಟೆಲ್ ನಲ್ಲಿ  ಕಾಫಿ ಕುಡಿದು  ಹೊರ ಬಂದೆವು . ಮುಂದಿನ ನಮ್ಮ ಪಯಣ  ಶ್ರೀಧರ ಸ್ವಾಮಿಗಳ  ಸನ್ನಿಧಿ  ವರದಹಳ್ಳಿ ಕಡೆ.   ಆ ದಾರಿಯಲ್ಲಿ   ನಮ್ಮ ಕಾರು   ಓಡುತ್ತಿತ್ತು . ಮನದಲ್ಲಿ ಶ್ರೀಧರ ಸ್ವಾಮಿಗಳ  ಕಲ್ಪನೆ ಉದ್ಭವವಾಗುತ್ತಿತ್ತು.






Saturday, April 19, 2014

ಬೇಲಿ ಮತ್ತು ದಣಪೆ..!!! ಹಾಗೂ ಎಲ್ಲೆಯ ಮಿಂಚು !!!!

ರಂಗವಲ್ಲಿ ಕೃಪೆ ಸಂಧ್ಯಾ ಭಟ್


 ನಮಸ್ಕಾರ ಗೆಳೆಯರೇ , ಕಥೆ ಹೆಣೆಯುವ ಕೊಕ್ಕೋ  ಆಟದಲ್ಲಿ  ನನ್ನದೂ ಒಂದು ಕಥೆ ಇಲ್ಲಿದೆ , ಮೊದಲು ಗೆಳೆಯ  ಶ್ರೀ ಪ್ರಕಾಶ್ ಹೆಗ್ಡೆ ಯವರು ಬರೆದ "ಬೇಲಿ' http://ittigecement.blogspot.in/2014/04/blog-post.html ಕಥೆ ಓದಿ ಆಸ್ವಾದಿಸಿ ನಂತರ  .......!
ಮತ್ತೊಬ್ಬ ಗೆಳೆಯ  ಶ್ರೀ ದಿನಕರ ಮೊಗೆರ  ಅವರು ಬರೆದ  "ಬೇಲಿ ಮತ್ತು ದಣಪೆ..!!! " http://dinakarmoger.blogspot.in/ ಕಥೆಯನ್ನು  ಅನುಭವಿಸಿ  ನಂತರ  ಬನ್ನಿ ಎರಡೂ ಕಥೆಗಳ ಮುಂದುವರೆದ  ಭಾಗ ಇಲ್ಲಿದೆ  .

 ಬೇಲಿ ಮತ್ತು ದಣಪೆ..!!! ಹಾಗೂ ಎಲ್ಲೆಯ ಮಿಂಚು !!!!

ಹುಚ್ಚುಕೋಡಿ ಮನಸು ಗರಿಗೆದರಿತ್ತು... ಒಮ್ಮೆ ಹದಗೊಂಡ ದೇಹ ಹುರಿಗೊಳ್ಳುತ್ತಿತ್ತು... ಎದ್ದು ಬೀರುವಿನಲ್ಲಿದ್ದ ಸೀರೆ ಹುಡುಕಿದೆ... ಕೈಗೆ ಅನಾಯಾಸವಾಗಿ ಆತನಿಗಿಷ್ಟವಾದ ಆಕಾಶನೀಲಿ ಬಣ್ಣದ ಸೀರೆ ಸಿಕ್ಕಿತು... ನೆರಿಗೆ ಹಾಕುವಾಗ ಹೊಕ್ಕಳು ತಾಗಿ ನನ್ನ ಮೈಯಿ ಜುಮ್ಮೆಂದಿತು... ಯಾವಾಗಲೂ ಬಳಸದ ತುಟಿ ಲಿಪ್ಸ್ಟಿಕ್ ಬೇಡುತ್ತಿತ್ತು.... ರೆಡಿಯಾಗಿ ಒಮ್ಮೆ ಕನ್ನಡಿ ಕಡೆ ನೋಡಿದೆ... ನನ್ನ ನೋಡಿ ನಾನೇ ನಾಚಿದೆ... ಇದೇ ನಾಚಿಕೆ ಆತನಿಗೆ ಇಷ್ಟವಲ್ಲವಾ..?

ಹೌದು ಎನಿಸಿ...ಇನ್ನಷ್ಟು ನಾಚಿದೆ... ನನ್ನ ನಾಚಿಕೆಯೇ  ನನ್ನ ವ್ಯಕ್ತಿತ್ವ ಎಂಬ ಹೆಮ್ಮೆ ಮೂಡಿತ್ತು,  ಹೊರಡಲು ಅನುವಾಗ ತೊಡಗಿದೆ,  ಅರೆ ಮಗು , ನನ್ನ ಕಂದಮ್ಮ  ......!! ಅಯ್ಯೋ ಎಂತಹ ಮರೆಗುಳಿ ನಾನು  ಮೊನ್ನೆ ತಾನೇ ನನ್ನ ಎರಡುವರ್ಷದ  ಪಾಪುವನ್ನು  ನನ್ನ ತಾಯಿ ಕರೆದುಕೊಂಡು  ಹೋಗಿದ್ದು ಮರೆತೇ ಹೋಗಿತ್ತು, ಅವತ್ತು ನನ್ನ ತಾಯಿಯನ್ನು ಕಂಡ ಕಂದಮ್ಮ  ನನ್ನ ಅಪ್ಪುಗೆಯನ್ನು ಬಿಡಿಸಿಕೊಂಡು, ನಗು ನಗುತ್ತಾ ಅಜ್ಜಿಯ ಜೊತೆ ಹೊರಟಿತ್ತು ,  ಹಾಗಾಗಿ  ಪತಿ ಇಲ್ಲದ ದೊಡ್ಡ  ಮನೆಯಲ್ಲಿ ನಾನೇ ಮಹಾರಾಣಿ .ಯಾಗಿದ್ದೆ , ಸಿದ್ದವಾಗುತ್ತಿದ್ದ ಸಮಯದಲ್ಲಿ   "ನಿಲ್ಲು ನಿಲ್ಲೇ ಪತಂಗಾ ಬೇಡ ಬೇಡಾ ಬೆಂಕಿಯ ಸಂಗ" ಎಂಬ ಹಾಡು ಎಫ್.ಎಂ . ನಿಂದ ಬರುತ್ತಿತ್ತು,
ಯಾಕೋ ಕಾಣೆ  ಹೋಗುವುದು ಬೇಡಾ ಅಂತಾ  ಒಮ್ಮೊಮ್ಮೆ ಅನ್ನಿಸುತ್ತಿತ್ತು   

ಆದರೆ ..... ಮನಸು !!!ಹುಚ್ಚು ಕುದುರೆಯ ಬೆನ್ನೇರಿತ್ತು . 

ಆದರೆ  ಅಷ್ಟರಲ್ಲಿ  ಬಂತು ನನ್ನ ಪತಿಯ ಫೋನ್,

 ಚಿನ್ನು  ಇನ್ನೂ ಹೊರಟಿಲ್ವಾ , ? ಬೇಗ ಹೋಗಮ್ಮಾ  ತಡವಾದೀತು . ಎಂಬ ಒತ್ತಾಯದ  ಸೂಚನೆ  ಅವರಿಂದ ,,ಹೊರಡಲು ಪೂರಕವಾದ  ವಾತಾವರಣ  ತನ್ನಿಂದ ತಾನೇ ಸೃಷ್ಟಿಯಾಗಿ  ಹೊರಡಲು ಪ್ರೇರಣೆ ನೀಡಿತು,  
ಹೊರಡುವ ಆತುರದಲ್ಲಿ ಆ ಹಾಡನ್ನು ನಿಲ್ಲಿಸಿ  ಮನೆ ಯಿಂದ ಆಚೆ ಹೊರಟೆ .

ದಾರಿಯಲ್ಲಿ ನಾನು ಕಾರ್ ಡ್ರೈವ್ ಮಾಡುತ್ತಾ  ಬರುತ್ತಿರಲು , ಹೊಸ ತಂಗಾಳಿ ಬೀಸುತ್ತಿತ್ತು, ಕಾರಿನ ಒಳಗೆ " ನೀ ನಿರಲು ಜೊತೆಯಲ್ಲಿ ಬಾಳೆಲ್ಲ  ಹಸಿರಾದಂತೆ " ಹಾಡು ಬರುತ್ತಿತ್ತು, ಆ ಸುಂದರ ಹಾಡನ್ನು ಅವನೇ ನನಗಾಗಿ ಹಾಡುತ್ತಿರುವಂತೆ  ಕಲ್ಪಿಸಿಕೊಂಡು  ಮುಖದಲ್ಲಿ ಮಂದಹಾಸ  ಬೀರಿದೆ .......  ಸೂರ್ಯನಿದ್ದ  ಆಗಸದಲ್ಲಿ ಯಾಕೋ  ಕಪ್ಪು ಮೋಡಗಳು  ಗೋಚರಿಸಿ  ಮಳೆಯ  ಮುನ್ಸೂಚನೆ ನೀಡಿದ್ದವು . ಕೆಲವೇ ನಿಮಿಷಗಳಲ್ಲಿ  ಅವನ ಮನೆಯ ಮುಂದೆ  ಹಾಜರಾದೆ ನಾನು. 
 ಮನೆಯ ಆವರಣ ಹೊಕ್ಕ ನನ್ನನ್ನು ನಗು ನಗುತ್ತಾ ಸ್ವಾಗತಿಸಿದ ಆ ಹುಡುಗ , ಆ ಮನೆಯ ಹೊರ ಆವರಣ ಪ್ರಶಾಂತವಾಗಿತ್ತು,  ಬಣ್ಣ ಬಣ್ಣದ ಹೂಗಳು  ಅರಳಿ ನಗುತ್ತಿದ್ದವು , ಕಡು ನೀಲಿ ಜೀನ್ಸ್ ಹಾಗೂ ಬಾಟಲ್  ಗ್ರೀನ್  ಶರ್ಟ್ ಹಾಕಿದ್ದ  ಅವನನ್ನು  ಅಚ್ಚರಿಯಿಂದ ನೋಡುತ್ತಾ  ನಿಂತೇ, ಅರೆ ಇದೆ ಡ್ರೆಸ್ ಹಾಕಿಯಲ್ಲವೇ  ನನ್ನ ಕಾಲೆಜುದಿನಗಳಲ್ಲಿ ಹೋಗಿದ್ದ  ಬೇಕಲ್ ಫೋರ್ಟ್  ಪ್ರವಾಸದಲ್ಲಿ ಇವನು ಇದ್ದದ್ದು, ಅಂದು ಇವನ ಸ್ಮಾರ್ಟ್ ಡ್ರೆಸ್ ನೋಡಿ ಹಲವು ಹುಡುಗಿಯರು  ಪ್ರಪೋಸ್ ಮಾಡಿದ್ದು , ಆಗ ನಾನು ಹೊಟ್ಟೆ ಕಿಚ್ಚು ಪಟ್ಟಿದ್ದು .....!! ನೆನಪುಗಳು  ಎಲ್ಲವೂ ಕಣ್ಣ ಮುಂದೆ ಮತ್ತೊಮ್ಮೆ ತೆರೆದು ಕೊಂಡವು,  ಹಳೆಯ ನೆನಪುಗಳ  ಸರದಾರನಾದ   ಅವನನ್ನೇ ನೋಡುತ್ತಾ  ನಿಂತೇ . 

