Friday, August 29, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......07 ಇಕ್ಕೆರಿಯ ಮಡಿಲಲ್ಲಿ ಇತಿಹಾಸದ ಸಿಂಚನ

ಇಕ್ಕೆರಿಯ  ಸುಂದರ ಬಸವ 


ಕಳೆದ ಸಂಚಿಕೆಯಲ್ಲಿ  ಇಕ್ಕೆರಿಯ  ಬಸವನ ಮೂಗಿಗೆ ಕೈ ಬೆರಳನ್ನು  ಇಟ್ಟು , ಮಕ್ಕಳಂತೆ  ತುಂಟಾಟ ಮಾಡಿದ್ದ  ನಾವು , ದೇವಾಲಯದ ಆವರಣದಿಂದ  ಸ್ವಲ್ಪ ಮುಂದೆ ನಡೆದೆವು, ದೇವಾಲಯದ ಒಳಗೆ ಪ್ರವೇಶ ಮಾಡಿದೆವು . ನಮ್ಮನ್ನು ನೋಡುತ್ತಲೇ ನಗು ಮುಖದಿಂದ    ಸ್ವಾಗತಿಸಿದ  ಅರ್ಚಕರನ್ನು ಮಾತನಾಡಿಸಿ  ಅವರು   ದೇವಾಲಯ ಪ್ರವೇಶ ಮಾಡುವ  ಸನ್ನಿವೇಶದ  ಚಿತ್ರ ತೆಗೆಯುವ  ಆಸೆಯಿಂದ  ಅವರಿಗೆ ನಮ್ಮ ಕೋರಿಕೆಯನ್ನು ತಿಳಿಸಿದಾಗ  , ಬಹಳ ಸಂತೋಷದಿಂದ  ನಮ್ಮ  ಕೋರಿಕೆಯಂತೆ   ದೇವಾಲಯವನ್ನು  ಪ್ರವೇಶ ಮಾಡಿ  ನಾವು ಫೋಟೋ ತೆಗೆಯಲು ಅನುವು ಮಾಡಿಕೊಟ್ಟರು .



ಸ್ವಾಮಿಯ ಸೇವೆ ಮಾಡಲು  ನಗು ಮುಖದಿ ಬಂದವರು 


ನಗು ಮುಖದಿಂದ  ಉತ್ಸಾಹದಿಂದ  ತಮ್ಮ ಕಾರ್ಯ ಮಾಡುವ  ಅರ್ಚಕರ ಬಗ್ಗೆ ಗೌರವ ಮೂಡಿತು . ಪರಸ್ಪರ ಪರಿಚಯ,  ಮಾತುಕತೆ ನಂತರ   ದೇವಾಲಯದ  ಬಗ್ಗೆ ತಮಗೆ ತಿಳಿದ ವಿವರಗಳನ್ನು  ನಮ್ಮೊಡನೆ ಹಂಚಿಕೊಂಡರು . ದೇವಾಲಯದ  ವಿವರಗಳನ್ನು ಅವರು ಹೇಳುತ್ತಿದ್ದರೆ   ಕೇಳಲು ಬಹಳ ಸಂತೋಷ ಆಗುತ್ತಿತ್ತು . ಬನ್ನಿ ಸ್ವಾಮಿಯ ದರ್ಶನ ಮಾಡೋಣ ಅಂತಾ ಕರೆದು ಕೊಂದು ಹೋಗಿ  ನಮ್ಮಗಳ ಹೆಸರನ್ನು ಹೇಳಿ ಸಂಕಲ್ಪಮಾಡಿ  ಅರ್ಚನೆ ಮಾಡಿ   ಮಂಗಳಾರತಿ  ಬೆಳಗಿ ಶಿವ ಲಿಂಗದ  ದರ್ಶನ ಮಾಡಿಸಿದರು .



ಅಘೋರೆಶ್ವರ ಸನ್ನಿಧಿಯಲ್ಲಿ  ಮಂಗಳಾರತಿ 

ಅರೆ ಇದೇನು....?  ಈ ಭವ್ಯ ದೇಗುಲಕ್ಕೆ ಇತಿಹಾಸ ಇರಬೇಕಲ್ಲಾ  ಎಂಬ ಪ್ರಶ್ನೆ  ಮನದಲ್ಲಿ  ಮೂಡಿತು . ಬನ್ನಿ ಇಕ್ಕೆರಿಯ ಇತಿಹಾಸ ತಿಳಿಯೋಣ

ಐತಿಹಾಸಿಕ ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ  ಸೇರಿದೆ . ಸಾಗರದಿಂದ ಕೇವಲ  ಮೂರು  ಕಿಲೋ ಮೀಟರ್  ದೂರದಲ್ಲಿದೆ ಇಕ್ಕೆರಿ. ಅರಳಿ ಕೊಪ್ಪ ಗ್ರಾಮದ ಉಪಗ್ರಾಮ  ಈ ಇಕ್ಕೇರಿ .


