Monday, August 16, 2010

ಹೀಗೊಬ್ಬ ಪುಸ್ತಕ ಪ್ರೇಮಿ!!ಅಂಕೆ ಗೌಡರ ವಿಸ್ಮಯ ಪುಸ್ತಕ ಲೋಕದೊಳಗೆಒಂದು ಸುತ್ತು ಹಾಕೋಣ ಬನ್ನಿ!!!

ಆಗಸ್ಟ್ 15  ರಂದು  ಬೆಳಿಗ್ಗೆ ನಾನು ಕೆಲಸ ಮಾಡುವ ಕಛೇರಿಯಲ್ಲಿ  ಸ್ವಾತಂತ್ರ್ಯ ದಿನಾಚರಣೆ ಆಚರಿಸಿ  ಮನೆಗೆ ಬಂದು ಕುಳಿತೆ.ಹಾಗೆ ಸಣ್ಣಗೆ ಅರ್ದ ಘಂಟೆ  ಒಂದು ಸಣ್ಣ ನಿದ್ದೆ   ತೆಗೆದೇ. ನಂತರ ತಾಳು ಇವತ್ತು ಟಿ.ವಿ. ನಲ್ಲಿ ಒಳ್ಳೆ ಪ್ರೋಗ್ರಾಮ್ ಬರುತ್ತೆ ಅಂತಾ   ಮೂರ್ಖ  ಪೆಟ್ಟಿಗೆಯ ಮುಂದೆ ಕುಳಿತವನಿಗೆನಿರಾಸೆ ಮೂಡಿ, ಸ್ನೇಹಿತ ದೀಪುಗೆ ಫೋನಾಯಿಸಿದೆ.ಸರ್ ಈಗ ಬಂದೆ ಅಂದವರೇ ನಮ್ಮ ಮನೆಗೆ   ಅರ್ಧ ಘಂಟೆ ಯಲ್ಲಿ ಹಾಜರ್!!!ದೀಪು ಬೇಜಾರು ಕಂಡ್ರಿಎಲ್ಲಾರೂ  ಹೋಗೋಣ ಅಂದೇ.ಸರಿ ಸರ್ ಎಲ್ಲಿ ಹೋಗೋಣ ಹೇಳಿ ??? ಅಂತಾ  ದೀಪು  ಕೇಳಿದರು..ಮುಂದಿನ ಸೀನಲ್ಲಿ ಪಾಂಡವಪುರ ಹರಳಹಳ್ಳಿಯ ಪುಸ್ತಕ ಮನೆಯಲ್ಲಿದ್ದೆವು.ಸಾರ್ ನಾನು ಇಲ್ಲಿ ಓಡಾಡಿದ್ದೀನಿ  ಇದರ ಒಳಗೆ ಹೋಗಿಲ್ಲ ಒಳ್ಳೆದಾಯ್ತು ನಡೀರಿ ಅಂದ್ರೂ ,ಹೀಗೆ ಪುಸ್ತಕ ಲೋಕದೊಳಗೆ ಕಾಲಿಟ್ಟೆವು.ಓದುಗರೇ ನನಗೆ ಗೊತ್ತು ನೀವು ಈಗಾಗಲೇ ಬೇಸರದಿಂದ  ಕೊರೆತಾ  ಶುರು ಆಯ್ತು ಅನ್ಕೊಂಡಿದ್ದೀರ!!! ಅಂತ ,ಪರವಾಗಿಲ್ಲ ಬನ್ನಿ ಈ ವ್ಯಕ್ತಿಯನ್ನು ಬ್ಲಾಗ್ ಲೋಕಕ್ಕೆ ತರದಿದ್ದರೆ ಬ್ಲಾಗಿಗರಿಗೆ ಮಾಹಿತಿ ಮುಚ್ಚಿಟ್ಟಂತೆ . ಅದಕ್ಕೆ ಅಂಕೆ ಗೌಡರ  ಬಗ್ಗೆ ಹೇಳ್ತೀನಿ ಬನ್ನಿ.ಮಂಡ್ಯಾ ಜಿಲ್ಲೆಯಲ್ಲಿ ಸಾಂಸ್ಕೃತಿಕ  ಪರಂಪರೆಗೆ ಎಂದಿಗೂ ಬರ ಬಂದಿಲ್ಲ , ಈ ಜಿಲ್ಲೆಯಲ್ಲಿ ಸದ್ದಿಲ್ಲದೇ ಹಲವಾರು
ಸಂಘಟನೆಗಳು,ವ್ಯಕ್ತಿಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಎಲೆಮರೆ ಕಾಯಿಯಂತೆ ಇದ್ದಾರೆ .
ಮಂಡ್ಯಾ ಜಿಲ್ಲೆ ಜನಗಳು ಒರಟರು , ಸಂಸ್ಕೃತಿ ಅರಿಯದವರೂ ಅನ್ನುವ ಜನರಿಗೆ ಸವಾಲ್ ಎಸೆದು ಸೆಡ್ಡು ಹೊಡೆದು ಮಂಡ್ಯಾ ಜಿಲ್ಲೆ ಜನ ಹೀಗೂ  ಉಂಟು ಅನ್ನುವ ಸಂದೇಶ  ಸಾರುತಿಹರು.ಬನ್ನಿ ನಮ್ಮ ಪುಸ್ತಕ ಸಾಮ್ರಾಟ ಅಂಕೆ ಗೌಡರ  ಲೋಕಕ್ಕೆ ಹೋಗೋಣ .ನನಗೆ ಸುಮಾರು ಎಂಟು ವರುಷಗಳಿಂದ  ಪರಿಚಯ ವಿರುವ ಇವರು ಮೃದುಭಾಷಿ,ಸಜ್ಜನ.   .ಸ್ವಾಮೀ!!! ಒಬ್ಬ ವ್ಯಕ್ತಿ ಎಷ್ಟು ಪುಸ್ತಕ ಸಂಗ್ರಹಿಸ ಬಹುದು??ಹವ್ಯಾಸಕ್ಕಾಗಿ  ಗಳಿಸಿದ ಹಣವನ್ನು ಎಷ್ಟು ಸುರಿಯ ಬಹುದು??  ಇಂತಹ ಹುಚ್ಚು ಹವ್ಯಾಸಗಳಿಗೆ ಮಡದಿಯ ಸಹಕಾರ ಎಷ್ಟಿರುತ್ತದೆ??ಇದಕ್ಕೆ ಉತ್ತರ ಈ  ಅಂಕೆ ಗೌಡರುಸಾಧಿಸಿರುವ  ಈ ಪುಸ್ತಕ ಲೋಕ.