ಅರೆ ಇದೇನು ಹುಡುಗಿ ಹಾಗೆ ನಿಂತೇ , ಹೊಸಬಳಂತೆ , ಬಾ ಒಳಗೆ  , ಎಂದು ಕೈ ಹಿಡಿದು ಕೊಂಡು  ಒಳಗೆ ಕರೆದು ಕೊಂಡುಹೋದ , ಒಳಗಡೆ ಮೆಲ್ಲಗೆ ಹಿತವಾದ ಸಂಗೀತ ಬರುತ್ತಿತ್ತು, ಒಳಗಡೆ ಮುಜುಗರದಿಂದ ಕುಳಿತು  ನನ್ನ ಪತಿ ನೀಡಿದ್ದ  ಫೈಲ್ ಅವನಿಗೆ ನೀಡಿದೆ . ತಕ್ಷಣವೇ ಅವನು ಅದಕ್ಕೆ ತನ್ನ ಅನುಮೋದನೆ ನೀಡಿ  ನನ್ನ ಪತಿಯ ವ್ಯವಹಾರಕ್ಕೆ ಇದ್ದ ಕಾನೂನು ತೊಡಕನ್ನು ನಿವಾರಿಸಿದ್ದ ,  ಅವನಿಗೆ ಥ್ಯಾಂಕ್ಸ್  ಹೇಳಿ ಹೊರಡಲು  ಸಿದ್ದಳಾದೆ ....... ಆದರೆ ಮನಸು !!!   

 ಅಷ್ಟರಲ್ಲಿ ನೋಡು ಹುಡುಗಿ  ಹೊರಗಡೆ ಜೋರಾಗಿ ಮಳೆ ಬರ್ತಾ ಇದೆ, ಮಳೆ ನಿಂತ ಮೇಲೆ ಹೊರಡಬಹುದು , ಬಹಳ ದಿನಗಳ ನಂತರ ನಾನೂ ಸಹ ಫ್ರೀಯಾಗಿ ಇದ್ದೇನೆ, ಮನೆಯಲ್ಲಿ ಯಾರೂ ಇಲ್ಲಾ ನನಗೂ ಬೋರ್ ಆಗಿದೆ , ಬಾ ಇಬ್ಬರೂ ಫ್ರೀ ಯಾಗಿ ಹರಟೆ ಹೊಡೆಯೋಣ,  ಮಳೆ ನಿಂತ ನಂತರ  ಇಬ್ಬರೂ ಹೊರಗಡೆ  ಊಟ ಮಾಡೋಣ,  ಅಲ್ಲಿಯವರೆಗೂ ತಗೋ ಎನ್ನುತ್ತಾ  ಕಲ್ಲಂಗಡಿ ಚೂರುಗಳನ್ನು ಹಾಗು  ಒಂದು ಲೋಟದಲ್ಲಿ ಶರಬತ್ತು ನೀಡಿದ . ಅದೂ ಇದೂ ಮಾತನಾಡುತ್ತಾ ಸ್ವಲ್ಪ ಸಮಯ ಕಳೆಯಿತು,  

ಬಾರೆ ಹುಡುಗಿ ನಿನಗೆ ನಮ್ಮ ಮನೆ ತೋರುತ್ತೇನೆ  ಎಂದು ಕೈ ಹಿಡಿದು ಮನೆಯನ್ನೆಲ್ಲಾ ತೋರಿಸಿದ , ಮನೆಯಲ್ಲಿ ಅವನ ಹವ್ಯಾಸಕ್ಕೆ ತಕ್ಕಂತೆ  ವಿವಿಧ ಬಗೆಯ ಪುಸ್ತಕಗಳು, ಅವನೇ ಬಿಡಿಸಿದ ಸುಂದರ ಚಿತ್ರಗಳು,  ಅವನು ತೆಗೆದ ಅದ್ಭುತ ಫೋಟೋಗಳು, ಮೂಲೆಯಲ್ಲಿ ಅವನು ಸದಾ  ಪ್ರೀತಿಸಿ ನುಡಿಸುವ ಸಿತಾರ್ ,  ನನಗೆ ಹಾಗು ಅವನಿಗೆ ಇಬ್ಬರಿಗೂ ಇಷ್ಟವಾದ  ಸಂಗೀತದ  ಸಿ.ಡಿ . ಗಳು , ಜೊತೆಗೆ ಅವನು ಕವಿತೆ ಬರೆಯುತ್ತಿದ್ದ  ಪುಸ್ತಕ ನನ್ನ ಗಮನ ಸೆಳೆದವು . ಹೊರಗಡೆ  ಮಳೆ ದೋ ಎಂದು ಬರುತ್ತಲೇ ಇತ್ತು,  ಸಣ್ಣಗೆ ಬರುತ್ತಿದ್ದ  ಹಾಡಿನಲ್ಲಿ,  "ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ '' ಎನ್ನುತ್ತಾ ಎಸ್ .ಪಿ. ಬಾಲು ಹಾಡುತ್ತಿದ್ದರು , ಹಿತವಾದ ಸಂಗೀತ ಮನೆಯ ಎಲ್ಲಾ ಕೊಣೆ ಗಳಲ್ಲೂ ಕೇಳುತ್ತಿತ್ತು,  ಮನೆಯನ್ನು ಸಂಪೂರ್ಣ ನೋಡಿ  ಮತ್ತೆ ಮನೆಯ  ಹಾಲ್  ನಲ್ಲಿ ಬಂದು ಕುಳಿತೆವು,

ಅಷ್ಟರಲ್ಲಿ  ಅವನಿಗೆ ಫೋನ್ ಬಂತು , ಒಂದು ನಿಮಿಷ ಎಂದು ಹೇಳಿ , ಫೋನ್ ಕೈಯಲ್ಲಿ ಹಿಡಿದು ಆಚೆ ನಡೆದ ಹುಡುಗ , ನಾನು ಅಲ್ಲೇ ಇದ್ದ ಆಲ್ಬಮ್ ನಲ್ಲಿ  ಫೋಟೋಗಳನ್ನು ನೋಡುತ್ತಾ ಕುಳಿತೆ,  ಆಲ್ಬಮ್ ನಲ್ಲಿದ್ದ ಹಲವಾರು ಫೋಟೋಗಳು , ನಮ್ಮ ಕಾಲೇಜಿನ ದಿನದ್ದಾಗಿದ್ದವು ,  ಸ್ವಲ್ಪ ಹೊತ್ತು ನೋಡುತ್ತಾ   ಅಲ್ಲೇ ಇದ್ದ ಅವನು  ಕವಿತೆ ಬರೆದಿದ್ದ  ಪುಸ್ತಕ  ಓದುತ್ತಿದ್ದೆ ,   ನಾಚಿಕೆ ಬಗ್ಗೆ  ಬರೆದಿದ್ದ  ಹಲವು ಕವಿತೆಗಳು ಅಲ್ಲಿದ್ದವು,  

 "ಹುಣ್ಣಿಮೆಯ ರಾತ್ರಿಯ ಚಂದಿರ 
   ನನ್ನ ಹುಡುಗಿಯ  ನಾಚಿಕೆಯ 
      ಸುಂದರ ಮೊಗವ ಕಂಡು
       ಹೊಟ್ಟೆ ಕಿಚ್ಚು ಪಟ್ಟು
      ಆಗಸದಿಂದ ಪೇರಿ   ಕಿತ್ತಿದ್ದ "

  ಯಾಕೋ ಗೊತ್ತಿಲ್ಲಾ  ಆ ಕವಿತೆಯ ಸಾಲುಗಳನ್ನು ನೋಡುತ್ತಾ  ಮತ್ತೊಮ್ಮೆ  ಕಲ್ಪನಾ ಲೋಕಕ್ಕೆ ಜಾರಿದೆ,  

ಅಯ್ಯೋ ಹುಡುಗಿ ವಾಸ್ತವಕ್ಕೆ ಬಾ  ನಾನು ಬಂದು ಎಷ್ಟು ಹೊತ್ತಾಯ್ತು, ಅನ್ನುತ್ತಾ ನಗು ನಗುತ್ತಾ  ಎದುರು ನಿಂತಿದ್ದ ಹುಡುಗ , ಆ ನಗೆಯಲ್ಲಿ ತುಂಟತನವಿತ್ತು,  ಆದರೆ ಕಣ್ಣುಗಳಲ್ಲಿ ...?
 ಲೇ ಹುಡುಗಿ ನಿನ್ನ ನಾಚಿಕೆಯ ಅಭಿಮಾನಿ ನಾನು , ದಿನಕ್ಕೊಮ್ಮೆಯಾದರೂ ನಿನ್ನ ನಾಚಿಕೆ ನೋಡಬೇಕು.. ಎಂಬ  ಹಂಬಲ ನನ್ನದು  ಒಮ್ಮೆ ನಾಚಲಾರೆಯ  ಎಂಬ ಬೇಡಿಕೆ  ಕಾಣುತ್ತಿತ್ತು,  

 ಏನೇ ಆಗ್ಲಿ ಹುಡುಗಿ ನಿನ್ನ ನಾಚಿಕೆಗೆ ಬೆಲೆ ಕಟ್ಟಲಾರೆ ಎನ್ನುತ್ತಾ ಹತ್ತಿರಬಂದು ಕಿವಿಯಲ್ಲಿ ನಿನ್ನ ನಾಚಿಕೆಯ ಅಭಿಮಾನಿ ನಾನು ಕಣೆ..." ಎಂದವನು ಮುಂದೆ ನಗುತ್ತಾ ನಿಂತಾ .



 ಆ ಕಣ್ಣುಗಳನ್ನು ನೋಡುತ್ತಾ  ನನಗರಿವಿಲ್ಲದಂತೆ  ನಾಚಿಕೆಯಾಯಿತು .  ಅದನ್ನು ಕಂಡ ಅವನ ಮುಖ ಭಾವ  ಸಂತಸದ ಹೊನಲು ಹರಿಸಿತ್ತು.
  