"ಇಕ್ಕೇರಿ"   ಅಂದರೆ  ಎರಡು ಕೇರಿ  ಅಥವಾ ಎರಡು ಬೀದಿ  ಎಂದು ಅರ್ಥ , ಬಹುಷಃ ಆಕಾಲದಲ್ಲಿ  ಈ ಊರಿನಲ್ಲಿ  ಎರಡು ಬೀದಿಗಳಲ್ಲಿ   ಮಾತ್ರ   ಜನವಸತಿ ಇತ್ತೆಂದು ಕಾಣುತ್ತದೆ  ಅದಕ್ಕಾಗಿ ಈ ಊರನ್ನು ಇಕ್ಕೇರಿ ಎಂದು ಕರೆಯಲಾಗಿದೆ. ಕ್ರಿ.ಶ . ೧೫೧೨ ರಲ್ಲಿ ಕೆಳದಿ ಅರಸರು ಇಕ್ಕೇರಿಯನ್ನು ರಾಜಧಾನಿಯನ್ನಾಗಿ  ಘೋಷಿಸಿಕೊಂಡು  ತಮ್ಮ ಆಡಳಿತ ವನ್ನು  ಕೆಳದಿ ಯಿಂದ  ಇಲ್ಲಿಗೆ ವರ್ಗಾಯಿಸಿಕೊಳ್ಳುತ್ತಾರೆ . ಹಾಗಾಗಿ ಈ ಊರು ಮತ್ತಷ್ಟು ಪ್ರಖ್ಯಾತಿ  ಪಡೆಯುತ್ತದೆ . ಜೊತೆಗೆ ಕೆಳದಿ ಅರಸರು ಇಲ್ಲಿ ಒಂದು ಟಂಕ ಸಾಲೆಯನ್ನು  ಸ್ಥಾಪಿಸಿ  ಇಲ್ಲಿ  ಇಕ್ಕ್ರಿ ಹೆಸರಿನ "ಪಗೋಡ ಹಾಗು  ಫಣಮ್ಸ್"[ ಅಂದಿನಕಾಲದ  ಹಣದ ಹೆಸರು ] ನಾಣ್ಯಗಳನ್ನು ಇಲ್ಲಿ ತಯಾರು ಮಾಡಲಾಗುತ್ತದೆ . ಇಂದು ಈ  ಟಂಕ ಸಾಲೆ ಇಲ್ಲವಾದರೂ  ಅದರ ಅವಶೇಷಗಳನ್ನು  ಇಂದೂ ಕಾಣ ಬಹುದೆಂದು ಹೇಳಲಾಗುತ್ತದೆ , ನಮಗೆ ಅದನ್ನು ನೋಡಲು ಆಗಲಿಲ್ಲ. ನಂತರ ೧೬೩೯ ರಲ್ಲಿ ಕೆಳದಿ ಅರಸರು ತಮ್ಮ ರಾಜಧಾನಿಯನ್ನು ಇಲ್ಲಿಂದ  ಬಿದನೂರಿಗೆ  ಮತ್ತೊಮ್ಮೆ  ಬದಲಾವಣೆ ಮಾಡುತ್ತಾರೆ . ಆದರೆ ಇಕ್ಕೇರಿ ತನ್ನ ಗತ ವೈಭವದ  ಗತ್ತನ್ನು ಬಿಟ್ಟುಕೊಡದೆ  ಅಘೋರೆಶ್ವರ  ದೇವಾಲಯದ  ಮಹತ್ವ ಸಾರುತ್ತಾ ನಿಂತಿದೆ .