 ಬರೋಬ್ಬರಿ ಅಂದಾಜು ಸುಮಾರು ಒಂದು ಲಕ್ಷ ಮೀರಿ  ಪುಸ್ತಕಗಳನ್ನೂ ಇವರು ಸಂಗ್ರಹಿಸಿದ್ದಾರೆ.ನಾಣ್ಯ ಸಂಗ್ರಹ,ಅಂಚೆ ಚೀಟಿಗಳ ಸಂಗ್ರಹ ,ಲಗ್ನಪತ್ರಿಕೆಗಳ ಸಂಗ್ರಹ ಸಹ ಇವರ ಬಳಿಯಲ್ಲಿದೆ.,ಈ ಪುಸ್ತಕದ ಮನೆ ಇಂದು  ಸಾರ್ವಜನಿಕರಿಗಾಗಿ ಗ್ರಾಮೀಣ  ಪ್ರದೇಶದ  ಪುಸ್ತಕ ಪ್ರಿಯರಿಗಾಗಿ ನೀಡಲಾದ ಕೊಡುಗೆ.ಒಂದು ಸಂಸ್ಥೆ  ಸಹ ಮಾಡಲು ಅಸಾಧ್ಯವಾದ ಕೆಲಸವನ್ನು ಇವರು ಮಾಡಿದ್ದಾರೆ.ಅಂಕೆ ಗೌಡರು ಒಬ್ಬ ಸಾಮಾನ್ಯ ಹಳ್ಳಿ ಕುಟುಂಬ ದಿಂದ ಬಂದವರು.ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿ ಗ್ರಾಮದ ಲ್ಲಿ ರೈತ ಕುಟುಂಬದಲ್ಲಿ ಜನಿಸಿದರು.ಪ್ರಾಥಮಿಕ,ಮಾಧ್ಯಮಿಕ, ಪ್ರೌಡ, ವಿಧ್ಯಾ ಭ್ಯಾಸ  ಗ್ರಾಮೀಣ ಪ್ರದೇಶದಲ್ಲಿ    ಆಯಿತು. ಪಿ.ಯೂ.ಸಿ. ಮುಗಿಸಿ  ಓದುಮುಂದುವರೆಸಲು ಬಸ್ ಕಂಡಕ್ಟರ್ ಆಗಿ ಕೆಲ ಸಮಯ ನೌಕರಿ ಮಾಡಿ ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಿ  ಬಿ.ಎ .ಪದವಿ ಪಡೆದರು.ಈ ಸಮಯದಲ್ಲಿ ಇವರ ಗುರುಗಳಾಗಿದ್ದ ಕೆ.ಅನಂತರಾಮು ರವರು ಯಾವುದೋ ಸಂದರ್ಭದಲ್ಲಿ ಹೇಳಿದ "ಸರ್ಟಿಫಿಕೇಟಿನ ದೊಡ್ದತನಕ್ಕಿಂತ ಒಳ್ಳೆಯ ಹವ್ಯಾಸಗಳೇ  ಮೌಲ್ಯಯುತವಾಗಿರುತ್ತವೆ " ಸಾಧ್ಯ ವಾದರೆ ಬಡವರಿಗೆ ದ್ದ್ವನಿ ಯಾಗುವ ಪುಸ್ತಕ ಸಂಗ್ರಹ ಹವ್ಯಾಸ ಬೆಳಸಿಕೊಳ್ಳಿ  ಎಂದು ಹೇಳಿದ ಮಾತು ಶಿಷ್ಯನ ಮನಸ್ಸಿನಲ್ಲಿ ನಾಟಿತು, ಅದರ ಫಲವೇ ಈ ಪುಸ್ತಕ ಸಂಗ್ರಹ.ಓದು ಮುಗಿದ ನಂತರ ಪಾಂಡವಪುರ  ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಸಿಕ್ಕಿ ಟೈಮ್ ಆಫೀಸೆರ್  ಹುದ್ದೆಗೆ ಸೇರ್ಪಡೆ ಯಾದರು.ಪ್ರಾರಂಭದಿಂದಲೂ ಗಳಿಸಿದ ಹಣ ಪುಸ್ತಕ ಖರೀದಿಸಲು ವಿನಿಯೋಗವಾಗಲು ಶುರುವಾಯ್ತು.ಮಗನಿಗೆ ಮದುವೆ ಮಾಡಿದರೆ ಸರಿಯಾದಿತೆಂದು ಮದುವೆಮಾಡಿದರೆ .ಅಂಕೆ ಗೌಡರ ಬಾಳ ಸಂಗಾತಿ ಜಯಲಕ್ಷ್ಮಿ ಯವರೂ  ಪತಿಗೆ  ತಕ್ಕ ಸತಿಯಾಗಿ

 ಗಂಡನ ಹವ್ಯಾಸಕ್ಕೆ ಸಾತ್ ನೀಡಿದರು. ಇಂದಿಗೂ ಪುಸ್ತಕ ನೋಡಲು ಬರುವ ಜನರನ್ನು ಇವರು  ಸತ್ಕರಿಸುವ ರೀತಿ ಅನುಕರಣೀಯ.ಇನ್ನು ಮಗ ಸಾಗರ್ ಅಪ್ಪ ಅಮ್ಮನ ಮಮತೆಯ  ಮಡಿಲಿನ ಜೊತೆಗೆ ಪುಸ್ತಕ ಮಡಿಲಿನ ಆಸರೆ ಯಲ್ಲಿ  ಬೆಳೆದ.ಮೊದಲು ಒಂದೊಂದಾಗಿ ಮನೆ ಸೇರಿದ ಪುಸ್ತಕಗಳು ಮನೆಯಲ್ಲಿ ರಾಶಿಯಾಗಿ ವಿಶ್ವೇಶ್ವರ ನಗರದ ಕ್ವಾರ್ಟರ್ಸ್ ಮನೆಯಲ್ಲಿ ತುಂಬಿ ಹೋಗಿ  ಕುಟುಂಬ  ಪುಸ್ತಕದ ಮಧ್ಯೆ ಜೀವನ ನಡೆಸಬೇಕಾದ ಅನಿವಾರ್ಯತೆ ಉಂಟಾಗಿತ್ತು.ನಂತರ ಇವರು ಪಾಂಡವಪುರ ಸಕ್ಕರೆ ಕಾರ್ಖಾನೆಯ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದರು.ಆಗ ಬಂದ ಗ್ರಾಚುಯಿಟಿ,ಪಿ.