ಆದರೆ ಅಷ್ಟರಲ್ಲಿ  ಫಳ್  ಫಳ್  ಎಂಬ ಮಿಂಚು , ಮಿಂಚಿತು , ಮನೆಯಲ್ಲಿನ  ಕರೆಂಟ್  ಆಫ್  ಆಯಿತು, ಹೆದರ ಬೇಡವೇ ಹುಡುಗಿ ಎನ್ನುತ್ತಾ  ಅವನು ಸ್ವಲ್ಪ  ದೂರದಲ್ಲಿದ್ದ  ಇನ್ವರ್ಟರ್  ಸ್ವಿಚ್  ಆನ್ ಮಾಡಿದ, ಮಂದವಾದ  ಹಿತವಾದ ಬೆಳಕು  ಮನೆಯನ್ನು ಆವರಿಸಿತು .  ಆದರೆ ಮನೆಯಲ್ಲಿ  ಕೊಳಲಿನ  ಹಿತವಾದ ಮೆಲ್ಲನಯ ಸಂಗೀತ ಹರಿದಾಡುತ್ತಿತ್ತು,  ಅದಕ್ಕೆ ಮಳೆಯ ಹನಿಗಳ ತಾಳ ಸಾಥ್ ನೀಡಿತ್ತು, ಮನದಲ್ಲಿ  ಮೋಹನ ರಾಗ  ಉಗಮವಾಗುತ್ತಿತ್ತು. ಮತ್ತೊಮ್ಮೆ ಫಳ್  ಎಂದ ಮಿಂಚು  ,ಹಾಗು  ಭೂಮಿಯನ್ನು ಅಲುಗಾಡಿಸುವ  ಶಬ್ಧ ಮಾಡುತ್ತಾ   ಭಾರೀ ಗುಡುಗು   ಅಪ್ಪಳಿಸಿತು , 

ನಾನು  ಬೆಚ್ಚಿಬಿದ್ದು  , ಚೀರುತ್ತಾ   ನನಗರಿವಿಲ್ಲದೆ  ಅವನ  ಅಪ್ಪುಗೆಯಲ್ಲಿ ಸೇರಿಕೊಂಡೆ , ಅಯ್ಯೋ ಹುಡುಗಿ  ಏಳು ಎದ್ದೇಳು ಇಷ್ಟು ದೊಡ್ದವಳಾದ್ರೂ   ಇನ್ನೂ ಹೋಗಿಲ್ವಾ ಗುಡುಗಿನ  ಹೆದರಿಕೆ ನಿನಗೆ , ಹೆದರ ಬೇಡ ನಾನಿದ್ದೇನೆ , ಎನ್ನುತ್ತಾ  ತಗೋ ತಣ್ಣಗೆ ಶರಬತ್ತು ಕುಡಿ  ಎನ್ನುತ್ತಾ ಸನಿಹ ಬಂದು ಸಾಂತ್ವನ ಗೊಳಿಸಿದ . ಅವನು ನೀಡಿದ ಸಾಂತ್ವನದ ಮಾತು  ಹಿತವಾಗಿ ಸ್ವಲ್ಪ ಸುಧಾರಿಸಿಕೊಂಡೆ .  ನನ್ನಿಂದ ಸ್ವಲ್ಪವೇ ದೂರ ಕುಳಿತು  ತನ್ನ ಮಗುವಿನ ಆಟ , ತುಂಟಾಟದ ಬಗ್ಗೆ ಹೇಳುತ್ತಿದ್ದ , 

ಅಷ್ಟರಲ್ಲಿ ಮಳೆಯ ಆರ್ಭಟ  ಹೆಚ್ಚಾಗ ತೊಡಗಿತು, ಬಿರುಗಾಳಿ ಅದಕ್ಕೆ ಸಾಥ್ ನೀಡಿತ್ತು, ನಮ್ಮ ಮಾತುಕತೆ, ನಗು , ಸರಾಗವಾಗಿ ಸಾಗಿತ್ತು, ಅಷ್ಟರಲ್ಲಿ  ಮತ್ತೊಮ್ಮೆ  ಎರಗಿ ಬಂತು ಸಿಡಿಲು
 ಫಳ್ , ಫಳ್  ಎಂಬ  ಜೊತೆಯಲ್ಲೇ ಭಯಂಕರ   ಸಿಡಿಲು   ಅಪ್ಪಳಿಸಿತು,  ಹೆದರಿದ  ನಾನು  ಓಡಿಹೋಗಿ  ನನಗರಿವಿಲ್ಲದಂತೆ ಅವನನ್ನು ಅಪ್ಪಿಕೊಂಡೆ ,     ಅವನ ಕೈ ನನ್ನ ತಲೆಯನ್ನು ಮೃದುವಾಗಿ ಸವರುತ್ತಿತ್ತು, .... ಮನಸು ಈ ಸ್ಪರ್ಶ ಸುಖಕ್ಕೆ ಕರಗುತ್ತಿತ್ತು ....... ಅವನ ತುಡಿತ , ಎದೆ ಬಡಿತ ಹೊಸ ರಾಗ ಹಾಡಲು ಸಿದ್ದ ವಾಗುತ್ತಿತ್ತು, ಆದರೆ .......... !  

"ಅನಿಸುತಿದೆ ಯಾಕೋ ಇಂದು ನೀನೇನೆ  ನನ್ನವಳೆಂದು" ಹಾಡು ನನ್ನ ಮೊಬೈಲ್ ನಿಂದ  ಬಂತು, ಆ ಹುಡುಗನ  ಅಪ್ಪುಗೆ  ಬಿಡಿಸಿಕೊಂಡು  , ಮೊಬೈಲ್  ಬಳಿ  ಓಡಿ  ಬಂದು ನನ್ನ ಪತಿಯ ಕಾಲ್  ರಿಸೀವ್  ಮಾಡಿದೆ, ಹಾಗೆ ಸ್ಪೀಕರ್ ಫೋನ್  ಆನ್ ಮಾಡಿದೆ . 

ಅತ್ತಲಿಂದ ಪತಿ ರಾಯರು   " ಚಿನ್ನು ಎಲ್ಲಿದ್ದೀ ,  ನಮ್ಮೂರಲ್ಲಿ ಭಾರಿ ಬಿರುಗಾಳಿ ಯಿಂದ ಕೂಡಿದ ಮಳೆ, ಎಂದೂ ಸಿಡಿಲಿಗೆ ಒಬ್ಬ ವ್ಯಕ್ತಿ  ಬಲಿ  ಅಂತಾ ಟಿ .ವಿ . ಯಲ್ಲಿ ಬರ್ತಾ ಇದೆ, ನಿನಗೆ ಮೊದಲೇ ಗುಡುಗು ಎಂದರೆ  ಭಯ ಅದಕ್ಕೆ ಎಲ್ಲಿ ಒಬ್ಬಳೇ  ಮನೆಯಲ್ಲಿ ಹೆದರಿಕೊಂಡು ಇರ್ತೀಯ ಅಂತಾ  ಫೋನ್ ಮಾಡಿದೆ, ನಾನು ನಿನ್ನ  ತುಂಬಾ ಮಿಸ್ ಮಾಡ್ಕೋತಾ ಇದ್ದೀನಿ ಕಣೆ , ನಿನ್ನ ನೋಡುವ ಆಸೆ ಆಗ್ತಾ ಇದೆ ಎನ್ನತ್ತಾ  ರಮಿಸಿದ ಪತಿರಾಯ. 

ನಾನು ಅವರ ಗೆಳೆಯರ ಮನೆಯಲ್ಲಿ ಇರುವುದಾಗಿ ತಿಳಿಸಿ , ಅವರ ಕೆಲಸ  ಪೂರ್ಣವಾದ ಬಗ್ಗೆ  ತಿಳಿಸಿದೆ,  ಅವರು ಸಂತಸಗೊಂಡು   , ಹುಡುಗನ ಜೊತೆ ಮಾತನಾಡಿದರು, ಅವನೂ ಸಹ ಅವರ ವ್ಯವಹಾರದ ಬಗ್ಗೆ ಇದ್ದ ಕಾನೂನು ತೊಡಕನ್ನು  ನಿವಾರಿಸಿರುವುದಾಗಿ ತಿಳಿಸಿದ . 

ನಂತರ  ಬಹಳ ಸಂತೋಷದಿಂದ ನನ್ನ ಪತಿ ಮತ್ತೊಮ್ಮೆ  ನನ್ನ ಹತ್ತಿರ ಮತ್ತೊಮ್ಮೆ ಮಾತನಾಡುತ್ತಾ , ನೋಡೂ ಚಿನ್ನು,  ಮಳೆ ಪೂರ್ಣವಾಗಿ ನಿಲ್ಲುವವರೆಗೂ ನಿನ್ನ ಗೆಳೆಯರ ಮನೆಯಲ್ಲೇ ಇರು,  ಬಹಳ ಒಳ್ಳೆಯ ಸಭ್ಯ ವ್ಯಕ್ತಿ ನಿನ್ನ ಗೆಳೆಯರು,  ಅಂತಹವರ ಮನೆಯಲ್ಲಿದ್ದರೆ ಯಾವ ಆತಂಕವೂ   ಇರೋದಿಲ್ಲಾ, ನಿಮ್ಮಿಬ್ಬರ ಗೆಳೆತನದ ಬಗ್ಗೆ ನನಗೆ  ಬಹಳ ಹೆಮ್ಮೆ ಇದೆ ,  ನಿಮ್ಮಿಬ್ಬರ ಗೆಳೆತನ ಹೀಗೆ ಇರಲಿ ನಾನು ನಾಳೆಯೇ  ಹೊರಟು  ಬರುತ್ತೇನೆ ಅಂತಾ ಹೇಳಿ ಫೋನ್  ಇಟ್ಟರು . 

 ನನ್ನ ಪತಿಯ ಫೋನ್ ಮಾತುಗಳು ಇಬ್ಬರಿಗೂ ಚಾಟಿ  ಬೀಸಿತ್ತು,   ಅವರು ಆಡಿದ ಪ್ರತೀ ಮಾತುಗಳು , ಪ್ರತೀ ಪದಗಳು, ನಮ್ಮಿಬ್ಬರ ಸುತ್ತಾ  ಗಿರಾಕಿ ಹೊಡೆಯುತ್ತಾ  ಗಹಗಹಿಸಿ  ನಗುತ್ತಾ  ನಮ್ಮಿಬ್ಬರನ್ನು  ಅಪಹಾಸ್ಯ ಮಾಡುತ್ತಿರುವಂತೆ  ಭಾಸವಾಯಿತು . 