ಅಘೋರೆಶ್ವರ  ದೇಗುಲ ದರ್ಶನ 



ಅಘೋರೆಶ್ವರ ದೇವಾಲಯ  ಬಹಳ ವಿಸ್ತಾರವಾದ ದೇವಾಲಯವಾಗಿದ್ದು, ೧೬ ನೆ ಶತಮಾನದಲ್ಲಿ ವಿಜಯನಗರ, ಹೊಯ್ಸಳ  ವಾಸ್ತು ಶೈಲಿಗಳ  ದರ್ಶನ ನಿಮಗೆ ಆಗುತ್ತದೆ . ದೇವಾಲಯದ ಮುಂಬಾಗದಲ್ಲಿ  ಕೆಳದಿ ಅರಸರುಗಳ ಪ್ರತಿಮೆಗಳು ಇದ್ದು  ಕೆಳದಿ ಇಕ್ಕೆರಿಯ ಇತಿಹಾಸ ನೆನಪು ಮಾಡಿಕೊಡುತ್ತವೆ . ದೇವಾಲಯ ಉತ್ತರ ಮುಖಿಯಾಗಿದೆ . ಸುಂದವಾದ ಚಾವಣಿ,  ಗರ್ಭ ಗೃಹ , ಸುಖನಾಸಿ ಹಾಗು ದೇವಾಲಯದ ಹೊರ ಆವರಣದಲ್ಲಿ  ಸುಂದವಾಗಿ  ಕಲೆ ಅರಳಿದೆ . ಕಲ್ಲಿನಲ್ಲಿ ಅರಳಿದ ಸುಂದರ ಕೆತ್ತನೆಗಳು ಕಣ್ಮನ   ತಣಿಸುತ್ತವೆ .



ದೇವಾಲಯ ಚಾವಣಿಯಲ್ಲಿ ಅರಳಿದ  ಕಲೆ 


ಈ ದೇವಾಲಯಕ್ಕೆ ನವರಂಗ ಇರುವುದಿಲ್ಲ. ದೇವಾಲಯದ ಮುಂದೆ ಸುಂದರ  ನಂದಿ ವಿಗ್ರಹವನ್ನು  ಮಂಟಪದಲ್ಲಿ  ಸ್ಥಾಪಿಸಲಾಗಿದೆ . ಇನ್ನು ಪಾರ್ವತಿ ದೇಗುಲಕ್ಕೆ  ಗರ್ಭ ಗೃಹ , ಸುಖನಾಸಿ,  ಕಂಬಗಳು ಇಲ್ಲದ  ಪುಟ್ಟದಾದ ನವರಂಗ  ಕಾಣ ಸಿಗುತ್ತದೆ . ಇಲ್ಲಿನ ಪ್ರಕೃತಿ ಹಾಗು ಹವಾಮಾನಕ್ಕೆ ತಕ್ಕಂತೆ  ದೇವಾಲಯ ರಚನೆ ಆಗಿದೆ , ಈ ಭಾಗದಲ್ಲಿ ಹೆಚ್ಚಿನ ಮಳೆ ಆಗುವ ಕಾರಣ   ಎಂತಹ ಭಾರಿ ಮಳೆ ಬಂದರೂ  ಅದನ್ನು ಎದುರಿಸಿ ಹಲವು ಶತಮಾನಗಳಿಂದ  ಹೆಮ್ಮೆಯಿಂದ ನಿಂತಿದೆ  ಈ ದೇವಾಲಯ, ಅಂದಿನ ತಾಂತ್ರಿಕತೆಯ  ವಿಶೇಷವನ್ನು  ನಾವಿಲ್ಲಿ ಕಾಣಬಹುದು .



ಇಕ್ಕೆರಿಯಲ್ಲಿ ದರ್ಶನ ವಿತ್ತ  ಷಣ್ಮುಖ 

ಇಕ್ಕೆರಿಯಲ್ಲಿ ಕಂಡ ಸುಂದರ ಗಣಪ 


ದೇವಾಲಯದಲ್ಲಿ  ವಿಶೇಷವಾಗಿ ನಿಮಗೆ ಕಾಣಸಿಗುವುದು  ಅಘೋರೆಶ್ವರ  ಲಿಂಗ [ ಹಿಂದೊಮ್ಮೆ ಇಲ್ಲಿ ಅಘೋರೆಶ್ವರನ  ಬೃಹತ್  ಮೂರ್ತಿಯನ್ನು  ಪೂಜಿಸಲಾಗುತ್ತಿತ್ತೆಂದು  ಹಾಲಿ ಈ ಮೂರ್ತಿ ಇಲ್ಲವೆಂದು ಹೇಳಲಾಗುತ್ತಿದೆ , ಬಿಜಾಪುರ ಸುಲ್ತಾನ್  ಇಲ್ಲಿ ಆಕ್ರಮಣ ಮಾಡಿದಾಗ  ಅಘೋರೆಶ್ವರ ಮೂರ್ತಿ ಭಗ್ನವಾಯಿತೆಂದು ಹೇಳುತ್ತಾರೆ  ] , ಭೈರವ, ಮಹಿಷಮರ್ಧಿನಿ ,  ಷಣ್ಮುಖ , ಹಾಗು ಗಣಪತಿಯ  ಮೂರ್ತಿಗಳನ್ನು  ಕಾಣಬಹುದು.