ಎಫ್ ನಿಂದ ಬಂದ ಹಣ, ನಂತರ ಭಾರತೀಯ ಜೀವ ವಿಮ ನಿಗಮದ ಪ್ರತಿನಿಧಿಯಾಗಿ ದುಡಿದ ಹಣ , ಮೈಸೂರಿನ ಹೆಬ್ಬಾಳದ ನಿವೇಶನ ಮಾರಿದ ಹಣ,  ಜಮೀನಿನಲ್ಲಿ ಕಬ್ಬುಬೆಳೆದು ಇದನ್ನು  ಮಾರಿ ಬಂದ ಹಣ ಎಲ್ಲವೂ ಪುಸ್ತಕ ಖರೀದಿಯಲ್ಲಿ ಕರಗಿಹೋಗಿದೆ.ಇವರು ಪಾಂಡವಪುರ ರೈಲು ನಿಲ್ದಾಣದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು ಇರುವ ದುಡ್ದಿಗೆಲ್ಲಾ ಪುಸ್ತಕ ಖರೀದಿಸಿ ರಾತ್ರಿವೇಳೆಗೆ ಪುಸ್ತಕಗಳ ಮೂಟೆಯೊಂದಿಗೆಮನೆಸೆರುತ್ತಿದ್ದ ದಿನಗಳನ್ನು ಹಲವು ಗೆಳೆಯರು ಈಗಲೂ ನೆನೆಯುತ್ತಾರೆ .ಇದು
ಪುಸ್ತಕ ಸಾಮ್ರಾಟನ ಕಥೆ .ಅಂಕೆ ಗೌಡರ  ಮನೆಯಲ್ಲಿ ಎಲ್ಲೆಲ್ಲೂ ಪುಸ್ತಕಗಳೇ ಆಗಿ ಓಡಾಡಲೂ ಜಾಗವಿಲ್ಲದ ಪರಿಸ್ಥಿತಿ .ಉದ್ಭವಿಸಿ ಪುಸ್ತಕ ಸಂರಕ್ಷಣೆ ಹೇಗೆ ಎಂಬ ಚಿಂತೆ ಉಂಟಾಯಿತು.ಈ ಸಮಯದಲ್ಲಿ ಅಂಕೆ ಗೌಡರ  ಹಲವಾರು ಸ್ನೇಹಿತರು ಈ ಬಗ್ಗೆ ಚಿಂತನೆಯಲ್ಲಿ ತೊಡಗಿ ಪುಸ್ತಕ ಸಂರಕ್ಷಣೆ ಬಗ್ಗೆ ಹಲವು ಕಾರ್ಯಕ್ರಮ ಹಾಕಿ ಕೊಂಡರು.ಈ  ಸಮಯದಲ್ಲಿ ಕೆ.ಆರ್.ಎಸ. ಹಿನ್ನೀರಿನಲ್ಲಿ ಮುಳುಗಿದ್ದ ವೇಣುಗೋಪಾಲ ಸ್ವಾಮಿ ದೇವಾಲಯ ಸ್ಥಳಾಂತರ ಕಾರ್ಯವನ್ನು ಕೈಗೊಂಡಿದ್ದ ಉಧ್ಯಮಿ ಹರಿ ಖೋಡೆ ರವರಿಗೆ ಈ ಪುಸ್ತಕ ರಾಶಿ ಬಗ್ಗೆ ತಿಳಿದು ಅಂಕೆ ಗೌಡರ ಮನೆಗೆ ಬಂದರು.ಪುಸ್ತಕ ರಾಶಿಯನ್ನು ನೋಡಿ ಮೂಕ ವಿಸ್ಮಿತರಾದ ಅವರು ಗೌಡರನ್ನು ಅಭಿನಂದಿಸಿ ಸಹಾಯ ಮಾಡಲು ಮುಂದಾದರು.ಸಾರ್ ನನಗೇನುಬೇಡ ಪುಸ್ತಕ ಸಂರಕ್ಷಣೆಗೆ  ಏನಾದರೂ ಮಾಡಿಕೊಡಿ ಎಂದಿದ್ದು  ಕೇಳಿ ಅಚ್ಚರಿ ಯಿಂದ  ಅವರು ಪುಸ್ತಕಗಳ ವಿಂಗಡಣೆಗೆ ಒಬ್ಬ  ಕಂಪ್ಯೂಟರ್  ಇಂಜಿನಿಯರ್  ಜೊತೆ 40 ಜನ ರನ್ನು ಕಳುಹಿಸಿದರು. ಇವರೆಲ್ಲರೂ ಸೇರಿ 35 ದಿನಗಳ ಕಾಲ ಪುಸ್ತಕ ವರ್ಗೀಕರಣ  ಮಾಡಿದರು.ಈ ಸಮಯದಲ್ಲಿ ಅಕ್ಕ ಪಕ್ಕದ ಹಳ್ಳಿಯ ಜನ , ಸ್ವಯಂ ಇಚ್ಚೆಯಿಂದ ಊಟ ತಯಾರಿಸಿಕೊಂಡು ಬಂದು ಪುಸ್ತಕ ವಿಂಗಡಣೆ ಕೆಲಸದಲ್ಲಿ ತೊಡಗಿದ್ದವರಿಗೆ ನೀಡಿ ಸತ್ಕರಿಸಿದ್ದು  ವಿಶೇಷವಾಗಿತ್ತು.ನಂತರ "  ಅಂಕೆ ಗೌಡ ಜ್ಞಾನ ಪ್ರತಿಷ್ಠಾನ "ನೊಂದಾಯಿಸಿ  ಖೋಡೆಯವರ ಸಹಕಾರದಿಂದ ಹರಳಹಳ್ಳಿ ಯಲ್ಲಿ ಅರ್ಧಕ್ಕೆ ನಿಂತಿದ್ದ
ಸಿನಿಮಾ ಹಾಲ್ ಒಂದನ್ನು ಖರೀದಿಸಿ ೧೨೦ ಇಂಟು 90 ಅಡಿ ಜಾಗದಲ್ಲಿ                                                                              