ದಿಕ್ಕು ತೋಚದೆ  ಸುಮ್ಮನೆ ನಿಂತುಬಿಟ್ಟೆ ....  ಮನದಲ್ಲಿನ  ಹೊಯ್ದಾಟ  ನನ್ನ  ಉತ್ಸಾಹವನ್ನು  ಅಡಗಿಸಿತ್ತು .   ಹುಡುಗ  ನನ್ನತ್ತ  ನೋಡಲಾರದೆ  ತಲೆ ತಗ್ಗಿಸಿ, ಮೆದು ಮಾತಿನಲ್ಲಿ    ನನ್ನನ್ನು ಕ್ಷಮಿಸು ಹುಡುಗಿ, ನಿನ್ನ ಪತಿಯ ಮನಸು ಇಷ್ಟೊಂದು ವಿಸ್ತಾರವಾದದ್ದು  ಎಂದು ತಿಳಿದಿರಲಿಲ್ಲ, ನಮ್ಮಿಬ್ಬರ  ಗೆಳೆತನದ ಬಗ್ಗೆ  ತಮ್ಮದೇ ಆದ  ಸಭ್ಯತೆ ಪ್ರದರ್ಶಿಸಿ   ನಮ್ಮ ಗೆಳೆತನಕ್ಕೆ  ಅಳಿಸಲಾಗದ ಮಿಂಚಿನ ರೇಖೆ ಹಾಕಿ ಕೊಟ್ಟಿದ್ದಾರೆ,  ನಮ್ಮಿಬ್ಬರ ಸಂಬಂಧದ ಎಲ್ಲೇ ನನಗೆ ಅರ್ಥ ಆಯಿತು,  ಎಂದು ಗದ್ಗತಿತನಾಗಿ  ನನ್ನ ಮುಂದೆ  ಮಂಡಿಯೂರಿ  ಕುಳಿತ ........!

 ಆದರೆ ನನ್ನ ಮನಸು ತಪ್ಪು ನಿನ್ನದೇ ಅಲ್ಲವೋ ಹುಡುಗಾ  ನನ್ನದೂ ಕೂಡಾ ಎನ್ನುತ್ತಾ  ಸಾರಿ ಸಾರಿ ಹೇಳುತ್ತಿತ್ತು, ಆದರೆ  ಹೃದಯದಲ್ಲಿ ಉಳಿದ ಭಾವನೆಗಳು  ಮಾತಾಗಿ ಬರಲೇ ಇಲ್ಲಾ,  ಕಣ್ಣಿಂದ  ಕಣ್ಣೀರ ಹನಿಗಳು  ಬಿಸಿ ಹನಿಗಳಾಗಿ ನೆಲಕ್ಕೆ ಉರುಳುತ್ತಿದ್ದವು,   ನನಗರಿವಿಲ್ಲದಂತೆ  ಅವನ ಕಣ್ಣ ನೋಟದಿಂದ  ದೂರ ಸರಿದೆ,  ಹೃದಯವೂ ಕೂಡ ಅವನ  ಕಣ್ ಸೆಳೆತ  ಬಯಸದೆ  ಮೌನವಾಗಿ   ರೋದಿಸುತ್ತಿತ್ತು,   ಹೊರಗಿನ ಮಳೆ  ಇಳೆಯ  ಬಾಯಾರಿಕೆ ನೀಗಿಸಿ  ಶಾಂತವಾಗಿತ್ತು,  ಇತ್ತ ನನ್ನ ಬಾಳಿನಲ್ಲಿ  ಎರಗಿಬಂದ  ಈ ತಿರುವು  ಬರ ಸಿಡಿಲಿನಂತೆ ಅಪ್ಪಳಿಸಿತ್ತು .    

ಹುಡುಗ ಹೊರಡುವೆ ನಾನು  ಎಂದು  ಹೊರಟು   ನಾಲ್ಕು  ಹೆಜ್ಜೆ ಹಾಕಿದೆ ನಾನು,  ಅಷ್ಟರಲ್ಲಿ   ಹುಡುಗನ ಮೊಬೈಲ್  ನಿಂದ  "ಪ್ರ್ರೀತಿನೆ ಆ ದ್ಯಾವ್ರು ತಂದಾ  ಆಸ್ತಿ ನಮ್ಮ ಬಾಳಿಗೆ"  ಎಂಬ ಹಾಡಿನೊಡನೆ ಕರೆ ಬಂತು,  
ಹತ್ತಿರ ಹೋಗಿ ನೋಡಿದೆ  ಹುಡುಗನ ಪತ್ನಿ ಕರೆ ಮಾಡುತ್ತಿದ್ದಳು ..   ....  !!!!!!   



 



 




Tuesday, April 8, 2014

ಎಲೆಕ್ಸನ್ನು ಸಾ ಎಲೆಕ್ಸನ್ನು ......!! ಇದರ ಒಳಗೈತೆ ಬಾರಿ ಕನೆಕ್ಸನ್ನು ....!!! [ ಕಾಲ್ಪನಿಕ ಕಥೆ]


ಎಲೆಕ್ಸನ್ ಅಂದ್ರೆ  ಮುದ್ದೆ ತಿಂದಂಗೆ  





{ಮೊದಲ ವಿಚಾರ ಗೆಳೆಯರೇ   ಇಲ್ಲಿ ಬರೆದಿರುವುದು ಒಂದು ಸಂಪೂರ್ಣ  ಕಾಲ್ಪನಿಕ ಕಥೆ ಯಾವುದೇ ಘಟನೆಗೆ ,ಅಥವಾ  ಯಾವುದೇ ಪಕ್ಷಕ್ಕೆ ಈ ವಿಚಾರ ಸಂಬಂಧ ಪಟ್ಟಿರುವುದಿಲ್ಲಾ }



ಇಡೀ  ದೇಸಕ್ಕೆ  ಎಲೆಕ್ಸನ್ನು  ಬತ್ತದೆ ಅನ್ನೋ ಗಾಳಿ ಬೀಸ್ತು , ಇನ್ನು ನಮ್ಮ ದುರಾಸೆ ಪುರಕ್ಕೆ ಬರ್ದೇ ಇದ್ದಾತೆ , ಅಂಗೆ ಬೀಸೆ  ಬುಡ್ತು  ಎಲೆಕ್ಸನ್ನು ಗಾಳಿ ...! ಇನ್ನೆರ್ಡ್ ಮೂರು  ತಿಂಗಳಲ್ಲಿ   ಎಲೆಕ್ಸನ್ನು  ಬತ್ತದೆ  ಅನ್ನೋ ಸುದ್ದಿ .

 ಊರ ಲೀಡರುಗಳೆಂಬ ಕೆಲವು  ಜನ ಮೂಲೆಲಿದ್ದ  ಬಿಳೀ ಪಂಚೆ , ಜುಬ್ಬಾ  ಎಲ್ಲಾ  ತೊಳೆದು ಇಸ್ತ್ರೀ ಮಾಡಿ, ದುರಾಸೆ ಪುರದ  ಕಪಿಲೆ ಬಾವೀಲಿ  ಸ್ನಾನ ಮಾಡ್ಕಂಡು   ಫಳ ಫಳಾ  ಅಂತಾ ಹೊಳೀತಾ  ನಲಿಯಲು ಸುರು ಮಾಡುದ್ರು .

  ಇಡೀ  ಊರಿಗೆ ಎಲೆಕ್ಸನ್  ಜ್ವರಬಂದ ಮ್ಯಾಕೆ  ನಮ್ಮ  ಗೊಣ್ಣೆ ಗೋಪಣ್ಣನಿಗೆ ಬರ್ದೇ ಇದ್ದಾತೆ ., ಅವಂಗೂ ಸುರು ಆಯ್ತು. ಅಯ್ಯೋ ನಿಮಗೆ ನಮ್ಮ ದುರಾಸೆ ಪುರದ ಗೊಣ್ಣೆ ಗೋಪಿ  ಗೊತ್ತಿಲ್ವಾ ??

 ರೀ ಇವನ ಪರಿಚಯ ಇಲ್ಲಾಂದ್ರೆ  ಬಾಳಾ ಕಷ್ಟಾ , ದುರಾಸೆ ಪುರದ  ಪ್ರತೀ  ಘಟನೆಯಲ್ಲೂ ಇವನ ಹೆಸರಿಲ್ಲಾ ಅಂದ್ರೆ  ಅದು ಪಂಕ್ಸನ್ನೆ ಅಲ್ಲಾ ಕಣ್ರೀ,  ಪ್ರೈಮರಿ  ಸ್ಕೂಲ್ನಲ್ಲಿ  ಒಂದನೇ ಕ್ಲಾಸಿಂದ  ಎರಡನೇ ಕ್ಲಾಸ್ ವರೆಗೆ  ಚಡ್ಡೀ ಹಾಕಳ್ದೆ , ಯಾವಾಗಲೂ ಗೊಣ್ಣೆ ಸುರಿಸಿಕೊಂಡು ಓಡಾಡುತ್ತಾ ಇದ್ದ  ದಲ್ಲಾಳಿ  ಹಿಕ್ಮತ್ತೈಯ್ಯನ ಒಬ್ಬನೇ ಮಗ  ನಮ್ಮ ನಾಯಕ "ಗೊಣ್ಣೆ ಗೋಪಿ " ಶಾಲೆಗೇ ಬರುವ   ಹೈಕಳಿಂದ  ತಿಂಡಿ  ವಸೂಲಿ ಮಾಡೋದು ಇವನ ಚಾಳಿ , ಕೊಡದೆ ಇದ್ದ ಮಕ್ಕಳಿಗೆ  "ಚುರುಕಿನ ಸೊಪ್ಪಿನ  ಸೇವೆ " ಮಾಡುತ್ತಿದ್ದವ , ಸ್ವಾತಂತ್ರ್ಯ ದಿನಾಚರಣೆಗೆ  ಶಾಲಾ ಮಕ್ಕಳಿಗೆ ನೀಡಲು ತಂದಿದ್ದ ಸಿಹಿ ತಿಂಡಿಯನ್ನು  ಹೈಜಾಕ್  ಮಾಡಿದ್ದ ಪುಣ್ಯಾತ್ಮ,  ಪ್ರೌಡ ಶಾಲೆಯಲ್ಲಿ ಸ್ಕೊಲ್ ಮಾನಿಟರ್  ಆಗೋಗೆ  ಮೇಷ್ಟ್ರುಗೆ  ಅಡ್ಜಸ್ಟ್  ಮಾಡಿಕೊಂಡು  ಮಾನಿಟರ್ ಆಗಿ ಮೆರೆದಿದ್ದವ, ಅದ್ಯಾಕೋ  ಕಾಣೆ ದುರಾಸೆಪುರದ ಭಾಂದವ್ಯ ಬಿಡಲಾಗದೆ  ಹತ್ತನೇ ಕ್ಲಾಸ್ ನಲ್ಲಿ ಡುಮ್ಕಿ ಹೊಡೆದು , ರಾಜಕೀಯ ಸೇರ್ಬುಟ್  ದಾರಿ ಕಂಡ್ಕಂದ .