ಶಿಲ್ಪಿಯ ಕಲ್ಪನೆ ಗರಿ ಬಿಚ್ಚಿದೆ ಇಲ್ಲಿ 




ಕಲೆಯ  ಬಲೆ  ಸುಂದರವಾಗಿ ಅರಳಿದೆ ಇಲ್ಲಿ 



ಶಿಲೆಯಲ್ಲಿ ಅರಳಿದ ಪುಷ್ಪ  ಕ್ಯಾಮರ ನೋಡಿ ನಕ್ಕಾಗ 


ಅದ್ಭತ  ಕಲಾ ಲೋಕ ಇಲ್ಲಿದೆ 


ದೇವಾಲಯವನ್ನು  ನೋಡುತ್ತಾ  ಸಾಗಿದೆ ನನ್ನ ಕ್ಯಾಮರ ದೇಗುಲದ ಸುಂದರ ಕೆತ್ತನೆಗಳನ್ನು ತನ್ನ ಒಡಲೊಳಗೆ ತುಂಬಿ ಕೊಳ್ಳುತ್ತಿತ್ತು , ದೇವಾಲಯದ ಸುಂದರ ಕೆತ್ತನೆಗಳು  ಮನ ಸೂರೆಗೊಂಡವು ಕತ್ತಲ ಇತಿಹಾಸದಲ್ಲಿ ಅಡಗಿ ಕುಳಿತ  ಈ ಸುಂದರ  ಕಲೆಯನ್ನು ಆಸ್ವಾದಿಸಲು  ಯಾವ ಜನ್ಮದ ಪುಣ್ಯ ಇತ್ತೋ  ಕಾಣೆ ಅದು ಇಲ್ಲಿ ನನಸಾಗಿತ್ತು,   ಬಾಲಣ್ಣ  ಹೊರಡೋಣ ಎಂದ ಪ್ರಕಾಶ್ ಹೆಗ್ಡೆ ದ್ವನಿ ಕೇಳಿ ವಾಸ್ತವಕ್ಕೆ ಬಂದೆ  .  ಹೊರಡುವ ಮೊದಲು  ಅಲ್ಲಿ ಕಣ್ಣಿಗೆ ಬಿದ್ದ  ಕಿಟಕಿಯ ಚಿತ್ರ ತೆಗೆದೇ  ಕತ್ತಲಿನಲ್ಲಿ ಕಿಟಕಿಯ ಮೂಲಕ  ಬರುವ ಬೆಳಕು ಚಿತ್ತಾರ ಮೂಡಿಸಿತ್ತು, ದೇವಾಲಯಕ್ಕೆ  ಬೆಳಕಿನ ರಂಗೋಲಿ ಹಾಕಲು  ಇಂತಹ  ಕಿಟಕಿಗಳನ್ನು ನಿರ್ಮಿಸಲಾಗಿದೆ ಇಲ್ಲಿ,  ಸಂತೃಪ್ತ ಮನಸಿನಿಂದ ಹೊರಬಂದೆ