ಸುಸಜ್ಜಿತ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ.ಹಲವಾರು ದೊಡ್ಡ ನಗರಗಳಲ್ಲೇ ಇಲ್ಲದ ಈ ತರಹದ ಒಂದು ದೊಡ್ಡ ಖಾಸಗಿ ಏಕ ವ್ಯಕ್ತಿಯ ಸಾರ್ವಜನಿಕ ಪುಸ್ತಕಾಲಯಕ್ಕೆ ಉತ್ತಮ ಕೊಡುಗೆ ನೀಡಿದ ಹರಿ ಖೋಡೆ ಇಲ್ಲಿ ಅಭಿನಂದನಾರ್ಹರು.ಈ ಕಾರ್ಯದಿಂದ  ಅಂಕೆ ಗೌಡರ ಪುಸ್ತಕ ಸಂಗ್ರಹಕ್ಕೆ  ಒಂದು ರೂಪ ಸ್ಪಷ್ಟವಾಗುತ್ತಿದ್ದಂತೆ. ಇವರಲ್ಲಿನ ಅಪರೂಪದ  ಪುಸ್ತಕಗಳು ಬೆಳಕಿಗೆ ಬಂತು.  ಗ್ರಾಮೀಣ ಪ್ರದೇಶದಲ್ಲಿ ವಿಶ್ವವಿಖ್ಯಾತ  ಪುಸ್ತಕ,ನೊಬೆಲ್ ಕೃತಿಗಳು,ಕೇಂದ್ರ ಹಾಗು ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪ್ರಕಟಣೆಗಳು,ಅತ್ಯಂತ  ಪ್ರಾಚೀನ ಕನ್ನಡ ನಿಘಂಟುಗಳು,ಹೀಗೆ ನೀವು ಕೇಳಿದ್ದು ಶೇಕಡಾ 90 ರಷ್ಟು ನಿಮಗೆ ಖಂಡಿತವಾಗಿ ಇಲ್ಲಿ  ಸಿಗುತ್ತವೆ. ಪುಸ್ತಕದ ಮನೆಗೆ ಗೆ ಮೈಸೂರಿನಿಂದ ಹಾಗು ಹಲವಾರು ಪಟ್ಟಣಗಳಿಂದ  ಸಂಶೋದಕರು  ಅಗತ್ಯ ಮಾಹಿತಿಗೆ ಪುಸ್ತಕ ಹುಡುಕಿಕೊಂಡು ಬರುತ್ತಾರೆಂದರೆ ಇಲ್ಲಿನ ಪುಸ್ತಕಗಳ ಮಹತ್ವ ನಿಮಗೆ ತಿಳಿದೀತು.ಹಳ್ಳಿ ಇಂದ ಪಟ್ಟಣ ಗಳಿಗೆ ಮಾಹಿತಿಗಾಗಿ ಪುಸ್ತಕ ಹುಡುಕುವ ಬದಲು ಪಟ್ಟಣ ದಿಂದ ಹಳ್ಳಿಗೆ ಬಂದು ತಮ್ಮ ಅಧ್ಯಯನಕ್ಕೆ ಪುಸ್ತಕ ಹುಡುಕುವ ಹಂತಕ್ಕೆ ಈ ಸಂಗ್ರಹಾಲಯ ಬೆಳೆದಿದೆ..ಅಪರೂಪದ ಹಲವಾರು ಪುಸ್ತಕ ಸಾಗರವೇ ಇಲ್ಲಿ ಹರಡಿದೆ . ಬನ್ನಿ ಕೆಲವು ಪುಸ್ತಕಗಳನ್ನು ನೋಡೋಣ           
  ಹೀಗಿದೆ ಸ್ವಾಮೀ  ಇವುಗಳೆಲ್ಲವನ್ನೂ ಸಂಗ್ರಹಿಸಲು ಅವರು ಪಟ್ಟಿರಬಹುದಾದ ಶ್ರಮದ ಬಗ್ಗೆ ಯೋಚಿಸಿದಾಗ ಅಚ್ಚರಿಯಾಗುತ್ತದೆ.ಮೇಲಿನವು ಕೇವಲ ಕೊಂಚ ಉದಾಹರಣೆಗಳಷ್ಟೇ. ನೀವು ಭೇಟಿನೀಡಿದರೆ ನಿಮಗೆ ಇದರ ವಿಸ್ತಾರ  ಅರಿವಾಗುತ್ತದೆ.ಇನ್ನು ಇಲ್ಲಿಗೆ ಹಲಾವರು ಗಣ್ಯರು ಭೇಟಿನೀದಿದ್ದು ಅವರಲ್ಲಿ
ಡಾ.ಪ್ರಭುಶಂಕರ್ ,ನಾಗತಿಹಳ್ಳಿ ಚಂದ್ರಶೇಖರ್ [ ಸಾಹಿತಿ ಹಾಗು ಸಿನಿಮಾ ನಿರ್ದೇಶಕ],ಹಂ.ಪ . ನಾಗರಾಜಯ್ಯ ,ಡಾ.ಸಿದ್ದಲಿಂಗಯ್ಯ,ಒರಿಸ್ಸಾ  ರಾಜ್ಯದ ಹೈಕೋರ್ಟ್  ಮುಖ್ಯ ನ್ಯಾಯಮೂರ್ತಿಗಳಾದ  ಎ.ಜೆ. ಸದಾಶಿವ ,ನಿವೃತ್ತ ನ್ಯಾಯಮೂರ್ತಿಗಳಾದ    ವೆಂಕಟಾಚಲಯ್ಯ , ಚಂಪಾ.ಕೆ.ಎಸ. ಭಗವಾನ್ ,ರಾಜೇಶ್ವರಿ ತೇಜಸ್ವಿ.ಚಂಪಾ,[ ಚಂದ್ರ ಶೇಖರ ಪಾಟಿಲ್] ಪ್ರಮುಖರು.ಕೆಲವು ಭೇಟಿ ನೀಡಿದ ದೇಶ ವಿದೇಶದ  ಗಣ್ಯರು 
ಅವರ ಅನುಭವಗಳನ್ನು ವಿವರವಾಗಿ ದಾಖಲಿಸಿ  ಅಂಕೆ ಗೌಡರ ಕಾರ್ಯವನ್ನು ಕೊಂಡಾಡಿದ್ದಾರೆ.ನಾನು ಭೇಟಿನೀಡಿದ ಸಮಯದಲ್ಲಿ ನಾಗತಿಹಳ್ಳಿ ಚಂದ್ರ ಶೇಖರ್ ರವರ ತಾಯಿ ಭೇಟಿ ನೀಡಿದ್ದು ಅವರ  ಇಳಿವಯಸ್ಸಿನಲ್ಲಿಯ ಪುಸ್ತಕ ಪ್ರೀತಿ ಕಂಡು ಅಚ್ಚರಿಯಾಯಿತು.ಅಂಕೆ ಗೌಡರ ಸಾಧನೆಯನ್ನು ಗುರುತಿಸಿದ  ಹಿರೇ ಮಗಳೂರು ಕಣ್ಣನ್ ರವರು ಉದಯ  ಟಿ.ವಿ. ಬೆಳಗಿನ ತಮ್ಮ ಕಾರ್ಯಕ್ರಮದಲ್ಲಿ ಸತತವಾಗಿ ಮೂರುದಿನಗಳ ಕಾಲ ಇವರ ಬಗ್ಗೆ ಮಾಹಿತಿ ನೀಡಿ ಉಪಕರಿಸಿದ್ದಾರೆ.ಉಳಿದಂತೆ ಇತರ ಎಲ್ಲಾ  ಮಾಧ್ಯಮಗಳು ತಮ್ಮ ಕಾಣಿಕೆ ನೀಡಿವೆ.