ಮೊದಲು ಇವನ ಚತುರತೆ  ಕಂಡ , "ಕೋಡಂಗಿ " ಪಕ್ಸದ  ಮುಖಂಡ  ಕಪ್ಪೆ ಸ್ವಾಮೀ  ಇವನನ್ನು  ಯುವ ಮುಖಂಡ ನಾಗಿ ಬೆಳೆಸಿದರು , ಅವರ ಗರಡಿಯಲ್ಲಿ ಪಳಗಿದ  ಈತ ಎಲ್ಲಾ ವರಸೆ ಕಲಿತ.  ಯಾವುದೇ ಸಮಾರಂಭಕ್ಕೆ  ಜನರನ್ನು ಜಮಾವಣೆ ಮಾಡೋದ್ರಲ್ಲಿ  ಇವನು ಭಾರಿ ನಿಸ್ಸೀಮ ಆಗಿಬಿಟ್ಟ . ಇಂತಿರ್ಪ ಗೊಣ್ಣೆ ಗೋಪಿ ಗೆ ಈ ಚುನಾವಣಾ ನಿರ್ವಹಣೆ ಜವಾಬ್ದಾರಿ ಬಂದೆ ಬಿಟ್ಟಿತು . ದುರಾಸೆ ಪುರದಲ್ಲಿ  ತನ್ನ ಅಧ್ಯಕ್ಸತೆಯಲ್ಲಿ ಎಲೆಕ್ಸನ್  ಪೂರ್ವ ಸಿದ್ದತಾ ಸಭೆಯನ್ನು  ಕರೆದೆ ಬಿಟ್ಟ .

 ನೆರದಿದ್ದ  ತನ್ನ ಪಟಾಲಂ ಗಳಿಗೆ ಹೇಳುತ್ತಾ , "ನೋಡ್ರಪ್ಪಾ,  ನಿಮಗೆಲ್ಲಾ   ಗೊತ್ತಿದ್ದಂಗೆ ಈಗ ಎಲೆಕ್ಸನ್ನು ಬತ್ತಾ  ಅದೇ , ಇಡೀ  ದೇಸವೇ  ಎಲೆಕ್ಸನ್ನು ಇಚಾರದಲ್ಲಿ ಮುಳಗದೇ .    ನಮ್ಮ ದುರಾಸೆ ಪುರದ ಎಲೆಕ್ಸನ್ ಬಗ್ಗೆ ನಮ್ ಪಕ್ಸದ ಮುಖಂಡರು  ಬೋ ಆಸೆ  ಮಡಿಕಂಡವ್ರೆ , ಸತಾಯ ಗತಾಯ  ಇಲ್ಲಿ ಗೆಲ್ಲೇ ಬೇಕೂ ಅಂತಾ ಏಳವ್ರೆ  ನಿಮ್ಮ ನೆಮ್ಕಂಡು  ಆಯ್ತು ಅಂತಾ  ಒಪ್ಕಂಡ್ ಬಂದಿವ್ನಿ , ಏನ್   ಯೋಳ್ರಪ್ಪಾ , ಹೆಂಗ್ ಮಾಡೂದು "?, ಅಂತಾ ಕಿಡಿ ಹಚ್ಚಿ ಬಿಟ್ಟ .

ಸಭೆಯಲ್ಲಿ ಗುಸು ಗುಸು  ಪಿಸು ಪಿಸು ಶುರು ಆಯ್ತು,  "ಏನ್ ಎಲೆಕ್ಸನ್ನು ಮಾಡಾಕಾಯ್ತದೆ ,  ರೇಟು ಏರ್ಕಂಡ್ ಕೂತದೆ, ಕುಂತರೂ ಕಾಸು ನಿಂತರೂ ಕಾಸು , ಬೊ  ಕಸ್ಟಾ ಕಣಪ್ಪಾ , ಸವಾಸ, ಅದ್ಸರೀ  ಏನಂತೆ , ನಮ್ಮೂರ ಬಜೇಟು , ದುರಾಸೆ ಪುರದಲ್ಲಿ  ಹತ್ರ ಹತ್ರ   ಲಕ್ಶ   ಓಟವೇ ," ಅಂತಾ ಗಣೇಸ ಬಾಯ್ಬುಟ್ಟ .

ಗೊಣ್ಣೆ  ಗೋಪಿ ಮಾತಾಡಿ , ಲೇ  ದುರಾಸೆ ಪುರದಲ್ಲಿ ಎಲೆಕ್ಸನ್ ಗೆ ಅಂತಾ ಎಲ್ಲಾ ಯವಸ್ತೆ ಆಗದೆ , ಆ ದುಗ್ಗಾಣಪ್ಪ ಅವ್ರು   ತೀರ್ಥ  ಯವಸ್ತೆ  ಮಾಡ್ತೀನಿ ಅಂತಾ  ಯೆಳವ್ರೆ , ಪ್ರಚಾರಕ್ಕೆ ಅಂತಾ  ಹೊಸ ಬಟ್ಟೆ ಹೊಲಿಸಿಕೊಳ್ಳಲು  ನಮ್  ಗುಂಪಿನ ಎಲ್ರುಗೂ ತಲಾ ಐದೈದು ಸಾವ್ರಾ  ಕೊಟ್ಟವ್ರೆ, ಉಳಿಕೆ ಖರ್ಚು  ಏನ್ ಬತ್ತದೆ ಅಂತಾ ನಮ್ಮನೆ  ಕೇಳ್ತಾ ಅವ್ರೆ , ಅದ್ಕೆ ನಾನು ನಮ್ ಕಾರ್ಯಕರ್ತರ ಕೇಳಿ ಯೋಳ್ತೀನಿ  ಅವರಿಗೆ  ಯೋಳಿ ಬಂದಿವ್ನಿ  ,  ಇವತ್ತು  ನಿಮ್ಮೆಲ್ರ  ಕರ್ದೀವ್ನಿ ,  ಅದೇನ್ ಯೋಳ್ರಪ್ಪಾ  ಈಗ . ಅಂದು  ಎಲ್ಲರ ಕಡೆಗೆ  ನೋಡಿದ .

ಅಲ್ಲೇ ಇದ್ದಾ  ಕ್ಯಾತ  ,  ಅಲ್ಲಾ ಕಣಣ್ಣಾ , ಅವ್ರಿಗೆ  ಗೊತ್ತಿಲ್ವೆ, ಖರ್ಚು ಎಂಗದೆ ಅಂತಾ , ನಮ್ ದುರಾಸೆ ಪುರ ಬಾಳ  ದೊಡ್ಡ ಊರು,  ಸುಮಾರು   ಒಂದು ಲಕ್ಸ  ವೋಟವೆ,  ಮನೆ ಮನೆ  ಸುತ್ತಿ  ಬಿಸ್ಲಲ್ಲಿ   ಎಲ್ಲಾ  ಜನಗಳ್  ತಾವ್ ಓಟ್  ಕೇಳೂಕ್  ಓದ್ರೆ ,  ಕೆಲವ್ರು , ಏನ್ ಕೊಟ್ಟೀರಿ ಅಂತಾರೆ . ಆಗ್ಲೇ "ದಗಲ್ಬಾಜಿ " ಪಕ್ಸದವ್ರು ,  ಜನಗಳ್ಗೆ  ಪರಸಾದ ತೀರ್ಥ ಕೊಡೂಕೆ , ರೆಡಿ ಆಯ್ತಾವ್ರೆ , ಇನೂ ಎಲೆಕ್ಸನ್  ಯಾವತ್ತೂ ಅಂತಲೇ ಗೊತ್ತಿಲ್ಲಾ, ಆಗ್ಲೇ ಎಲ್ಲರ ಮನೆ ಗೆ ಅವರ ಪಕ್ಸದ ಬಾವುಟದ ಜೊತ್ಗೆ   ಐನುರ್ ರುಪಾಯಿ   ಕೊಟ್ಟವರಂತೆ , ಅದ್ಕೆ ಮೆಗಲ್ ಕೇರಿ  ಜನ  ಗದ್ದೆ ಕೆಲಸಕ್ ಬರಾಕಿಲ್ಲಾ ಅಂತಾ  ಕೂತವೆ . ಇನ್ನು ನಾಮು ಅವರ ಸರೀ  ಮಾಡ್ಕದೆ  ಓದ್ರೆ , ಇಪ್ಪತ್ಸಾವ್ರಾ ವೋಟು  ನಾಮ , ಆಯ್ತದೆ .  ಅದ್ಕೆ  ಮ್ಯಾಲ್ನವರ್ಗೆ   ಯೋಳಿ ಸರಿಯಾಗಿ  ಬಜೆಟ್  ಕೊಡೂಕೆ , ಅಂದು ಮಾತನ್ನು ಹೊಸ ದಿಕ್ಕಿಗೆ ತಿರುಗಿಸಿದ.

ಈ ಮಾತನ್ನು ಕೇಳಿ  ಗೊಣ್ಣೆ ಗೋಪಿ   ಬೆಚ್ಚಿ ಬಿದ್ದ ,  ಇವರ ಪಕ್ಷಕ್ಕಿಂತ  ಬೇರೆ ಪಕ್ಷದವರು  ಬೇಗ ಶುರು ಮಾಡಿದ್ರೆ  ಜನಗಳ  ಮನ ಒಲಿಕೆ  ಕಷ್ಟಾ ಆಗುತ್ತಿತ್ತು. ಅದಕ್ಕೆ ನಿನ್ನೆ ತಾನೇ ಇವನಿಗೆ   "ಕೋಡಂಗಿ " ಪಕ್ಸದ ಮುಖಂಡ  ಕಪ್ಪೆ ಸ್ವಾಮೀ  ಇವನಿಗೆ  ಹತ್ತು ಲಕ್ಷದ  ಮುಂಗಡ ನೀಡಿದ್ದರು.  ಇದು ಇವರಿಗೆ ತಿಳಿದರೆ ನನ್ನ ಮಟ್ಟಾ  ಹಾಕ್ತಾರೆ ಅಂತಾ ತಿಳಿದು, ಯೋಚಿಸಿದವಂತೆ ನಾಟ್ಕಾ ಮಾಡಿ ಸ್ವಲ್ಪ ಹೊತ್ತು ಬಿಟ್ಟು ನೋಡ್ರಪ್ಪಾ,  ಇನ್ನೂ ಪಕ್ಸದವ್ರಿಂದ ಕಾಸ್ ಬಂದಿಲ್ಲಾ , ಆದ್ರೆ ಪಕ್ಸ್ದ  ಮರ್ವಾದೆ ಪಶ್ನೆ , ಅದ್ಕೆಯಾ  ನಾನು ಒಂದು ಪಿಲಾನ್  ಮಾಡಿವ್ನಿ  . ಎಂಗಾರು ಮಾಡಿ ನಮ್ಮ ಚಿಕಪ್ಪನ ತಾವು  ಎರಡು ಲಕ್ಷ ತತ್ತೀನಿ,  ಮೊದಲ್ನೇ  ಆಟ ನಂದೆ ಸುರು ಆಗ್ಲಿ. ಲೇ  ಗಣೇಸ  ನಮ್ಮೂರ ದ್ಯಾವ್ರ್ಗೆಪೂಜೆ  ಮಡಿಕಳುಮ ಕಲಾ  ,  ಆ ಪೂಜಾರಪ್ಪನ ಕರಿ  ಮೊದ್ಲು, ಬಂದವರೆಲ್ಲರಿಗೂ ಸೀ ಊಟ  ಮೊದ್ಲು ಆಕ್ಸಿ,  ಮುಂದಿನ ವಾರ  ಊರ್ ಒರ್ಗಿರೋ ದ್ಯಾವ್ರ ಪೂಜೆ ಮಡೀಕಂದು   ಎಲ್ರಿಗೂ ಬಾಡೂಟ  ಜೊತೆಗೆ  ಔಸ್ತಿ[ ಹೆಂಡಾ]    ಕೊಡುಮ , ಅಂತಾ ಹೇಳ್ದಾ,