ಬೆಳಕಿನ ರಂಗೋಲಿ  ಹಾಕಲು ಇಂತಹ  ಕಿಟಕಿಗಳು  ಬೇಕು 


ಇಕ್ಕೆರಿಯ  ಪುಟ್ಟ ಮಕ್ಕಳು 

ದೇವಾಲಯದ ಹೊರಗೆ ಬಂದು ಹೊರಡಲು ಅನುವಾದೆವು , ತಮ್ಮ ಊರಿನ  ದೇಗುಲದ  ಮಹತ್ವ ತಿಳಿಯದ  ಪುಟ್ಟ ಮಕ್ಕಳು ಅಲ್ಲಿ   ಸಂತಸದಿಂದ ಕ್ರಿಕೆಟ್   ಆಟಾ  ಆಡುತ್ತಿದ್ದರು ,  ದೇವ್ರೇ ಈ ಮಕ್ಕಳು ಈ ಊರಿನ  ಈ ಐತಿಹಾಸಿಕ ದೇಗುಲ ಉಳಿಸಿಕೊಂಡು  ಮೆರೆಸುವಂತೆ  ಮಾಡಪ್ಪಾ  ಅಂತಾ ಮನಸಿನಲ್ಲಿ ಅಂದುಕೊಂಡೆ . ನಮ್ಮ ಪಯಣ ಮುಂದೆ ಸಾಗಿ  ಸಾಗರ ತಲುಪುವ   ರಸ್ತೆಗೆ ಬಂದು ನಿಂತೆವು  ಅಲ್ಲಿ ಕಂಡಿತ್ತು ಒಂದು ಬೋರ್ಡು  ........ !!!  ಅದು ವರದಾ ಮೂಲ....!!    ಪ್ರಕಾಶಣ್ಣಾ  ಅಂದೇ   ಗೊತ್ತಾಯ್ತು ಬಾಲಣ್ಣ  ....! ಅಲ್ಲಿಗೆ ಹೋಗೋಣ  ಅಂದ್ರು .... ...!!!









Friday, August 22, 2014

ಹೀಗೊಂದು ತುಂಟ ಮನಸಿನ ಜೊತೆ ಪಯಣ ......06 ಇಕ್ಕೆರಿಯ ಬಸವನ ಮೂಗಿನ ಒಳಗೆ ಕೈ ಬೆರಳು ಇಡೋಣ ಬನ್ನಿ .



ಇಕ್ಕೆರಿಗೆ ಸ್ವಾಗತ 

ನಮಸ್ತೆ ಗೆಳೆಯರೇ  ಬಹಳ ದಿನಗಳ ನಂತರ  ಮತ್ತೆ ಮುಂದುವರೆದಿದೆ ನಮ್ಮ ಈ ಪಯಣ, ಕಳೆದ ಸಂಚಿಕೆಯಲ್ಲಿ  ಕೆಳದಿಯ ಇತಿಹಾಸದ  ಮಹಾಪುರುಷ  ಶ್ರೀಯುತ ಗುಂಡಾ ಜೋಯಿಸರ  ಆಶೀರ್ವಾದ ಪಡೆದು  ಇಕ್ಕೆರಿಯ ಕಡೆ ಹೊರಟೆವು , ನಮ್ಮ ತುಂಟ ಪ್ರಕಾಶಣ್ಣ ನ ಜೊತೆ ಪ್ರವಾಸ ಮಾಡುವುದು ಒಂದು ಒಳ್ಳೆಯ ಸುಯೋಗವೇ ಸರಿ ,  ಮೊದಲು ಮತ್ತೆ ನಮ್ಮ ತುಂಟಾಟ  ಶುರು ಆಯ್ತು , ಅವರ ಜೀವನದ ಎಡವಟ್ಟು ಪ್ರಸಂಗಗಳ ಬಗ್ಗೆ  ನೆನಪಿನ ಹರಟೆ ಕೀಟಲೆ ನಗು ಇವೆಲ್ಲಾ ಇದ್ದವು. 


ಇಕ್ಕೆರಿಗೆ  ಸ್ವಾಗತ

  ಬಾಲಣ್ಣ  ಇಕ್ಕೇರಿ ಬಹಳ ಚೆನ್ನಾಗಿದೆ  ಇಲ್ಲಿನ  ಬಸವನ ಕೀರ್ತಿ ಈ ಊರಿನ  ಸುತ್ತ ಮುತ್ತಾ  ಬಹಳ ಪ್ರಸಿದ್ಧಿ , ಆದರೆ  ಬಾಲಣ್ಣ ..... ! ಅಂತಾ  ಮಾತು ನಿಲ್ಲಿಸಿ  ನಸು ನಕ್ಕರು , ನನಗೆ ಇಲ್ಲಿ ಏನೋ ತುಂಟಾಟ ಇದೆ ಎನ್ನುವ  ವಾಸನೆ  ಸಿಗುತ್ತಿತ್ತು ,  ಉರಿ ಬಿಸಿಲಿನ  ತಾಪದ  ಪ್ರವಾಸದಲ್ಲಿ  ಇಂತಹ ತುಂಟಾಟ ಚಿಮ್ಮಿ  ಜೋರಾಗಿ ನಕ್ಕಾಗ   ಮನಸಿಗೆ  ಖುಷಿಯಾಗಿ ಮುಂದಿನ   ಪ್ರವಾಸದ  ಅನುಭವದ  ಸವಿಯನ್ನು ಅನುಭವಿಸಬಹುದು , ಸರಿ  ನಾನು ಪ್ರಕಾಶಣ್ಣ  ಅದೇನದು ಇಕ್ಕೆರಿಯ ಬಸವನ  ಬಗ್ಗೆ ನಿಮ್ಮ  ಅನಿಸಿಕೆ ಬರಲಿ ಆಚೆಗೆ  ಅಂದೇ .....! 