ಇವರ ಸಾಧನೆಗೆ ಗರಿಯಾಗಿ ಹಲವು ಪ್ರಶಸ್ತಿಗಳು ಬಂದಿವೆ ಇವರಿಗೆ ಬೆನ್ನೆಲುಬಾಗಿ ಹಲವು ಸ್ನೇಹಿತರು ನಿಂತಿದ್ದು ಅವರಲ್ಲಿ ಚಂದ್ರ ಶೇಖರಯ್ಯ ಹಾಗು ಮಂಜುನಾಥ್ ಇಬ್ಬರು ಮಾತ್ರ ನನಗೆ ಸಿಕ್ಕಿದರು ಉಳಿದಂತೆ
ಬಹಳಷ್ಟು ಜನ ಸಾಮಾನ್ಯರು ಹಾಗೂ ಸ್ಥಳೀಯ  ಶಿಕ್ಷಕರು ಈ ಪುಸ್ತಕ ಮನೆಯ ಯಶಸ್ಸಿನಲ್ಲಿ ಇಂದಿಗೂ ಪಾಲ್ಗೊಳ್ಳುತ್ತಿದ್ದಾರೆ.ಈ ಪುಸ್ತಕ ಮನೆ ಹಾಲಿ ಸುಮಾರು ಶೇಖಡ 60 ರಷ್ಟು  ಕಾರ್ಯ ಮುಗಿದಿದ್ದು ಉಳಿದಂತೆ ಆಗಬೇಕಾದ ಕಾರ್ಯಗಳು ಬಹಳಷ್ಟಿದೆ. ಇನ್ನೂ ಸರಿ ಸುಮಾರು 20.೦೦೦ ಕ್ಕೂ ಮಿಗಿಲಾಗಿ ಪುಸ್ತಕಗಳು ವಿಂಗಡಣೆ ಆಗಬೇಕಾದ ಕೆಲಸ ಬಾಕಿಯಿದೆ.2] ಪುಸ್ತಕದ ಮನೆ ನಿರ್ವಹಣೆಗೆ ಆರ್ಥಿಕ ಅಡಚಣೆ ಉಂಟಾಗಿದೆ ಒಂದು ತಿಂಗಳಿಗೆ ಅಂದಾಜು ರೂ ೨೦,೦೦೦ ಗಳ ಖರ್ಚು ಉಂಟಾಗುತ್ತಿದ್ದು ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ.3] ಕೆಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು  ಹೇರಳ ಧನ ಸಹಾಯ ಮಾಡುವುದಾಗಿ ಮುಂದೆ ಬಂದು ತಮ್ಮ ವಯಕ್ತಿಕ ಲಾಭ ಪಡೆಯಲು ಬಂದ ಕಾರಣ ಇಂತಹವರ ಧನ ಸಹಾಯವನ್ನು ಅಂಕೆ ಗೌಡರು ತಿರಸ್ಕರಿಸಿದ್ದಾರೆ.ನಾಡಿನ ಹಿರಿಮೆ ಸಾರಲು ಹೋರಾಟ ನಡೆಸಿರುವ  ವ್ಯಕ್ತಿಗೆ  ಸಹಾಯ ಮಾಡಲು ನಿಮಗೆ ಇಷ್ಟ ವಿದ್ದಲ್ಲಿ ಅವರನ್ನೇ ನೇರವಾಗಿ ಸಂಪರ್ಕಿಸಿ ಸಹಾಯ ಮಾಡ ಬಹುದು. ಅವರ ವಿಳಾಸ. ಶ್ರೀ ಅಂಕೆ ಗೌಡ ,ಪುಸ್ತಕದ ಮನೆ ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] ಹರಳ ಹಳ್ಳಿ  ಪಾಂಡವಪುರ ತಾಲೂಕ್  ,ಮಂಡ್ಯ ಜಿಲ್ಲೆ.571434 ಮೊಬೈಲ್ ನಂಬರ್ ;9242844934 ,9242844206 ಗಳನ್ನೂ ಸಂಪರ್ಕಿಸಬಹುದು .ಪುಸ್ತಕ ಪ್ರಕಟಣೆ ಮಾಡುವವರು ತಮ್ಮ ಒಂದು ಪ್ರತಿಯನ್ನು ಇಲ್ಲಿಗೆ  ಉಚಿತವಾಗಿ ಕಳುಹಿಸಿದರೆ ಅದೂ ಸಹ ಒಂದು ಉತ್ತಮ ಕಾರ್ಯ ವಾಗುತ್ತದೆ. ನೀವು ಒಮ್ಮೆ ಮೈಸೂರಿಗೆ ಬಂದರೆ ಮರೆಯದೆ ಇಲ್ಲಿಗೆ ಹೋಗಿಬನ್ನಿ ನಿಮ್ಮ ಗೆಳೆಯರಿಗೂ ತೋರಿಸಿ.ಒಂದು ಉತ್ತಮ ಹವ್ಯಾಸಿಯ ಕಾರ್ಯಕ್ಕೆ ನಾವೆಲ್ಲಾ ಬೆಂಬಲ ನೀಡೋಣ.ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.ಈ  ಕಾರ್ಯದಿಂದ  ಗ್ರಾಮೀಣ  ಭಾಗದಲ್ಲಿನ ವಿದ್ಯಾರ್ಥಿಗಳ   ಮುಂದಿನ  ಭವಿಷ್ಯ ಉತ್ತಮವಾಗಲು ಸಹಕಾರಿಯಾಗಿದೆ. ನೀವು ಇಲ್ಲಿಗೆ ಒಮ್ಮೆ ಬನ್ನಿ.