ಹಾಗು ಹೀಗೂ ಮುಗಿದ ಸಭೆಯಲ್ಲಿ  ಪಕ್ಸದಿಂದ ಹೆಚ್ಚಿನ ಕಾಸು ಪಡೆಯಲು ತೀರ್ಮಾನ ಆಯ್ತು. ಮಾರನೆಯ ದಿನ ದೇವಾಲಯದ  ತಮ್ಮಡಪ್ಪ ಗಳನ್ನೂ ಕರೆಸಿ, ಅವರಿಗೆ ತಲಾ ಐದು ಸಾವಿರ ಕೊಟ್ಟ  ಗೊಣ್ಣೆ ಗೋಪಿ , ಸ್ವಾಮೀ ಪೂಜೆ  ಜೋರಾಗಿ ನಡೆಸಿ , ಅಲಂಕಾರ ಜೋರಾಗಿ ಇರಲಿ, ನಮ್ ಪಕ್ಸದ  ಮುಖಂಡರು  ಬತ್ತಾರೆ , ಊರಿನ ಮರ್ವಾದೆ  ಕಾಪಾಡೋ ಜಾವಾಬ್ದಾರಿ  ನಿಂದೆ ಅಂದಾ , ಮುಂದೆ ಇನ್ನೂ   ನಿಮಗೆ ಯವಸ್ತೆ ಮಾಡ್ತೀನಿ ,  ಹಾಲಲ್ಲಾದರೂ ಹಾಕಿ  ನೀರಲ್ಲಾದರೂ  ಹಾಕಿ ಅಂದು  ಅಡ್ಬಿದ್ದ .  ಖುಷಿಯಿಂದ ಹಣ ಪಡೆದ ಅವರು, ನೀವೇನು ಯೋಚನೆ ಮಾಡ್ಬ್ಯಾಡಿ ಗೋಪಣ್ಣ  , ಮುಂದಿನದು ನಾವ್ ನೋಡ್ಕತೀವಿ, ಬುಡಿ  ಅಂದರು .

ಮೊದಲನೇ ಸೀ ಊಟದ ಪೂಜೆಗೆ  "ಕೋಡಂಗಿ ಪಕ್ಸ" ದ ರಾಜ್ಯ ಮುಖಂಡರೆ  ದಾವಿಸಿ ಬಂದ್ರು,  ಬಂದ  ಮುಖಂಡರನ್ನು  ಅದ್ದೂರಿಯಾಗಿ ಮೆರವಣಿಗೆ ಮೂಲಕ  ,  ಇಸ್ಕೂಲ್  ಹೈಕಳ ಕೈಲಿ ಬ್ಯಾಂಡ್ ಭಾರಿಸುತ್ತಾ , ದೇವಾಲಯಕ್ಕೆ ಕರೆ ತಂದು  ದೇವರ ಮುಂದೆ ನಿಲ್ಲಿಸಿ  ದೊಡ್ಡ ಹಾರಾ ಹಾಕಿಸಿ , ಶಾಲು ಹೊದಿಸಿ,  ಸನ್ಮಾನ ಮಾಡಿ , ಸುಮಾರು ಇಪ್ಪತ್ತು ಸಾವಿರ ಜನರನ್ನು ಕರೆಸಿ  ಇವರ ಭಾಷಣ  ಕೇಳುವಂತೆ ಮಾಡಿದ್ದ .   ಅವತ್ತು ರಾತ್ರಿ ಅಲ್ಲೇ ಇದ್ದ  ಅತಿಥಿ ಗೃಹದಲ್ಲಿ  ಅದ್ದೂರಿಯಾಗಿ  ಬಾಡೂಟ ಹಾಗು ಎಣ್ಣೆ ಸಮಾರಾಧನೆ  ಮಾಡಿದ   ,   ಚುನಾವಣಾ ಘೋಷಣೆಗೆ ಮೊದಲೇ  ಗೊಣ್ಣೆ ಸಿದ್ದ ಮಾಡಿದ್ದ  ಸಿದ್ದತೆ ನೋಡಿ ಖುಷಿ ಪಟ್ಟ ಇವರು, " ಗೋಪಣ್ಣ  ಯೊಸ್ನೆ  ಮಾಡ ಬ್ಯಾಡ ಮೊದಲು  ಪಕ್ಸ ಗೆಲ್ಲಿಸು ಆಮೇಲೆ ನಿನ್ನ  ಸೂಕ್ತವಾಗಿ ಗೌರವಿಸುತ್ತೇವೆ  ಅಂದರು  ಜೊತೆಯಲ್ಲಿದ್ದವರಿಗೆ  ನೋಡ್ರಯ್ಯ   ಗೋಪಣ್ಣ ನಿಗೆ  ಬೇಕಾದ ಫಂಡ್ ಕೊಡಿ ಕಡಿಮೆ ಮಾಡ್ಬೇಡಿ" ಅಂತಾ ಫಾರ್ಮಾನ್ ಹೊರಡಿಸಿದರು .

ಮಾರನೆಯ ದಿನದಿಂದ ಗೊಣ್ಣೆ ಗೋಪಿ  ಆಟ   ಶುರು ಆಯ್ತು.ಎರಡು ಮೂರು  ದಿನ ಬಿಟ್ಟು  ದುರಾಸೆ ಪುರದ ಪಕ್ಕದಲ್ಲಿ  ಒಂದು ಚಿತ್ರದ ಶೂಟಿಂಗ್ ನಡೆಯುತ್ತಿತ್ತು, ಅಲ್ಲಿದ್ದ  ಪ್ರಖ್ಯಾತ ನಟಿ  ಮೋಹಿನಿ ಯನ್ನು ಭೇಟಿ ಮಾಡಿ  ಆಕೆ ನಡೆಸುತ್ತಿದ್ದ   ಸಂಸ್ಥೆಗೆ  ಸುಮಾರು ಮೂವತ್ತು ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿ,  ನಿಮಗೆ   ಸನ್ಮಾನ ಮಾಡ್ತೀನಿ ಅಂತಾ ಕರೆದು ಕೊಂಡು  ಬಂದು  ಊರ ತುಂಬಾ ಮೆರವಣಿಗೆ ಮಾಡಿಸಿ  ದೊಡ್ಡ ಕಾರ್ಯಕ್ರಮ ಮಾಡಿ ಊರವರ ಎದುರು ದೊಡ್ಡ ಮನುಷ್ಯನಂತೆ ಪೋಸ್ ಕೊಡುತ್ತಾ ಸಾಗಿದ,  ತನ್ನನ್ನು ವಿರೋಧಿಸುತ್ತಾ  ಇದ್ದ  ಕೆಲ ಊರ  ಹಿರಿಯರ ಕರೆದು ಮೋಹಿನಿ ಕೈಲಿ ಸನ್ಮಾನ  ಮಾಡಿಸಿ ಅವರನ್ನೂ ಬುಟ್ಟಿಗೆ ಹಾಕಿಕೊಂಡ ,  ನಂತರ  ತಾನೇ ಮುಂದೆ ನಿಂತು ಮೋಹಕ ನಟಿ ಮೋಹಿನಿ ಗೆ ಸನ್ಮಾನಮಾಡಿ ಅವಳಿಗೊಂದು ದುಭಾರೀ ಸೀರೆ, ಶ್ರೀ  ಗಂಧದ  ಮೂರ್ತಿ ನೀಡಿದನು,  ಅದನ್ನು ಸ್ವೀಕರಿಸಿದ ನಟಿ ದೇಣಿಗೆ ಪಡೆದ ಮುಲಾಜಿಗೆ  ಒಳಪಟ್ಟು   ನಮ್ಮ ಗೊಣ್ಣೆ ಗೋಪಿಯನ್ನು ಹೀರೋ ಎಂಬಂತೆ  ಹೊಗಳಿ  ಆಗಸ  ತೋರಿದಳು  . ಅವಳ ಜೊತೆ ಹಲ್ ಕಿರಿಯುತ್ತಾ  ಫೋಟೋ ತೆಗೆಸಿಕೊಂಡ  ಗೊಣ್ಣೆ ಗೋಪಿ   ಇದೆಲ್ಲವೂ ಸರಿಯಾಗಿ ಪತ್ರಿಕೆಗಳಲ್ಲಿ ಬರುವಂತೆ ಮಾಡಲು   ಅಲ್ಲಿನ  ಸ್ಥಳೀಯ  ಪೇಪರ್  ಏಜೆಂಟ್  ಗಳೊಂದಿಗೆ ವಿಶ್ವಾಸದಿಂದ ಇದ್ದ.

 ಚುನಾವಣಾ ಘೋಷಣೆಗೆ ಇನ್ನೇನು ಸಮಯ ಹತ್ತಿರ ಆಗುತ್ತಿತ್ತು, ತನ್ನ ಅಂತಿಮ ಟ್ರಂಪ್ ಕಾರ್ಡ್ ಊರ ಹೊರಗಿನ ದ್ಯಾವ್ರ ಪೂಜೆ ಸಿದ್ದತೆ  ಶುರು ಮಾಡಿದ, ಪೂಜೆಯ ದಿನ ದುರಾಸೆ ಪುರದ ತುಂಬೆಲ್ಲಾ  ಬಾಡೂಟದ ಘಮ ಘಮ  ಸುವಾಸನೆ ಹರಡಿ  ಹಲವು ಮುಖಂಡರು ಅವರ ಪಟಾಲಂ ಗಳನ್ನೂ ಎಳೆದು ತಂದಿತ್ತು . ಜೊತೆಗೆ  ಹಿಂದಿನ ದಿನ ಬಂದಿದ್ದ ತೀರ್ಥದ ಲಾರಿ  ಹಲವರ  ನಿದ್ದೆ ಕೆಡಿಸಿತ್ತು .   ಮಾರನೆ ದಿನ ದೇವರ ಪೂಜೆ ಅದ್ದೂರಿಯಾಗಿ   ಮಾಡಲಾಯಿತು  ,   ಬಂದಿದ್ದ ಸಾವಿರಾರು ಜನರಿಗೆ ಮಧ್ಯಾಹ್ನ   ಬಾಡೂಟ ಮಾಡಿಸಿ,   ಕೆಲವರಿಗೆ ಎಣ್ಣೆ ಹೊಡೆಸಿ,   ತೃಪ್ತಿ ಪಡಿಸಿದ್ದ  ರಾಜಧಾನಿಯಿಂದ  ಬಂದಿದ್ದ  ಆರ್ಕೆಸ್ಟ್ರಾ  ತಂಡದವರು   ಜನರನ್ನು ರಂಜಿಸುತ್ತಿದ್ದರು, ಇತ್ತಾ  ನಮ್ಮ ಗೊಣ್ಣೆ ಗೋಪಿ ತನ್ನ ಎಲೆಕ್ಸನ್  ಬಜೆಟ್ ತಯಾರಿ ನಡೆ ಸಿದ್ದ. ಇಷ್ಟೆಲ್ಲಾ  ಆಗ್ತಾ ಇದ್ದಂತೆ ಚುನಾವಣಾ ದಿನಾಂಕ  ಘೋಷಣೆ ಆಗಿಬಿಟ್ಟಿತು , ಎಲ್ಲ ಪಾರ್ಟಿಯವರು ಮೈಕೊಡವಿ ಎದ್ದು  ಕುಂತರು .