ಅಯ್ಯೋ   ಬಾಲಣ್ಣಾ  ಒಳ್ಳೆ ಮಜವಾದ ಕಥೆ ಇದೆ ಬನ್ನಿ ಹೇಳ್ತೀನಿ, ಅಂತಾ  ಒಂದು ಕಥೆ ಹೇಳಿದರು , ಕಥೆ ಇಲ್ಲಿದೆ ನೋಡಿ  , 

ಒಮ್ಮೆ ಒಂದು ಶಾಲೆಯ ಮಕ್ಕಳು  ಇಕ್ಕೇರಿ ಪ್ರವಾಸಕ್ಕೆ ಬಂದರು , ಹಾಗೆ  ಇಕ್ಕೆರಿಯ ದರ್ಶನ ಮಾಡುತ್ತಾ ,   ಬಂದ  ಶಾಲಾ ಮಕ್ಕಳು  ಈ ಬಸವನ ಬಳಿ  ಬರುತ್ತಾರೆ , ಶಾಲಾ ಮಕ್ಕಳ ತಂಡದಲ್ಲಿದ್ದ  ಒಬ್ಬ ತುಂಟ ಹುಡುಗ  ಈ ಬಸವನ  ಮೂಗಿನ  ಒಳಗೆ ತನ್ನ  ಕೈ ಬೆರಳನ್ನು  ತೋರಿಸುತ್ತಾನೆ , ಬಸವ ಮೂಗಿನೊಳಗೆ  ಅಡಗಿದ್ದ  ಒಂದು ಸಣ್ಣ ಚೇಳು  ಆತನ ಕೈ ಬೆಳನ್ನು ಕುಟುಕುತ್ತದೆ , ಮೊದಲೇ ತುಂಟ ಹುಡುಗ ,  ಆದರೆ   ತನ್ನ ನೋವನ್ನು ತೋರ್ಪಡಿಸದೆ   , ಕೈ ಬೆರಳು ಹೊರಗೆ ತೆಗೆದು  ಜೋರಾಗಿ ನಗಲು ಶುರು ಮಾಡ್ತಾನೆ   , ಪಕ್ಕದಲ್ಲಿದ್ದ ಅವನ ಗೆಳೆಯರು  , ಯಾಕೋ ಏನಾಯ್ತು  ಅಂತಾ ಕೇಳಿದಾಗ , ಅಯ್ಯಪ್ಪಾ ,  ಹೋಗ್ರೋ  ನಾನು ಹೇಳೋಲ್ಲಾ   ಅನ್ನುತ್ತಾನೆ  , ಆದರೆ  ಇವನ ಮಾತಿಂದ ಕುತೂಹಲ ಹೆಚ್ಚಾಗಿ  ಮಕ್ಕಳು  ಇವನನ್ನು ಪೀಡಿಸಲು  ಶುರು ಮಾಡುತ್ತವೆ , ಆಗ ಆ ತುಂಟ ಹುಡುಗ ,  ನೋಡ್ರೋ  ಬಸವನ ಮೂಗಿಗೆ  ಕೈ ಬೆರಳು ಹಾಕಿದೆ  ಆ ಹಾ  ತಣ್ಣಗೆ  ಐಸ್  ಇದ್ದಂಗೆ  ಆಯ್ತು , ಬಹಳ ಖುಷಿಯಾಯಿತು  ಅನ್ನುತ್ತಾನೆ  , ಇದನ್ನು ಕೇಳಿದ ಮಕ್ಕಳು ನಾ ಮುಂದು   ತಾ ಮುಂದು  ಅಂತಾ  ಬಸವನ  ಮೂಗಿನೊಳಗೆ  ಕೈ ಬೆರಳು ತೋರಿಸಿ  ಚೇಳಿನ ಕೈಲಿ    ಕುಟುಕಿಸಿ ಕೊಂಡರೂ  ಬೇರೆಯವರಿಗೆ ಹೇಳದೆ , ಎಲ್ಲಾ  ಮಕ್ಕಳೂ  ಬಸವನ ಮೂಗಿನೊಳಗೆ  ಕೈ ಬೆರಳು ಹಾಕಲು  ಪ್ರೇರಣೆ ನೀಡುತ್ತಾರೆ ,  ಅವತ್ತಿಂದ ಬಾಲಣ್ಣ , ಇಲ್ಲಿಗೆ  ಯಾರೇ ಬಂದರೂ  ಇಕ್ಕೇರಿ ಬಸವನ  ಮೂಗಿನೊಳಗೆ  ಕೈ ಬೆರಳು ಇಡಬೇಕು , ಅದು ಇಲ್ಲಿನ ಸಂಪ್ರದಾಯ  ಅಂತಾ ನಕ್ಕರು, 