ಓ .ಕೆ. ಮುಂದಿನ ಸಂಚಿಕೆಯಲ್ಲಿ ಹೊಸ ವಿಚಾರ ದೊಂದಿಗೆ  ಮತ್ತೆ ಸಿಗೋಣ. ಥ್ಯಾಂಕ್ಸ್..

Thursday, August 5, 2010

ಮಲೆನಾಡಿನ ಪುಷ್ಪ ಲೋಕದೊಳಗೆ!! ಜೀರುಂಡೆ ಹಾಡಿನ ಗಮ್ಮತ್ತು!!!ಇಲ್ಲಿಗೆ ಪ್ರವಾಸ ಮುಗಿದಿತ್ತು.!!!!ಚಿಕ್ಕಮಗಳೂರು ದರ್ಶನ ...03








ನಿಸರ್ಗದ ಮಡಿಲು.
ನಡೆಯುತ್ತಾ ಪಕ್ಕದ ಕಾಫಿ ಎಸ್ಟೇಟ್ ಒಂದರಲ್ಲಿ ನಿಸರ್ಗದ ಸವಿ ಸವಿಯುತ್ತಾ ಇರಲು ಜೊತೆಯಲ್ಲಿ ಬಂದಿದ್ದವರು ಬನ್ನಿ ಸಾರ್ ಇವರನ್ನು ಪರಿಚಯ ಮಾಡಿಕೊಳ್ಳಿ ಪಕ್ಕದವರ ಪರಿಚಯ ಇದ್ದರೆ ಒಳ್ಳೆಯದು ಅಂತಾಹೇಳಿ ಬಂಗಲೆಯ ಬಾಗಿಲು ತಟ್ಟಲು ಶುರುಮಾಡಿದರು.ಹೊರಗಡೆ ಬಂದ ಮಾಲೀಕರು ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖ ಕಂಡು ಓ ನೀವಾ !! ಏನ್ಸಮಾಚಾರ ಅಂದರು!! ಇವರೂ ಬೆಂಗಳೂರ್ನವರೂ ನಿಮ್ಮ ಪಕ್ಕದ ತೋಟ ತಗತಾವ್ರೆ ಅಂದಾಗ ಹೌದಾ ಬನ್ನಿ ಒಳಗೆ ಅಂತ ಒಳಗೆ ಕರೆದು ಪರಿಚಯವಾಗಿ ,ಖುಷಿಪಟ್ಟರು.  ಕುರುಕು ತಿಂಡಿ , ಕಾಫಿ ಸಮಾರಾಧನೆ ಆಯ್ತು.ಒಳಗೆ ಗೆಳೆಯನನ್ನು ಮಾತಿಗೆ ಬಿಟ್ಟುನಾನು ಮನೆಯ ಹೊರಗೆ ನಿಸರ್ಗನೋಟ ಸವಿಯಲು ಹೊರಗಡೆ ಬಂದು ಕ್ಯಾಮರ ಕಿಂಡಿಯೊಳಗೆ ಇಣುಕಿದೆ.ಸುತ್ತಲೂ ವಿವಿಧ ಬಗೆಯ ,ವಿವಿಧ ಬಣ್ಣಗಳ ಪುಷ್ಪಗಳ ಸೌಂದರ್ಯ ಮನಸೂರೆಗೊಂಡಿತ್ತು.ಚಕಚಕನೆ ಚಿತ್ರಗಳು ನನ್ನ ಕ್ಯಾಮರಾದಲ್ಲಿ ಸೆರೆ ಯಾಗುತ್ತಿತ್ತು
ಇದು ಸಾರಂಗದ ಕೊಂಬು ಅಲ್ಲಣ್ಣ !!!
ಬಾ ಮಳೆಯೇ ಬಾ !!!ಸ್ವಾಗತ ನಿನಗೆ.
.ಜೇಬಿನಲ್ಲಿದ್ದ ಕುರುಕುತಿಂಡಿ ಸೇವಿಸುತ್ತಾ ಬೇಕಾದ ಚಿತ್ರಗಳನ್ನು ತೆಗೆಯಲು ಖುಷಿಯಾಗಿತ್ತು.ಸ್ವರ್ಗದಲ್ಲಿ ಎಲ್ಲ ಕಡೆ
ಹೂವಿಂದ  ಹೂವಿಗೆ  ಹಾರುವ  ದುಂಬಿ 
ಸೌಂದರ್ಯ ತುಂಬಿರಲು
ಹೂವಿಗೂ ದುಂಬಿಗೂ !!!ನಿಸರ್ಗ ಮಿಲನ.
ಯಾವ ಹೂವು ಯಾವ ದುಂಬಿಗೋ!!
ಎಷ್ಟನ್ನು ನೋಡಲು ಸಾಧ್ಯ ?? ಬನ್ನಿ ಕೆಲವು ನೋಟ ನೋಡೋಣ
ಬಿಳಿ ಹೂವಿಗೆ ಕಪ್ಪು ದುಂಬಿಯ ಪ್ರೀತಿಯ ಚುಂಬನ!!
ಕೆಂಪು ವರ್ತುಲ !!! ಅರಳಿದ ಕುಸುಮ !!