 ಚುನಾವಣಾ ಪೂರ್ವದಲ್ಲೇ  ತನ್ನದೇ ಆದ ರೀತಿಯಲ್ಲಿ ಪ್ಲಾನ್ ಮಾಡಿ ತನ್ನ ಪಕ್ಷದವರ ಸಹಕಾರ ಪಡೆದು ದುರಾಸೆಪುರದಲ್ಲಿ  ತನ್ನದೇ ಆದ  ಅಲೆ ಏಳುವಂತೆ  ಮಾಡಿದ್ದ, ಊರಲ್ಲಿ ಎಲ್ಲರ ಬಾಯಲ್ಲೂ ನಮ್ಮ ಗೊಣ್ಣೆ ಗೋಪಿ ಬಗ್ಗೆಯೇ ಮಾತುಗಳು, ಹೀಗಾಗಿ  ದುರಾಸೆ ಪುರದಲ್ಲಿ  ಗೊಣ್ಣೆ ಗೋಪಿ ಬೆಂಬಲ ಪಡೆದ ಅಭ್ಯರ್ಥಿ ಗೆಲ್ಲೋದು ಗ್ಯಾರಂಟೀ ಅನ್ನೋದು  ಮಾತಾಯ್ತು. ಈ ನಡುವೆ  ನಮ್ಮ ಗೊಣ್ಣೆ ಗೋಪಿಯ ಸೆೆಳೆಯಲು ಹಲವು ಪಾರ್ಟಿಗಳು ಮುಂದಾದವು,  ಎಲ್ಲರಿಗೂ  ಸಮಾಧಾನದ  ಉತ್ತರ ಹೇಳಿ, ತನ್ನ ಬೆಳೆಸಿದ ಪಾರ್ಟಿಯ  ಮುಖ್ಯಸ್ತರನ್ನು ಭೇಟಿ  ಮಾಡಲು ಹೊರಟ .

ಕೋಡಂಗಿ ಪಕ್ಸದ  ಮುಖಂಡರು ಇವನನ್ನು  ನಗುಮುಖದಿಂದ  ಸ್ವಾಗತಿಸಿ   ,  ಗೋಪಣ್ಣ  , ದುರಾಸೆ ಪುರದಲ್ಲಿ ನಮ್  ಪಕ್ಸದ  ಕ್ಯಾಂಡಿಡೇಟ್  ಗೆಲ್ಲಿಸ ಬೇಕೂ ಕಣಪ್ಪಾ, ನೀನು ಬಹಳ ಚೆನ್ನಾಗಿ  ಆಗ್ಲೇ ತಯಾರಿ ಮಾದ್ಕಂಡಿರೋದು  ಬಹಳ ಒಳ್ಳೆದಾಯ್ತು , ಅಂದ್ರು , ಆದ್ರೆ ಹಣದ ವಿಚಾರವೇ ಬರ್ತಿಲ್ಲಾ, ಗೊಣ್ಣೆ ಗೋಪಿ   ಎಲಾ  ಎಲಾ ,  ಇವಯ್ಯ  ಕಾಸಿನ ಇಚಾರ ಎತ್ತುತ್ತಿಲ್ಲವಲ್ಲಾ ಅಂತಾ  ಯೋಚಿಸಿ,  ಅಯ್ಯೋ ಬುಡಿ ಸಾ  ಅದೆಲ್ಲಾ ಏನ್ ಮಹಾ , ಇನ್ನೂ ಮಾಡೋದು  ಬಾಳ  ಐತೇ , ಅಂದಾ,  ಏನಾದ್ರೂ ಮಾಡಪ್ಪಾ,  ಆದ್ರೆ  ನಮ್ ಪಕ್ಸ ಗೆಲ್ಲೋ ಹಾಗೆ ಮಾಡು ಅಂದು ಮುಖಂಡರು .  ಇದ್ಯಾಕೋ ಸರಿಯಿಲ್ಲಾ ಅನ್ನಿಸಿ ತಾನೇ ಹಣದ ಬಗ್ಗೆ ಪ್ರಸ್ಥಾಪ  ಮಾಡಿದ .

ಸಾ ನಮ್ ಲೀಡ್ರೂ  ಕಪ್ಪೆ ಸ್ವಾಮಿಗಳು  ಆಶೀರ್ವಾದ  ಮಾಡಿದ್ದರಿಂದ  ಇಲ್ಲಿಗಂಟಾ ಏಗ್ದೆ , ಇನ್ಮುಂದೆ ಬೋ ಕಷ್ಟಾ  ಸಾ, ಆಗಾಕಿಲ್ಲ. ಕೊಟ್ಟ ಹತ್ತು ಲಕ್ಸ ನಮ್ಮದುರಾಸೆ ಪುರಕ್ಕೆ ಹತ್ತು ದಿನಕ್ಕೆ  ಸಾಕಾಲಿಲ್ಲ, ನಾನೇ ಅಲ್ಲಿ ಇಲ್ಲೇ ಸಾಲ ಸೋಲ ಮಾಡಿ ಪಕ್ಸದ ಮಾನಾ ಕಾಪಾಡಕ್ಕೆ   ಹತ್ತು ಲಕ್ಸ  ಹಾಕಿವ್ನಿ . ದಯವಿಟ್ಟು, ಮೊದ್ಲು ನಂ ಹತ್ತ ಲಕ್ಶ ಕೊಡಿ,  ಆಮ್ಯಾಕೆ ನಿಮಗೆ ಗೊತ್ತಲ್ಲಾ  ಎಲೆಕ್ಸನ್   ಇನ್ನು   ಒಂದು ತಿಂಗಾ  ಅದೇ ಅಲ್ಲಿಗಂಟಾ  ಜನಗಳ ನಮ್ಮ ಕೈಯ್ಯಲ್ಲಿ ಮಾಡಿಕೋ ಬೇಕು , ಇಲ್ಲಾಂದ್ರೆ  ದಗಲ್ ಬಾಜಿ ಪಕ್ಸದವರು  ನಮ್ ಪಿಲಾನ್ ಉಲ್ಟಾ  ಮಾಡ್ತಾರೆ ಅಷ್ಟೇಯ  ಅಂದ.

ಎಷ್ಟು ಬೇಕಾಗುತ್ತೆ  ಗೋಪಣ್ಣ  ದುರಾಸೆ ಪುರದ ಎಲೆಕ್ಸನ್ ಗೆ?  ಅಂದ್ರು ಮುಖಂಡರು, ನಿಮಗೆ ಗೊತ್ತಲ್ಲಾ ಸಾ,  ಇನ್ನು ಬೊ ಕೆಲ್ಸಾ ಆಗ್ಬೇಕ್  ಅಂದಾಜು   ಎಲ್ಡ್ ಕೋಟಿ  ಬಜೆಟ್ ಕೊಡಿ , ಉದ್ದಾ ತುಂಡಾ ಆಮ್ಯಾಕೆ ನೋಡುವಾ , ಅಂದಾ,

ಬೆಚ್ಚಿ ಬಿದ್ದ  ಮುಖಂಡರು,  ಏನಪ್ಪಾ ಗೋಪಣ್ಣ , ಭಾರಿ ದುಬಾರಿ ಆಯ್ತು ನಿನ್ನ ಬಜೆಟ್ , ನಮ್ ಪಕ್ಸದ ಮುಖಂಡರು  ದುರಾಸೆ ಪುರಕ್ಕೆ ಅಂತಾ  ಐವತ್ತು ಲಕ್ಷ  ಬಜೆಟ್ ನಿಗದಿ ಮಾಡಿದ್ದಾರೆ , ನೀನು ನೋಡಿದ್ರೆ ಆಕಾಶ  ತೊರಿಸುತ್ತಿ  ಅಂದ್ರು .

ಗೊಣ್ಣೆ ಗೋಪಿ  :-) ಓ ಬುಡಿ ಇದಾಗದ್ ಕೆಲ್ಸಾ , ಯಾಕೋ  ಬಜೆಟ್ ಸರಿಯಾಗಿ   ಕೊಡೋಕೆ  ಹಿಂಜರಿತಾ ಇದ್ದೀರಿ,  ಮ್ಯಾಲ್ನವರ್ ತಾವ್ ನಾನೇ ಮಾತಾಡ್ತೀನಿ ಅಂದಾ ,

ಇವನು ಮೇಲಿನವರ ಜೊತೆ ಮಾತಾಡಿದ್ರೆ  ನನ್ನ ಬಣ್ಣ ಬಯಲಾಗುತ್ತೆ ಎಂದು ಅಂಜಿದ  ಮುಖಂಡರು , ಒಂದು ನಿಮಿಷ ಇರು  ಗೋಪಣ್ಣ, ನಾನೇ ನಿನ್ನ ಪರವಾಗಿ ಮೇಲಿನವರ ಜೊತೆ ಮಾತಾಡುತ್ತೇನೆ ಅಂದು ಫೋನ್ ಮಾಡಿದಂತೆ ನಟಿಸಿ , ನೋಡಪ್ಪಾ  ಮೇಲಿನವರನ್ನು ಸಮಾಧಾನ ಮಾಡಿ  ನಿನಗೆ ಒಂದು ಕೋಟಿ  ಕೊಡಿಸ ಬಲ್ಲೆ ಅಷ್ಟೇ  ಅಂದ್ರು .