ಇಕ್ಕೆರಿಯ  ಬಸವನ  ಮೂಗಿನ  ಹೊಳ್ಳೆಗಳು 

ನನಗೋ ನಗು ತಡೆಯಲು ಆಗಲಿಲ್ಲ , ಕಾರಿನೊಳಗೆ ಗೊಳ್ಳನೆ  ನಗೆಯ  ಬುಗ್ಗೆ ಚಿಮ್ಮಿತು,  ಅರೆ ಬಂದೆ ಬಿಟ್ಟೆವು  ಇಕ್ಕೆರಿಗೆ , ಇಲ್ಲಿಗೆ ಬಂದು ಮೊದಲು ಬಂದು ನಿಂತಿದ್ದೆ  ಬಸವನ  ಹತ್ತಿರ  , ಸುಂದರ ಬಸವನ   ಬೃಹತ್  ಮೂರ್ತಿ , ನಮ್ಮ ಮೈಸೂರಿನ  ಚಾಮುಂಡಿ ಬೆಟ್ಟದ  ನಂದಿ ಯನ್ನು  ನೆನಪಿಗೆ ತಂದಿತು,  ಆದರೆ  ಈ ಪ್ರಕಾಶಣ್ಣ ಇಟ್ಟಿದ್ದ  ನಗೆಯ ಬಾಂಬ್  ಆ ಮೂರ್ತಿಯ  ಮೂಗಿನ  ಹೊಳ್ಳೆಗಳನ್ನು  ಫೋಟೋ ತೆಗೆಯಲು  ಪ್ರೇರೇಪಿಸಿತ್ತು,  ಆದರೆ  ಕ್ಯಾಮರಾ ಕಣ್ಣಿನಲ್ಲಿ ಅದನ್ನು ನೋಡುತ್ತಿದ್ದರೆ  ನಗು ಬರುತ್ತಿತ್ತೆ  ಹೊರತು, ನನ್ನ ಕೈ ಬೆರಳು  ಫೋಟೋ ಕ್ಲಿಕ್ಕಿಸಲು  ತಡವರಿಸುತ್ತಿತ್ತು . ಬಹುಷಃ  ಅದೂ ಸಹ ಇಕ್ಕೇರಿ ಬಸವನ ಪ್ರಸಾದ ಪಡೆಯಲು ಆಸೆ ಪಡ್ತಾ ಇತ್ತು ಅನ್ನಿಸುತ್ತೆ. 



ಅಂಕಲ್  ಬಸವನ  ಮೂಗಿನೊಳಗೆ ಬೆರಳು ಹೀಗೆ  ಇಡಬೇಕಾ ?