ಅರಳಿದ ಹೂಗಳ ಗುಚ್ಛಕ್ಕೆ  ದುಂಬಿಯ ಸ್ಪರ್ಶ ಸುಖ!!!                    ಹೂಗಳ ಲೋಕದಲ್ಲಿ ವಿಹರಿಸುತ್ತಿದ್ದ ನನ್ನನ್ನು ನನ್ನ ಗೆಳೆಯ ಅನಿಲ್  ಲೋ ಬಾಲೂ  ಏನೂ ತಿನ್ನೋ ಯೋಚನೆ ಇಲ್ವ್ಚಾ ತಗೊಳೋ ಅಂತಾ ಕುರುಕಲು ತಿಂಡಿ ಹಾಗು ಕಾಫಿ ತಂದುಕೊಟ್ಟು ಗೆಳೆತನ ಮೆರೆದಿದ್ದ.ಕೊಡು ಗುರು ಒಂತರಾ ಚಳಿಗೆ ಇದು ಮಜಾವಾಗಿದೆ  ಅಂತಾ ಹೇಳಿ ಕಾಫಿ ಗುಟುಕಿಸುತ್ತಾ  ಕುರುಕಲು ತಿಂಡಿ ತಿನ್ನಲು ಶುರು ಮಾಡಿದೆ. ಹಾಗೆ ತೋಟದ ಕಲ್ಲಿನ ಮೇಲೆ ಒಂದು ಹಕ್ಕಿ ತೋರಿಸಿ ಲೋ ಬಾಲು, ಅದು ತೆಗಿ!!! ಚೆನ್ನಾಗಿದೆ. ಅಂದಾ ಆ ಕಡೆ ತಿರುಗಿ ಕ್ಯಾಮರಾ ರೆಡಿ ಮಾಡಿಕೊಳ್ಳುವಷ್ಟರಲ್ಲಿ  ಆ ಹಕ್ಕಿ ಪುರ್ ಅಂತಾ ಹಾರಿ ಹೋಯಿತು ,ಸ್ವಲ್ಪ ಸಮಯ ಬಿಟ್ಟು ಮತ್ತೆ ಅದೇ ಕಲ್ಲಿನ ಮೇಲೆ ಕುಳಿತು ಕೊಂಡಿತು. ಮತ್ತೆ ಫೋಟೋ ತೆಗೆಯಲು ತಿರುಗಿದರೆ ಪುರ್ ಅಂತ ಹಾರಿ ಆಟಾ ಆಡಿಸಿತು. ಹಲವಾರು ಭಾರಿ ಆಟ ಆಡಿಸಿದ
ಈ ಹಕ್ಕಿ ಕೊನೆಗೆ ನನ್ನ ಕ್ಯಾಮರಾ ಬಲೆಗೆ ಬಿತ್ತು. ನೀಲಿ ಮಂಡೆ ಪೀಪಿ [pied bush chaat] ಅಂತಾ ಕರೆಯೋ ಈ ಹಕ್ಕಿ ಕೀಟ ಭಕ್ಷಕ .ನೋಡಲು ಸುಂದರವಾಗಿದ್ದು. ತುಂಬಾ ಚಂಚಲವಾದ ಹಕ್ಕಿ.ಕಿರುಗುಟ್ಟುವ ಹಾಗೆ ಶಿಳ್ಳೆ ಹೊಡೆಯುತ್ತದೆ. ನಂತರ ತೋಟದಿಂದ  ಚಿಕ್ಕಮಗಳೂರಿಗೆ ವಾಪಸ್ಸು ಬಂದ ನಮಗೆ ಹೊಟ್ಟೆ ಚುರುಗುಟ್ಟಲು ಆರಂಭಿಸಿತ್ತು .  ಪೇಟೆ ಮುಖ್ಯ ರಸ್ತೆಯಲ್ಲಿರುವ
"ಮಯೂರ ಹೋಟೆಲ್" ಗೆ ತೆರಳಿ ಬೋಂಡಾ ಸೂಪ್ , ಹಾಗು ದೋಸೆ ತಿಂದುಕಾಫಿ ಹೀರಿ ಹೊರಬಂದೆವು. ಆದರೂ ಯಾಕೋ ಬೆಳಿಗ್ಗೆ ಚಿಕ್ಕಮಗಳೂರಿನ ಟೌನ್ ಕ್ಯಾಂಟೀನ್ ತುಪ್ಪದ ದೋಸೆ ರುಚಿ ಕಾಡುತ್ತಿತ್ತು. ನೀವೂ ಸಹ ಚಿಕ್ಕಮಗಳೂರಿಗೆ ಬಂದರೆ ಮರೆಯದೆ" ಟೌನ್ ಕ್ಯಾಂಟೀನ್" ನಲ್ಲಿನ ತುಪ್ಪದ ದೋಸೆ ತಿನ್ನಿ ಚೆನ್ನಾಗಿರುತ್ತೆ.ನಂತರ ನಾನು ಶ್ರೀನಿವಾಸ್ ಈ ಊರಲ್ಲಿ ಏನಾದರೂ ವಿಶೇಷ ಇದ್ಯಾ ಊರಿಗೆ ತೆಗೆದುಕೊಂಡು ಹೋಗಲು ಅಂದೇ ಸಾರ್" ಪಾಂಡು ರಂಗ ಕಾಫಿ" ಪುಡಿ ತಗೊಳ್ಳಿ ಇಲ್ಲಿ ತುಂಬಾ ಪ್ರಸಿದ್ದಿ ಅಂದ್ರು ಪಾಂಡುರಂಗ ಕಾಫಿ ಅಂಗಡಿಗೆ ತೆರಳಿ ಕಾಫಿ ಪ್ರಿಯನಾದ
ನಾನು ಸುಮಾರು ಒಂದೂವರೆ ಕಿಲೋ ಕಾಫಿ ಪುಡಿ ಖರೀದಿಸಿದೆ.ಉತ್ತಮ ಪ್ಯಾಕ್ಕಿಂಗ್  ನಿಂದ ಕಾಫಿಯ ಸುವಾಸನೆ ಚೆನ್ನಾಗಿತ್ತು. ನೀವೂ ಸಹ ಇಲ್ಲಿಗೆ ಬಂದರೆ ಒಮ್ಮೆ ಇಲ್ಲಿನ ಕಾಫಿಪುಡಿ ಖರೀದಿಸಿ  ಚೆನ್ನಾಗಿರುತ್ತದೆ.ಈ ಪಾಂಡುರಂಗ ಕಾಫಿ ಪುಡಿ  ಬಗ್ಗೆ ಹಲವರು ಅಂತರ್ಜಾಲದಲ್ಲಿ ಉತ್ತಮ ಅಭಿಪ್ರಾಯ ಬರೆದಿರುವುದು ಸುಳ್ಳಲ್ಲಾ .