ಒಗ್ಲಿ ಬುಡಿ ಸಾ ನಮ್ ನಮ್ಮಲ್ಲಿ ಯಾಕೆ ಜಗಳಾ ,  ನಮ್ ಹೈಕ್ಳಾ , ಒಂದು ಮಾತು ಕೇಳ್ತೀನಿ ಅವು ಹೂ ಅಂದ್ರೆ  ಸರಿ ಇಲ್ಲಾಂದ್ರೆ  , ತಪ್ಪು ತಿಳಕಾ ಬ್ಯಾಡಿ , ಅಂದಾ ಗೊಣ್ಣೆ ಗೋಪಿ . ಹೊರಡಲು  ಎದ್ದುನಿಂತಾ ...!

ಇವನ ಮಾತು ಬೇರೆ ದಿಕ್ಕಿಗೆ ತಿರುಗಿದ್ದನ್ನು ಕೇಳಿ ಮುಖಂಡರು  ಏನು  ಗೋಪಣ್ಣ , ಯಾಕಪ್ಪಾ  ಕೋಪ ಮಾಡ್ಕಂಡೆ  ಕುಂತ್ಕೋ  ಮಾರಾಯ  ಮಾರಾಯ  ಅಂದು, ಇದ್ಯಾಕೆ  ಗೋಪಣ್ಣ   ಏನೋ ಹೊಸ ಮಾತು  ಬರ್ತಾ ಇದೆ ಇವತ್ತು ಅಂದರು .

ಹೂ ಸಾ  ಕಮಂಗಿ ಪಕ್ಸದ ಕೆಲವರು  ಆಗ್ಲೇ ಬಂದವರೆ  ದುರಾಸೆ ಪುರದಲ್ಲಿ ಅವರ   ಕ್ಯಾಂಡಿಡೇಟ್   ಪರವಾಗಿ ಬಂದ್ರೆ  ಐದು ಕೊಡ್ತೀನಿ ಅಂತಾ ಅವ್ರೆ , ಆದ್ರೆ ನಮ್ಮ ಪಕ್ಸದ  ಮಾನ ಮುಖ್ಯ ಅಲ್ವೇ . ಅದಕ್ಕೆ ತಮ್ ತವ ಬಂದು ಈ ಬಿಕ್ಸೆ ಬೇಡ್ತಾ ಇವ್ನೀ  . ಅಂದಾ ಗೊಣ್ಣೆ ಗೋಪಿ.

ಇದ್ಯಾಕೋ ಕೈ ಕೊಡೊ ಅಸಾಮಿ ಅಂದುಕೊಂಡ  ಮುಖಂಡರು , ಅಲ್ಲಾ ಗೋಪಣ್ಣ, ನಿಮ್ಮಂತಾ  ನಿಷ್ಠಾವಂತರನ್ನು   ನಮ್ಮ  ಕೋಡಂಗಿ ಪಕ್ಷ ಕಳೆದು ಕೊಳ್ಳೋಕೆ  ರೆಡಿ ಇಲ್ಲಪ್ಪಾ,  ಅದರಲ್ಲೂ ನೀನು ನಮ್ಮ ಪಕ್ಸದ  ಆಸ್ತಿ ಇದ್ದಹಾಗೆ ,  ತಡಿ ಈಗಲೇ ಇದನ್ನು ಇತ್ಯರ್ಥ   ಮಾಡೋಣ, ಅಂತಾ,  ಗೊಣ್ಣೆ ಗೋಪಿಯನ್ನು   ಒಳ ಕೋಣೆಗೆ ಕರೆದು ಕೊಂಡು  ಹೊದ್ರು.






ಸಧ್ಯ  ನಮ್ ಪರ್ಪಂಚದಲ್ಲಿ ಎಲೆಕ್ಸನ್  ಇಲ್ಲಾ 



ಒಳಗಡೆ ಡೀಲ್  ಶುರು  ಆಯ್ತು, "ನೋಡು ಗೋಪಣ್ಣ  ನೀನೂ ಬಹಳ ವರ್ಷದಿಂದ ಪಕ್ಷಕ್ಕಾಗಿ ದುಡಿದೆ , ನಿನ್ನ ಬಗ್ಗೆ ನನಗೂ ಕನಿಕರ ಇದೆ,  ಒಂದು ಕೆಲ್ಸಾ ಮಾಡು  ಇವತ್ತೇ ರಾಜ್ಯ ಮುಖಂಡರನ್ನು ಇಬ್ಬರೂ ಭೇಟಿ ಯಾಗೋಣ , ನೀನು ದುರಾಸೆ ಪುರದ ಎಲೆಕ್ಸನ್ ಬಜಟ್  ಹತ್ತು  ಕೋಟಿ  ಕೇಳು,  ಹಾಗು ಹೀಗೂ ಎಳೆದಾಡಿ  ಏಳು ಕೋಟಿಗೆ  ನಿಲ್ಲೋಹಾಗೆ ನಾನು ನೋಡ್ಕೋತೀನಿ , ಅದರಲ್ಲಿ  ಮೂರು ಖರ್ಚು ಮಾಡು  ಉಳಿದ ನಾಲ್ಕರಲ್ಲಿ   ಇಬ್ಬರೂ ಸಮವಾಗಿ ಹಂಚಿಕೊಳ್ಳೋಣ ," ಏನಂತೀಯೇ ಅಂದ್ರು .

ಈಗ ಬೆಚ್ಚಿ ಬೀಳುವ ಸರದಿ  ಗೊಣ್ಣೆ ಗೋಪಿಯದಾಗಿತ್ತು , ಅಂದೇ ಮುಖಂಡರ ಬಳಿ  ಇಬ್ಬರೂ  ತೆರಳಿ , ದುರಾಸೆ ಪುರದ ಎಲೆಕ್ಸನ್ ಬಜೆಟ್  ಏಳುಕೋಟಿಗೆ  ನಿಗದಿ ಪಡಿಸಿಕೊಂಡರು . ಚುನಾವಣಾ ಹಣಾಹಣಿ   ಆಯಿತು, ನಮ್ಮ ಗೊಣ್ಣೆ ಗೋಪಿ ಎಲೆಕ್ಸನ್ ಗಾಗಿ ಸ್ಥಳೀಯ  ಗುತ್ತಿಗೆದಾರರು, ವ್ಯಾಪಾರಿಗಳು, ಮುಂತಾದ ಕುಳ ಗಳಿಂದ  ಹಣ ಸಂಗ್ರಹಿಸಿ, ಅದ್ದೂರಿ ಚುನಾವಣೆ  ತಯಾರಿ ಮಾಡಿದ,  ಗೊಣ್ಣೆ ಗೋಪಿಯ ಶಿಷ್ಯ ಕೋಟಿ ಪ್ರತಿ ದಿನ  ಇಂತಿಷ್ಟು ಹಣ ಪಡೆದು   ಹಣದ ಹೊಳೆಯಲ್ಲಿ ತೇಲಾಡಿದರು ಬಡ ಜನರು , ಕೂಲಿಕಾರರು,  ಮಧ್ಯಮ ವರ್ಗದವರು  ಗೊಣ್ಣೆ ಗೋಪಿಯ  ಎಲೆಕ್ಸನ್ ಕೊಡುಗೆ ಮುಲಾಜಿಗೆ ಬಿದ್ದು ಮತ ಚಲಾಯಿಸಿದರು , ದೊಡ್ಡ ಮನುಷ್ಯರು  ಎಲೆಕ್ಸನ್ ನಲ್ಲಿ ಮತ ಹಾಕದೆ  ತಮ್ಮ ಸಿರಿವಂತಿಕೆ ಗತ್ತು ತೋರಿದರು, ಚುನಾವಣಾ ಫಲಿತಾಂಶ ನಿರೀಕ್ಷೆಯಂತೆ  ಬಂದು  ಕೋಡಂಗಿ ಪಕ್ಸದ  ಕ್ಯಾಂಡಿಡೇಟ್  ಗೆದ್ದರು .


ಪ್ರಜಾಪ್ರಭುತ್ವದ  ಮೆರವಣಿಗೆ 



ನಮ್ಮ ಗೊಣ್ಣೆ ಗೋಪಿ ಎಲೆಕ್ಸನ್ನು ಗೆದ್ದ ಖುಷಿಯಲ್ಲಿ  ನಗು ನಗುತ್ತಾ , ತನ್ನ ಮನೆಯಲ್ಲಿ  ಈ ಎಲೆಕ್ಸನ್ನಿನಲ್ಲಿ  ತನಗೆ ಬಂದ  ಲಾಭ ಲೆಕ್ಕಾ ಹಾಕಿದ,  ಸುಮಾರು  ಆರು ತಿಂಗಳಲ್ಲಿ  ಖರ್ಚು ಕಳೆದು ಸುಮಾರೋ  ಮೂರು  ಕೋಟಿ  ಲಾಭ ಬಂದಿತ್ತು,   ಅಲ್ಲೇ ಇದ್ದ ಅವರ ಅಪ್ಪನ ಫೋಟೋ ಮುಂದೆ  ಬಂದು ಹಣ ತೋರಿಸುತ್ತಾ ,

'' ನೋಡಿದ್ಯಾ ಅಪ್ಪಾ,  ನೀನು ಬದುಕಿರೋವಾಗ , ನನ್ನನ್ನು ಸರಿಯಾಗಿ ಓದಲಿಲ್ಲಾ, ಅಂತಾ  ಮನೆಗೆ  ಬಂದವರ ಎದುರಿಗೆ ಅವಮಾನ ಮಾದುತ್ತಿದ್ದೆ.  ಈಗ ನೋಡು ಹತ್ತನೇ ಕಿಲಾಸ್   ಡುಮ್ಕಿ  ಹೊಡೆದ ಮಗ  ಕೇವಲ ಆರು ತಿಂಗಳಲ್ಲಿ  ಮೂರು ಕೋಟಿ  ಸಂಪಾದನೆ ಮಾಡವ್ನೆ ,  ಇನ್ನು  ನಮ್ ಸರ್ಕಾರ ಬತ್ತದೆ ನಂದೆ ದುನಿಯಾ , ತಿಳಕಾ , ಒಗ್ಲಿ ಬುಡು ಅಪ್ಪಾ  ನಿನ್ ಎಸ್ರಲ್ಲಿ  ಒಂದು ಕಲ್ಯಾಣ ಮಂಟಪ  ಕಟ್ಟುಸ್ತೀನಿ  ಬುಡು ''ಅಂತಾ ಹೇಳಿ  ಭಕ್ತಿ ಯಿಂದ ಕೈ ಮುಗಿದ. ಫೋಟೋದ ಒಳಗಿಂದ  ಗೊಣ್ಣೆ ಗೋಪಿಯ     ಪಿತಾಶ್ರೀ ಹಿಕ್ಮತ್ತಯ್ಯ ಅಸ್ತು ಅಸ್ತು ಅನ್ತಿದ್ದ.ಇತ್ತ ಪ್ರಜಾ ಪ್ರಭುತ್ವ  ಸುಸ್ತೂ ಸುಸ್ತೂ  ಅಂತಿತ್ತು .