ಈ ಹುಡುಗನ  ಕೈ ಬೆರಳನ್ನು  ಬಸವನ ಮೂಗಿಗೆ  ಹಾಕಿಸ್ಲಾ  

ಬಸವನ ವಿವಿಧ ಬಂಗಿಗಳ ಫೋಟೋ ತೆಗೆಯುತ್ತಾ  ಇರುವಾಗ ಅಲ್ಲಿಗೆ  ಬಂದಾ ಮತ್ತೊಂದು ಹುಡುಗನನ್ನು   ಬಸವನ  ಮೂಗಿನೊಳಗೆ ಕೈ ಬೆರಳು ಇಡುವಂತೆ , ತಿಳಿಸಲು  ಆ ಮಗು ನಗು ನಗುತ್ತಾ  ತನ್ನ ಕೈ ಬೆರಳನ್ನು  ಬಸವನ ಮೂಗಿನೊಳಗೆ  ಹಾಕಿ ಫೋಟೋಗೆ  ಪೋಸ್  ಕೊಟ್ಟಳು . ಅಲ್ಲಿಗೆ ಬಂದ ಮತ್ತೊಬ್ಬ ಹುಡುಗ  ಅಂಕಲ್  ಏನಿದೂ ಅಂದಾ , ಮತ್ತೆ ಅವನಿಗೆ  ಬಸವನ ಮೂಗಿಗೆ ಕೈ ಬೆರಳು ತೋರಿಸಲು  ಹೇಳಿದೆವು ,  ಅವನೂ ಸಹ ಬೆರಳು ತೋರಿಸಿದ , ಈ ಪ್ರಕಾಶ್ ಹೆಗ್ಡೆ ಮಾತನ್ನು ನಂಬಿ  ಪಾಪ   ಇಕ್ಕೇರಿ ಬಸವನ  ಮೂಗಿಗೆ ಕೈ ಬೆರಳು  ತೂರಿಸಿದ  ಮಕ್ಕಳಿಗೆ  ಯಾವುದೇ ಪ್ರಸಾದ ಸಿಕ್ಕಲಿಲ್ಲ , ನಮ್ಮ ಪುಣ್ಯಾ . 


ಇಕ್ಕೇರಿ  ಬಸವನ ಮೂಗಿಗೆ  ಕೈ ಬೆರಳನ್ನು  ತೋರಿಸಿ  ಪ್ರಸಾದ ಪಡೆಯುವ ಬನ್ನಿ 



ಹೀಗೆ ಬಸವನ ಮೂಗಿಗೆ ಕೈ ಬೆರಳು ತೋರಿಸುವ ಆಟಾ ಆಡುತ್ತಾ  ಕಾಲ ಕಳೆದ  ನಾವು  ಇನ್ನು ಸ್ವಲ್ಪ ಹೊತ್ತು ಹಾಗೆ ಮಾಡಿದ್ದರೆ  ಖಂಡಿತಾ  ನಮ್ಮನ್ನು ನೋಡಿದ  ಜನ  ಅದು ಇಲ್ಲಿನ ಸಂಪ್ರದಾಯ  ಎಂದು ತಿಳಿದು  ತಾವು ಸಹ ಬಸವನ ಮೂಗಿಗೆ  ಕೈ ಬೆರಳು ಇಡಲು ಬರ್ತಾ ಇದ್ರೂ  ಅಂತಾ ಕಾಣುತ್ತೆ,  ಊರುಗಳ ಪ್ರವಾಸ ಮಾಡುತ್ತಾ ಇತಿಹಾಸ ಕಲಿಯುತ್ತಾ  ಸಾಗಿದ್ದ ನಾವು  ಇಕ್ಕೆರಿಯ ಬಸವನ ಸನ್ನಿಧಿಯಲ್ಲಿ   ನಮ್ಮ ವಯಸ್ಸನ್ನು ಮರೆತು ತುಂಟ  ಹುಡುಗರಂತೆ  ತುಂಟಾಟ ಮಾಡುತ್ತಾ  ಹೊಟ್ಟೆ ತುಂಬಾ  ನಕ್ಕು  , ಕಾಲ ಕಳೆದೆವು, ಬೆಳಗಿನ  ಆಯಾಸ ನಮ್ಮ ಈ ತುಂಟಾಟದ ನಗುವಿನಲ್ಲಿ ಮಾಯವಾಗಿ  ಹೊಸ ಉತ್ಸಾಹ ಮೂಡಿತ್ತು. 


ಬನ್ನಿ ದೇವನ ಸನ್ನಿಧಿಗೆ 




ಮತ್ತೆ ವಾಸ್ತವಕ್ಕೆ ಬಂದು ದೇವಾಲಯದ ಪ್ರದಕ್ಷಿಣೆ ಹಾಕುತ್ತಾ  ಫೋಟೋ ತೆಗೆಯುತ್ತಾ ಬಂದೆವು , ಅಘೋರೆಶ್ವರ ದೇವಾಲಯದ  ಅರ್ಚಕರು  ಮೆಟ್ಟಿಲು ಹತ್ತುತ್ತಾ  ದೇವಾಲಯಕ್ಕೆ  ಬರುತ್ತಿದ್ದರು . ನಾವು ದೇಗುಲದ ಒಳಗೆ  ಅಘೋರೆಶ್ವರ ದೇವರ ದರ್ಶನ ಪಡೆದು ಇತಿಹಾಸ ತಿಳಿಯಲು  ಸಿದ್ಧರಾದೆವು. ......... ಮುಂದೆ ....!!!