ನಂತರ ಸಾರ್ ನಿಮ್ಮತೋಟದ ಬಾಗಿಲನ್ನು ಹೇಗೆ ಮಾಡಿಸಬೇಕೆಂದು ತೋರಿಸುತ್ತೇನೆ ಬನ್ನಿ ಅಂತ ಹತ್ತಿರದ ಮತ್ತೊಂದು ಎಸ್ಟೇಟ್ ಗೆ ಕರೆದೊಯ್ದರು. ದೋ ಎಂದು ಮಳೆ ಸುರಿಯುತ್ತಿದರೂ ನೆನೆದುಕೊಂಡೇ ತೋಟದೊಳಗೆ ಹೋದೆವು. ಅಲ್ಲಿನ ಯಜಮಾನರು ಸಂತಸದಿಂದ ನಮ್ಮನ್ನು ಸ್ವಾಗತಿಸಿ ಕಾಫಿ ಬಿಸ್ಕತ್ ನೀಡಿ ಉಪಚರಿಸಿದರು.ಒಬ್ಬ ಕೆಲಸದವರು ನಮಗೆ ಮಳೆಯಲ್ಲಿ ತೋಟ ತೋರಿಸಲು ಬಂದರು.ವರ್ಷಧಾರೆಗೆ ಸಾತ್  ನೀಡುವಂತೆ ಮರಗಳ ನಡುವಿನಿಂದ ಕೀಟಗಳ ಗಿರ್ ಅಂತ ಹಾಡು ತೇಲಿಬಂತು. ಇದು ಏನು ಅಂತಾ ಕೇಳಿದ ನನ್ನನ್ನು ಬನ್ನಿ ಸಾರ್ ಇದರ ಫೋಟೋ ತೆಗಿರಿ ಅಂತ ಒಂದು ಮರದ ಸನಿಹಕರೆದೊಯ್ದರು. ಅಲ್ಲಿ ನೋಡಿದರೆ
ಒಂದು ಕೀಟ ಮರವನ್ನು ಅಪ್ಪಿಕೊಂಡು ಕುಳಿತಿದೆ.ಇದೆ ಆ ಜೀರುಂಡೆ ಇವು  ಮರಗಳ  ಕಾಂಡಕ್ಕೆ ಅಂಟಿಕೊಂಡು ಕೋರಸ್ ಹಾಡುಗಾರ ರಂತೆ  ಕಿರ್ರ್ರ್ ಅಂತಾ ಶಬ್ದ ಹೊಮ್ಮಿಸುತ್ತಾ ಕುಳಿತಿರುತ್ತವೆ ಶಬ್ದ ಕೇಳಲು ನಮಗೆ ಕರ್ಕಶವಾಗಿದ್ದರೂ  !!! ಇವುಗಳ ಹಾಡು ಕೇಳುತ್ತಾ  ಮುನ್ನಡೆಯುವುದು ಅನಿವಾರ್ಯ ವಾಗಿತ್ತು.ಇವುಗಳ ಹೊಂದಾಣಿಕೆ ಹೇಗಿತ್ತೆಂದರೆ ಒಂದು ಮರದ ಬಳಿ ನೀವು ತೆರಳಿದರೆ ಆ ಮರದಿಂದ ಶಬ್ದ ಬರುವುದು ನಿಂತು ಹೋಗಿ ಉಳಿದ ಮರಗಳಿಂದ ಶಬ್ದ ಮುಂದುವರೆದಿರುತ್ತದೆ.ನೀವು ಮುಂದೆ ತೆರಳಿದಂತೆ ನಿಮ್ಮನ್ನು ಈ ಜೀರುಂಡೆಗಳ ಶಬ್ದ ಹಿಂಬಾಲಿಸುವಂತೆ ಭಾಸವಾಗುತ್ತದೆ.ತೋಟ ನೋಡಿ ಸುಸ್ತಾದ ನಮಗೆ ಗಂಟೆ ಎಂಟು ಆಗಿದ್ದು ಗೊತ್ತೇ ಇರ್ಲಿಲ್ಲಾ !!ಲೋ ಬಿಂದು ಹೊರಡೋಣ ಇನ್ನೂ ಮೈಸೂರಿಗೆ ಬಸ್ಸು ಹಿಡಿಯಬೇಕು ಅಂದೇ. ಸರಿ ಅಂತ ಅಲ್ಲಿಂದ ಹೊರಟು ರಾತ್ರಿ ಒಂಬತ್ತು  ಘಂಟೆಗೆ ಹಾಸನ ತಲುಪಿ ಸ್ನೇಹಿತನಿಗೆ ವಿಧಾಯ ಹೇಳಿ ನಾನು ಅನಿಲ್, ಹಾಗು ಅವನ ಮಗ ಅಜಂತ್  ಮೈಸೂರಿನ ಬಸ್ಸನ್ನು ಏರಿ ಕುಳಿತೆವು.ರಾತ್ರಿ  ಒಂಬತ್ತು ವರೆಗೆ ಹೊರಟ ಬಸ್ಸಿನಲ್ಲಿ ಟಿಕೆಟ್ ಪಡೆದು ಬಸ್ಸು ಚಲಿಸಿ ತಂಗಾಳಿ ಬೀಸುತ್ತಿದ್ದಂತೆ ನಿದ್ರಾದೇವಿಯ ಮಡಿಲಿಗೆ ಶರಣಾಗಿದ್ದೆನು!! ಹನ್ನೊಂದು ವರೆಗೆ ಅನಿಲ್ ಲೋ ಬಾಲೂ ಮೈಸೂರು ಬಂತು ಎಳೋ........!!!! ಅಂದಾಗಲೇ ವಾಸ್ತವ ಕ್ಕೆ
 ಬಂದಿದ್ದೆ.ಒಂದು ಸುಂದರ ಭಾನುವಾರ ಚಿಕ್ಕಮಗಳೂರಿನಲ್ಲಿ ಕಳೆದ  ಸುದರ ಕ್ಷಣಗಳ ನೆನಪಿನ ಮೂಟೆ ಹೊತ್ತು ಮೈಸೂರಿಗೆ ಬಂದಿದ್ದೆ.ಥ್ಯಾಂಕ್ಸ್ ಚಿಕ್ಕಮಗಳೂರು ನಾನು ಮತ್ತೊಮ್ಮೆ ನಿನ್ನ ಬಳಿಗೆ ಬರುವೆ. ನಿನ್ನ ನೆನಪು ನನ್ನ  ಮನದಲ್ಲಿ  ಹಸಿರಾಗಿದೆ,ಅಲ್ಲಿಯ ವರೆಗೆ ನಿನಗೆ ನನ್ನ ಶುಭ ವಿದಾಯ .